April 30, 2014

ಟಿ.ಇ.ಟಿ. ತಯಾರಿ

ದಿನಾಂಕ 30-04-2014 ರಂದು 'ವಿಜಯವಾಣಿ'"ಮಸ್ತ್" ಪುರವಣಿಯಲ್ಲಿ ಟಿ.ಇ.ಟಿ. ತಯಾರಿ ಕುರಿತು ಪ್ರಕಟವಾದ ಲೇಖನ.



April 28, 2014

ಇದ್ಹೇಗೆ ಮೇಲೇರಿತು?

ಇದ್ಹೇಗೆ ಮೇಲೇರಿತು?

ಒಮ್ಮೆ ನಮ್ಮ ಪುಟ್ಟ ಪಟ್ಟಣಕ್ಕೆ ತನ್ನ ತಂದೆ ಜೊತೆ ಬೈಕನ್ನೇರಿ ಹೋದ. ತಂದೆ ಜೊತೆ ಪಟ್ಟಣವನ್ನೆಲ್ಲ ಸುತ್ತಾಡಿ, ಬೇಕಾದ ಸಾಮಾನುಗಳನ್ನು ಖರೀದಿಸಿ, ಇಷ್ಟವಾದ ತಿಂಡಿ-ತಿನಿಸುಗಳನ್ನು ತಿಂದು ಕೊನೆಗೆ ತಂದೆ-ಮಗ ಇಬ್ಬರೂ ಬೈಕ್ ತೊಳೆಸಲೆಂದು ‘water service station’ ಗೆ ಹೋದರು ಅಲ್ಲಿ ಬೈಕ್ ತೊಳೆಯಲು ಬಿಟ್ಟು, ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳಿತರು.

ಪುಟ್ಟ ಬಹಳ ಚುರುಕು ಬುದ್ದಿಯುಳ್ಳ ಹುಡುಗ. ಎಲ್ಲ ವಸ್ತುಗಳೂ, ದೃಶ್ಯಗಳೂ ಅವನ ಮನಸ್ಸನ್ನು ಕೆರೆಳಿಸಿ ಏಕೆ? ಏನು? ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತಿದ್ದವು. ಹೀಗೆ ‘water service station’ ನಲ್ಲೂ ಸಹ ಅವನಿಗೊಂದು ಪ್ರಶ್ನೆ ಉದ್ಭವಿಸಿತು. ಅದೇನೆಂದರೆ water service station ನಲ್ಲಿ ಇವರ ಬೈಕನ್ನು ತೊಳೆಯಲು ಬಿಟ್ಟ ಸಮಯದಲ್ಲಿ ಇನ್ನೊಂದು ಜೀಪು ಸಹ water service  ಗೆಂದು ಬಂದಿತ್ತು. ಅದನ್ನೇ ನೋಡುತ್ತಾ ಕುಳಿತ ಪುಟ್ಟನಿಗೆ ಅದು ಒಮ್ಮೇಲೇ ಕೆಳಗಿನಿಂದ ಮೇಲಕ್ಕೆ ಏರಿದ್ದು ನೋಡಿ ಆಶ್ಚರ್ಯವಾಯಿತು. “ಯಾರೂ ಎತ್ತದೇ ಇದ್ಹೇಗೆ ಮೇಲೇರಿತು” ಎಂಬ ಪ್ರಶ್ನೆ ಮೂಡಿ ತನ್ನ ತಂದೆಯನ್ನು ಕೇಳಿದ.
“ಅಪ್ಪ ಈ ಜೀಪು ಹೇಗೆ ಮೇಲೇರಿತು? ಅದನ್ನು ಹೇಗೆ ಕೆಳಗಿಳಿಸುತ್ತಾರೆ” ಎಂದು ಪ್ರಶ್ನಿಸಿದ. ತಂದೆಗೆ ಉತ್ತರ ಗೊತ್ತಿರಲಿಲ್ಲ. ‘ನಿಮ್ಮ ತರಗತಿಯಲ್ಲಿ ವಿಜ್ಞಾನ ಶಿಕ್ಷಕರನ್ನು ಕೇಳು’ ಎಂಬ ಸಲಹೆ ನೀಡಿದರು.

ಮರುದಿನ ಶಾಲೆಗೆ ಬಂದ ಪುಟ್ಟ ವಿಜ್ಞಾನ ಶಿಕ್ಷಕರು ಒಳಬಂದ ತಕ್ಷಣ ತನ್ನ ಪ್ರಶ್ನೆಯನ್ನು ಅವರ ಮುಂದಿಟ್ಟ. ವಿಜ್ಞಾನ ಶಿಕ್ಷಕರು ಅವನ ಕುತೂಹಲವನ್ನು ಬಹಳವಾಗಿ ಮೆಚ್ಚಿ ಅವನ ಪ್ರಶ್ನೆಗೆ ಉತ್ತರಿಸತೊಡಗಿದರು.

“ವಾಹನವನ್ನು ಮೇಲಿತ್ತುವ ವ್ಯವಸ್ಥೆಯು ‘ಪ್ಯಾಸ್ಕಲ್‍ನ ನಿಯಮ’ವೆಂದೇ ಹೆಸರಾದ “ಹೈಡ್ರಾಲಕ್ ಪ್ರೇಷರ್” ನ ಮೂಲ ತತ್ವವಾಗಿದೆ. ಅಂದರೆ ದ್ರವ ವಸ್ತುವು ಒತ್ತಡವನ್ನು ಎಲ್ಲಾ ಕಡೆಗೂ ಸಮನಾಗಿ ವಿತರಿಸುತ್ತದೆಂದು ಪ್ಯಾಸ್ಕಲ್ ಪ್ರತಿಪಾದಿಸಿದ. ಒತ್ತುಗದ ಸಹಾಯದಿಂದ ಕಡಿಮೆ ಬಲದಿಂದ ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಾಗಿದೆ. ಯಂತ್ರದ ರಚನೆ ಚಿತ್ರದಲ್ಲಿರುವಂತೆ ತೀರಾ ಸರಳವಾಗಿದ್ದು ನೀರಿನಿಂದ ತುಂಬಿದ ಒಂದು ಪಾತ್ರೆಯಿದ್ದು ಅದರಲ್ಲಿ ಚಿಕ್ಕ ಬೆಣೆಯನ್ನು ಕೆಳದೂಡಿದಾಗ ಅದು ದೊಡ್ಡ ಬೆಣೆಯ ಮುಖದ ವಿಸ್ತೀರ್ಣ ಹೆಚ್ಚಿರುವುದರಿಂದ ಮೇಲ್ಬದಿಗೆ ಆರೋಪಿಸುವ ಬಲದ ಪರಿಣಾಮ ಹೆಚ್ಚಾಗಿರುತ್ತದೆ. ಹೀಗೆ ಚಿಕ್ಕ ಬೆಣೆಯ ಮೇಲೆ ಕಡಿಮೆ ಬಲ ಉಪಯೋಗಿಸಿ ದೊಡ್ಡ ಬೆಣೆ ಮೇಲಿನ ಒಂದು ವಾಹನವನ್ನು ಮೇಲೆತ್ತಬಹುದು” ಎಂದು ವಿವರಿಸಿ ತಿಳಿಸಿದರು.

ಪ್ಯಾಸ್ಕಲ್‍ನ ತತ್ವದ ಬಗ್ಗೆ ತಿಳಿದ ಪುಟ್ಟನಿಗೆ ಪ್ಯಾಸ್ಕಲ್‍ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆನಿಸಿತು.“ಸಾರ್ ಪ್ಯಾಸ್ಕಲ್‍ನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸ್ರೀ” ಎಂದು ಕೇಳಿದ. ಶಿಕ್ಷಕರು ವಿವರಿಸುತ್ತಾ “ಪ್ಯಾಸ್ಕಲ್‍ನು 1623 ಜೂನ್ 19 ರಂದು ಪ್ರಾನ್ಸಿನಲ್ಲಿರುವ ಕ್ಲೆರ್‍ಮೆಂಟ್-ಫೆರಿಂಡ್ ಎಂಬಲ್ಲಿ ಜನಿಸಿದನು. ಅವನಿಗೆ ಚಿಕ್ಕಂದಿನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಎಷ್ಟಿತ್ತೆಂದರೆ ಹುಡುಗನಾಗಿದ್ದಾಗಲೇ ಯೂಕ್ಲಿಡ್‍ನ ರೇಖಾಗಣಿತದ ಪ್ರಮೇಯಗಳನ್ನು ಕಂಡುಹಿಡಿದನಂತೆ. ಹದಿನಾರನೇ ವಯಸ್ಸಿಗೆ ಶಂಕುವಿನ ಛೇದ ಮುಖಗಳಾದ ವರ್ತುಲ, ಎಲಿಪ್ಸ್, ಪ್ಯಾರಾಬೋಲ, ಹೈಪರ್ಬೋಲ ಮುಂತಾದ ಆಕೃತಿಗಳ ಜ್ಯಾಮಿತಿಯ ಬಗ್ಗೆ ಪುಸ್ತಕ ಬರೆದು ಪ್ರಕಟಿಸಿದನು.

ಪ್ಯಾಸ್ಕಲ್ ಕಂಡುಹಿಡಿದ ಲೆಕ್ಕಾಚಾರದ ಯಂತ್ರ ಗಣಕಯಂತ್ರಗಳ ಆವಿಷ್ಕಾರಕ್ಕೆ ಪ್ರಚೋದನೆ ನೀಡಿತು. ಪ್ಯಾಸ್ಕಲ್‍ನು “ಸಂಭವನೀಯತಾ ಸಿದ್ಧಾಂತ” ಕಂಡು ಹಿಡಿದನು. ಒಮ್ಮೆ ಪ್ಯಾಸ್ಕಲ್ ಕುದುರೆ ಸಾರೋಟಿನಲ್ಲಿ ಹೋಗುವಾಗ ಅಪಘಾತಕ್ಕಿ ಡಾಗಿ ಸಾವಿನ ದವಡೆಯಿಂದ ತಪ್ಪಿಸಿಕೊಂಡ. ಇದು ಅವನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನುಂಟು ಮಾಡಿತು. ದೇವರ ಅವಕೃಪೆಯೇ ಇದಕ್ಕೆ ಕಾರಣವೆಂದು ನಂಬಿದ ಪ್ಯಾಸ್ಕಲ್‍ನಿಗೆ ಅಂದಿನಿಂದ ವಿಜ್ಞಾನದ ವಿಷಯದಲ್ಲಿ ಆಸಕ್ತಿ ಕಡಿಮೆಯಾಗಿ ಧಾರ್ಮಿಕ ಗ್ರಂಥಗಳ ಅಧ್ಯಯನ ಮತ್ತು ರಚನೆಯಲ್ಲಿ ತೊಡಗಿದ. ಪ್ಯಾಸ್ಕಲ್‍ನ ದೈವೀ ನಂಬಿಕೆಗಳೇನೇ ಇದ್ದರೂ ವಿಜ್ಞಾನ ಕ್ಷೇತ್ರದಲ್ಲಿ ಆತನ ಸಾಧನೆ ಗಮನಾರ್ಹವಾದುದು” ಎಂದು ಶಿಕ್ಷಕರು ಪ್ಯಾಸ್ಕಲ್‍ನ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಇದನ್ನು ಕೇಳಿದ ಪುಟ್ಟನಿಗೆ ಮತ್ತು ತರಗತಿಯ ವಿದ್ಯಾರ್ಥಿಗಳೆಲ್ಲರಿಗೂ ಬಲು ಖುಷಿಯಾಯಿತು.

‘ಟೀಚರ್’ ಅಕ್ಟೋಬರ್ 2003
- ಆರ್.ಬಿ.ಗುರುಬಸವರಾಜ

ಇದರ ಮೇಲೆ ತೆರಿಗೆ ಹಾಕಬಹುದು!

ಇದರ ಮೇಲೆ ತೆರಿಗೆ ಹಾಕಬಹುದು!

ಎಲ್ಲ ಮಕ್ಕಳಂತೆ ಶಾಲಾ ವಯಸ್ಸಿಗೆ ಶಾಲೆಗೆ ಸೇರಿ ನಲಿದಾಡಬೇಕಾದ ವಯಸ್ಸಿಗೆ ಆ ಹುಡುಗನಿಗೆ ದುಡುಮೆ ಅನಿವಾರ್ಯವಾಗಿತ್ತು. ಹದಿನಾಲ್ಕನೇ ವಯಸ್ಸಿಗಿಂತ ಮುಂಚೆಯೇ ಒಬ್ಬ ಪುಸ್ತಕ ವ್ಯಾಪಾರಿಯ ಬಳಿ ಪುಸ್ತಕಗಳಿಗೆ ರಟ್ಟು ಹಾಕುವ ಕೆಲಸಕ್ಕೆ ಸೇರಿಕೊಂಡು ಪುಸ್ತಕಗಳಿಗೆ ರಟ್ಟು ಹಾಕುವ ಹುಡುಗನೊಬ್ಬ ಮುಂದೆ ವಿಜ್ಞಾನಿಯಾಗುತ್ತಾನೆಂದು ಯಾರೂ ಕನಸಿನಲ್ಲಿಯೂ ಎಣಿಸಿರಲಿಲ್ಲ.

ಶಾಲ ವಿದ್ಯಾಭ್ಯಾಸವಿಲ್ಲದೇ ವಿಜ್ಞಾನಿಯಾದ ಬಾಲಕನ್ಯಾರು ಗೊತ್ತೆ? ಅವನೇ ಮೈಕೆಲ್ ಫ್ಯಾರಡೆ. ಫ್ಯಾರಡೇ ಜನಿಸಿದ್ದು 1791 ಸೆಪ್ಟಂಬರ್ 22 ರಂದು ಒಂದು ಬಡ ಕಮ್ಮಾರನ ಕುಟುಂಬದಲ್ಲಿ. ಬಡತನದಿಂದಾಗಿ ಫ್ಯಾರಡೆ  ಪಾಲಿಗೆ ವಿದ್ಯಾಭ್ಯಾಸ ದೂರವಾಯಿತು. ದುಡಿಮೆ ಅನಿವಾರ್ಯವಾಗಿ ರಟ್ಟು ಹಾಕುವ ಕೆಲಸಕ್ಕೆ ಸೇರಿಕೊಂಡ. ರಟ್ಟು ಹಾಕುತ್ತಲೇ, ರಟ್ಟು ಹಾಕಲು ಕೊಟ್ಟ ವಿಜ್ಞಾನ ಪುಸ್ತಕಗಳಿಂದ ಆಳವಾದ ಅಧ್ಯಯನ ಮಾಡಿ, ಓದಿದ್ದನ್ನು ಮನಸ್ಸಿನಲ್ಲಿ ತಿರುವಿಹಾಕಿ ಚಿತ್ರಗಳನ್ನು, ವಿವರಣೆಗಳನ್ನು ಬರೆದಿಟ್ಟುಕೊಳ್ಳುತ್ತಿದ್ದ. ಅಲ್ಲಲ್ಲಿ ನಡೆಯುವ ಉಪನ್ಯಾಸಗಳನ್ನು ಕೇಳಿ ಟಿಪ್ಪಣಿಗಳನ್ನು ಬರೆದುಕೊಂಡು, ಪ್ರಯೋಗಗಳಿಗೆ ನೆರವಾಗುವ ಚಿತ್ರಗಳನ್ನು ರಚಿಸಿಕೊಳ್ಳುತ್ತಿದ್ದ.

ಸಂಗ್ರಹಿಸಿದ ಟಿಪ್ಪಣಿ ಹಾಗೂ ಚಿತ್ರಗಳನ್ನು ಸೇರಿಸಿ “ಸರ್ ಹಂಫಿಡೇವಿ” ಯವರಿಗೆ ಕಳಿಸಿಕೊಟ್ಟು ಅವರ ಬಳಿ ಕೆಲಸಕ್ಕಾಗಿ ಬೇಡಿದ. ವಿಜ್ಞಾನದಲ್ಲಿ ಅವನಿಗಿದ್ದ ಆಸಕ್ತಿ, ಆಳವಾದ ಅರಿವು ಆ ಟಿಪ್ಪಣಿಗಳಲ್ಲಿ, ಚಿತ್ರಗಳಲ್ಲಿ ಪ್ರತಿಬಿಂಬಗೊಂಡಿದ್ದವು. ತಕ್ಷಣ ಕೆಲಸ ಸಿಗಲಿಲ್ಲವಾದರೂ 1813ರಲ್ಲಿ ಡೇವಿಯವರ ಸಹಾಯಕನಾಗಿ ರಾಯಲ್ ಸೊಸೈಟಿ ಸೇರಿದ. ಆಗ ಯುರೋಪಿನ ಅನೇಕ ಮಂದಿ ಪ್ರಸಿದ್ಧಿ ವಿಜ್ಞಾನಿಗಳನ್ನು ಕಾಣುವ ಮತ್ತು ಅವರ ಉಪನ್ಯಾಸ ಕೇಳುವ ಅವಕಾಶ ದೊರೆಯಿತು.1816ರಲ್ಲಿ ಫ್ಯಾರಡೆ ತನ್ನ ಮೊದಲ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದನು. ಅದೇ ವರ್ಷ ಅವನು ಕೆಲವು ಹೊಸ ರಾಸಾಯನಿಕ ಸಂಯುಕ್ತಗಳನ್ನು ತಯಾರಿಸಿದನು.


1821 ಫ್ಯಾರಡೆ ಜೀವನದ ಮೈಲಿಗಲ್ಲು. ವಿದ್ಯುತ್ ಪ್ರವಹಿಸುವ ಒಂದು ತಂತಿ ಅದರ ಕೆಳಗೆ ನಿಲ್ಲಿಸಿದ್ದ ಅಯಸ್ಕಾಂತದ ಅಕ್ಷವನ್ನು ಬಳಸಿ ಸುತ್ತುತ್ತದೆ ಎನ್ನುವುದನ್ನು ತೀರಾ ಸರಳ ಉಪಕರಣಗಳನ್ನುಪಯೋಗಿಸಿ ತೋರಿಸಿದ. 1824ರಲ್ಲಿ “ರಾಯಲ್ ಸೊಸೈಟಿ” ಯ ಸದಸ್ಯನಾದನು.

“ಪ್ರಕೃತಿಯಲ್ಲಿನ ಎಲ್ಲಾ ಬಲಗಳು ಒಂದೇ ಮೂಲದಿಂದ ಹುಟ್ಟಿದ್ದು, ಒಂದು ಬಲವನ್ನು ಇನ್ನೊಂದು ಬಲವನ್ನಾಗಿ ಪರಿವರ್ತಿಸಲು ಸಾಧ್ಯ” ಎಂದು ಫ್ಯಾರಡೆ ನಂಬಿದ್ದ. ಈ ನಂಬಿಕೆಯೇ ಅವನ ಎಲ್ಲಾ ಪ್ರಯೋಗಗಳಿಗೂ ಆಧಾರವಾಗಿತ್ತು.ಕಾಂತ ಧೃವಗಳ ನಡುವೆ ಒಂದು ಲೋಹದ ಬಿಲ್ಲೆ ತಿರುಗಿಸಿ ಅದರಿಂದ ವಿದ್ಯುತ್ ಉತ್ಪಾದಿಸಬಹುದೆಂದು ಫ್ಯಾರಡೆ ತೋರಿಸಿದ. ಇದು ಮುಂz ಡೈನಾಮೋ ಸೃಷ್ಟಿಗೆ ಕಾರಣವಾಯಿತು.

ಫ್ಯಾರಡೆ ಸಾರ್ವಜನಿಕ ಭಾಷಣ ಮತ್ತು ಪ್ರದರ್ಶಗಳಿಗೆ ಹೆಸರುವಾಸಿಯಾಗಿದ್ದ. ಒಮ್ಮೆ ಅವನು ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಪ್ರಯೋಗವನ್ನು ಪ್ರದರ್ಶಿಸಿ ವಿವರಿಸುತ್ತಿದ್ದಾಗ ಆ ದೇಶದ ವಿದೇಶಾಂಗ ಸಚಿವರು. ಈ ಪ್ರಯೋಗದಿಂದೇನು ಉಪಯೋಗ ಎಂದು ಕೇಳಿದರು. ತಟ್ಟನೇ ಫ್ಯಾರಡೇ “ಮಾನ್ಯರೇ ನೀವು ಮುಂದೆ ಇದರ ಮೇಲೆ ತೆರಿಗೆ ಹಾಕಬಹುದು” ಎಂದರಂತೆ.

ಆಡಂಬರದ ಬದುಕು ಫ್ಯಾರಡೆ ಜೀವನಕ್ಕೆ ಒಗ್ಗಲಿಲ್ಲ. ಅವನು ಕೀರ್ತಿಯನ್ನಾಗಲೀ, ಸ್ಥಾನವಾನ್ನಗಲೀ ಎಂದೂ ಬಯಸಲಿಲ್ಲ. ಮಕ್ಕಳಿಲ್ಲದ ಫ್ಯಾರಡೆಯ ಅವಿಶ್ರಾಂತ ದುಡಿಮೆಯಿಂದಾಗಿ ಆರೋಗ್ಯ ಕೆಟ್ಟಿತು. 1861 ಆಗಸ್ಟ್ 25 ರಂದು ಫ್ಯಾರಡೆ ದೇಹಾಂತ್ಯವಾದರೂ ಅವನ ಸಾಧನೆಗಳು ನಮ್ಮ ಕಣ್ಣೆದುರಿಗಿವೆ.

‘ಟೀಚರ್’ ಮೇ 2003
- ಆರ್.ಬಿ.ಗುರುಬಸವರಾಜ

ಕನವರಿಕೆಗಳ ಪ್ರವಾದಿ: ಎಡ್ಗರ್ ಕೇಸಿ

ಕನವರಿಕೆಗಳ ಪ್ರವಾದಿ: ಎಡ್ಗರ್ ಕೇಸಿ

 “ಬರ್ಮುಡಾ ಟ್ರ್ಯಾಂಗಲ್ಸ” ಬಗ್ಗೆ ಯಾರಿಗೆಗೊತ್ತಿಲ್ಲ. ಹೇಳಿ. ಡೆವಿಲ್ಸ್ ಟ್ರ್ಯಾಂಗಲ್ ಎಂದು ಪ್ರಸಿದ್ಧವಾಗಿದ್ದ ಅದನ್ನು ಭೂತ ಪಿಶಾಚಿಗಳ ತಾಣ ಎಂತಲೂ ಸಹ ಕರೆಯುತ್ತಾರೆ. ಅದಕ್ಯಾಕೆ ಆ ಹೆಸರು ಎಂದಿರ! ಇದೊಂದು ಅಂಟ್ಲಾಟಿಕ್ ತೀರದಲ್ಲಿನ ಬರ್ಮುಡಾ, ಮಯಾಮಿ, ಪ್ಲೋರಿಡಾ, ಪೋರ್ಟೊರಿಕಾ, ಸಾನ್‍ಜುವಾನ್ ದೇಶಗಳ ನಡುವಿನ ತ್ರಿಕೋಣ ಪ್ರದೇಶವಾಗಿದ್ದು, ವಿಸ್ಮಯಗಳ ಹಾಗೂ ಕೌತುಕಗಳ ಆಗರವಾಗಿದೆ ಮತ್ತು ವಿಜ್ಞಾನಕ್ಕೆ ಬಿಡಿಸಲಾಗದ ಕಗ್ಗಂಟಾಗಿದೆ. ಈ ಪ್ರದೇಶದಲ್ಲಿ ನಡೆದ ವಿಮಾನ ಮತ್ತು ಹಡಗುಗಳ ನಾಪತ್ತೆ ಪ್ರಕರಣಗಳು ಜಗತ್ತಿನ ಬೇರೆ ಕಡೆ ನಡೆದ ಎಲ್ಲಾ ಪ್ರಕರಣಗಳಿಗಿಂತ ವಿಶಿಷ್ಠವಾದವು ಮತ್ತು ಗಮನಾರ್ಹವಾದವುಗಳಾಗಿವೆ. 

ಇಲ್ಲಿ ನಡೆದ ನಾಪತ್ತೆ ಪ್ರಕರಣಗಳಿಗೆ ಕಾರಣಗಳ ಹಾದಿ ಹಿಡಿದು ಹುಡುಕಲು ಹೊರಟವರೂ ಸಹ ನಾಪತ್ತೆಯಾಗಿ ಸಂಶೋಧನೆಯ ಸ್ವರೂಪವೇ ಬುಡಮೇಲಾದ ಅನೇಕ ಪುರಾವೆಗಳು ದೊರೆತವಾದರೂ ನಂಬಲಸಾಧ್ಯವಾದ್ದರಿಂದ ಅವು ದಂತಕತೆಯಾಗಿಯೇ ಉಳಿದವು. ಆದರೆ ಸಾಧಕರಿಗೆ, ಸಂಶೋಧಕರಿಗೆ, ಸಾಹಸಿಗಳಿಗೆ ವೈಜ್ಞಾನಿಕ ಪುರಾವೆಗಳು ದೊರೆತರೆ ಅವರನ್ನು ತಡೆ ಹಿಡಿವವರ್ಯಾರು? ಬರ್ಮುಡಾ sಟ್ರ್ಯಾಂಗಲ್‍ನ ವಿಸ್ಮಯದ ಸಂಗತಿಗಳಿಗೆ ಕಾರಣಗಳನ್ನು, ಅದರ ಸ್ವರೂಪದ ಬಗ್ಗೆ ಕಂಡು ಕೇಳರಿಂiÀiದ ವ್ಯಕ್ತಿಯೊಬ್ಬ ಕನಸಿನಲ್ಲಿ ಕಂಡದನ್ನು ಹೇಳಿದಾಗ ಇಡೀ ಜಗತ್ತೇ ಮೂಕವಿಸ್ಮತವಾಗಿತ್ತು. ಏಕೆಂದರೆ ಬರ್ಮುಡಾ ಟ್ರ್ಯಾಂಗಲ್ ಕುರಿತು ಆ ವ್ಯಕ್ತಿ ಹೇಳಿದ ಮಾತು ಅಕ್ಷರ ಸಹ ನಂಬಲರ್ಹವಾಗಿತ್ತು. ಬರ್ಮುಡಾ ಟ್ರ್ಯಾಂಗಲ್ ಕುರಿತು ಮತೆ ಜನಮನದಲ್ಲಿ ಕುತೂಹಲ ಕೆರಳಿಸಿದ ಆ ವ್ಯಕ್ತಿಯೇ ಎಡ್ಗರ್ ಕೇಸಿ.

ಎಡ್ಗರ್ ಕೇಸಿ ಅಮೇರಿಕಾದ ಕೆಂಟುಕಿ ಎಂಬಲ್ಲಿ 1877ರಲ್ಲಿ ಜನಿಸಿದನು. ಬಾಲ್ಯದಲ್ಲಿ ಪ್ರತಿಭಾವಂತನೆನಿಸಿಕೊಳ್ಳದಿದ್ದರೂ ತನ್ನ ವಿಲಕ್ಷಣವಾದ ಕೆಲವು ವರ್ತನೆಗಳಿಂದ ಇತರರನ್ನು ಆಕರ್ಷಿಸಿಕೊಂಡಿದ್ದ.ತನಗೆ ಸತ್ತವರೊಂದಿಗೆ ಮಾತನಾಡುವ ವಿಶಿಷ್ಠ ಶಕ್ತಿಯಿದೆ ಎಂದು ಆಗಾಗ್ಗೆ ಹೇಳುತ್ತಿದ್ದರೂ, ಪೋಷಕರು ಅದೊಂದು ಅವನ ಹುಚ್ಚಾಟ ಎಂದು ಹೇಳಿ ಅವನನ್ನು ಗದರಿಸುತ್ತಿದ್ದರು.

ಒಮ್ಮೆ ಅವನಿಗೆ ಹದಿವಯಸ್ಸಿನಲ್ಲುಂಟಾದ ಗಂಟಲು ಬೇನೆ ಯಾವ ವೈದ್ಯಕೀಯ ಔಷಧೋಪಚಾರದಿಂದಲೂ ಫಲಕಾರಿಯಾಗದಿರುವುದರಿಂದ ರೋಸಿ ಹೋದ ಕೇಸಿ ತನ್ನ ಸ್ನೇಹಿತನ ಸಹಾಯದಿಂದ ಸುಪ್ತನಿದ್ರಾವಸ್ಥೆಗೆ ತೆರೆಳಲ್ಪಟ್ಟು ತನ್ನ ಸಂಕಷ್ಟಗಳಿಗೆ ಕಾರಣಗಳನ್ನು ಮತ್ತು ಪರಿಹಾರಗಳನ್ನು ಹೇಳುವ ಅವನ ರೀತಿ ಸುತ್ತಮುತ್ತಲ ಹಳ್ಳಿಗಳಿಗೆ ಹಬ್ಬಿತ್ತು. ರೋಗ ಉಪಶಮನಕ್ಕೆಂದು ತಿಳಿಸಿದರೆ ಸಾಕು, ಈತ ಸುಪ್ತಾನಿದ್ರಾವಸ್ಥೆಗೆ ತೆರಳಿ ರೋಗಕ್ಕೆ ಕಾರಣ ಹಾಗೂ ನಿವಾರಣಾ ಮಾರ್ಗವನ್ನು ಹೇಳುತ್ತಿದ್ದ. ಇದರಿಂದ ಅನೇಕ ರೋಗಿಗಳು ಗುಣಮುಖರಾದರು. ಕೆಲವರು ಜಗತ್ತಿನ ಆಗುಹೋಗುಗಳ ಪ್ರಶ್ನೆಗಳಿಗೆ ಕೇಸಿ ಸೂಕ್ತ ಉತ್ತರ ನೀಡುತ್ತಾ ಕನವರಿಕೆಯ ಪ್ರವಾದಿ ಎನಿಸಿಕೊಂಡ.

ಎಚ್ಚೆತ್ತ ಸಹಜ ಸ್ಥಿತಿಯಲ್ಲಿ ಕೇಸಿ ಎಲ್ಲರಂತೆ ತೀರಾ ಸಾಧಾರಣ ವ್ಯಕ್ತಿಯಾಗಿರುತ್ತಿದ್ದ. ಆದರೆ ಸುಪ್ತನಿದ್ರಾವಸ್ಥೆಯಲ್ಲಿ ಸಾವಿರಾರು ಜನರ ಸಂಕಷ್ಟಹರ ಚಿಕಿತ್ಸಕನಾಗಿದ್ದುದು ಅವನ ಹಿರಿಮೆಯ ಗರಿ. ಕೇಸಿ ತನ್ನೂರಿನ ಶಾಲಾ ಮಕ್ಕಳ ಪ್ರೀತಿಯ ಮಾಸ್ತರನಾಗಿ, ಉತ್ತಮ ಛಯಾಗ್ರಾಹಕನಾಗಿ, ಮನೆಮಂದಿಯ ಆತ್ಮೀಯ ಒಡನಾಡಿಯಾಗಿ ಜೀವನ ನಡೆಸಿದ್ದ.

ತನ್ನ ಸಹಜ ಸ್ಥಿತಿಯಲ್ಲಿ ಅಟ್ಲಾಂಟಿಸ್ ಬಗ್ಗೆ ಕಿಂಚಿತ್ತೂ ಆಸಕ್ತಿ ತೋರಿಸದ ಕೇಸಿ ಸುಪ್ತನಿದ್ರಾವಸ್ಥೆಯಲ್ಲಿ ಅಂಟ್ಲಾಂಟಿಸ್ ಕುರಿತು ನೂರಾರು ಬಾರಿ ಕನವರಿಸಿದ್ದಾನೆ. ಅದು ಅವನಿಗೇ ಆಸ್ಚರ್ಯದ ಸಂಗತಿಯಾಗಿತ್ತು. ಈಗಿನ ಬಿಮಿನಿ ದ್ವೀಪದಲ್ಲಿ ಹಿಂದೊಮ್ಮೆ ಉನ್ನತವಾದ ನಾಗರೀಕತೆಯೊಂದು ಬೆಳೆದು, ಜಗತ್ತಿನ ಶ್ರೇಷ್ಠ ಜನಾಂಗವಾಗಿ ಮೆರೆದು, ತನ್ನ ಕೈಯಾರ ತಾನೇ ಅವಸಾನ ಹೊಂದಿತೆಂದು ಕೇಸಿ ಹೇಳುತ್ತಿದ್ದನು. ಅಟ್ಲಾಂಟಿಸ್‍ನ ಅವಸಾನಕ್ಕೆ ಅಣುಶಕ್ತಿಯ ದುರುಪಯೋಗವೇ ಕಾರಣವೆಂದು ಹೇಳಿದ ಕೇಸಿ ಬರ್ಮುಡಾ ಟ್ರ್ಯಾಂಗಲ್‍ನ ಎಲ್ಲಾ ನಾಪತ್ತೆ ಪ್ರಕರಣಗಳಿಗೆ ಅಟ್ಲಾಂಟಿಸ್ ನಾಗರಿಕತೆಯಲ್ಲಿ ಶಕ್ತಿ ಸ್ಥಾವರಗಳ ಶಕ್ತಿಯೇ ಕಾರಣವೆಂದು ತಿಳಿಸಿದ್ದಾನೆ. ಲೇಸರ್ ಕಿರಣಗಳನ್ನು (1942) ಕಂಡು ಹಿಡಿಯುವುದಕ್ಕಿಂತ ಮೊದಲೇ ಅಟ್ಲಾಂಟಿಸ್ ನಾಗರೀಕತೆಯ ಜನರು ಲೇಸರ್ ಮತ್ತು ಮೇಸರ್ ಕಿರಣಗಳನ್ನು ಪಳಗಿಸಿಕೊಂಡಿದ್ದರು ಎಂದು ಹೇಳಿದ್ದಾನೆ.

ಈಗ್ಗೆ ಹನ್ನೆರಡು ಸಾವಿರ ವರ್ಷಗಳ ಹಿಂದೆ ಅವಸಾನ ಹೊಂದಿದ ಇಂತಹ ಶಕ್ತಿ ಕೇಂದ್ರಗಳು ಬರ್ಮುಡಾ ಟ್ರ್ಯಾಂಗಲ್‍ನಲ್ಲಿ ಈಗಲೂ ಸಹ ಕ್ರಿಯಾಶೀಲವಾಗಿವೆಯೆಂದರೆ ನಂಬುವುದು ಸ್ವಲ್ಪ ಕಷ್ಟದ ಸಂಗತಿಯಾದರೂ ಅಪೋಲೋ-12 ರ ಗಗನಯಾತ್ರಿಗಳು ಕಂಡಂತೆ ಬಿಳಿ ನೀರಿನ ಬುಗ್ಗೆಯೊಂದು ಹೊರನುಗ್ಗಿ ಇತರೆಡೆ ಹರಿದು ಪ್ರಕಾಶಮಾನವಾಗಿ ಹೊಳೆಯುವ ದೃಶ್ಯ ಕಂಡಿದ್ದರಿಂದ ಅದು ಸಾಗರದಾಳದಲ್ಲಿ ಅದುಮಿಟ್ಟ ಅನಿಲಗಳು ಹೊರನುಗ್ಗುವ ಘಟನೆಯ ಪರಿಣಾಮ ಇದ್ದರೂ ಇರಬಹುದು ಎಂದು ತೀರ್ಮಾನಿಸಲಾಯಿತು.

ಹೀಗೆ ಅಟ್ಲಾಂಟಿಸ್‍ನ ದಂತ ಕತೆಗಳಲ್ಲಿ ಒಂದು ಪಾತ್ರವಾಗುಳಿದ ಕೇಸಿ 1940ರಲ್ಲಿ ಒಂದು ಮಹತ್ತರವಾದ ಕನವರಿಕೆಯನ್ನು ಹೊರಹಾಕಿದೆ. ಅದೇನೆಂದರೆ 1968-69ರಲ್ಲಿ ಅಟ್ಲಾಂಟಿಸ್‍ನ ಭಾಗವಾದ ಪೊಸಿಡಿಯಾ ಮತ್ತೊಮ್ಮೆ ಮೇಲೆದ್ದು ಬರುತ್ತದೆಂದು ಹೇಳಿದ. ಅವನ ಈ ಕನವರಿಕೆಯನ್ನು ನಿಜಪಡಿಸಲೆಂಬಂತೆಯೋ ಅಥವಾ ಪರೀಕ್ಷೀಸಲೆಂಬತೆಯೋ 1967 ರಲ್ಲಿ ಡಾ!! ಮೆವರ್ ಹಾಗೂ ಶ್ರೀಮತಿ ವರ್ಮೋಲ್ ಎಂಬ ಸಂಶೋಧಕರು ಆ ಪೊಸಿಡಿಯಾ ಪ್ರದೇಶದಲ್ಲಿ ಸಮುದ್ರಮಟ್ಟದಿಂದ ಕೇವಲ 30 ಅಡಿ ಆಳದಲ್ಲಿ ಲಾವಾ ಶಿಲೆಗಳಡಿ ಹುದುಗಿದ್ದ ಮಿನೂಂವ್ ಎಂಬ ಮುಳುಗಡೆಯಾದ ನಗರವನ್ನು ಪತ್ತೆ ಹಚ್ಚಿದರು. ಕೇಸಿಯ ಭವಿಷ್ಯದ ಕನವರಿಕೆಯ ಕಾಕತಾಳೀಯವೆಂಬಂತೆ ಅಲ್ಲೊಂದು ಮುಳುಗಿದ ನಗರದ ಕುರುಹು ಪತ್ತೆಯಾಗಿತ್ತು.

ಹೀಗೆ ಕನವರಿಕೆಗಳ ಸರಮಾಲೆಯನ್ನೇ ಹೊತ್ತುಕೊಂಡಿದ್ದ ಎಡ್ಗರ್‍ಕೇಸಿ 1945ರ ಜನವರಿ 3 ರಂದು ಮರಣಹೊಂದಿ ಇಂದಿಗೂ ಜಗತ್ತಿನ ಕನವರಿಕೆಯಾಗೇ ಉಳಿದನು.

‘ಟೀಚರ್’ ಜುಲೈ 2006
- ಆರ್.ಬಿ.ಗುರುಬಸವರಾಜ

ಹಾಕಿ ಮಾಂತ್ರಿಕ ಧ್ಯಾನ್‍ಚಂದ್: ಒಂದು ನೆನಪು

ಹಾಕಿ ಮಾಂತ್ರಿಕ ಧ್ಯಾನ್‍ಚಂದ್: ಒಂದು ನೆನಪು

1928ರಲ್ಲಿ ಆಮ್‍ಸ್ಟರ್‍ಡಮ್‍ನಲ್ಲಿ ಭಾರತ ಪ್ರಥಮವಾಗಿ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿ ಹಾಕಿ ಪಂದ್ಯದಲ್ಲಿ ಚಿನ್ನದ ಪದಕ ಪಡೆದಾಗ “ಹಾಕಿ ಒಂದು ಆಟವಲ್ಲ, ಅದೊಂದು ಯಕ್ಷಿಣಿ ವಿದ್ಯೆ” “ಹಾಕಿ ಯಕ್ಷಿಣಿಗಾರ – ಧ್ಯಾನ್‍ಚಂದ್” ಎಂದೆಲ್ಲಾ ಅಂದಿನ ಪತ್ರಿಕೆಗಳು ವರ್ಣಿಸಿದವು. ಈ ಎಲ್ಲಾ ಖ್ಯಾತಿಗೆ ಭಾಜನರಾದವರು ಭಾರತದ ಖ್ಯಾತ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್.
ಧ್ಯಾನ್‍ಚಂದ್ ಕೇವಲ ಭಾರತದ ಭಾರತದ ಹಾಕಿ ಆಟಗಾರನಾಗಿ ಹೆಸರುಗಳಿಸಲಿಲ್ಲ. ಭಾರತದ ಸೇನಾನಾಯಕ (ಮೇಜರ್)ನಾಗಿಯೂ ಹೆಸರುಗಳಿಸಿದವರು. ಬಾಲ್ಯದಲ್ಲಿ ಆಟಗಳಲ್ಲಿ ಅನಾಸಕ್ತಿ ಹೊಂದಿದ್ದರೂ ಪ್ರಾಮಾಣಿಕ ಪ್ರಯತ್ನಗಳಿಂದ ಹುಟ್ಟಿದ ದಿನವನ್ನು “ರಾಷ್ಟ್ರೀಯ ಕ್ರೀಡಾದಿನ”ವನ್ನಾಗಿ ಆಚರಿಕೊಳ್ಳುವ ಹಂತಕ್ಕೆ ಬೆಳೆದ ಏಕೈಕ ವ್ಯಕ್ತಿಯೆಂದರೆ ಮೇಜರ್ ಧ್ಯಾನ್‍ಚಂದ್.


ಧ್ಯಾನ್‍ಚಂದ್ ಹುಟ್ಟಿದ್ದು 29ನೇ ಆಗಸ್ಟ್ 1905ರಂದು ಅಲಹಾಬಾದಿನ ಪ್ರಯಾಗದಲ್ಲಿ. ತಂದೆ ಸಮೇಶ್ವರದತ್ತ ಭಾರತೀಯ ಸೇನೆಯಲ್ಲಿದ್ದ ಇವರೂ ಸಹ ರೆಜಿಮೆಂಟಿನಲ್ಲಿ ಉತ್ತಮ ಹಾಕಿ ಪಟುವಾಗಿದ್ದರು. ತಂದೆಯ ಪದೇಪದೇ ವರ್ಗಾವಣೆಯಿಂದಾಗಿ ಕುಟುಂಬವು ಒಂದಡೆ ನೆಲೆನಿಲ್ಲಲು ಸಾಧ್ಯವಾಗಲಿಲ್ಲ. ಆ ಕಾರಣಕ್ಕಾಗಿ ಧ್ಯಾನ್‍ಚಂದ್ ಸರಿಯಾಗಿ ವಿದ್ಯಾಭ್ಯಾಸ ಮಾಡಲಾಗದೇ ಆರನೇ ತರಗತಿ ಶಾಲೆ ಬಿಡಬೇಕಾಯಿತು.

ಬಾಲ್ಯದಲ್ಲಿ ಮಲ್ಲಯುದ್ಧ ಮತ್ತು ಕುಸ್ತಿಗಳಲ್ಲಿ ಮಾತ್ರ ಆಸಕ್ತಿ ಹೊಂದಿದ್ದ ಧ್ಯಾನ್‍ಸಿಂಗ್ ಇತರೆ ಎಲ್ಲಾ ಆಟಗಳಲ್ಲಿ ನಿರಾಸಕ್ತಿ ಹೊಂದಿದ್ದರು. 1922ರಲ್ಲಿ ಅಂದರೆ 16ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಆಯ್ಕೆಯಾದರು. ಆಗ ರೆಜಿಮೆಂಟಿನವರು ಹಾಕಿ ಆಟವನ್ನೇ ವಿಶೇಷವಾಗಿ ಅಭ್ಯಾಸ ಮಾಡಿಸುತ್ತಿದ್ದರು. ಸಣ್ಣಗಾತ್ರದ ಚುರುಕು ನಡೆನುಡಿಯ ಅದಮ್ಯ ಚೇತನಾಶೀಲನಾದ ಧ್ಯಾನ್‍ಚಂದ್‍ನ ಪ್ರತಿಭೆಯನ್ನು ಸೂಕ್ಷ್ಮವಾಗಿ ಪತ್ತೆಹಚ್ಚಿದ ಸುಬೇದಾರ್ ಬಾಳೆ ತಿವಾರಿಯವರು ಅವರನ್ನು ಉತ್ತಮ ಹಾಕಿ ಪಟುವಾಗಿ ಬೆಳೆಯಲು ಭದ್ರ ಬುನಾದಿ ಹಾಕಿದರು. ಅಲ್ಲದೇ ಅವರ ಎಲ್ಲಾ ಜವಾಬ್ದಾರಿಗಳನ್ನು ತಾವೇ ಹೊತ್ತರು.

ಹಗಲಿನಲ್ಲಿ ಸೇನಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಧ್ಯಾನ್‍ಚಂದ್‍ರಿಗೆ ಹಾಕಿಯಲ್ಲಿ ಹೆಚ್ಚು ಹೆಚ್ಚು ಅಭ್ಯಾಸ ಮಾಡಲು ಕಷ್ಟವಾಗುತ್ತಿತ್ತು. ಅದಕ್ಕಾಗಿ ಅವರು ರಾತ್ರಿ ಚಂದ್ರನ ಬೆಳಕಿನಲ್ಲಿ ಅಭ್ಯಾಸ ಮಾಡತೊಡಗಿದರು. ಇದನ್ನು ಗಮನಿಸಿದ ಅವರ ಮೊದಲ ಕೋಚ್ ಪಂಕ್‍ಗುಪ್ತಾ ‘ಧ್ಯಾನಸಿಂಗ್’ ಎಂದಿದ್ದ ಅವರ ಹೆಸರನ್ನು “ಧ್ಯಾನ್‍ಚಂದ್” ಎಂದು ಬದಲಾಯಿಸಿದರು.

1926ರಲ್ಲಿ ಭಾರತ ಹಾಕಿ ತಂಡ ಪ್ರಥಮ ಬಾರಿಗೆ ವಿದೇಶ ಪ್ರವಾಸಕೈಗೊಂಡಿತು. ನ್ಯೂಜಿಲೆಂಡಿನ ಪ್ರಥಮ ಕೈಗೊಂಡ ಆ ತಂಡದಲ್ಲಿ ಧ್ಯಾನ್‍ಚಂದ್ ಇದ್ದರು. ಅಲ್ಲಿ ನಡೆದ 20 ಪಂದ್ಯಗಳಲ್ಲಿ ಭಾರತವು 18 ಪಂದ್ಯಗಳಲ್ಲಿ ವಿಜಯಿಯಾಯಿತು. 18 ಪಂದ್ಯಗಳಲ್ಲಿ ಭಾರತ 192 ಗೋಲುಗಳಿಸಿತು. ಅದರಲ್ಲಿ ಧ್ಯಾನಚಂದ್ ಒಬ್ಬರೇ 100 ಗೋಲುಗಳನ್ನು ಪಡೆದದ್ದು ಪ್ರೇಕ್ಷಕರನ್ನು ಮೂಕವಿಸ್ಮಿರನ್ನಾಗಿಸಿತು. ಈ ಪಂದ್ಯಗಳಲ್ಲಿ ಅವರು ಅತ್ಯಂತ ಮಹತ್ವದ ಸೆಂಟರ್ ಪಾರ್ವರ್ಡ್ ಆಟಗಾರ ಎಂಬ ಖ್ಯಾತಿ ಪಡೆದರು. ನ್ಯೂಜಿಲ್ಯಾಂಡ್ ಪ್ರವಾಸದಿಂದ ಭಾರತಕ್ಕೆ ಹಿಂದಿರುಗಿದ ನಂತರ ಭಾರತೀಯ ಸೇನೆ ಇವರನ್ನು ಸೇನಾನಾಯಕರಾಗಿ ಬಡ್ತಿ ನೀಡಿತು. 1928ರ ಆಮ್‍ಸ್ಟರ್‍ಡಮ್, 1932ರ ಲಾಸ್‍ಏಂಜಲೀಸ್ ಹಾಗು 1936ರ ಬರ್ಲಿನ್‍ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಧ್ಯಾನ್‍ಚಂದ್ ಈ ಮೂರು ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಪಡೆದರು. 1936ರ ಬರ್ಲಿನ್ ಒಲಿಂಪಿಕ್ಸ್‍ನ ವಿಜಯದ ನಂತರ “ಅಡಾಲ್ಫ ಹಿಟ್ಲರ್” ಇವರನ್ನು ಜರ್ಮನ್ ಸೇನೆಗೆ ಸೇನಾಧಿಪತಿಯಾಗಿ ಆಹ್ವಾನಿಸಿದರು. ಆದರೆ ಧ್ಯಾನ್‍ಚಂದ್ ಅದನ್ನು ನಿರಾಕರಿಸಿದರು.

ಚೆಂಡಿನ ಚಲನೆಯನ್ನು ಹದ್ದಿನ ಕಣ್ಣಿನಿಂದ ಗಮನಿಸುತ್ತಿದ್ದ ಧ್ಯಾನ್‍ಸಿಂಗ್ ವೇಗದಲ್ಲಿ ಬೇಟೆನಾಯಿಯಂತೆ ನುಗ್ಗುತ್ತಿದ್ದರು. ಗೋಲಿನ ಕಡೆ ಚೆಂಡಿನ್ನು ನುಗ್ಗಿಸುವಾಗ ಎದುರಾಳಿಗಳಾರೂ ಸಮೀಪಕ್ಕೆ ಬಾರದಂತೆ ತಡೆಗಟ್ಟುತ್ತಾ ನೋಡು ನೋಡುತ್ತಿದ್ದಂತೆಯೇ ಗೋಲು ಹೊಡೆಯುತ್ತಿದ್ದ ಅವರ ಪರಿ ಎದುರಾಳಿ ತಂಡದವರಿಗೆ ಸೋಜಿಗವನ್ನುಂಟು ಮಾಡುತ್ತಿತ್ತು.

ಒಮ್ಮೆ ಹಾಲೆಂಡ್‍ನೊಂದಿಗೆ ಆಟವಾಡುತ್ತಿದ್ದಾಗ ಇವರ ಬ್ಯಾಟಿನಲ್ಲಿ ಅಯಸ್ಕಾಂತವಿರಬಹುದೆಂಬ ಗುಮಾನಿಯಿಂದ ಬ್ಯಾಟನ್ನೂ ಮುರಿದು ಹಾಕಲಾಯಿತು. ಇನ್ನೊಮ್ಮೆ ಒಬ್ಬ ಮಹಿಳಾ ಪ್ರೇಕ್ಷಕಿ ತನ್ನ ಊರುಗೋಲಿನಿಂದ ಆಟವಾಡಿ ಗೆದ್ದು ಎಲ್ಲಾರನ್ನೂ ಬೆರೆಗುಗೊಳಿಸಿದರು.

ಧ್ಯಾನ್‍ಸಿಂಗ್ ಅವರ ಸಹೋದರ ರೂಪ್‍ಸಿಂಗ್ ಹಾಗೂ ಮಗ ಅಶೋಕ್ ಕುಮಾರ್ ಸಹ ಖ್ಯಾತ ಹಾಕಿ ಆಟಗಾರರು. ಇವರ ಆಟವನ್ನೂ ತಪ್ಪದೇ ನೋಡುತ್ತಿದ್ದ ಶ್ರೇಷ್ಠ ಕ್ರಿಕೆಟಿಗ ಬ್ರಾಡ್‍ಮನ್ ಧ್ಯಾನ್‍ಚಂದ್ ಕುರಿತು “ಕ್ರಿಕೆಟ್‍ನಲ್ಲಿ ರನ್ ಗಳಿಸುವಷ್ಟು ವೇಗವಾಗಿ ಗೋಲು ಗಳಿಸುತ್ತಿದ್ದರು” ಎಂದು ಉದ್ಗರಿಸಿದರು.

ಇವರ ಸಾಧನೆಯನ್ನು ಗಮನಿಸಿದ ಭಾರತ ಸರ್ಕಾರ 1956ರಲ್ಲಿ “ಪದ್ಮಭೂಷಣ” ಪ್ರಶಸ್ತಿ ನೀಡಿ ಗೌರವಿಸಿತು. ಜೊತೆಗೆ ಪ್ರತಿವರ್ಷ “ಧ್ಯಾನ್‍ಚಂದ್ ಟ್ರೋಫಿ ಹಾಕಿ ಟೂರ್ನಮೆಂಟ್” ಕೂಡಾ ನಡೆಸುತ್ತದೆ.

1956ರಲ್ಲಿ ತಮ್ಮ 51ನೇ ವಯಸ್ಸಿನಲ್ಲಿ ಸೇನೆಯಿಂದ ನಿವೃತ್ತಿಯ ನಂತರ ರಾಜಸ್ಥಾನದ ಮೌಂಟ್‍ಅಬುವಿನಲ್ಲಿ ಹಾಕಿ ತರಬೇತಿ ಶಾಲೆ ಪ್ರಾರಂಭಿಸಿದರು. ನಂತರ ಪಾಟಿಯಾಲದಲ್ಲಿ ಭಾರತ ಹಾಕಿ ತಂಡದ ಕೋಚ್ ಆಗಿ ನೂರಾರು ಕ್ರೀಡಾಪಟುಗಳಿಗೆ ತರಬೇತಿ ನೀಡಿದರು.

ಇವರ ಕೊನೆಯ ದಿನಗಳು ಬಹಳ ಅಹಿತಕರವಾಗಿದ್ದವು. ಅರ್ಥಿಕ ಮುಗ್ಗಟ್ಟು ಹಾಗೂ ಲಿವರ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಇವರು “ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)”ಯಲ್ಲಿ ಜನರಲ್ ಪಾರ್ಟಿನಲ್ಲಿ ಸಾಮಾನ್ಯ ವ್ಯಕ್ತಿಯಂತೆ ದಾಖಲಾಗಿದ್ದರು ಎಂಬುದು ತಿಳಿಯುತ್ತದೆ. ಇದನ್ನು ಅವರು ಅತ್ಯಂತ ವಿಷಾದದಿಂದ ತಮ್ಮ ಆತ್ಮಚರಿತ್ರೆ “ಗೋಲ್”ನಲ್ಲಿ ಹಂಚಿಕೊಂಡಿದ್ದಾರೆ.

ಆದರೂ ಇವರ ಸಾಧನೆಯನ್ನು ಗಮನಿಸಿದ ಸರ್ಕಾರ 2002ರಿಂದ ಪ್ರತಿವರ್ಷ ಕ್ರೀಡೆಯಲ್ಲಿ ಅತ್ಯಂತ ಹೆಚ್ಚು ಸಾಧನೆ ಮಾಡಿದ ವ್ಯಕ್ತಿಗಳಿಗೆ ಜೀವಮಾನ ಸಾಧನೆಗಾಗಿ “ಧ್ಯಾನಚಂದ್ ಪ್ರಶಸ್ತಿ” ನೀಡಿ ಗೌರವಿಸುತ್ತದೆ. ಅದೇನೇ ಇರಲಿ ಆಗಸ್ಟ್ 29ರ ಇವರ ಹುಟ್ಟುಹಬ್ಬವೇ “ರಾಷ್ಟ್ರೀಯ ಕ್ರೀಡಾದಿನ” ವೆಂಬುದು ಮಾತ್ರ ಕ್ರೀಡಾಭಿಮಾನಿಗಳಿಗೆ ಸಂತಸ ತಂದಿದೆ.

‘ಶಿಕ್ಷಣ ವಾರ್ತೆ’  ಆಗಸ್ಟ್ 2011
- ಆರ್.ಬಿ.ಗುರುಬಸವರಾಜ

ಕಪ್ಪು ಹುಡುಗನ ಕಟ್ಟಿಗೆಯ ಗಡಿಯಾರ

ದಿನಾಂಕ 19-06-2014 ರ 'ವಿಜಯವಾಣಿ'ಯ ವಿದ್ಯಾರ್ಥಿ ಮಿತ್ರ ಪುರವಣಿಯಲ್ಲಿ ಪ್ರಕಟವಾದ ಲೇಖನ



ಕಪ್ಪು ಹುಡುಗನ ಕಟ್ಟಿಗೆಯ ಗಡಿಯಾರ

ಅವನೊಬ್ಬ ಬಡ ಗುಲಾಮಿ ಹುಡುಗ, ಆದರೆ ಅವನ ಕಂಗಳಲ್ಲಿ ನಕ್ಷತ್ರಗಳ ಹೊಳಪು ತುಂಬಿತ್ತು. ಮನದಲ್ಲಿ ತುಡಿತ, ಕೆಲಸದಲ್ಲಿ ಸೃಜನಶೀಲತೆ ಇತ್ತು. ಯಾವುದನ್ನಾದರೂ ವಿಶೇಷ ಆಸಕ್ತಿಯಿಂದ ಗಮನಿಸುವ ಅವನ ಗುಣ, ಅದರಿಂದ ಹೊಸ ಲೋಕವನ್ನು ಸೃಷ್ಟಿಸುವ ಬಯಕೆ ಅದಮ್ಯವಾಗಿತ್ತು. ತನ್ನ ಸಂಬಂದಿಯ ಕೈಯಲ್ಲಿದ್ದ ಕೈಗಡಿಯಾರಕ್ಕೆ ಮೋಹಿತನಾದ ಆ ಹುಡುಗ ಅದನ್ನು ಪಡೆದು ಕೈಗೆ ಕಟ್ಟಿಕೊಂಡು ಬೀಗಿದ್ದ. ಆದರೂ ಅದರರೊಳಗಿನ ಭಾಗಗಳ ಕಾರ್ಯ ರಚನೆಯನ್ನು ತಿಳಿಯುವಾಸೆ. ಗಡಿಯಾರವನ್ನು ಬಿಚ್ಚಿ ಅವುಗಳ ಭಾಗಗಳನ್ನು ಅಧ್ಯಯನ ಮಾಡಿ ಕಟ್ಟಿಗೆಯಿಂದ ವಾಚನ್ನು ತಯಾರಿಸಿದ ಆ ಹುಡುಗನಾರು ಗೊತ್ತೇ? ಅವನೇ ಬೆಂಜಮಿನ್ ಬೆನ್ಹಕರ್.


ಬೆನ್ಹಕರ್ ಅಮೇರಿಕಾದ ಮೇರಿಲ್ಯಾಂಡಿನಲ್ಲಿ ನವೆಂಬರ್ 9 ರ 1731ರಲ್ಲಿ ಜನಿಸಿದನು. ಬಾಲ್ಯ ಜೀವನದಲ್ಲಿ ತೋಟದ ಮನೆಯೇ ಅವನ ಪ್ರಯೋಗಶಾಲೆಯಾಗಿತ್ತು. ವ್ಯವಸಾಯವೇ ಅಧ್ಯಯನ ವಸ್ತುವಾಗಿತ್ತು. ಯಾವ ಮಾರ್ಗದರ್ಶನವೂ ಇಲ್ಲದೇ ತಾನೇ ತನ್ನ ಕೆಲಸದಲ್ಲಿ ಸೃಜನಶೀಲತೆ ಸೃಷ್ಠಿಸಿಕೊಂಡಿದ್ದ. ತೋಟದ ಪಕ್ಕದ ಕಾಲುವೆಗೆ ಚಿಕ್ಕ ಆಣೆಕಟ್ಟೆಯೊಂದನ್ನು ನಿರ್ಮಿಸಿ ಅದರಿಂದ ತನ್ನ ಜಮೀನಿಗೆ ನೀರಾವರಿ ವ್ಯವಸ್ಥೆಯನ್ನು ಮಾಡಿದ. ಈ ಕಾರ್ಯದಿಂದ ಬೆನ್ಹಕರ್ ಒಣಭೂಮಿಯಲ್ಲಿ ನಳನಳಿಸುವ ಬೆಳೆಗಳನ್ನು ಬೆಳೆಯಬಹುದೆಂದು ತೋರಿಸಿಕೊಟ್ಟಿದ್ದ.

ಹತ್ತಿರದಲ್ಲಿ ಶಾಲೆಯಿಲ್ಲದ ಕಾರಣ ಅಜ್ಜಿಯಿಂದ ಓದುವುದನ್ನು ಕಲಿತುಕೊಂಡಿದ್ದ. ನಂತರ ತನ್ನ ಮನೆಯ ಸಮೀಪದಲ್ಲೇ ಬಾಡಿಗೆಗೆ ಬಂದ ಶಿಕ್ಷಕರಿಂದ, ಅನೌಪಚಾರಿಕ ಶಿಕ್ಷಣ ಪಡೆದ ಬೆನ್ಹಕರ್ ಅವರಿಂದ ಬರೆಯುವುದನ್ನು ಹಾಗೂ ಸಲ್ಪ ಗಣಿತವನ್ನೂ ಸಹ ಕಲಿತುಕೊಂಡ.

ಇಪ್ಪತೋಂದನೇ ವಯಸ್ಸಿನಲ್ಲಿ ನಡೆದ ಘಟನೆಯೊಂದು ಅವನ ಜೀವನದ ದಿಕ್ಕನ್ನೇ ಬದಲಿಸಿತು. ಅದೆಂದರೆ ಅವನೇ ರಚಿಸಿದ ಕಟ್ಟಿಗೆಯ ಕೈಗಡಿಯಾರ. ತನ್ನ ಸಂಬಂಧಿಯ ಕೈಯಲ್ಲಿ ಕೈಗಡಿಯಾರ ನೊಡಿದ ಬೆನ್ಹಕರ್ ಅದರ ಭಾಗಗಳ ಕಾರ್ಯ ವಿಧಾನ ತಿಳಿಯುದಕ್ಕಾಗಿ ಅದನ್ನು ಸಂಪೂರ್ಣವಾಗಿ ಬಿಚ್ಚಿಟ್ಟ. ಅದರ ಒಂದೊಂದು ಭಾಗಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅವುಗಳ ಚಿತ್ರ ಬರೆದುಕೊಂಡ. ನಂತರ ವಾಚಿನ ಭಾಗಗಳನ್ನು ಯಥಾವತ್ತಾಗಿ ಜೋಡಿಸಿ ಅದನ್ನು ಮೊದಲಿನಂತೆಯೇ ಹಿಂತಿರುಗಿಸಿದ. ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಕಟ್ಟಿಗೆಯ ತುಂಡುಗಳಿಂದ ಭಾಗಗಳನ್ನು ಕೊರೆದುಕೊಂಡು ಗಡಿಯಾರವನ್ನು ತಯಾರಿಸಿದ. ಹೀಗೆ ತಯಾರಿಸಿದ ಕಟ್ಟಿಗೆ ಗಡಿಯಾರ ಜಗತ್ತಿನಾದ್ಯಂತ ಸುದ್ದಿಮಾಡಿತು. ಸುಮಾರು 50 ವರ್ಷಗಳ ಕಾಲ ಅದು ನಿಖರವಾಗಿ ಕಾರ್ಯ ನಿರ್ವಹಿಸಿತೆಂದರೆ ಎಲ್ಲರೂ ಆಶ್ಚರ್ಯ ಪಡಬೇಕಾದ ವಿಷಯ. ನಂತರ ಜೋಸೆಫ್ ಎಲಿಕಾಟ್ ಸಂಕೀರ್ಣ ಗಡಿಯಾರ ರಚಿಸಲು ಬೆನ್ಹಕರ್ ಸಹಾಯ ಮಾಡಿದ. ಇದರಿಂದ ಎಲಿಕಾಟ್ ಸಹೋದರರು ಒಳ್ಳೆಯ ಸ್ನೇಹಿತರಾದರು.

ಬೆನ್ಹಕರ್ ತನ್ನ 58ನೇ ವಯಸ್ಸಿನಲ್ಲಿ ಸ್ನೇಹಿತರಿಂದ ಹಾಗೂ ಶಿಕ್ಷಕರಿಂದ ಖಗೋಳಶಾಸ್ತ್ರ ಹಾಗೂ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನ ಪಡೆದು ಅಧ್ಯಯನ ಮಾಡಿದ. ಆಕಾಶಕಾಯಗಳ ಬಗ್ಗೆ ಅಧ್ಯಯನ ಮಾಡಿ ಅವುಗಳ ನಕಾಶೆ ರಚಿಸಿ. ಅದರಲ್ಲೂ ಮುಖ್ಯವಾಗಿ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಕುರಿತ ಅಧ್ಯಯನ ಮಾಡಿದ, ಖಗೋಳ ಅಧ್ಯಯನದ ಫಲವಾಗಿ ಖಗೋಳ ಪಂಚಾಂಗವನ್ನೇ ರಚಿಸಿದ. “ಬೆನ್ಹಕರ್ ಪಂಚಾಂಗ”ವೆಂದೇ ಪ್ರಸಿದ್ಧಿಯಾಗಿದ್ದ ಇದು 1792 ರಿಂದ 1797 ಅವಧಿಯಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಯುಳ್ಳ ಪಂಚಾಂಗವಾಗಿತ್ತು. ತನ್ನ ಗುಡಿಸಲನ್ನೇ ಖಗೋಳ ವೀಕ್ಷಣಾಲವನ್ನಾಗಿಸಿಕೊಂಡಿದ್ದ ಬೆನ್ಹಕರ್ ದೀರ್ಘಕಾಲದ ವೀಕ್ಷಣೆಯಿಂದ ಮಾಹಿತಿಗಳ ಲೆಕ್ಕಾಚಾರ ಹಾಕುತ್ತಿದ್ದ. ಅದನ್ನು ತನ್ನ ಆಪ್ತರಿಗೆ ತೋರಿಸಿ ಅದರ ಫಲಿತಾಂಶಗಳನ್ನು ಪಂಚಾಂಗದಲ್ಲಿ ನಮೂದಿಸುತ್ತಿದ್ದ.

ಇವರ ವೀಕ್ಷಣಾ ಹಾಗೂ ನಕ್ಷೆ ರಚನಾ ಕೌಶಲ್ಯವನ್ನು ಗಮನಿಸಿದ ಜಾರ್ಜ್ ವಾಶಿಂಗ್ಟನ್‍ರವರು 1791ರಲ್ಲಿ ಇವರನ್ನು ಅಮೇರಿಕಾ ಸಂಯುಕ್ತ ರಾಜ್ಯಗಳ ಸರ್ವೇಕ್ಷಣಾ ಕಾರ್ಯಕ್ಕೆ ನೇಮಿಸಿಕೊಂಡರು. ಅಮೇರಿಕಾ ಸಂಯುಕ್ತ ರಾಜ್ಯಗಳಲ್ಲಿ ಇದೊಂದು ಗೌರವಾನ್ವಿತ ಸೇವೆಯಾಗಿತ್ತು. ಆ ಕಾರ್ಯವನ್ನು ಅತ್ಯಂತ ನಿಖರವಾಗಿ, ಪ್ರಾಮಾಣಿಕವಾಗಿ ನೆರವೇರಿಸಿದರು.

ಸಮಯ ದೊರೆತಾಗಲೆಲ್ಲಾ ಪ್ರತಿಯೊಬ್ಬರೂ ತಮ್ಮ ಜೀವನದ ಅಚಿತಿಮ ಗುರಿಯನ್ನು ತಲುಪುವಂತೆ ಜನರಿಗೆ ಕರೆ ನೀಡುತ್ತಿದ್ದರು. ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ಅನೇಕ ಮಹತ್ತರ ಸಂಶೋಧನೆಗಳಿಂದ ಹೆಸರು, ಕೀರ್ತಿಗಳಿಸಿದ ಬೆನ್ಹಕರ್ “ಪ್ರಥಮ ನಿಗ್ರೋ ವಿಜ್ಞಾನಿ” ಎನಿಸಿಕೊಂಡಿದ್ದ. ಹೀಗೆ ಅಮೇರಿಕಾದ ಜನಮನದಲ್ಲಿ ನೆಲೆನಿಂತ ಬೆನ್ಹಕರ್ ಪ್ರಾಣ 1806ರ ಅಕ್ಟೋಬರ್ 9 ರಂದು ಅಂತರಿಕ್ಷದಲ್ಲಿ ಲೀನವಾಯಿತು. ಇಂತಹ ವ್ಯಕ್ತಿಗೆ 1980ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಅವರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿ ಅವರ ಹೆಸರನ್ನು ಚಿರಾಯುವನ್ನಾಗಿಸಿತು.

‘ಭಾಸ್ಕರಪ್ರಭೆ’ ಬಳ್ಳಾರಿ ಜಿಲ್ಲಾ ವಿಜ್ಞಾನ ಪ್ರದರ್ಶನ ಸಂಚಿಕೆ 
- ಆರ್.ಬಿ.ಗುರುಬಸವರಾಜ

ಶಿಕ್ಷಕರ ಶಿಕ್ಷಕನಿಗೊಲಿದ ‘ಬಸವಶ್ರೀ’

ಶಿಕ್ಷಕರ ಶಿಕ್ಷಕನಿಗೊಲಿದ ‘ಬಸವಶ್ರೀ’

 ‘ಹರಮುನಿದರೂ ಗುರು ಕಾಯುವನು’ ಎಂಬ ಮಾತು ಜಗಜ್ಜನಿತವಾದದು. ನಾಡು ಮತ್ತು ನಾಡಿನ ಜನತೆ ಸಂಕಷ್ಟದಲ್ಲಿರುವಾಗ ಅಭಯ ಹಸ್ತ ಚಾಚಿದವರೆಂದರೆ ಗುರುಗಳು. ಸೆಪ್ಟಂಬರ್ ಬಂತಂದರೆ ಸಾಕು ಶಿಕ್ಷಕರ ಮೇಲಿನ ಅಭಿಮಾನ ಉಕ್ಕಿ ಹರಿಯುತ್ತದೆ. ಅಂತೆಯೇ ವಿಶಿಷ್ಟ ಸೇವೆ ಸಲ್ಲಿಸಿದ ಗುರುಗಳನ್ನು ಸನ್ಮಾನಿಸುವುದು ನಮ್ಮ ನಾಡಿನ ಪರಂಪರೆ ಮತ್ತು ಗುರುಭಕ್ತಿಯ ಪ್ರತೀಕ. ನಮ್ಮಲ್ಲಿ ಗುರುಗಳಿಗೆ ಅವರ ಸೇವೆಗನುಗುಣವಾಗಿ ತಾಲ್ಲೂಕು ಹಂತದಿಂದ ರಾಷ್ಟ್ರಮಟ್ಟದವರೆಗೆ ವಿವಿಧ ಪ್ರಶಸ್ತಿಗಳಿವೆ. ಇವೆಲ್ಲವುಗಳಿಗಿಂತ ವಿಶಿಷ್ಟವಾದ 2010ನೇ ಸಾಲಿನ ‘ಬಸವಶ್ರೀ’ ಪ್ರಶಸ್ತಿಗೆ ಭಾಜನರಾದ ಶಿಕ್ಷಕರೆಂದರೆ ನೆರೆಯ ಶ್ರೀಲಂಕಾದ ಸರಳ, ಸಜ್ಜನ, ದೀನಬಂಧು, ದಲಿತೋದ್ದಾರ, ಶ್ರೀಲಂಕಾಭಿಮಾನ್ಯ ಲಂಕಾದಗಾಂಧಿ ಎಂದೆಲ್ಲ ಬಿರುದುಗಳಿಸಿದ ಅಪ್ಪಟ ಗಾಂಧಿವಾದಿ 80ರ ಹರೆಯದ ‘ಅಹಂಗಮೆ ತೋಡರ ಆರ್ಯರತ್ನೆ’. ಅವರು ಶ್ರೀಲಂಕಾದಲ್ಲಿ ‘ಸರ್ವೋದಯ ಶ್ರಮದಾನ ಚಳುವಳಿ’ ಸ್ಥಾಪಿಸಿ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ನಾಡಿನಾದ್ಯಂತ ಮನೆಮಾತಾಗಿದ್ದಾರೆ. ಶಿಕ್ಷಕ ಕೇವಲ ಶಾಲಾ ಶಿಕ್ಷಣಕ್ಕೆ ಅಡಿಗಲ್ಲಾದರೆ ಸಾಲದು ಅಲ್ಲಿನ ಸಮುದಾಯಕ್ಕೆ ಮತ್ತು ರಾಷ್ಟ್ರ ನಿರ್ಮಾಣಕ್ಕೂ ಅಡಿಗಲ್ಲಾಗಬೇಕೆಂಬುದನ್ನು ಆರ್ಯರತ್ನೆ ತೋರಿಸಿಕೊಟ್ಟಿದ್ದಾರೆ.

ಬಾಲ್ಯ ಮತ್ತು ಶಿಕ್ಷಣ : 1931ರ ನವೆಂಬರ್ 5ರಂದು ಶ್ರೀಲಂಕಾದ ಗಾಲೆ ಜಿಲ್ಲೆಯ ಉನುವಂತುನ ಎಂಬಲ್ಲಿ ಜನಿಸಿದ ಆರ್ಯರತ್ನೆ ಗಾಲೆಯ ಮಹಿಂದಾ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಪಡೆದರು. ನಂತರ ವಿದ್ಯೋದಯ ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಪದವಿ ಪಡೆದು ಮುಂದೆ ಅದೇ ವಿ.ವಿ.ಯ ಗೌರವ ಡಿ.ಲಿಟ್ ಪದವಿ ಭಾಜನರಾದರು.

ಸಮಾಜೋದ್ದಾರ : ಬೌದ್ಧ ಧರ್ಮ ಹೆಚ್ಚು ಪ್ರಚಲಿತದಲ್ಲಿರುವ ಶ್ರೀಲಂಕಾದಲ್ಲಿ ಆ ಧರ್ಮದ ತತ್ವಗಳನ್ನು ದೇಶದ ಪ್ರಗತಿಗೆ ಹೇಗೆ ಬಳಸಿಕೊಳ್ಳಬಹುದೆಂದು ತೋರಿಸಿಕೊಟ್ಟರು. ಗಾಂಧೀಜಿಯವರ ಅಹಿಂಸೆ, ಗ್ರಾಮೀಣ ಅಭಿವೃದ್ಧಿ ಮತ್ತು ಸ್ವತ್ಯಾಗ ತತ್ವಗಳಿಂದ ಸ್ಫೂರ್ತಿಗೊಂಡು ಅವುಗಳನ್ನೇ ಜೀವನುದುದ್ದಕ್ಕೂ ಪಾಲಿಸುತ್ತಾ ಬಂದ ಆರ್ಯರತ್ನೆ 1958ರಲ್ಲಿ ‘ಸರ್ವೋದಯ  ಶ್ರಮದಾನ ಚಳುವಳಿ’ಯನ್ನು ಸ್ಥಾಪಿಸುವ ಮೂಲಕ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡರು.

ಕೊಲಂಬೋದ ನಲಂದಾ ಕಾಲೇಜಿನಲ್ಲಿ ಶಿಕ್ಷಕರ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರ್ಯರತ್ನೆ ಅಲ್ಲಿನ 40 ವಿದ್ಯಾರ್ಥಿಗಳು ಹಾಗೂ 12 ಜನ ಶಿಕ್ಷಕರ ಒಂದು ತಂಡ ರಚಿಸಿಕೊಂಡು ‘ಶೈಕ್ಷಣಿಕ ಪ್ರಯೋಗಗಳು’ ಎಂಬ ಹೊಸ ರೀತಿಯ ಪ್ರಯೋಗಗಳನ್ನು ಪ್ರಾರಂಭಿಸಿದರು. ಎಲ್.ಟಿ.ಟಿ.ಇ ಉಗ್ರರಿಂದ ತತ್ತರಿಸಿದ್ದ ಶ್ರೀಲಂಕಾದ ಜನತೆ ಅಶಾಂತಿಯ ಮಡುವಿನಲ್ಲಿ ನಲುಗಿ ಹೋಗಿದ್ದರು. ಹಳ್ಳಿಗಳ ಸೇವೆಗೆ ಪಣತೊಟ್ಟ ಆರ್ಯರತ್ನೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದರು. ಹಲವು ದಶಕಗಳವರೆಗೆ ಶಾಂತಿ ಮೂಡಿಸಲು ಪ್ರಯತ್ನಿಸಿದರು. ಹೀಗೆ ಪ್ರಾರಂಭವಾದ ಸರ್ವೋದಯ ಶ್ರಮದಾನ ಚಳುವಳಿ ಉತ್ತಮ ಯಶಸ್ಸು ಕಂಡಿತು. ಗಾಂಧೀಜಿಯವರ ಆದರ್ಶಗಳು, ಬೌದ್ಧಧರ್ಮದ ತತ್ವಗಳು, ಅರ್ಥಶಾಸ್ತ್ರೀಯ ಆಧ್ಯಾತ್ಮವಾದ ಇವು ಸವೋದಯ ಶ್ರಮದಾನ ಚಳುವಳಿ ಮಂತ್ರಗಳಾದವು.

ಸರ್ವೋದಯ ಅಂದರೆ ಸ್ವರಾಜ್ಯ (ಸ್ವ ಸರಕಾರ) ಶ್ರಮದಾನವೆಂದರೆ ಕಾರ್ಮಿಕರ ಕೊಡುಗೆ, ಆರ್ಯರತ್ನೆ ಪ್ರಕಾರ ಸರ್ವೋದಯವೆಂದರೆ ‘ಸಕಲ ಬೆಳವಣಿಗೆ’ ಅಂದರೆ ಮಾನವನ ವೈಯಕ್ತಿಕ ವ್ಯಕ್ತಿತ್ವದಿಂದ ಮಾನವೀಯತೆವರೆಗಿನ ಎಲ್ಲ ಬೆಳವಣಿಗೆಯಾಗಿದೆ. ಈ ಬೆಳವಣಿಗೆ ನೈತಿಕ, ಸಾಂಸ್ಕøತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಳತೆಗಳನ್ನೊಳಗೊಂಡಿದೆ. ಇವುಗಳಲ್ಲಿ ಯಾವುದಾದರೊಂದು ಅಭಿವೃದ್ಧಿ ಹೊಂದಲು ಉಳಿದವು ಸಹಕರಿಸುವಂತಾಗಬೇಕು ಎಂಬುದೇ ಅವರ ಆಶಯ.

ಹಳ್ಳಿಗಳಲ್ಲಿನ ಜನತೆ ಅವರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಇರುವ ತೊಡಕುಗಳನ್ನು ತಾವೇ ನಿವಾರಿಸಿಕೊಳ್ಳುವಂತಹ ಕೌಶಲಗಳನ್ನು ಬೆಳೆಸುವುದೇ ಸರ್ವೋದಯದ ಮುಖ್ಯ ಗುರಿ. ವಿವಿಧ ಪ್ರಗತಿ ಪೂರಕ ಕಾರ್ಯಕ್ರಮಗಳ ಮೂಲಕ ಹಳ್ಳಿಗಳ ಜನತೆ ಅಲ್ಲಿನ ಆಡಳಿತ, ಶೈಕ್ಷಣಿಕ, ಆರೋಗ್ಯ ಹಾಗೂ ಇನ್ನೀತರೇ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಂತೆ ಹೆಚ್ಚು ಶ್ರಮಿಸಿದರು ಆರ್ಯರತ್ನೆ. ಇಂದು ಶ್ರೀಲಂಕಾದಲ್ಲಿ 38 ಸಾವಿರ ಹಳ್ಳಿಗಳಿದ್ದು ಅದರಲ್ಲಿ 15 ಸಾವಿರ ಹಳ್ಳಿಗಳಲ್ಲಿ ಸರ್ವೋದಯ ಶ್ರಮದಾನ ಚಳುವಳಿ ಕಾರ್ಯ ನಿರ್ವಹಿಸುತ್ತದೆ. 11 ಮಿಲಿಯನ್ ಜನರು ಇದರ ಲಾಭ ಪಡೆದುಕೊಂಡಿದ್ದಾರೆ. ಇಂದು ಅಲ್ಲಿನ ಜನರು ‘ಸಂಪತ್ ಬ್ಯಾಂಕ್’ಗಳೆಂಬ ಗ್ರಾಮೀಣ ಬ್ಯಾಂಕ್‍ಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ದಿಟ್ಟ ಹೆಜ್ಜೆಯನ್ನಿಡಲು ಆರ್ಯರತ್ನೆ ಕಾರಣಿಭೂತರಾಗಿದ್ದಾರೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಲ್ಲಿನ ನಾಗರಿಕರಲ್ಲಿ ಶಾಂತಿ, ಸಹಬಾಳ್ವೆ ಮೂಡಿಸಲು ಪ್ರಯತ್ನಿಸಿದ ಹರಿಕಾರನಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಒಲಿದಿವೆ.

ಹೀಗೆ ಹತ್ತಾರು ಪ್ರಶಸ್ತಿಗೆ ಭಾಜನರಾಗಿ ವಿಶ್ವದಾದ್ಯಂತ ಹೆಸರು ಪಡೆದ ಆರ್ಯರತ್ನೆ ಎಲ್ಲ ಶಿಕ್ಷಕರಿಗೆ ಸ್ಫೂರ್ತಿಯ ಸೆಲೆಯಾಗಲಿ ಎಂಬುದೇ ಎಲ್ಲರ ಆಶಯ.

ಬಸವಶ್ರೀ ಪ್ರಶಸ್ತಿ ಬಗ್ಗೆ : 
ಬಸವಾದಿ ಶರಣರ ತತ್ವ ಚಿಂತನೆ, ಸಾಮಾಜಿಕ ಆಂದೋಲನ ಮತ್ತು ವಚನ ಸಾಹಿತ್ಯ ಕುರಿತು ವಿಶೇಷ ಅಧ್ಯಯನದಲ್ಲಿ ತೊಡಗಿ ಗ್ರಂಥ ರಚಿಸುವ ವಿದ್ವಾಂಸರು ಮತ್ತು ಶರಣರ ಆದರ್ಶಗಳನ್ನಾಧರಿಸಿ ನಡೆಯುವವರಿಗೆ ಪ್ರಶಸ್ತಿ ಮೀಸಲು. ಇದು ಮೂರು ಲಕ್ಷ ರೂಪಾಯಿ ನಗದು ಹಾಗೂ ಸ್ಮರಣ ಫಲಕಗಳನ್ನೊಳಗೊಂಡಿರುತ್ತದೆ.

‘ಟೀಚರ್’    ಅಕ್ಟೋಬರ್ 2011
-ಆರ್.ಬಿ.ಗುರುಬಸವರಾಜ

ಆಲೂರರ ಕನ್ನಡತ್ವದ ವಿಚಾರಗಳು

ಆಲೂರರ ಕನ್ನಡತ್ವದ ವಿಚಾರಗಳು

ಇಡೀ ವಿಶ್ವಕ್ಕೆ ಏಳು ಜಗತ್ಪ್ರಸಿದ್ಧ ಸ್ಥಳಗಳಿರುವಂತೆ ಕನ್ನಡ ಸಾಹಿತ್ಯಕ್ಕೆ ಏಳು ಜ್ಞಾನಪೀಠಗಳು ರಾರಾಜಿಸುತ್ತಿದ್ದವು. ಈಗ ಅದಕ್ಕೆ ಇನ್ನೊಂದು ಗರಿ ಸೇರಿಕೊಂಡು ಅಷ್ಟಮಣಿ ಮುಕುಟದಂತೆ ಕನ್ನಡ ಸಾಹಿತ್ಯವನ್ನು ಪ್ರಜ್ವಲಗೊಳಿಸಿವೆ. ಡಾ.ಚಂದ್ರಶೇಖರ ಕಂಬಾರರಿಗೆ ದೊರೆಕಿದ ಜ್ಞಾನಪೀಠ ಪ್ರಶಸ್ತಿ ಕನ್ನಡ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದೆ. ಉತ್ತರ ಕರ್ನಾಟಕ ನೆಲದ ಸೊಗಡನ್ನು ಎಲ್ಲೆಡೆ ಹರಡಲು ಪ್ರಯತ್ನಿಸಿದವರಲ್ಲಿ ಕಂಬಾರರೂ ಒಬ್ಬರು. ಒಂದು ಕಾಲದಲ್ಲಿ ಇದೇ ಪ್ರದೇಶಿಕ ನೆಲೆಯಲ್ಲಿ ಕನ್ನಡ ಹಾಗೂ ಕರ್ನಾಟಕತ್ವದ ಕಲ್ಪನೆ ಇಲ್ಲದಿದ್ದ ಸಮಯದಲ್ಲಿ ಕನ್ನಡ ನಾಡಿನ ಕಂಪನು, ಕರ್ನಾಟಕದ ಅಸ್ತಿತ್ವವನ್ನು ಜಗಕೆ ಸಾರಲು ಹರಸಾಹಸ ಮಾಡಿದವರೆಂದರೆ ‘ಕನ್ನಡ ಕುಲಪುರೋಹಿತ’ ಎಂದು ಖ್ಯಾತರಾಗಿದ್ದ ಆಲೂರು ವೆಂಕಟರಾಯರು.


ಕನ್ನಡತ್ವದ ಕಿಚ್ಚು ಹತ್ತುವ ಮುನ್ನ : ಆಲೂರರ ಕನ್ನಡತ್ವ ಕೇವಲ ಉತ್ತರ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅಖಂಡ ಕರ್ನಾಟಕದೆಲ್ಲೆಡೆ ಕನ್ನಡತ್ವ, ಕರ್ನಾಟಕತ್ವದ ಪರಿಕಲ್ಪನೆಯನ್ನು ಬಿತ್ತಿ ಉತ್ತಮ ಬೆಳೆ ಬೆಳೆಯಲು ಸಕಲ ವಾತಾವರಣ ನಿರ್ಮಿಸಿದರು. ಕರ್ನಾಟಕದಲ್ಲಿ ಕನ್ನಡವೆಂದರೆ ಕೇವಲ ಮೈಸೂರು ಪ್ರಾಂತಕ್ಕೆ ಮಾತ್ರ ಸೀಮಿತವಾಗಿದ್ದ ಕಾಲದಲ್ಲಿ ಕನ್ನಡತ್ವ ಹಾಗೂ ಕರ್ನಾಟಕತ್ವ ವಿಚಾರಗಳನ್ನು ಹೈದ್ರಾಬಾದ್, ಕೊಡಗು, ಮದ್ರಾಸ್ ಮತ್ತು ಬೆಳಗಾವಿ ಪ್ರಾಂತಗಳಲ್ಲಿನ ಜನರಿಗೆ ತುಂಬಿ ಅವರೂ ಸಹ ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

ಒಂದು ಕಾಲದಲ್ಲಿ ಧಾರವಾಡ ಮರಾಠಿಗಳ ತವರಿನಂತೆಯೇ ಆಗಿತ್ತು. ಇದನ್ನು ಗಮನಿಸಿದ ಆಲೂರರ ಕೆಚ್ಚದೆಯ ಕಿಚ್ಚು ಹೊತ್ತಿ ಉರಿಯತೊಡಗಿತ್ತು. ಕಳೆದ ಶತಮಾನದ ಕೊನೆಗೆ ಧಾರವಾಡದಲ್ಲಿ 29 ಮರಾಠಿ ಶಾಲೆಗಳಿದ್ದರೆ ಕೇವಲ ಎರಡೇ ಎರಡು ಕನ್ನಡ ಶಾಲೆಗಳಿದ್ದವು. ಮರಾಠಿಗಳು ಧಾರವಾಡದಲ್ಲಿ ತಮ್ಮ ಸ್ವಂತ ತವರಿನಲ್ಲಿ ನೆಲೆಸುವಂತೆ ಗಟ್ಟಿಯಾಗಿ ನೆಲೆಗೊಂಡಿದ್ದರು. ಹಾಡಲು ಕನ್ನಡದಲ್ಲಿ ಒಂದು ಪದ್ಯವಿಲ್ಲ, ಆಡಲು ಒಂದು ನಾಟಕವಿಲ್ಲ. ಇಂತಹ ಸಂಧರ್ಭದಲ್ಲಿ ಜಾಗೃತಗೊಂಡ ಆಲೂರರು ಕನ್ನಡಿಗರಿಗೆ ತಮ್ಮ ಪರಿಸ್ಥಿತಿ ಅರಿವನ್ನು, ಕನ್ನಡ ನಾಡಿನ ಇತಿಹಾಸವನ್ನು ನೆನಪಿಸಿಕೊಟ್ಟರು.

ಮೂಲತಃ ಬಳ್ಳಾರಿಯವರಾದ ಆಲೂರರು ತಮ್ಮ ತಂದೆಯವರ ಸರಕಾರಿ ಕೆಲಸದಿಂದಾಗಿ ರಾಜ್ಯದ ವಿವಿದೆಡೆ ಸಂಚರಿಸಿ ಈ ನೆಲದ ಮಣ್ಣಿನ ಸೊಗಡನ್ನು, ಪ್ರೀತಿಯನ್ನು ಮೈಗೂಡಿಸಿಕೊಂಡಿದ್ದರು. ಇದೇ ಮುಂದೆ ಅವರಲ್ಲಿ ಕರ್ನಾಟಕತ್ವದ ಮೊಳಕೆ ಜಾಗೃತಗೊಳ್ಳಲು ಅನುವುಮಾಡಿಕೊಟ್ಟಿತ್ತು.

ತತ್ವಗಳ ಹಿಂದಿನ ಜೀವನಾದರ್ಶ : ಮಧ್ವಾಚಾರ್ಯರು, ವಿದ್ಯಾರಣ್ಯರು, ಅರವಿಂದಘೋಷರು ಹಾಗೂ ತಿಲಖರ ಸಿದ್ದಾಂತಗಳು ಮತ್ತು ವಿಚಾರಗಳಿಂದ ಪ್ರಭಾವಿತರಾದ ಆಲೂರರು ಭಗವದ್ಗೀತೆ ಹಾಗೂ ಮಹಾಭಾರತಗಳ ತತ್ವಾದರ್ಶಗಳನ್ನು ಬಲವಾಗಿ ಅಪ್ಪಿಕೊಂಡಿದ್ದರು. ಯಾವುದೋ ಒಂದು ತತ್ವ ಸಿದ್ದಾಂತಕ್ಕೆ ಒಗ್ಗಿಕೊಳ್ಳಲಿಲ್ಲ. ಅಲ್ಲದೇ ಅವರೆಂದೂ ‘ಕಿಂಗ್’ ಆಗಲಿಲ್ಲ, ಕಿಂಗ್ ಮೇಕರ್ ಆಗಿಯೇ ಉಳಿದರು. ಪ್ರೇರಕ ಶಕ್ತಿಯನ್ನು ಕೊಟ್ಟು ತೆರೆಯ ಒಂದೇ ನಾಣ್ಯದ ಎರಡು ಮುಖಗಳೆನ್ನುವುದನ್ನು ಬಲವಾಗಿ ನಂಬಿದ್ದರು. “ಜೀವನದಿಂದ ಬೇರ್ಪಟ್ಟ ತತ್ವಗಳು ತತ್ವಗಳಲ್ಲ, ತತ್ವಗಳಿಂದ ಬೇರ್ಪಟ್ಟ ಜೀವನ ಜೀವನವಲ್ಲ” ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದರು.

ಮಗ ವಕೀಲನಾಗಬೇಕೆಂಬ ಆಸೆಯಿಂದ ತಂದೆ ಭೀಮರಾಯರು ವೆಂಟರಾಯರನ್ನು ಪುಣೆಗೆ ಓದಲು ಕಳಿಸಿದರು. ಅಲ್ಲಿ ಮಹಾರಾಷ್ಟ್ರ ಜನರ ಮರಾಠೀ ಅಭಿಮಾನ ಹಾಗೂ ಅವರಿಂದ ಕನ್ನಡಿಗರ ಮೇಲೆ ನೆಡೆಯುತ್ತಿದ್ದ ಭೀಭತ್ಸ ಕೃತ್ಯಗಳು ವೆಂಕಟರಾಯರ ಕನ್ನಡಾಭಿಮಾನವನ್ನು ಹಾಗೂ ಕರ್ನಾಟಕದ ಮೇಲಿನ ಮೋಹವನ್ನು ಮತ್ತಷ್ಟು ಇಮ್ಮಡಿಗೊಳಿಸಿದವು. ಗ್ರಂಥಾಲಯಗಳಿಗೆ ಹೋದರೆ ಕೇವಲ ಕರ್ನಾಟಕದ ಮೂಲ ಇತಿಹಾಸ ಇತಿಹಾಸ ಸಾರುವ ಗ್ರಂಥಗಳನ್ನೆ ಓದುತ್ತಿದ್ದರು.

ಧಾರವಾಡಕ್ಕೆ ಬಂದಾಗಲೆಲ್ಲಾ ಕರ್ನಾಟಕ ಇತಿಹಾಸ ಮತ್ತು ಸಂಸ್ಕøತಿಯ ಕುರುಹುಗಳಾಗಿದ್ದ ಪ್ರಾಚೀನ ಕನ್ನಡ ನೆಲೆಗಳನ್ನು ಸುತ್ತಡುವುದು, ಅವುಗಳ ಬಗ್ಗೆ ಅಧ್ಯಯನ ಮಾಡುವುದು ಅವರ ಹವ್ಯಾಸವಾಗಿತ್ತು. ಕಾನೂನು ಪದವಿ ಪಡೆದ ನಂತರ ಧಾರವಾಡದಲ್ಲೇ ವಕೀಲಿ ವೃತ್ತಿ ಪ್ರಾರಂಭಿಸಿದ ಆಲೂರರಿಗೆ ಅಲ್ಲಿ ವಿರಾಮ ವೇಳೆಯಲ್ಲಿ ಕನ್ನಡ ನಾಡಿನ ಬಗ್ಗೆ ಚರ್ಚೆ ವಿಚಾರ ಮಂಥನ ಮಾಡಲು ಹೆಚ್ಚು ಹೆಚ್ಚು ಅವಕಾಶಗಳು ದೊರೆತವು. ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ನವಚೈತನ್ಯ ನೀಡಲು ಶ್ರಮಿಸಿದರು. ಅನೇಕ ಕಡೆಗಳಲ್ಲಿ ಉಪಾಧ್ಯಾಯರುಗಳ ಸ್ನೇಹ ಸಂಪರ್ಕ ಬೆಳೆಸಿಕೊಂಡು ಕನ್ನಡ ಕಾವ್ಯ, ವ್ಯಾಕರಣ, ಛಂದಸ್ಸುಗಳ ಬಗ್ಗೆ ವಿಚಾರ ಸಂಕಿರಣ ಮತ್ತು ಗೋಷ್ಠಿಗಳನ್ನು ನೆಡೆಸಿ ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು.

ಕರ್ನಾಟಕ ಗತವೈಭವಕ್ಕೆ ನಾಂದಿ : 1905 ರಲ್ಲಿ ಆದ ಆನೆಗೊಂದಿ ದರ್ಶನ ಅವರ ಮನದಲ್ಲಿ ಅನೇಕ ವಿಚಾರ ತರಂಗಗಳನ್ನು ಎಬ್ಬಿಸಿತ್ತು. ಜಿಜ್ಞಾಸೆಯ ಕಿರಣಗಳನ್ನು ಬೀರುತ್ತಿತ್ತು. ವಿಚಾರಗಳು ಜಲಪಾತಗಳಂತೆ ಭೋರ್ಗರೆದವು. ಇದೇ ಸಮಯದಲ್ಲಿ ಭಾರತದಾದ್ಯಂತ ಪ್ರಾಂರಭವಾಗಿದ್ದ ‘ವಂಗಭಂಗ’ ಚಳುವಳಿ ಆಲೂರರಲ್ಲಿ ಕರ್ನಾಟಕಭಂಗ ಚಳುವಳಿ ವಿಚಾರಗಳು ನಿಶ್ಚಲವಾಗಲು ಪ್ರೇರೇಪಿಸಿತು. ಆ ಸಂಧರ್ಭದಲ್ಲಿಯೇ ಕರ್ನಾಟಕತ್ವದ ಕಲ್ಪನೆ ಒಡಮೂಡಿತ್ತು. ಹೃದಯದಲ್ಲಿ ಒಡಮೂಡಿದ್ದ ಕರ್ನಾಟಕತ್ವದ ಕಲ್ಪನೆಯನ್ನು ಸಾಕಾರಗೊಳಿಸಲು ತಮ್ಮನ್ನು ತಾವು ಮಾನಸಿಕವಾಗಿ, ದೈಹಿಕವಾಗಿ ಅಣಿಗೊಳಿಸಿಕೊಂಡರು. ಕರ್ನಾಟಕದ ಬಗ್ಗೆ ಕನ್ನಡಿಗರಲ್ಲಿ ಆಳವಾದ ಅಭಿಮಾನದ ಅಭಾವವನ್ನು ಹೋಗಲಾಡಿಸಲು ಕರ್ನಾಟಕದ ನಿಜವೈಭವವÀÀನ್ನು ಕನ್ನಡಿಗರ ಮುಂದಿಡುವುದೇ ಮದ್ದು ಎಂಬ ಸಿದ್ದಾಂತಕ್ಕೆ ಬದ್ದರಾದರು.

ಅದಕ್ಕಾಗಿ ಸು 12 ವರ್ಷಗಳ ಕಾಲ ಕರ್ನಾಟಕದ ಐತಿಹಾಸ ಸ್ಥಳಗಳಾದ ಅಣ್ಣಿಗೇರಿ, ಲಕ್ಕುಂಡಿ, ಲಷ್ಕ್ಮೇಶ್ವರ, ಹಳೇಬೀಡು, ಬೇಲೂರು, ಕಾರ್ಲೆ, ಕಾನ್ಹೇರಿ, ಬಂಕಾಪುರ, ಬದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದವುಗಳನ್ನು ಎತ್ತಿನ ಬಂಡಿಯಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ, ಅಧ್ಯಯನ ನಡೆಸಿದುದರ ಫಲವಾಗಿ 1917 ರಲ್ಲಿ “ಕರ್ನಾಟಕ ಗತವೈಭವ” ಎಂಬ ಉದ್ಗ್ರಂಥ ರೂಪುಗೊಂಡಿತು. ಇದು ಕನ್ನಡಿಗರಲ್ಲಿ ಕನ್ನಡಾಭಿಮಾನವನ್ನು ಮೂಡಿಸಿತಲ್ಲದೇ ಕರ್ನಾಟಕತ್ವದ ಕಿಚ್ಚನ್ನು ಹೊತ್ತಿಸಿ ತಾಯ್ನೆಲ ಮತ್ತು ತಾಯ್ನಾಡಿನ ರಕ್ಷಣೆಗಾಗಿ ಕನ್ನಡಿಗರನ್ನು ಬಡಿದೆಬ್ಬಿಸಿತು 

ಕನಸಿನ ರಾಷ್ಟ್ರೀಯ ಶಾಲೆ : ಸ್ವಧರ್ಮ, ಸ್ವದೇಶಿ, ಸ್ವಭಾಷೆ ಹಾಗೂ ಸ್ವರಾಜ್ಯ ಇವುಗಳ ಹುಚ್ಚು ಹಿಡಿಸಿಕೊಂಡ ಆಲೂರರು ವಕೀಲಿ ವೃತ್ತಿಯನ್ನು ಬಿಟ್ಟು ಅವರ ಕನಸಿನ ಕೂಸಾದ ಕರ್ನಾಟಕ ನೂತನ ವಿದ್ಯಾಲಯವೆಂಬ ರಾಷ್ಟ್ರೀಯ ಶಾಲೆಯನ್ನು ಪ್ರಾರಂಬಿಸಿದರು. ಹುಬ್ಬಳ್ಳಿ, ನರಗುಂದ, ನವಲಗುಂದ, ಹಾನಗಲ್ಲು, ಅಗಡಿ, ಬಾಗಲಕೋಟೆ, ಬದಾಮಿ, ಮುಂತಾದ ಕಡೆಗಳಲ್ಲಿ ರಾಷ್ಟ್ರೀಯ ಶಾಲೆಗಳನ್ನು ತೆರೆದರು. ಅಲ್ಲಿ ಕಲಿಯುವವರು ಸ್ವಾವಲಂಬಿಗಳಾಗಬೇಕೆಂದು ಬೆಂಕಿಕಡ್ಡಿ, ಸೀಸದಕಡ್ಡಿ, ಮಂಗಳೂರುಹೆಂಚು, ಸಕ್ಕರೆ ತಯಾರಿಕೆ, ಬಡಿಗತನ, ಮುದ್ರಣ ಮುಂತಾದ ಗುಡಿಕೈಗಾರಿಕೆಗಳನ್ನು ಕಲಿಸುತ್ತಿದ್ದರು. ನಂತರದ ದಿನಗಳಲ್ಲಿ ಕೈಗಾರಿಕೀಕರಣದ ಪೈಪೋಟಿ ಎದುರಿಸಲಾರದೇ ರಾಷ್ಟ್ರೀಯ ಶಾಲೆಗಳನ್ನು ಮುಚ್ಚುವ ಸ್ಥಿತಿ ತಲುಪಿತು. ಆದರೂ ಎದೆಗುಂದದೇ ಪುನಃ ವಕೀಲಿ ವೃತ್ತಿಗೆ ಇಳಿಯಬೇಕಾಯಿತು.

ಸಂಶೋಧನೆಗಳ ರೂವಾರಿ : ಇತಿಹಾಸದಲ್ಲಿ ಆಸಕ್ತಿಯಿದ್ದ ಆಲೂರರು ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿಯನ್ನು ಸ್ಥಾಪಿಸಿದರು. ನಾಡಿನಾದ್ಯಂತ ಸಂಚರಿಸಿ, ಸಂಶೋಧನೆಗಳನ್ನು ಯಶಸ್ವಿಯಾಗಿ ನಡೆಸಿ ಸಂಶೋಧನಾ ಕ್ಷೇತ್ರಕ್ಕೆ ಹೊಸ ಸ್ಥಾನ ಮತ್ತು ಗೌರವ ದೊರೆಯುವಂತೆ ಮಾಡಿದರು. 1919 ರಲ್ಲಿ ಪುಣೆಯಲ್ಲಿ ಜರುಗಿದ ಅಂತರಾಷ್ಟ್ರೀಯ ಇತಿಹಾಸ ಸಮ್ಮೇಳನದಲ್ಲಿ ಕರ್ನಾಟಕ ಇತಿಹಾಸ ಮಂಡಳಿಯ ಪ್ರತಿನಿಧಿಯಾಗಿ ಭಾಗವಹಿಸಿ ಕರ್ನಾಟಕದ ಕಂಪನ್ನು ಎಲ್ಲೆಡೆ ಪಸರಿಸಿದರು.

1915 ರಿಂದ ಕರ್ನಾಟಕ ಏಕೀಕರಣ ಚಳುವಳಿ ಅತ್ಯಂತ ಬಿರುಸಿನಿಂದ ಸಾಗಿತು. ಆಲೂರರು ನಾರಾಯಣ ರಾಜ ಪುರೋಹಿತ, ನರಗುಂದದ ಭೀಮರಾಯರು, ನಾರಾಯಣ ದೇಶಪಾಂಡೆ ಮುಂತಾದವರು ಕೂಡಿಕೊಂಡು ಧಾರವಾಡ, ಬೆಳಗಾವಿಗಳಲ್ಲಿ ಹೋರಟ ನಡೆಸಿದರು. ಸಾರ್ವಜನಿಕ ಸಭೆಗಳನ್ನು ಕನ್ನಡದಲ್ಲಿಯೇ ನಡೆಸಬೇಕೆಂದು ಆಗ್ರಹಿಸಿದ ಇವರುಗಳು ಕನ್ನಡಿಗರು ಕನ್ನಡದಲ್ಲಿಯೇ ಮಾತನಾಡಲು ಪ್ರೇರೇಪಿಸಿದರು. ರಾಜ್ಯದ ನಾನಾ ಭಾಗಗಳಲ್ಲಿ ಬೇರೆಬೇರೆ ನಾಯಕರ ನೇತೃತ್ವದಲ್ಲಿ ಚಳುವಳಿ ನಡೆಸುತ್ತಿದ್ದವರನ್ನೆಲ್ಲಾ ಒಂದೆಡೆ ಸೇರಿಸುವ ಉದ್ದೇಶದಿಂದ 1936 ರಲ್ಲಿ ಹಂಪಿಯಲ್ಲಿ ‘ವಿಜಯನಗರ ಶತಮಾನೋತ್ಸವ’ ವನ್ನು ಏರ್ಪಡಿಸಿದರು. ಈ ಉತ್ಸವದಲ್ಲಿ ಆಲೂರರು ಬೆನ್ನಲುವಾಗಿ ದುಡಿದರು.

ಸಾಹಿತ್ಯ ಸೇವೆ : ಕರ್ನಾಟಕ ವಿದ್ಯಾವರ್ದಕ ಸಂಘದ ಮುಖವಾಣಿಯಾಗಿದ್ದ ‘ವಾಗ್ಭೂಷಣ’ ಪತ್ರಿಕೆಯ ಸಂಪಾದಕರಾಗಿ ಕರ್ನಾಟಕ ಏಕೀಕರಣದ ಅವಶ್ಯಕತೆಯನ್ನು ತಿಳಿಸಿ ಅದಕ್ಕಾಗಿ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸುವಂತಹ ಲೇಖನಗಳನ್ನು ಬರೆದು ಪ್ರಕಟಿಸಿದರು. ಧಾರವಾಡದಲ್ಲಿ ‘ಕರ್ನಾಟಕ ಗ್ರಂಥ ಪ್ರಸಾರಕ ಮಂಡಳಿ’ಯನ್ನು ಸ್ಥಾಪಿಸುವ ಮೂಲಕ ಕನ್ನಡ ಗ್ರಂಥಗಳ ಪ್ರಕಟಣೆ ಮತ್ತು ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡರು.

ಕನ್ನಡ ನಾಡು ನುಡಿಯ ಸೇವೆಗಾಗಿ ಒಂದು ಪ್ರತ್ಯೇಕವಾದ ಸಂಸ್ಥೆಯ ಅವಶ್ಯಕತೆಯನ್ನು ಮನಗಂಡ ಆಲೂರರು 1914 ರಲ್ಲಿ ಬೆಂಗಳೂರನಲ್ಲಿ ‘ಕನ್ನಡ ಗ್ರಂಥಕರ್ತರ ಸಮ್ಮೇಳನ’ ನಡೆಸುವ ಮೂಲಕ ತಮ್ಮ ಮನದಾಳದ ಅನಿಸಿಕೆಯನ್ನು ಹರಿಯಬಿಟ್ಟರು. ನಂಜುಡಯ್ಯನವರ ಸಹಾನುಭೂತಿ ಹಾಗೂ ಸರ್.ಎಂ.ವಿಶ್ವೇಶ್ವರಯ್ಯನವರ ಬಲದಿಂದ 1915 ರಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್’ನ್ನು ಸ್ಥಾಪಿಸಲು ಕಾರಣೀಭೂತರಾದರು.

ಇನ್ನು ಆಲೂರರ ಸಾಹಿತ್ಯ ಕೃಷಿಯ ಬಗ್ಗೆ ಹೇಡಿಯನ್ನು ಮೀರನನ್ನಾಗಿ, ನಿಸ್ತೇಜ ಅಂತರ್ಮುಖಿಯನ್ನು ಬಹಿರ್ಮುಖಿಯನ್ನಾಗಿ, ನಾಸ್ತಿಕನ್ನು ಆಸ್ತಿಕನನ್ನಾಗಿ ಮಾಡುವ ಶಕ್ತಿ ಅಡಗಿತ್ತು ಎಂಬುದಕ್ಕೆ ಅವರ ಕೃತಿಗಳೇ ಸಾಕ್ಷಿ. ಒಮ್ಮೆ ಬರೆದ ಲೇಖನವನ್ನು ಅವರೆಂದಿಗೂ ತಿದ್ದಿ  ಬರೆದವರಲ್ಲ. ಅಂದರೆ ಲೇಖನಿಗೆ ಕೆಲಸ ಕೊಡುವ ಮೊದಲೇ ತಲೆಯಲ್ಲಿನ ವಿಚಾರಗಳನ್ನು ಮಂಥನ ಮಾಡಿ ಅಕ್ಷರಗಳ ರೂಪ ಕೊಡುತ್ತಿದ್ದರು. ಯಥೇಚ್ಛವಾಗಿ ಸಾಹಿತ್ಯ ರಚನೆ ಮಾಡುವ ಉದ್ದೇಶವಿರದ ಆಲೂರರು ಮಾದರಿಗಾಗಿ ಬರೆಯುವ ಉದ್ದೆಶ ಹೊಂದಿರುವುದು ಅವರ ಕೃತಿಗಳಿಂದ ತಿಳಿದು ಬರುತ್ತದೆ. ಒಂದೊಂದು ವಿಶೇಷ ಉದ್ದೇಶದಿಂದ ಒದೊಂದು ಕೃತಿ ಹೊರಬಂದಿವೆ.

ಕೃತಿಗಳು : ಶಿಕ್ಷಣ ಮೀಮಾಂಸೆ(1908); ಕರ್ನಾಟಕ ಗತವೈಭವ(1917); ಗೀತಾ ಅಹಸ್ಯ(1918); ಕರ್ನಾಟಕದ ವೀರ ರತ್ನಗಳು(1930); ರಾಷ್ಟ್ರೀಯತ್ವದ ಮೀಮಾಂಸೆ ; ನನ್ನ ಜೀವನ ಸ್ಮøತಿಗಳು (ಆತ್ಮ ಕಥನ)(1940); ಹೀಗೆ ಅನೇಕ ಕೃತಿಗಳನ್ನು ರಚಿಸಿದ ಆಲೂರರು ಹ¯ವಾರು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅಲ್ಲದೇ ಅನೇಕ ಕನ್ನಡ ಪತ್ರಿಕೆಗಳಿಗೆ ಸಂಪಾದಕರಾಗಿ, ಲೇಖಕರಾಗಿ ಸೇವೆ ಸಲ್ಲಿಸಿದ್ದಾರೆ.

ಬರೀ ಗ್ರಂಥ ರಚನೆ ಮತ್ತು ಸಂಪಾದನೆಯನ್ನಷ್ಟೇ ಮಾಡದ ಆಲೂರರು ಜನರಲ್ಲಿ ವಾಚನಾಬಿರುಚಿಯನ್ನೂ ಸಹ ಹುಟ್ಟಿಸಿದರು. ಧಾರವಾಡದ ಜನರಿಗೆ ಮಹತ್ವದ ಗ್ರಂಥಗಳು ಯಾವತ್ತೂ ದೊರೆಯಬೇಕೆಂಬ ಉದ್ದೇಶದಿಂದ ತಮ್ಮ ಸ್ವಂತ ಹಣ ಹೂಡಿ ‘ಭಾರತ ಪುಸ್ತಕಾಲಯ’ ಎಂಬ ಹೆಸರಿನ ಗ್ರಂಥಾಲಯ ಪ್ರಾರಂಭಿಸಿದರು. ಅನೇಕ ಮಿತ್ರರ ಹಾಗೂ ಸಾಹಿತ್ಯಾಭಿಮಾನಿಗಳ ಸಹಕಾರದೊಂದಿಗೆ ಸು.2000 ದಿಂದ 3000 ಗ್ರಂಥಗಳನ್ನು ಸೇರಿಸಿದರು. ದೊಡ್ಡ ಓದುಗರ ಬಳಗವನೇ ಸೃಷ್ಟಿಸಿದರು.

ಹೀಗೆ ಕನ್ನಡ ನಾಡು - ನುಡಿಗೆ ಆಲೂರರು ನೀಡಿದ ಕೊಡುಗೆ ಅನನ್ಯ. ಇಂದು ಕರ್ನಾಟಕಕ್ಕೆ ಪ್ರತ್ಯೇಕವಾದ ಅಸ್ತಿತ್ವ ಇದೆ ಎಂದಾದರೆ ಅದು ಆಲೂರರ ಇಚ್ಚಾಶಕ್ತಿ ಮತ್ತು ಹೋರಾಟವೇ ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಇಂತಹ ಮಹಾನ್ ಜೀವಿಗಳು ಹೆಚ್ಚಿದ ಕರ್ನಾಟಕತ್ವದ ಕಿಚ್ಚು ಇಂದು ಕಡಿಮೆಯಾಗತೊಡಗಿದೆ. ನಾಡು-ನುಡಿಗಾಗಿ ನಿಸ್ವಾರ್ಥದಿಂದ ದುಡಿಯುವ ಕೈಗಳು ಇಂದು ಇಲ್ಲವಾಗಿವೆ. ಎಲ್ಲವೂ ರಾಜಕೀಯ ಪ್ರೇರಿತವಾಗಿದೆ. ಇಚ್ಚಾಶಕ್ತಿಯ ಕೊರೆತೆ ಎದ್ದು ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಎಂ.ಇ.ಎಸ್.ನ ಪುಂಡಾಟಿಕೆಗಳು ಹೆಚ್ಚಾಗಿವೆ. ಅದನ್ನು ತಡೆಯಲು ಮತ್ತೊಬ್ಬ ಆಲೂರರು ಹುಟ್ಟಬೇಕಿದೆ.

‘ಟೀಚರ್’ ನವೆಂಬರ್ 2011
- ಆರ್.ಬಿ.ಗುರುಬಸವರಾಜ

ಮರ್ಯಾದೆಯ ಗೋಡೆ

ಮರ್ಯಾದೆಯ ಗೋಡೆ

ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಒಂದು ಪ್ರತಿಷ್ಟಿತ ಗ್ರಾಮ ಹೊಳಗುಂದಿ. ಸುಮಾರು ಎರಡು ಸಾವಿರ ಕುಟುಂಬಗಳಿರುವ ಈ ಗ್ರಾಮ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದೆ. ಈ ಗ್ರಾಮ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದೆ. ಈ ಗ್ರಾಮದಲ್ಲಿ ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಗುಮಾಸ್ತನಿಂದ ಹಿಡಿದು ಹೈಕೋರ್ಟ್ ನ್ಯಾಯಾಧೀಶರ ಹುದ್ದೆಯವರೆಗೂ ವಿವಿಧ ಇಲಾಖೆಗಳಲ್ಲಿ, ವಿವಿಧ ಶ್ರೇಣಿಗಳಲ್ಲಿ ಕೆಲಸ ಮಾಡುವ ಮಂದಿ ಇದ್ದಾರೆ. ಆದರೆ ದುರದೃಷ್ಟವೆಂದರೆ ಈ ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯಗಳನ್ನು ಹೊಂದಿರುವ ಕುಟುಂಬಗಳ ಸಂಖ್ಯೆ ಮೂರಂಕಿ ದಾಟುವುದಿಲ್ಲ.

ಇದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಜನರ ಮನೋಭಾವ. ಇನ್ನೊಂದು ಪ್ರಮುಖ ಕಾರಣ ವೈಯಕ್ತಿಕ ಶೌಚಾಲಯ ನಿರ್ಮಿಸಲು ಸ್ಥಳದ ಕೊರತೆ. ಮನೆಗಳು ಒಂದರ ಪಕ್ಕ ಒಂದರಂತೆ ಕಿಕ್ಕಿರಿದಿರುವುದರಿಂದ ಶೌಚಾಲಯ ನಿರ್ಮಿಸಲು ಜಾಗವೇ ಇಲ್ಲ. ಹೀಗಾಗಿ ಹೊಳಗುಂದಿಯ ಜನರು ಶೌಚಲಯಕ್ಕಾಗಿ ಬಯಲು ಪ್ರದೇಶವನ್ನೇ ಆಶ್ರಯಿಸಿದ್ದಾರೆ.

ಗ್ರಾಮದ ಪುರುಷರು ಮತ್ತು ಮಹಿಳೆಯರು ಒಂದೇ ಬಯಲಿಗೆ ಶೌಚಲಯಕ್ಕೆ ಹೋಗುವಂತಿಲ್ಲ. ಇದು ಅಲಿಖಿತ ನಿಯಮ. ಹೀಗಾಗಿ ಗ್ರಾಮದ ಮೂರು ಕಡೆ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಶೌಚಲಯದ ವ್ಯವಸ್ಥೆ ಎಂದರೆ ಪ್ರತ್ಯೇಕ ಕಟ್ಟಡ ಎಂದು ತಿಳಿದುಕೊಳ್ಳಬೇಡಿ. ನಾಲ್ಕು ಕಡೆ ಗೋಡೆಗಳನ್ನು ಎಬ್ಬಿಸಿ ಮಾಡಿರುವ ತೆರೆದ ಶೌಚಾಲಯ ವ್ಯವಸ್ಥೆ. ಇದನ್ನು ಉತ್ತರ ಕರ್ನಾಟಕ ಭಾಗದಲ್ಲಿ ಮರ್ಯಾದೆ ಗೋಡೆ ಎಂದು ಕರೆಯುತ್ತಾರೆ.

ಪ್ರತೀ ದಿನ ನೂರಾರು ಜನರು ಈ ಮಾರ್ಯಾದೆ ಗೋಡೆಯ ಹಿಂದೆ ಶೌಚಕ್ಕೆ ಕೂರುವುದರಿಂದ ಇದೊಂದು ಗಬ್ಬುನಾತ ಬೀರುವ ಕೊಂಪೆ. ಹುಲುಸಾಗಿ ಬೆಳೆದ ಮುಳ್ಳು ಗಿಡಗಳು. ವಿಷ ಜಂತುಗಳ ಕಾಟ ಮತ್ತು ದುರ್ನಾತದ ನಡುವೆ ಮಹಿಳೆಯರು ಕಾಲಿಡಲು ಕಸರತ್ತು ಮಾಡುತ್ತಾ ಇಲ್ಲಿ ಪ್ರವೇಶ ಪಡೆಯಬೇಕು. ಈ ಮಾರ್ಯದೆ ಗೋಡೆಯ ಅಕ್ಕ ಪಕ್ಕದ ನಿವಾಸಿಗಳಿಗೆ ಬದುಕು ನಿತ್ಯ ನರಕ.  ದುರ್ನಾತದ ಗಾಳಿಯನ್ನೇ ಉಸಿರಾಡುತ್ತಾ ಬದುಕಬೇಕು.

ಈ ವ್ಯವಸ್ಥೆಯನ್ನು ಸರಿಪಡಿಸುವಂತೆ ಇಲ್ಲಿನ ಜನರು ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ದೂರು ಕೊಟ್ಟಿದ್ದಾರೆ. ಗ್ರಾಮ ಪಂಚಾಯಿತಿ ಸ್ಪಂದಿಸದೆ ಇದ್ದಾಗ ಸ್ರ್ತೀಶಕ್ತಿ ಗುಂಪುಗಳ ಮಹಿಳೆಯರೇ ಚಂದಾ ಎತ್ತಿ ಸ್ವಚ್ಚಗೊಳಿಸುವ ಕಾರ್ಯ ಮಾಡಿದ್ದಾರೆ. ಇಂತಹ ಒಂದು ಬಯಲು ಶೌಚಾಲಯ ಶಾಲೆಯ ಪಕ್ಕದಲ್ಲೇ ಇದೆ. ಇದರಿಂದ ಬರುವ ದುರ್ನಾತವನ್ನು ಸಹಿಸಿಕೊಂಡು ಮಕ್ಕಳು ಮತ್ತು ಶಿಕ್ಷಕರು ನಿತ್ಯವೂ ನರಕ ಯಾತನೆ ಅನುಭವಿಸುತ್ತಿದ್ದಾರೆ.

ಸರಕಾರ ನೈರ್ಮಲ್ಯ ವ್ಯವಸ್ಥೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸಂಪೂರ್ಣ ನೈರ್ಮಲ್ಯ ಆಂದೋಲನ ದೇಶದಾದ್ಯಂತ ಜಾರಿಯಲ್ಲಿದೆ. ಈ ಕಾರ್ಯಕ್ರಮದಲ್ಲಿ ವೈಯಕ್ತಿಕ ಶೌಚಾಲಯಗಳು ಮಾತ್ರವಲ್ಲದೆ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲು ಹಣ ಸಹಾಯ ನೀಡಲಾಗುತ್ತಿದೆ. ಆದರೆ ಹೊಳಗುಂದಿ ಪಂಚಾಯತಿಯಲ್ಲಿ ಇವ್ಯಾವುವೂ ಜಾರಿಗೆ ಬಂದಿಲ್ಲ. ಇದಕ್ಕೆ ಯಾರು ಹೊಣೆ? ಈ ಗ್ರಾಮದ ಮಹಿಳೆಯರು ಇನ್ನೆಷ್ಟು ದಿನ ಇಂತಹ ದುಸ್ಥಿತಿಯಲ್ಲಿ ಬದುಕಬೇಕು?

ಸಾಲು ಹೆಜ್ಜೆ’  ಫೆಬ್ರವರಿ  2009
ಆರ್.ಬಿ.ಜಿ. ಹೊಳ್ಗುಂದಿ

ತಲೆಗೆಲ್ಲಾ ಒಂದೇ ಮಂತ್ರ!

ತಲೆಗೆಲ್ಲಾ ಒಂದೇ ಮಂತ್ರ!

ರಾಮರತ್ನಗಿರಿ ಎಂಬ ಪುಟ್ಟ ಊರು. ಅಲ್ಲಿ ಸೋಮಶೇಖರನೆಂಬ ಪಂಡಿತ ಹತ್ತಾರು ಹಳ್ಳಿಗಳಲ್ಲಿ ಹೆಸರುವಾಸಿಯಾಗಿದ್ದ. ಸುತ್ತಲ ಗ್ರಾಮದ ಜನರು ತಮ್ಮ ಯಾವುದೇ ಕಾರ್ಯ ನೆರೆವೇರಿಸಲು ಮುಹೂರ್ತ ನಿಗದಿಗಾಗಿ ಆತನ ಬಳಿ ಬರುತ್ತಿದ್ದರು. ವಿಧವೆಯರು ತಮ್ಮ ಕೇಶಮುಂಡನ ಮಾಡಿಸಲು ಮುಹೂರ್ತ ನಿಗದಿಗಾಗಿ ಆತನ ಬಳಿ ಬರುತ್ತಿದ್ದರು. ಒಂದು ದಿನ ಒಬ್ಬ ವಿಧವೆ ತನ್ನ ಕೇಶಮುಂಡನ ಮಾಡಿಸಲು ಮುಹೂರ್ತ ನಿಗದಿಗಾಗಿ ಕೇಳಿದಾಗ ಪಂಡಿತರು ‘ಬರುವ ಭಾನುವಾರ’ ಎಂದು ಹೇಳಿದರು. ಆ ಮಹಿಳೆ ಹೊರಟು ಹೋದಳು. ನಂತರ ಇನ್ನೊಬ್ಬ ಮಹಿಳೆ ಮೈನೆರೆದ ತನ್ನ ಮಗಳ ಮೈನೆರೆದ ತನ್ನ ಮಗಳ ತಲೆಗೆ ನೀರು ಹಾಕಲು ಮುಹೂರ್ತ ಕೇಳಿದಳು. ಆಗಲೂ ಪಂಡಿದರು ‘ಬರುವ ಭಾನುವಾರ’ ಎಂದು ಹೇಳಿದರು. ಆಗ ಮಹಿಳೆ ‘ಇದೇನು ಪಂಡಿತರೇ, ಕೇಶಮುಂಡನೆಗೂ ಅದೇ ದಿನ, ತಲೆಗೆ ನೀರು ಹಾಕಲು ಅದೇ ದಿನವೇ?’ ಎಂದು ಕೇಳಲು ಪಂಡಿತರು “ತಲೆಗೆಲ್ಲಾ ಒಂದೇ ಮಂತ್ರ!” ಎಂದರು.

ಇಲ್ಲಿ ಈ ಕಥೆಯ ಔಚಿತ್ಯವೇನೆಂದರೆ ನಮ್ಮ ತರಗತಿ ಕೋಣೆಗಳಲ್ಲಿ ನಡೆಯುತ್ತಿರುವುದು ಇದೇ ಅಲ್ಲವೇ? ತರಗತಿಯಲ್ಲಿನ ಎಲ್ಲಾ ಮಕ್ಕಳಿಗೂ ಅದೇ ಪಾಠ, ಅದೇ ವಿಧಾನ, ಅದೇ ಚಟುವಟಿಕೆಗಳು. ಒಂದು ತರಗತಿಯೆಂದರೆ ಅದೊಂದು ‘ಪುಟ್ಟ ಪ್ರಪಂಚ’ ಇದ್ದಂತೆ ಎಂದು ನಾವು ಹೇಳುತ್ತೇವೆ. ಆ ಪ್ರಪಂಚದೊಳಗೆ ವಿವಿಧ ಕೌಟುಂಬಿಕ, ಸಾಮಾಜಿ, ಆರ್ಥಿಕ, ರಾಜಕೀಯ, ಸಾಂಸ್ಕøತಿಕ ಹಿನ್ನಲೆಯುಳ್ಳ ಮಕ್ಕಳು ಇರುತ್ತಾರೆಂದು ನಾವು ಬಲ್ಲೆವು. ಅಲ್ಲದೇ ವಿವಿಧ ವಯೋಮಾನದ, ಬೌದ್ಧಿಕ ಹಾಗೂ ಮಾನಸಿಕ ಸ್ತರದ ಮಕ್ಕಳೂ ಅಲ್ಲಿರುತ್ತಾರೆ. ನಿಧಾನ, ವೇಗ ಮತ್ತು ಸಾಮಾನ್ಯ ಕಲಿಕೆಯ ಮಕ್ಕಳೂ ಅಲ್ಲಿರುತ್ತಾರೆ. ಅವರೆಲ್ಲರಿಗೂ ನಾವೂ ಏಕಪ್ರಕಾರದ ಬೋಧನೆ ಮಾಡುತ್ತೇವಲ್ಲವೇ?

ನಾವು ಮಾಡುವ ಬೋಧನೆ ಕೇವಲ ಯಾವುದಾದರೊಂದು ಗುಂಪಿನ ಮಕ್ಕಳಿಗೆ ಮಾತ್ರ ರುಚಿಸುತ್ತದೆ. ಇನ್ನುಳಿದ ಗುಂಪುಗಳ ಮಕ್ಕಳಿಗೆ ಅದೊಂದು ನೀರಸ ತರಗತಿಯೆನಿಸುತ್ತದೆ. ಬೋಧನೆ ನೀರಸವೆಂಬುದು ಮಕ್ಕಳಿಗೆ ಅರಿವಾದೊಡನೆ ಅವರು ತರಗತಿಯಲ್ಲಿ ಅಶಿಸ್ತಿನಿಂದ ವರ್ತಿಸಲು ತೊಡಗುತ್ತಾರೆ (ಅಶಿಸ್ತಿ ಎಂದರೆ ತರಗತಿಯಲ್ಲಿನ ಬೋಧನೆ, ಕಲಿಕೆಯ ವಾತಾವರಣವನ್ನು ಹಾಳು ಮಾಡುವುದು). ಆಗ ತರಗತಿ ನಿಭಾಯಿಸುವ ಶಿಕ್ಷಕರಿಗೆ ಕೋಪದ ಪಿತ್ತನೆತ್ತಿಗೇರಿ, ಅಶಿಸ್ತಿನಿಂದ  ವರ್ತಿಸಿದ ಮಕ್ಕಳು ಶಿಕ್ಷೆಗೊಳಗಾಗುತ್ತಾರೆ. ನಾವು ಮಕ್ಕಳ ಅಶಿಸ್ತಿಗೆ ಕಾರಣಗಳನ್ನು ಕಂಡು ಹಿಡಿಯದೇ ಅಂತಹ ಮಕ್ಕಳಿಗೆ ಶಿಕ್ಷೆ ವಿಧಿಸುತ್ತೇವೆ. ಇಲ್ಲಿ ನಾವು ಅನುಸರಿಸುತ್ತಿರುವುದು ಮೇಲಿನ ಕಥೆಯ ತಂತ್ರವಲ್ಲವೇ? ಈ ರೀತಿಯ ಸನ್ನಿವೇಶಗಳಲ್ಲಿ ವಾಸ್ತವವಾಗಿ ತಪ್ಪು ಯಾರದು? ಎಂಬುದೇ ಚರ್ಚಾಸ್ಪದ ಸಂಗತಿ.

ಮಕ್ಕಳದೇ ತಪ್ಪು ಎನ್ನುವುದಾದರೆ ‘ಮಗು ಕೇಂದ್ರಿತ ಶಿಕ್ಷಣ’ದ ಪರಿಕಲ್ಪನೆಗೆ ಅರ್ಥವೆಲ್ಲಿಯದು? ಶಿಕ್ಷಕರದೇ ತಪ್ಪು ಎನ್ನುವುದಾದರೆ ಶಿಕ್ಷಕರಿಗಿರುವ ಮಾನಸಿಕ ಒತ್ತಡಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ.

ಭಾರತ ಸಂವಿಧಾನದ 21 (ಎ) ವಿಧಿಯ ಪ್ರಕಾರ ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಅಲ್ಲದೇ ಏಪ್ರಿಲ್ 2010ರಿಂದ “ಶಿಕ್ಷಣ ಕಡ್ಡಾಯ ಹಕ್ಕು” ಎಂದು ಜಾರಿಯಲ್ಲಿದೆ. ಇದರನ್ವಯ ಶಿಕ್ಷಣವೆಂಬುದು ಸಂಪೂರ್ಣವಾಗಿ ‘ಮಗು ಕೇಂದ್ರಿತವಾಗಿರಬೇಕು’. ಪಠ್ಯಕ್ರಮ, ಪಠ್ಯವಸ್ತು, ಬೋಧನಾ ವಿಧಾನ, ಮೂಲಭೂತ ಸೌಲಭ್ಯಗಳು, ಇವೆಲ್ಲವೂ ಮಗು ಕೇಂದ್ರಿತವಾಗಿರಬೇಕು. ಅಲ್ಲದೇ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಶಿಸ್ತಿನ ಹೆಸರಿನಲ್ಲಿ ಶಿಕ್ಷೆ ವಿಧಿಸುವಂತಿಲ್ಲ ಎಂಬುದೂ ಸಹ ಕಡ್ಡಾಯ ಶಿಕ್ಷಣ ಹಕ್ಕಿನ ಕಾಯ್ದೆಯಲ್ಲಿದೆ.

ಹಾಗಾದರೆ ‘ಶಿಸ್ತು’ ಎಂದರೆ ನಾವೇನು ಭಾವಿಸಿಕೊಂಡಿದ್ದೇವೆ? ಎಂಬ ಪ್ರಶ್ನೆ ಮೂಡುತ್ತದೆ. ಅಂದವಾದ ಸಮವಸ್ತ್ರ, ಬೂಟು, ಟೈಗಳು ಶಿಸ್ತುನ್ನು ಪ್ರತಿನಿಧಿಸುತ್ತವೆಯೋ? ಅಥವಾ ಮಗುವಿನ ಆಂತರಿಕ ಮತ್ತು ಬಾಹ್ಯ ಚಟುವಟಿಕೆಗಳು ಶಿಸ್ತನ್ನು ಪ್ರತಿನಿಧಿಸುತ್ತವೆಯೋ? ಎಂಬುದೇ ಗೊಂದಲದ ಗೂಡಾಗಿದೆ.

ಇಂದು ನಾವು ಶಿಸ್ತಿನ ಹೆಸರಿನಲ್ಲಿ ಮಕ್ಕಳಿಗೆ ಶಿಕ್ಷೆ ವಿಧಿಸುತ್ತಿದ್ದೇವೆ. ಅದು ದೈಹಿಕವಾಗಿರಬಹುದು ಅಥವಾ ಮಾನಸಿಕವಾಗಿರಬಹುದು. “ಎಲ್ಲಾ ಮಕ್ಕಳೂ ಕಡ್ಡಾಯವಾಗಿ ಬೂಟು, ಟೈಗಳನ್ನು ಹಾಕಿಕೊಂಡು ಬರಬೇಕು. ಶಾಲೆಯಲ್ಲಿ ಅವುಗಳನ್ನು ಬಿಚ್ಚಬಾರದು” ಎಂಬಂತಹ ಅಘೋಷಿತ ಕಾಯ್ದೆಗಳು ಶಾಲೆಗಳಲ್ಲಿ ಜಾರಿಯಲ್ಲಿರುತ್ತದೆ. ಇದು ಎಷ್ಟೊಂದು ಸಮಂಜಸ. ಬೆಳಗ್ಗೆಯಿಂದ ಕುತ್ತಿಗೆಗೆ ಉರುಳಿನಂತೆ ಕಟ್ಟಿದ ಟೈ, ಗಾಳಿಯಾಡದಂತೆ ಹಾಕಿದ ಬೂಟುಗಳು ಮಗುವಿಗೆ ಹಿಂಸೆಯಲ್ಲವೇ? ಇದು ಶಿಸ್ತಿನ ಹೆಸರಿನ ಶಿಕ್ಷೆಯಲ್ಲವೇ?

ತರಗತಿಯಲ್ಲಿ ಮಕ್ಕಳು ಅಶಿಸ್ತಿನಿಂದ ವರ್ತಿಸುತ್ತಾರೆ ಎಂದ ಕಾರಣಕ್ಕಾಗಿ ಅವರಿಗೆ ದೈಹಿಕ ಅಥವಾ ಮಾನಸಿಕ ಶಿಕ್ಷೆ ವಿಧಿಸುತ್ತೇವೆ ಎಂದಾದರೂ ನಾವೂ ಮಕ್ಕಳ ಈ ರೀತಿಯ ವರ್ತನೆಗಳಿಗೆ ಕಾರಣಗಳೇನೆಂದು ಕಂಡುಕೊಂಡು, ಅವುಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇವಾ? ಅಥವಾ ಮಕ್ಕಳ ಆ ವರ್ತನೆಗಳಿಗೆ ಶಿಕ್ಷೆ ಹೊರತುಪಡಿಸಿ ಏನಾದರೂ ಪರ್ಯಾಯ ತಂತ್ರಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆಯೋ? ಇಲ್ಲ! ಏಕೆಂದರೆ ನಾವಿನ್ನೂ ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುತ್ತಿದ್ದೇವೆ. ‘ಶಿಕ್ಷೆ’ ವಿಧಿಸುವಾತನೇ ‘ಶಿಕ್ಷಕ’ ಎಂದು ಬಹುತೇಕರು ಭಾವಿಸಿಕೊಂಡಿದ್ದೇವೆ. ಆದರೆ ಈ ಭಾವನೆ ತಪ್ಪು ಎಂಬುದು ಅನೇಕರಿಗೆ ತಿಳಿದಿಲ್ಲ. ಕಾಳಿದಾಸನ ‘ಮಾಳವಿಕಾಗ್ನಿಮಿತ್ರ’ದಲ್ಲಿ ಬರುವ ಕೆಳಗಿನ ಶ್ಲೋಕವೊಂದನ್ನು ಬಹುತೇಕರು ಸರಿಯಾಗಿ ಅರ್ಥೈಸಿಕೊಂಡಿಲ್ಲ.

ಶಿ(ಶ್ಲಿ)ಕ್ಷಾಃ ಕ್ರಿಯಾಃ ಕಸ್ಯಚಿದಾತ್ಮ ಸಂಸ್ಥಾಃ
ಸಂಕ್ರಾಂತಿ ರನ್ಯಸ್ಯ ವಿಶೇಷಯುಕ್ತಾ
ಯಸ್ಯೋಭಯಂ ಸಾಧು ಸ ಶಿಕ್ಷಕಾಣಾಂ
ಧುರೀ ಪ್ರತಿಷ್ಠಾಪಯೀತವ್ಯ ವವ
ಅಂದರೆ ವಿಶಿಷ್ಟಶಕ್ತಿ ಇದ್ದವರು ಮಾತ್ರ ವಿಶಿಷ್ಟ ಕ್ರಿಯೆಗಳನ್ನು ಇತರರಿಗೆ ದಾಟಿಸಬಲ್ಲರು. ಯಾರಲ್ಲಿ (ವಿಶಿಷ್ಟ ಶಕ್ತಿ ಹಾಗೂ ವಿಶಿಷ್ಟ ಕ್ರಿಯೆ) ಇರುತ್ತವೆಯೋ ಅವರು ಮಾತ್ರ ಪ್ರತಿಷ್ಟಿತ ಶಿಕ್ಷಕರಾಗಬಲ್ಲರು. ವಿಶಿಷ್ಟ ಕ್ರಿಯೆಗಳನ್ನು ತನ್ನಲ್ಲೇ ಇಟ್ಟುಕೊಳ್ಳುವವನು ಶಿಕ್ಷಕನೆನಿಸುತ್ತಾನೆ ಎಂಬುದೇ ಇದರರ್ಥ. ಇನ್ನೊಬ್ಬರಿಗೆ ದಾಟಿಸುವುದು ಎಂದರೆ ಮಕ್ಕಳಿಗೆ ಕಲಿಸುವುದು ಎಂದರ್ಥ. ಕಲಿಸುವುದು ಎಂದರೆ ಯಾವೂದಾದರೂ ಮಾರ್ಗದಿಂದಲ್ಲ. ಅದು ಮಗು ಒಪ್ಪಿತ ರೀತಿಯಲ್ಲಿ ಎಂದು ಅರ್ಥೈಸಿಕೊಳ್ಳಬೇಕು. ಸಾಮಾನ್ಯವಾಗಿ ಮಕ್ಕಳು ಶಿಕ್ಷೆಯನ್ನು ಹೊರತುಪಡಿಸಿ ಯಾವುದೇ ಮಾರ್ಗದಲ್ಲಾದರೂ ಸರಿಯೇ ಅದನ್ನು ಮಗುವಿಗೆ ದಾಟಿಸುವವನೇ ಪರಿಪೂರ್ಣ ಅಥವಾ ಶ್ರೇಷ್ಠ ಶಿಕ್ಷಕನೆನಿಸುತ್ತಾನೆ.

ಮಗುವಿನ ಮನಸ್ಸು ಹೂವಿನಂತೆ ಎಂದು ಹೇಳುವ ನಾವು ಆ ಹೂವು ಬಾಡದ ರೀತಿಯಲ್ಲಿ, ಅದರ ಪರಿಮಳವನ್ನು ಎಲ್ಲರೂ ಆಘ್ರಾಣಿಸುವಂತೆ ಮಾಡಬೇಕಾದ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಇದು ಬಹು ಪ್ರಯಾಸದ ಕೆಲಸವಾದರೂ ಸಾಧಿಸಿ ತೋರಿಸುವ ಪ್ರಯತ್ನ ಮಾಡಬೇಕಾಗಿದೆ. ಇದಕ್ಕೆ ಇಲಾಖೆಯೂ ಸನ್ನದ್ಧವಾಗಬೇಕಾದ ಅನಿವಾರ್ಯತೆ ಇದೆ.

ಪ್ರತಿವರ್ಷ ಶಿಕ್ಷಕರಿಗೆ 10-20 ದಿನಗಳ ತರಬೇತಿಯನ್ನು ನೀಡಲಾಗುತ್ತದೆ. ಇದರಲ್ಲಿ ಬಹುತೇಕ ತರಬೇತಿಗಳು ಬೋಧನಾ ವಿಧಾನಗಳಿಗೆ ಸಂಬಂಧಿಸಿರುತ್ತವೆ. ಅದರ ಬದಲಾಗಿ ಮಕ್ಕಳ ಮನಃಶಾಸ್ತ್ರ ಅರಿಯುವಂತಹ, ಅದಕ್ಕೆ ತಕ್ಕದಾಗಿ ಸಿದ್ಧರಾಗುವಂತಹ ತರಬೇತಿ ನೀಡಿದರೆ ಒಳಿತು. ಏಕೆಂದರೆ ಸೇವಾಪೂರ್ವದಲ್ಲಿ ಅಭ್ಯಸಿಸಿದ ಮನಃಶಾಸ್ತ್ರ ಬಹುತೇಕ ಅಳಿಸಿ ಹೋಗಿರುತ್ತದೆ. ಮಕ್ಕಳ ಮನಃಶಾಸ್ತ್ರ ಅರಿಯುವ, ಅದಕ್ಕೆ ತಕ್ಕದಾಗಿ ವರ್ತಿಸುವಂತಹ, ಮಾನಸಿಕ ಸದೃಡತೆಯನ್ನು ಗಟ್ಟಿಗೊಳಿಸುವಂತಹ ತರಬೇತಿಗಳನ್ನು ನೀಡಿದಾಗ ಮಾತ್ರ ಶಿಕ್ಷೆ ಮುಕ್ತ ಶಿಸ್ತಿನ ಶಿಕ್ಷಣ ನೀಡ ಬಹುದಲ್ಲವೇ?

ಟೀಚರ್ ಸೆಪ್ಟಂಬರ್ 2010
- ಆರ್.ಬಿ.ಗುರುಬಸವರಾಜ

ಸಮಾಜದಲ್ಲಿ ಶಿಕ್ಷಕನ ಸ್ಥಾನಮಾನ ಅಂದು-ಇಂದು

ಸಮಾಜದಲ್ಲಿ ಶಿಕ್ಷಕನ ಸ್ಥಾನಮಾನ ಅಂದು-ಇಂದು

ನಮ್ಮ ಸಮಾಜ ಪ್ರಾಚೀನ ಕಾಲದಿಂದಲೂ ಶಿಕ್ಷಕನಿಗೆ ಉನ್ನತ ಸ್ಥಾನ ನೀಡಿ ಗೌರವಿಸಿದೆ. ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎಂದು ತಂದೆ-ತಾಯಿಯರ ಜೊತೆ ಸ್ಥಾನಮಾನ ಕಲ್ಪಿಸಿದೆ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ತಮ್ಮ ಮಕ್ಕಳನ್ನು ಗುರುಕುಲಗಳಲ್ಲಿ ಬಿಟ್ಟು, ಗುರು ಮುಖೇನ ವಿದ್ಯಾಭ್ಯಾಸಕ್ಕೆ ಅನುವುಮಾಡಿಕೊಟ್ಟು, ಪ್ರಜೆಗಳಿಗೆ ವಿದ್ಯೆಯ ಮಹತ್ವಕ್ಕಾಗಿ ಮಾರ್ಗದರ್ಶಕರಾಗಿ ಇದ್ದರು. ವಿದ್ಯಾ ಪ್ರಚಾರಕ್ಕಾಗಿ ತಮ್ಮ ಪ್ರದೇಶಗಳಲ್ಲಿ ಅನೇಕ ದತ್ತಿ ದಾನಗಳನ್ನು ನೀಡಿ, ಅಗ್ರಹಾರಗಳನ್ನು ರಚಿಸಿಕೊಟ್ಟು ಪ್ರೋತ್ಸಾಹ ಅಷ್ಟಕಷ್ಟೇ. ಅವರು ಆ ಮೂಖಂತರ ತಮ್ಮ ಧರ್ಮ ಪ್ರಚಾರ ಮತ್ತು ಆಡಳಿತಕ್ಕೆ ಅನುಗುಣವಾದ ವಿದ್ಯೆಯನ್ನು ಮಾತ್ರ ನೀಡುತ್ತಾ ಬಂದಿದ್ದರು. ಆದ್ದರಿಂದ ನಮ್ಮ ಅಂದಿನ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ದೊರೆಯಲಿಲ್ಲ.

ಅಂದಿನ ಶಿಕ್ಷಕ ತನ್ನ ವೈಯಕ್ತಿಕ ಜೀವನದಲ್ಲಿ ಶಿಸ್ತು, ತಾಳ್ಮೆ ವ್ಯವಹಾರ ಜ್ಞಾನದಿಂದ ಸಮಾಜದಲ್ಲಿ ಸಮಾತೋಲನ ಕಾಪಾಡಿಕೊಂಡು ಶಿಕ್ಷಕ ಶಿಕ್ಷಕನೇ ಆಗಿದ್ದ. ಅಂದಿನ ಶಿಕ್ಷಕ ತಾನು ವಾಸಿಸುವ ಪರಿಸರಕ್ಕೆ ಅಗತ್ಯವಾದ ವೈದ್ಯಶಾಸ್ತ್ರ, ಗೃಹಶಾಸ್ತ್ರ, ಪೌರೋಹಿತ್ಯ, ಕರಣಿಕ ಇತ್ಯಾದಿಗಳನ್ನು ತಿಳಿದುಕೊಂಡು ಸರ್ವಜ್ಞನಂತಾಗಿ ಸಮಾಜದಲ್ಲಿ ತಲೆದೋರುವ ಜಗಳ, ಅನ್ಯಾಯ, ಅಧರ್ಮ, ಅನೈತಿಕತೆಗಳನ್ನು ತೊಡೆಯಲು ತನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದ. ಇದರಿಂದ ಅವನು ಸಮಾಜದ ಎಲ್ಲಾ ವರ್ಗದ ಜನರ ಪ್ರೀತ್ಯಾದರಗಳಿಗೆ ಪಾತ್ರನಾಗಿದ್ದು, ಆತನಿಗೆ ಸಲ್ಲುತ್ತಿದ್ದ ಅಲ್ಪಾದಾಯದಿಂದ ಸಂತೃಪ್ತ ಜೀವನ ನಡೆಸುತ್ತಿದ್ದ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ತನ್ನ ಹಿತಮಿತವನ್ನು ಪಡೆದಿದ್ದ ಅಂದು ಸಮಾಜದ ಹಿರಿ-ಕಿರಿಯರೆಲ್ಲರಿಗೂ ಶಿಕ್ಷಕನ ಒಡನಾಟ ಮಾಡುವುದು ಒಂದು ಹಿರಿತನವೇ ಆಗಿತ್ತು. ಆದರೆ ಇಂದು ಮೇಲಿನ ಎಲ್ಲಾ ಸಂಗತಿಗಳು ತಿರುವು-ಮರುವು ಆಗಿವೆ.

ಇಂದು ಸರ್ಕಾರವು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ, ಅಪಾರ ಹಣ ಖರ್ಚು ಮಾಡುತ್ತಿದೆ. ಈ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಲವು ಪಂಡಿತರು ಹಾಗೂ ರಾಜಿಕೀಯ ಮುತ್ಸದ್ದಿಗಳು ಗೊಂದಲಮಯ ವಾತಾವರಣ ಸೃಷ್ಟಿಸಿ ವಿದ್ಯಾಕ್ಷೇತ್ರವನ್ನು ಕಲುಷಿತಗೊಳಿಸುತ್ತಿದ್ದಾರೆ. ಇವರ ಪ್ರತಿಷ್ಠೆ-ಪಾಂಡಿತ್ಯಗಳ ಹಾದಿಯಲ್ಲಿ ಸಿಕ್ಕು ಬಲಿಯಾಗುತ್ತಿರುವವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು. ಪಠ್ಯ ಜ್ಞಾನದ ಅಪೂರ್ಣತೆಯಿಂದಾಗಿ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ಆಂತರಿಕ ಭಿನ್ನ ಭೇದಗಳುಂಟಾಗಿ ಶಿಕ್ಷಕ ಸಮಾಜದ ದೂಷಣೆಗೆ ಪಾತ್ರನಾಗುತ್ತಿದ್ದಾನೆ. ಶಿಕ್ಷಕರ ಸೇವೆ ಸರ್ಕಾರದ ಎಲ್ಲಾ ಯೋಜನೆಗಳ ಅಂಕಿ-ಅಂಶಗಳನ್ನು ಕ್ರೂಢ್ರೀಕರಿಸಲು ಬೇಕೇ ಬೇಕು. ಅಂದರೆ ಚುನಾವಣೆ, ಮತ ಪಟ್ಟಿ ತಯಾರಿಕೆ ಹಾಗೂ ಪರಿಷ್ಕರಣೆ, ಜನಗಣತಿ, ಮನೆಗಣತಿ, ಪಶುಗಣತಿ ಇತ್ಯಾದಿ ರಾಷ್ಟ್ರೀಯ ಕಾರ್ಯಗಳಲ್ಲಿ ಶಿಕ್ಷಕನ ಸೇವೆ ಪ್ರಧಾನ. ಈ ಎಲ್ಲಾ ಮೇಲ್ಕಂಡ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವುದರಿಂದ ಪಾಠ ಬೋಧನೆಗೆ ಸಿಗುವ ಅಲ್ಪ sಸಮಯ ಯಾತಕ್ಕೂ ಸಾಲುವುದಿಲ್ಲ. ಅಲ್ಲದೇ ಸಮಾಜ ಅಭಿವೃದ್ಧಿಯಾದಂತೆ ಶಿಕ್ಷಕನೆಗೆ ಆಸೆ-ಆಕಾಂಕ್ಷೆಗಳು ಹೆಚ್ಚಾಗಿ ತನಗೆ ದೊರೆಯುವ ಅಲ್ಪ ವೇತನ ಸಂಸಾರದ ನಿರ್ವಹಣೆಗೆ ಸಾಲದಂತಾಗಿ ಬಿಡುವಿನ ವೇಳೆಯಲ್ಲಿ ದುಡಿಮೆ ಅನಿವಾರ್ಯವಾಗುತ್ತಿದೆ.

ಒಂದೆಡೆ ಶಾಲಾ ಆಡಳಿತ ವರ್ಗ, ಅಧಿಕಾರಿಗಳ ಕಾನೂನಿನ ಹಿಡಿತ, ಇನ್ನೊಂದೆಡೆ ರಾಜಕೀಯ ಒತ್ತಡ, ಮತ್ತೊಂದೆಡೆ ಶಿಕ್ಷಕರ ಗೌರವ ರಕ್ಷಣೆ. ಇವೆಲ್ಲವುಗಳ ಹಿಡಿತದಿಂದ ಪಾರಾಗಿ ದಕ್ಷ ಆಡಳಿತ ನೀಡಿ, ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸುವುದು ಇನ್ನೂ ಕಷ್ಟಕರವಾಗಿದೆ. ಸರ್ಕಾರದ ಅನೇಕ ಯೋಜನೆಗಳ ಜಾರಿಯಲ್ಲಿ ಅಂದರೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ, ವಿದ್ಯಾರ್ಥಿವೇತನ ವಿತರಣೆ, ಬಾ ಮರಳಿ ಶಾಲೆಗೆ, ಚಿಣ್ಣರ ಅಂಗಳ ಮುಂತಾದವುಗಳಲ್ಲಿ ಅನೇಕ ಅಡೆತಡೆಗಳುಂಟಾಗಿ ಇವೆಲ್ಲಕ್ಕೂ ಶಿಕ್ಷಕನೇ ನೇರ ಹೊಣೆಗಾರನಾಗುತ್ತಿದ್ದಾನೆ. ಹೀಗೆ ಎಲ್ಲಾ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳು ಶಿಕ್ಷಕನ ಮೇಲೆ ತೂಗುವ ಕತ್ತಿಯಾಂತಾಗಿರುವುದರಿಂದ ಶಿಕ್ಷಕ ಗಲಿಬಿಲಿಗೊಂಡು ಸಮರ್ಪಕ ಸೇವೆ ಒದಗಿಸುವಲ್ಲಿ ಒದ್ದಾಡುತ್ತಿದ್ದಾನೆ. ಅಲ್ಲದೇ ಇಂದಿನ ಕೆಲವು ಶಿಕ್ಷಕರು ಆಲಸ್ಯದಿಂದ, ಮೈಗಳ್ಳತನದಿಂದ, ದುರಾಭ್ಯಾಸಗಳ ದಾಸರಾಗುತ್ತಿರುವುದರಿಂದ, ಹಾಗೂ ಶಿಕ್ಷಣಕ್ಕೆ ಸಂಬಂಧವಿಲ್ಲದ ಕಾರ್ಯಗಳಲ್ಲಿ ತೊಡಗುತ್ತಿರುವುದರಿಂದ ಸಮಾಜದ ನಿಂದನೆಗೆ ಪಾತ್ರರಾಗುತ್ತಿದ್ದಾರೆ. ಆದಾಗ್ಯೂ ಇಷ್ಟೆಲ್ಲವನ್ನು ತನ್ನ ಜಾಣ್ಮೆಯಿಂದ ಹೊಂದಣಿಕೆ ಮಾಡಿಕೊಂಡು ಶಿಕ್ಷಣಾಭಿವೃದ್ಧಿಗಾಗಿ ಶ್ರಮಿಸುವ ಶಿಕ್ಷಕ ಸಮಾಜದಿಂದ ದೂರವಾಗಿ ಉಳಿಯುತ್ತಿದ್ದಾನೆ. ಶಿಕ್ಷಕ ಎಲ್ಲದಕ್ಕೂ ಬೇಕು. ಆದರೆ ಯಾವುದಕ್ಕೂ ಬೇಡ?! ಇವರ ಸ್ನೇಹ, ವಿಶ್ವಾಸ, ಭಾಂದವ್ಯ ಸಮಾಜದ ಹಿರಿಯರಿಗೆ ಬೇಡವಾಗುತ್ತಿದೆ. ಹೀಗಾದಾಗ ಇದನ್ನು ಸರಿಪಡಿಸುವವರ್ಯಾರು? ಈ ಸ್ಥಾನಕ್ಕೆ ಹಿಂದಿನ ಘನತೆ, ಗೌರವ, ಮಾನ್ಯತೆ ದೊರೆಕಿಸುವವರ್ಯಾರು? ಇತಿಹಾಸ ಪುನಃ ಮರುಕಳಿಸೀತೇ? ಎಂಬುದು ಎಲ್ಲ ಶಿಕ್ಷಕರಾದ ನಾವು ಸಹ ಘನತೆ-ಗೌರವಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು ಸದಾ ಪರಿಶ್ರಮ ಪಡುತ್ತಿರಬೇಕು. ಈ ದಿಸೆಯಲ್ಲಿ ಶಿಕ್ಷಕನಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ, ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಉತ್ತೇಜನಗಳು ಅನಿವಾರ್ಯ. "ಮೇಷ್ಟ್ರು ಅಂದರೆ ತಂದೆ-ತಾಯಿಗಳು ರೋಸಿಕೊಂಡು ಕಳಿಸುವ ಮಕ್ಕಳ ಹೊರೆ ಹೋರುವ ಅಗಸನ ಕತ್ತೆ. ಎಲ್ಲರಿಗೂ ಅಗತ್ಯವಾಗಿ, ಯಾರಿಗೂ ಬೇಡವಾದ ತ್ರಿಶಂಕು. ಅತೀ ಕಡಿಮೆ ಕೂಲಿಗೆ ಅತೀ ಹೆಚ್ಚು ದುಡಿಯುವ ಮೂಕ ಪ್ರಾಣಿ" ಎಂಬ ತ.ರಾ.ಸು ಅವರ ಅಭಿಪ್ರಾಯ. ಸದ್ಯದ ಶಿಕ್ಷಕರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

‘ಶಿಕ್ಷಣ ಧ್ವನಿ’ 15-5-2003
- ಆರ್.ಬಿ.ಗುರುಬಸವರಾಜ

ಹೊರ ಸಂಚಾರ ಹೊರೆಯಾಗದಿರಲಿ

ಹೊರ ಸಂಚಾರ ಹೊರೆಯಾಗದಿರಲಿ

ಸಹಪಠ್ಯ ಚಟುವಟಿಕೆಗಳಲ್ಲಿ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿಗಳನ್ನು ಸಂಗ್ರಹಸಲು ಅತ್ಯಂತ ಯಶಸ್ವಿ ಹಾಗೂ ಪರಿಣಾಮಕಾರಿ ಚಟುವಟಿಕೆ ಎಂದರೆ, ‘ಶೈಕ್ಷಣಿಕ ಹೊರಸಂಚಾರ’

ಹೊರಸಂಚಾರ ಎಂದಾಕ್ಷಣ ನಮಗೆಲ್ಲ ಮನಸ್ಸಿನಲ್ಲಿ ಮೂಡುವ ಚಿತ್ರಣವೆಂದರೆ, ಒಂದು ದಿನದ ಪ್ರವಾಸ. ಬೆಳಗ್ಗೆ ಹೊರಟು ರಾತ್ರಿ ಪುನಃ ಬಂದು ಸೇರಲು ಅನುಕೂಲವಾಗುವಂತೆ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡು, ಅಲ್ಲಿಗೆ ಹೋಗಿ ಬರಲು ವಾಹನದ ವ್ಯವಸ್ಥೆಯ ಬಗ್ಗೆ ಹಾಗೂ ಅಲ್ಲಿನ ಭೋಜನಕ್ಕಾಗಿ ಸೂಕ್ತ ವ್ಯವಸ್ಥೆಯ ಬಗ್ಗೆ ಪೂರ್ವ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ತಗುಲಬಹುದಾದ ಆಯ-ವ್ಯಯದ ಪಟ್ಟಿಯನ್ನು ತಯಾರಿಸಿ, ಅದರಂತೆ ಪ್ರತಿಯೊಂದು ಮಗುವಿನಿಂದ ಇಂತಿಷ್ಟು ಹಣ ಸಂಗ್ರಹಿಸಿ ಅದರಲ್ಲೇ ಶಿಕ್ಷಕರಾದ ನಾವೂ ಹೊರ ಸಂಚಾರದ ರಸಾನುಭವ ಪಡೆಯುತ್ತೇವೆ. ಸಾಮಾನ್ಯವಾಗಿ, ಎಲ್ಲಾ ಶಿಕ್ಷಕರೂ ಹೀಗೆಯೇ ಮಾಡುತ್ತಾರೆ ಎಂದರೆ ತಪ್ಪಾಗುತ್ತದೆ.

ಹೊರಸಂಚಾರ ಎಂದ ಕೂಡಲೇ ಕೆಲವು ಪೋಷಕರಿಗೆ ಗರ ಬಡಿದಂತಾಗುತ್ತದೆ. ಅದೊಂದು ವೆಚ್ಚದಾಯಕ ಚಟುವಟಿಕೆ ಎಂಬ ಅಂಶ ಅವರ ಮನದಲ್ಲಿ ಕಾಡುತ್ತಿರುತ್ತದೆ. ಆದರೆ ಕೆಲವು ಸೃಜನಶೀಲ, ಚಿಂತನ ಶೀಲ ಶಿಕ್ಷಕರು ಹೊರೆಯೆನಿಸದ ರೀತಿಯಲ್ಲಿ ಅಯೋಜಿಸುತ್ತಾರೆ. ಇದರಿಂದ ಪಾಲಕರಿಗೂ ಸಹ ನೋವುಂಟಾಗುದಿಲ್ಲ. ಬದಲು ತಮ್ಮ ಮಕ್ಕಳೂ ಖುಷಿಯಿಂದ ಪಾಲ್ಗೊಳ್ಳುವಂತೆ ಪ್ರೇರೇಸುವಂತಾಗುತ್ತದೆ.

ಹೊರಸಂಚಾರಕ್ಕೆ ಅಕ್ಟೋಬರ್‍ನಿಂದ ಡಿಸೆಂಬರ್‍ವರೆಗಿನ ಕಾಲ ಸೂಕ್ತವಾದುದು. ಏಕೆಂದರೆ, ಆ ತಿಂಗಳುಗಳಲ್ಲಿ ಮಳೆಯ ಅಬ್ಬರ ಕಡಿಮೆ ಹಾಗೂ ಸುತ್ತಲ ಪರಿಸರ ಹಚ್ಚ ಹಸಿರಿನಿಂದ ತುಂಬಿಕೊಂಡಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ. ಹೊಲ ಗದ್ದೆಗಳು ಪಚ್ಚೆ ಪೈರಿನಿಂದ ಕಂಗೊಳಿಸುತ್ತಿರುತ್ತವೆ.

ಸ್ಥಳ ಆಯ್ಕೆ : ಸಾಮಾನ್ಯವಾಗಿ ಹೊರಸಂಚಾರಕ್ಕಾಗಿ ಸ್ಥಳ ಆಯ್ಕೆ ಮಾಡಿಕೊಳ್ಳುವಾಗ 20 ರಿಂ 50 ಕಿ.ಮೀ. ಅಂತರದ ಅಥವಾ ಅದಕ್ಕಿಂತ ಹೆಚ್ಚು ಅಂತರದ ಐತಿಹಾಸಿಕ, ಸಾಂಸ್ಕøತಿಕ, ವೈಜ್ಞಾನಿಕ, ನೈಸರ್ಗಿಕ ಮಹತ್ವಗಳುಳ್ಳ ಅಥವಾ ನೋಡಲು ಸುಂದರವಾದ ಒಂದು ಪ್ರವಾಸಿ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಹೀಗೆ ದೂರದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಮಕ್ಕಳು ಅಧಿಕ ಪ್ರವಾಸದ ಹಣ ಭರಿಸಬೇಕಾದ ಮತ್ತು ಪ್ರಯಾಣದ ಆಯಾಸವನ್ನು ಅನುಭವಿಸಬೇಕಾದ ಸಂದರ್ಭಗಳೇ ಹೆಚ್ಚು. ಆದರೆ ಹೀಗೆ ದೂರದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳದೇ, 5 ರಿಂದ 10 ಕಿ.ಮೀ. ಅಂತರದೊಳಗಿನ ಸ್ಥಳವಾದರೆ ಉತ್ತಮ. 5 ಕಿ.ಮೀ. ಗಿಂತ ಕಡಿಮೆ ಅಂತರದೊಳಗಿನ ಸ್ಥಳವಾದರೆ ಇನ್ನೂ ಉತ್ತಮ. ಕೇವಲ ಕಾಲ್ನಡಿಗೆಯಲ್ಲಿಯೇ ಅತ್ಯಂತ ಖುಷಿಯಿಂದ ಹೋಗಿರಬಹುದು. 

ಹೀಗೆ ಸ್ಥಳೀಯ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಆ ಪ್ರದೇಶದ ಮಹತ್ವ, ಭೌಗೋಳಿಕ ಅಂಶಗಳ ಕಲ್ಪನೆ, ಸ್ಥಳೀಯ ಹವಾಮಾನ ಮತ್ತು ವಾಯುಗುಣಗಳ ಕಲ್ಪನೆ, ಸ್ಥಳೀಯ ಬೆಳೆಗಳ ಪರಿಚಯ ಸ್ಥಳೀಯರ ಅವಶ್ಯಕತೆಗಳು ಹಾಗೂ ಅವುಗಳನ್ನು ಪೂರೈಸುವ ಅಂಶಗಳ ಲಭ್ಯತೆ, ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳು, ವೈಜ್ಞಾನಿಕ ಕೌತುಕಗಳು, ವಿಶೇಷ ಪ್ರಾಣಿ, ಪಕ್ಷಿಗಳ ದರ್ಶನ, ಇತ್ಯಾದಿ ಅಂಶಗಳಿಂದ ಮೂರ್ತದಿಂದ ಅಮೂರ್ತದೆಡೆಗೆ ಎನ್ನುವ ರೀತಿಯಲ್ಲಿ ಬೋಧನೆ-ಕಲಿಕೆಗೆ ಸಹಕಾರಿಯಾಗುತ್ತದೆ.

ಹೊರಸಂಚಾರವನ್ನು ಯಶಸ್ವಿ, ಪರಿಣಾಮಕಾರಿಯನ್ನಾಗಿ ಹಾಗೂ ಬೋಧನೆ – ಕಲಿಕೆಗೆ ಪೂರಕ ಸಾಧನವನ್ನಾಗಿ ಬಳಸೊಕೊಳ್ಳಬೇಕಾದರೆ ಕೆಲವು ನಿಯಮಗಳನ್ನು ಕೆಳಗಿನಂತೆ ವಿವೇಚಿಸಬಹುದು.

ಪೂರ್ವ ಸಿದ್ಧತೆ: ಹೊರಸಂಚಾರ ಯಶಸ್ವಿಯಾಗಬೇಕಾದರೆ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.
ಉತ್ತಮವಾದ ಸ್ಥಳ ಆಯ್ಕೆ ಮಾಡಿದ ನಂತರ ದಿನಾಂಕ ಹಾಗೂ ಹೊರಡುವ ವೇಳೆ ನಿಗದಿಗೊಳಿಸುವುದು.
ಹೊರಸಂಚಾರಕ್ಕೆ ಹೊರಡುವ ಮಕ್ಕಳ ಯಾದಿ ತಯಾರಿಸುವುದು.
ಹೊರಸಂಚಾರದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಪಟ್ಟಿ ತಯಾರಿಸುವುದು ಅವುಗಳಿಗೆ ಅವಶ್ಯವಿರುವ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು.
ಹೊರಸಂಚಾರದಲ್ಲಿ ಸಂಗ್ರಹಿಸಬಹುದಾದ ವಸ್ತುಗಳ, ಮಾದರಿಗಳ, ಚಿತ್ರಗಳ ಪಟ್ಟಿ ತಯಾರಿಸುವುದು.
ವಸ್ತುಗಳನ್ನು ಸಂಗ್ರಹಸಲು ಗುಂಪುಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡುವುದು.
ಗುಂಪುಗಳಿಗೆ ಮಕ್ಕಳಲ್ಲೇ ನಾಯಕರುಗಳನ್ನು ಆಯ್ಕೆ ಮಾಡಿ ಶಿಕ್ಷಕರು ಮೇಲುಸ್ತುವಾರಿ ವಹಿಸುವುದು.
ಅಪಘಾತ ಸಂಭವಿಸುವ (ನದಿ, ಕೆರೆ, ಗುಡ್ಡ, ಬೆಟ್ಟ, ಇಳಿಜಾರು, ಕೈಗಾರಿಕೆ) ಪ್ರದೇಶಗಳಾಗಿದ್ದರೆ, ಸೂಕ್ತ ಎಚ್ಚರಿಕಾ ಕ್ರಮಗಳನ್ನು ವಹಿಸುವುದು.
ಹೊರಸಂಚಾರದ ಬಗ್ಗೆ ಮಕ್ಕಳಲ್ಲಿ ಕುತೂಹಲ ಉಂಟುಮಾಡುವುದು. ಅಂದರೆ ಹೊರಸಂಚಾರಕ್ಕೆ ಆಯ್ಕೆ ಮಾಡಿಕೊಂಡ ಸ್ಥಳದ ಬಗ್ಗೆ ಮಕ್ಕಳಿಗೆ ಯಾವುದೇ ಮಾಹಿತಿ ಕೊಡದೇ ಗೌಪ್ಯವಾಗಿಟ್ಟು ನೇರವಾಗಿ ಆ ಮಕ್ಕಳಲ್ಲಿ ಕಾತುರತೆ ಮತ್ತು ಉತ್ಸಾಹ ಹೆಚ್ಚಾಗುತ್ತದೆ.
ಮಕ್ಕಳು ಬೆಲೆ ಬಾಳುವ ಆಭರಣಗಳೂ ಮತ್ತು ಬೆಲೆ ಬಾಳುವ ಯಾವುದೇ ವಸ್ತು ತರುವುದನ್ನು ನಿಷೇಧಿಸುವುದು.
ಹೊರಸಂಚಾರದಲ್ಲಿ ಕಾರ್ಯರೂಪಗೊಳಿಸಬಹುದಾದ ಅಂಶಗಳು
ಹೊರಸಂಚಾರದ ಸ್ಥಳದಲ್ಲಿ ಆ ಪ್ರದೇಶ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಸ್ಥಳೀಯರಿಂದ ಅಥವಾ ಸಂಬಂಧಿಸಿದವರಿಂದ ಅಥವಾ ಶಿಕ್ಷಕರೇ ಒದಗಿಸುವುದು.
ಮಕ್ಕಳ ಗುಂಪುಗಳಿಗೆ ವಹಿಸಿದ ಕಾರ್ಯದಂತೆ ವಸ್ತುಗಳನ್ನು/ಮಾದರಿಗಳನ್ನು ಸಂಗ್ರಹಿಸಲು ಸೂಕ್ತ ಮಾರ್ಗದರ್ಶನ ಮತ್ತು ಸಲಹೆ ನೀಡುತ್ತಾ ಮೇಲುಸ್ತುವಾರಿ ವಹಿಸಿಕೊಳ್ಳುವುದು.
ಮಕ್ಕಳ ಮನೋರಂಜನೆಗಾಗಿ ಹಾಡು, ಕುಣಿತ, ನೃತ್ಯ, ರೂಪಕ, ಕಿರು ನಾಟಕ, ಆಟ, ಇತ್ಯಾದಿಗಳನ್ನು ವ್ಯವಸ್ಥೆಗೊಳಿಸುವುದು.
ಮಕ್ಕಳ ಊಟ – ಉಪಕಾರಗಳಿಗಾಗಿ ಸೂಕ್ತ ಸ್ಥಳ ಸೌಲಭ್ಯ ವ್ಯವಸ್ಥೆಗೊಳಿಸುವುದರ ಜೊತೆಗೆ ಶಿಕ್ಷಕರೂ ಮಕ್ಕಳೊಂದಿಗೆ ಸಹಭೋಜನ ಮಾಡುವುದು.
ಪ್ರತಿಯೊಂದು ಮಗುವಿನ ಚಲನ-ವಲನದ ಮೇಲೆ ನಿಗಾ ಇಡುವುದು.
ಹೊರಸಂಚಾರದ ನಂತರ : 
ಸಂಗ್ರಹಿಸಿದ ವಸ್ತುಗಳು / ಮಾದರಿಗಳನ್ನು ದಿನಾಂಕ ನಿಗದಿಗೊಳಿಸಿ ಪ್ರದರ್ಶನ ಏರ್ಪಡಿಸುವುದು. ಸಾಧ್ಯವಾದರೆ ಪೋಷಕರು ಅಧಿಕಾರಿಗಳನ್ನು ಆಹ್ವಾನಿಸುವುದು ಹಾಗೂ ಶಾಲೆಯ ಎಲ್ಲಾ ತರಗತಿಯ ಮಕ್ಕಳು ವೀಕ್ಷಿಸಲು ಅನುವು ಮಾಡಿಕೊಡುವುದು.
ದೀರ್ಘಕಾಲ ಬಳಸಬಹುದಾದ ವಸ್ತುಗಳು / ಮಾದರಿಗಳನ್ನು ಸಂರಕ್ಷಿಸಿಡುವುದು ಹಾಗೂ ಸೂಕ್ತ ಸಂದರ್ಭದಲ್ಲಿ ಬೋಧನೆ-ಕಲಿಕೆಗೆ ಬಳಸಿಕೊಳ್ಳುವುದು.
ಹೊರಸಂಚಾರದಲ್ಲಿ ಸಂಗ್ರಹಿಸಿದ ವಸ್ತುಗಳ ಕುರಿತು ಟಿಪ್ಪಣಿ ದಾಖಲಿಸಿಡುವುದು.
ಹೊರಸಂಚಾರ ಕುರಿತು ಮಕ್ಕಳ ಅನುಭವಗಳನ್ನು ಮಕ್ಕಳಿಂದಲೇ ಅಖಿತ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು (ವರದಿ ತಯಾರಿಕೆ).
ಹೀಗೆ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಹೊರಸಂಚಾರ ಆಯೋಜಿದರೆ ಯಶಸ್ವಿ ಜವಾಬ್ದಾರಿ ನಿರ್ವಹಿಸಿದ ಖುಷಿ ನಿಮ್ಮದಾಗುತ್ತದೆ. ಆ ಮೂಲಕ ಮಕ್ಕಳ ಖುಷಿಗೂ ಸಹ ಭಾಜನರಾಗುತ್ತೀರಿ.


‘ಟೀಚರ್’   ಸೆಪ್ಟಂಬರ್ 2006
- ಆರ್.ಬಿ.ಗುರುಬಸವರಾಜ

ಇಂದಿನ ಶಿಕ್ಷಣದಲ್ಲಿ ದೂರದರ್ಶನದ ಪ್ರಭಾವ

ಇಂದಿನ ಶಿಕ್ಷಣದಲ್ಲಿ ದೂರದರ್ಶನದ ಪ್ರಭಾವ

ಇಂದಿನ ಕಂಪೂಟರ್ ಯುಗದಲ್ಲಿ, ದೂರದರ್ಶನದ ಶಿಕ್ಷಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಸಮೂಹ ಮಾಧ್ಯಮವಾಗಿದೆ. ಧೃಕ್-ಶ್ರವಣೋಪಕರಣ ಸಾಧನವಾದ ದೂರದರ್ಶನ ಬೋಧನೆ-ಕಲಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡಿ ಕಲಿಕೆಯನ್ನು ಸುಗಮ ಹಾಗೂ ಸಂತಸದಾಯಕವನ್ನಾಗಿಸುತ್ತದೆ ಎಂಬುದದಲ್ಲಿ ಎರಡು ಮಾತಿಲ್ಲ. ದೂರದರ್ಶನದ ಬಗ್ಗೆ ಕೇಳದ ಕಂಡರಿಯದ ಕಾಲವೊಂದಿತ್ತು ಆದರೆ ಈಗ ಪ್ರತಿಯೊಂದು ಗ್ರಾಮಗಳಲ್ಲಿ ಅದರಲ್ಲೂ ಮುಖ್ಯವಾಗಿ ಪ್ರತಿಯೊಂದು ಸಣ್ಣ-ಪುಟ್ಟ ಹಳ್ಳಿಗಳ ಗುಡಿಸಲುಗಳಲ್ಲಿ ಸಹ ಕಂಡುಬರುವ ಏಕೈಕ ಮಾಧ್ಯಮ ದೂರದರ್ಶನ. ಈ ದೂರದರ್ಶನಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಅಬಾಲವೃದ್ದರಿಗೂ ಸಹ ಮನೋರಂಜನೆ ನೀಡುತ್ತವೆಂದು ಹೇಳಲಾಗುವುದಿಲ್ಲ. ಅದರಲ್ಲಿನ ಕೆಲವೊಂದು ಕಾರ್ಯಕ್ರಮಗಳು ನಮ್ಮ ಬುದ್ದಿಗೆ. ಜ್ಞಾನಕ್ಕೆ, ಅರಿವಿಗೆ ಚುರುಕನ್ನು ಒದಗಿಸುತ್ತವೆ. ಇತಿಹಾಸದ ಗತವೈಭವ ಸಾರುವ ಕಾರ್ಯಕ್ರಮಗಳು ; ಜ್ಞಾನದ ರೀತಿ-ನೀತಿಗಳು, ಆಚಾರ-ವಿಚಾರಗಳು, ನಡವಳಿಕೆಗಳನ್ನು ತಿಳಿಸುವಂತಹ ಕಾರ್ಯಕ್ರಮಗಳು ; ಪ್ರಾಣಿಗಳ, ಪಕ್ಷಿಗಳ ಜೀವನ ಕ್ರಮವನ್ನು ತಿಳಿಸುವಂತಹ ಕಾರ್ಯಕ್ರಮಗಳು ; ಯೋಗ, ಧ್ಯಾನ, ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ; ಹೀಗೆ ಮೈಮನಗಳಿಗೆ ಮುದ ನೀಡುವಂತಹ ಅನೇಕ ಉಪಯುಕ್ತ ಕಾರ್ಯಕ್ರಮಗಳು ಬಿತ್ತರಗೊಳ್ಳುತ್ತವೆ.

ದೂರದರ್ಶನದಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮವನ್ನು ವಿವೇಚನೆಯಿಂದ ವಿಕ್ಷಿಸಿದಲ್ಲಿ, ಪ್ರತಿಯೊಂದು ಕಾರ್ಯಕ್ರಮದಲ್ಲೂ ತಿಳಿದುಕೊಳ್ಳಬಹುದಾದಂತಹ ಆದರ್ಶ ಗುಣಗಳು, ನಡವಳಿಕೆಗಳು, ಮಾನವೀಯ ಮೌಲ್ಯಗಳು ಅಡಗಿರುತ್ತದೆ. ಆದರೆ ಇಂದಿನ ಪೀಳಿಗೆಯ ಮಕ್ಕಳು ಇಂತಹ ಕಾರ್ಯಕ್ರಮಗಳನ್ನು ಮುಖ್ಯವಾಗಿ ಅನಪೇಕ್ಷಿತ ಧಾರವಾಹಿಗಳನ್ನು ವೀಕ್ಷಿಸಿ ತಮ್ಮ ಮುಂದಿನ ಭವಿಷ್ಯವನ್ನು ತಾವೇ ತಮ್ಮ ಕೈಯಾರ ಪಾತಾಳಕ್ಕೆ ನೂಕುತ್ತಿದ್ದಾರೆ.

ದೂರದರ್ಶನದ ಮಾಲೀಕರಾದ ತಂದೆ-ತಾಯಿ, ಪಾಲಕ-ಪೋಷಕರಿಗೂ ಸಹ ನಮ್ಮ ಮನೆಯಲ್ಲಿ ಶಾಲೆಯಲ್ಲಿ ಕಲಿಯುವ ಮಕ್ಕಳಿದ್ದಾರೆ ಎಂಬ ಪರಿಜ್ಞಾನವಿಲ್ಲದೇ ಯಾವಾಗಲೂ ದೂರದರ್ಶನ ವೀಕ್ಷಿಸುತ್ತಿರುತ್ತಾರೆ. ಇದರಿಂದಾಗಿ ವ್ಯಾಸಂಗದಲ್ಲಿ ನಿರತರಾದ ಮಕ್ಕಳಿಗೆ ಇದೊಂದು ‘ಯಮಹಿಂಸೆ’ ಯಾಗಿದೆ. ಮಕ್ಕಳ ಮನಸ್ಸು ಮೊದಲೇ ಚಂಚಲ. ಮನೆಯಲ್ಲಿ ಟಿ.ವಿ.ಹಚ್ಚಿದ ಕೂಡಲೇ ಅವರ ಕಿವಿಗಳು ಆಲಿಸುವುದು ದೂರದರ್ಶನದ ಕಾರ್ಯಕ್ರಮಗಳನ್ನು. ಇಲ್ಲಿ ಕೇವಲ ಮಕ್ಕಳ ಮುಂದೆ ಪುಸ್ತಕಗಳಲ್ಲಿ ಅವಿತಿದ್ದರೂ ಮನಸ್ಸು ಮಾತ್ರ ದೂರದರ್ಶನದ ಕಡೆ ವಾಲಿರುತ್ತದೆ. ಈ ರೀತಿಯ ಯಾಂತ್ರಿಕ ಓದಿನಿಂದ ಮಕ್ಕಳ ಭವಿಷ್ಯ ಹಾಳಗುತ್ತದೆ. ಬಹುತೇಕ ಹಳ್ಳಿಗಳಲ್ಲಿ ಪಾಲಕರು ಗಮನಿಸದೇ ತಮ್ಮ ಮಕ್ಕಳ ಬಾಳನ್ನು ಅಂಧಕಾರದಲ್ಲಿ ನೂಕುತ್ತಿದ್ದಾರೆ. “ದೇಶ ಕಟ್ಟುವ ಕಾರ್ಯ ತರಗತಿ ಕೋಣೆಯ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದೆ” ಎಂಬ ದಾರ್ಶನಿಕ ಮಾತು ಸುಳ್ಳಲ್ಲ. ಆದರೆ ಅದು ನಾಲ್ಕು ಗೋಡೆಗಳ ಹೊರಗೂ ಸಹ ನಡೆಯುತ್ತದೆ. ಮಕ್ಕಳು ಕೇವಲ ಕೆಲವಾರು ಗಂಟೆಗಳ ಕಾಲ ಶಾಲೆಯಲ್ಲಿ ಇರುತ್ತಾರೆ ಅವರನ್ನು ತಿದ್ದುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಇದಕ್ಕೆ ಪಾಲಕರ ಸಮುದಾಯದ ಸಹಾಯ-ಸಹಕಾರ ದೊರೆತಾಗ ಮಾತ್ರ.

“ದೂರದರ್ಶನದ ಪ್ರಭಾವದಿಂದಾಗಿ ಇಂದಿನ ಪೀಳಿಗೆ ಹಾಳಾಗುತ್ತಿದೆ” ಎಂಬ ಮಾತು ಈಗ ಸಾರ್ವತ್ರಿಕವಾಗಿದೆ. ಇಂದಿನ ಮಕ್ಕಳಲ್ಲಿ ಎದ್ದು ಕಾಣುವ ಮುಖ್ಯ ಅಂಶಗಳೆಂದರೆ ಅಶಾಂತಿ, ಅಶಿಸ್ತು, ಅಗೌರವ, ಕ್ರೌರ್ಯ, ಮಾದಕತೆ ತುಂಬಿದ ಜೀವನ ಇತ್ಯಾದಿ ಇವೆಲ್ಲವುಗಳಿಗೆ ಕಾರಣ ದೂರದರ್ಶನದ ದುರ್ಬಳಕೆ ನಮ್ಮ ಒಬ್ಬೊಬ್ಬ ಮಕ್ಕಳ ಸಹ ಮಹಾತ್ಮರಾಗಲು, ಶರಣರಂತಾಗಲು, ಯೋಗ್ಯನಾಗರೀಕರಾಗಲು ಮಾಡಬೇಕಾದಂತಹ ಮುಖ್ಯ ಕಾರ್ಯವೆಂದರೆ ದೂರದರ್ಶನದ ಮಿತಿಮೀರಿದ ಹಾಗೂ ದುರ್ಬಳಕೆ ತಪ್ಪಿಸುವುದು. ಇನ್ನು ಮುಂದೆಯಾದರೂ ಒಳ್ಳೆಯ ಸುಸಂಸ್ಕøತ ಸಮಾಜವನ್ನು, ಶಾಂತಿಯುತ ನಾಡನ್ನು ಕಟ್ಟಲು ಯೋಗ್ಯ ಪ್ರಜೆಗಳನ್ನು ನಿರ್ಮಿಸಲು ಪಣತೊಡೋಣವೇ?

‘ಶಿಕ್ಷಣ ಧ್ವನಿ’  1 ನೇ ಮೇ 2003
- ಆರ್.ಬಿ.ಗುರುಬಸವರಾಜ

1947ಕ್ಕಿಂತ ಮುಂಚಿನ ಮತ್ತು ನಂತರ ಕಾಲದ ಶಿಕ್ಷಣದ ಸ್ಥಿತಿಗತಿ:ಒಂದು ಪಕ್ಷಿನೋಟ

1947ಕ್ಕಿಂತ ಮುಂಚಿನ ಮತ್ತು ನಂತರ ಕಾಲದ ಶಿಕ್ಷಣದ ಸ್ಥಿತಿಗತಿ:ಒಂದು ಪಕ್ಷಿನೋಟ

         ಶಿಕ್ಷಣದ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಮಾನವನಿಗೆ ಯೋಚನಾಶಕ್ತಿ, ಕಲಿಯುವ ಕಾತರ, ಹುಡುಕುವ ತವಕ ಮೂಡಿಬಂದ ದಿನಗಳಿಂದ ಶಿಕ್ಷಣದ ಪ್ರಕ್ರಿಯೆ ಹುಟ್ಟಿ ಬೆಳೆಯುತ್ತಾ ಸಾಗಿದೆ. ಅಂದಿನಿಂದ ಇಂದಿನವರೆಗೆ ಅನೇಕ ಶಿಕ್ಷಣ ಪದ್ಧತಿಗಳು ಕಾಲಗರ್ಭದಲ್ಲಿ ಹುದುಗಿ ಇತಿಹಾಸ ಸೇರಿವೆ. ಅವುಗಳನ್ನೆಲ್ಲಾ ಅವಲೋಕಿಸಿದಾಗ ಕಲಿಯುವವರಲ್ಲಿ ಕಲಿಕೆಯನ್ನು ಮೂಡಿಸಿ ಶಾಶ್ವತಗೊಳಿಸುವುದೇ ಪ್ರಮುಖ ಗುರಿಯಾಗಿರುವುದು ಕಂಡುಬರುತ್ತದೆ.

 ಸ್ವಾತಂತ್ರಕ್ಕಿಂತ (1947) ಮೊದಲ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯತ್ತ ಕಣ್ಣು ಹಾಯಿಸಿದರೆ ನಮಗೆ ಮೊದಲು ಗೋಚರಿಸುವುದು ‘ವೇದಗಳ ಕಾಲದ ಶಿಕ್ಷಣ’ ಅಂದಿನ ಶಿಕ್ಷಣ ಗುರುಕುಲಗಳಲ್ಲಿ ನಡೆಯುತ್ತಿದ್ದು, ಅದು ಸಮಾಜದ ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿತ್ತು. ಅಂದರೆ ಅಂದಿನ ಸಮುದಾಯದ ಮೇಲ್ವರ್ಗಗಳೆನಿಸಿಕೊಂಡ ಕ್ಷತ್ರಿಯರು, ಬ್ರಾಹ್ಮಣರು ಮತ್ತು ವೈಣಿಕರಿಗೆ ಮಾತ್ರ ಅದೂ ಕೇವಲ ಪುರುಷರಿಗೆ ಮಾತ್ರ ಮೀಸಲಾಗಿತ್ತು. ಮಹಿಳೆಯರು ಮತ್ತು ಶೂದ್ರರು ಶಿಕ್ಷಣದಿಂದ ವಂಚಿತರಾಗಿದ್ದರು. ಕ್ಷತ್ರಿಯರಿಗೆ ಶಸ್ತ್ರಾಭ್ಯಾಸ, ಗಜಶಾಸ್ತ್ರ ಮತ್ತು ರಾಜನೀತಿ ಶಾಸ್ತ್ರಗಳು ಮೀಸಲಾಗಿದ್ದರೆ, ಬ್ರಾಹ್ಮಣರಿಗೆ ವೇದ ಮತ್ತು ಉಪನಿಷತ್ತುಗಳ ಅಧ್ಯಯನ ಹಾಗೂ ಪಠಣ, ಹಾಗೂ ವೈಣಿಕರಿಗೆ ವಿಜ್ಞಾನ ಮತ್ತು ಗಣಿತಶಾಸ್ತ್ರ ಮೀಸಲಾಗಿತ್ತು. ಹೀಗೆ ಅಂದಿನ ಶಿಕ್ಷಣವು ನಿರ್ದಿಷ್ಟ ವ್ಯಕ್ತಿಗಳಿಗೆ, ನಿರ್ದಿಷ್ಟ ವಿಷಯಗಳಿಗೆ ಮಾತ್ರ ಸೀಮಿತಗೊಂಡಿತ್ತು. ‘ಮನುಸ್ಮøತಿ’ಯ ಪ್ರಕಾರ ಕೆಳಜಾತಿಯವರು ಮತ್ತು ಮಹಿಳೆಯರನ್ನು ಶಿಕ್ಷಣದಿಂದ ದೂರವಿಡಲಾಗಿತ್ತು. ಅವರು ಶಿಕ್ಷಣ ಪಡೆಯುವುದು ಅಪರಾಧವಾಗಿತ್ತು. ವೇದಗಳ ಕಾಲದ ಕೊನೆಗೆ ಈ ಕಟ್ಟುಪಾಡುಗಳಲ್ಲಿ ಸ್ವಲ್ಪ ಬದಲಾವಣೆಯಾಗಿ ಮಹಿಳೆಯರೂ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಲಾಯಿತು.

ಬ್ರಿಟಿಷರು ಭಾರತಕ್ಕೆ ಬಂದ ಸಂದರ್ಭದ ಶಿಕ್ಷಣದಲ್ಲಿಯೂ ಯಾವ ಮಹತ್ತರವಾದ ಬದಲಾವಣೆಗಳೇನೂ ಸಂಭವಿಸಲಿಲ್ಲ. ಈ ಸಮಯದಲ್ಲಿ ಶಿಕ್ಷಣದ ಮೇಲಿನ ನಿರ್ಬಂಧಗಳು ಸ್ವಲ್ಪ ಸಡಿಲಗೊಂಡವಾದರೂ ಕೆಳವರ್ಗದವರು, ಮಹಿಳೆಯರು ಶಿಕ್ಷಣ ಪಡೆಯುವಲ್ಲಿ ಹೆಚ್ಚಿನ ಆಸಕ್ತಿ ತೋರಲಿಲ್ಲ. ಬ್ರಿಟಿಷರು ಶಿಕ್ಷಣ ಕ್ಷೇತ್ರದ ಮೇಲೆ ತಮ್ಮ ಹಿಡಿತ ಸಾಧಿಸಿದ ಮೇಲೆ ತಮ್ಮ ಆಡಳಿತಕ್ಕನುಗುಣವಾಗುವಂತಹ ಶಿಕ್ಷಣವನ್ನು ನೀಡಿದರು. ಆದರೆ ಅದು ಜನರಿಗಾಗಲೀ, ಜನಸಮುದಾಯದ ಏಳಿಗೆಗಾಗಲೀ ಸಹಕಾರಿಯಾಗಲಿಲ್ಲ. 

1950ರಲ್ಲಿ ಸಂವಿಧಾನದ ಮೂಲಕ ನಮ್ಮ ದೇಶವು ಪ್ರಜಾಪ್ರಭುತ್ವದ ಆಶೋತ್ತರಗಳನ್ನು ಘೋಷಿಸಿಕೊಂಡು ಶಿಕ್ಷಣದ ಸಾರ್ವತ್ರೀಕರಣದ ಕನಸನ್ನು ಕಂಡಿತು. ಶಿಕ್ಷಣವು ಸಾರ್ವತ್ರೀಕರಣಗೊಳ್ಳದಿದ್ದರೆ ‘ಮನುಷ್ಯರೆಲ್ಲ ಹುಟ್ಟಿನಿಂದ ಸಮಾನರು’ ಎಂಬ ತತ್ವದ ಆಧಾರದ ಮೇಲೆ ರೂಪಿತಗೊಂಡ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅರ್ಥವಿಲ್ಲವೆಂಬುದನ್ನು ತಿಳಿದ ಅಂದಿನ ರಾಷ್ಟ್ರನಾಯಕರು, ತತ್ವಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರು ಶಿಕ್ಷಣದ ಸಾರ್ವತ್ರೀಕರಣವನ್ನು ಸಾಧಿಸುವ ಗುರಿ ಹೊಂದಿದ್ದರು. ಇದರಿಂದ ಸಮುದಾಯದ ಎಲ್ಲಾ ಜನರಿಗೂ ಹೆಣ್ಣು-ಗಂಡು ಎಂಬ ಬೇಧವಿಲ್ಲದೇ (ಅವರಿಗೆ ಇಷ್ಟವಾದ) ಶಿಕ್ಷಣ ಪಡೆಯುವ ಅವಕಾಶ ದೊರೆಯಿತು. ಅಂದಿನಿಂದ ಇಂದಿನವರೆಗೆ ಸಮಾಜದ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ದೊರೆಯುತ್ತಿದೆಯಾದರೂ ಇನ್ನೂ ನಾವು ತಲುಪಿಲ್ಲ. ಸರ್ಕಾರವು 6-14 ವಯೋಮಾನದ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಪ್ರಯತ್ನಗಳಂತೂ ಮುಂದುವರಿಯುತ್ತಿವೆ.

ಪ್ರಜಾಪ್ರಭುತ್ವ ವ್ಯವಸ್ಥೆಯು ಜಾರಿಗೆ ಬಂದು ಐದು ದಶಕಗಳು ಕಳೆದರೂ, ನಮ್ಮಲ್ಲಿ ಇನ್ನೂ ಪಾಳೆಗಾರಿಕೆ ಸಮಾಜ ವ್ಯವಸ್ಥೆ (ಈeuಜಚಿಟism) ಯ ಲಕ್ಷಣಗಳು ಮರೆಯಾಗಿಲ್ಲ. ಭೂಮಿ ಅಥವಾ ಆಸ್ತಿ ಕೆಲವೇ ಶ್ರೀಮಂತರ ಕೈಯಲ್ಲಿ ಕೇಂದ್ರೀಕೃತವಾಗಿದೆ. ಚಾಮರಾಜನಗರ, ಮಂಡ್ಯ, ಬಳ್ಳಾರಿ, ಕೋಲಾರ, ರಾಯಚೂರು ಹೀಗೆ ಅನೇಕ ಜಿಲ್ಲೆಗಳಲ್ಲಿ ಈಗಲೂ ಜಾರಿಯಲ್ಲಿರುವ ಪಾಳೆಗಾರಿಕೆ ಪದ್ಧತಿಯಿಂದ ಶಿಕ್ಷಣ ಕುಂಟಿತಗೊಳ್ಳುತ್ತಿದೆ. ಬಡತನವೆಂಬ ಮಾರಿಯು ಶಿಕ್ಷಣ ಕ್ಷೇತ್ರಕ್ಕೆ ಪೆಂಡಭೂತವಾಗಿ ಕಾಡುತ್ತಿದೆ.

ಆಡಳಿತಶಾಹಿಯ ಅಧಿಕಾರ ಕೇಂದ್ರೀಕರಣ ವ್ಯವಸ್ಥೆಯೂ ಸಹ ಶಿಕ್ಷಣ ಕ್ಷೇತ್ರಕ್ಕೆ ಅಡ್ಡಿಗಲ್ಲಾಗಿದೆ. ಅಂದರೆ ಕೇಂದ್ರ ಸರ್ಕಾರವು ಎನ್.ಸಿ.ಇ.ಆರ್.ಟಿ ಮೂಲಕ, ರಾಜ್ಯ ಸರ್ಕಾರವು ಡಿ.ಎಸ್.ಇ.ಆರ್.ಟಿ ಮೂಲಕ ಅವರ ಪರಿಕಲ್ಪನೆಗಳನ್ನು ಧರಿಸಿದ ಪಠ್ಯ ಚೌಕಟ್ಟು ರೂಪಿಸಿ ಸಿದ್ಧಪಡಿಸುತ್ತಿರುವುದು ಆಡಳಿತ ವ್ಯವಸ್ಥೆಯ ಪ್ರತಿರೂಪ. ಇತ್ತೀಚಿನ ಶಿಕ್ಷಣವು ಶಿಕ್ಷಕರಿಗೆ ಪ್ರತಿಬಂಧಕಾಜ್ಞೆಗಳನ್ನು ಹೇರುತ್ತಿದೆ. ಇದನ್ನೇ ಕಲಿಸಬೇಕು, ಹೀಗೇ ಕಲಿಸಬೇಕು, ಇಷ್ಟೇ ಕಲಿಸಬೇಕು, ಹೀಗೇ ಇರಬೇಕು ಎಂಬಿತ್ಯಾದಿ ಹೆಚ್ಚಿನ ಹೊರೆ ಶಿಕ್ಷಕನ ಮೇಲಿದೆ. ಆದರೆ ಕಲಿಸುವವರಿಗೆ ಕಲಿಸುವ ಕ್ರಿಯೆಯಲ್ಲಿನ ತಮ್ಮದೇ ಆದ ಸ್ವಾತಂತ್ರ್ಯಕ್ಕೆ ಕಿಲುಬು ಕಾಸಿನ ಇಮ್ಮತ್ತಿಲ್ಲದಂತಾಗಿದೆ. ಇಂದಿನ ಶಿಕ್ಷಣ ಶಿಕ್ಷಕರಿಗೆ ಕುದುರೆ ಲಗಾಮಿನಂತಾಗಿದೆ.

ಇನ್ನು ಶಿಕ್ಷಕರಾದ ನಮ್ಮಲ್ಲೂ ಸಹ ಅರೆಪಾಳಿಗಾರಿಕೆ ಪ್ರವೃತ್ತಿಗಳು ಮನೆಮಾಡಿವೆ. ಅಂದರೆ ಮಕ್ಕಳು ಮತ್ತು ಶಿಕ್ಷಕರ ನಡುವಿನ ಮುಕ್ತ ಸಂವಹನಕ್ಕೆ ಅವಕಾಶವಿಲ್ಲದಂತಾಗಿದೆ. ನಾವು ಮಕ್ಕಳನ್ನು ಪ್ರಶ್ನಿಸಲು ಬಿಡುತ್ತಿಲ್ಲ. ಅವರದೇ ಆದ ಕಲಿಕಾ ಸ್ವಾತಂತ್ರ್ಯವನ್ನು ನಾವು ಕಿತ್ತುಕೊಳ್ಳುತ್ತಿದ್ದೇವೆ. ಇಂದು ಮಗು-ಕೇಂದ್ರಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದೆ ಎಂದು ಹೇಳುತ್ತೇವೆ. ಆದರೆ ನಮ್ಮ ಎಷ್ಟು ಶಾಲೆಗಳಲ್ಲಿ ಮಕ್ಕಳಿಗೆ ಮುಕ್ತ ಅವಕಾಶಗಳನ್ನು ಕಲ್ಪಸಿದ್ದೇವೆ? ಶಿಸಿನ ಹೆಸರಿನಲ್ಲಿ ಮಕ್ಕಳ ವೈಯಕ್ತಿಕತೆ ಮತ್ತು ಸ್ವತಂತ್ರ ಮನೋಭಾವವನ್ನು ಕಸಿದುಕೊಳ್ಳುತ್ತಿದ್ದೇವೆ.

ಇಂದಿನ ಶಿಕ್ಷಣವು ಅನೇಕ ಮುಕ್ತ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ. ಆದರೆ ಅದನ್ನು ಕೊಡುವವರು ಮತ್ತು ಪಡೆದುಕೊಳ್ಳುವವರ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಶಿಕ್ಷಣ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು ಎಂದು ಹೇಳುತ್ತೇವೆ. ಆದರೆ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬರ ಕರ್ತವ್ಯವು ಹೌದು. ಅದನ್ನು ಸಮುದಾಯದ ಎಲ್ಲಾ ವರ್ಗವೂ ಅರಿತು, ಮಕ್ಕಳ ಇಷ್ಟಪಡುವಂತಹ ಶಿಕ್ಷಣ ನೀಡಬೇಕು. ಶಿಕ್ಷಣ ಕ್ಷೇತ್ರದಲ್ಲಿನ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಇನ್ನೊಬ್ಬರ ಮೇಲೆ ಹಾಕದೆ ತಾವೇ ನಿಭಾಯಿಸಿಕೊಂಡು ಹೋಗಬೇಕು. ನಾವಿಂದು ವಾಸ್ತವಿಕತೆಯನ್ನು ಮರೆತು ಆದರ್ಶಗಳಲ್ಲಿ ತೇಲಾಡುತ್ತಿದ್ದೇವೆ. ಆಕಾಶದಲ್ಲಿ ಹಾರಾಡುವ ಬದಲು ನಿಂತ ನೆಲವನ್ನು ತಿಳಿಯಲು ಪ್ರಯತ್ನಿಸಬೇಕು. ಶಿಕ್ಷಣದಲ್ಲಿ ಕನಸು ಕಾಣುವುದರ ಜೊತೆಗೆ ಪರಿಸ್ಥಿಯನ್ನು ಅರ್ಥಮಾಡಿಕೊಳ್ಳವ ಪ್ರಯತ್ನವಾಗಬೇಕು. ಎಲ್ಲಿಯವರೆಗೆ ಪ್ರಾಥಮಿಕ ಶಿಕ್ಷಣ ಬಲವಾಗುವುದಿಲ್ಲವೋ ಅಲ್ಲಿಯವರೆಗೆ ದೇಶದ ಪ್ರಗತಿ ಕುಂಟುತ್ತಾ ಸಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ

‘ಟೀಚರ್’ ಫೆಬ್ರವರಿ 2006
- ಆರ್.ಬಿ.ಗುರುಬಸವರಾಜ

April 20, 2014

ಮಂಚೂಣಿಯಲ್ಲಿನ ಮಹಿಳಾ ಮಣಿಗಳು

ಮಂಚೂಣಿಯಲ್ಲಿನ ಮಹಿಳಾ ಮಣಿಗಳು
           21ನೇ ಶತಮಾನದ ಮಹಿಳೆ ಎಲ್ಲಾ ರಂಗಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಮಾರ್ಚ ತಿಂಗಳು ಬಂತೆಂದರೆ ಸಾಕು ಎಲ್ಲಾ ಮಹಿಳಾ ಸಂಘಟನೆಗಳಲ್ಲೂ ಸಂಚಲನೆಯುಂಟಾಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲ್ಪಡುವ ಮಹಿಳಾ ದಿನಾಚರಣೆ ನಿಮಿತ್ತ ಈ ಲೇಖನ.
ಅಂದಿನ ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇವಲ ಪುರುಷರಿಗೆ ಮಾತ್ರ ಮೀಸಲಾಗಿತ್ತು. ಆದರೆ ಇಂದು ಆ ಕ್ಷೇತ್ರದಲ್ಲಿ ಮಹಿಳೆಯ ಸಾಧನೆ ಅದ್ವಿತೀಯ. ಅಂತಹ ವಿಶಿಷ್ಟ ಸಾಧನೆಗೈದ ಕೆಲವು ಮಹಿಳಾ ವಿಜ್ಞಾನಿಗಳ ಕಿರು ಪರಿಚಯ ಇಲ್ಲಿದೆ. 

ಹಿಪಾಥಿಯಾ(370-415) : ರೋಮನ್ ದೇಶದ ಗಣಿತಜ್ಞೆ ಹಾಗೂ ಖಗೋಳ ವಿಜ್ಞಾನಿ ಹಿಪಾಥಿಯಾ ಇತಿಹಾಸದಲ್ಲಿ ಮೊದಲ ಮಹಿಳಾ ವಿಜ್ಞಾನಿ ಎಂಬ ಪಟ್ಟ ಧರಿಸಿದ್ದಾಳೆ. ಶಿಕ್ಷಣದಿಂದ ಮಹಿಳೆಯರನ್ನು ದೂರವಿರಿಸಿದ್ದ ಕಾಲದಲ್ಲಿ ಗಣಿತ, ಖಗೋಳ ವಿಜ್ಞಾನ ಹಾಗೂ ಪರಿಸರ ವಿಜ್ಞಾನಗಳನ್ನು ಕಲಿತು ಅಲೆಕ್ಸಾಂಡ್ರಿಯಾ ವಿಶ್ವ ವಿದ್ಯಾಲಯದಲ್ಲಿ ಗಣಿತ ಮತ್ತು ತತ್ವಶಾಸ್ತ್ರ ಉಪನ್ಯಾಸಕಿಯಾಗಿ ಆಯ್ಕೆಯಾದಳಯ. ನಂತರ ಅಲ್ಲಿಯ ಮುಖ್ಯಸ್ಥಳಾಗಿ ಸೇವೆ ಸಲ್ಲಿಸಿದಳು. 
ಹಿಪಾಥಿಯಾ ಗಣಿತ ಕುರಿತಾಗಿ ಅನೇಕ ಪುಸ್ತಕಗಳನ್ನು ಬರೆದಳು. ತನ್ನ ಬೋಧನೆಗೆ ಅಗತ್ಯವಿರುವ ಉಪಕರಣಗಳನ್ನು ತಾನೇ ತಯಾರಿಸಿಕೊಳ್ಳುತ್ತಿದ್ದಳು. ಇದರಿಂದ ಅನೇಕ ಹೊಸ ಹೊಸ ಉಪಕರಣಗಳನ್ನು ಕಂಡುಹಿಡಿಯಲು ಸಾಧ್ಯವಾಯಿತು. ವೈವಿಧ್ಯಮಯ, ಕ್ರಿಯಾತ್ಮಕ ನಾವೀನ್ಯ ತಂತ್ರಗಾರಿಕೆಯ ಬೋಧನಾ ವಿಧಾನಗಳಿಂದ ಹೊಟ್ಟೆಕಿಚ್ಚು ಪಟ್ಟ ಆಡಳಿತ ಮಂಡಳಿ ಇವಳನ್ನು ಕೊಲೆ ಮಾಡಿಸಿದ್ದು ದುರಂತ. ಅಲ್ಲದೇ ಅವಳ ಎಲ್ಲಾ ಬರಹಗಳನ್ನು ನಾಶ ಮಾಡಿದ್ದು ಇನ್ನೂ ಘೋರ ದುರಂತ. ಆದರೂ ಇತಿಹಾಸದಲ್ಲಿ ಅವಳ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.

ಮರಿಯಾ ಮೈಕೆಲ್(1818-1889) : ಖಗೋಳ ಶಾಸ್ತ್ರಜ್ಞೆಯಾದ ಮರಿಯಾ ಯುನೈಟೆಡ್ ಸ್ಟೇಟ್ಸ್‍ನಲ್ಲಿ ಜನಿಸಿದಳು. ಕೆಲವೇ ವಿಶ್ವ ವಿದ್ಯಾಲಯಗಳು ಮಹಿಳೆಯರಿಗೆ ಪ್ರವೇಶ ನೀಡುತ್ತಿದ್ದ ಕಾಲದಲ್ಲಿ ಬಡತನದಿಂದಾಗಿ ವಿಶ್ವ ವಿದ್ಯಾಲಯದಲ್ಲಿ ಪ್ರವೇಶ ದೊರೆಯದೇ ಕಂಗಾಲಾದಳು. ಆದರೂ ದೃತಿಗೆಡದೇ ತನ್ನ ಸ್ವ-ಪರಿಶ್ರಮದಿಂದ ಅಬ್ಯಾಸ ಮಾಡಿ ಗ್ರಂಥಾಲಯವೊಂದರಲ್ಲಿ ಕೆಲಸಕ್ಕೆ ಸೇರಿದಳು. ಅಲ್ಲಿಂದ ಅವಳ ಜೀವನದ ಹೊಸ ಅಧ್ಯಾಯ ಪ್ರಾರಂಭವಾಯಿತು. ಅಲ್ಲಿ ವೈವಿಧ್ಯಮಯ ಪುಸ್ತಕಗಳನ್ನು ಓದಲು ಅವಕಾಶ ದೊರೆಯಿತು. ಮರಿಯಾ ಗಣಿತದಲ್ಲಿ ತುಂಬಾ ಪ್ರತಿಭೆ ಉಳ್ಳವಳಾಗಿದ್ದು, ಖಗೋಳ ಶಾಸ್ತ್ರಜ್ಞನಾದ ತಂದೆಗೆ ನಕ್ಷತ್ರಗಳ ದೂರ ಅಳೆಯಲು ಸಹಾಯ ಮಾಡುತ್ತಿದ್ದಳು.
1847ರಲ್ಲಿ ಮರಿಯಾ ದೂರದರ್ಶಕದ ಸಹಾಯದಿಂದ ಬಿಳಿಯದಾದ ಆಕಾಶಕಾಯವೊಂದನ್ನು ಪತ್ತೆ ಹಚ್ಚಿದಳು. ಅದುವರೆಗೂ ಯಾರೂ ಪತ್ತೆ ಹಚ್ಚಿರದ ಧೂಮಕೇತು ಒಂದನ್ನು ಪತ್ತೆ ಹಚ್ಚಿದ್ದಳು. ಅನಂತರದಲ್ಲಿ ಅವಳು ಜಗದ್ವಿಖ್ಯಾತಿಯಾದಳು. ಪ್ರಪಂಚದ ನಾನಾ ಕಡೆ ಪ್ರವಾಸ ಮಾಡಿ ಅನೇಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿದಳು. ಸೂರ್ಯನ ಮೇಲ್ಮೈ ಛಾಯಾ ಚಿತ್ರ ತೆಗೆದವರಲ್ಲಿ ಮರಿಯಾ ಮೊದಲಿಗಳು. ಜೀವನದುದ್ದಕ್ಕೂ ಇತರೆ ಮಹಿಳೆಯರು ಉನ್ನತ ಮಟ್ಟಕ್ಕೆ ಬೆಳೆಯಲು ಪ್ರೇರಣೆ ನೀಡಿದಳು.

ಫ್ಲಾರೆನ್ಸ್ ನೈಟಿಂಗೇಲ್(1820-1910) : ಇಂಗ್ಲೆಂಡ್‍ನಲ್ಲಿ ಆಸ್ಪತ್ರೆಗಳೆಂದರೆ ರೋಗ ಹರಡುವ ತಾಣಗಳಂತಿದ್ದ ಕಾಲದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಬಿರುಗಾಳಿಯಾಗಿ ಬಂದು ವೈದ್ಯಕೀಯ ಕೊಳೆಯನ್ನೆಲ್ಲಾ ತೆಗೆದಳು. ಪಾಲಕರ ವಿರೋಧದ ನಡುವೆಯೂ ಜರ್ಮನಿಗೆ ತೆರಳಿ ನರ್ಸಿಂಗ್‍ನಲ್ಲಿ ಹೆಚ್ಚಿನ ತರರಬೇತಿ ಪಡೆದಳು. ಕ್ರಿಮಿಯನ್ ವಾರ್ ನಡೆದ ಸಂಧರ್ಭದಲ್ಲಿ ಸೈನಿಕ ಆಸ್ಪತ್ರೆಯ ಮೇಲ್ವಿಚಾರಕಿಯಾಗಿದ್ದಳು. ಪರಿಪೂರ್ಣವಾಗಿ ನರ್ಸ ತರಬೇತಿ ಪಡೆದ ನಂತರವೇ ಆಸ್ಪತ್ರಗಳನ್ನು ಶೂಚಿಗೊಳಿಸುವ ಕಾರ್ಯ ಕೈಗೊಂಡಳು. ಆಸ್ಪತ್ರೆಗಳನ್ನು ಸ್ವಚ್ಚ ಮಂದಿರಗಳನ್ನಾಗಿಸಲು ಶ್ರಮಿಸಿದಳು. ಸೈನಿಕರಿಗೆ ವಿಶೇಷ ಗಮನ ನೀಡಿ ಉಪಚರಿಸುತ್ತಿದ್ದಳು. ಜರ್ಮನಿಯಿಂದ ಹಿಂದಿರುಗಿ ಬಂದ ಮೇಲೆ ನರ್ಸಿಂಗ್ ಶಾಲೆ ತೆರೆದಳು. ಇಂಗ್ಲೆಂಡ್ ಅಲ್ಲದೇ ಭಾರತೀಯ ಆಸ್ಪತ್ರೆಗಳ ಪರಿಸ್ಥಿತಿಗಳನ್ನು ಬದಲಾಯಿಸಲು ಶ್ರಮಿಸಿದಳು. ಉತ್ತಮ ನರ್ಸಿಂಗ್ ಸೇವೆ ಮತ್ತು ಕೌಶಲ್ಯಾಭಿವೃದ್ದಿ ಕುರಿತು ಅನೇಕ ಪುಸ್ತಕಗಳನ್ನು ಬರೆದಳು. ಅಲ್ಲದೇ ಸಂಘಟನೆ, ಪರಿವೀಕ್ಷಣೆ, ಸ್ವಚ್ಚತೆ, ಹಾಗೂ ರೋಗಿಗಳೊಂದಿಗಿನ ಒಡನಾಟ ಕುರಿತ ಪುಸ್ತಕಗಳನ್ನೂ ಬರೆದಳು.

ಮಾರ್ಗರೇಟ್ ಸ್ಯಾಂಗರ್(1879-1966) : ಅಮೇರಿಕಾದಲ್ಲಿ ನರ್ಸ ಆಗಿದ್ದ ಮಾರ್ಗರೇಟ್ ತನ್ನ ಸೇವೆಯಲ್ಲಿ ಶ್ರೀಮಂತ ಕುಟುಂಬಗಳಿಗಿಂತ ಬಡ ಕುಟುಂಬಗಳು ಹೆಚ್ಚು ಮಕ್ಕಳನ್ನು ಹೊಂದಿರುವುದನ್ನು ಪತ್ತೆ ಹಚ್ಚಿದಳು. ತಮ್ಮ ಮಕ್ಕಳ ಪಾಲನೆ ಪೋಷಣೆ, ಆರೋಗ್ಯಕ್ಕಾಗಿ ಹಣದ ಅಭಾವ ಎದುರಿಸುತ್ತಿದ್ದ ಬಡ ಕುಟುಂಬಗಳನ್ನು ದಿನವಿಡೀ ನೋಡುತ್ತಿದ್ದಳು. ಬಡ ಹೆಣ್ಣು ಮಕ್ಕಳು ಪದೆ ಪದೇ ಗರ್ಭ ಧರಿಸುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸುವ ಅಂದರೆ ಜನನ ಪ್ರಮಾಣ ಕಡಿಮೆ ಮಾಡುವ ಸಲುವಾಗಿ ತನ್ನೆಲ್ಲ ಆಸ್ತಿ ಮಾರಿಕೊಂಡು ಗಂಡ ಮತ್ತು ಮಕ್ಕಳೊಂದಿಗೆ ಯುರೋಪ್‍ಗೆ ತೆರಳಿದಳು. 
ಯುರೋಪ್‍ನಿಂದ ಮರಳಿ ಬಂದ ಮೇಲೆ ಮಹಿಳೆಯರು ಸ್ವಾವಲಂಬಿಗಳಾಗಲು ಮತ್ತು ಚಿಕ್ಕ ಕುಟುಂಬ ಹೊಂದಲು ಬೇಕಾದ ಶಿಕ್ಷಣವನ್ನು ಬಡವರಿಗೆ ನೀಡಿದಳು. ಅದಕ್ಕಾಗಿ ಕ್ಲಿನಿಕ್ ತೆರೆದು ಬಡ ಜನರಿಗೆ ಆರೋಗ್ಯ ಶಿಕ್ಷಣ ನೀಡುತ್ತಾ ಜನನ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಿದಳು. ಇದು ಆ ಸಮಯದಲ್ಲಿ ಕಾನೂನಿಗೆ ವಿರುದ್ದವಾದುದು ಆಗಿತ್ತು. ಆ ಕಾರಣಕ್ಕಾಗಿ ಅವಳನ್ನು ಅನೇಕ ಬಾರಿ ಬಂಧಿಸಲಾಗಿತ್ತು. ಆದರೂ ಹಠಬಿಡದ ತ್ರಿವಿಕ್ರಮನಂತೆ ತನ್ನ ವಿಚಾರಗಳನ್ನು ಜನರಿಗೆ ತಿಳಿಸುತ್ತಾ ಪ್ರಪಂಚದ ನಾನಾ ಕಡೆಗಳಲ್ಲಿ ಪ್ರವಾಸ ಮಾಡುತ್ತಾ ಬಡಜನರಿಗೆ ಉಪದೇಶ ನೀಡಿದಳು. ನಂತರದ ದಿನಗಳಲ್ಲಿ ಅವಳು ಸಲ್ಲಿಸಿದ ಸೇವೆಯನ್ನು ಗಮನಿಸಿ ಪಾಲಕರ ಮೊದಲ ಅಧ್ಯಕ್ಷಿಣಿಯನ್ನಾಗಿ ಆಯ್ಕೆ ಮಾಡಲಾಯಿತು.

ಗ್ರೇಸ್ ಹೂಪರ್(1906-1992) : ಸಾಧನೆಗೆ ಅಂಗವೈಫಲ್ಯ ಕಾರಣವಲ್ಲ ಎಂಬುದನ್ನು ಸಾಧಿಸಿ ತೋರಿಸಿದ ಧೀಮಂತ ಮಹಿಳೆ  ಅಮೇರಿಕಾದ ಗ್ರೇಸ್ ಹೂಪರ್. ತಮ್ಮ ಮಗಳಿಗೆ ಅಂಗವೈಫಲ್ಯದ ಪರಿಣಾಮ ಕಿಂಚಿತ್ತೂ ಗೊತ್ತಾಗದ ರೀತಿಯಲ್ಲಿ ತಂದೆ-ತಾಯಿಗಳು ಅವಳನ್ನು ಬೆಳೆಸಿದರು. ತಾಯಿಯಿಂದ ಪ್ರೀತಿ ವಾತ್ಸಲ್ಯಗಳ ಜೊತೆಗೆ ಗಣಿತವನ್ನು ಹಾಗೂ ತಂದೆಯಿಂದ ಕಷ್ಟಗಳಿಂದ ಹೊರಬರುವ ಕೌಶಲ್ಯವನ್ನು ಕಲಿತಳು. ಅಂದಿನ ಕಾಲದಲ್ಲಿ ವಾಸ್ಸರ್ ಕಾಲೇಜ್ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡುತ್ತಿದ್ದ ಏಕೈಕ ಕಾಲೇಜ್ ಎಂದು ಪ್ರಸಿದ್ದವಾಗಿತ್ತು. ಆ ವಾಸ್ಸರ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿ ನಂತರ ಅಲ್ಲಿಯೇ ಗಣಿತ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದಳು.
ಪ್ರತಿಷ್ಟಿತ ಯಾಲೆ ವಿಶ್ವ ವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದಳು. ಪ್ರಪಂಚದ ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್ ನೌಕಾಪಡೆಗೆ ಸೇರಿದಳು. ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಾ ಹಾರ್ವರ್ಡ ವಿಶ್ವ ವಿದ್ಯಾಲಯದಲ್ಲಿ ಸಂಶೋಧನೆ ಮುಂದುವರೆಸಿದಳು. ಈ ಸಂಶೋಧನೆಯಿಂದ ಮೊದಲ ಪೀಳಿಗೆಯ ಕಂಪ್ಯೂಟರ್ ಅಭಿವೃದ್ದಿ ಪಡಿಸಿದಳು. ಮೊದಲ ಕಂಪ್ಯೂಡರ್ ಕಾರ್ಯ ತತ್ರಾಂಶ ರೂಪಿಸಿದವರಲ್ಲಿ ಗ್ರೇಸ್ ಮೊದಲಿಗಳು. ಪ್ರಾರಂಭದಲ್ಲಿ ಕಂಪ್ಯೂಟರ್ ಭಾಷೆ ಅತ್ಯಂತ ಸಂಕೀರ್ಣವಾಗಿತ್ತು. ಇದನ್ನು ಗಮನಿಸಿದ ಗ್ರೇಸ್ ಜನರು ಬಳಸಲು ಅನುಕೂಲಕರವಾದಂತಹ ಕಂಪ್ಯೂಟರ್ ರೂಪಿಸಬಯಸಿದಳು. ಡಾ//ಗ್ರೇಸ್ COBOL ಎಂಬ ಕಂಪ್ಯೂಟರ್ ತತ್ರಾಂಶ ಭಾಷೆ ಅಭಿವೃದ್ದಿ ಪಡಿಸಿದಳು. COBOL ಈಗಲೂ ಬಳಕೆಯಲ್ಲಿರುವ ಕಂಪ್ಯೂಟರ್ ತತ್ರಾಂಶ. ಅವಳ ಸಾಧನೆಗಾಗಿ ಯು.ಎಸ್ ವಿಶ್ವದ ನೌಕಾಪಡೆಯ ಮೊದಲ ಮಹಿಳಾ ಅಡ್ಮಿರಲ್ ಆಗಿ ನೇಮಿಸಿತು.

'ಟೀಚರ್' ಮಾರ್ಚ 2014
ಆರ್.ಬಿ.ಗುರುಬಸವರಾಜ. 

ಮಂಚೂಣಿಯಲ್ಲಿನ ಮಹಿಳಾ ಮಣಿಗಳು

ಮಂಚೂಣಿಯಲ್ಲಿನ ಮಹಿಳಾ ಮಣಿಗಳು

ಆತ್ಮೀಯರ ಆಹ್ವಾನದ ಮೇರೆಗೆ ತಾಲೂಕು ಮಟ್ಟದ ಬೋಧನೆ-ಕಲಿಕೋಪರಣಗಳ (ಟಿ.ಎಲ್.ಎಂ) ಮೇಳವೊಂದನ್ನು ವೀಕ್ಷಿಸಲು ಹೋಗಿದ್ದೆ. ಅಲ್ಲಿನ ಟಿ.ಎಲ್.ಎಂ.ಗಳು ನಿಜಕ್ಕೂ ಬಹಳ ಉತ್ತಮವಾಗಿದ್ದವು. ತಯಾರಿಸಿದ ಶಿಕ್ಷಕರು ಅತ್ಯಂತ ಕಾಳಜಿ ವಹಿಸಿ ಅವುಗಳನ್ನು ಜೋಡಿಸಿಟ್ಟಿದ್ದರು. ಅವುಗಳಲ್ಲಿ ಕೆಲವನ್ನು ತಾವೇ ಸ್ವತಃ ತಯಾರಿಸಿದ್ದರು. ಇನ್ನು ಕೆಲವನ್ನು ಬೇರೆಡೆಯಿಂದ ಸಂಗ್ರಹಿಸಿದ್ದರು. ಅವುಗಳನ್ನು ನೋಡಿದಾಗ ನಾವ್ಯಾಕೆ ವಿದ್ಯಾರ್ಥಿಗಳಾಗಬಾರದಿತ್ತು ಎಂದೆನಿಸಿತು.
ಅಮೂರ್ತ ಕಲ್ಪನೆಗಳನ್ನು ಮಕ್ಕಳಿಗೆ ಸುಲಭವಾಗಿ ಮೂರ್ತಗೊಳಿಸಲು ಟಿ.ಎಲ್.ಎಂ.ಗಳು ಬಹಳ ಪರಿಣಾಮಕಾರಿಯಾಗುತ್ತವೆ. ಶಿಕ್ಷಕರ ಶ್ರಮ ಕಡಿಮೆ ಮಾಡಿ ಮಕ್ಕಳ ಕಲಿಕೆ ಸರಳ, ಸುಗಮ, ಸಂತಸದಾಯಕ ಹಾಗೂ ಶಾಶ್ವತವಾಗಲು ಟಿ.ಎಲ್.ಎಂ.ಗಳು ಬಹಳ ಸಹಕಾರಿ.
ಈ ಪ್ರದರ್ಶನ ವೀಕ್ಷಿಸಿದ ನಂತರ ನನ್ನಲ್ಲಿ ಕೆಲವು ಪ್ರಶ್ನೆಗಳು ಉಧ್ಬವಿಸಿದವು. ಅವುಗಳಲ್ಲಿ ಮೊದಲನೆಯದು ಈ ಎಲ್ಲಾ ಟಿ.ಎಲ್.ಎಂ.ಗಳನ್ನು ತರಗತಿಯಲ್ಲಿ ಬಳಸಲು ಸಾಧ್ಯವೇ? ಎರಡನೆಯದು ನಿಜಕ್ಕೂ ಈ ಎಲ್ಲಾ ಟಿ.ಎಲ್.ಎಂ.ಗಳು ತರಗತಿಯಲ್ಲಿ ಬಳಕೆಯಾಗುತ್ತವೆಯಾ? ಈ ಎರಡೂ ಪ್ರಶ್ನೆಗಳು ನನ್ನನ್ನು ಗೊಂದಲಕ್ಕೀಡು ಮಾಡಿದವು.
ಮೊದಲನೆ ಪ್ರಶ್ನೆ ಕುರಿತು ವಿಶ್ಲೇಷಿಸುವುದಾದರೆ ಬಹುತೇಕ ಶಿಕ್ಷಕರು(ನನ್ನನ್ನೂ ಸೇರಿ) ಟಿ.ಎಲ್.ಎಂ.ಗಳನ್ನು ಬಳಸುತ್ತಿಲ್ಲ. ಇದಕ್ಕೆ ನಾವು ಹೇಳುವ ಕುಂಟು ನೆಪಗಳು ಅನೇಕ. ಅವೆಂದರೆ ಟಿ.ಎಲ್.ಎಂ.ಗಳ ಬಳಕೆಯಿಂದ ಪಾಠಗಳನ್ನು ನಿಗದಿತ ಅವಧಿಗೆ ಮುಗಿಸಲಾಗುವುದಿಲ್ಲ, ಬೇರೆ ಬೇರೆ ಕೆಲಸಗಳ ಒತ್ತಡದಿಂದ ಟಿ.ಎಲ್.ಎಂ.ಗಳನ್ನು ತಯಾರಿಸಲು ಆಗುತ್ತಿಲ್ಲ, ಎಷ್ಟೇ ಹೇಳಿದರೂ ಈ ಮಕ್ಕಳು ಕಲಿಯುವುದು ಅಷ್ಟಕಷ್ಟೇ. ಹೀಗೆ ನಾನಾ ಕಾರಣಗಳನ್ನು ಹೇಳುತ್ತೇವೆ.
ಎರಡನೇ ಪ್ರಶ್ನೆ ಕುರಿತು ವಿಶ್ಲೇಷಿಸುವುದಾದರೆ ಆ ಪ್ರದರ್ಶನದಲ್ಲಿದ್ದ ಬಹುತೇಕ ಟಿ.ಎಲ್.ಎಂ.ಗಳು ಕೇವಲ ಪ್ರದರ್ಶನಕ್ಕೆಂದು ತಯಾರಿಸಿದಂತಿದ್ದವು. ಹಾಗಾದರೆ ತರಗತಿಯಲ್ಲಿ ಬಳಸದೇ ಕೇವಲ ಪ್ರದರ್ಶನಕ್ಕೆಂದೋ ಅಥವಾ ಬೇರೆ ಯಾರಿಂದಲೋ ಶಭಾಷಗಿರಿ/ಪ್ರಶಸ್ತಿ ಗಿಟ್ಟಿಸುವುದಕ್ಕಾಗಿ ತಯಾರಿಸಿದ ಟಿ.ಎಲ್.ಎಂ.ಗಳು ನಿಜವಾದ ಟಿ.ಎಲ್.ಎಂ.ಗಳಾ? ಎಂಬುದು. 
ಆ ಪ್ರದರ್ಶನದ ಕೊನೆಗೆ ಇನ್ನೂ ಒಂದು ಮೋಜಿನ ಪ್ರಸಂಗ ನಡೆಯಿತು. ಅತ್ಯುತ್ತಮವಾದ ಟಿ.ಎಲ್.ಎಂ.ಗಳಿಗೆ ಪ್ರಥಮ ಸ್ಥಾನ ನೀಡಲಾಯಿತು. ಹೀಗೆ ಪ್ರಥಮ ಸ್ಥಾನ ಪಡೆದ ಶಿಕ್ಷಕರು ಟಿ.ಎಲ್.ಎಂ.ನಲ್ಲಿ ನಾನೇ ಫಸ್ಟ್ ಎಂದು ಹೇಳಿಕೊಳ್ಳುವ ಬದಲು ಎಲ್.ಟಿ.ಎಂ.(ಎಡಗೈ ಹೆಬ್ಬೆರಳು)ನಲ್ಲಿ ನಾನೇ ಫಸ್ಟ್ ಎಂದು ಹೇಳಿಕೊಂಡು ತಿರುಗಾಡಿದ್ದು ಆಯ್ಕೆ ಮಾಡಿದವರನ್ನು ಅಣಕಿಸುವಂತಿತ್ತು. ಹಾಗಾದರೆ ಟಿ.ಎಲ್.ಎಂ.ನ ಅರ್ಥ ಏನಾಯಿತು? ಸಿ.ಆರ್.ಸಿ, ಬಿ.ಆರ್.ಸಿ, ಡೈಯಟ್‍ಗಳು ಟಿ.ಎಲ್.ಎಂ. ತಯಾರಿಕೆ ಹಾಗೂ ಬಳಕೆ ಕುರಿತು ನಡೆಸಿದ ಕಾರ್ಯಾಗಾರಗಳ ಫಲವೇನಾಯಿತು? ಎಂಬ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು.
ರಾಜ್ಯದಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ(ಡಿ.ಪಿ.ಇ.ಪಿ) ಜಾರಿಗೆ ಬಂದ ನಂತರ ತರಗತಿಯಲ್ಲಿ ಚಟುವಟಿಕೆ ಆಧಾರಿತ ಬೋಧನೆ-ಕಲಿಕೆಗೆ ಒತ್ತು ನೀಡಲಾಯಿತು. ಅಂದಿನಿಂದ ಪಾಠೋಪಕರಣ ತಯಾರಿಕೆ ಮತ್ತು ಬಳಕೆಗಾಗಿ ಅನೇಕ ಹಂತದ ಕಾರ್ಯಾಗಾರಗಳು ನಡೆದವು. ಅದಕ್ಕಾಗಿ ಅನೇಕ ತರಬೇತಿ ಸಂಸ್ಥೆಗಳು ಹುಟ್ಟಿಕೊಂಡವು. ಇಷ್ಟೆಲ್ಲಾ ಆದಾಗ್ಯೂ ನಾವು ಟಿ.ಎಲ್.ಎಂ.ಗಳನ್ನು ಇನ್ನೂ ಮೀನಮೇಷ ಎಣಿಸುತ್ತಿದೇವೆ. 
ಪ್ರಾಥಮಿಕ ಶಾಲೆಗಳಲ್ಲಿ ಅದರಲ್ಲೂ ಕಿರಿಯ ಪ್ರಾಥಮಿಕ ತರಗತಿಗಳಲ್ಲಿ ಮೂಲ ಸಾಮಥ್ರ್ಯದ ಕಲ್ಪನೆ ಮೂಡಿಸಲು ಟಿ.ಎಲ್.ಎಂ.ಗಳ ಬಳಕೆ ತೀರಾ ಅವಶ್ಯಕತೆ ಇದೆ ಎಂಬುದರ ಅರಿವು ನಮಗಿದ್ದರೂ ನಾವ್ಯಾಕೆ ಟಿ.ಎಲ್.ಎಂ.ಗಳನ್ನು ಸರಿಯಾಗಿ ಬಳಸುತ್ತಿಲ್ಲ? ಟಿ.ಎಲ್.ಎಂ. ತಯಾರಿಸಲೆಂದೇ ಇಲಾಖೆ ನೀಡಿದ ಹಣ ಕೇವಲ ದಾಖಲೆಗಳಲ್ಲಿ ಮಾತ್ರ ಬಳಕೆಯಾಯಿತೇ? ಹಾಗಾದರೆ ನಾವು ಎಡವಿದ್ದೆಲ್ಲಿ? ವ್ಯವಸ್ಥೆಯ ಲೋಪವೇ? ಅಥವಾ ನಾವಿನ್ನೂ ಆ ವ್ಯವಸ್ಥೆಗೆ ಹೊಂದಿಕೊಳ್ಳದಿರುವುದೇ? ಇಂತಹ ಪ್ರಶ್ನೆಗಳಿಗೆ ನಾವಿನ್ನೂ ಸೂಕ್ತ ಉತ್ತರ ಕಂಡುಕೊಳ್ಳಬೇಕಾಗಿದೆ.
ಎಲ್ಲಾ ಶಿಕ್ಷಕರು ಟಿ.ಎಲ್.ಎಂ.ಬಳಸುತ್ತಿಲ್ಲ ಎಂದರೆ ತಪ್ಪಾಗುತ್ತದೆ. ಕೆಲವು ಉತ್ಸಾಹಿ ಶಿಕ್ಷಕರು ತರಗತಿ ಕೋಣೆಗೆ ತೆರಳುವ ಮುನ್ನ ಅಗತ್ಯವಿರುವ ಟಿ.ಎಲ್.ಎಂ.ಗಳನ್ನು ಪೂರ್ವಯೋಜನೆಯಂತೆ ತಯಾರಿಸಿಕೊಂಡು ಆಸಕ್ತಿಯಿಂದ ಬಳಸುತ್ತಾರೆ. ಆದರೆ ಟಿ.ಎಲ್.ಎಂ.ಗಳನ್ನು ಎಲ್ಲರೂ ಸರಿಯಾಗಿ ಬಳಸುವಂತಾದರೆ ನಮ್ಮ ಶಿಕ್ಷಣದ ಗುಣಮಟ್ಟವನ್ನು ಇನ್ನೂ ಹೆಚ್ಚಿಸಬಹುದಲ್ಲವೇ?

‘ಟೀಚರ್’ ಜನವರಿ 2009
ಆರ್.ಬಿ.ಗುರುಬಸವರಾಜ

ಶಿಕ್ಷಣ ಹಾಗೂ ಮಾನಸಿಕ ಒತ್ತಡ

ಶಿಕ್ಷಣ ಹಾಗೂ ಮಾನಸಿಕ ಒತ್ತಡ

ಶಿಕ್ಷಣವೆಂಬುದು ನಿಂತ ನೀರಲ್ಲ. ಅದು ಚಲನಶೀಲವಾದುದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಶಿಕ್ಷಣದಲ್ಲಾಗುವ ಬದಲಾವಣೆಗಳು ಹೊಸದೇನಲ್ಲ. ಇಂದು ಹೊಸತೆನಿಸಿದ ವಿಷಯಗಳು ನಾಳೆ ಹಳತಾಗಬಹುದು. ಹೊಸ ಪದ್ದತಿ ಜಾರಿಗೆ ಬಂದಾಗ ಅದಕ್ಕೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಕಷ್ಟವಾದರೂ, ನಷ್ಟವಾದರೂ ಅದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾದಾಗ, ಹೊಂದಿಕೊಳ್ಳಬೇಕಾದವರು ಮಾನಸಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಹಳೆಯದನ್ನು ಕೈ ಬಿಡದೇ ಹೊಸದನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೇ, ಯಾವುದು ಹಿತ, ಯಾವುದು ಅಹಿತ ಎಂಬುದನ್ನು ವಿವೇಚಿಸದೇ ಡೋಲಾಯಮಾನ ಪರಿಸ್ಥಿತಿ ಏರ್ಪಟ್ಟು ಮಾನಸಿಕ ಒತ್ತಡ ಪ್ರಾರಂಭವಾಗುತ್ತದೆ.

ಈ ಮಾನಸಿಕ ಒತ್ತಡ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಕಟವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿನ ಎಲ್ಲರೂ ಅಂದರೆ ಸರ್ಕಾರ, ಅಧಿಕಾರಿ ವರ್ಗ, ಶಿಕ್ಷಕರು, ವಿದ್ಯಾರ್ಥಿಗಳು, ಸಮುದಾಯ ಹೀಗೆ ವಿವಿಧ ಹಂತಗಳಲ್ಲಿ ಇರುವವರೆಲ್ಲರನ್ನೂ ಮಾನಸಿಕ ಒತ್ತಡ ಕಾಡತೊಡಗುತ್ತದೆ.

ಎಲ್ಲರಿಗೂ ಶಿಕ್ಷಣ ಒದಗಿಸುವ, ಶಿಕ್ಷಣ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ಈ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ, ಶಿಕ್ಷಣಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಗೆ ಕನಿಷ್ಟ ಅವಶ್ಯಕತೆ ಪೂರೈಸುವಲ್ಲಿ, ಶಿಕ್ಷಣ ಕ್ಷೇತ್ರದಲ್ಲಾಗುವ ದೋಷಗಳನ್ನು ಸರಿಪಡಿಸುವಲ್ಲಿ ಸರ್ಕಾರಕ್ಕೆ ಅನೇಕ ಸವಾಲುಗಳು ಎದುರಾಗಿ ಸರ್ಕಾರ ನಡೆಸುವವರಿಗೆ ಮಾನಸಿಕ ಒತ್ತಡ ಏರ್ಪಡುತ್ತದೆ.

ಇನ್ನು ಅಧಿಕಾರಿ ವರ್ಗದಲ್ಲಂತೂ ಮಾನಸಿಕ ಒತ್ತಡ ತನ್ನ ಸಾಮ್ರಾಜ್ಯವನ್ನೇ ಸ್ಥಾಪಿಸಿಕೊಂಡಿರುತ್ತದೆ. ಸರ್ಕಾರಗಳು ಬದಲಾದಂತೆ ಶಿಕ್ಷಣ ಕ್ಷೇತ್ರದಲ್ಲಾಗುವ ಬದಲಾವಣೆಗಳನ್ನು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಲುಪಿಸುವಾಗ ಅನೇಕ ಸಮಸ್ಯೆಗಳು ಎದುರಾಗಿ ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಸಮುದಾಯ ಮತ್ತು ಶಾಲೆಗಳ ನಡುವೆ ಉಂಟಾಗುವ ಕೆಲವು ಸಮಸ್ಯೆಗಳನ್ನು ಬಗೆಹರಿಸುವಾಗ ಅಧಿಕಾರಿ ವರ್ಗದವರ ಪಾಡು ಹೇಳತೀರದು. ಸಮುದಾಯದ ಬೇಡಿಕೆ ಈಡೇರಿಸುವಲ್ಲಿ, ಶಿಕ್ಷಣ ಪದ್ದತಿಗಳನ್ನು ಜಾರಿಗೊಳಿಸುವಲ್ಲಿ, ಸರ್ಕಾರದ ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಉಂಟಾಗುವ ಸಮಸ್ಯೆಗಳನ್ನು ಬಗೆ ಹರಿಸುವಾಗ ಅಧಿಕಾರಿಗಳು ಮಾನಸಿಕ ಸಂಘರ್ಷಕ್ಕೆ ಒಳಗಾಗುತ್ತಾರೆ. ಇನ್ನು ಕೈ ಕೆಳಗಿನ ನೌಕರರ ಮೇಲಿನ ಅಭಿಮಾನಕ್ಕೊ, ಮಮಕಾರಕ್ಕೊ ಅಥವಾ ಅವರ ಮೇಲೆ ತೋರುವ ಕರುಣೆ ಕನಿಕರಗಳಿಂದಲೂ ಸಹ ಅಧಿಕಾರಿ ವರ್ಗ ಕೆಲವೊಮ್ಮೆ ತೊಳಲಾಟದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ. ಹಾಗೂ ಮೇಲಾಧಿಕಾರಿಗಳಿಂದ ಕಾರ್ಯ ಒತ್ತಡ ಬಂದಾಗಲೂ ಸಹ ಮಾನಸಿಕ ಒತ್ತೆಕ್ಕೊಳಗಾಗುತ್ತಾರೆ.

ಶಿಕ್ಷಣ ಕ್ಷೇತ್ರದ ಸಾಧಕ ಸೈನಿಕರಾದ ಶಿಕ್ಷಕರ ಮೇಲಂತೂ ಮಾನಸಿಕ ಒತ್ತಡ ತನ್ನ ಅಟ್ಟಹಾಸವನ್ನೇ ಬೀರಿದೆ. ಪ್ರತಿಯೊಂದು ಹೊಸ ಯೋಜನೆಗಳನ್ನು, ಪದ್ದತಿಗಳನ್ನು ಜಾರಿಗೊಳಿಸಬೇಕಾಗಿರುವುದು ಶಿಕ್ಷಕರ ಆದ್ಯ ಕರ್ತವ್ಯ. ಈ ಕರ್ತವ್ಯವನ್ನು ನಿಭಾಯಿವಲ್ಲಿ ಅನೇಕ ತೊಂದರೆ ಅಥವಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗದ ಸ್ಥಿತಿ ತಲುಪಿದಾಗ ಶಿಕ್ಷಕರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಒಂದೆಡೆ ಅಧಿಕಾರಿ ವರ್ಗ, ಇನ್ನೊಂದೆಡೆ ಸಮುದಾಯ, ಮತ್ತೊಂದೆಡೆ ವಿದ್ಯಾರ್ಥಿಗಳು, ಮಗದೊಂದೆಡೆ ಸರ್ಕಾರದ ಯೋಜನೆಗಳು, ಇವುಗಳೆಲ್ಲವುಗಳಿಗೂ ಹೊಂದಿಕೊಂಡು ಕಾರ್ಯ ನಿರ್ವಹಿಸುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯ. ಈ ಎಲ್ಲದರ ಮಧ್ಯವರ್ತಿಯಾದ ಶಿಕ್ಷಕನ ಪಾಡು ಜೇಡನ ಬಲೆಗೆ ಸಿಕ್ಕಿಕೊಂಡ ನೊಣದಂತಾಗಿರುತ್ತದೆ. ಎಲ್ಲದರಲ್ಲೂ ಸಾಮರಸ್ಯ ಮಾಡಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯುವುದು ತುಂಬಾ ತ್ರಾಸದಾಯಕ ಕೆಲಸ. ಈ ಎಲ್ಲಾ ಕಾರಣಗಳಲ್ಲದೇ ಶಿಕ್ಷಕನ ವೈಯಕ್ತಿಕ ಜೀವನದಿಂದಲೂ ಸಹ ಮಾನಸಿಕ ನೆಮ್ಮದಿ ಹಾಳಾಗುತ್ತದೆ.

ಈ ಮಾನಸಿಕ ಒತ್ತಡ ಸಮುದಾಯ ಮತ್ತು ವಿದ್ಯಾರ್ಥಿಗಳನ್ನೂ ಬಿಟ್ಟಿಲ್ಲ. ದಿನದಿನಕ್ಕೂ ಬದಲಾಗುತ್ತಿರುವ ಶಿಕ್ಷಣದ ವಿದ್ಯಮಾನಗಳು, ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳು ನಾನಾ ಕಾರಣಗಳಿಂದ ಸರಿಯಾಗಿ ಮಕ್ಕಳಿಗೆ ತಲುಪದೇ ಇರುವುದು, ಸ್ಥಳೀಯ ಬೇಡಿಕೆಗಳನ್ನು ಸರ್ಕಾರವಾಗಲೀ ಅಧಿಕಾರಿಗಳಾಗಲೀ ಈಡೇರಿಸದೇ ಇರುವುದು ಹೀಗೆ ಅನೇಕ ಕಾರಣಗಳಿಂದ ಸಮುದಾಯ ಮಾನಸಿಕ ಒತ್ತಡಕ್ಕೊಳಗಾಗುತ್ತದೆ. ಶಾಲೆಯಲ್ಲಿ ಶಿಕ್ಷಕರ ಕೊರತೆ, ಮೂಲಭೂತ ಸೌಲಭ್ಯಗಳ ಕೊರತೆ, ಪಾಲಕರ ನಿರಾಸಕ್ತಿ, ಬಡತನ, ಕಡಿಮೆ ಬೌದ್ದಿಕ ಮಟ್ಟ, ಕಲಿಕೆಯಲ್ಲಿ ನಿರಾಸಕ್ತಿ, ಕೀಳರಿಮೆ, ಹಿಂಜರಿಕೆ, ಭಯ, ಆತಂಕ ಹೀಗೆ ಅನೇಕ ಕಾರಣಗಳಿಂದ ವಿದ್ಯಾರ್ಥಿಗಳು ಮಾನಸಿಕ ತೊಳಲಾಟದಲ್ಲಿ ತೇಲಾಡುತ್ತಾರೆ.
ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ಮೇಲಿನಿಂದ ಕೆಳಗಿನ ಹಂತದವರೆಗಿನ ಎಲ್ಲಾ ವರ್ಗದವರೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಭಾವನಾ ಜೀವಿಗಳಲ್ಲಿ ಇದರ ತೀವ್ರತೆ ಇನ್ನೂ ಹೆಚ್ಚಾಗಿರುತ್ತದೆ. ಇದರಿಂದ ಶಿಕ್ಷಣ ಕ್ಷೇತ್ರ ವಾಗವಾಗಿ ಮುಂದುವರೆಯದೇ ನಿಧಾನಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ.

ಎಲ್ಲಾ ಹಂತದವರಿಗೂ ಮಾನಸಿಕ ಒತ್ತಡ ಉಂಟಾಗಲು ಕಾರಣವೇನೆಂದರೆ ಪ್ರತಿಯೊಂದು ಯೋಜನೆಯ ತಯಾರಿಕೆಯಲ್ಲಿ ಆಯಾ ಹಂತದ ಪರಿಣಿತರನ್ನು, ಅನುಭವಿಗಳನ್ನು ಸೇರಿಸಿಕೊಂಡು ಯೋಜನೆ ತಯಾರಿಸದೇ ಇರುವುದು, ಗ್ರಾಮೀಣ ಭಾಗದವರಿಗೆ ಹೆಚ್ಚು ಒತ್ತು ಕೊಡದೇ ಇರುವುದು ಹಾಗೂ ಪ್ರತಿಯೊಬ್ಬರೂ ತಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸದೇ ಇರುವುದರಿಂದ ಮಾನಸಿಕ ಒತ್ತಡದಲ್ಲಿ ಸಿಲುಕುತ್ತಿರುವುದು ಕಂಡು ಬರುತ್ತದೆ. ಇದರಿಂದಾಗಿ ಗುಣಾತ್ಮಕವಾದ ಹಾಗೂ ಪ್ರಮಾಣಾತ್ಮಕವಾದ ಶಿಕ್ಷಣ ಇಂದು ಎಲ್ಲರಿಗೂ ದೊರೆಯದಂತಾಗಿದೆ. ಆದ್ದರಿಂದ ಎಲ್ಲರೂ ಅವರವರ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿ ಮಾನಸಿಕ ಒತ್ತಡ ರಹಿತ ಸಮಾಜಕ್ಕೆ ನಾಂದಿ ಹಾಡೋಣವೇ?

‘ಟೀಚರ್’ ಸೆಪ್ಟಂಬರ್ 2005
ಆರ್.ಬಿ.ಗುರುಬಸವರಾಜ

April 19, 2014

ಪೇಪರ್ ಕಟಿಂಗ್ಸ್ ಗಳೇ ಕಲಿಕಾ ಸಾಧನಗಳಾದರೆ.......!

ಪೇಪರ್ ಕಟಿಂಗ್ಸ್ ಗಳೇ ಕಲಿಕಾ ಸಾಧನಗಳಾದರೆ.......!
ದಿನಪತ್ರಿಕೆಗಳನ್ನು ಓದುವ ಹವ್ಯಾಸ ಉಳ್ಳವರಿಗೆ ಪತ್ರಿಕೆ ಬೇಗನೇ ಬರದಿದ್ದರೆ ಏನೋ ಕಳೆದುಕೊಂಡಂತೆ ಆಗುತ್ತದೆ. ವಿಚಾರಗಳನ್ನು ಜೀವಂತವಾಗಿಡಲು ಮತ್ತು ಜನರ ತಿಳುವಳಿಕೆಯ ಮಟ್ಟವನ್ನು ಎತ್ತಿ ಹಿಡಿಯಲು ವೃತ್ತಪತ್ರಿಕೆ ಒಂದು ದೊಡ್ಡ ಸಾಧನ. ಹಾಗಾಗಿ ಪತ್ರಿಕೆಯನ್ನೊಮ್ಮೆ ಓದಿದಾಗಲೇ ಸಮಾದಾನ. ಮರುದಿನ ಆ ವೃತ್ತಪತ್ರಿಕೆ ಹಳಸಲಾಗಿ ಮೂಲೆಗುಂಪಾಗುತ್ತದೆ. ಅಂದರೆ ವೃತ್ತಪತ್ರಿಕೆಗೆ ಜೀವ ಇರುವುದು ಒಂದೇ ಒಂದು ಮಾತ್ರ. ಆದರೆ ಅದೇ ಪತ್ರಿಕೆಯನ್ನು ಬಹಳ ದಿನಗಳವರೆಗೆ ಜೀವಂತವಾಗಿ ಇಡುವಂತಾದರೆ ಹೇಗೆ? ಅದರಲ್ಲಿನ ವಿಚಾರಗಳನ್ನು, ಜ್ಞಾನವನ್ನು, ಮೌಲ್ಯಗಳನ್ನು ಪದೇ ಪದೇ ಬಳಸಲು ಬರುವಂತಿದ್ದರೆ ಒಳಿತಲ್ಲವೇ? ಹೌದು ಅದು ಎಂದೆಂದಿಗೂ ಮರೆಯದ ಪತ್ರಿಕೆಯಾಗಿ ಜ್ಞಾನವನ್ನು ವೃದ್ದಿಸುತ್ತ ಇರುತ್ತದೆ. ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದವರು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಮರಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ದೇವರಾಜ ಅವರು. 
ಮಾಡಿದ್ದಾದರೂ ಏನು? : ದಿನ ಪತ್ರಿಕೆಗಳನ್ನು ಓದಿದ ನಂತರ ಬಿಸಾಡದೇ ಅದರಲ್ಲಿನ ಪ್ರಮುಖ ಅಂಕಣ ಬರಹಗಳನ್ನು, ಪ್ರಮುಖ ಸುದ್ದಿಗಳನ್ನು ಕತ್ತರಿಸಿ ಒಂದೆಡೆ ಇಟ್ಟುಕೊಳ್ಳುತ್ತಾರೆ. ಉದಾಹರಣೆಗೆ ಸಂಗತ, ಕೃಷಿವಿಶೇಷ, ಶಿಕ್ಷಣ, ವಿಜ್ಞಾನ ವಿಶೇಷ, ಕರ್ನಾಟಕ ದರ್ಶನ, ಮಿನುಗು ಮಿಂಚು, ಒಂಚೂರು, ಪುಟ್ಟಿ, ರಾಮನ್, ವಾರದ ವಿನೋದ, ಪದಬಂಧ, ಹೀಗೆ ವಿವಿಧ ಅಂಕಣ ಬರಹಗಳಲ್ಲದೇ ಪ್ರಮುಖ ತಲೆಬರಹಗಳ ಲೇಖನ, ಸುದ್ದಿಗಳನ್ನು ಚಿತ್ರ ಸಹಿತ ಕತ್ತರಿಸಿ ಇಟ್ಟುಕೊಳ್ಳುತ್ತಾರೆ.
ಕತ್ತರಿಸಿದ ಪತ್ರಿಕಾ ತುಣುಕುಗಳನ್ನು ಅಂಕಣವಾರು ವಿಷಯವಾರು ವಿಂಗಂಡಿಸಿ ಸೂಕ್ತವಾದ ಕಾಗದಕ್ಕೆ ಅಂಟಿಸುತ್ತಾರೆ. 40-50 ಪುಟಗಳ ಕಾಗದಗಳು ಸಂಗ್ರಹವಾದ ನಂತರ ಪಿನ್ ಹಾಕಿ ಬೈಂಡ್ ಮಾಡುತ್ತಾರೆ. ಹೀಗೆ ಒಟ್ಟು 86 ತಲೆಬರಹಗಳಡಿ 175ಕ್ಕೂ ಹೆಚ್ಚು ಪುಸ್ತಕಗಳನ್ನು ತಯಾರಿಸಿದ್ದಾರೆ. ಇವುಗಳಲ್ಲಿ ಬಹುಪಾಲು ‘ಪ್ರಜಾವಾಣಿ’ ಪತ್ರಿಕೆಯ ತುಣುಕುಗಳಾಗಿವೆ. 
ಇದು ಕೇವಲ ಒಂದುದಿನ ಒಂದುವಾರ ಅಥವಾ ಒಂದು ತಿಂಗಳಲ್ಲಿ ಸಂಗ್ರಹಿಸಿದ ಕಾರ್ಯವಲ್ಲ. ಸುಮಾರು ಆರೆಂಟು ವರ್ಷಗಳಿಂದ ಅನೂಚಾನವಾಗಿ ಶ್ರಮವಹಿಸಿ ಪುಸ್ತಕಗಳ ರೂಪದಲ್ಲಿ ಸಂಗ್ರಹಿಸಿಕೊಂಡು ಬಂದಿದ್ದಾರೆ. ಒಂದೊಂದು ಪುಸ್ತಕ ಒಂದೊಂದು ವಿಶ್ವಕೊಶದಂತೆ ಮಾಹಿತಿಯ ಆಗರಗಳೇ ಆಗಿವೆ. 
ಬಳಕೆ ಹೀಗೆ : ಈ ಸಂಗ್ರಹ ಕೇವಲ ಹವ್ಯಾಸಕ್ಕಾಗಿ ಅಲ್ಲ. ಕಲಿಕಾಂಶಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗುತ್ತದೆ. ಇದರಿಂದ ಕಲಿಕೆ ಸಂತಸದಾಯಕ ಹಾಗೂ ವೈವಿಧ್ಯಮಯವಾಗಿ ಇರುತ್ತದೆ ಎಂಬುದು ದೇವರಾಜ ಅವರ ಅನಿಸಿಕೆ. ಪತ್ರಿಕೆಯ ಕೆಲವು ತುಣುಕುಗಳನ್ನು ಮಕ್ಕಳೂ ಸಂಗ್ರಹಿಸುವುದರಿಂದ ಅವರಿಗೆ ಕಲಿಕೆ ಸುಗಮ ಹಾಗೂ ಸರಳವಾಗುತ್ತದೆ. ಮಕ್ಕಳಲ್ಲಿ ಜ್ಞಾನ ಸಂಗ್ರಹದ ಅರಿವನ್ನು ಈಗಿನಿಂದಲೇ ಬೆಳೆಸುವ ಆಶಯ ಇವರದು. 
ಶೈಕ್ಷಣಿಕ ಮೌಲ್ಯ : ಶಿಕ್ಷಕ ಸೃಜನಶೀಲನಾಗಿದ್ದರೆ ಎಂತಹ ರಚನಾತ್ಮಕ ಕಾರ್ಯವನ್ನಾದರೂ ಮಾಡಬಹುದು ಎಂಬುದಕ್ಕೆ ದೇವರಾಜ ಮಾದರಿಯಾಗುತ್ತಾರೆ. ಅದು ಅವರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ವಿರಾಮ ವೇಳೆಯ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಶ್ರಮವಹಿಸಿ ಸೃಜನಾತ್ಮಕತೆಯಲ್ಲಿ ತೊಡಗಿರುವುದು ಗೋಚರಿಸುತ್ತದೆ. ಶಿಕ್ಷಕರಲ್ಲಿ ಬೆಳೆಯಬೇಕಾಗುರುವುದು ಇಂತಹ ಮೌಲ್ಯಗಳಲ್ಲವೇ?
ಅಚ್ಚುಟ್ಟುತನ : ಇವರು ತಯಾರಿಸಿದ ಪುಸ್ತಕಗಳಲ್ಲಿ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಕತ್ತರಿಸಿದ ಪತ್ರಿಕಾ ತುಣುಕುಗಳನ್ನು ಸಮಗಾತ್ರದ ಹಾಳೆಗಳಿಗೆ ಅಂದವಾಗಿ ಅಂಟಿಸಿ ಪುಸ್ತಕಗಳನ್ನು ತಯಾರಿಸಿದ್ದಾರೆ. ಸೂಕ್ತವಾದ ತಲೆಬರಹಗಳನ್ನು ಸ್ಪುಟವಾಗಿ ಬರೆದಿರುವುದು ನೋಡುಗರನ್ನು/ಓದುಗರನ್ನು ಆಕರ್ಷಿಸುತ್ತದೆ. 
ಎಲೆ ಮರೆಯ ಕಾಯಿ : ಇದನ್ನೆಲ್ಲಾ ಮಾಡಿದ್ದು ಯಾರೋ ಮೆಚ್ಚಲಿ ಅಥವಾ ಪ್ರಶಸ್ತಿ ನೀಡಲಿ ಎಂದಲ್ಲ. ಪಾಠಕ್ಕೆ ಪೂರಕವಾಗಿ ಬಳಕೆಯಾಗುವುದರಿಂದ ಮಕ್ಕಳು ಹೆಚ್ಚು ಖುಷಿ ಪಡುತ್ತಾರೆ. ಇದರಿಂದ ಸಂತೃಪ್ತಿ ನೆಮ್ಮದಿ ದೊರೆಯುತ್ತದೆ. ಇವುಗಳು ಕ್ಲಸ್ಟರ್ ಹಾಗೂ ತಾಲೂಕ ಹಂತದ ಕಲಿಕೋಪಕರಣ ಮೇಳದಲ್ಲಿ ಪ್ರದರ್ಶಿತವಾಗಿವೆ. ಕೆಲವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಕೆಲವರು ಉದಾಸೀನ ಮಾಡಿದ್ದಾರೆ. ಇದನ್ನು ಯಾವುದೇ ಪ್ರಚಾರಕ್ಕಾಗಲೀ ಪ್ರಖ್ಯಾತಿಗಾಗಲೀ ಮಾಡಿಲ್ಲ ಎನ್ನುವ ಅವರ ಆಂತರ್ಯದ ಮಾತುಗಳು ಅವರ ಸಹೃದಯತೆಯನ್ನು ತೋರಿಸುತ್ತದೆ. 
ಷೋಕೇಸ್ ಆಗಲಿ! : ಇಂತಹ ಅದೆಷ್ಟೋ ಸಾಧಕ ಶಿಕ್ಷಕರು ಯಾವುದೇ ಪ್ರತಿಷ್ಠೆ ಪ್ರತಿಫಲ ಬಯಸದೇ ತಮ್ಮಷ್ಟಕ್ಕೆ ತಾವೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಇಂತಹ ಶಿಕ್ಷಕರ ಸಾಧನೆಯನ್ನು ಇಲಾಖೆ ಗುರುತಿಸಿ ಅವರ ಕಾರ್ಯವನ್ನು ಷೋಕೇಸ್ ಮಾಡಬೇಕು. ಅದು ಇತರರಿಗೂ ಮಾದರಿಯಾಗುತ್ತದೆ ಅಲ್ಲವೇ?

'ಟೀಚರ್' ಏಪ್ರಿಲ್ 2014
- ಆರ್.ಬಿ.ಗುರುಬಸವರಾಜ.