July 23, 2014

ನೀವೂ ಕ್ವಿಜ್ ಗೆಲ್ಲಬೇಕೇ?

ದಿನಾಂಕ 23-07-2014ರ ವಿಜಯವಾಣಿಯ ಮಸ್ತ್ ಪುರವಣಿಯಲ್ಲಿ ಪ್ರಕಟವಾದ 'ನೀವೂ ಕ್ವಿಜ್ ಗೆಲ್ಲಬೇಕೇ?' ಎಂಬ ಲೇಖನ


ನೀವೂ ಕ್ವಿಜ್ ಗೆಲ್ಲಬೇಕೇ?
2014 ರ ವಿಶ್ವಕಪ್ ಫುಟ್ಬಾಲ್‍ನಲ್ಲಿ ಟ್ರೋಫಿ ಗೆದ್ದ ದೇಶ ಯಾವುದು?
2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು?
ನರೇಂದ್ರ ಮೋದಿ ಭಾರತದ ಎಷ್ಟನೇ ಪ್ರಧಾನಮಂತ್ರಿ?
ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಯಾವುದು?
ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯ ಚಲನಚಿತ್ರ ಯಾವುದು?
ಹೀಗೆ ವಿವಿಧ ಪ್ರಶ್ನೆಗಳನ್ನು ನಿಮಗೆ ಕೇಳಿದರೆ ಉತ್ತರ ಗೊತ್ತಿದ್ದರೆ ಥಟ್ಟಂತ ಉತ್ತರಿಸುತ್ತೀರಿ. ಇಲ್ಲದಿದ್ದರೆ ಉತ್ತರಿಸಲು ತಡಬಡಾಯಿಸುತ್ತೀರಿ. ಅಲ್ಲವೇ? ಇಂತಹ ಪ್ರಶ್ನೆಗಳನ್ನು ಕೇಳಿ ನಿಮ್ಮಲ್ಲಿನ ಜ್ಞಾನವನ್ನು ಕೆದಕುವ ಅಥವಾ ಪರೀಕ್ಷಿಸುವ ಸ್ಪರ್ದೆಯೇ ರಸಪ್ರಶ್ನೆ ಅಥವಾ ಕ್ವಿಜ್. ಇದನ್ನು ಬುದ್ದಿಶಕ್ತಿಯ ಆಟವೆಂತಲೂ ಜಾಣ್ಮೆಯ ಪರೀಕ್ಷೆ ಎಂತಲೂ ಕರೆಯುತ್ತಾರೆ. ಈ ಸ್ಪರ್ಧೆಯನ್ನು ವೈಯಕ್ತಿಕವಾಗಿ ಅಥವಾ ಗುಂಪಿನಲ್ಲಿಯೂ ಆಡಬಹುದಾಗಿದೆ. ಇದು ಭಾಗವಹಿಸುವವರ ನಡುವಿನ ಪ್ರತಿಷ್ಠೆಯ ಪಂದ್ಯವಾಗಿದ್ದು, ಕೇಳಲಾದ ಪ್ರಶ್ನೆಗೆ ನಿಗದಿತ ಸಮಯದಲ್ಲಿ ಸರಿಯಾಗಿ ಉತ್ತರಿಸಿ ತಂಡವನ್ನು ಮುನ್ನಡೆಸುವುದು ಹಾಗೂ ಪ್ರಶಸ್ತಿ ಗಳಿಸುವುದು ಮುಖ್ಯವಾಗಿರುತ್ತದೆ.
ಕ್ವಿಜ್ ಒಂದು ವಸ್ತುನಿಷ್ಠತೆಯ ಸ್ಪರ್ಧೆಯಾಗಿದ್ದು, ಪಠ್ಯ ಹಾಗೂ ಪಠ್ಯೇತರ ಜ್ಞಾನವನ್ನು ಅಳೆಯುವುದು ಇದರ ಉದ್ದೇಶವಾಗಿರುತ್ತದೆ. ಕಲಿತ ವಿಷಯಗಳಲ್ಲಿನ ತಾತ್ವಿಕ ಅಂಶಗಳು ಹಾಗೂ ಅವುಗಳ ಅನ್ವಯಗಳ ಸಹ ಸಂಬಂಧವನ್ನು ಪರೀಕ್ಷಿಸುವುದಾಗಿದೆ. ಇದು ಮೇಲ್ನೋಟಕ್ಕೆ ಸುಲಭವೆಂದು ಗೋಚರಿಸಿದರೂ ಜ್ಞಾನದ ಆಳ ಮತ್ತು ವಿಸ್ತಾರವನ್ನು ಒರೆಗೆ ಹಚ್ಚುತ್ತದೆ.
  ಕ್ವಿಜ್ ಸ್ಪರ್ಧೆಯು ನಿರೀಕ್ಷಿತ ಘಟನೆಯಾಗಿದ್ದು, ಇಲ್ಲಿ ಸ್ಪಧಾರ್ಥಿಗಳ ವಿವಿಧ ಕ್ಷೇತ್ರಗಳಾದ ಭಾಷೆ, ಗಣಿತ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಸಾಮಾನ್ಯಜ್ಞಾನ, ಪ್ರಚಲಿತ ಜ್ಞಾನ, ಕಲೆ, ಸಾಹಿತ್ಯ, ಸಂಸ್ಕøತಿ, ಇತಿಹಾಸ, ಕ್ರೀಡೆ, ಮನೋರಂಜನೆ ಇತ್ಯಾದಿಗಳಲ್ಲಿನ ಜ್ಞಾನವನ್ನು ಅಳೆಯಲಾಗುತ್ತದೆ. 
ಇಂದು ಅನೇಕ ಶಾಲೆ-ಕಾಲೇಜುಗಳಲ್ಲಿ ಹಾಗೂ ಇತರ ಸಂಘ-ಸಂಸ್ಥೆಗಳಲ್ಲಿ  ಬೇರೆ ಬೇರೆ ಸಂದರ್ಭಗಳಲ್ಲಿ ಕ್ವಿಜ್ ಕಾರ್ಯಕ್ರಮ ನಡೆಸಲಾಗುತ್ತದೆ. ಅಲ್ಲದೇ ಕೆಲವು ಖಾಸಗೀ ಚಾನಲ್‍ಗಳೂ ಕೂಡಾ ರಿಯಾಲಿಟಿ ಶೋ ಮೂಲಕ ಕ್ವಿಜ್ ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರಸಾರ ಮಾಡುತ್ತಿವೆ. ಈ ಕ್ವಿಜ್ ಸ್ಪರ್ಧೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಅವುಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು.
ಪ್ರಯೋಜನಗಳು :
ಕ್ವಿಜ್ ಸಾಮಾನ್ಯ ಜ್ಞಾನ ಹಾಗೂ ನಿರ್ದಿಷ್ಟ ಕ್ಷೇತ್ರದಲ್ಲಿನ ಜ್ಞಾನವನ್ನು ವಿಸ್ತರಿಸುವ ಪ್ರಕ್ರಿಯೆಯಾಗಿದೆ.
ಸ್ಪರ್ಧಾರ್ಥಿಯನ್ನು ವಿಭಿನ್ನ ಆಯಾಮಗಳಲ್ಲಿ ಹಾಗೂ ತಮ್ಮ ಜ್ಞಾನಕೋಶದ ಆಚೆಗೂ ಯೋಚಿಸಲು ಸಶಕ್ತರನ್ನಾಗಿಸುತ್ತದೆ.
ಸ್ಪರ್ಧಾಳುಗಳು ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಆರೋಗ್ಯಕರ ಚರ್ಚೆಗೆ ಮುಂದಾಗಲು ಉತ್ತೇಜಿಸುತ್ತದೆ.
ಶಾಲಾ-ಕಾಲೇಜುಗಳಲ್ಲಿನ ಕ್ವಿಜ್ ಕಾರ್ಯಕ್ರಮವು ಮಕ್ಕಳ ಕಲಿಕಾಂಶಗಳಲ್ಲಿನ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಭಾಷಾಭಿಮಾನ ಬೆಳೆಸಲು ಸಹಕಾರಿಯಾಗಿದೆ.
ಕಲಿಕಾಂಶಗಳ ಜ್ಞಾನದ ಜೊತೆಗೆ ಕೌಶಲ್ಯಗಳು, ಸಾಮಥ್ರ್ಯಗಳು, ವಿವಿಧ ವಿಶೇಷ ಕ್ಷೇತ್ರಗಳಲ್ಲಿನ ಕಲಿಕಾ ಮಟ್ಟಗಳನ್ನು ಗುರುತಿಸಲು ಮತ್ತು ವ್ಯವಸ್ಥೆಗೊಳಿಸಲು ಸಹಕಾರಿ.
ಇದು ದೈನಂದಿನ ಕೆಲಸದಲ್ಲಿನ ಒತ್ತಡವನ್ನು ನಿವಾರಿಸುತ್ತದೆ.
ಶಾಲೆ/ಸ್ನೇಹಿತರ ಸಮೂಹದಲ್ಲಿನ ಗುಂಪು ಸಾಮರಸ್ಯವನ್ನು ನಿವಾರಿಸುತ್ತದೆ.
ಹೊಸ ಹೊಸ ಸ್ನೇಹಿತರನ್ನು, ವಿವಿಧ ಸಂಸ್ಕøತಿಗಳನ್ನು ಪರಿಚಯಿಸುತ್ತದೆ. ಆ ಮೂಲಕ ಸ್ನೇಹ ಬಳಗ ಮತ್ತು ಜ್ಞಾನಭಂಢಾರ ಹೆಚ್ಚುತ್ತದೆ.
ಭಾಷೆಯಲ್ಲಿನ ಜ್ಞಾನಾಧಾರಿತ ಪ್ರಶ್ನೆಗಳು ಭಾಷಾಭಿವೃದ್ದಿಗೆ ನೆರವಾಗುತ್ತವೆ. ಅಂದರೆ ಕಾಗುಣಿತ, ಉಚ್ಚಾರ, ಶಬ್ದಭಂಢಾರ ಹೆಚ್ಚಿಸುತ್ತವೆ.
ಕ್ವಿಜ್‍ನಲ್ಲಿ ಉತ್ತಮವಾದ ಅಭಿವ್ಯಕ್ತಿ ತೋರಿಸಲು ಸುಸಜ್ಜಿತವಾದ ಸಂಗ್ರಹಿತ ಜ್ಞಾನ ಅವಶ್ಯಕ. ಸುಸಜ್ಜಿತವಾದ ಸಂಗ್ರಹಿತ ಜ್ಞಾನ ಹೊಂದಲು ವ್ಯಾಪಕವಾದ ಸಿದ್ದತೆ ಅಗತ್ಯ. ಜೊತೆಗೆ ಜ್ಞಾನ ಗಳಿಸುವ ಕಾರ್ಯವಿಧಾನ ಮತ್ತು ತಂತ್ರಗಳೂ ಕೂಡಾ ಅವಶ್ಯಕ.
ತಯಾರಿ ಹೀಗಿರಲಿ!
ಕ್ವಿಜ್‍ನಲ್ಲಿ ಗೆಲ್ಲಲು ನಿರಂತರ ಅಧ್ಯಯನ ಅಗತ್ಯ. ವಿವಿಧ ವಿಷಯಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಮಾಹಿತಿಗಳನ್ನು ಓದಿ ಮನನ ಮಾಡಿಕೊಳ್ಳಿ. ಪ್ರಮುಖಾಂಶಗಳನ್ನು ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ.
ವಿವಿಧ ಭಾಷೆಗಳ ಪ್ರಸಿದ್ದ ಕವಿಗಳು, ಬರಹಗಾರರು ಮತ್ತು ಅವರ ಕೃತಿಗಳ ಪರಿಚಯ ಇರಲಿ.
ಗಣಿತದಲ್ಲಿನ ತತ್ವಗಳು, ಸೂತ್ರಗಳು, ಸಮೀಕರಣಗಳು ಹಾಗೂ ವಿವಿಧ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವ ಕೌಶಲ್ಯವನ್ನು ಸಿದ್ದಿಸಿಕೊಳ್ಳಿ. 
ವಿಜ್ಞಾನದ ವಿವಿಧ ತತ್ವಗಳು, ನಿಯಮಗಳು, ಸಿದ್ದಾಂತಗಳು, ಸೂತ್ರಗಳು, ಸಮೀಕರಣಗಳು, ಕಾರ್ಯಕಾರಣಿ ಸಂಬಂಧಗಳು ಇತ್ಯಾದಿ ವಿವರಗಳನ್ನು ತಿಳಿದುಕೊಳ್ಳಿ.
ಗಣಿತ ಮತ್ತು ವಿಜ್ಞಾನದಲ್ಲಿನ ಆವಿಷ್ಕಾರಗಳು ಮತ್ತು ಸಂಶೋಧಕರ ಪಟ್ಟಿ ತಯಾರಿಸಿಕೊಳ್ಳಿ.
ಸ್ವಾತಂತ್ರ ಹೋರಾಟಗಾರರು ಮತ್ತು ವಿವಿಧ ಸಮಾಜ ಸುಧಾರಕರ ಜೀವನ ಚರಿತ್ರೆ ತಿಳಿದುಕೊಳ್ಳಿ. ಇತಿಹಾಸದ ಪ್ರಮುಖ ದಿನಾಂಕ ಹಾಗೂ ಇಸ್ವಿಗಳನ್ನು ಗುರುತಿಸಿಕೊಳ್ಳಿ. 
ಪ್ರಚಲಿತ ಜ್ಞಾನ ಬೆಳೆಸಿಕೊಳ್ಳಲು ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ದಿನ ಪತ್ರಿಕೆಗಳು ಅನೇಕ ಮಾಹಿತಿಗಳನ್ನು ಒದಗಿಸುತ್ತವೆ.
ಪದಬಂಧ ಹಾಗೂ ಸಂಖ್ಯಾಬಂಧ(ಸುಡೋಕು)ಗಳನ್ನು ಬಿಡಿಸಿ. ಇದು ಶಬ್ದಭಂಢಾರವನ್ನು, ಸಮಸ್ಯೆ ಬಿಡಿಸುವ ಕೌಶಲ್ಯವನ್ನು ವೃದ್ದಿಸುತ್ತದೆ ಹಾಗೂ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಓದಿದ ಹಾಗೂ ಓದಬೇಕಾದ ಅಂಶಗಳ ಪಟ್ಟಿ ತಯಾರಿಸಿಕೊಳ್ಳಿ. ಓದಿದ ಅಂಶಗಳನ್ನು ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಂಡು ಸಾಧ್ಯವಾದಾಗಲೆಲ್ಲ ಕಣ್ಣಾಡಿಸಿ, ಮೆಲುಕುಹಾಕಿ.
ಕಲಿಕಾಂಶದಲ್ಲಿ ನಂಬಿಕೆ ಇರಲಿ. ಅತಿಯಾದ ನಂಬಿಕೆಯು ಅಪಾಯಕಾರಿ.
ಸಾಧ್ಯವಾದಷ್ಟೂ ಹೊಸ ಹೊಸ ಕಲಿಕಾ ಪರಿಕರಗಳನ್ನು ಸಂಗ್ರಹಿಸಿಕೊಳ್ಳಿ. ಇದು ವಿಷಯದ ಆಳ ಮತ್ತು ವಿಸ್ತಾರವನ್ನು ಹೆಚ್ಚಿಸುತ್ತದೆ.
ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಿರಿ. 
ಶಾಲೆಯ ದೈನಂದಿನ ಕೆಲಸಗಳನ್ನು ಆದಷ್ಟೂ ಬೇಗನೇ ಮುಗಿಸಿಕೊಂಡು ಕ್ವಿಜ್‍ಗಾಗಿ ಓದಲು ಸಮಯ ಹೊಂದಿಸಿಕೊಳ್ಳಿ. 
ಸಮಯ ದೊರೆತಾಗಲೆಲ್ಲ ವಿಷಯದ ಕುರಿತು ಸ್ನೇಹಿತರು/ಆತ್ಮೀಯರೊಂದಿಗೆ ಚರ್ಚಿಸಿ. ಇದು ವಿಷಯದ ಪರಿಪಕ್ವತೆಗೆ ಸಹಕಾರಿಯಾಗುತ್ತದೆ ಹಾಗೂ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತದೆ.
ನಿಮ್ಮ ಪ್ರತಿಸ್ಪರ್ಧಿಯನ್ನು ಎದುರಿಸಲು ಬೇಸಿಕ್ ಮಾಸ್ಟರ್‍ಗಳಾಗಿರಿ. ಬೇಸಿಕ್ ಜ್ಞಾನ ಪಡೆಯಲು ವಿವಿಧ ದೇಶ/ರಾಜ್ಯಗಳ ರಾಜಧಾನಿ, ಕರೆನ್ಸಿ(ಹಣದ ಹೆಸರು), ಪ್ರಸಿದ್ದ ಆಟಗಾರರು, ನೊಬೆಲ್ ಪುರಸ್ಕøತರು, ಜ್ಞಾನಪೀಠ ಪುರಸ್ಕøತರು, ಆಸ್ಕರ್ ಪುರಸ್ಕøತರು, ಕಲೆ, ಸಾಹಿತ್ಯ, ಕ್ರೀಡಾ ಕ್ಷೇತ್ರಗಳ ಸಾಧಕರ ವಿವರ ಸಂಗ್ರಹಿಸಿಕೊಳ್ಳಿ.

ಕ್ವಿಜ್‍ನ ವೇಳೆ
ಕ್ವಿಜ್ ಮಾಸ್ಟರ್ ಹೇಳುವ ನಿರ್ದೇಶನಗಳ ಮೇಲೆ ಗಮನ ಕೇಂದ್ರೀಕರಿಸಿ.
ಯಾವುದೇ ಗಲಿಬಿಲಿ, ಖಿನ್ನತೆ, ಗೊಂದಲಗಳಿಗೆ ಒಳಗಾಗದೇ ನಿರಾಳವಾಗಿರಿ. ದೀರ್ಘವಾದ ಉಸಿರಾಟ ನಡೆಸಿ.
ಧನಾತ್ಮಕ ಮನೋಭಾವನೆ ಇರಲಿ. ಇದು ಉತ್ತರಗಳು ರಚನಾತ್ಮಕವಾಗಿರಲು ಸಹಾಯ ಮಾಡುತ್ತದೆ.
ಸಮಯದ ಕಡೆಗೆ ಹೆಚ್ಚು ನಿಗಾವಹಿಸಿ.
ಪ್ರತಿಸ್ಪರ್ದಿಯ ಅಂಕಗಳ ಕಡೆಗೆ ಗಮನ ಕೊಡದೇ ಸರಿ ಉತ್ತರದ ಕಡೆಗೆ ಗಮನ ಕೊಡಿ.
ತಂಡದ ಸದಸ್ಯರೊಂದಿಗೆ ಚರ್ಚಿಸಿ ಉತ್ತರ ನೀಡಿ. ಆತುರದ ಉತ್ತರ ಬೇಡ.
ಇತರ ತಂಡಕ್ಕೆ ಕೇಳಿದ ಪ್ರಶ್ನೆ ಪಾಸ್ ರೌಂಡ್ಸ್‍ನಲ್ಲಿ ನಿಮಗೂ ಬರಬಹುದು. ಉತ್ತರ ಸಿದ್ದಮಾಡಿಟ್ಟುಕೊಳ್ಳಿ.
ಉತ್ತರ ನಿಖರವಾಗಿರಲಿ, ಧ್ವನಿ ಸ್ಪಷ್ಟವಾಗಿರಲಿ.
ಇಂತಹ ಹತ್ತಾರು ಪ್ರಯೋಜನಗಳನ್ನು ಹೊಂದಿದ ಕ್ವಿಜ್‍ಗೆ ಸೇರಲು ಇದು ಸಕಾಲವಾಗಿದೆ. ನಿಮ್ಮ ಮಾನಸಿಕ ಹಾಗೂ ಬೌದ್ದಿಕ ಶಕ್ತಿಯನ್ನು ಚುರುಕುಗೊಳಿಸಲು ಕ್ವಿಜ್ ಒಂದು ಉತ್ತಮ ಸಾಧನ. ಇತರರ ಎದುರು ನಿಮ್ಮ ವ್ಯಕ್ತಿತ್ವವನ್ನು ಸಾಬೀತುಪಡಿಸಲು ಇದು ಅಮೂಲ್ಯವಾದ ಜ್ಞಾನದ ನಿಧಿ ಇದ್ದಂತೆ. ಇಂದೇ ಅದನ್ನು ನಿಮ್ಮ ಕೈವಶ ಮಾಡಿಕೊಳ್ಳಿ. 
ಆರ್.ಬಿ.ಗುರುಬಸವರಾಜ. ಶಿಕ್ಷಕರು
ಹೊಳಗುಂದಿ(ಪೊ)
ಹೂವಿನ ಹಡಗಲಿ(ತಾ)
ಬಳ್ಳಾರಿ(ಜಿ) 583219
9902992905

July 11, 2014

ಪರಿಣಾಮಕಾರಿ ತರಗತಿಗೆ ಪಂಚಸೂತ್ರಗಳು

ಜೂನ್ 2014 ರ 'ಶಿಕ್ಷಣವಾರ್ತೆ'ಯಲ್ಲಿ ಪ್ರಕಟವಾದ ಲೇಖನ
ಪರಿಣಾಮಕಾರಿ ತರಗತಿಗೆ ಪಂಚಸೂತ್ರಗಳು

ತರಗತಿ ಪರಿಣಾಮಕಾರಿಯಾಗಿ ಇರಬೇಕೆಂದು ಪ್ರತಿಯೊಬ್ಬ ಶಿಕ್ಷಕರು ಬಯಸುತ್ತಾರೆ. ಇದಕ್ಕೆ ಸಮಯ ಮತ್ತು ಬದ್ದತೆಯ ಯೋಜನೆ ಅಗತ್ಯ. ಆ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಉತ್ತೇಜಿಸುವ ಹಾಗೂ ಪರಸ್ಪರ ತಿಳುವಳಿಕೆಯನ್ನು ಉಂಟುಮಾಡುವ ಉದ್ದೇಶ ನಿಮ್ಮದಾಗಿರಬೇಕು. ತರಗತಿ ಪರಿಣಾಮಕಾರಿಯಾಗಿರಲು ಕೆಲವು ಪ್ರಮುಖಾಂಶಗಳು ಇಲ್ಲಿವೆ.
ವಿದ್ಯಾರ್ಥಿಗಳ ಬಗ್ಗೆ ತಿಳಿಯಿರಿ: ಪ್ರತಿ ವಿದ್ಯಾರ್ಥಿಯೂ ವಿಭಿನ್ನ. ಅವರ ಕಲಿಕೆ, ಮನೋಧೋರಣೆ, ದೃಷ್ಟಿಕೋನ. ಅಭಿರುಚಿ ಎಲ್ಲವೂ ವಿಭಿನ್ನ. ಕೆಲವು ವಿದ್ಯಾರ್ಥಿಗಳು ಕ್ಷಿಪ್ರವಾಗಿ ಕಲಿಯುತ್ತಾರೆ, ಕೆಲವರು ನಿಧಾನವಾಗಿ ಕಲಿಯುತ್ತಾರೆ. ಒಟ್ಟಾರೆಯಾಗಿ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆ ನೀಡುವ ಬೋಧನಾ ತಂತ್ರಗಳನ್ನು ಆಯ್ಕೆಮಾಡಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಪ್ರೇರೇಪಿಸಲು, ಪ್ರೋತ್ಸಾಹಿಸಲು ಯಾವ ಯಾವ ಬದಲಾವಣೆಗಳು ಅಗತ್ಯವೋ ಅವೆಲ್ಲವನ್ನು ನಿರೀಕ್ಷಿತ ರೀತಿಯಲ್ಲಿ ಬದಲಾಯಿಸಿಕೊಳ್ಳಬೇಕಾಗುತ್ತದೆ.
ಅರ್ಥಪೂರ್ಣ ಸಂವಾದ ನಡೆಸಿ: ತರಗತಿ ಕೋಣೆಯಲ್ಲಿ ಮಕ್ಕಳೊಂದಿಗೆ ಅರ್ಥಪೂರ್ಣ ಸಂವಾದ ಅಗತ್ಯ. ಇದಕ್ಕೆ ಮಕ್ಕಳ ಹೆಸರನ್ನು ಪರಿಚಯಿಸಿಕೊಂಡಿರಬೇಕಾದುದು ತೀರಾ ಅನಿವಾರ್ಯ. ಮಕ್ಕಳನ್ನು ಅವರವರ ಹೆಸರಿನಿಂದ ಕರೆಯುವುದರಿಂದ ಅವರು ತುಂಬಾ ಜಾಗೃತರಾಗಿ ತರಗತಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಯಾವುದಾದರೂ ಒಂದು ಪರಿಕಲ್ಪನೆ ಕುರಿತು ಮಾತನಾಡಲು ಹಿಂಜರಿದಾಗ ಹೆಸರಿನಿಂದ ಅವರನ್ನು ಮಾತನಾಡಿಸಿ. ಆಗ ಧೈರ್ಯದಿಂದ ಮಾತನಾಡಲು ಪ್ರಯತ್ನಿಸುತ್ತಾರೆ. ಇದರಿಂದ ಶಿಕ್ಷಕರು ನಮ್ಮ ಸಹಾಯಕ್ಕಿದ್ದಾರೆ ಎಂಬ ಆತ್ಮವಿಶ್ವಾಸ ಅವರಿಗೆ ಬರುತ್ತದೆ.
ಗುರಿಯ ಸ್ಪಷ್ಟತೆ ಇರಲಿ: ಯಶಸ್ವಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಮಟ್ಟದ ಕಲಿಕೆ ಮೂಡಿಸಲು ಶ್ರಮಿಸುತ್ತಾರೆ. ಅವರು ನಿರ್ದಿಷ್ಟವಾದ ಮತ್ತು ಸಮಂಜಸವಾದ ಉದ್ದೇಶ ಹೊಂದಿದ್ದು ಅವರನ್ನು ಅಭಿವ್ಯಕ್ತಿಸಲು ಸಮರ್ಥರನ್ನಾಗಿಸುತ್ತದೆ. ವಿದ್ಯಾರ್ಥಿಗಳಿಗೆ ತಾವು ಕಲಿತ ಉದ್ದೇಶ ಹಾಗೂ ನಿರೀಕ್ಷೆಗಳು ಸ್ಪಷ್ಟವಾಗಿರಬೇಕು.
ಭಾಗವಹಿಸುವಿಕೆಯನ್ನು ಉತ್ತೇಜಿಸಿ: ಕೆಲವು ವಿದ್ಯಾರ್ಥಿಗಳು ಇತರರಿಗಿಂತ ಭಾಗವಹಿಸುವಿಕೆಯಲ್ಲಿ ಮುಂದೆ ಇರುತ್ತಾರೆ. ಅವರು ಮುಂದಿನ ಸಾಲಿನಲ್ಲಿಯೇ ಕುಳಿತಿರುತ್ತಾರೆ ಹಾಗೂ ಯಾವಾಗಲೂ ಪ್ರಶ್ನೆಗಳಿಗೆ ಉತ್ತರಿಸಲು ಕಾತರದಿಂದ ಇರುತ್ತಾರೆ. ಕೆಲವರು ತರಗತಿ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ. ಹಾಗಾಗಿ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಇದರಿಂದಾಗಿ ತರಗತಿಯಲ್ಲಿ ಅಂತರ ಮೂಡುತ್ತದೆ. ಈ ಅಂತರವನ್ನು ನಿಭಾಯಿಸುವ ಏಕೈಕ ಮಾರ್ಗವೆಂದರೆ ಎಲ್ಲಾ ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸುವುದು. ಪ್ರಶ್ನೆಗಳನ್ನು ಕೇಳಿದ ಕೂಡಲೇ ಕೆಲವು ವಿದ್ಯಾರ್ಥಿಗಳು ನಾಮುಂದು ತಾಮುಂದು ಎಂದು ಕೈ ಎತ್ತುತ್ತಾರೆ. ಉತ್ತರ ಪಡೆಯಲು ಯಾದೃಚ್ಛಿಕ ವಿಧಾನ ಅನುಸರಿಸುವುದು ಉತ್ತಮ. ಇದರಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತರ ಹೇಳುವ ಅವಕಾಶ ದೊರೆಯುತ್ತದೆ  ಹಾಗೂ ತಾವೂ ಉತ್ತರ ಹೇಳಬೇಕೆಂದು ಪ್ರಯತ್ನ ಪಡುವ ಮೂಲಕ ಅಭ್ಯಾಸದಲ್ಲಿ ತೊಡಗುತ್ತಾರೆ. ಒಬ್ಬ ವಿದ್ಯಾರ್ಥಿಗೆ ಪ್ರಶ್ನೆಕೇಳಿ ಉತ್ತರ ಪಡೆಯುವ ಬದಲು ಇಡೀ ತರಗತಿಗೆ ಪ್ರಶ್ನೆ ಕೇಳಿ ಒಬ್ಬೊಬ್ಬರಿಂದ ಉತ್ತರ ಪಡೆಯುವುದು ಒಳಿತು.
ತರಗತಿ ಚಟುವಟಿಕೆಗಳು ಆಸಕ್ತಿದಾಯಕವಾಗಿರಲಿ: ವಿದ್ಯಾರ್ಥಿಗಳ ಕಲಿಕಾಂಶದ ಧಾರಣ ಶಕ್ತಿ ಹೆಚ್ಚಿಸಲು ಚಟುವಟಿಕೆಗಳು ಸಹಕಾರಿ. ಉತ್ತಮವಾದ ಚಟುವಟಿಕೆಗಳನ್ನು ವಿನ್ಯಾಸಗೊಳಿಸುವುದು ಒಂದು ಕಲೆ. ಚಟುವಟಿಕೆಗಳು ಕಲಿಕಾಂಶ ಕುರಿತ ತಪ್ಪು ಗ್ರಹಿಕೆಗಳನ್ನು ನಿವಾರಿಸುವುದರ ಜೊತೆಗೆ ಮುಕ್ತ ಚರ್ಚೆಗೆ ಅವಕಾಶ ಕೊಡುತ್ತವೆ. ಹಾಗೂ ಭಿನ್ನ ಕಲಿಕಾಂಶಗಳಿಗೆ ಸಂಪರ್ಕ ಕೊಂಡಿಯಾಗಿರುತ್ತವೆ.
ಹೀಗೆ ಮೇಲಿನ ಅಂಶಗಳನ್ನು ಪಾಲಿಸುವುದರಿಂದ ತರಗತಿಯನ್ನು ಪರಿಣಾಮಕಾರಿಯನ್ನಾಗಿ ಮಾಡಬಹುದು. ಅಲ್ಲದೇ ಶಿಶುಕೇಂದ್ರಿತ ವ್ಯವಸ್ಥೆಗೆ ಪೂರಕವಾದ ಶಿಕ್ಷಣವನ್ನು ನೀಡಬಹುದು.
ಆರ್.ಬಿ.ಗುರುಬಸವರಾಜ. ಶಿಕ್ಷಕರು


ವೃತ್ತಿಪರ ಕೌಶಲ್ಯಗಳ ಬೆನ್ನತ್ತಿ......

ಜುಲೈ 2014ರ 'ಟೀಚರ್' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ
ವೃತ್ತಿಪರ ಕೌಶಲ್ಯಗಳ ಬೆನ್ನತ್ತಿ......

ಇಂದು ಸಮೂಹ ಮಾಧ್ಯಮಗಳ ಭರಾಟೆಯಿಂದಾಗಿ ಜಗತ್ತು ಕಿರಿದಾಗಿದೆ. ಮಾಹಿತಿ ತಂತ್ರಜ್ಞಾನನವು ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿದೆ. ಹೊಸ ಜ್ಞಾನ ಎಂದುಕೊಂಡದ್ದು ಕೆಲವೇ ಸಮಯದಲ್ಲಿ ಹಳೆಯದಾಗುತ್ತದೆ. ಜಾಗತಿಕ ಮಟ್ಟದಲ್ಲಿ ಊಹಿಸಲಾರದಷ್ಟು ಹೊಸ ಹೊಸ ತಂತ್ರಜ್ಞಾನ ಬೆಳೆಯುತ್ತಿದೆ. ಜೊತೆಜೊತೆಗೆ ಸವಾಲುಗಳು ಕೂಡಾ.
ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ನಮ್ಮೆಲ್ಲ ಆಶೋತ್ತರಗಳನ್ನು, ಜೀವನಶೈಲಿಯನ್ನು ಬದಲಾಯಿಸಿಕೊಳ್ಳುತ್ತಿದ್ದೇವೆ. ಆದರೆ ಶಿಕ್ಷಕರಾದ ನಾವು ನಮ್ಮ ವೃತ್ತಿಪರತೆಯ ಹೊಸ ಆಲೋಚನೆಗಳನ್ನು, ಸಾಧ್ಯತೆಗಳನ್ನು ಮರೆತಿದ್ದೇವೆ. ಪರಿಣಾಮವಾಗಿ ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನ ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಹಿಂದಿನ ನಂಬಿಕೆಯ ತಳಹದಿಯ ಮೇಲೆ ಕಾರ್ಯನಿರ್ವಹಿಸುತ್ತೇವೆ ಎಂದುಕೊಂಡರೆ ಅದು ನಮ್ಮ ಮೂರ್ಖತನದ ಪರಮಾವಧಿ ಆದೀತು. ಇಂದಿನ ಸ್ಪರ್ದಾತ್ಮಕ ಪ್ರಪಂಚದಲ್ಲಿ ನಿರ್ದಿಷ್ಟ ಗುರಿ ತಲುಪಲು ಹಳೆಯ ಕೌಶಲಗಳಷ್ಟೇ ಸಾಲವು. ಅವುಗಳ ಜೊತೆಗೆ ಹೊಸ ಹೊಸ ತಂತ್ರಗಳನ್ನು, ಕೌಶಲಗಳನ್ನು ಅಳವಡಿಸಿಕೊಳ್ಳಬೇಕಿದೆ.
ಇಂದಿನ ಮಕ್ಕಳು ಹಿಂದಿನಂತಿಲ್ಲ. ಅವರ ಬೇಕು ಬೇಡಿಕೆಗಳು, ಆಶೋತ್ತರಗಳು, ಚಟುವಟಿಕೆಗಳು, ಎಲ್ಲವೂ ಬದಲಾಗಿವೆ. ಇಂತಹ ಮಕ್ಕಳ ನಿರ್ವಹಣೆಗೆ ಅಗತ್ಯವಿರುವ ವೃತ್ತಿಪರತೆ ನಮ್ಮಲ್ಲಿದೆಯಾ? ಎಂದು ಯೋಚಿಸುವ ಅಗತ್ಯವಿದೆ. 
ಮಕ್ಕಳು ಬದಲಾದಂತೆ ಸಮುದಾಯವೂ ಬದಲಾಗಿದೆ. ಪಾಲಕರ ದೃಷ್ಟಿಕೊನಗಳು ಬದಲಾಗಿವೆ. ತಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ಬೇಕು ಎಂಬ ಬಗ್ಗೆ ಅವರು ಚರ್ಚಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಅವರು ಯಾವ ತ್ಯಾಗಕ್ಕಾದರೂ ಸಿದ್ದರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಇಲಾಖೆ ನೀಡುವ ವೃತ್ತಿಪರ ತರಬೇತಿ ಸಾಕೇ? ಅಥವಾ ಅದರ ಜೊತೆಗೆ ಇತರೆ ಕೌಶಲಗಳು ಬೇಕೇ? ಹಾಗಾದರೆ ಅವನ್ನು ಪಡೆಯುವ ಮಾರ್ಗಗಳೇನು ಎಂಬುದನ್ನು ಶಿಕ್ಷಕರಾದ ನಾವು ಹುಡುಕಬೇಕಿದೆ. ಆ ಕಾರಣಕ್ಕಾಗಿಯಾದರೂ  ನಮ್ಮ ವೃತ್ತಿ ಪರತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ.
ಒಬ್ಬ ವಕೀಲನ ಮನೆಗೆ ಹೋದರೆ ಅಲ್ಲಿ ಅವನ ವೃತ್ತಿಗೆ ಸಂಬಂಧಿಸಿದ ಪುಸ್ತಕಗಳು ರಾರಾಜಿಸುತ್ತವೆ. ಅಂತೆಯೇ ಒಬ್ಬ ಪೋಲೀಸ್ ಅಧಿಕಾರಿಯ ಮನೆಗೆ ಹೋದರೂ ಕೂಡಾ ಆತನ ವೃತ್ತಿಗೆ ಸಂಬಂಧಿಸಿದ ಗ್ರಂಥಗಳು ಕಪಾಟಿನಲ್ಲಿರುತ್ತವೆ. ಜೊತೆಗೆ ತಮ್ಮ ವೃತ್ತಿಯಲ್ಲಿ ಕೈಗೊಂಡ ನಾವೀನ್ಯ ರೀತಿಯ ತಂತ್ರಗಳು ಮತ್ತು ಕೌಶಲಗಳ ಬಗ್ಗೆ ದಾಖಲೆ ಇಟ್ಟಿರುತ್ತಾರೆ. ಆದರೆ ಶಿಕ್ಷಕರಾದ ನಾವ್ಯಾಕೆ ಇನ್ನೂ ಅವರಂತಾಗಿಲ್ಲ. ಎಷ್ಟು ಜನ ಶಿಕ್ಷಕರ ಮನೆಗಳಲ್ಲಿ ವೃತ್ತಿಗೆ ಸಂಬಂಧಿಸಿದ ಪುಸ್ತಕಗಳಿವೆ? ನಾವ್ಯಾಕೆ ವೃತ್ತಿಯಲ್ಲಿ ಕೈಗೊಂಡ ತಂತ್ರಗಳ ಬಗ್ಗೆ, ಕೌಶಲಗಳ ಬಗ್ಗೆ ದಾಖಲೆ ಇಡುತ್ತಿಲ್ಲ? ವೃತ್ತಿಯಲ್ಲಿ ವಿಶೇಷವಾದುದನ್ನು ನಾವೇನು ಮಾಡಿದ್ದೇವೆ ಎಂದು ತೋರಿಸಲು ಕನಿಷ್ಟ ಒಂದು ದಾಖಲೆಯೂ ನಮ್ಮಲಿಲ್ಲವಾದರೆ ನಮ್ಮಲ್ಲಿರುವ ವೃತ್ತಿಪರತೆ ಎಂತಹದು! ಒಮ್ಮೆ ಯೋಚಿಸೋಣ.
ವೃತ್ತಿ ಪರತೆ ಹೆಚ್ಚಿಸಿಕೊಳ್ಳಲು ಇಂದು ಅನೇಕ ದಾರಿಗಳಿವೆ. ಜ್ಞಾನದ ಎಲ್ಲಾ ಆಯಾಮಗಳನ್ನು ತಲುಪಲು ಸಾಧ್ಯವಾಗದಿದ್ದರೂ ಕನಿಷ್ಟ ಆಯಾಮಗಳನ್ನಾದರೂ ತಲುಪಬೇಡವೇ? ನಾವು ಕೈಗೊಂಡ ಒಂದು ಚಿಕ್ಕ ಕಾರ್ಯವನ್ನು ದೊಡ್ಡದಾಗಿ ಪ್ರಚಾರ ಮಾಡಲು ಅನೇಕ ಮಾರ್ಗಗಳಿವೆ. ಮಾಹಿತಿ ತಂತ್ರಜ್ಞಾನದಲ್ಲಿ ಇದಕ್ಕೆ ವಿಫುಲ ಅವಕಾಶಗಳಿವೆ. ನಮ್ಮಲ್ಲಿನ ಮೋಬೈಲ್ ಫೋನನ್ನು ಒಂದು ಸಾಧನವಾಗಿ ಬಳಸಬಹುದು. ಫೇಸ್‍ಬುಕ್, ಟ್ವೀಟರ್, ವಾಟ್ಸಪ್‍ನಂತಹ ಸಾಮಾಜಿಕ ತಾಣಗಳ ಮೂಲಕ ನಮ್ಮ ಕೌಶಲಗಳನ್ನು ಪ್ರಚಾರಗೊಳಿಸಬಹುದಾಗಿದೆ. ಅಂತೆಯೇ ಹೊಸ ಹೊಸ ಕೌಶಲಗಳನ್ನು ಪತ್ತೆ ಹಚ್ಚಬಹುದಾಗಿದೆ. 
ನಾವು ಅಪ್‍ಡೇಟ್ ಆಗಲು ಇನ್ನೊಂದು ಮಾರ್ಗವೆಂದರೆ ಪ್ರತಿ ತಿಂಗಳು ನಮ್ಮ ವೇತನದಿಂದ ಕನಿಷ್ಟ 100 ರೂ ಬೆಲೆಯ ವೃತ್ತಿಪರ ಪುಸ್ತಕಗಳನ್ನು ಖರೀದಿಸುವುದು. ಹೀಗೆ ವರ್ಷದಲ್ಲಿ ಕನಿಷ್ಟ 1000 ರೂ ಬೆಲೆಯಂತೆ 25-30 ವರ್ಷಗಳ ಸೇವೆಯಲ್ಲಿ 25000-30000 ರೂ.ಗಳ ಪುಸ್ತಕಗಳು ಸಂಗ್ರಹವಾಗುತ್ತವೆ. ನಮಗರಿವಿಲ್ಲದಂತೆ ನಮ್ಮದೇ ಆದ ಸ್ವಂತ ಗ್ರಂಥಾಲಯವೊಂದು ನಿರ್ಮಾಣವಾಗಿರುತ್ತದೆ. ವೃತ್ತಿಪರತೆಯನ್ನು ಸಾಬೀತುಪಡಿಸಲು ಇದೊಂದು ಉತ್ತಮ ಮಾರ್ಗವಾಗಬಹುದಲ್ಲವೇ? ಒಮ್ಮೆ ಯೋಚಿಸಿ ಕಾರ್ಯತತ್ಪರರಾಗಿ.
ಆರ್.ಬಿ.ಗುರುಬಸವರಾಜ ಶಿಕ್ಷಕರು


July 2, 2014

ಇಂಟೀರಿಯರ್ ಡಿಸೈನ್

ದಿನಾಂಕ 02-07-2014 ರಂದು 'ವಿಜಯವಾಣಿ'ಯ ಮಸ್ತ್ ಪುರವಣಿಯಲ್ಲಿ ಪ್ರಕಟವಾದ 'ಇಂಟೀರಿಯರ್ ಡಿಸೈನ್' ಎಂಬ ಲೇಖನ



ಇಂಟೀರಿಯರ್ ಡಿಸೈನ್
ಕಲೆಗೆ ತಂತ್ರಜ್ಞಾನದ ಸ್ಪರ್ಶ

ಬಹುನಿರೀಕ್ಷೆಯ ಬಿಗ್‍ಬಾಸ್ ಸೀಸನ್-2 ಶುರುವಾಗಿದೆ. ಸ್ಪರ್ಧಾಳುಗಳು ಉಳಿದುಕೊಂಡಿರುವ ಮನೆಯೇ ಎಲ್ಲರ ಆಕರ್ಷಣೆಯ ವಸ್ತು. ಇಲ್ಲಿನ ಸೌಲಭ್ಯಗಳು, ಆಸನಗಳ ವ್ಯವಸ್ಥೆ, ಬಣ್ಣ ಮತ್ತು ಛಾಯೆಗಳ ಬಳಕೆ, ರಂಗು ರಂಗಿನ ವಿದ್ಯುತ್ ಬಲ್ಬ್‍ಗಳ ಚಿತ್ತಾರ ಹೀಗೆ ಪ್ರತಿಯೊಂದು ವ್ಯವಸ್ಥೆಯೂ ನೋಡುಗರಲ್ಲಿ ಬೆರಗು ಮೂಡಿಸುತ್ತದೆ. ಅದನ್ನು ನೋಡಿದ ಪ್ರತಿಯೊಬ್ಬರಲ್ಲೂ ನಮ್ಮ ಮನೆಯಲ್ಲಿಯೂ ಅಂತಹ ವ್ಯವಸ್ಥೆ ಇದ್ದರೆ ಹೇಗೆ ಎಂಬ ಕನಸು ಮೂಡಿರಲೂಬಹುದು. ಮನೆ ಎಂದರೆ ಕೇವಲ ದೇಹವನ್ನು ವಿಶ್ರಾಂತಿಗೊಳಿಸುವ ತಾಣ ಮಾತ್ರವಲ್ಲ. ಅದು ನಮಗೆ ಸುರಕ್ಷತೆ, ಶಾಂತತೆಯ ಜೊತೆಗೆ ಮನೋರಂಜನೆ ನೀಡುವ ನೆಮ್ಮದಿಯ ಸ್ಥಳವಾಗಿದೆ. ಕುಗ್ಗುತ್ತಿರುವ ವಸತಿ ಜಾಗ ಹಾಗೂ ಸುಧಾರಿತ ಜೀವನ ಶೈಲಿಯಿಂದಾಗಿ ಸುಸಜ್ಜಿತ ಮತ್ತು ಅಂದವಾದ ಮನೆ ನಿರ್ಮಾಣ ಪ್ರತಿಯೊಬ್ಬರ ಹಂಬಲವಾಗಿದೆ.
ಸಾಮಾನ್ಯವಾಗಿ ಮನೆ/ಬಂಗಲೆ/ಅಪಾರ್ಟಮೆಂಟ್/ಷಾಪಿಂಗ್ ಮಾಲ್‍ಗಳಲ್ಲಿನ ಒಳಾಂಗಣ ವಿನ್ಯಾಸ ಹಾಗೂ ಬಣ್ಣಗಳ ಆಯ್ಕೆ ನಮ್ಮ ಜೀವನ ಶೈಲಿಯನ್ನು, ವೈಯಕ್ತಿಕ ಆಸಕ್ತಿಗಳನ್ನು ಬಿಂಬಿಸುತ್ತದೆ.
ಪ್ರತಿಯೊಬ್ಬರೂ ತಮ್ಮದೇ ಆದ ಕನಸಿನ ಮನೆ ನಿರ್ಮಾಣಕ್ಕೆ ಹೆಚ್ಚು ಉತ್ಸುಕರಾಗಿರುತ್ತಾರೆ. ಹಾಗಾಗಿ ಮನೆಯನ್ನು ಅಂದಗೊಳಿಸಲು ಸೃಜನಶೀಲ ಒಳಾಂಗಣ ವಿನ್ಯಾಸಕಾರರಿಗೆ(ಇಂಟೀರಿಯರ್ ಡಿಸೈನರ್) ಹೆಚ್ಚು ಬೇಡಿಕೆ ಇದೆ. ಅದರಲ್ಲೂ ವೃತ್ತಿಪರ ತರಬೇತಿ ಪಡೆದವರಿಗಂತೂ ತುಂಬಾ ಬೇಡಿಕೆ ಇದೆ.
ಜಾಣ್ಮೆ, ಕೌಶಲ್ಯ ಮತ್ತು ಉತ್ಸಾಹ ಇರುವವರಿಗೆ ಇದು ಒಂದು ಉತ್ತಮ ಕ್ಷೇತ್ರವಾಗಿದೆ. ಅದಕ್ಕಾಗಿ ಔಪಚಾರಿಕ ಶಿಕ್ಷಣ ಅಗತ್ಯ. ಕರ್ನಾಟಕ ಸೇರಿದಂತೆ ದೇಶದ ಪ್ರತಿಷ್ಟಿತ ಸ್ಥಳಗಳಲ್ಲಿ ಇಂಟೀರಿಯರ್ ಡಿಸೈನ್ ಬಗ್ಗೆ ಶಿಕ್ಷಣ ನೀಡುವ ಅನೇಕ ಕಾಲೇಜುಗಳಿವೆ.
ವಿದ್ಯಾರ್ಹತೆ : ಇಂಟೀರಿಯರ್ ಡಿಸೈನ್ ಕ್ಷೇತ್ರಕ್ಕೆ ಸೇರಲು ಯಾವುದಾದರೂ ವಿಭಾಗದ ಪಿ.ಯು.ಸಿ.ಯಲ್ಲಿ ಶೇಕಡಾ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ವಿಜ್ಞಾನ ವಿಭಾಗದವರಿಗೆ ಪ್ರಥಮ ಆಧ್ಯತೆ. ಕೆಲವು ಕಾಲೇಜುಗಳು ಫಲಿತಾಂಶಕ್ಕಾಗಿ ಕಾಯುವವರಿಗೂ ಪ್ರವೇಶ ನೀಡುತ್ತವೆ.
ಆಯ್ಕೆಯ ವಿಧಾನ : ಆಸಕ್ತ ಅಭ್ಯರ್ಥಿಗಳು ಸೂಕ್ತ ಕಾಲೇಜನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ಕೆಲವು ಕಾಲೇಜುಗಳು ಆಯ್ಕೆಗಾಗಿ ಪ್ರವೇಶ ಪರೀಕ್ಷೆ ನಡೆಸುತ್ತವೆ. ಕೆಲವು ಕಾಲೇಜುಗಳು ನೇರ ಸಂದರ್ಶನ ನಡೆಸುತ್ತವೆ.
ಕೋರ್ಸನ ವಿಧಗಳು :
3 ವರ್ಷದ ಪದವಿ ಕೋರ್ಸ(ಬಿ.ಎಸ್ಸಿ)
2 ವರ್ಷದ ಡಿಪ್ಲೋಮಾ ಕೋರ್ಸ
1 ವರ್ಷದ ಸರ್ಟಿಫಿಕೆಟ್ ಕೋರ್ಸ
ಏಕೆ ಈ ಕೋರ್ಸ? : ಮಹಾತ್ವಾಕಾಂಕ್ಷಿ ವ್ಯಕ್ತಿಗಳ ಸೃಜನಶೀಲತೆಯನ್ನು ಹೊರತರುವುದು ಇಂಟೀರಿಯರ್ ಡಿಸೈನ್ ಕೋರ್ಸನ ಉದ್ದೇಶವಾಗಿದೆ. ಈ ಕೋರ್ಸನಲ್ಲಿ ವಾಸಯೋಗ್ಯ ಅಥವಾ ವಾಣಿಜ್ಯೋಧ್ಯಮ ಸ್ಥಳವನ್ನು ಅಗಾಧ ಸುಂದರವಾಗಿ ಮಾಡುವ ಕೌಶಲ್ಯವನ್ನು ಕಲಿಸಲಾಗುತ್ತದೆ.
ಆಹ್ಲಾದಕರ ವಾತಾವರಣ ನಿರ್ಮಿಸುವ ಹಾಗೂ ಹೊಸ ಪ್ರಪಂಚವನ್ನು ಸೃಷ್ಟಿಸುವ ಆಕಾಂಕ್ಷೆ ಇರುವವರಿಗೆ ಈ ಕೋರ್ಸ ಹೆಚ್ಚಿನ ಸಾಮಥ್ರ್ಯ ನೀಡುತ್ತದೆ. ಈ ಕೋರ್ಸನಲ್ಲಿ ಅಭ್ಯರ್ಥಿಗಳು ಚಿತ್ರಕಲೆಯನ್ನು ಆಧುನಿಕ ವಿನ್ಯಾಸದ ಉಪಕರಣಗಳೊಂದಿಗೆ ತಳುಕು ಹಾಕುವ ಕಲೆಯನ್ನು ಸಿದ್ದಿಸಿಕೊಳ್ಳುವರು. ಇದೊಂದು ಕಲೆಯ ವಿಜ್ಞಾನವಾಗಿದ್ದು, ಆಧುನಿಕ ಜೀವನದ ಪರಿಣಾಮಕಾರಿ ಪ್ರದೇಶಗಳಲ್ಲಿ ವ್ಯಾಪಕ ಶ್ರೇಣಿಗಳಲ್ಲಿ ಉತ್ತಮ ಕಲಾಕೃತಿ ನಿರ್ಮಿಸಲು ಆಸಕ್ತಿ ಇರುವವರಿಗೆ ಉತ್ತಮ ಕ್ಷೇತ್ರವಾಗಿದೆ.

ಕೋರ್ಸನಲ್ಲಿ ಏನಿರುತ್ತದೆ? :
ವಿನ್ಯಾಸದ ಪರಿಕಲ್ಪನೆ ಮತ್ತು ಮೂಲತತ್ವಗಳು
ವಿನ್ಯಾಸ ಮತ್ತು ರೇಖಾಚಿತ್ರ(ಗ್ರಾಫಿಕ್ಸ್)ಗಳ ಕೌಶಲ
ಲೇಔಟ್ ಮತ್ತು ಪ್ರಸ್ತುತಿ ತಂತ್ರಗಳು
ವಿನ್ಯಾಸ ಮತ್ತು ದೃಶ್ಯಕಲೆ ಪ್ರಸ್ತುತಿ ವಿಧಾನಗಳು
ಕಟ್ಟಡ ರಚನೆಯ ಪರಿಕಲ್ಪನೆ
ಕಟ್ಟಡದ ಭದ್ರತೆ, ವಿದ್ಯುತ್ ಮತ್ತು ಅಲಂಕಾರಿಕ ವ್ಯವಸ್ಥೆಯ ಪರಿಕಲ್ಪನೆ
ವಿನ್ಯಾಸದ ಆಧುನಿಕ ಮಾಧ್ಯಮ ತಂತ್ರಗಳು
ನೀಲನಕ್ಷೆಯ ಅನ್ವಯ
ಮಾರುಕಟ್ಟೆ ಮತ್ತು ಉಧ್ಯಮ ಶೀಲತೆಯ ಕೌಶಲ
ಸಂವಹನ ಕೌಶಲ

ಕೋರ್ಸನ ನಂತರ : ಕೋರ್ಸನ ನಂತರ ಸಾಕಷ್ಟು ಪ್ರಾಯೋಗಿಕ ಮತ್ತು ತಾಂತ್ರಿಕ ಅನ್ವಯಗಳ ಅವಶ್ಯಕತೆ ಇದೆ. ಅದಕ್ಕಾಗಿ ಕ್ಷೇತ್ರಕಾರ್ಯ ಅಗತ್ಯ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆಕರಗಳೊಂದಿಗೆ ಕಲೆಯನ್ನು ಮೇಳೈಸುವುದು ಮುಖ್ಯ. ಅಂದರೆ ಕಲೆಗೆ ತಂತ್ರಜ್ಞಾನದ ಸ್ಪರ್ಶದ ಅಗತ್ಯವಿದೆ. ಅದಕ್ಕಾಗಿ ಕಟ್ಟಡ ಮಾಲೀಕರಿಗೆ ಒಪ್ಪಿತ ರೀತಿಯಲ್ಲಿ ವಿನ್ಯಾಸ ಮಾಡುವುದು ಮುಖ್ಯ. ಸ್ಥಳಾವಕಾಶದ ಪರಿಪೂರ್ಣ ಸದ್ಬಳಕೆಗಾಗಿ ಬಣ್ಣಗಳು, ಛಾಯೆಗಳು ಹಾಗೂ ಆಕಾರಗಳ ಆಯ್ಕೆ ಪ್ರಮುಖವಾಗಿರುತ್ತದೆ.
ಡಿಪ್ಲೋಮಾ ಇನ್ ಇಂಟೀರಿಯರ್ ಡಿಸೈನ್ ನಂತರ ಉನ್ನತ ಪದವಿ ಕೋರ್ಸಗಳಾದ ಬಿ.ಇ(ಆರ್ಕಿಟೆಕ್ಟ್), ಬಿ.ಎಸ್ಸಿ(ಆರ್ಕಿಟೆಕ್ಟ್) ಅಥವಾ ಎಂ.ಬಿ.ಎ(ಆರ್ಕಿಟೆಕ್ಟ್) ಮಾಡಬಹುದು.
ಈ ಕ್ಷೇತ್ರಕ್ಕೆ ಉಜ್ವಲವಾದ ಭವಿಷ್ಯವಿದೆ. ನಿರ್ಮಾಣ ಹಂತದಲ್ಲಿನ ಪ್ರತಿಯೊಂದು ಕಟ್ಟಡಗಳಲ್ಲಿ ಒಳಾಂಗಣ ವಿನ್ಯಾಸಕಾರರಿಗೆ ಹೆಚ್ಚು ಬೇಡಿಕೆ ಇದೆ.
ಉನ್ನತ ಪದವಿಯ ನಂತರ ದೃಶ್ಯ ಮಾರುಕಟ್ಟೆ ವಿನ್ಯಾಸಕರಾಗಿ, ಉತ್ಪಾದನಾ ವಿನ್ಯಾಸಕರಾಗಿ, ಕಾರ್ಯಕಾರಿ ವಿನ್ಯಾಸಕರಾಗಿ ಅಥವಾ ವಾಸಸ್ಥಳ ಮತ್ತು ವಾಣಿಜ್ಯೋಧ್ಯಮ ಒಳಾಂಗಣ ವಿನ್ಯಾಸಕಾರರಾಗಿ, ಸಲಹೆಗಾರರಾಗಿ ಕಾರ್ಯ ನಿರ್ವಹಿಸಬಹುದು. ಸದ್ಯದಲ್ಲಿ ವಾರ್ಷಿಕವಾಗಿ 3 ಲಕ್ಷದಿಂದ 5 ಲಕ್ಷದವರೆಗೆ ಹಣ ಗಳಿಸಬಹುದು. ಭವಿಷ್ಯದಲ್ಲಿ ಇದು ಇನ್ನೂ ಹೆಚ್ಚಲಿದೆ.

ಕರ್ನಾಟಕದ ಕೆಲವು ಇಂಟೀರಿಯರ್ ಡಿಸೈನ್ ಕಾಲೇಜುಗಳು:
ಎಕ್ಸ್‍ಟೀರಿಯರ್ ಇಂಟೀರಿಯರ್ಸ್(ಪ್ರೈ) ಲಿಮಿಟೆಡ್-ಬೆಂಗಳೂರು (080 22215451)
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ- ಕೋಲಾರ( 08153 274424), ಚಾಮರಾಜನಗರ(08226 222454), ಬೆಂಗಳೂರು(080 25287698), ಹಾಸನ(08172 256664), ಬೆಳಗಾಂ(0831 2401162)
ಇಂಟೀರಿಯರ್ ಅಂಡ್ ಫ್ಯಾಷನ್ ಡಿಸೈನ್ ಇನ್ಸ್ಟಿಟ್ಯೂಟ್- ಬೆಂಗಳೂರು (98455 45955)
ಇಂಡಿಯನ್ ಡಿಸೈನ್ ಅಕಾಡೆಮಿ-ಬೆಂಗಳೂರು(95905 95538)
ಕರಾವಳಿ ಕಾಲೇಜ್-ಮಂಗಳೂರು(0824 2455656)
ಕ್ವೀನ್ಸ್ ಸ್ಕೂಲ್ ಆಫ್ ಡಿಸೈನ್-ಮೈಸೂರು(0821 2561835)
ರಪ್ಫಾಲ್ಸ್ ಮಿಲೆನಿಯಮ್ ಇಂಟೀರಿಯರ್-ಕೋರಮಂಗಲ, ಬೆಂಗಳೂರು (96864 45562)
ಶ್ರೀದೇವಿ ಕಾಲೇಜ್ ಆಫ್ ಇಂಟೀರಿಯರ್ ಡೆಕೋರೇಷನ್- ಮಂಗಳೂರು
ಸೃಷ್ಠಿ ಸ್ಕೂಲ್ ಆಫ್ ಟಿಸೈನ್ ಟೆಕ್ನಾಲಜಿ-ಯಲಹಂಕ, ಬೆಂಗಳೂರು(080 40447000)

ಆರ್.ಬಿ.ಗುರುಬಸವರಾಜ. ಶಿಕ್ಷಕರು
ಹೊಳಗುಂದಿ(ಪೊ)
ಹೂವಿನ ಹಡಗಲಿ(ತಾ)
ಬಳ್ಳಾರಿ(ಜಿ) 583219
9902992905