October 28, 2014

ಕನ್ನಡ ನುಡಿಗೆ ಬಸ್ ಸೇವೆ

ದಿನಾಂಕ 28-10-2014 ರ ಪ್ರಜಾವಾಣಿಯ "ಕರ್ನಾಟಕ ದರ್ಶನ" ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ.
          ಕನ್ನಡ ನುಡಿಗೆ ಬಸ್ ಸೇವೆ
    ಬಸ್ ಪ್ರಯಾಣ ಎಂದರೆ ಬಹುತೇಕರಿಗೆ ಅಲರ್ಜಿ. ಅದರಲ್ಲೂ ರಾಜ್ಯ ರಸ್ತೆ ಸಾರಿಗೆ ಬಸ್‍ಗಳೆಂದರೆ ಇನ್ನೂ ಬೇಜಾರು. ಪ್ರಯಾಣದ ವೇಳೆ ಪತ್ರಿಕೆಯೋ, ಪುಸ್ತಕವೋ ಇದ್ದರೆ ಪ್ರಯಾಣ ಪ್ರಯಾಸವಾಗಲಾರದು ಅಲ್ಲವೇ? ಇವೆಲ್ಲವೂ ಬಸ್‍ನಲ್ಲೇ ಪುಕ್ಕಟೆ ದೊರೆಯುವಂತಾದರೆ ಹೇಗೆ? ಏನು ಕನಸು ಕಾಣುತ್ತಿದ್ದೀರಾ! ಎಂಬ ಪ್ರಶ್ನೆ ನಿಮ್ಮದಲ್ಲವೇ? ಇದು ಕನಸಲ್ಲ ನನಸು.
    ಹೊಸಪೇಟೆ ವಿಭಾಗದ ಹಗರಿಬೊಮ್ಮನಹಳ್ಳಿ ಘಟಕದ ಕೆ.ಎ35 ಎಫ್115 ಸಂಖ್ಯೆಯ ವಾಹನದಲ್ಲಿ ಇಂತದ್ದೊಂದು ಸೌಲಭ್ಯವಿದೆ. ಈ ಬಸ್ ಹೆಚ್ಚಾಗಿ ಹೊಸಪೇಟೆ ದಾವಣಗೆರೆ ಮಾರ್ಗದಲ್ಲಿ ಸಂಚರಿಸುತ್ತದೆ. ಈ ಬಸ್‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ದಿನಪತ್ರಿಕೆಗಳು, ವಾರಪತ್ರಿಕೆಗಳು, ಕೆಲವು ಸಾಹಿತ್ಯಿಕ ಪುಸ್ತಕಗಳು ಪುಕ್ಕಟೆಯಾಗಿ ಓದಲು ಸಿಗುತ್ತವೆ.
    ಅಷ್ಟೇ ಅಲ್ಲ, ವಾಹನದ ಒಳಭಾಗದಲ್ಲಿ ಕನ್ನಡ ನಾಡಿನ ಕೀರ್ತಿ ಬೆಳಗಿದ ಪ್ರಮುಖ ಸಾಹಿತಿಗಳ ಭಾವಚಿತ್ರಗಳೂ ಸಹ ಇವೆ. ಪ್ರಯಾಣದ ವೇಳೆ ಸಾಹಿತ್ಯಿಕ ವಿಚಾರಗಳನ್ನು ಮತ್ತು ನಿತ್ಯದ ಸುದ್ದಿಗಳನ್ನು ಮೆಲುಕು ಹಾಕಬಹುದು.
    ಈ ಬಗ್ಗೆ ಘಟಕದ ನಿರ್ವಾಹಕರಾದ ಎಂ.ಗೌರಿಶಂಕರ ಅವರನ್ನು ವಿಚಾರಿಸಿದಾಗ “ಇಂದಿನ ಸ್ಪರ್ದಾತ್ಮಕ ಪ್ರಪಂಚದಲ್ಲಿ ಪ್ರಯಾಣಿಕರನ್ನು ಆಕರ್ಷಿಸುವುದು ಅನಿವಾರ್ಯ. ಆಡಿಯೋ/ವೀಡಿಯೋ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಸೆಳೆಯುವ ಬದಲು ಪತ್ರಿಕೆ-ಪುಸ್ತಕಗಳನ್ನು ಇಡಲಾಗಿದೆ. ಆ ಮೂಲಕವಾದರೂ ಪ್ರಯಾಣಿಕರಲ್ಲಿ ಕನ್ನಡಾಭಿಮಾನ ಬೆಳೆಯಲಿ ಎಂಬುದು ನಮ್ಮ ಆಶಯ. ಇದರ ಉಸ್ತುವಾರಿಯನ್ನು ಶಿವಣ್ಣ(ಬಿಲ್ಲೆ ಸಂಖ್ಯೆ 2193) ಎಂಬ ನಿರ್ವಾಹಕರು ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ” ಎಂದು ಖುಷಿಯಿಂದ ಹೇಳುತ್ತಾರೆ.
    ಪುಸ್ತಕ/ಪತ್ರಿಕೆ ಇಡಲು ನೇತುಹಾಕಿದ ಟ್ರೇ ಮೇಲೆ “ಪುಸ್ತಕ ಮತ್ತು ಪತ್ರಿಕೆಗಳನ್ನು ಓದಿದ ನಂತರ ಇದರಲ್ಲಿಯೇ ಇಡಿ” ಎಂಬ ವಿನಂತಿಯನ್ನು ಅಂಟಿಸಲಾಗಿದೆ. ನೀವೊಮ್ಮೆ ಈ ಬಸ್‍ನಲ್ಲಿ ಪ್ರಯಾಣಿಸಿದರೆ ನೀವು ಖರೀದಿಸಿದ ಪತ್ರಿಕೆ/ಪುಸ್ತಕಗಳನ್ನು ಇದರಲ್ಲಿ ಹಾಕಿ. ಅದು ಇತರೆ ಪ್ರಯಾಣಿಕರಿಗೆ ಓದಲು ಸಹಾಯವಾಗುತ್ತದೆ. ಆ ಮೂಲಕವಾದರೂ ನಾಡು-ನುಡಿಗೆ ಸೇವೆ ಸಲ್ಲಿಸಿದಂತಾಗುತ್ತದೆ. ಏನಂತೀರಿ?

            -ಆರ್.ಬಿ.ಗುರುಬಸವರಾಜ.   




October 22, 2014

ಸಹಿಯೊಳಗಿನ ಸವಿ

 ದಿನಾಂಕ 22-10-2014 ರ ವಿಜಯವಾಣಿಯ 'ಮಸ್ತ್' ಪುರವಣಿಯಲ್ಲಿ ಪ್ರಕಟವಾದ "ಸಹಿಯೊಳಗಿನ ಸವಿ" ಎನ್ನುವ ನನ್ನ ಲೇಖನ.
                               ಸಹಿಯೊಳಗಿನ ಸವಿ
    ನಿತ್ಯ ಜೀವನದಲ್ಲಿ ವಿವಿಧ ಕೆಲಸ ಕಾರ್ಯಗಳಿಗಾಗಿ ನಮ್ಮ ರುಜುವಾತನ್ನು ಸಾಬೀತುಪಡಿಸಲು ಸಹಿ ಹಾಕುತ್ತೇವೆ.  ‘ಸಹಿ’ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖವಾದ ಸಾಕ್ಷಿ. ಸಹಿ ಎಂಬುದು ನಿರ್ದಿಷ್ಟ ಅಕ್ಷರಗಳ ಸುಸಂಘಟಿತ ಸ್ವರೂಪವಾಗಿದ್ದು, ಪ್ರತಿಯೊಬ್ಬರ ವೈಯಕ್ತಿಕ ಹೆಗ್ಗುರುತಾಗಿದೆ. ಕಾನೂನುಬದ್ದ ಮತ್ತು ಪತ್ರ ವ್ಯವಹಾರದ ಮಹತ್ವದ ದಾಖಲೆಗಾಗಿ ಹಾಗೂ ಶಿಷ್ಟಾಚಾರದ ಪ್ರದರ್ಶನಕ್ಕಾಗಿ ಸಹಿಯನ್ನು ಬಳಸುತ್ತೇವೆ. ನಮ್ಮ ಸಹಿಯು ಅನೇಕ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ?
    ಸಹಿಯು ವ್ಯಕ್ತಿಯ ಸ್ವಭಾವದ ಪ್ರತೀಕವಾಗಿದ್ದು, ವ್ಯಕ್ತಿತ್ವದ ಪ್ರಮುಖ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಅದು ವ್ಯಕ್ತಿಯ ಬ್ರಾಂಡೆಂಡ್ ಐಡೆಂಟಿಟಿ ಆಗಿದ್ದು, ಅವರವರ ವರ್ತನೆ, ಚಾರಿತ್ರ್ಯ, ಶಕ್ತಿ ಸಾಮಥ್ರ್ಯಗಳು, ಬಲಹೀನತೆಗಳು, ಪ್ರತಿಫಲ, ಅಧಿಕಾರ ಇತ್ಯಾದಿಗಳನ್ನು ಬಾಹ್ಯವಾಗಿ ಪ್ರತಿಬಿಂಬಿಸುವ ಕನ್ನಡಿ ಇದ್ದಂತೆ. ಸಹಿಯ ವಿಶ್ಲೇಷಣೆ ನಿಜಕ್ಕೂ ಅದ್ಬುತವಾದ ಅಧ್ಯಯನವಾಗಿದೆ. ಸಹಿಯು ವ್ತಕ್ತಿಯ ಕೈಬರಹದ ಸ್ವರೂಪವಾಗಿದ್ದು, ಇದನ್ನು ಓದುವ ಕಲೆಯನ್ನು ಹಸ್ತಾಕ್ಷರ ಶಾಸ್ತ್ರ(ಗ್ರಾಫೋಲಜಿ) ಎನ್ನುತ್ತಾರೆ.
ಸಹಿಯನ್ನು ಎಲ್ಲೆಲ್ಲಿ ಬಳಸುತ್ತೇವೆ?
•    ಮಾಲಿಕತ್ವ ಸಾಬೀತು ಪಡಿಸಲು
•    ಬ್ಯಾಂಕ್‍ಗಳಲ್ಲಿ ಖಾತೆಯನ್ನು ರುಜುವಾತು ಪಡಿಸಲು
•    ಸಾಕ್ಷಿ ಅಥವಾ ಪುರಾವೆಗಳಂತಹ ದಾಖಲೆಗಳಲ್ಲಿ
•    ಆಡಳಿತಾತ್ಮಕ ದಾಖಲೆಗಳಲ್ಲಿ
•    ಶೈಕ್ಷಣಿಕ ದಾಖಲೆಗಳಲ್ಲಿ
•    ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಐಡೆಂಟಿಟಿಗೆ
•    ವ್ಯಕ್ತಿಯ ವೈಯಕ್ತಿಕ ಹೆಗ್ಗುರುತು ತೋರಿಸಲು
•    ಮಹತ್ವದ ದಾಖಲೆಗಳಲ್ಲಿ
   
    ಸಹಿಯು ವ್ಯಕ್ತಿಯ ವೈಯಕ್ತಿಕ ಹೆಗ್ಗುರುತು ಆಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ವೈವಿಧ್ಯಮಯವಾಗಿ ಇರುತ್ತದೆ. ಜಗತ್ತಿನಾದ್ಯಂತ ವಿಭಿನ್ನ ವ್ಯಕ್ತಿಗಳಿರುವಷ್ಟು ವಿಭಿನ್ನ ಸಹಿಗಳಿರುವುದನ್ನು ಗಮನಿಸಬಹುದು. ಪ್ರತಿಯೊಬ್ಬರೂ ತಮ್ಮ ಸಹಿಯು ವಿಶಿಷ್ಟವಾಗಿ ಇರಬೇಕೆಂದು ಬಯಸುತ್ತಾರೆ. ಅಂತೆಯೇ ಇತರರಿಂದ ನಕಲು ಮಾಡದಂತೆ ಇರಬೇಕೆಂದು ಬಯಸುವುದು ತಪ್ಪಲ್ಲ.
ಹೀಗಿರಲಿ ನಿಮ್ಮ ಸಹಿ
ಸ್ಥಳ : ಪುಟದಲ್ಲಿ ಸಹಿಯ ಸ್ಥಳವು ಮಹತ್ವದ್ದು. ಜೀವನದಲ್ಲಿ ಮುಂದೆ ಬರಲು ಒಲವು ತೋರುವ ಪ್ರತಿಯೊಬ್ಬರೂ ಪುಟದ ಬಲಭಾಗದಲ್ಲಿ ಸಹಿ ಮಾಡುತ್ತಾರೆ. ಸಹಿಯು ಮಧ್ಯಭಾಗದಲ್ಲಿದ್ದರೆ ಇತರರ ಬಗೆಗಿನ ಗಮನದ ಕೊರತೆಯನ್ನು, ಒತ್ತಾಯ ಪೂರಕ ಪ್ರಭಾವ ಬೀರುವುದನ್ನು ಸೂಚಿಸುತ್ತದೆ. ಪುಟದ ಎಡ ಭಾಗದಲ್ಲಿನ ಸಹಿಯು ಒಮ್ಮುಖ ಮನೋಸ್ಥಿತಿಯನ್ನು, ಹಿನ್ನಡೆಯನ್ನು ಸೂಚಿಸುತ್ತದೆ.
ಗಾತ್ರ : ಸಹಿಯಲ್ಲಿನ ಅಕ್ಷರಗಳ ಗಾತ್ರವೂ ಸಹ ಸಾಕಷ್ಟು ಮಾಹಿತಿಗಳನ್ನು ಬಿಂಬಿಸುತ್ತದೆ. ಆದ್ದರಿಂದ ಅಕ್ಷರಗಳ ಗಾತ್ರವೂ ಸಹ ಪ್ರಸ್ತಾಪಿತ ಅಂಶವಾಗಿದೆ. ದೊಡ್ಡ ಅಕ್ಷರಗಳ ಸಹಿಯು ಅನ್ಯಾಯದ ವಿರುದ್ದದ ಪ್ರತಿಭಟನೆಯನ್ನೂ, ಸದಾ ಸುದ್ದಿಯಲ್ಲಿ ಇರಬಯಸುವುದನ್ನು ಪ್ರದರ್ಶಿಸುತ್ತದೆ. ಚಿಕ್ಕ ಗಾತ್ರದ ಸಹಿಯು ನಾಚಿಕೆ, ಹಿಂಜರಿಕೆ, ಸೂಕ್ಷ್ಮತೆಗಳ ಸಂಕೇತವಾಗಿದೆ. ಮಧ್ಯ ಗಾತ್ರದ ಸಹಿಯು ಸುಸಮನ್ವಿತ ವ್ಯಕ್ತಿತ್ವವನ್ನು, ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತದೆ.
ಅಲಂಕಾರ : ಅಲಂಕಾರಿಕ ಸಹಿಯು ಎಲ್ಲರನ್ನು ಆಕರ್ಷಿಸುತ್ತದೆ. ಸಹಿಯನ್ನು ಅಡ್ಡಗೆರೆಗಳು, ಚುಕ್ಕೆಗಳು ಹಾಗೂ ಸುರುಳಿಗಳಿಂದ ಆಕರ್ಷಿಸುವುದು ವಾಡಿಕೆ. ಸಹಿಯಲ್ಲಿನ ಅಡ್ಡಗೆರೆಗಳು ಆತ್ಮವಿಮರ್ಶೆಯನ್ನು, ತಮ್ಮ ಪ್ರಾಬಲ್ಯವನ್ನು ಇತರಿಗೆ ಒತ್ತಾಯವಾಗಿ ಹೇರುವುದನ್ನು ತಿಳಿಸುತ್ತದೆ. ಚುಕ್ಕೆಗಳು ಬುದ್ದಿವಂತಿಕೆಯನ್ನು, ಆಕ್ರಮಣಕಾರಿ ಮನೋಭಾವವನ್ನು ಸೂಚಿಸುತ್ತದೆ. ಸುರುಳಿಗಳು ಸೃಜನಶೀಲತೆ ಮತ್ತು ಕಲಾತ್ಮಕತೆಯನ್ನು ವ್ಯಕ್ತಪಡಿಸುತ್ತವೆ.
ಸ್ಪಷ್ಟತೆ : ಅಸ್ಪಷ್ಟವಾದ ಸಹಿ ನೋಡಲು ಅಹಿತಕರವಾಗಿರುತ್ತದೆ. ಸ್ಪಷ್ಟತೆ ಎಂದರೆ ಎಲ್ಲರಿಗೂ ಸ್ಪಷ್ಟವಾಗಿ ಗೋಚರವಾಗುವಂತೆ ಸ್ಪುಟವಾಗಿರಬೇಕು. ಸ್ಪಷ್ಟತೆ ಮತ್ತು ಸ್ಪುಟತೆಯಿಂದ ಕೂಡಿದ ಸಹಿಯು ಅವರ ಪ್ರಾಮಾಣಿಕತೆ, ಮುಕ್ತತೆಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಸಂತೃಪ್ತಿ ಜೀವನವನ್ನು ಸೂಚಿಸುತ್ತದೆ.
ವಿಷಯ : ಸಹಿಯಲ್ಲೂ ವಿಷಯವಿದೆ ಎಂದರೆ ಆಶ್ಚರ್ಯವೇ?. ಇಲ್ಲಿ ವಿಷಯ ಎಂದರೆ ವ್ಯಕ್ತಿಯ ಹೆಸರು. ಸಹಿಯಲ್ಲಿ ಹೆಸರಿನ ಅರ್ದ ಅಕ್ಷರಗಳಿದ್ದರೆ ಅಂತಹವರು ತಮ್ಮ ವೈಯಕ್ತಿಕ ಅಂಶಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂಬುದು ತಿಳಿಯುತ್ತದೆ. ಸಹಿಯಲ್ಲಿ ಪೂರ್ಣ ಹೆಸರು ಗೋಚರಿಸುವಂತಿದ್ದರೆ ಅಂತಹವರು ಪ್ರಶಾಂತ ಸ್ವಭಾವದವರಾಗಿದ್ದು, ಮುಕ್ತ ಮನಸ್ಸು ಹೊಂದಿರುತ್ತಾರೆ, ಇತರರ ಹೇಳಿಕೆಗಳನ್ನು ಗೌರವಿಸುತ್ತಾರೆ.
ದಿಕ್ಕು : ಸಹಿಯಲ್ಲಿ ದಿಕ್ಕೂ ಸಹ ಮಹತ್ವದ್ದು. ಸಹಿಯು ಬಲಕ್ಕೆ ಓರೆಯಾಗಿದ್ದರೆ ಸ್ನೇಹಪರತೆಯನ್ನು, ಎಡಕ್ಕೆ ಓರೆಯಾಗಿದ್ದರೆ ಜಿಗುಪ್ಸೆಯನ್ನು, ನೇರವಾಗಿದ್ದರೆ ನೇರನುಡಿ ಹಾಗೂ ದಿಟ್ಟತೆಯನ್ನು ವ್ಯಕ್ತಪಡಿಸುತ್ತದೆ.
ಒತ್ತಡ : ಸಹಿಯಲ್ಲಿನ ಅಕ್ಷರಗಳ ಒತ್ತಡವೂ ಬಹುಮುಖ್ಯ. ಅಕ್ಷರಗಳನ್ನು ಒತ್ತಿ ಬರೆದ ಸಹಿಯು ಗಂಭೀರ ಗುಣವನ್ನು, ಕಠಿಣ ಪರಿಶ್ರಮವನ್ನು ತೋರುತ್ತದೆ. ಹಾಗೆಯೇ ತೇಲಿಸಿ ಹಗುರವಾಗಿ ಬರೆದ ಸಹಿಯು ಸೂಕ್ಷ್ಮ ಮನೋಸ್ಥಿತಿಯನ್ನು ಹಾಗೂ ನಿರಾಶವಾದವನ್ನು ಬಿಂಬಿಸುತ್ತದೆ.
ಸಹಿಯು ಏನು ಹೇಳುತ್ತದೆ?
•    ಸಹಿಯ ಮೊದಲ ಅಕ್ಷರಗಳು ದೊಡ್ಡ ಗಾತ್ರದಲ್ಲಿದ್ದು, ಕ್ಯಾಪಿಟಲ್ ಅಕ್ಷರಗಳಿಂದ ಕೂಡಿದ್ದರೆ, ಆ ವ್ಯಕ್ತಿಯು ಪ್ರಥಮ ಭೇಟಿಯಲ್ಲೇ ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ ಹಾಗೂ ಸ್ವಾಭಿಮಾನಿಗಳಾಗಿರುತ್ತಾರೆ. ಮೊದಲನೆ ಅಕ್ಷರ ಚಿಕ್ಕದಾಗಿದ್ದರೆ ಆ ವ್ಯಕ್ತಿ ತನ್ನ ವೈಯಕ್ತಿಕ ಅಂಶಗಳನ್ನು ಗೌಪ್ಯವಾಗಿಡಲು ಪ್ರಯತ್ನಿಸುತ್ತಾನೆ.
•    ಬಹುತೇಕ ಸಹಿಯಲ್ಲಿ ವ್ಯಕ್ತಿಯ ಹೆಸರು ಮತ್ತು ಕೌಟುಂಬಿಕ ಹೆಸರುಗಳು ಇರುತ್ತವೆ. ಕೌಟುಂಬಿಕ ಹೆಸರು ಪ್ರಧಾನವಾಗಿದ್ದರೆ ಆ ವ್ಯಕ್ತಿ ತನ್ನ ಕುಟುಂಬದ ಘನತೆ, ಗೌರವ ಕಾಪಾಡಲು ಪ್ರಯತ್ನಿಸುತ್ತಾನೆ ಮತ್ತು ಕುಟುಂಬದ ಸದಸ್ಯರಿಗೆ ಗೌರವ ಕೊಡುತ್ತಾನೆ. ವ್ಯಕ್ತಿಯ ಹೆಸರು ಪ್ರಧಾನವಾಗಿದ್ದರೆ ವೈಯಕ್ತಿಕವಾಗಿ ತನ್ನ ಮೇಲೆ ಹೆಚ್ಚು ನಂಬಿಕೆ ಇಟ್ಟಿರುತ್ತಾನೆ. ಇತರರನ್ನು ನಂಬುವುದಿಲ್ಲ. ಆಲೋಚನೆ ಮತ್ತು ನಿರ್ಧಾರಗಳಲ್ಲಿ ಸ್ವತಂತ್ರನಾಗಿರುತ್ತಾನೆ. ಇತರರ ಅನಿಸಿಕೆಗಳಿಗೆ ಬೆಲೆ ಕೊಡುವುದಿಲ್ಲ.
•    ಸ್ಪುಟವಾದ ಮತ್ತು ಸ್ಪಷ್ಟವಾದ ಸಹಿಯು ಆಕರ್ಷಕ ವ್ಯಕ್ತಿತ್ವದ ಗುಣವನ್ನು ಪ್ರತಿನಿಧಿಸುತ್ತದೆ. ಇಂತಹವರು ಸ್ಪಷ್ಟವಾದ ಗುರಿಯನ್ನು ಹೊಂದಿದ್ದು, ಭವಿಷ್ಯದಲ್ಲಿ ಉತ್ತಮ ದೃಷ್ಟಿಕೋನ ಹೊಂದಿರುತ್ತಾರೆ.
•    ವಕ್ರವಾದ ಮತ್ತು ನಯವಾದ ಸಹಿಯು ವ್ಯಕ್ತಿಯ ಶಾಂತ, ಆಕರ್ಷಕ ಹಾಗೂ ಎಲ್ಲರೊಂದಿಗೂ ಬೆರೆಯುವ ಗುಣವನ್ನು ಪ್ರದರ್ಶಿಸುತ್ತದೆ.
•    ಕೋನೀಯ ಸಂಪರ್ಕಗಳನ್ನು ಹೊಂದಿದ ಸಹಿಯು ಬಲವಂತದ ವ್ಯಕ್ತಿತ್ವವನ್ನು, ಸ್ಪರ್ಧಾತ್ಮಕ ಹಾಗೂ ಆಕ್ರಮಣಕಾರಿ ಮನೋಭಾವವನ್ನು ಸೂಚಿಸುತ್ತದೆ.
•    ಸಹಿಯ ಕೆಳಗಿನ ಅಡ್ಡಗೆರೆಯು ಆ ವ್ಯಕ್ತಿಯ ಆರೋಗ್ಯಕರ ಅಹಂನ್ನು, ವಿಶ್ವಾಸವನ್ನು ತೋರಿಸುತ್ತದೆ.
•    ಸಹಿಯ ಕೆಳಗೆ ಅನೇಕ ಅಡ್ಡಗೆರೆಗಳಿದ್ದರೆ ಅಂತಹವರು ಸಾರ್ವಜನಿಕವಾಗಿ ಸಂಶಯಪೀಡಿತರು ಆಗಿರುತ್ತಾರೆ. ಇತರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.
•    ಸಹಿಯಲ್ಲಿನ ಅಡ್ಡಗೆರೆಯು ಮೇಲ್ಭಾಗಕ್ಕೆ ಏರಿದ್ದರೆ ಉನ್ನತ ಭೌದ್ದಿಕ ಮಟ್ಟವನ್ನು, ನಾಯಕತ್ವÀದ ಗುಣವನ್ನು ತಿಳಿಸುತ್ತದೆ.
•    ಸಹಿಯ ಕೆಳಗೆ ಯಾವುದೇ ಅಡ್ಡಗೆರೆಗಳಿಲ್ಲದಿದ್ದರೆ ಅಂತಹವರು ನಿಗರ್ವಿಗಳಾಗಿದ್ದು, ಉನ್ನತ ಆತ್ಮಸ್ಥೈರ್ಯ ಮತ್ತು ಮೌಲ್ಯಗಳನ್ನು ಹೊಂದಿರುತ್ತಾರೆ.
•    ಆರೋಹಣದ ಸಹಿಯು ಆಶಾವಾದ ಮತ್ತು ಸಕ್ರಿಯತೆಯ ಸಂಕೇತವಾಗಿದೆ.
•    ಅವರೋಹಣದ ಸಹಿಯುಳ್ಳವರು ದಣಿವು, ಖಿನ್ನತೆ, ಹಿಂಜರಿಕೆ ಸ್ವಭಾವ, ನಿರಾಶಾವಾದ, ನಿಶ್ಚಿತವಲ್ಲದ ಗುರಿಯನ್ನು ಹೊಂದಿರುತ್ತಾರೆ.
•    ಸಹಿಯ ಕೆಳಗಿನ ಒಂದು ಚುಕ್ಕೆಯು ಜಾಗೃತ ಪ್ರವೃತ್ತಿಯನ್ನು, ಎರಡು ಚುಕ್ಕೆಗಳು ನಿರ್ದೇಶನ ಮತ್ತು ಆದೇಶದ ಪ್ರವೃತ್ತಿಯನ್ನು ತಿಳಿಸುತ್ತದೆ.
ಇರಲಿ ಎಚ್ಚರ !!!
    ಪ್ರತಿಯೊಬ್ಬರೂ ಅವರವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಆ ಜವಾಬ್ದಾರಿಗಳಿಗೆ ಸಹಿಯು ಕಾನೂನುಬದ್ದ ಸಾಕ್ಷಿಯಾಗುತ್ತದೆ. ವೈಯಕ್ತಿಕ ಜೀವನದಲ್ಲಿ ನಾವು ಹಲವಾರು ಮಹತ್ವದ ದಾಖಲೆಗಳಿಗೆ ಸಹಿ ಹಾಕುತ್ತೇವೆ. ಸಹಿಯು ಇನ್ನೊಬ್ಬರಿಂದ ನಕಲು ಆಗದಂತೆ ರೂಪಿಸಿಕೊಳ್ಳುವುದು ಬಹುಮುಖ್ಯ. ನಕಲಿ ಸಹಿಯಿಂದ ವ್ಯಕ್ತಿ ಬಲಿಪಶು ಆಗಬಹುದು. ಅಜಾಗರೂಕತೆ ಅಪಾಯಕ್ಕೆ ತಳ್ಳುತ್ತದೆ. ಆದ್ದರಿಂದ ಸಹಿಯ ನಕಲು ಮತ್ತು ವಂಚನೆ ತಡೆಯಲು ಕೆಳಗಿನ ನಿಯಮಗಳನ್ನು ಅನುಸರಿಸಿ.
    ನಿಧಾನವಾದ ಸಹಿ ಬೇಡ : ಸಹಿಯನ್ನು ನಿಧಾನವಾಗಿ ಬರೆಯುವುದರಿಂದ ನಕಲು ಮಾಡಲು ಅನುಕೂಲವಾಗುತ್ತದೆ. ಅದಕ್ಕಾಗಿ ವೇಗವಾಗಿ ಸಹಿ ಮಾಡುವ ಅಬ್ಯಾಸ ಮಾಡಿಕೊಳ್ಳಿ.
    ಸಹಿಯಲ್ಲಿ ಸಂಕೀರ್ಣತೆ ಇರಲಿ : ಸರಳವಾದ ಸಹಿಯು ಅಪಾಯಕ್ಕೆ ಆಹ್ವಾನ ನೀಡುತ್ತದೆ. ಸಹಿಯು ಆದಷ್ಟೂ ಸಂಕೀರ್ಣತೆಯಿಂದ ಕೂಡಿರಲಿ.
    ಕಲಾತ್ಮಕವಾಗಿರಲಿ : ನಿಮ್ಮ ಪರಿಪೂರ್ಣತೆ ನಿಮ್ಮ ಸಹಿಯ ಸುರಕ್ಷತೆಯಲ್ಲಿ ಬಿಂಬಿಸಲಿ. ಕಲಾತ್ಮವಾದ ಸಹಿಯು ನಕಲು ತಡೆಯಲು ಸಹಕಾರಿ.
    ಒಂದಕ್ಕಿಂತ ಹೆಚ್ಚು ಸಹಿ ಬಳಸಿ : ಕಾನೂನಾತ್ಮಕ ದಾಖಲೆಗಳಿಗಾಗಿ ಬಳಸುವ ಸಹಿಯನ್ನು ಎಲ್ಲೆಂದರಲ್ಲಿ ಬಳಸಬೇಡಿ. ದೈನಂದಿನ ವ್ಯವಹಾರಗಳಿಗಾಗಿ ಬೇರೊಂದು ಸಹಿಯನ್ನು ಬಳಸಿ.
    ಖಾಲಿ ಹಾಳೆಯ ಸಹಿಗೆ ಕಡಿವಾಣ ಹಾಕಿ : ಅಪೂರ್ಣವಾಗಿ ತುಂಬಿದ ಅಥವಾ ಖಾಲಿ ಕಾಗದದಲ್ಲಿ ಸಹಿ ಹಾಕುವುದನ್ನು ನಿಲ್ಲಿಸಿ. ಇದು ಸಹಿಯ ದುರ್ಬಳಕೆಯನ್ನು ತಪ್ಪಿಸುತ್ತದೆ.
    ಔಚಿತ್ಯವಿರಲಿ : ಸಾಮಾಜಿಕ ಜಾಲ ತಾಣಗಳಲ್ಲಿ ಅನಾವಶ್ಯಕವಾಗಿ ಸಹಿಯನ್ನು ಪ್ರದರ್ಶಿಸಬೇಡಿ. ಇದು ನಕಲು ಮಾಡಲು ಪ್ರೇರಣೆ ನೀಡುತ್ತದೆ.
    ದೂರು ನೀಡಿ : ನಕಲಿ ಸಹಿಯ ವಂಚನೆಗೆ ಒಳಗಾದಲ್ಲಿ ತಕ್ಷಣವೇ ಸಂಬಂಧಿಸಿದ ದಾಖಲೆಗಳೊಂದಿಗೆ ಮೇಲಾಧಿಕಾರಿಗಳಿಗೆ ಅಥವಾ ಸಂಬಂಧಿಸಿದವರಿಗೆ ವಿವರಣೆ ನೀಡಿ. ಇದು ತನಿಖೆಗೆ ಸಹಕಾರಿಯಾಗುತ್ತದೆ.
                                                                                                             - ಆರ್.ಬಿ.ಗುರುಬಸವರಾಜ