December 24, 2015

ಪಿ.ಎಚ್.ಡಿ. PHD

 ದಿನಾಂಕ 16-12-2015 ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ.

ಪಿ.ಎಚ್.ಡಿ. ಪಡೆಯೋಕೆ ರೆಡಿ ಆಗಿ

    ಪ್ರತಿಯೊಬ್ಬ ಪದವೀಧರರಿಗೂ ಡಾಕ್ಟರ್ ಆಗಬೇಕೆಂಬ ಹಂಬಲ ಸಹಜ. ಆದರೆ ಬಹುತೇಕರು ಪದವಿ ಮುಗಿಸುವುದೇ ಒಂದು ಮಹತ್ಸಾಧನೆ ಎಂದು ಭಾವಿಸಿ ಅಲ್ಲಿಗೆ ತಮ್ಮ  ವ್ಯಾಸಂಗವನ್ನು ಸ್ಥಗಿತಗೊಳಿಸುತ್ತಾರೆ. ಆದರೆ ನಿಜವಾದ ಪದವಿಯ ಸೌಭಾಗ್ಯ ಮತ್ತು ಹೆಮ್ಮೆ ಇರುವುದು ಮುಂದಿನ ಅಧ್ಯಯನದಲ್ಲಿ ಎಂಬುದನ್ನು ಮರೆಯುತ್ತಾರೆ. ಅಂತಹ ಪದವಿ ಎಂದರೆ ಪಿ.ಎಚ್.ಡಿ ಪದವಿ. ಪಿ.ಎಚ್.ಡಿ ಪದವಿ ಹೊಂದುವ ಮೂಲಕ ನೀವೂ ಡಾಕ್ಟರೇಟ್ ಆಗಬಹುದು.
    ಪಿ.ಎಚ್.ಡಿ ಅಥವಾ ಡಾಕ್ಟರೇಟ್ ಎನ್ನುವುದು ಒಂದು ಉನ್ನತ ಮತ್ತು ಮಹತ್ವದ ಶೈಕ್ಷಣಿಕ ಅರ್ಹತೆಯಾಗಿದೆ. ಪಿ.ಎಚ್.ಡಿ ಪದವಿಯು ಉದ್ಯೋಗ ಮತ್ತು ವೃತ್ತಿ ಪರಿಣತಿಯಲ್ಲಿ ಉತ್ತಮ ಹೆಸರು ಗಳಿಸಲು ಅತ್ಯುತ್ತಮ ಪದವಿಯಾಗಿದೆ.
    ವೃತ್ತಿಪರ ಕೌಶಲ್ಯತೆಗಳು ಸೇವಾ ಅನುಭವದಿಂದ ಬೆಳೆಯುತ್ತವೆಯೇ ಹೊರತು ಕ್ರಮಾಗತ ಸಂಶೋಧನೆಯಿಂದಲ್ಲ. ಆದರೆ ಪಿ.ಎಚ್.ಡಿ ಪದವಿ ಪಡೆಯುವುದರಿಂದ ಅಧ್ಯಯನ ಮತ್ತು ಸಂಶೋಧನಾ ಪ್ರವೃತ್ತಿ ಬೆಳೆಯುತ್ತದೆ ಹಾಗೂ ಪ್ರತಿಯೊಂದು ಸಮಸ್ಯೆಗಳನ್ನೂ ವೈಜ್ಞಾನಿಕ ತತ್ವಗಳ ಆಧಾರದ ಮೇಲೆ ಪರಿಹರಿಸಿಕೊಳ್ಳುವ ಗುಣಗಳು ಮೂಡುತ್ತವೆ. ಆದ್ದರಿಂದ ಪಿ.ಎಚ್.ಡಿ ಪದವಿಧರರಿಗೆ ಪ್ರತಿ ಕ್ಷೇತ್ರದಲ್ಲೂ ಸಾಕಷ್ಟು ಬೇಡಿಕೆ ಇದೆ.

ಪಿ.ಎಚ್.ಡಿ. ಏಕೆ?

ಗಮನಾರ್ಹವಾದುದನ್ನು ಸಾಧಿಸಲು : ಕೆಲವರು ಹಣ ಗಳಿಸಿ ಹೆಸರು ಗಳಿಸಬಹುದು. ಆದರೆ ಅದು ಕೇವಲ ಹಣ ಇರುವವರೆಗೆ ಮಾತ್ರ. ಪಿ.ಎಚ್.ಡಿ ಪದವಿಯು ಹಣ ಗಳಿಕೆಯ ಮಾರ್ಗವಲ್ಲ. ಬದಲಾಗಿ ಉನ್ನತ ಹೆಸರು ಮತ್ತು ಸಾಮಾಜಿಕ ಗೌರವ, ಸ್ಥಾನಮಾನ ಗಳಿಕೆಯ ಸಾಧನವಾಗಿದೆ. ಇತರರಿಗಿಂತ ಭಿನ್ನವಾದ ಸಾಧನೆಯ ಮಾರ್ಗವಾಗಿದೆ. ಗಮನಾರ್ಹವಾದುದನ್ನು ಸಾಧಿಸಬಯಸುವವರಿಗೆ ಪಿ.ಎಚ್.ಡಿ ಉತ್ತಮ ಪದವಿಯಾಗಿದೆ.
ಹೊಸದನ್ನು ಕಲಿಯಲು : ಮಗುವಿನಂತಹ ಕುತೂಹಲ ಇಲ್ಲದೇ ಯಾರೂ ಮಹಾನ್ ಸಂಶೋಧಕರಾಗಲು ಸಾಧ್ಯವಿಲ್ಲ. ಅಂತಹ ಕುತೂಹಲಗಳ ಹಾದಿಯಲ್ಲಿ ಪಯಣಿಸಿ ವಿಶೇಷವಾದುದನ್ನು ಸಂಶೋಧಿಸಿಲು ಪಿ.ಎಚ್.ಡಿ ಪದವಿಯೊಂದೇ ಮಾರ್ಗ. ಅಂತಹ ಅನ್ವೇಷಕ ಶಕ್ತಿಗೆ ಕುತೂಹಲದ ಕಲಿಕೆ ಮುಖ್ಯ. ಪರಿಪೂರ್ಣ ಕಲಿಕಾರ್ಥಿ ಆಗದ ಹೊರತು ಸಂಶೋಧಕನಾಗಲು ಸಾಧ್ಯವಿಲ್ಲ.
ವೈಯಕ್ತಿಕ ಹಾಗೂ ವೃತ್ತಿ ಜೀವನ ಸುಧಾರಿಸಲು : ಪಿ.ಎಚ್.ಡಿ ಪದವಿಯಿಂದ ಕೇವಲ ಉನ್ನತ ಹೆಸರು ಮಾತ್ರವಲ್ಲ ಬದಲಾಗಿ ವೃತ್ತಿ ಸಾಮಥ್ರ್ಯಗಳ ಅಭಿವೃದ್ದಿ ಆಗುತ್ತದೆ. ಈ ಸಾಮಥ್ರ್ಯಗಳು ವೃತ್ತಿ ಜೀವನವನ್ನು ಸುಂದರವಾಗಿಸುತ್ತದೆ ಜೊತೆಗೆ ವೈಯಕ್ತಿಕ ಜೀವನವನ್ನೂ ಸಹ ಸುಧಾರಿಸುತ್ತದೆ.
ಸಮಸ್ಯೆಗಳಿಗೆ ಪರಿಹಾರ : ಸಂಶೋಧನಾ ಅಭ್ಯರ್ಥಿಗೆ ಸಮಸ್ಯೆಗಳೇ ಇರುವುದಿಲ್ಲ. ಬಂದರೂ ಅದನ್ನು ಸುಲಭವಾಗಿ ಪರಿಹರಿಸಿಕೊಳ್ಳುವ ವೈಜ್ಞಾನಿಕ ಮಾರ್ಗಗಳು ಸಿದ್ದಿಸಿರುತ್ತವೆ. ಇದರಿಂದಾಗಿ ಡಾಕ್ಟರೇಟ್ ಪಡೆದವರು ವೃತ್ತಿಯಲ್ಲಿ ಎಂದಿಗೂ ಸೋಲನ್ನು ಅನುಭವಿಸುವುದಿಲ್ಲ. ಅವರಲ್ಲಿನ ಆತ್ಮವಿಶ್ವಾಸ ಹಾಗೂ ಉತ್ತಮ ಸಂವಹನ ಕೌಶಲ್ಯಗಳಿಂದ ಸಂತೋಷದಾಯಕ ಜೀವನ ಕಳೆಯುತ್ತಾರೆ.
ವಿಷಯದ ಆಳ ಅರಿಯಲು : ಪಿ.ಎಚ್.ಡಿ.ಯಲ್ಲಿ ಕೈಗೊಳ್ಳುವ ಚಿಕ್ಕ ಚಿಕ್ಕ ಸಂಶೋಧನೆಗಳು ನಿಮ್ಮನ್ನು ಉನ್ನತ ಹಂತಕ್ಕೆ ಬೆಳೆಸುತ್ತವೆ. ಜೊತೆಗೆ ವಿಷಯದ ಕುರಿತ ಆಳವಾದ ಜ್ಞಾನವನ್ನು ಮೂಡಿಸುತ್ತವೆ. ವಿಷಯದ ಪರಿಣತೆಯಿಂದಾಗಿ ನೀವೊಬ್ಬ ಆತ್ಯಾಕರ್ಷಕ ವ್ಯಕ್ತಿಯಾಗಿ ಹೊರಹೊಮ್ಮುತ್ತೀರಿ.
ನೈಜ ಜಗತ್ತಿನ ಅನಾವರಣ : ಸಂಶೋಧನೆಗಳನ್ನು ಕೈಗೊಳ್ಳಲು ಸಾಕಷ್ಟು ಅಧ್ಯಯನ ಹಾಗೂ ವಿವಿಧ ವ್ಯಕ್ತಿಗಳ ಭೇಟಿಯಿಂದಾಗಿ ನೈಜ ಜಗತ್ತಿನ ಅರಿವಾಗುತ್ತದೆ.


ವಿದ್ಯಾರ್ಹತೆ : ಪಿ.ಎಚ್.ಡಿ. ಪದವಿ ಪಡೆಯಲು ಯಾವುದಾದರೂ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದಿರಬೇಕು. ಸಾಮಾನ್ಯ ಅಭ್ಯರ್ಥಿಗಳು ಶೇಕಡಾ 55 ಹಾಗೂ ಪ.ಜಾ, ಪ.ಪಂ, ಪ್ರ ವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು ಶೇಕಡಾ 50 ಅಂಕಗಳೊಂದಿಗೆ ಸ್ನಾತಕ ಪದವಿ ಪಡೆದಿರಬೇಕು.
    ಪ್ರವೇಶ ಪರೀಕ್ಷೆ : ಪಿ.ಎಚ್.ಡಿ ಪದವಿಗಾಗಿ ಅವಶ್ಯಕ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಯು.ಜಿ.ಸಿ, ನೆಟ್, ಸ್ಲೆಟ್, ಗೇಟ್, ಎಂ.ಫಿಲ್ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪಿ.ಎಚ್.ಡಿ. ಪದವಿಗೆ ಪ್ರವೇಶ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಪ್ರವೇಶ ಪರೀಕ್ಷೆಯ ಪ್ರಶ್ನೆಗಳು ಬಹು ಆಯ್ಕೆಯ ಸ್ವರೂಪದಲ್ಲಿದ್ದು, 100 ಪ್ರಶ್ನೆಗಳಿಗೆ 100 ಅಂಕಗಳು ನಿಗದಿಯಾಗಿರುತ್ತದೆ. ಇದರಲ್ಲಿ 50 ಅಂಕಗಳು ವಿಷಯದ ಅಧ್ಯಯನ ವಿಧಾನ ಹಾಗೂ 50 ಅಂಕಗಳು ಆಯ್ಕೆ ಮಾಡಿಕೊಂಡ ವಿಷಯದ ಜ್ಞಾನಕ್ಕೆ ಸಂಬಂಧಿಸಿರುತ್ತವೆ.
    ಪ್ರವೇಶ ಪರೀಕ್ಷಾ ಶುಲ್ಕ : ಆಯಾ ವಿಶ್ವವಿದ್ಯಾಲಯದ ನಿಯಮಾವಳಿಗೆ ತಕ್ಕಂತೆ ಶುಲ್ಕದಲ್ಲಿ ಬದಲಾವಣೆ ಇರುತ್ತದೆ. ಆದಗ್ಯೂ 500 ರೂ.ಗಳಿಂದ 750 ರೂ.ಗಳವರೆಗೆ ಶುಲ್ಕ ಇರುತ್ತದೆ.

   

ಹೀಗಿರಲಿ ಪಿ.ಎಚ್.ಡಿ!

    ಪಿ.ಎಚ್.ಡಿ ಎಂಬುದು ಕೇವಲ ಪದವಿಯಲ್ಲ. ಇದೊಂದು ಸಂಶೋಧನಾ ವಿಧಾನ. ಭವಿಷ್ಯದ ಮಾರ್ಗದರ್ಶಿ. ನಿಮ್ಮ ವೃತ್ತಿ ಹಾಗೂ ಪ್ರವೃತ್ತಿಯ ಪ್ರತೀಕ. ಹಾಗಾಗಿ ಪಿ.ಎಚ್.ಡಿ ಮಾಡುವಾಗ ಕೆಲವು ಕಟ್ಟುನಿಟ್ಟಿನ ಕ್ರಮಗಳು ಅಗತ್ಯ.
ಸಕ್ರಿಯತೆ ಇರಲಿ : ಪಿ.ಎಚ್.ಡಿ.ಯಲ್ಲಿ ಸಂಶೋಧನೆಗೆ ಪ್ರಮುಖ ಪ್ರಾಧಾನ್ಯತೆ ಇದ್ದು, ಸಂಶೋಧನೆಗೆ ವಿಷಯ ಆಯ್ಕೆ ಮಾಡುವಾಗ ಜಾಗ್ರತೆ ಇರಲಿ. ವಿಷಯದ ಕುರಿತ ಸಕ್ರಿಯವಾಗಿ ಸಂಶೋಧನೆ ಕೈಗೊಳ್ಳಿ. ವಿಷಯದ ಮಾಹಿತಿಗಾಗಿ ಪುಸ್ತಕಗಳು, ಸ್ಥಳಗಳು, ವ್ಯಕ್ತಿಗಳು, ಸಂಸ್ಥೆಗಳು ಹೀಗೆ ಎಲ್ಲೆಲ್ಲಿ ಮಾಹಿತಿ ಪಡೆಯಲು ಸಾಧ್ಯವೋ ಅವುಗಳಲ್ಲೆಲ್ಲಾ ಸಕ್ರಿಯವಾಗಿ ಭಾಗವಹಿಸಿ ಮಾಹಿತಿ ಸಂಗ್ರಹಿಸಿ.
ನಿರ್ದಿಷ್ಟತೆ ಇರಲಿ : ಬಹುತೇಕ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಸೇರುವವರೆಗೂ ತಾವೇನು ಸಂಶೋಧಿಸಬೇಕೆಂಬ ಬಗ್ಗೆ ನಿಖರ  ಕಲ್ಪನೆ ಇರುವುದಿಲ್ಲ. ಗೊತ್ತು ಗುರಿ ಇಲ್ಲದ ಪದವಿಯು  ಪರಿಪೂರ್ಣ ಶಿಕ್ಷಣ ಅಲ್ಲ. ಹಾಗಾಗಿ ಪದವಿ ಹಂತದಲ್ಲಿಯೇ ಮುಂದಿನ ಗುರಿಯ ಬಗ್ಗೆ ಕನಸು ಕಾಣಬೇಕು ಹಾಗೂ ಅದನ್ನು ಸಾಕಾರಗೊಳಿಸುವ ಮಾರ್ಗಗಳ ಕುರಿತು ಮಾಹಿತಿ ಸಂಗ್ರಹಿಸಬೇಕು. ಏಕೆಂದರೆ ಅದೊಂದು ನೈಪುಣ್ಯದ ಸಂಶೋಧನೆ. ಪಿ.ಎಚ್.ಡಿ ಕಾರ್ಯಕ್ರಮದ ಕೊನೆಗೆ ನಿಮ್ಮ ನೈಪುಣ್ಯಕ್ಕೆ ಅಭೂತಪೂರ್ವ ಬೆಲೆ, ಗೌರವ, ಮನ್ನಣೆ ಸಿಗಲಿದೆ. ಆದ್ದರಿಂದ ಪದವಿ ಹಂತದಲ್ಲಿರುವಾಗಲೇ ಸಂಶೋಧನೆಯ ತಂತ್ರ ಮತ್ತು ಸತ್ಯಶೋಧನೆಯ ಮಾರ್ಗಗಳನ್ನು ವಿನ್ಯಾಸಗೊಳಿಸಿಕೊಳ್ಳಿ.
ಕನಸಿಗೆ ಬಣ್ಣಕೊಡಿ : ಸಂಶೋಧನೆಗೆ ನಿರ್ದಿಷ್ಟ ವಿಷಯಗಳಿಲ್ಲ. ನಿಮ್ಮ ಆಸಕ್ತಿಯ ಯಾವುದೇ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಬಹುದು. ಆರೋಗ್ಯ, ಕೃಷಿ, ಶಿಕ್ಷಣ, ಕಲೆ, ಸಾಹಿತ್ಯ, ರಂಗಭೂಮಿ, ಸಿನೆಮಾ, ಜನಜೀವನ, ಆರ್ಥಿಕತೆ, ಸಂಸ್ಕøತಿ, ಇತಿಹಾಸ, ವಿಜ್ಞಾನ ಮತ್ತು ತಂತ್ರಜ್ಞಾನ ಹೀಗೆ ಯಾವುದೇ ವಿಷಯದ ಮೇಲೆ ಸಂಶೋಧನೆ ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ. ಆದರೆ ನಿಮ್ಮ ಕನಸಿನ ಸಂಶೋಧನೆಗೆ ಶ್ರಮದ ಬಣ್ಣ ಕೊಟ್ಟು ಆಕರ್ಷಕವಾಗಿ ಸತ್ಯ ಶೋಧಿಸುವುದು ಮುಖ್ಯ.
ಸಂಪೂರ್ಣ ಮಾಹಿತಿ ಇರಲಿ : ಸಂಶೋಧನೆ ಕೈಗೊಳ್ಳುವ ವಿಷಯದ ಮೇಲೆ ಪ್ರಭುತ್ವ, ಹಿಡಿತ ಅಗತ್ಯ. ಗೊತ್ತಿರುವ ಕ್ಷೇತ್ರದಲ್ಲಿ ಗೊತ್ತಿಲ್ಲದ ಅಂಶಗಳನ್ನು ಹುಡುಕುವುದೇ ಪಿ.ಎಚ್.ಡಿ.ಯ ಮುಖ್ಯ ಉದ್ದೇಶ. ಆದ್ದರಿಂದ ಸಂಶೋಧನೆಗೆ ಆಯ್ಕೆ ಮಾಡಿಕೊಂಡ ಕ್ಷೇತ್ರದ ಸಂಪೂರ್ಣ ಮಾಹಿತಿ ಇರಲಿ. ಸಂಶೋಧನೆ ನೈಜ ಜಗತ್ತಿಗೆ ಸಂಬಂಧಿಸಿರಬೇಕು ಮತ್ತು ವೃತ್ತಿಪರರು ಬಳಸಲು ಮಾರ್ಗಸೂಚಿಯಾಗಬೇಕು. ಸಂಶೋಧನೆಯಲ್ಲಿ ಅಗತ್ಯವಾದ ಅಂಕಿ ಅಂಶಗಳಿರಲಿ ಮತ್ತು ವಿಶ್ಲೇಷಣಾತ್ಮಕ ಅಂಶಗಳಿರಲಿ.
ವೈವಿಧ್ಯಮಯ ಸಂಪರ್ಕ ಇರಲಿ : ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಮುಖ್ಯ ವ್ಯಕ್ತಿಗಳು, ಸಂಘ-ಸಂಸ್ಥೆಗಳ ಸಂಪರ್ಕ ಅಗತ್ಯ. ಅಲ್ಲದೇ ಸಂಶೋಧನಾ ವರದಿ ಸಿದ್ದಪಡಿಸುವಲ್ಲಿ ಈ ಹಿಂದೆ ಸಂಶೋಧನೆ ಕೈಗೊಂಡ ಹಿರಿಯ ಮಾರ್ಗದರ್ಶಕರ ಸಂಪರ್ಕವೂ ಅಗತ್ಯ.
ಯೋಜಿತ ಯೋಜನೆ ಇರಲಿ : ಸಂಶೋಧನೆಗೆ ಸುವ್ಯವಸ್ಥಿತ ಯೋಜನೆ ಅತೀ ಮುಖ್ಯ. ಸಂಶೋಧನೆ ಪ್ರಾರಂಭದಿಂದ ವರದಿ ಸಲ್ಲಿಕೆವರೆಗಿನ ಕಾಲಾವಧಿಯಲ್ಲಿ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಯೋಜನೆ ಮತ್ತು ವೇಳಾಪಟ್ಟಿ ಪ್ರಮುಖವಾದದ್ದು. ಸಂಪರ್ಕಿಸಬೇಕಾದ ವ್ಯಕ್ತಿ, ಸ್ಥಳಗಳ ಕುರಿತ ಪಟ್ಟಿ, ನಮೂನೆಗಳು ಮಾಹಿತಿ ಸಂಗ್ರಹಣೆಯ ಆಕರಗಳು ಎಲ್ಲವನ್ನೂ ಯೋಜನೆಯಲ್ಲಿ ದಾಖಲಿಸಬೇಕು. ಯೋಜನೆಯ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುವುದು ಅತೀಮುಖ್ಯ. ಏಕೆಂದರೆ ಸಂಶೋಧನೆಯನ್ನು ನಿರ್ದಿಷ್ಟ ಸಮಯದಲ್ಲಿ ಮುಕ್ತಾಯಗೊಳಿಸಿ ವರದಿ ಸಿದ್ದಪಡಿಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕಾದ್ದರಿಂದ ಯೋಜಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುವುದು ಅಗತ್ಯ.
ವಿಶೇಷತೆ ಇರಲಿ : ಈಗಾಗಲೇ ಕೈಗೊಂಡ ಅನೇಕ ಸಂಶೋಧನಾ ಪ್ರಬಂಧಗಳ ಜೊತೆ ನಿಮ್ಮದೂ ಒಂದು ಆಗಬಾರದು. ಇತರರಿಗಿಂತ ಭಿನ್ನವಾದ ಆಕರ್ಷಕವಾದ ಸಂಶೋಧನಾ ಪ್ರಬಂಧ ನಿಮ್ಮದಾಗಬೇಕು. ಅದು ನಿಮ್ಮ ಶ್ರಮ, ಕೌಶಲ್ಯಗಳು, ಸೃಜನಾತ್ಮಕತೆ ಮತ್ತು ನಿಮ್ಮ ಸಮಯ ಪ್ರಜ್ಞೆಗಳನ್ನು ಅವಲಂಬಿಸಿರುತ್ತದೆ. ಸಾಧ್ಯವಾದಷ್ಟೂ ಭವಿಷ್ಯದಲ್ಲಿ ಎಲ್ಲರೂ ಉಪಯೋಗಿಸಲು ಸಾಧ್ಯವಾಗುವ ಸಂಶೋಧನಾ ವರದಿ ನಿಮ್ಮದಾಗಲಿ.

       ಸಂಶೋಧನೆಯು ಸಂಶೋಧಕನ  ಸೃಜನಾತ್ಮಕ ಆಸಕ್ತ ಅಧ್ಯಯನ ಕ್ಷೇತ್ರವಾಗಿರಬೇಕು. ಕೈಗೊಳ್ಳುವ ಸಂಶೋಧನೆಯ ಫಲಿತವು ಆಯಾ ಕ್ಷೇತ್ರದಲ್ಲಿ ಬಳಕೆಯಾಗಿ ಬದಲಾವಣೆಗೆ ಕಾರಣವಾಗಬೇಕು. ಹೊಸ ಹೊಳಹುಗಳಿಗೆ ನಾಂದಿಯಾಗಬೇಕು. ಹಿರಿಯ ಸಂಶೋಧಕ ಡಾ.ಎಂ. ಎಂ. ಕಲಬುರ್ಗಿಯವರು “ಸಂಶೋಧನೆಯೆಂಬುದು ಒಂದು ಸೃಜನಕ್ರಿಯೆಯಾಗಿದ್ದು ಅದು ಅಲ್ಪ ವಿರಾಮದಿಂದ ಅರ್ಧ ವಿರಾಮದವರೆಗೆ ನಡೆಯುತ್ತದೆ” ಎಂದಿದ್ದಾರೆ. ಹಾಗಾಗಿ ಆಯಾ ಕ್ಷೇತ್ರದಲ್ಲಿ ನಿರತವಾದ ಸಂಶೋಧನೆಯು ಪದವಿಯ ನಂತರವೂ ಮುಂದುವರಿಸಬೇಕು. ಮಕ್ಕಳಕ್ಷೇತ್ರ ಹಾಗೂ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಗಳು ನಡೆಯಬೇಕು. ಬಂದ ಸಂಶೋಧನೆಗಳನ್ನು ಸಂಶೋಧಕರನ್ನು ಈ ಕ್ಷೇತ್ರದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು.
ಡಾ. ನಿಂಗು ಸೊಲಗಿ
ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ. ಮುಂಡರಗಿ
ಗದಗ(ಜಿ)   
9448640213
(ಸದ್ರಿ ಶಿಕ್ಷಕರ ‘ಮಕ್ಕಳ ರಂಗಭೂಮಿ ಪ್ರದರ್ಶನ-ಪ್ರಕ್ರಿಯೆ’ ಎಂಬ ಸಂಶೋಧನಾ ಪ್ರಬಂಧಕ್ಕೆ ಕನ್ನಡ ವಿ.ವಿ.ಹಂಪಿಯಿಂದ ಡಾಕ್ಟರೇಟ್ ಪುರಸ್ಕಾರ ಲಭಿಸಿದೆ.)


ಆರ್.ಬಿ.ಗುರುಬಸವರಾಜ

ವಿಜ್ಞಾನೋತ್ಸವ-2015

 ದಿನಾಂಕ 02-11-2015ರ  ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಅಂತರಾಷ್ಟ್ರೀಯ ವಿಜ್ಞಾನೋತ್ಸವ-2015

    ಸಂಶೋಧನೆಗಳಿಗೆ ವೈಜ್ಞಾನಿಕ ಮನೋಭಾವವು ಮೂಲಭೂತ ಅಂಶ. ವೈಜ್ಞಾನಿಕ ಮನೋಭಾವವು ನಮ್ಮ ಆಲೋಚನಾ ರೀತಿ ಮತ್ತು ಸಮಸ್ಯಾ ಪರಿಹಾರ ವಿಧಾನಗಳಿಗೆ ಮಾನಸಿಕ ಪರಿವರ್ತನೆಯಾಗಿದೆ. ಈ ವರ್ತನೆಯು ದೇಶದ ಜನತೆಯನ್ನು ಉನ್ನತ ಹಂತಕ್ಕೆ ಬೆಳೆಸುತ್ತದೆ.
    ಭಾರತವು ಉತ್ಪಾದನೆ ಮತ್ತು ವಿತರಣೆಯಲ್ಲಿ ಅಮೂಲ್ಯ ಕೊಡುಗೆ ನೀಡಿದೆ. ಜೊತೆಗೆ ಅನೇಕ ವೈಜ್ಞಾನಿಕ ಸಾಧನೆಗಳ ಹೆಗ್ಗುರುತು ಮೂಡಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ಭಾರತವು ತಾಂತ್ರಿಕವಾಗಿ ಅರ್ಹರಾದ ಅನೇಕ ವೃತ್ತಿಪರರ ದೊಡ್ಡ ಗುಂಪನ್ನು ಹೊಂದಿದ್ದರೂ ದೇಶದಾದ್ಯಂತ ವೈಜ್ಞಾನಿಕ ಮನೋಭಾವ ಸಂಪೂರ್ಣವಾಗಿ ಬೆಳೆದುಬಂದಿಲ್ಲ. ಆದ್ದರಿಂದ ವೈಜ್ಞಾನಿಕ ಮನೋಭಾವದ ಮಂತ್ರ ಜಪಿಸುವುದು ಹಿಂದೆಂದಿಗಿಂತಲೂ ಈಗಿನ ತುರ್ತು ಅಗತ್ಯವಾಗಿದೆ. ಇಡೀ ಸಮಾಜದುದ್ದಕ್ಕೂ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ವೈಜ್ಞಾನಿಕ ಮನೋಭಾವನೆ ಬಲಪಡಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಭೂವಿಜ್ಞಾನ ಸಚಿವಾಲಯಗಳು ಜಂಟಿಯಾಗಿ ‘ಅಂತರಾಷ್ಟ್ರೀಯ ವಿಜ್ಞಾನೋತ್ಸವ-2015’ನ್ನು ಸಂಘಟಿಸಿವೆ.
    ದೇಶದಾದ್ಯಂತ ಇರುವ ಯುವ ವಿಜ್ಞಾನಿಗಳಿಗೆ ವೈಜ್ಞಾನಿಕ ವಿಷಯದಲ್ಲಿನ ಹೊಸ ಐಡಿಯಾ, ಸಂಶೋಧನೆ, ಅನುಭವ, ಸಾಧನೆಗಳನ್ನು ಹಂಚಿಕೊಳ್ಳಲು ಮತ್ತು ಪ್ರಸಾರ ಮಾಡಲು ವೇದಿಕೆ ಒದಗಿಸುವ ಮೂಲಕ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಉದ್ದೇಶ ಹೊಂದಿದೆ. ಇದರಲ್ಲಿ ಜನಸಾಮಾನ್ಯರು, ಶಾಲಾ ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ಉದ್ದಿಮೆದಾರರು, ವಿಜ್ಞಾನಿಗಳು ಹೀಗೆ ಒಟ್ಟು 3500 ಜನ ಭಾಗವಹಿಸುವ ನೀರೀಕ್ಷೆಯಿದೆ. ಜನಸಾಮಾನ್ಯರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ಮೂಲಕ ವೈಜ್ಞಾನಿಕ ಮನೋಭಾವನೆ ಮೂಡಿಸುವ ಆಶಯ ಹೊಂದಲಾಗಿದೆ.
ಯಾವಾಗ? ಎಲ್ಲಿ?: ಈ ಕಾರ್ಯಕ್ರಮವು 2015ರ ಡಿಸೆಂಬರ್ 4 ರಿಂದ 8ರವರೆಗೆ 5 ದಿನಗಳ ಕಾಲ ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.

ಉದ್ದೇಶಗಳು :

•    ವಿಜ್ಞಾನ ಮತ್ತು ತಂತ್ರಜ್ಞಾನದ ಫಲವನ್ನು ಜನಸಾಮಾನ್ಯರ ಗಮನಕ್ಕೆ ತರುವುದು.
•    ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಕಾರ್ಯತಂತ್ರ ರೂಪಿಸುವುದು.
•    ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಾರತೀಯರ ಕೊಡುಗೆಗಳನ್ನು ಪ್ರದರ್ಶಿಸುವುದು.
•    ಯುವ ವಿಜ್ಞಾನಿಗಳಿಗೆ ತಮ್ಮ ಹೊಸ ಐಡಿಯಾಗಳ ಪ್ರದರ್ಶನ ಮತ್ತು ಪ್ರಸಾರಕ್ಕೆ ವೇದಿಕೆ ಒದಗಿಸುವುದು.
•    ಗೌರವಾನ್ವಿತ ಪ್ರಧಾನಮಂತ್ರಿಗಳ ಪ್ರಮುಖ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ, ಸ್ಮಾರ್ಟ್ ವಿಲೇಜ್ ಮುಂತಾದವುಗಳನ್ನು ಪೋಷಿಸುವುದು.

ಕಾರ್ಯ ಚಟುವಟಿಕೆಗಳು:

•    ವಿಜ್ಞಾನ ಪ್ರಯೋಗಾಲಯ ಪ್ರದರ್ಶನ : ದೆಹಲಿ ಸೇರಿದಂತೆ ಸುತ್ತಮುತ್ತಲ ಶಾಲಾ ಮಕ್ಕಳಿಗಾಗಿ ಸಂಚಾರಿ ವಿಜ್ಞಾನ ಪ್ರಯೋಗಾಲಯ ಪ್ರದರ್ಶನ ನಡೆಯಲಿದೆ. ಇದರಲ್ಲಿ ಪ್ರಾಥಮಿಕ ಶಾಲಾ ಹಂತದಿಂದ ಪ್ರೌಢಶಾಲಾ ಹಂತದವರೆಗೆಗಿನ ಸಾವಿರಾರು ಮಕ್ಕಳು ಬಾಗವಹಿಸಲಿದ್ದು, ಕೈಗಳಿಂದ ಮಾಡಬಹುದಾದ ಅನೇಕ ವಿಜ್ಞಾನ ಪ್ರಯೋಗಗಳನ್ನು ಪ್ರಾಯೋಗಿವಾಗಿ ಮಾಡಿ ಅನುಭವ ಪಡೆಯುವರು.

•    ಯುವ ವಿಜ್ಞಾನಿಗಳ ಸಮಾವೇಶ : ಭಾರತದಲ್ಲಿನ ಯುವವಿಜ್ಞಾನಿಗಳ ಹೊಸ ಐಡಿಯಾಗಳ ಪ್ರಸಾರ ಮತ್ತು ಪ್ರಚಾರ ಮಾಡುವ ವೇದಿಕೆ ಇದಾಗಿದೆ. ಇದರಲ್ಲಿ ಪ್ರಮುಖವಾಗಿ ನವೀನ ಕೃಷಿ ಪದ್ದತಿಗಳು, ರಿಮೋಟ್ ತಂತ್ರಜ್ಞಾನದ ಅನ್ವಯಿಕಗಳು, ಮೇಕ್ ಇನ್ ಇಂಡಿಯಾಗಾಗಿ ನವೀನ ವಿನ್ಯಾಸಗಳು, ಹಸಿರು ಶಕ್ತಿ, ತಾಜ್ಯ ನಿರ್ವಹಣೆ, ಪರಿಸರ ನಿರ್ವಹಣೆ ಹೀಗೆ ಹಲವಾರು ವಿಷಯಗಳ ಕುರಿತು ಯುವ ವಿಜ್ಞಾನಿಗಳ ಉಪನ್ಯಾಸ ಮತ್ತು ಸಂವಾದ ನಡೆಯುತ್ತದೆ.

•    ಶೈಕ್ಷಣಿಕ ಮತ್ತು ಔಧ್ಯಮಿಕ ಸಮಾಗಮ : ವಿದ್ಯಾರ್ಥಿಗಳಲ್ಲಿ ಉಧ್ಯಮ ಜ್ಞಾನದ ಬಲವರ್ಧನೆಗಾಗಿ ಶೈಕ್ಷಣಿಕ ಔಧ್ಯಮಿಕ ಸಮಾಗಮ ನಡೆಯಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನದ ಜೊತೆಗೆ ಪರಿಸರ ಜ್ಞಾನ ಮತ್ತು ಉಧ್ಯಮ ಜ್ಞಾನ ನೀಡುವುದು ಇದರ ಆಶಯ.

•    ಚಲನಚಿತ್ರ ಪ್ರದರ್ಶನ : ಶೈಕ್ಷಣಿಕ ಹಾಗೂ ವೈಜ್ಞಾನಿಕ ಮನೋಭಾವದ ಹಿನ್ನಲೆಯಲ್ಲಿ ರಚನೆಯಾದ ಯಶಸ್ವಿ ಚಲನಚಿತ್ರಗಳ ಪ್ರದರ್ಶನ ವಿಜ್ಞಾನೋತ್ಸವದ ಮತ್ತೊಂದು ಆಕರ್ಷಣೆ. ಸಮಕಾಲೀನ ಮತ್ತು ಜಾಗತಿಕ ಮೆಚ್ಚುಗೆ ಪಡೆದ ಹಲವಾರು ಚಲನಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಗ್ರಾಮೀಣ ಪ್ರದೇಶಗಳಿಗೆ ಡಿಜಿಟಲ್ ತಂತ್ರಜ್ಞಾನವನ್ನು ತಲುಪಿಸುವ ಹಾಗೂ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮತ್ತು ಶೈಕ್ಷಣಿಕ ಘಟನಾಧಾರಿತ ಚಲನಚಿತ್ರ ತರಬೇತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶ.

•    ತಾಂತ್ರಿಕ ಉಧ್ಯಮ ಎಕ್ಸ್‍ಪೊ : ತಂತ್ರಜ್ಞಾನಕ್ಕೆ ಸಂಬಂಧಿಸಿದ ನಾವಿನ್ಯತೆಗಳು, ಸಾಧನೆಗಳು, ಆಧುನಿಕ ಮತ್ತು ಭವಿಷ್ಯದ ಮಾದರಿಗಳ ಪ್ರದರ್ಶನ ನಡೆಯಲಿದೆ. ಕಲಾವಿದರು, ತಂತ್ರಜ್ಞರು, ವಿನ್ಯಾಸಕಾರರು, ಹಾಗೂ ವಿಜ್ಞಾನಿಗಳ ಸಂವೇದನಾತ್ಮಕ ವೇದಿಕೆ ಇದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಸಂಸ್ಕøತಿ ಹಾಗೂ ಸಂಪ್ರದಾಯ ಉಳಿಸುವ ಚಿತ್ರಣ ಕಲೆಯ ಪ್ರದರ್ಶನ ನಡೆಯಲಿದೆ.

•    ವಿಜ್ಞಾನ ವಸ್ತು ಪ್ರದರ್ಶನ : ಎಲ್ಲಾ ರಾಜ್ಯಗಳಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಇನ್‍ಸ್ಪೈರ್ ಅವಾರ್ಡ್‍ನ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ನಡೆಯಲಿದೆ. ಇದರಲ್ಲಿ 800ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಿದ್ದಾರೆ. ಅಂತಿಮವಾಗಿ 3 ಮಾದರಿಗಳನ್ನು ಆಯ್ಕೆ ಮಾಡಿ ಸೂಕ್ತ ಬಹುಮಾನದೊಂದಗೆ ಪ್ರಶಸ್ತಿ ನೀಡಲಾಗುತ್ತದೆ.

  

ಆರ್.ಬಿ.ಗುರುಬಸವರಾಜ





November 28, 2015

ಮೌಲ್ಯವಂತರಾಗಿ VALUES IN YOUTHS

ದಿನಾಂಕ 28-10-2015ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ.
 

ಮೌಲ್ಯವಂತರಾಗಿ

    “ನೋಡಪ್ಪಾ, ಆ ಕೆಲ್ಸ ಮಾಡು ಈ ಕೆಲ್ಸ ಮಾಡು ಅಂತ ನೀನು ನನ್ಗೆ ಹೇಳ್ಬೇಡ. ನಾನು ಯಾವ ಕೆಲ್ಸನೂ ಮಾಡಲ್ಲ. ಇರು ಅಂದ್ರೆ ಮನೇಲಿ ಇರ್ತೀನಿ, ಇಲ್ಲಾಂದ್ರೆ ಮನೆ ಬಿಟ್ಟು ಹೊಂಟುಹೋಗ್ತೀನಿ” ಎಂದು ಪದೇ ಪದೇ ತಂದೆಯನ್ನು ಹೆದರಿಸ್ತಾನೆ ಪ್ರವೀಣ.
    ಬಿ.ಎ ಓದುತ್ತಿರುವ ಚೇತನ ಬಡಕುಟುಂಬದ ಹುಡುಗಿ. ಕೂಲಿ ಮಾಡಿದರೂ ಮಗಳನ್ನು ಓದಿಸಬೇಕೆಂಬ ಮಹದಾಸೆ ತಂದೆ-ತಾಯಿಯರದು. ಆದರೆ ಮಗಳು ತುಂಬಾ ಹಠಮಾರಿ. ದುಬಾರಿ ಬೆಲೆಯ ಮೊಬೈಲ್ ಬೇಕೆಂದು ನಾಲ್ಕಾರು ದಿನಗಳಿಂದ ಹಠಹಿಡಿದಿದ್ದಾಳೆ. ಊಟ, ತಿಂಡಿ, ಕಾಲೇಜು ಎಲ್ಲವನ್ನೂ ತ್ಯಜಿಸಿದ್ದಾಳೆ. ಅಷ್ಟೊಂದು ಬೆಲೆಯ ಮೊಬೈಲ್ ಕೊಡಿಸಲು ಹಣವಿಲ್ಲ. ಕೊಡಿಸದಿದ್ದರೆ ಮಗಳು ಏನು ಮಾಡಿಕೊಳ್ಳುತ್ತಾಳೋ ಎಂಬ ಭಯ. ಅವರಿಗೆ ಏನು ಮಾಡಬೇಕೋ ತೋಚುತ್ತಿಲ್ಲ.
    ದ್ವಿತೀಯ ಪಿ.ಯು.ಸಿ ಓದುತ್ತಿರುವ ಮಗ ಆಕಾಶನ ಫೋನು ಬಂತೆಂದರೆ ತಂದೆ ಬೆಚ್ಚಿ ಬೀಳ್ತಾರೆ. ಎಷ್ಟು ಹಣ ಕೇಳ್ತಾನೋ, ಹೇಗೆ ಹೊಂದಿಸಬೇಕು ಎಂಬುದೇ ಅವರ ಭಯಕ್ಕೆ ಕಾರಣ. ಅವರು ಅಂದುಕೊಂಡಂತೆ ‘ಅಪ್ಪಾ ನನಗೆ ಅರ್ಜಂಟಾಗಿ ದುಡ್ಡು ಬೇಕು’ ಎಂಬ ಮಗನ ಧ್ವನಿ ಕೇಳಿ ಬೆಚ್ಚಿದರು. ಅಳುಕುತ್ತಲೇ ‘ಈಗ್ಯಾಕೋ ದುಡ್ಡು’ ಎಂದರು. ‘ಕಾಲೇಜಿನಲ್ಲಿ ಟೂರ್ ಫಿಕ್ಸ್ ಆಗಿದೆ. ಅದ್ಕೆ ದುಡ್ಡು ಬೇಕು’ ಎಂದ ಆಕಾಶ. ‘ಎಷ್ಟು ಬೇಕಿತಪ್ಪ’ ಎಂದು ನಿಧಾನವಾಗಿ ಕೇಳಿದರು. ‘ಇಪ್ಪತ್ತು ಸಾವಿರ ಬೇಕು. ಇವತ್ತೇ ನನ್ನ ಅಕೌಂಟ್‍ಗೆ ಹಾಕ್ಬಿಡಿ. ಇಲ್ಲಾಂದ್ರೆ ನಾನು ಓದೋದು ಬಿಟ್ಟು ಮನೆಗೆ ಬಂದ್ಬೀಡ್ತೀನಿ’ ಎಂಬ ಆಕಾಶನ ಮಾತಿಗೆ ಹೃದಯವೇ ಬಾಯಿಗೆ ಬಂದಂತಾಯ್ತು. ಅವರ ಎರಡು ತಿಂಗಳ ಸಂಬಳ ಸೇರಿಸಿದರೂ ಇಪ್ಪತ್ತು ಸಾವಿರ ಆಗೋಲ್ಲ. ಬೇಸತ್ತ ತಂದೆ ಕಾಲೇಜಿಗೆ ಫೋನಾಯಿಸಿದರು. ಅಲ್ಲಿಂದ ಮತ್ತೊಂದು ತಗಾದೆ. ಕಾಲೇಜಿನಲ್ಲಿ ಟೂರು ಫಿಕ್ಸ್ ಆಗೇ ಇಲ್ಲ ಎಂಬುದು. ಅಲ್ಲದೇ ಮಗ ಸರಿಯಾಗಿ ಕಾಲೇಜಿಗೆ ಹಾಜರಾಗುತ್ತಿಲ್ಲ, ವಿದ್ಯಾರ್ಥಿಗಳಿಗೆ ಚುಡಾಯಿಸ್ತಾನೆ, ಕೇಳಿದರೆ ಸಿಬ್ಬಂದಿಯನ್ನೇ ಹೊಡೆಯಲು ಮುಂದಾಗುತ್ತಾನೆ, ಇತ್ತೀಚೆಗೆ ಕುಡಿಯುವುದು, ಮೋಜು ಮಸ್ತಿ ಹೆಚ್ಚಾಗಿದ್ದು, ಇತರೆ ಹುಡುಗರು ಇವನಿಂದಾಗಿ ಹಾಳಾಗುತ್ತಿದ್ದಾರೆ’ ಎಂಬ ಆರೋಪ ಪಟ್ಟಿ. ಇದು ತಂದೆಗೆ ಮತ್ತೊಂದು ಆಘಾತ. ಆಕಾಶವೇ ತಲೆ ಮೇಲೆ ಬಿದ್ದಂತಾಯ್ತು.
    ಹೀಗೆ ಇಂತಹ ಅನೇಕ ಆರೋಪಗಳು ಯುವ ಪೀಳಿಗೆಯ ಮೇಲೆ ಕೇಳಿಬರುತ್ತಲೇ ಇದೆ. ‘ಯಾರಿಗ್ಹೇಳೋಣಾ ನಮ್ಮ ಪ್ರಾಬ್ಲಮ್ಮು’ ಎಂದು ತಂದೆ ತಾಯಿ ಗೊಣಗಿದರೆ ‘ಯಾಕ್ಹಿಂಗಾಡ್ತಾರೋ’ ಎನ್ನುತ್ತಾರೆ ಯುವಕರು. ಇಂದಿನ ಯುವಕರಲ್ಲಿ ಜವಾಬ್ದಾರಿ ಹಾಗೂ ಮೌಲ್ಯಗಳ ಬಳಕೆ ತೀರಾ ಕಡಿಮೆ ಎಂಬ ಮಾತು ಕೇಳಿ ಬರುತ್ತಿರುವುದು ಸಹಜ. ಪಾಲಕರಿಗೆ ಎದುರು ಮಾತನಾಡುವುದು, ಗುರು-ಹಿರಿಯರಿಗೆ ಗೌರವ ನೀಡದಿರುವುದು, ಅಸಹಾಯಕರಿಗೆ ಸಹಾಯ ಹಸ್ತ ಚಾಚದೇ ಇರುವುದು, ಕಿರಿಯರನ್ನು ಪ್ರೀತ್ಯಾದರಗಳಿಂದ ಕಾಣದೇ ಇರುವುದು, ವಸ್ತುಗಳ ಮತ್ತು ಸಂಬಂಧಗಳ ಮೌಲ್ಯ ಅರಿಯದೇ ಇರುವುದು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ರೀತಿ ಎಲ್ಲಾ ಅಪಾದನೆಗಳು ಯುವಕರನ್ನೇ ಕೇಂದ್ರವಾಗಿಟ್ಟುಕೊಂಡಿವೆ. ಏಕೆಂದರೆ ಇಂದಿನ ಯುವಕರೇ ಭವಿಷ್ಯದ ರಾಷ್ಟ್ರ ನಿರ್ಮಾತೃಗಳು. ಹಾಗಾಗಿ ಯುವ ಪೀಳಿಗೆ ಮತ್ತು ನೈತಿಕ ಮೌಲ್ಯಗಳ ನಡುವೆ ಆಳವಾದ ಸಂಬಂಧವಿದೆ.
ನೈತಿಕ ಮೌಲ್ಯಗಳೆಂದರೇನು?
    ಸಮಾಜ ಒಪ್ಪಿತ ಮಾನವ ವರ್ತನೆಗಳೇ ನೈತಿಕ ಮೌಲ್ಯಗಳು. ಇವು ಸ್ವಯಂ ಪ್ರಜ್ಞೆ ಮತ್ತು ವ್ಯವಹಾರಿಕ ಅಲಿಖಿತ ಕಾನೂನುಗಳಿದ್ದಂತೆ. ನೈತಿಕತೆ ಎನ್ನುವುದು ಬೇರೊಬ್ಬರ ಒತ್ತಾಯ ಇಲ್ಲದೇ ಆಂತರಿಕವಾಗಿ ಬೆಳೆಯಬಲ್ಲ ವ್ಯಕ್ತಿತ್ವ ನಿರ್ಮಾಣದ ಕಾರ್ಯತಂತ್ರಗಳು. ನೈತಿಕತೆ ಅಥವಾ ‘ಒoಡಿಚಿಟiಣಥಿ’ ಎನ್ನುವ ಪದ ‘ಒoಡಿes’ ಎನ್ನುವ ಲ್ಯಾಟಿನ್ ಪದದಿಂದ ಬಂದಿದ್ದು, ‘ನೀತಿ’ ಅಥವಾ ‘ನಡವಳಿಕೆ’ ಎಂಬಂರ್ಥ ಕೊಡುತ್ತದೆ.
    ಉಪಯುಕ್ತವಾದ ಮತ್ತು ಅಪೇಕ್ಷಣೀಯವಾದ ಹಾಗೂ ನಿತ್ಯವೂ ಅನುಸರಿಸಬಹುದಾದ ವರ್ತನಾ ಅಂಶಗಳೇ ನೀತಿಗಳು. ಇವು ಮಾನವನ ಅಭ್ಯುದಯಕ್ಕಾಗಿ ಅವಶ್ಯಕ. ಸತ್ಯಸಂಧತೆ, ತಾಳ್ಮೆ, ವಿಧೇಯತೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಜವ್ದಾದಾರಿ ನಿರ್ವಹಣೆ, ಗೌರವ, ಸಹನೆ, ಸಹಕಾರ, ನಿಷ್ಠೆ, ಸಾರ್ವಜನಿಕ ಹಿತಾಸಕ್ತಿ, ಸ್ವಾತಂತ್ರ ರಕ್ಷಣೆ ಇವೆಲ್ಲವೂ ನೈತಿಕ ಮೌಲ್ಯಗಳಾಗಿದ್ದು ವ್ಯಕ್ತಿತ್ವದ ಘನತೆಗೆ ಪೂರಕವಾಗಿವೆ.
   
    ನೀತಿಶಿಕ್ಷಣ/ಮೌಲ್ಯಶಿಕ್ಷಣ ಪ್ರಾಥಮಿಕ ಶಿಕ್ಷಣದಿಂದ ಪ್ರೌಢಶಿಕ್ಷಣದವರೆಗೆ ಮಾತ್ರ ಶಿಕ್ಷಣದ ಒಂದು ಭಾಗವಾಗಿ ಮುಂದುವರೆಯುತ್ತವೆ. ಕಾಲೇಜು ಶಿಕ್ಷಣದಲ್ಲಿ ಇದನ್ನು ಪ್ರತ್ಯೇಕ ವಿಷಯವಾಗಿ ಅಳವಡಿಸದೇ ಇರುವುದು ಮೌಲ್ಯಗಳು ಅಧಃಪತನಕ್ಕೆ ಇಳಿಯಲು ಕಾರಣ ಎಂಬುದು ಅನೇಕರ ಆರೋಪ. ಆದರೆ ಕೇವಲ ಶಿಕ್ಷಣದ ಕೊರತೆಯೊಂದೇ ಮೌಲ್ಯಗಳು ಕುಸಿಯಲು ಕಾರಣವಲ್ಲ. ಇದರಲ್ಲಿ ಪಾಲಕರು, ಸಮುದಾಯ, ಒಡನಾಡಿಗಳ ಪಾತ್ರವೂ ಇದೆ.

ಮೌಲ್ಯಗಳ ಕುಸಿತಕ್ಕೆ ಕಾರಣಗಳು
    ಇಂದಿನ ಯುವಕರಲ್ಲಿ ಅನೈತಿಕತೆ ಮತ್ತು ಸಮಾಜ ವಿರೋಧಿ ನಡವಳಿಕೆಗಳು ಹೆಚ್ಚಲು ಅನೇಕ ಅಂಶಗಳು ಪ್ರಭಾವ ಬೀರುತ್ತವೆ. ಅವುಗಳೆಂದರೆ,
ಒಡನಾಡಿಗಳು/ಸಮವಯಸ್ಕರ ಒತ್ತಡ : ನೈತಿಕತೆ ಕುಸಿಯುವಲ್ಲಿ ಒಡನಾಡಿಗಳ ಪ್ರಭಾವ ಅಧಿಕವಾಗಿದೆ.  ಸಮವಯಸ್ಕರ ಮನಸ್ಸನ್ನು ಗೆಲ್ಲಲು ಅಥವಾ ಒಡನಾಡಿಗಳ ಒತ್ತಡದಿಂದ ನೈತಿಕತೆಯನ್ನು ಮುರಿದುಹಾಕಿ ಅವಿವೇಕತನದಿಂದ ವರ್ತಿಸುವುದು ಮೌಲ್ಯಗಳ ಕುಸಿತಕ್ಕೆ ಕಾರಣವಾಗಿದೆ.
ಸ್ವಯಂ ನೀತಿ ನಿರೂಪಣೆ : ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ತಮಗೆ ಅನುಕೂಲವಾಗುವಂತಹ ತಮ್ಮದೇ ಆದ ನೀತಿಗಳನ್ನು ರೂಪಿಸಿಕೊಳ್ಳುವುದು ಹಾಗೂ ಅದು ಸಮಂಜಸವಲ್ಲದಿದ್ದರೂ ಅದನ್ನು ಸಮರ್ಥಿಸಿಕೊಳ್ಳುವುದು.
ವಿವೇಚನೆ ಇಲ್ಲದಿರುವುದು : ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು, ಕಾಲ್ಪನಿಕತೆ-ವಾಸ್ತವಿಕತೆ, ಮುಂತಾದವುಗಳಲ್ಲಿ ವಿವೇಚನೆ ಇಲ್ಲದೇ ತಮ್ಮನ್ನು ತೊಡಗಿಸಿಕೊಳ್ಳುವುದು ಕೂಡಾ ಮೌಲ್ಯಗಳ ಕುಸಿತಕ್ಕೆ ಕಾರಣವಾಗಿವೆ. ಇದರಿಂದ ಅವಮಾನ ಮತ್ತು ಪಶ್ಚಾತ್ತಾಪ ಪ್ರಜ್ಞೆ ಮಾಯವಾಗಿದೆ.
ಸ್ವ ಅಭಿವ್ಯಕ್ತಿ ಕೊರತೆ : ತಮ್ಮಲ್ಲಿನ ಅಗಾಧ ಜ್ಞಾನ ಮತ್ತು ಪ್ರತಿಭೆಯನ್ನು ಸಮಾಜೋಪಯೋಗಿ ಕಾರ್ಯಗಳಿಗೆ ಧನಾತ್ಮಕವಾಗಿ ಬಳಸದೇ ನಕಾರಾತ್ಮಕ ಕಾರ್ಯಗಳಾದ ಅಪರಾಧ, ಅನೈತಿಕ ವರ್ತನೆ, ಧೂಮಪಾನ, ಮಧ್ಯಪಾನ, ಅಶ್ಲೀಲ-ಅವ್ಯಾಚ್ಯ ಪದಗಳ ಬಳಕೆ, ಪರಸ್ಪರ ಜಗಳ, ಇತ್ಯಾದಿ ಕುಕೃತ್ಯಗಳಿಗೆ ಬಳಸುವುದುರಿಂದ ಮೌಲ್ಯಗಳು ಕುಸಿಯುತ್ತವೆ.
ಅವಿಭಕ್ತ ಮತ್ತು ಐಹಿಕ ಜೀವನ : ಇಂದಿನ ಬಹುತೇಕ ಅವಿಭಕ್ತ ಕುಟುಂಬಗಳಲ್ಲಿ ತಂದೆ-ತಾಯಿಗಳಿಬ್ಬರೂ ದುಡಿಯುವುದು ಅನಿವಾರ್ಯವಾಗಿದೆ. ಹಾಗಾಗಿ ಅವರು ತಮ್ಮ ಮಕ್ಕಳೊಂದಿಗೆ ಕಾಲ ಕಳೆಯಲು ಸಮಯ ದೊರೆಯದೇ ಇರುವುದು, ಮಕ್ಕಳ ಬೇಕು ಬೇಡಗಳಿಗೆ ಸ್ಪಂದಿಸದಿರುವುದು, ಮಕ್ಕಳ ವರ್ತನೆ ಹವ್ಯಾಸಗಳನ್ನು ಗಮನಿಸಲು ಬಿಡುವಿಲ್ಲದಿರುವುದು, ಎಲ್ಲದಕ್ಕೂ ಹಣವನ್ನೇ ಪ್ರಧಾನವಾಗಿಸುವುದು, ಐಭೋಗ ಜೀವನ ನಡೆಸಲು ಹಾತೊರೆಯುವುದು ಇವೆಲ್ಲವೂ ಮೌಲ್ಯಗಳ ಕುಸಿತಕ್ಕೆ ಕಾರಣಗಳಾಗಿವೆ.
ಕಟ್ಟುನಿಟ್ಟಿನ ನಿಯಂತ್ರ್ರಣ ಮತ್ತು ಕಠೋರ ಶಿಕ್ಷೆ : ಬಾಲ್ಯದಲ್ಲಿನ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಕಠೋರ ಶಿಕ್ಷೆಗಳು ಮಗುವಿನಲ್ಲಿ ಆಕ್ರಮಣಕಾರಿ ವರ್ತನೆ ಮತ್ತು ಕ್ರಾಂತೀಯ ಭಾವನೆ ಉಂಟಾಗಲು ಕಾರಣವಾಗುತ್ತವೆ. ಇದು ಅತ್ಯಂತ ಅಪಾಯಕಾರಿ.
ಮಾಧ್ಯಮಗಳು ಮತ್ತು ತಂತ್ರಜ್ಞಾನದ ಹಾವಳಿ : ಮೌಲ್ಯಗಳು ಕುಸಿಯಲು ಇರುವ ಎಲ್ಲಾ ಕಾರಣಗಳಿಗಿಂತಲೂ ಅತೀ ಮುಖ್ಯ ಕಾರಣವೆಂದರೆ ಮಾಧ್ಯಮಗಳು. ಯುವಕರ ಮನಸ್ಸನ್ನು ವಿಕೃತಗೊಳಿಸಿ ಸಮಾಜ ಘಾತುಕ ಕೆಲಸಗಳಲ್ಲಿ ತೊಡಗಲು ಹೆಚ್ಚು ಪ್ರೇರೇಪಣೆ ನೀಡುವಲ್ಲಿ ಮಾಧ್ಯಮಗಳೇ ಮುಂಚೂಣಿಯಲ್ಲಿವೆ ಎಂದರೆ ತಪ್ಪಲ್ಲ. ಅದರಲ್ಲೂ ಟಿ.ವಿ ಮತ್ತು ಸಿನೆಮಾಗಳು ಯುವ ಮನಸ್ಸುಗಳನ್ನು ಉದ್ರೇಕಗೊಳಿಸಿ ಅಹಿತಕರ ಘಟನೆಗಳಿಗೆ ಪ್ರಚೋದಿಸುತ್ತವೆ.
ಇತರೆ ಉತ್ತೇಜಕಗಳು : ಅತೃಪ್ತಿ ಜೀವನ, ಮನೋರಂಜನೆಯ ಪ್ರಭಾವ, ಅನಪೇಕ್ಷಿತ ಚಿತ್ರಗಳ ವೀಕ್ಷಣೆ, ಅಂತರಜಾಲದ ಅಶ್ಲೀಲ ತಾಣಗಳ ಹುಡುಕಾಟ, ಲೈಂಗಿಕ ಪ್ರಚೋದನೆಯ ಅಶ್ಲೀಲ ಕಾದಂಬರಿಗಳು, ದಿಢೀರ್ ಶ್ರೀಮಂತರಾಗುವ ಹಗಲುಗನಸು, ಮಾದಕ ವ್ಯಸನ ಮುಂತಾದವುಗಳೂ ಕೂಡಾ ನೈತಿಕ ಅವನತಿಯ ಕಾರಣಗಳಾಗಿವೆ.
ನೈತಿಕ ಮೌಲ್ಯಗಳೇಕೆ ಬೇಕು?
    ಮೌಲ್ಯಗಳು ಪ್ರತಿ ನಿಮಿಷವೂ ನಿಮ್ಮ ಉದಾತ್ತ ಜೀವನದ ಗುರಿಗಳ ಮಾರ್ಗದರ್ಶನ ಮಾಡುತ್ತವೆ. ಕೇವಲ ಮಾರ್ಗದರ್ಶನ ಅಲ್ಲದೇ ನಿಮಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುತ್ತವೆ. ಜೊತೆಗೆ ಆತ್ಮಸ್ಥೈರ್ಯ ಮತ್ತು ಅಭಿಮಾನ ಬೆಳೆಸುತ್ತವೆ.  ಆಕಸ್ಮಿಕ ಘಟನೆಗಳು, ಪ್ರಚೋದಕಗಳಿಂದ, ಅಹಿತಕಾರಿ ಭಾವನೆಗಳಿಂದ ನಿಮ್ಮನ್ನು ಸ್ವಯಂ ನಿಯಂತ್ರಿಸುತ್ತವೆ. ಮೌಲ್ಯಗಳು ನಿಮ್ಮನ್ನು ಸರಿದಾರಿಯಲ್ಲಿ ನಡೆಸಿ ಜೀವನವನ್ನು ಅರ್ಥಪೂರ್ಣಗೊಳಿಸುತ್ತವೆ.
    ಮೌಲ್ಯಗಳು ವೈಫಲ್ಯಕ್ಕೆ ಸೂಕ್ಷ್ಮತೆಯ ಸ್ಪರ್ಶ ನೀಡುತ್ತವೆ ಮತ್ತು ಅನುತ್ಪಾದಕ ತಪ್ಪನ್ನು ಸರಿಪಡಿಸಿ ರಚನಾತ್ಮಕ ಕಾರ್ಯಗಳತ್ತ ನಿಮ್ಮನ್ನು ಕೊಂಡೊಯ್ಯತ್ತವೆ. ನೈತಿಕತೆ ನಿಮ್ಮಲ್ಲಿನ ನಿಷ್ಪ್ರಯೋಜಕ ಅಥವಾ ಅಹಿತಕರ ವರ್ತನೆಗಳನ್ನು ಬದಲಾಯಿಸಿ ಸುವಿಚಾರ ಮತ್ತು ವಿವೇಚನಾಯುತ ಸ್ವಭಾವ ಬೆಳೆಸುತ್ತವೆ. ನಾಟಕೀಯತೆ ಮತ್ತು ವಾಸ್ತವಿಕ ಕಾರ್ಯಾಚರಣೆಯ ನಡುವಿನ ವ್ಯತ್ಯಾಸ ಗುರುತಿಸಿ ಪ್ರಾಮಾಣಿಕತೆಯ ಮಟ್ಟವನ್ನು ಹೆಚ್ಚಿಸುತ್ತವೆ. ಆದರ್ಶ ಮತ್ತು ಮೌಲ್ಯಗಳೊಂದಿಗೆ ಜೀವಿಸುವುದರಿಂದ ನೀವು ಇನ್ನೊಬ್ಬರ ಮೇಲೆ ಪ್ರಭಾವ ಬೀರಬಹುದು ಅಥವಾ ನಿಮ್ಮ ತತ್ವಾದರ್ಶಗಳನ್ನು ಇತರರು ಅನುಸರಿಸಬಹುದು.
    ಮೂಲತಃ ಮಾನವ ಸಂಘಜೀವಿ ಹಾಗೂ ಸಮಾಜಜೀವಿ. ತಾನು ವಾಸಿಸುವ ಸಮಾಜದೊಂದಿಗೆ ಪ್ರತಿಕ್ರಿಯಿಸುವುದು ಅವಶ್ಯ. ಅದಕ್ಕಾಗಿ ವಿಭಿನ್ನವಾದ ಸಾಮಾಜಿಕ ಅಭ್ಯಾಸಗಳಿಂದ ಇತರರಿಗೆ ಸಹಾಯ ಮಾಡುವುದು, ಗುರು-ಹಿರಿಯರನ್ನು ಗೌರವಿಸುವುದು, ಸೌಜನ್ಯದೊಂದಿಗೆ ವರ್ತಿಸುವುದು, ಇತ್ಯಾದಿಗಳನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಅಭ್ಯಾಸಗಳು ಇತರರಿಗೆ ಒಳಿತನ್ನು ಮಾಡುವುದರ ಜೊತೆಗೆ ಸಮಾಜದಲ್ಲಿ ನೀವೊಬ್ಬ ಸತ್ಪ್ರಜೆಯಾಗಿ ಗುರುತಿಸಲ್ಪಡುತ್ತೀರಿ.
    ಯುವಕರು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದರಿಂದ ಉತ್ಸಾಹ ಹುಮ್ಮಸ್ಸು ಹೆಚ್ಚುತ್ತದೆ. ಯುವಕರು ‘ಕತ್ತಲೆಯ ದಾರಿದೀಪ’ಗಳಾಗಿ ದೇಶದ ಭವಿಷ್ಯವನ್ನು ಉಜ್ವಲಗೊಳಸಬೇಕು.
ಬೆಳೆಸಿಕೊಳ್ಳುವ ಬಗೆ
    ಸಾಮಾನ್ಯವಾಗಿ ಕಾಲೇಜು ಶಿಕ್ಷಣದಲ್ಲಿ ನೀತಿ/ಮೌಲ್ಯಶಿಕ್ಷಣವನ್ನು ಪ್ರತ್ಯೇಕವಾಗಿ ಬೋಧಿಸುವುದಿಲ್ಲ. ಬದಲಾಗಿ ಅದು ಕಲಿಯುವ ವಿಷಯಗಳಲ್ಲೇ ಆಂತರಿಕವಾಗಿ ಅಡಗಿರುತ್ತವೆ. ಪ್ರತಿಯೊಂದು ಪರಿಕಲ್ಪನೆಯ ಕಲಿಕೆಯಲ್ಲಿ ಮೌಲ್ಯ ಅಡಗಿರುತ್ತದೆ. ಉದಾತ್ತ ವ್ಯಕ್ತಿಗಳ ಜೀವನ ಚರಿತ್ರೆ, ಸಾಹಿತ್ಯ, ವಿಮರ್ಶೆ, ಕಥೆ, ಕಾದಂಬರಿ, ತತ್ವ, ಆದರ್ಶ ಮುಂತಾದ ಅಂಶಗಳ ಕಲಿಕೆಯಿಂದ ಮೌಲ್ಯಗಳನ್ನು ಆಂತರಿಕವಾಗಿ ಅಳವಡಿಸಿಕೊಳ್ಳಬೇಕು.
    ವಿವಿಧ ಸಂಸ್ಕತಿ ಮತ್ತು ವಿವಿಧ ದೇಶಗಳ ಜನಜೀವನ ಅಧ್ಯಯನ, ಸಾಂಸ್ಕøತಿಕ ಚಟುವಟಿಕೆ ಮತ್ತು ಆಟೋಟಗಳಲ್ಲಿ ಪಾಲ್ಗೊಳ್ಳುವಿಕೆ, ಚರ್ಚೆ, ವಿಚಾರ ಸಂಕಿರಣ, ಉಪನ್ಯಾಸಗಳಲ್ಲಿ ಭಾಗವಹಿಸುವಿಕೆ, ವಿವಿಧ ಸೇವಾ ಸಂಘಗಳ ಸದಸ್ಯತ್ವ ಹೊಂದುವುದರಿಂದಲೂ ಮೌಲ್ಯಗಳು ಬೆಳೆಯುತ್ತವೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹಬ್ಬಗಳು, ವಿಶೇಷ ದಿನಾಚರಣೆಗಳು, ನಾಟಕ, ಗೀತಗಾಯನ, ನೃತ್ಯ, ಸಂಗೀತೋತ್ಸವ, ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವಿಕೆ ಮತ್ತು ಭಾಗವಹಿಸುವಿಕೆಯಿಂದಲೂ ಮೌಲ್ಯಗಳು ಬೆಳೆಯುತ್ತವೆ. ಆದಾಗ್ಯೂ ಕೆಲವು ವಿಶೇಷ ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದಲೂ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದು.
•    ಬೂಟಾಟಿಕೆ ಅಥವಾ ಡಾಂಭಿಕ ಮೌಲ್ಯಗಳನ್ನು ಬಿಟ್ಟು ವಾಸ್ತವಿಕ ನೆಲೆಗಟ್ಟಿನ ಆದರ್ಶಗಳನ್ನು ಬೆಳೆಸಿಕೊಳ್ಳಿ.
•    ಸ್ವಸಹಾಯ ಎಂಬುದು ಕೇವಲ ಸಮಸ್ಯೆಗಳಿಂದ ಹೊರಬರುವುದಲ್ಲ. ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ  ಮಾರ್ಗದ ಪುನರ್ ವಿಮರ್ಶೆಯ ಮೌಲ್ಯ. ನಿಮ್ಮಲ್ಲಿನ ಆಂತರಿಕ ಸಾಮಥ್ರ್ಯಗಳ ವೃದ್ದಿಯ ಮೌಲ್ಯವಾಗಿ ಪರಿವರ್ತಿಸಿ.
•    ಪ್ರತಿ ತಪ್ಪು ಅಥವಾ ದೌರ್ಬಲ್ಯಗಳಿಂದ ಕೆಲವನ್ನು ಕಳೆದುಕೊಂಡರೂ ಪುನಃ ಅದಕ್ಕೂ ಹೆಚ್ಚಿನದನ್ನು ಗಳಿಸುವ ಶಕ್ತಿ ನಿಮ್ಮಲ್ಲಿದೆ ಎಂಬುದನ್ನು ಮರೆಯಬಾರದು.
•    ಪ್ರತಿ ಎಡವಟ್ಟೂ ಸಹ ಹೊಸ ಕೌಶಲ್ಯ ಪಡೆಯಲು ಸಹಾಯಕವಾಗಬೇಕು. ಅಂತಯೇ ಪ್ರತೀ ನಿರಾಕರಣೆಯೂ ಸತ್ಯ ಶೋಧಕ ಮಾರ್ಗವಾಗಬೇಕು.
•    ಅಪವಾದ, ಹಿಂಸೆ, ಅನೈತಿಕತೆಗಳಿಂದ ದೂರವಿದ್ದು ಅವುಗಳ ವಿರುದ್ದದ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕು.
•    ಗೊಂದಲ ಮತ್ತು ಅಂಧ ನಂಬಿಕೆಗಳಿಂದ ಹೊರಬಂದು ನಂಬಿಕೆ ಮತ್ತು ಧೃಢವಿಶ್ವಾದಿಂದ ಮುನ್ನಡೆಯಿರಿ.
•    ಒಡನಾಡಿಗಳಿಂದ ಧಾರ್ಮಿಕ ಪ್ರಭಾವಕ್ಕೆ ಒಳಗಾಗುವುದಕ್ಕಿಂತ ಶಿಕ್ಷಣದಿಂದ ಸಾಮಾಜಿಕರಣ ಹೊಂದುವುದು ಅತೀಮುಖ್ಯ.
•    ತಂದೆ-ತಾಯಿ, ಬಂಧು-ಬಳಗ, ಸ್ನೇಹಿತರು, ಒಡನಾಡಿಗಳ ಸಂಬಂಧವನ್ನು ಪ್ರತೀಕಾರದಿಂದ ಹಾಳು ಮಾಡಿಕೊಳ್ಳುವ ಬದಲು ಪ್ರೀತಿ ವಿಶ್ವಾಸಗಳಿಂದ ಗಟ್ಟಿಗೊಳಿಸಿಕೊಳ್ಳಿ.
•    ಅನ್ಯಾಯ ಅಕ್ರಮಗಳ ವಿರುದ್ದ ಧ್ವನಿ ಎತ್ತಬೇಕೇ ಹೊರತು ಸೇಡು ಪ್ರತೀಕಾರಗಳಿಗಾಗಿ ಅಲ್ಲ.
•    ವಾಹನದ ವೇಗ ಹೆಚ್ಚಳ ಮತ್ತು ನಿಯಂತ್ರಣಕ್ಕೆ ಆಕ್ಸಿಲೇಟರ್ ಮತ್ತು ಬ್ರೇಕ್ ಇರುವಂತೆ ಪ್ರತಿ ವಿಷಯದ ಮೇಲೆ ಪ್ರಭುತ್ವ ಮತ್ತು ನಿಯಂತ್ರಣ ಅಗತ್ಯ. ಇದು ಮೌಲ್ಯಗಳನ್ನು ಅಳವಡಿಸಿಕೊಳ್ಳುವದರಿಂದ ಮಾತ್ರ ಸಾಧ್ಯ.
•    ನೈತಿಕ ಮೌಲ್ಯಗಳ ಜ್ಞಾನ ಅಳವಡಿಸಿಕೊಳ್ಳದ ಹೊರತು ವ್ಯಕ್ತಿಯ ವ್ಯಕ್ತಿತ್ವ ಪರಿಪೂರ್ಣವಲ್ಲ. ನೈತಿಕ ಮೌಲ್ಯಗಳು ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
•    ಸಮಾಜದ ಸಂತ್ರಸ್ತರಿಗೆ ಕಾಲೂರಿ ಮುನ್ನಡೆಯಲು ಸಹಾಯ ಹಸ್ತ ನೀಡಿ. ಆಗ ನಿಮ್ಮ ವೈಶಿಷ್ಟ್ಯತೆಯನ್ನು ಜಗಕೆ ತೋರಿಸಲು ಸಾಧ್ಯ.
ಕೊನೆ ಹನಿ
    ಸಮಾಜ ಯಾವಾಗಲೂ ಚಲನಶೀಲವಾದುದೇ ಹೊರತು ಸ್ಥಿರವಾದುದು ಅಲ್ಲ. ಜನರ ಮೌಲ್ಯಗಳು, ಪ್ರವೃತ್ತಿಗಳು, ಚಟುವಟಿಕೆಗಳು ಬದಲಾಗುವ ಮೂಲಕ ಸರಳ ಸಂಪ್ರಾದಾಯಿಕ ಸಮಾಜವು ಪರಿಪೂರ್ಣ ಸಮಾಜವಾಗಿ ಪರಿವರ್ತನೆಗೊಳ್ಳುತ್ತದೆ.
    ಯಾವುದೇ ಸಮಾಜದ ಅಭಿವೃದ್ದಿಯಲ್ಲಿ ಯುವಕರ ಪಾತ್ರ ಮಹತ್ವದ್ದು. ಯುವಕರ ಸಹಭಾಗಿತ್ವ ಇಲ್ಲದೇ ಸಮಾಜ ಸ್ವಾವಲಬಿಯಾಗಿ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ. ಪ್ರತೀ ಸಮಾಜದ ಉನ್ನತಿಗೆ ಯುವಕರ ಪ್ರಾಮಾಣಿಕ ಮತ್ತು ಸನ್ನಡತೆಯ ವರ್ತನೆಗಳೇ ಮೂಲಾಂಶಗಳು. ಯುವಕರು ಇದನ್ನರಿತು ಸಮಾಜದ ಪ್ರಗತಿಗೆ ತಮ್ಮದೇ ಆದ ಕಾಣಿಕೆಯನ್ನು ನೀಡುವ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.
ಶಿಫಾರಸ್ಸುಗಳು
•    ಸಮಾಜದ ಮೂಲಘಟಕವಾದ ಕುಟುಂಬವು ತನ್ನ ತಪ್ಪುಗಳನ್ನು ಅಂದರೆ ಮೌಲ್ಯಗಳನ್ನು ಪುನರ್ ರಚಿಸಿಕೊಳ್ಳುವ ಮೂಲಕ ಸಮಾಜದ ಧನಾತ್ಮಕ ಬದಲಾವಣೆಗೆ ಮುಂದಾಗಬೇಕು. ಕುಟುಂಬ ಸಮಾಜೀಕರಣದ  ದಲ್ಲಾಲಿಯಾಗಿ ಪ್ರಮುಖ ಪಾತ್ರ ವಹಿಸಬೇಕು.
•    ವಿಶೇಷವಾಗಿ ಯುವಕರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಜವಾಬ್ದಾರಿ ವಹಿಸಬೇಕು. ಏಕೆಂದರೆ ನಾಳೆಯ ಭವಿಷ್ಯ ಇಂದಿನ ಅಡಿಪಾಯವನ್ನು ಅವಲಂಬಿಸಿದೆ. ಅದಕ್ಕಾಗಿ ವಿಶ್ವಾಸಾರ್ಹವಾದ ಯುವ ನಾಯಕರ ನಿರ್ಮಾಣ ಇಂದಿನ ಆಧ್ಯತೆ ಆಗಬೇಕು.
•    ಯುವಕರು ಪರಸ್ಪರ ಸಾಮಾಜಿಕ ಜಾಲಗಳನ್ನು ಸೃಷ್ಟಿಸಿಕೊಂಡು ನೈತಿಕ ವಿಷಯಗಳ ಬಗ್ಗೆ ಚರ್ಚಿಸುತ್ತಾ ತಮ್ಮನ್ನು ತಾವೇ ಪ್ರೋತ್ಸಾಹಿಸಿಕೊಳ್ಳಬೇಕು. ಆ ಮೂಲಕ ಸಾಂಸ್ಥಿಕವಾದ ಮತ್ತು ಬದುಕಲು ಅರ್ಹವಾದ ನೈತಿಕತೆಯನ್ನು ಸ್ಥಾಪಿಸಿಕೊಳ್ಳಬಹುದು.

ಉದ್ಯೋಗಕ್ಕಾಗಿ ಶಿಕ್ಷಣ ಎನ್ನುವ ವ್ಯವಸ್ಥೆಯಿಂದ ಮೌಲ್ಯಗಳು ನಾಶವಾಗುತ್ತಿವೆ. ಡಿಜಿಟಲ್ ತಂತ್ರಜ್ಞಾನದಿಂದ ಪಾರಂಪರಿಕ ಸಂಬಂಧಗಳು ಮತ್ತು ಸಂಸ್ಕøತಿ ಹದಗೆಡುತ್ತಿದೆ. ಎಲ್ಲಿಯವರೆಗೆ ಶಿಕ್ಷಣದಿಂದ ಬದುಕುವ ದಾರಿಯನ್ನು ಹೇಳಿಕೊಡಲಾಗುತ್ತಿಲ್ಲವೋ ಅಲ್ಲಿಯವರೆಗೆ ಮೌಲ್ಯಗಳು ಬೆಳೆಯಲು ಸಾಧ್ಯವಿಲ್ಲ. ಮೌಲ್ಯಗಳನ್ನು ಬೆಳೆಸಿಕೊಳ್ಳಲು ಯಾವುದೇ ಪದವಿಯ ಅಗತ್ಯವಿಲ್ಲ.  
                   ಡಾ//ಸತೀಶ್ ಪಾಟೀಲ್. ಉಪನ್ಯಾಸಕರು
                   ಸರ್ಕಾರಿ ಪ್ರಥಮ ದರ್ಜೆ ಕಾಲೇಜು                 
                   ಹಗರಿಬೊಮ್ಮನಹಳ್ಳಿ












ಸುಸ್ಥಿರ ಅಭಿವೃದ್ದಿಗಾಗಿ ನೈತಿಕ ಮೌಲ್ಯಗಳ ಜೊತೆಗೆ ಸಂವಿಧಾನಾತ್ಮಕ ಮೌಲ್ಯಗಳಾದ ಸಮಾನತೆ, ಭಾತೃತ್ವ, ಸಾರ್ವಭೌಮತೆ, ಪ್ರಜಾಸತ್ತಾತ್ಮಕತೆ ಮುಂತಾದ  ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇವು ಕೇಲವ ತಾತ್ವಿಕ ಮೌಲ್ಯಗಳಾಗದೇ ಕುಟುಂಬದಿಂದಲೇ ಪ್ರಾಯೋಗಿಕವಾಗಿ ಅಳವಡಿಕೆಯಾಗಬೇಕು.
               ಎಂ.ಲೋಕೇಶ್.ಹೊಳಗುಂದಿ.
             ಸಂಪನ್ಮೂಲ ವ್ಯಕ್ತಿ ಹಾಗೂ ಸಂವಹನಕಾರರು
         ಅಬ್ದುಲ್ ನಜೀರ್‍ಸಾಬ್ ಗ್ರಾಮೀಣಾಭಿವೃದ್ದಿ ಸಂಸ್ಥೆ ಮೈಸೂರು.

                                                                                                                         ಆರ್.ಬಿ.ಗುರುಬಸವರಾಜ

November 2, 2015

ಕಹಳೆ: ಕನ್ನಡ ಬಂಟರ ಬಂಟ - ಚಂದ್ರಶೇಖರ ಶಾಸ್ತ್ರಿ

ಕಹಳೆ: ಕನ್ನಡ ಬಂಟರ ಬಂಟ - ಚಂದ್ರಶೇಖರ ಶಾಸ್ತ್ರಿ: ಒಬ್ಬ ವ್ಯಕ್ತಿ ಹೆಚ್ಚೆಂದರೆ ಆತನ 70-80ನೇ ವಯಸ್ಸಿನಲ್ಲೂ ಸಾಹಿತ್ಯ ಸಮ್ಮೇಳನಗಳಿಗೆ ಭಾಗವಹಿಸಬಹುದು. ಅನಂತರದ ವಯಸ್ಸಿನಲ್ಲಿ ದೇಹ ವಯೋಸಹಜವಾಗಿ ಸ್ಪಂದಿಸದ ಕಾರಣ ಭಾಗವಹಿ...

October 19, 2015

'ಕೊಸಿಮೊ' ಪುಸ್ತಕ ಪರಿಚಯ

ಅಕ್ಟೋಬರ್ 2015 ರ "ಟೀಚರ್" ಮಾಸಪತ್ರಿಕೆಯಲ್ಲಿ ಪ್ರಕಟವಾದ 'ಕೊಸಿಮೊ' ಪುಸ್ತಕ ಪರಿಚಯ

‘ಕೊಸಿಮೊ’ ಎಂಬ ಮರದ ಮೇಲಿನ ಪ್ರಪಂಚ

    ಸಮಕಾಲಿನ ತಲ್ಲಣಗಳನ್ನು ವಾಸ್ತವವಾದಿ ನೆಲೆಗಟ್ಟಿನ ಮೇಲೆ ರೂಪಿಸಿ, ಅಕ್ಷರ ರೂಪು ನೀಡುವುದು ಬಹು ಕಷ್ಟದ ಕೆಲಸ. ಆದಾಗ್ಯೂ ಕೆಲ ಲೇಖಕರು ಅಂತಹ ಸಾಹಸಕ್ಕೆ ಕೈ ಹಾಕುವುದುಂಟು. ಅಂತಹ ಸಾಹಸಿಗ ಲೇಖಕರ ಸಾಲಿನಲ್ಲಿ ನಿಲ್ಲುವ ಲೇಖಕರೆಂದರೆ ಇಟಲಿಯ ‘ಇಟಾಲೊ ಕಾಲ್ವಿನೊ’ ಅವರು.
    ಇಟಾಲೊ ಕಾಲ್ವಿನೊ ಎಂತಹ ಬರಹಗಾರರು ಎಂಬುದನ್ನು ನಿರ್ಧರಿಸಲು ಅವರ ‘ಬ್ಯಾರೆನ್ ಇನ್ ದಿ ಟ್ರೀಸ್’(ಕೊಸಿಮೊ) ಕೃತಿಯೊಂದೇ ಸಾಕು. ಅವರ ಇಡೀ ಪರಿಶ್ರಮವನ್ನು ಶಬ್ದಗಳ ಲಯಗಾರಿಕೆಯನ್ನು ಪಾತ್ರಗಳ ಮೂಲಕ ನೀಡುವ ಅವರ ತುಡಿತ-ಮಿಡಿತಗಳನ್ನು ಎಂತಹವರೂ ಅರ್ಥಮಾಡಿಕೊಳ್ಳಬಹುದು.
    ಕೊಸಿಮೊ ಅವರ ಅದ್ಬುತ ಕಾದಂಬರಿಗಳಲ್ಲಿ ಒಂದು. ಪ್ರಸ್ತುತ ಕಾದಂಬರಿಯ ಕಥಾವಸ್ತು ವಿಭಿನ್ನವೂ ವಿಶೇಷವೂ ಆಗಿದೆ. ಬಹುತೇಕ ಲೇಖಕರು ನೆಲದ ಮೇಲಿನ ಮಾನವನ ಕುರಿತು ಕಥೆ ಕಾದದಂಬರಿ ರಚಿಸಿದರೆ ಕಾಲ್ವಿನೊ ಅವರು ಮರದ ಮೇಲಿನ ಮಾನವನ ಕುರಿತು ಕಾದಂಬರಿ ರಚಿಸಿರುವುದೇ ಇದರ ವಿಶೇಷತೆ.
    ಇಲ್ಲಿ ರಮ್ಯತೆ ಇದೆ, ವಾಸ್ತವಿಕತೆ ಇದೆ, ರಂಜನೀಯತೆ ಇದೆ, ಸೃಜನಶೀಲತೆ ಇದೆ. ಜೊತೆಗೆ ಪರಿಸರ ಕಾಳಜಿಯೂ ಕೂಡಾ ಇದೆ. ಇಲ್ಲಿ ಏನಿದೆ? ಎನ್ನುವುದಕ್ಕಿಂತ ಏನಿಲ್ಲ? ಎಂದು ಓದುಗ ಹುಡುಕ ಹೊರಟರೆ ಅವನೊಬ್ಬ ಸಾಹಿತ್ಯ ಸಂಶೋಧಕನಾಗುತ್ತಾನೆ.
    ಕಾದಂಬರಿಯು 1767 ರ ನಿರ್ದಿಷ್ಟ ದಿನಾಂಕದೊಂದಿಗೆ ಪ್ರಾರಂಭವಾಗುತ್ತದೆಯಾದರೂ ಅದು ಸಮಕಾಲಿನ ಸಮಾಜಿಕ ಪರಿಸರವನ್ನೇ ಬಿಚ್ಚಿಡುತ್ತದೆ. ಇಡೀ ಕಾದಂಬರಿ ಒಂದು ಇಟಾಲಿಯನ್ ಬ್ಯಾರನ್ ಕುಟುಂಬದ ಸುತ್ತ ಗಿರಕಿ ಹೊಡೆದರೂ, ಆ ಗಿರಕಿಯಲ್ಲೇ ಇಡೀ ಪ್ರಪಂಚದ ವಿದ್ಯಮಾನಗಳನ್ನು ಬಿಂಬಿಸುವ ಪ್ರಯತ್ನ ನಡೆದಿದೆ.
    ಕಾದಂಬರಿಯ ಪ್ರಾರಂಭದಲ್ಲೇ ಒಂದು ಊಟದ ಪ್ರಸಂಗಕ್ಕಾಗಿ ಮನೆಯವರ ವಿರುದ್ದ ಬಂಡೆದ್ದು ಮನೆಬಿಟ್ಟು ಮರವೇರಿದ 12 ವರ್ಷದ ಬಾಲಕ ಕೊಸಿಮೊ , ಉಪನಯನವನ್ನು ದಿಕ್ಕರಿಸಿ ಮನೆತೊರೆದ ಕ್ರಾಂತಿಕಾರಿ ಬಸವಣ್ಣನ ನೆನಪು ತರುತ್ತಾನೆ. ಹಾಗೆ ಮರವೇರಿದ ಕೊಸಿಮೊ ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ನೆಲಕ್ಕೆ ಕಾಲಿಡದೇ ಬದುಕಿದ ಅವನ ರೀತಿ ರೋಮಾಂಚನ ಎನಿಸಿದರೂ ಹೀಗೂ ಬದುಕಬಹುದು ಎಂಬುದನ್ನು ಕಲಿಸುತ್ತದೆ.
    ಕಾದಂಬರಿಯ ಮುಖ್ಯ ಪಾತ್ರಧಾರಿ ಕೊಸಿಮೊ ಕೇವಲ ಒಬ್ಬ  ವ್ಯಕ್ತಿಯಲ್ಲ. ಅವನೇ ಒಂದು ಪ್ರಪಂಚ. ಅವನ ಈ ಪ್ರಪಂಚದಲ್ಲಿ ಪರಿಸರದೊಂದಿಗಿನ ಹೊಂದಾಣಿಕೆ, ಭವಾಭಾವದ ನಡುವೆಯೂ ಉತ್ಕøಷ್ಟತೆಯನ್ನು ಸಾಧಿಸಿ, ಶ್ರೇಷ್ಠತೆ ಪಡೆದ ಬಗೆಯನ್ನು ಕಾಲ್ವಿನೊ ಸುಂದರವಾಗಿ ರೂಪಿಸಿದ್ದಾರೆ.
    ಎಲ್ಲವನ್ನೂ ತ್ಯಜಿಸಿ ಏನೂ ಇಲ್ಲಗಳ ಮಧ್ಯೆ ಮರದ ಮೇಲೆಯೇ ಎಲ್ಲವನ್ನೂ ಸೃಷ್ಟಿಸಿಕೊಂಡು ಬದುಕುವ ಕೊಸಿಮೊ ಅಪ್ರತಿಮ ಸೃಷ್ಟಿಕರ್ತನಾಗಿ ಗೋಚರಿಸುತ್ತಾನೆ. ಪೋಲಿಯಾಗಿ ನೆಲದ ಮೇಲೆ ಓಡಾಡಬೇಕಾದ ವಯಸ್ಸಿನಲ್ಲಿ ಕೋತಿಯಂತೆ ಮರದಲ್ಲೇ ಓಡಾಡುವ, ಜೋಲಾಡುವ ಆ ಮೂಲಕ ಇಡೀ ಊರಿನ ಜನರ ಬಾಯಿಗೆ ಚರ್ಚೆಯ ವಿಷಯವಾಗುವ ಕೊಸಿಮೊನ ಪಾತ್ರ ಓದುಗರ ಅವಧಾನವನ್ನು ಹಿಡಿದಿಡುತ್ತಲೇ ರಮ್ಯತೆಯ ಲೋಕದಲ್ಲಿ ತೇಲಾಡಿಸುತ್ತದೆ.
    ಪಕ್ಕದ ಮನೆಯ ಶ್ರೀಮಂತ ಹುಡುಗಿ ವಯೋಲಾಳೊಂದಿಗಿನ ಸ್ನೇಹ, ಮೋಹ, ಪ್ರೇಮ, ಕಾಮ, ದ್ವೇಷ, ಮತ್ಸರ, ವಿರಹಗಳೆಲ್ಲವೂ ಕೊಸಿಮೊನನ್ನು ಒಬ್ಬ ಸಮಕಾಲೀನ ಪಡ್ಡೆ ಹುಡುಗ ಎಂಬಂತೆ ಬಿಂಬಿಸಿದರೆ  ರೈತರ ಬೆಳೆಗಳ ಕೀಟ ಆರಿಸುವ, ಕಳೆಕೀಳುವ, ಪ್ರಾಣಿ ಪಕ್ಷಿಗಳಿಂದ ಬೆಳೆಗಳನ್ನು ರಕ್ಷಿಸುವ ಮೂಲಕ ರೈತರ ಏಳಿಗೆಯನ್ನು ಬಯಸುವ ಸಮಾಜೋದ್ದಾರಕನನ್ನಾಗಿ, ಕಾಡ್ಗಿಚ್ಚನ್ನು ನಂದಿಸುವ ಅರಣ್ಯಪಾಲಕನನ್ನಾಗಿಯೂ ಬಿಂಬಿಸಿವೆ.
    ತಂದೆಯ ಮಾತಿಗೆ ಗೌರವ ಕೊಡುವ ಆಜ್ಞಾಪಾಲಕನಾಗಿ ವಿದ್ಯಾರ್ಜನೆಗೆ ಮುಂದಾದ ಕೊಸಿಮೊ ತನ್ನ ಗುರುಗಳಿಗೇ ಗುರುವಾಗಿ ಪರಿವರ್ತನೆ ಹೊಂದುವ ಪರಿ ಓದಿನ ಮಹತ್ವವನ್ನು ತಿಳಿಸುತ್ತದೆ. ‘ಪುಸ್ತಕ ಓದುವ ಹವ್ಯಾಸವುಳ್ಳವರು ಎಲ್ಲಿದ್ದರೂ ಹೇಗಿದ್ದರೂ ಸುಖವಾಗಿರಬಲ್ಲರು’ ಎಂಬುದನ್ನು ಸಾಬೀತುಪಡಿಸಲು ಇಲ್ಲಿ ಅನೇಕ ಸಾಕ್ಷ್ಯಾಧಾರಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಎಂದರೆ, ಸಣ್ಣಪುಟ್ಟ ಕಳ್ಳತನಗಳಿಂದ ಢಾಕುವಾಗಿ ಬೆಳೆದಿದ್ದ ಬ್ರೂಗಿ ಎಂಬ ಕ್ರೂರಪ್ರಾಣಿಗೆ ಓದುವ ಹುಚ್ಚನ್ನು ಹಚ್ಚುವ ಮೂಲಕ ರಾಬರಿಗಳನ್ನು ನಿಯಂತ್ರಿಸಲು ಪ್ರಯತ್ನಿಸಿದ್ದು ಕೊಸಿಮೊನ ಟ್ಯಾಲೆಂಟೆಡ್ ಬ್ರೈನ್.
    ಟ್ರೀ ವಲ್ರ್ಡ್‍ನಲ್ಲಿದ್ದುಕೊಂಡು ಅಂಡರ್‍ವಲ್ರ್ಡ್ ಪಾತಕಿಗಳನ್ನು ಮಟ್ಟ ಹಾಕಲು ಪ್ರಯತ್ನಿಸುವ ಕೊಸಿಮೊ ಒಬ್ಬ ದಕ್ಷ ಪೋಲೀಸ್ ಅಧಿಕಾರಿಯಾಗಿ ಗೋಚರಿಸುತ್ತಾನೆ. ಕಾದಂಬರಿಯ ಅಂತ್ಯಕ್ಕೆ ಗೋವಿನ ಹಾಡು ಪದ್ಯದ ‘ಕೊಟ್ಟ ಮಾತಿಗೆ ತಪ್ಪಲಾರೆನು ಕೆಟ್ಟ ಯೋಚನೆ ಮಾಡಲಾರೆನು’ ಎಂಬ ಸಾಲುಗಳು ನೆನಪಾಗುತ್ತವೆ. ಕೊಸಿಮೊ ತನ್ನ ಗೆಳತಿ ವಯೋಲಾಳಿಗೆ ನೀಡಿದ ವಚನಕ್ಕೆ ಬದ್ದನಾಗಿ ನೆಲದ ಮಣ್ಣನ್ನು ಸೊಂಕಿಸಿಕೊಳ್ಳದೇ ಮರಣಹೊಂದಿ ಅಂತಧ್ರ್ಯಾನ ಹೊಂದುವ ಪರಿ ಓದಿಗನ ಕಣ್ಣಂಚಿನ ತೇವವನ್ನು ಹೆಚ್ಚಿಸುತ್ತದೆ. ಆ ಮೂಲಕ ಕೌತುಕಗಳನ್ನು, ಪ್ರಶ್ನೆಗಳನ್ನೂ ಉಳಿಸುತ್ತದೆ.
    ಕೊಸಿಮೊ ಕೇವಲ ಒಂದು ಕಾದಂಬರಿ ಅಲ್ಲ. ಇದು ನಮ್ಮೊಳಗಿನ ನಮ್ಮನ್ನು ಹುಡುಕುವ ಪ್ರಯತ್ನ. ಸಾಧಿಸಲು ಅನೇಕ ಮಾರ್ಗಗಳಿವೆ ಎಂಬುದನ್ನು ಸಾಬೀತು ಪಡಿಸುವ ಪ್ರೇರೇಪಣಾ ಕೃತಿ. ಮಾನವರಾದ ನಾವು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಕುರಿತು ಮಾರ್ಗದರ್ಶನ ನೀಡುವ ಮಾರ್ಗದರ್ಶಿ, ವೈಚಾರಿಕತೆಯನ್ನು ಬೆಳೆಸುವ ವಿಚಾರ ಪ್ರಚೋದಕ ನಾಗಿ, ಪರಿಸರದೊಂದಿಗಿನ ಮಾನವನ ಅವಿನಾಭಾವ  ಸಂಬಂಧಗಳನ್ನು ಗಟ್ಟಿಗೊಳಿಸುವ, ಜಾಗತೀಕರಣದ ಪ್ರಭಾವದಿಂದಾಗುವ ಅನಾಹುತಗಳ ವಿರುದ್ದ ನಮ್ಮನ್ನು ಎಚ್ಚರಿಸುವ ಆಪ್ತಸಮಾಲೋಚಕನಾಗಿ ಈ ಕೃತಿ ಪ್ರಾಮುಖ್ಯ ಎನಿಸುತ್ತದೆ.
    ಇದನ್ನು ಓದುತ್ತಾ ಹೋದಂತೆಲ್ಲಾ ಪಾತ್ರಗಳು ನಮ್ಮ ಮನಸ್ಸಿನ ಕ್ಯಾನ್ವಾಸ್ ಮೇಲೆ ರಂಗುರಂಗಿನ ಸ್ಥರ ಚಿತ್ರಗಳನ್ನಾಗಿ,  ಆ ಸ್ಥಿರ ಚಿತ್ರಗಳು ವಿಡಿಯೋ ಚಿತ್ರಣಗಳಾಗಿ ದಾರಾವಾಹಿ ಅಥವಾ ಸಿನೆಮಾ ರೂಪದಲ್ಲಿ ಕಣ್ಣಮುಂದೆ ಸಾಗಿ ಹೋಗುತ್ತವೆ.
    ಪರಿಸರ ಪ್ರಿಯರೂ, ಸಾಹಿತ್ಯ ಶೋಧಕರೂ ಆದ ಕೆ.ಪಿ.ಸುರೇಶ ಅವರ ಅನುವಾದ ಆಪ್ಯಾಯಮಾನ ಎನಿಸುತ್ತದೆ. ಇದು ಅನುವಾದಿತ ಕೃತಿ ಅಂತ ಅನಿಸುವುದೇ ಇಲ್ಲ. ಥೇಟ್ ಕನ್ನಡದ ಕೃತಿ ಎಂಬಂತೆ ಭಾಸವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಓದುಗನೂ ಓದಲೇಬೇಕಾದ ಕೃತಿ ‘ಕೊಸಿಮೊ’.
ಪುಸ್ತಕ ಪರಿಚಯ
ಕೃತಿಯ ಹೆಸರು : ಕೊಸಿಮೊ(ಕಾದಂಬರಿ)
ಮೂಲ ಲೇಖಕರು: ಇಟಾಲೊ ಕಾಲ್ವಿನೊ
ಕನ್ನಡಾನುವಾದ : ಕೆ.ಪಿ.ಸುರೇಶ
ಪ್ರಕಾಶಕರು : ಅಭಿನವ ಪ್ರಕಾಶನ. ಬೆಂಗಳೂರು
ಬೆಲೆ : 100 ರೂಪಾಯಿಗಳು

                                                                                                        ಆರ್.ಬಿ.ಗುರುಬಸವರಾಜ

‘ಟೀಚರ್’ ಅಕ್ಟೋಬರ್ 2015

October 1, 2015

ಆಡಿಯೋ ಬುಕ್ಸ್ AUDIO BOOKS

 ದಿನಾಂಕ 30-09-2015ರ 'ವಿಜಯವಾಣಿ'ಯಲ್ಲಿ ಪ್ರಕಟವಾದ ನನ್ನ ಲೇಖನ.

ಯುವ ಟ್ರೆಂಡಿನ

ಆಡಿಯೋ ಬುಕ್ಸ್

    ಇತ್ತೀಚೆಗ ಕೆ.ಎ.ಎಸ್ ಮುಖ್ಯ ಪರೀಕ್ಷೆಗೆ ತಯಾರಿ ನಡೆಸಿರುವ ವಿರುಪಾಕ್ಷ ನಮ್ಮ ಮನೆಗೆ ಭೇಟಿ ನೀಡಿ ಕೆಲವು ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದ. ನಿಗದಿತ ಪಠ್ಯವನ್ನು ಹೇಗೆ ಓದಬೇಕು ಎಂಬ ಬಗ್ಗೆ ಚರ್ಚೆ ಸಾಗಿತ್ತು. ಪುಸ್ತಕಗಳನ್ನು ಓದುವ ಬದಲು ಕೇಳುವಂತಿದ್ದರೆ ತುಂಬಾ ಆಸಕ್ತಿದಾಯವಾಗಿರುತ್ತಿತ್ತು ಎಂದು ತನ್ನ ಅಳಲು ತೋಡಿಕೊಂಡ. ಒಂದು ಕ್ಷಣ ಅವನ ಮಾತು ಸತ್ಯ ಎನಿಸಿತು. ಆಗ ವಿಷಯದ ಬಗ್ಗೆ ಹೆಚ್ಚು ಮಾಹಿತಿ ಕಲೆಹಾಕಿದಾಗ ದೊರೆತ ಪುಸ್ತಕಗಳೇ ಆಡಿಯೋ ಪುಸ್ತಕಗಳು.
    ಏನಿದು ಆಡಿಯೋ ಪುಸ್ತಕ? : ರೆಕಾರ್ಡೆಡ್ ಸ್ವರೂಪದಲ್ಲಿನ ಕೇಳಬಹುದಾದ ಪುಸ್ತಕಗಳೇ ಆಡಿಯೋ ಪುಸ್ತಕಗಳು. ಅಂದರೆ ಮೂಲ ಮುದ್ರಿತ ಪುಸ್ತಕದ ಸಂಕ್ಷೇಪಿತವಲ್ಲದ ಧ್ವನಿಮುದ್ರಿತ ಪುಸ್ತಕಗಳು. ಈ ಪುಸ್ತಕಗಳನ್ನು ಪ್ರಯಾಣದ ವೇಳೆ ಹಾಗೂ ಇನ್ನಿತರೇ ಕೆಲಸಗಳ ಜೊತೆಜೊತೆಗೆ ಕೇಳುವ ಮೂಲಕ ಪುಸ್ತಕಗಳಲ್ಲಿನ ಮಾಹಿತಿಯನ್ನು ಆಸ್ವಾದಿಸಬಹುದು. ಹರಿಯದ ಮುರಿಯದ ಈ ಪುಸ್ತಕಗಳನ್ನು ಸುಲಭವಾಗಿ ಎಲ್ಲೆಂದರಲ್ಲಿ ಕೊಂಡೊಯ್ಯಬಹುದು.
    ಪುಸ್ತಕಗಳನ್ನು ಓದಬೇಕೆಂದರೆ ಮಳಿಗೆಗೆ ಹೋಗಿ ಖರೀದಿಸಬೇಕು ಅಥವಾ ಗ್ರಂಥಾಲಯಗಳಿಗೆ ಹೋಗಿ ಎರವಲು ಪಡೆದು ಓದಬೇಕೆಂಬ ಪ್ರಸಂಗವೇ ಈಗ ಇಲ್ಲ. ಬಿಡುಗಡೆಯಾದ ಎಲ್ಲಾ ಹೊಸ ಪುಸ್ತಕಗಳು ಆನ್‍ಲೈನ್‍ನಲ್ಲಿ ಲಭ್ಯ ಇರುತ್ತವೆ. ಸುಲಭ ವಿಧಾನಗಳಿಂದ ಡೌನ್‍ಲೋಡ್ ಮಾಡಿಕೊಂಡು ನೆಚ್ಚಿನ ಪುಸ್ತಕಗಳನ್ನು ನೀವಿದ್ದಲ್ಲಿಯೇ ಕೇಳಬಹುದು.
    ಇಲ್ಲಿ ಕತೆ, ಕಾದಂಬರಿ, ನಾಟಕ, ಜೀವನ ಚರಿತ್ರೆ, ಕಲೆ, ಸಾಹಿತ್ಯ, ವಿಮರ್ಶೆ, ಆರೋಗ್ಯ, ಉಧ್ಯಮ, ವಿದೇಶಿ ಭಾಷಾ ಅಧ್ಯಯನ, ಇತಿಹಾಸ, ಮನೋರಂಜನೆ, ಹಾಸ್ಯ, ವಿಡಂಬನೆ, ಧಾರ್ಮಿಕ, ಆದ್ಯಾತ್ಮಿಕ ಹೀಗೆ ಎಲ್ಲಾ ಪ್ರಕಾರಗಳ ಸಾಹಿತ್ಯ ಪುಸ್ತಕಗಳು ಆಡಿಯೋ ರೂಪದಲ್ಲಿ ಲಭ್ಯ ಇವೆ. ಹೆಚ್ಚುತ್ತಿರುವ ನಗರೀಕರಣದ ಪ್ರಭಾವ ಮತ್ತು ಸುಧಾರಿತ ಜೀವನ ಶೈಲಿಯಿಂದಾಗಿ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಆದ್ದರಿಂದ ಇಂದಿನ ಯುವ ಪೀಳಿಗೆಗೆ ಮತ್ತು ಓದಲು ಅಸಾಧ್ಯ ಎನ್ನುವವರಿಗೆ ಆಡಿಯೋ ಪುಸ್ತಕಗಳು ಆಪ್ಯಾಯಮಾನ ಎನಿಸಿವೆ.
    ಬೆಳೆದು ಬಂದ ಹಾದಿ : ಆಡಿಯೋ ಪುಸ್ತಕಗಳ ಬೆಳವಣಿಗೆಯ ಜಾಡು ಹಿಡಿದು ಹೊರಟರೆ ನಮಗೆ ಸಿಗವ ಮೊದಲ ಹೆಜ್ಜೆ ಎಂದರೆ 1877ರಲ್ಲಿ. ಥಾಮಸ್ ಅಲ್ವಾ ಎಡಿಸನ್ ಫೋನೋಗ್ರಾಮ್ ಕಂಡುಹಿಡಿದ ನಂತರ ಸ್ಪೋಕನ್ ರೆಕಾರ್ಡಿಂಗ್ ಸಾಧ್ಯವಾಯಿತು. ಫೋನೋಗ್ರಾಮ್ ಬಳಸಿ ಮುದ್ರಿಸಿದ ಮೊದಲ ಆಡಿಯೋ ಪುಸ್ತಕ ಎಂದರೆ ಎಡಿಸನ್‍ರವರ ‘ಮೇರಿ ಹ್ಯಾಡ್ ಎ ಲಿಟ್ಲ್ ಲ್ಯಾಂಬ್’. ಇದು ಕೇವಲ ನಾಲ್ಕು ನಿಮಿಷದ ಪುಸ್ತಕ. 4 ನಿಮಿಷಗಳಿಂದ ಶುರುವಾದ ಪ್ರಯೋಗಗಳು 1930ರಲ್ಲಿ 20 ನಿಮಿಷಗಳ ಪುಸ್ತಕಗಳಾಗಿ ಮಾರ್ಪಟ್ಟಿದ್ದು ಮತ್ತೊಂದು ಮೈಲಿಗಲ್ಲು. 1930 ರಿಂದ 1950 ರವರೆಗೆ ಅನೇಕ ಪ್ರಾಯೋಗಿಕ ಆಡಿಯೋ ಪುಸ್ತಕಗಳು ಬಿಡುಗಡೆಯಾದವು. 1952ರಲ್ಲಿ ಮ್ಯಾಕ್‍ಡೋನಾಲ್ಡ್‍ರವರು ಯುನೈಟೆಡ್ ಸ್ಟೇಟ್ಸ್‍ನಲ್ಲಿ ಮೊದಲ ಧ್ವನಿಮುದ್ರಣ ಸ್ಟುಡಿಯೋ ಪ್ರಾರಂಭಿಸಿದರು. ಇದು ಆಡಿಯೋ ಪುಸ್ತಕಗಳ ಬೆಳವಣಿಗೆಯ ವೇಗವನ್ನು ಹೆಚ್ಚಿಸಿತು.
    1963 ರ ನಂತರ ಕ್ಯಾಸೆಟ್ ಟೇಪ್ ಮಾರುಕಟ್ಟೆ ಪ್ರವೇಶಿಸಿದವು. ಆಗ ವಿನೈಲ್ ಫಾಮ್ರ್ಯಾಟ್‍ನಲ್ಲಿ ಧ್ವನಿ ಮುದ್ರಿತ ಪುಸ್ತಕಗಳು ಹೆಚ್ಚು ಪ್ರಚಲಿತಗೊಂಡವು. ವಾಕ್‍ಮನ್ ಆವಿಷ್ಕಾರದ ನಂತರ ಆಡಿಯೋ ಪುಸ್ತಕಗಳ ಮುದ್ರಣ ಮತ್ತು ಮಾರಾಟ ಹೆಚ್ಚು ತೀವ್ರಗೊಂಡಿತು. ಸಿ.ಡಿ.ಗಳ ಬಳಕೆಯ ನಂತರ ಆಡಿಯೋ ಪುಸ್ತಕಗಳ ಬಳಕೆ ಮತ್ತು ಬೇಡಿಕೆ ಹೆಚ್ಚಿತು.
    1990-2000 ದ ಅವಧಿಯಲ್ಲಿ ಹಗುರ ಆಡಿಯೋ ಸಾಧನಗಳ ಜೊತೆಗೆ ಆಡಿಯೋ ಪುಸ್ತಕಗಳ ಜನಪ್ರಿಯತೆ ಹೆಚ್ಚಿತು. 1998ರಲ್ಲಿ Audible.com ಎನ್ನುವ ಆಡಿಯೋ ಪುಸ್ತಕಗಳ ಮೊದಲ ವೆಬ್‍ಸೈಟ್ ಪ್ರಾರಂಭವಾಯಿತು. ಅದು ಆನ್‍ಲೈನ್ ಲೈಬ್ರರಿಗಳ ಬೆಳವಣಿಗೆಯ ಮಹತ್ತರ ಮೈಲಿಗಲ್ಲಾಯಿತು.
    ಬಳಕೆ ಸುಲಭ : ಈಗೀಗಂತೂ ಬಹುತೇಕರ ಬಳಿ ಸ್ಮಾರ್ಟ್‍ಫೋನ್, ಐಫೋನ್, ಐಪಾಡ್, ಟ್ಯಾಬ್ಲೆಟ್, ಲ್ಯಾಪ್‍ಟಾಪ್, ಕಂಪ್ಯೂಟರ್‍ಗಳು ಸಾಮಾನ್ಯವಾಗಿವೆ. ಇವುಗಳ ಸಹಾಯದಿಂದ ಆಡಿಯೋ ಪುಸ್ತಕಗಳನ್ನು ಸುಲಭವಾಗಿ ಕೇಳಬಹುದು. ಅಲ್ಲದೇ ಇತ್ತೀಚೆಗೆ ಗೂಗಲ್ ಪ್ಲೇಸ್ಟೋರ್‍ನಲ್ಲಿ ಅಡಿಬಲ್, ಲಿಬ್ರಿವೊಕ್ಸ್, ಅಕಿಮ್ಬೋ ಮುಂತಾದ ಪ್ಲೇಯರ್ ಅಪ್ಲಿಕೇಶನ್‍ಗಳು ಲಭ್ಯವಿದ್ದು, ಆಡಿಯೋ ಪುಸ್ತಕಗಳನ್ನು ಕೇಳಲು ಉಪಯುಕ್ತವಾಗಿವೆ.
    ಪ್ರಯೋಜನಗಳು :
•    ಪರಿಚಯವಿಲ್ಲದ ಭಾಷಾ ರೂಪಗಳ ಸ್ಪಷ್ಟ ಉಚ್ಛಾರಣೆ ತಿಳಿಯುತ್ತದೆ.
•    ಹೊಸ ಪದಗಳ ಸ್ಪಷ್ಟ ಉಚ್ಛಾರದೊಂದಿಗೆ ಧ್ವನಿ ಏರಿಳಿತದ ಅನುಭವ ದೊರೆಯುತ್ತದೆ.
•    ಮುದ್ರಿತ ಪುಸ್ತಕ ಓದಿದಾಗ ದೊರೆಯುವ ಅನುಭವಕ್ಕಿಂತ ವಿಶೇಷವಾದ ಆಸಕ್ತಿ ಮತ್ತು ಕುತೂಹಲ ಮೂಡುತ್ತದೆ.
•    ಆರಾಮದಾಯಕವಾಗಿ ಹೆಚ್ಚು ಶ್ರಮ ಇಲ್ಲದೇ ಪುಸ್ತಕಗಳನ್ನು ಆಲಿಸಬಹುದು.
•    ಉತ್ತಮವಾದ ವಿವರಣಾತ್ಮಕ ಕೌಶಲ್ಯದ ಅನುಭವ ದೊರೆಯುತ್ತದೆ.
•    ರಜೆ ಹಾಗೂ ಪ್ರವಾಸದ ವೇಳೆ ಕಾಲಕಳೆಯಲು  ಉತ್ತಮ ಸಂಗಾತಿ.
•    ಪ್ರಾದೇಶಿಕ ಭಾಷಾ ಸೊಗಡಿನ ಪರಿಚಯವಾಗುತ್ತದೆ.
•    ಇತರೆ ಕೆಲಸಗಳ ಜೊತೆಜೊತೆಗೆ ಕೇಳುವ ಮೂಲಕ ಜ್ಞಾನ ಪಡೆಯಬಹುದು.
•    ಸಂಗ್ರಹಣೆ ಮತ್ತು ಸಾಗಣೆ ತುಂಬಾ ಸುಲಭ.
   
    ಭಾರತದಲ್ಲಿ ಆಡಿಯೋ ಪುಸ್ತಕಗಳು : ವಿಶ್ವದ ವೇಗಕ್ಕೆ ಹೋಲಿಸಿದರೆ ಭಾರತದಲ್ಲಿ ಆಡಿಯೋ ಪುಸ್ತಗಳ ಬಳಕೆ ನಿಧಾನವಾಗಿದೆ. 2010 ರ ನಂತರ ಮಾತ್ರ ಭಾರತದಲ್ಲಿ ಇಂಗ್ಲೀಷ್ ಆಡಿಯೋ ಪುಸ್ತಕಗಳ ಬಳಕೆ ಪ್ರಾರಂಭವಾಯಿತು. ಆಡಿಯೋ ಮುದ್ರಕರು ಮತ್ತು ಪ್ರಕಾಶಕರ ಸಂಘಟಿತ ಪ್ರಯತ್ನಗಳ ಕೊರತೆಯಿಂದ  ಭಾರತದಲ್ಲಿ ಆಡಿಯೋ ಪುಸ್ತಕಗಳು ಅಷ್ಟೊಂದು ಜನಪ್ರಿಯವಾಗಿಲ್ಲ. ಭಾರತದಲ್ಲಿ ಉತ್ತಮ ಸಾಹಿತ್ಯಕ್ಕೆ ಕೊರತೆಯಿಲ್ಲ. ವೈವಿಧ್ಯಮಯವಾದ ಪ್ರಾದೇಶಿಕ ಹಿನ್ನಲೆಯ ಅನೇಕ ಪುಸ್ತಕಗಳು ಇಡೀ ವಿಶ್ವದ ಗಮನ ಸೆಳೆದಿವೆ. ಈ ಎಲ್ಲಾ ಪುಸ್ತಕಗಳು ಆಡಿಯೋ ಸ್ವರೂಪ ಪಡೆದುಕೊಂಡರೆ ಭಾರತ ಸಾಹಿತ್ಯದ ಪರಾಕಾಷ್ಟತೆಯನ್ನು ಇಡೀ ಜಗತ್ತಿಗೆ ತಿಳಿಸಬಹುದು. ಈ ಬಗ್ಗೆ ಇಂದಿನ ಯುವಕರು ಮತ್ತು ಆಡಿಯೋ ಧ್ವನಿಮುದ್ರಕರು ಮನಸ್ಸು ಮಾಡಬೇಕಷ್ಟೇ? ಅಲ್ಲವೇ?

ಆಡಿಯೋ ಪುಸ್ತಕಗಳ ಕೆಲವು ಜಾಲತಾಣಗಳು:
www.audible.com
www.audiobooks.com
www.openculture.com/freeaudiobooks
https://librivox.org
www.amazon.com/Audiobooks-Books
www.webcrawler.com
www.techsupportalert.com/free-books-audio
www.loyalbooks.com
www.digitaltrends.com
https://www.overdrive.com

                                                                                                  ಆರ್.ಬಿ.ಗುರುಬಸವರಾಜ.

September 11, 2015

ಎಲೆಯಲ್ಲಿ ಕಲೆಯ ಬಲೆಯು

ಸೆಪ್ಟಂಬರ್ 17 ರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.

                  ಎಲೆಯಲ್ಲಿ ಕಲೆಯ ಬಲೆಯು

    ಪ್ರಕೃತಿಯ ರಮ್ಯತೆ ಎಂತಹವರನ್ನೂ ಮೋಹಿತರನ್ನಾಗಿಸುತ್ತದೆ. ಏಕೆಂದರೆ ಅಲ್ಲಿನ ಪ್ರತಿಯೊಂದು ವಸ್ತುವೂ ಅಮೂಲ್ಯ. ತನ್ನನ್ನು ನಂಬಿದವರನ್ನು ಎಂದಿಗೂ ಕೈಬಿಡುವುದಿಲ್ಲ. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೆ ಪ್ರಕೃತಿಯೇ ಆಸರೆ ನೀಡುತ್ತದೆ. ಜೊತೆಗೆ ಬದುಕಲು ದಾರಿ ತೋರಿಸುತ್ತದೆ ಎನ್ನುವುದಕ್ಕೆ 43 ವರ್ಷದ ಲೊರೆಂಜೊ ಸಿಲ್ವಾ ಅವರ ಜೀವನವೇ ಸಾಕ್ಷಿ.
    ಪ್ರಕೃತಿಯ ಮಡಿಲು ಜೀವನದ ಕಡಲು: ಸ್ಪೇನಿನವರಾದ ಲೊರೆಂಜೊ ಡ್ಯುರಾನ್ ಸಿಲ್ವಾ ತಮ್ಮ ದುಡಿಮೆಯ ಎಲ್ಲಾ ಮಾರ್ಗಗಳು ಮುಚ್ಚಿದ ನಂತರ ಪ್ರಕೃತಿಯ ಮಡಿಲು ಸೇರಿದರು. ಜೀವನ ಸಾಕಾಗಿ ಸಾವಿನ ನಿರ್ಧಾರ ಮಾಡುತ್ತಾ ಕುಳಿತವರಿಗೆ ಬದುಕಲು ಪ್ರೇರಣೆಯಾದದ್ದು ಒಂದು ಕಂಬಳಿಹುಳು ಎಂದರೆ ಆಶ್ಚರ್ಯವಾಗುತ್ತದೆ. ಅಲ್ಲವೇ? ಆದರೂ ಇದು ಸತ್ಯ.
    ನಡೆದದ್ದೇನು?:  ಅಂದು ಸಾಯುವ ಮಾರ್ಗದ ಬಗ್ಗೆ ಯೋಚನೆ ಮಾಡುತ್ತಾ ಮರದ ಕೆಳಗೆ ಕುಳಿತ ಸಿಲ್ವಾ ಅವರಿಗೆ ಗಿಡದ ಎಲೆಯಲ್ಲಿನ ಕಂಬಳಿಹುಳು ಜೀವನಕ್ಕೆ ದಾರಿ ತೋರಿಸಿತ್ತು. ಕಂಬಳಿಹುಳು ತನ್ನ ಚೂಪಾದ ಹಲ್ಲುಗಳಿಂದ ಎಲೆಗಳನ್ನು ಕತ್ತರಿಸಿ ಆಹಾರ ಸೇವಿಸುತ್ತದೆ. ಹೀಗೆ ಕತ್ತರಿಸಿ ಉಳಿದ ಎಲೆಯ ಭಾಗದಲ್ಲಿ ಚಿತ್ರವಿಚಿತ್ರ ಚಿತ್ತಾರಗಳು ಮೂಡಿರುತ್ತವೆ. ಇದೇ ಐಡಿಯಾ ಸಿಲ್ವಾ ಅವರ ಮುಂದಿನ ಬಾಳಿಗೆ ಬೆಳಕಾದುದು ರೋಚಕ. ಕಂಬಳಿಹುಳುವಿನಿಂದ ಪ್ರೇರಿತದಾದ ಸಿಲ್ವಾ ಎಲೆಗಳನ್ನು ಕತ್ತರಿಸಿ ಸಂಗ್ರಹಯೋಗ್ಯ ಆಕರ್ಷಕ ಕಲಾಕೃತಿಗಳನ್ನು ಮಾಡಲು ಉತ್ಸುಕರಾದವರು.
    ಎಲೆಗೆ ಕಲೆಯ ಮೆರಗು: ಎಲೆಗೆ ಕಲೆಯ ಮೆರಗು ನೀಡುವ ಹಾದಿ ಸುಗಮವಲ್ಲದಿದ್ದರೂ ಪ್ರಯತ್ನ ಪ್ರಮಾದ ಕಲಿಕೆಯಿಂದ ಅದನ್ನು ಸಿದ್ದಿಸಿಕೊಂಡರು. ವಿವಿಧ ಆಕಾರ, ಗಾತ್ರಗಳ ಎಲೆಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ಒಣಗಿಸಿದ ನಂತರ ಅವುಗಳ ಮೇಲೆ ಪೆನ್ಸಿಲ್‍ನಿಂದ ಚಿತ್ರ ಬಿಡಿಸಿಕೊಂಡು ಸೂಜಿ, ಚಾಕು ಅಥವಾ ಕತ್ತರಿಗಳಿಂದ ಎಲೆಯನ್ನು ಸುಂದರ ಕಲಾಕೃತಿಯಾಗಿ ಮಾಡುತ್ತಾರೆ. ಹಾಗೆಯೇ ಅವುಗಳಿಗೆ ಸುಂದರ ಫ್ರೇಮ್ ಜೋಡಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
    ಪ್ರಕೃತಿಯ ಮಡಿಲು ಇವರ ಜೀವನಕ್ಕೆ ಆಧಾರವಾದ್ದರಿಂದ ಇವರ ಬಹತೇಕ ಎಲೆಯ ಕಲೆಯಲ್ಲಿ ಪರಿಸರ ಕಾಳಜಿ ಅಡಗಿದೆ. ಜೀವವೈವಿಧ್ಯತೆಯನ್ನು ಸಾರುವ ಅನೇಕ ಕಲಾಕೃತಿಗಳು ಜೀವತಳೆದಿವೆ.
    ಈಗಾಗಲೇ ಸಾವಿರಾರು ಎಲೆಗಳು ತಮ್ಮ ಮೇಲೆ ವಿವಿಧ ಚಿತ್ರಗಳನ್ನು ಮೂಡಿಸಿಕೊಂಡು ಅತ್ಯುತ್ತಮ ಕಲಾಕೃತಿಗಳಾಗಿ ಗೃಹಾಲಂಕಾರ ವಸ್ತುಗಳಾಗಿ ಶೋಭಿಸುತ್ತಿವೆ. ಇದನ್ನೇ ನಮ್ಮ ಪೂರ್ವಿಕರು “ಪ್ರಕೃತಿ ನಂಬಿದವರನ್ನು ಎಂದೂ ಕೈಬಿಡುವುದಿಲ್ಲ” ಎಂದು ಹೇಳುತ್ತಿದ್ದ ಮಾತು ಈಗಲೂ ಸತ್ಯ ಅಲ್ಲವೇ?
                                                                                                 ಆರ್.ಬಿ.ಗುರುಬಸವರಾಜ

ಯುವ ಪಕ್ಷಿಪ್ರೇಮಿ

ಸೆಪ್ಟಂಬರ್ 2015ರ 'ಶಿಕ್ಷಣವಾರ್ತೆ'ಯಲ್ಲಿ ಪ್ರಕಟವಾದ ನನ್ನ ಲೇಖನ.

ಯುವ ಪಕ್ಷಿಪ್ರೇಮಿ ವಿಜಯ್ ಇಟ್ಟಿಗಿ


ಬಳ್ಳಾರಿ ಎಂದೊಡನೆ ನಿಮ್ಮ ಕಣ್ಮುಂದೆ ಹಾಯುವುದು ಗಣಿಯ ದೂಳು ಮಾತ್ರ. ಗಣಿ ಕುಖ್ಯಾತಿಗೆ ಹೆಸರುವಾಸಿಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲೀಗ ವಿದೇಶಿ ಹಕ್ಕಿಗಳ ಕಲರವ ಕೇಳುತ್ತಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಈಗ ಪಕ್ಷಿಧಾಮವಾಗಿ ಪರಿವರ್ತನೆಗೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣಕರ್ತರೆಂದರೆ 35 ವರ್ಷದ ಯುವಕ ವಿಜಯ್ ಇಟ್ಟಿಗಿಯವರು.
    ವಿಜಯ್ ಅವರು ಹಗರಿಬೊಮ್ಮನಹಳ್ಳಿ ತಾಲೂಕಿನ ಹಗರಿಕ್ಯಾದಿಗಿಹಳ್ಳಿಯವರು. ಓಡಾಟಕ್ಕೆ ಕಾರು, ವಾಸಕ್ಕೆ ಬಂಗಲೆ, ಮನೋರಂಜನೆಗೆ ಸ್ವಂತ ಚಿತ್ರಮಂದಿರ ಇದ್ದರೂ ಇವರ ಒಲವು ಪರಿಸರ ಸಂರಕ್ಷಣೆಯತ್ತ ತಿರುಗಿದ್ದು ಸೋಜಿಗ. ಕಾನೂನು ಪದವಿ ಪಡೆದ ವಿಜಯ್ ಅವರನ್ನು ಆಕರ್ಷಿಸಿದ್ದು ಪರಿಸರ ಮತ್ತು ಪಕ್ಷಿ ಸಂರಕ್ಷಣೆ. ಇದಕ್ಕೆ ಸ್ಪೂರ್ತಿ ನೀಡಿದ್ದು ತೇಜಸ್ವಿಯವರ ಬರಹಗಳು.
    ತುಂಗಭದ್ರಾ ಆಣೆಕಟ್ಟಿನ ಹಿನ್ನೀರ ಗ್ರಾಮಗಳಾದ ಅಂಕಸಮುದ್ರ, ಹಗರಿಕ್ಯಾದಿಗಿಹಳ್ಳಿ, ಬಾಚಿಗೊಂಡನಹಳ್ಳಿ, ತಂಬ್ರಹಳ್ಳಿ, ಶೀಗನಹಳ್ಳಿ, ಬನ್ನಿಗೋಳ, ಕೃಷ್ಣಾಪುರ, ಬಸರಕೋಡು ಮುಂತಾದ ಗ್ರಾಮಗಳಲ್ಲಿ ಅಲ್ಲೊಂದು ಇಲ್ಲೊಂದು ವಲಸೆ ಹಕ್ಕಿಗಳು ಬರುತ್ತಿದ್ದುದು ಸಾಮಾನ್ಯವಾಗಿತ್ತು. ಇದು ವಿಜಯ್ ಅವರ ಆಸಕ್ತಿಯನ್ನು ಕೆರಳಿಸಿತು. ಈ ಪ್ರದೇಶವನ್ನು ಪಕ್ಷಿಧಾಮವನ್ನಾಗಿ ನಿರ್ಮಿಸುವ ವಿಚಾರ ಮೊಳಕೆಯೊಡೆಯಿತು. ಅದಕ್ಕೆ ಅಬ್ದುಲ್ ಸಮದ್ ಕೊಟ್ಟೂರು, ಹುರಕಡ್ಲಿ ಶಿವಕುಮಾರ, ಪೊಂಪಯ್ಯ ಮುಂತಾದವರ ಮಾರ್ಗದರ್ಶನ ಮತ್ತು ಸಹಕಾರದಿಂದ ಯೋಜನೆ ರೂಪಿತವಾಯಿತು. ಪರಿಣಾಮವಾಗಿ ಅಂಕಸಮುದ್ರ ಈಗ ಪಕ್ಷಿಧಾಮವಾಗಿ ರೂಪುಗೊಳ್ಳುತ್ತಿದೆ.
    ಈ ಪ್ರದೇಶ ಪಕ್ಷಿಧಾಮವನ್ನಾಗಿಸಲು ವಿಜಯ್ ಅವರು ಅವಿರತವಾಗಿ ಶ್ರಮಿಸಿದ್ದಾರೆ. ಅದರ ಫಲವಾಗಿ 178 ಜಾತಿಯ ಸಾವಿರಾರು ಹಕ್ಕಿಗಳು ಇಲ್ಲಿ ಬೀಡುಬಿಟ್ಟಿವೆ. ಅದರಲ್ಲಿ ಅಳಿವಿನಂಚಿಗೆ ಹತ್ತಿರವಾಗುತ್ತಿರುವ 11 ಜಾತಿಯ ಹಕ್ಕಿಗಳು ಮತ್ತು ಅಳಿವಿನಂಚಿನಲ್ಲಿರುವ ಲೆಸ್ಸರ್ ಅಡ್ಜಂಟ್ ಜಾತಿಯ ಹಕ್ಕಿಗಳು ಇಲ್ಲಿವೆ ಎಂದರೆ ಆಶ್ಚರ್ಯವಾಗುತ್ತದೆ.
    ಸುತ್ತಲ ಹತ್ತಾರು ಹಳ್ಳಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಪ್ರಾಣಿ ಪಕ್ಷಿ ಭೇಟೆಯನ್ನು ನಿಲ್ಲಿಸಲು ವಿಜಯ್ ಶ್ರಮಿಸಿದ್ದಾರೆ. ಪ್ರತಿ ಹಳ್ಳಿಯಲ್ಲಿ ಉಪನ್ಯಾಸ, ವಿಚಾರಗೋಷ್ಠಿ, ಸಾಕ್ಷ್ಯಚಿತ್ರ ಪ್ರದರ್ಶನಗಳ ಮೂಲಕ ಭೇಟೆಯ ಅನಾಹುತಗಳನ್ನು ಮನವರಿಕೆ ಮಾಡುತ್ತಾ ಭವಿಷ್ಯದ ಯೋಜನೆಗೆ ಸಹಕಾರ ಕೋರಿದರು. ಅದಕ್ಕೆ ಗ್ರಾಮಸ್ಥರ ಸ್ಪಂದನೆಯೂ ದೊರೆಯಿತು. ಪ್ರತಿ ಹಳ್ಳಿಯಲ್ಲಿಯೂ ಒಂದೊಂದು ಯುವಕರ ಪಡೆ ಸಿದ್ದವಾಯಿತು. ಪ್ರಾರಂಭದಲ್ಲಿ ಅಂಕಸಮುದ್ರ ಕೆರೆ ಅಭಿವೃದ್ದಿ ಯೋಜನೆ ಕೈಗೆತ್ತಿಕೊಂಡರು. ಸಾವಿರಾರು ಕರಿಜಾಲಿ ಸಸಿಗಳನ್ನು ಬೆಳೆಸಿದರು. ಈಗ ಅವುಗಳೆಲ್ಲಾ ಮರಗಳಾಗಿವೆ. ಈ ಮರಗಳೇ ಪಕ್ಷಿಗಳ ಆಶ್ರಯ ತಾಣಗಳಾಗಿವೆ. ಮಾಹಿತಿ ನೀಡಲು ಇಬ್ಬರು ಸ್ವಯಂ ಸೇವಕರನ್ನು ನೇಮಿಸಿದ್ದು, ಅವರಿಗೆ ತಮ್ಮ ಜೇಬಿನಿಂದ ಕೂಲಿ ನೀಡುತ್ತಿದ್ದಾರೆ.
    ಈ ಹತ್ತಾರು ಹಳ್ಳಿಗಳ ತುಂಗಭದ್ರ ನದಿದಂಡೆಯ ಒಟ್ಟು 214 ಎಕರೆ ಪ್ರದೇಶದಲ್ಲಿ ಮರಬೆಳೆಸುವ ಯೋಜನೆ ಹಾಕಿಕೊಂಡಿದ್ದಾರೆ. ಅದಕ್ಕಾಗಿ  ಆ ಹಳ್ಳಿಗಳ ಶಾಲಾ ಮಕ್ಕಳಿಂದ ಗಿಡನೆಡಿಸಿ ಅವುಗಳ ಸಂರಕ್ಷಣೆಯ ಹೊಣೆ ಹೊತ್ತಿದ್ದಾರೆ.
    ತಾಲೂಕಿನ ಅನೇಕ ಶಾಲೆಗಳಿಗೆ ಭೇಟಿನೀಡಿ ಮಕ್ಕಳಿಗೆ ಪಕ್ಷಿಗಳ ಬಗ್ಗೆ, ಅವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ನೀಡುತ್ತಿದ್ದಾರೆ. ಮಧ್ಯೆ ಮಧ್ಯೆ ಮಕ್ಕಳಿಗೆ ಪಕ್ಷಿಗಳ ಬಗ್ಗೆ ಪ್ರಶ್ನಿಸುತ್ತಾ ಸರಿ ಉತ್ತರ ನೀಡಿದವರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುತ್ತಾ ಮಕ್ಕಳ ಪ್ರೀತಿಗಳಿಸಿದ್ದಾರೆ.
    ಇವರು ಹೊಸವರ್ಷವನ್ನು ವಿಶೇಷವಾಗಿ ಆಚರಿಸುತ್ತಾರೆ. ಅಂದು ಪಂಜರದಲ್ಲಿರುವ ಪಕ್ಷಿಯನ್ನು ಹುಡುಕಿಕೊಂಡು ಹೋಗುತ್ತಾರೆ. ಮಕ್ಕಳ ಸಮ್ಮುಖದಲ್ಲಿ ಅದನ್ನು ಬಂಧಮುಕ್ತಗೊಳಿಸಿ ಸಂಭ್ರಮಿಸುತ್ತಾರೆ. ಆ ಮೂಲಕ ಮಕ್ಕಳಲ್ಲಿ ಜಾಗೃತಿಯ ಬೀಜ ಬಿತ್ತುತ್ತಾರೆ. ಜೊತೆಗೆ ಕಾಳಸಂತೆಯಲ್ಲಿ ನಡೆಯುವ ನಕ್ಷತ್ರ ಆಮೆ, ನೀರನಾಯಿ, ಮೊಲ, ಕಾಡುಹಂದಿ, ಚಿಪ್ಪುಹಂದಿ, ಹಾವುಗಳು ಮತ್ತು  ಕೆಲವು ಜಾತಿಯ ಪಕ್ಷಿಗಳ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಮಾರಾಟವನ್ನು ನಿಲ್ಲಿಸಿದ್ದಾರೆ.
    “ಸ್ಥಳೀಯ ಜನ ಸಮುದಾಯಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದಿದ್ದಲ್ಲಿ ಸಂರಕ್ಷಣೆ ಚಟುವಟಿಕೆಗಳು ಸಾಧ್ಯವಿಲ್ಲ” ಎಂಬುದು ವಿಜಯ್ ಅವರು ಕಂಡುಕೊಂಡ ಸತ್ಯ. ಅದಕ್ಕಾಗಿ ಸರ್ಕಾರದ ಬೆಂಬಲ ಪಡೆಯುವ ಮೊದಲು ಸ್ಥಳೀಯ ಸಮುದಾಯಗಳ ಸಹಕಾರ ಪಡೆದಿದ್ದಾರೆ.
    ‘ಜೀವವೈವಿಧ್ಯ ಸಂರಕ್ಷಣೆ ಬಹುಕಾಲದವರೆಗೆ ಉಳಿಯಬೇಕಾದರೆ ಜೀವ ಪರಿಸರ ಸುರಕ್ಷತೆ ಮತ್ತು ಜೀವನೋಪಾಯ ಪರಿಗಣಿಸಬೇಕು. ಜನಸಮುದಾಯದ ಹಕ್ಕುಗಳನ್ನು ಖಾತ್ರಿಗೊಳಿಸಿದಾಗ ಮಾತ್ರ ಜೀವವೈವಿಧ್ಯ ಉಳಿಸಲು ಸಾಧ್ಯ’ ಎನ್ನುತ್ತಾರೆ ವಿಜಯ್. ಅದಕ್ಕಾಗಿ ಮಕ್ಕಳು ಮತ್ತು ಯುವಕರಿಗೆ ಶಿಕ್ಷಣ ಮತ್ತು ಜಾಗೃತಿ ಚಟುವಟಿಕೆಗಳನ್ನು ಕೇಂದ್ರೀಕರಿಸಿದ್ದಾರೆ.
    ಇವರ ಈ ಕಾರ್ಯಕ್ಕೆ  ಕುಟುಂಬ ನೀಡಿದ ಸಹಕಾರವನ್ನು ನೆನೆಯುತ್ತಾರೆ. ಈ ಪ್ರದೇಶಕ್ಕೆ ಅನೇಕ ವಿದೇಶಿ ಪಕ್ಷಿತಜ್ಞರು ಭೇಟಿ ನೀಡಿದ್ದಾರೆ. ಅವರಿಗೆಲ್ಲಾ ವಿಜಯ್ ಮಾರ್ಗದರ್ಶಕರಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಪಕ್ಷಿ ಗಣತಿಯಲ್ಲಿ ತಜ್ಞರೊಂದಿಗೆ ಭಾಗವಹಿಸಿದ ಅನುಭವವಿದೆ. ಹೀಗಾಗಿ ಸಾವಿರಾರು ಪಕ್ಷಿಗಳ, ಪ್ರಾಣಿಗಳ, ಪರಿಸರದ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದಾರೆ. ಇಷ್ಟೆಲ್ಲಾ ಸಾಧನೆಯ ನಡುವೆಯೂ ಚಿತ್ರಮಂದಿರ ಹಾಗೂ ಜಮೀನಿನ ಹೊಣೆಗಾರಿಕೆಯನ್ನು ತಪ್ಪಿಸಿಕೊಂಡಿಲ್ಲ. ಈ ಎಲ್ಲಾ ಚಟುವಟಕೆಗಳಿಂದ ವಿಜಯ್ ಅವರು ಇಂದಿನ ಯುವಕರಿಗಿಂತ ಭಿನ್ನವಾಗಿದ್ದಾರೆ. ವಿಜಯ್ ಅವರನ್ನು ಸಂಪರ್ಕಿಸಲು 9945296077 ಕ್ಕೆ ಕರೆಮಾಡಿ.
                                                                                                 ಆರ್.ಬಿ.ಗುರುಬಸವರಾಜ.

ಜೀವನ ಪರೀಕ್ಷೆ

ಸೆಪ್ಟಂಬರ್ 2015ರ 'ಹೊಸತು' ಪತ್ರಿಕೆಯಲ್ಲಿ ಪ್ರಕಟವಾದ ಸತ್ಯಕತೆ.

                    ಜೀವನ ಪರೀಕ್ಷೆ  (ಸತ್ಯಕ್ಕೆ ಒಂಚೂರು ಬಣ್ಣ)

    ಅಂದು ಬೈಕ್‍ನಲ್ಲಿ ಶಾಲೆಗೆ ಹೊರಟ ನನಗೆ 7ನೇ ತರಗತಿ ಓದುತ್ತಿರುವ ಸುಮಿತ್ರ ಕೈಯಲ್ಲಿ ಬುತ್ತಿ ಹಿಡಿದು ಎದುರಿಗೆ ಬಂದಳು. ನನ್ನನ್ನು ನೋಡಿದ್ದೇ ತಡ ರಸ್ತೆ ಬಿಟ್ಟು ಹೊಲಗಳಲ್ಲಿ ಓಡತೊಡಗಿದಳು. ಬೈಕನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ಅವಳ ಹಿಂದೆ ನಾನೂ ಓಡುವ ಪ್ರಯತ್ನ ಮಾಡಿದೆ. ಆದರೆ ಅವಳನ್ನು ಹಿಡಿಯುವುದು ಸಾಧ್ಯವಿರಲಿಲ್ಲ. ರಸ್ತೆಯಲ್ಲಿ ಸಂಚರಿಸುವವರೆಲ್ಲ ಇದನ್ನು ತಮಾಷೆಯಾಗಿ ನೋಡುತ್ತಿದ್ದರು. ಒಂದು ಕ್ಷಣ ನನಗೆ ನಾಚಿಕೆ ಎನಿಸಿತು.
    “ಯಾಕ್ರೀ ಮೇಷ್ಟ್ರೇ, ಅವಳ ಹಿಂದೆ ಓಡ್ತೀರಾ?” ಎಂದು ಯಾರೋ ಪ್ರಶ್ನಿಸಿದರು. ಏನು ಹೇಳಬೇಕೋ ತೋಚಲಿಲ್ಲ.
    ಕೊನೆಗೂ ದೈರ್ಯ ಮಾಡಿ “ನೋಡ್ರೀ ಇವಳು ಕಳೆದ ಎರಡು ತಿಂಗಳಿಂದ ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ. ಒಂದು ದಿನ ಬಂದರೆ ಒಂದು ವಾರ ಶಾಲೆಗೆ ಬರೋದಿಲ್ಲ. ಕಾರಣ ಕೇಳಿದರೆ ಏನೋ ಒಂದು ನೆಪ ಹೇಳಿ ನುಣುಚಿಕೊಳ್ತಾಳೆ” ಎಂದೆ.
    “ಅದ್ಕ್ಯಾಕೆ ಅವ್ಳ ಹಿಂದೆ ಓಡ್ಬೇಕು. ಅವ್ಳ ಅಪ್ಪನಿಗೆ ಹೇಳಿದ್ರೆ ಕಳಿಸ್ತಾನೆ. ಇಲ್ಲಾಂದ್ರೆ ನಾವೇ ಹೇಳಿ ಕಳ್ಸೋ ವ್ಯವಸ್ಥೆ ಮಾಡ್ತೀವಿ, ನೀವೀಗ ಹೊಂಡ್ರಿ” ಎಂದರು ಅಲ್ಲಿದ್ದವರಲ್ಲಿ ಒಬ್ಬರು.
    “ಅವ್ಳ ಅಪ್ಪಂಗೆ ಹೇಳಿ ಹೇಳಿ ಸಾಕಾಯ್ತು ಬಿಡ್ರಿ. ಈಗ ನೀವ ಏನಾರ ಹೇಳಿ ಕಳಿಸಬೇಕು ನೋಡ್ರೀ. ನಿಮಗೆ ಪುಣ್ಯ ಬರುತ್ತೆ. ಹೆಣ್ಣು ಮಗು. ಓದಿ ನಾಲ್ಕಕ್ಷರ ಕಲಿತರೆ ಮುಂದೆ ಒಳ್ಳೇದಾಗುತ್ತೆ” ಎಂದು ಉಪದೇಶ ನೀಡಿ ಬೈಕನ್ನೇರಿ ಶಾಲೆಗೆ ಹೊರಟೆ.
    ಅಲ್ಲಿದ್ದವರೆಲ್ಲಾ ಹೇಳಿದ್ದರಿಂದಲೋ ಏನೋ ಮರುದಿನ ಅಂಜುತ್ತಾ, ಅಳುಕುತ್ತಾ ಶಾಲೆಗೆ ಬಂದ ಸುಮಿತ್ರಳನ್ನು ಪ್ರೀತಿಯಿಂದ ಸ್ವಾಗತಿಸಿದೆ. ಆದರೂ ಅವಳ ಮನದ ಮೂಲೆಯಲ್ಲಿ ಭಯ, ಆತಂಕಗಳು ಮನೆ ಮಾಡಿದ್ದನ್ನು ಗಮನಿಸಿದೆ. ತರಗತಿಯಲ್ಲಿ ಹಾಜರಿ ಹೇಳಿದ ನಂತರ ಹಾಗೆಯೇ ನಿಂತುಕೊಂಡಳು. ಶಾಲೆ ಬಿಟ್ಟಿದ್ದಕ್ಕೆ ಕಾರಣ ಕೇಳಿ ಎಲ್ಲಾ ಮಕ್ಕಳೆದುರು ಅವಮಾನ ಮಾಡುತ್ತಾರೆ ಎಂಬ ಭಯ ಆವರಿಸಿತ್ತು. ಆ ಬಗ್ಗೆ ಏನೂ ಕೇಳದೇ ಕುಳಿತುಕೊಳ್ಳಲು ಹೇಳಿದಾಗ ಅವಳಿಗೆ ಕೊಂಚ ಧೈರ್ಯ ಬಂದಿತ್ತು. ತರಗತಿ ಮುಗಿಸಿದ ನಂತರ ಸುಮಿತ್ರಳಿಗೆ, ವಿರಾಮ ವೇಳೆಯಲ್ಲಿ ಸಿಬ್ಬಂದಿ ಕೊಠಡಿಗೆ ಬರಲು ಹೇಳಿ ವಾಪಾಸಾದೆ.
    ಅಲ್ಪವಿರಾಮದ ಘಂಟೆ ಬಾರಿಸಿತು. ಸುಮಿತ್ರಳ ಬರುವನ್ನು ನಿರೀಕ್ಷಿಸಿದ್ದೆ. ಆದರೆ ನನ್ನ ನಿರೀಕ್ಷೆ ಹುಸಿಯಾಯಿತು. ಅವಳು ಬರಲಿಲ್ಲ. ನನ್ನಲ್ಲಿ ಚಡಪಡಿಕೆ ಶುರುವಾಯಿತು. ಇದನ್ನು ಗಮನಿಸಿದ ಮುಖ್ಯಗುರುಗಳು ನನ್ನ ಚಡಪಡಿಕೆಗೆ ಕಾರಣ ಕೇಳಿದರು. ವಿಷಯವನ್ನು ವಿವರಿಸಿದೆ. ಅವರೂ ಕೂಡಾ ಅವಳನ್ನು ವಿಚಾರಿಸುವ ಬಗ್ಗೆ ಮನಸ್ಸು ಮಾಡಿದರು ಮತ್ತು ಬೇರೆ ವಿದ್ಯಾರ್ಥಿಗಳಿಂದ ಅವಳನ್ನು ಬರ ಹೇಳಿದರು.
    ಮುಖ್ಯಗುರುಗಳ ಕರೆ ಎಂದೊಡನೆ ಅಂಜುತ್ತಾ ಮೆಲ್ಲನೆ ಬಾಗಿಲ ಬಳಿ ಬಂದು ‘ಮೆ ಕಮಿನ್ ಸರ್’ ಎಂದಳು. ‘ಎಸ್’ ಎಂದೆ. ಒಳಗೆ ಬಂದಳು. ಮುಖದಲ್ಲಿ ಭಯ, ಆತಂಕ, ತಪ್ಪಿತಸ್ಥ ಭಾವನೆಗಳು ತುಂಬಿಕೊಂಡಿದ್ದವು.
    “ಯಾಕೆ ನೀನು ಸರಿಯಾಗಿ ಶಾಲೆಗೆ ಬರುತ್ತಿಲ್ಲ?” ಎಂಬ ಮುಖ್ಯಗುರುಗಳ ಪ್ರಶ್ನೆಯಿಂದ ಬೆಚ್ಚಿದಳು. ಉತ್ತರಿಸಲು ತತ್ತರಿಸುತ್ತಿದ್ದಳು. ಅವಳಿಗೆ ಧೈರ್ಯ ನೀಡಲೇಬೇಕೆಂದು ನಿರ್ಧರಿಸಿ “ಅಲ್ಲಮ್ಮಾ ಕಲಿಯಲು ನಿನಗೆ ಏನಾದರೂ ತೊಂದರೆ ಇದೆಯಾ? ಅಥವಾ ಪಾಠ ಅರ್ಥವಾಗುತ್ತಿಲ್ಲವೋ? ಏನು ಸಮಾಚಾರ” ಎಂದು ಪ್ರಶ್ನಿಸಿದೆ. ಅದ್ಯಾವುದೂ ಇಲ್ಲ ಎಂಬಂತೆ ತಲೆ ಅಲ್ಲಾಡಿಸಿದಳು.
    “ಮನೆಯಲ್ಲಿ ಏನಾದರೂ ತೊಂದರೆ ಇದೆಯಾ?” ಎಂದು ಪ್ರಶ್ನಿಸಿದ್ದೇ ತಡ ಅವಳ ಕಣ್ಣೀರಿನ ಕಟ್ಟೆ ಒಡೆದೇ ಹೋಯಿತು. ಗೊಳೋ ಎಂದು ಅಳಲು ಶುರುಮಾಡಿದಳು.
    “ಏನಾಯ್ತು, ಯಾಕೆ ಅಳ್ತೀಯಮ್ಮಾ” ಎಂದು ಮುಖ್ಯಗುರುಗಳು ಕೇಳಿದಷ್ಟೂ ಅವಳ ಅಳು ಹೆಚ್ಚಾಯಿತೇ ಹೊರತು ಕಾರಣ ಏನೆಂದು ಹೇಳಲಿಲ್ಲ. ಅಸ್ಟೊತ್ತಿಗೆ ಮಹಿಳಾ ಶಿಕ್ಷಕಿಯರೂ  ಬಂದರು. ಅವರಿಗೂ ಏನೊಂದೂ ಅರ್ಥವಾಗದ ಆಶ್ಚರ್ಯ. ಅತ್ತೂ ಅತ್ತೂ ಮನದೊಳಗಿನ ಭಾರ ಕಡಿಮೆಯಾದಂತಾಯ್ತು. ಅಳು ನಿಧಾನವಾಗಿ ಮಾತಿನ ಸ್ವರೂಪ ಪಡೆದುಕೊಂಡಿತು. ಅವಳ ಅಂತರಂಗದ ಕಥೆ ಬಿಚ್ಚಿಕೊಂಡಿತು.
    “ಸಾರ್, ನಿಮಗೆಲ್ಲಾ ತಿಳಿದ್ಹಾಂಗೆ ನಮ್ಮಪ್ಪ ನಮ್ಮವ್ವಂಗೆ ನಾವು ನಾಲ್ಕು ಜನ ಮಕ್ಳು. ಅದ್ರಾಗ ನಾನ ದೊಡ್ಡವಳು. ನಮ್ಮಪ್ಪ ಮೂಗ. ನಮ್ಮವ್ವನೇ ನಮಗೆಲ್ಲಾ ದಿಕ್ಕು ದೆಸೆ ಆಗಿದ್ದಳು. ಆದರೆ ಕಳೆದ ಮೂರು ವರ್ಷಗಳ ಆದ ಟ್ರ್ಯಾಕ್ಟರ್ ಆಕ್ಸಿಡೆಂಟ್‍ನಲ್ಲಿ ನಮ್ಮವ್ವ ಸತ್ತುಹೋದಳು. ನಮಗೆಲ್ಲಾ ಆಸರೆಯಾಗಿದ್ದ ನಮ್ಮವ್ವ ಸತ್ತು ಹೋದಾಗಿಂದ ನಮ್ಮಪ್ಪನೂ ಸರ್ಯಾಗಿ ದುಡೀತಿಲ್ಲ. ನನ್ನ ಇಬ್ಬರು ತಂಗಿ ಒಬ್ಬ ತಮ್ಮನನ್ನು ಸಾಕೋರು ಯಾರೂ ಇಲ್ಲ ಸಾರ್. ಅದ್ಕಾಗಿ ನಾನೇ ಕೂಲಿ ಮಾಡ್ತಾ ಇದ್ದೀನಿ. ನನ್ನ ಹಣೆ ಬರಹದಲ್ಲಿ ಓದೋದು ಬರ್ದಿಲ್ಲ ಅಂತ ಕಾಣ್ತದ. ಕೊನೆಗೆ ನನ್ನ ತಮ್ಮ ತಂಗಿಯಂದಿರಾದ್ರೂ ಓದ್ಲಿ ಅಂತ ಅವ್ರನ್ನ ಸಾಲಿಗೆ ಕಳಿಸ್ತೀನಿ. ನಿನ್ನೆ ನೀವು ನನ್ನನ್ನ ಹಿಂಬಾಲ ಹತ್ತಿದ್ದ ನೋಡಿ ನನಗೂ ವಿಷಯ ತಿಳಿಸಲೇಬೇಕು ಅಂತ ಅನ್ನಿಸ್ತು. ಅದ್ಕ ಇವತ್ತು ಸಾಲಿಗೆ ಬಂದೀನಿ. ನಾಳೆ ಮತ್ತೆ ನಾನು ಕೂಲಿ ಕೆಲ್ಸಕ್ಕೆ ಹೋಗಲೇಬೇಕು. ಇಲ್ಲಾಂದ್ರ ನಮ್ಮ ಜೀವ್ನ ನಡೆಯೋದಿಲ್ಲ” ಎಂದು ತನ್ನ ಗಟ್ಟಿ ನಿರ್ಧಾರವನ್ನು ಹೇಳಿಯೇಬಿಟ್ಟಳು.
    ತಾಯಿ ಸತ್ತ ಸುದ್ದಿಯನ್ನಷ್ಟೇ ತಿಳಿದಿದ್ದ ನಮಗೆ ತಂದೆ ಸರಿಯಾಗಿ ದುಡಿಯುತ್ತಿಲ್ಲ, ಮಕ್ಕಳನ್ನು ಕಾಪಾಡುತ್ತಿಲ್ಲ ಎಂಬ ವಿಷಯ ನಮ್ಮನ್ನು ವಿಚಲಿತರನ್ನಾಗಿಸಿತು.
    “ಅಲ್ಲಮ್ಮ, ನಿಮ್ಮವ್ವ ಸತ್ತು ಮೂರು ವರ್ಷಾತು. ಆಗಿನಿಂದಲೂ ಸರಿಯಾಗಿ ಶಾಲೆಗೆ ಬರುತ್ತಿದ್ದಾಕಿ ಈಗೇಕೆ ಸರಿಯಾಗಿ ಬರುತ್ತಿಲ್ಲ?” ಎಂದರು ಶಿಕ್ಷಕರೊಬ್ಬರು.
    “ಹೌದು ಸಾರ್, ಆಗ ನಾನು ಧಣ್ಯರ ಮನ್ಯಾಗ ಕೆಲಸಕ್ಕೆ ಹೋಕಿದ್ದೆ. ದಿನಾಲೂ ಬೆಳಿಗ್ಗೆ ಮತ್ತು ಸಂಜೆ ಅವರ ಮನೆ ಕೆಲಸ ಮಾಡ್ತಿದ್ದೆ. ಸಾಲಿ ಟೈಮ್ನಾಗ ಮಾತ್ರ ಸಾಲಿಗೆ ಬರ್ತಿದ್ದೆ. ಅವ್ರು ಕೊಡೋ ಕೂಲಿಯಿಂದ ಹೆಂಗೋ ಜೀವನ ನಡೀತಿತ್ತು. ಆದ್ರ,,,, ಅವತ್ತೊಂದಿನ ಧಣ್ಯರ ಮನ್ಯಾಗ ಅವ್ರ ಪರ್ಸ ಕಳುವಾತು. ಅವ್ರೆಲ್ರಿಗೂ ನನ್ನ ಮ್ಯಾಲೆ ಅನುಮಾನ ಬಂತು. ಎಲ್ರೂ ನನ್ನನ್ನ ವಿಚಾರಿದ್ರು. ನೀನೇ ಕಳ್ಳಿ ಅಂದ್ರು. ನನ್ನ ಹೊಡೆಯೋಕೂ ಪ್ರಯತ್ನ ಮಾಡಿದ್ರು. ಅಲ್ಲಿಂದ ನಾನು ತಪ್ಸಿಕೊಂಡು ಮನೆ ಸೇರಿದೆ. ಆಮ್ಯಾಲೆ ನಮ್ಮಪ್ಪನ್ನ ಕರೆಸಿ ವಿಚಾರಿದ್ರು ಅಂತ ಗೊತ್ತಾತು. ಆತ ಮೊದ್ಲೇ ಮೂಗ, ಅದೇನೋ ಹೇಳಿದ್ನೋ ಏನೋ? ನಾನು ಮತ್ತೆ  ಅವ್ರ ಮನೆ ಕಡೆ ಸುಳಿಲಿಲ್ಲ. ನನಗೆ ಹಣದ ಅವಶ್ಯಕತೆ ಇತ್ತು ನಿಜ. ಆದರೆ ಕಳ್ಳತನ ಮಾಡಿ ಹಣ ಸಂಪಾದ್ಸೋ ಕೆಟ್ಟ ಬುದ್ದ ಇರ್ಲಿಲ್ಲ. ಮತ್ತೆ ನಾನು ಕೂಲಿ ಹುಡುಕಿ ಹೊರಟೆ. ಮೊದಮೊದ್ಲು ಸಣ್ಣವಳು ಅಂತ ಯಾರೂ ನನ್ನ ಕೆಲಸಕ್ಕೆ ಸೇರಿಸ್ಕೊಳಿಲ್ಲ. ಯಾರೋ ಒಬ್ಬ ಪುಣ್ಯಾತ್ಮ ನನ್ನ ಪರಿಸ್ಥಿತಿ ತಿಳಿದು ಕೆಲಸಕ್ಕೆ ಸೇರಿಸಿಕೊಂಡ್ರು. ಈಗ ಕೂಲಿನೇ ನನ್ಗೆ ಗತಿ” ಎಂದು ತನ್ನ ಬದುಕಿನ ಹೋರಾಟವನ್ನು ನಮ್ಮ ಮುಂದೆ ಇಟ್ಟಳು.
    “ನೀನು ನಿಜವಾಗ್ಲೂ ಪರ್ಸ ಕದ್ದಿದ್ಯಾ? ಎಂದು ಶಿಕ್ಷಕಿಯೊಬ್ಬರು ಪ್ರಶ್ನಿಸಿದರು.
    “ಇಲ್ಲ ಮೇಡಂ, ಅದನ್ನ ಬೇರೆ ಇನ್ನೊಬ್ರು ಕದ್ದಿದ್ರಂತೆ. ಒಂದು ವಾರದ ನಂತರ ವಿಷಯ ಗೊತ್ತಾತಂತೆ. ಆಮೇಲೆ ಅವ್ರು ನಮ್ಮನಿಗೆ ಬಂದು ‘ಪರ್ಸ ಕದ್ದಿದ್ದು ನೀನಲ್ಲ. ಬೇರೆಯವ್ರು ಅಂತ ಗೊತ್ತಾತು. ಸುಮ್ನೆ ನಿನ್ನ ಮ್ಯಾಲೆ ಅನುಮಾನ ಪಟ್ವಿ, ನಿನ್ಗೆ ತೊಂದ್ರೆ ಕೊಟ್ವಿ. ನೀನು ತುಂಬಾ ಒಳ್ಳೇ ಹುಡುಗಿ. ಪುನಃ ನಮ್ಮನಿ ಕೆಲಸಕ್ಕೆ ಬಾ’ ಅಂತ ಕರೆಯೋಕೆ ಬಂದ್ರು. ನನಗೂ ರೋಷ, ಕಿಚ್ಚು, ಸ್ವಾಭಿಮಾನ ಅನ್ನೋದು ಇತ್ತು. ಅದ್ಕಾಗಿ ನಾನು ಖಂಡಿತವಾಗಿ ಬರೋದಿಲ್ಲ ಅಂತ ಹೇಳಿ ಕಳ್ಸಿದೆ. ನಾನು ಮಾಡಿದ್ದು ತಪ್ಪಾ! ಹೇಳ್ರೀ ಮೇಡಂ? ಎಂದಳು.
    ಅವಳ ಮಾತುಗಳಲ್ಲಿ ದಿಟ್ಟತನವಿತ್ತು. ಕಂಗಳಲ್ಲಿ ಅವಮಾನದ ಪ್ರತೀಕಾರ ಇತ್ತು. ಸಾಧಿಸುವ ಛಲವಿತ್ತು. ಚಿಕ್ಕ ವಯಸ್ಸಿನಲ್ಲಿ ಅವಳು ಅನುಭವಿಸಿದ ಅವಮಾನ, ಯಾತನೆÀ, ಹೋರಾಟ, ತಮ್ಮ ತಂಗಿಯರ ಭವಿಷ್ಯದ ಕಾಳಜಿ, ಇವುಗಳ ಮುಂದೆ ನಾವು ಕುಬ್ಜರಾದೆವು. ಆದರೂ ಅವಳ ಭವಿಷ್ಯವನ್ನು ಉತ್ತಮಗೊಳಿಸುವ ಜವಾಬ್ದಾರಿ ನಮ್ಮ ಮೇಲಿತ್ತು.
    ಅದಕ್ಕಾಗಿ “ಏನಾದರೂ ಆಗಲಿ, ಈಗ ಪರೀಕ್ಷೆಗಳು ಸಮೀಪಿಸುತ್ತಿವೆ. ಕೊನೆಗೆ ಪರೀಕ್ಷೆಗಾದ್ರೂ ಹಾಜರಾಗು” ಎಂದರು ತರಗತಿ ಶಿಕ್ಷಕರು.
    “ಸಾರ್, ಪರೀಕ್ಷೆ ಬರೆಯೋಕೆ ನನ್ನ ತಲೇಲಿ ಈಗ ಏನೂ ಉಳಿದಿಲ್ಲ. ಏನಂತ ಬರೀಲಿ” ಎಂದಳು.
    “ನೀನು ಏನೂ ಬರೀದಿದ್ರೂ ಚಿಂತೆಯಿಲ್ಲ. ಪರೀಕ್ಷೆಗೆ ಹಾಜರಾದ್ರೆ ಸಾಕು. ನಿನ್ನ ಪಾಸ್ ಮಾಡೋ ಜವಾಬ್ದಾರಿ ನಮ್ದು” ಎಂದರು ಮುಖ್ಯಗುರುಗಳು. ಏಕೆಂದರೆ ಅವಳು ಹೆಣ್ಣು ಮಗುವಾಗಿದ್ದು ಶಿಕ್ಷಣದಿಂದ ವಂಚಿತಳಾಗಬಾರದು ಎಂಬುದು ಅವಳ ಕಾಳಜಿಯಾಗಿತ್ತು.
    “ಇಲ್ಲ ಸಾರ್, ನಾನು ಈ ಪರೀಕ್ಷೆ ಪಾಸು ಮಾಡಿ ಏನು ಮಾಡ್ಬೇಕು? ಸದ್ಯ ನನ್ಗೆ ಜೀವನವೇ ಒಂದು ದೊಡ್ಡ ಪರೀಕ್ಷೆ. ಅದ್ರಲ್ಲಿ ನಾನು ಪಾಸಾಗಲೇ ಬೇಕು. ನನ್ನ ತಮ್ಮ ತಂಗಿಯರ ಭವಿಷ್ಯವನ್ನು ಉತ್ತಮ ಪಡಿಸಲೇಬೇಕು. ಇದಕ್ಕೆ ನಿಮ್ಮ ಸಹಕಾರ ನನ್ಗೆ ಬೇಕು. ದಯವಿಟ್ಟು ಈಗ ನನ್ಗೆ ಹೋಗಲು ಅಪ್ಪಣೆ ಕೊಡಿ” ಎಂದು ತನ್ನ ನಿರ್ಧಾರವನ್ನು ತಿಳಿಸಿದಳು.
    ಸದ್ಯ ಅವಳಿಗೆ ಔಪಚಾರಿಕ ಶಿಕ್ಷಣ ಬೇಕಿರಲಿಲ್ಲ. ಅಗಾಧ ಬದುಕಿನ ಅನೌಪಚಾರಿಕ ಶಿಕ್ಷಣದ ಅವಶ್ಯಕತೆ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ತಂಗಿಯರ ಭವಿಷ್ಯದ ಕನಸನ್ನು ಸಾಕಾರಗೊಳಿಸಬೇಕಾಗಿತ್ತು. ಅವಳ ನಿರ್ಧಾರ ಬದಲಿಸಲು ಶಿಕ್ಷಕರಿಂದಾಗಲೀ ವ್ಯವಸ್ಥೆಯಿಂದಾಗಲೀ ಸಾಧ್ಯವಿರಲಿಲ್ಲ. ಏಕೆಂದರೆ ಅವಳ ನಿರ್ಧಾರ ಅಚಲವಾಗಿತ್ತು.
                                                                                               ಆರ್.ಬಿ.ಗುರುಬಸವರಾಜ

August 17, 2015

ವೆಬ್ ಡಿಸೈನರ್ WORLD'S FIRST YOUNG WEB DESIGNER


 ದಿನಾಂಕ 12-08-2015ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ.

ಜಗತ್ತಿನ ಕಿರಿಯ ವೆಬ್ ಡಿಸೈನರ್

     ವೆಬ್ಸೈಟ್ಗಳನ್ನು ಸೃಜಿಸಲು .ಟಿ.ಯಂತಹ ಔಪಚಾರಿಕ ಶಿಕ್ಷಣ ಅಗತ್ಯ. ಇಂತಹ ಔಪಚಾರಿಕ ಶಿಕ್ಷಣದ ನೆರವಿಲ್ಲದೇ ವೆಬ್ಸೈಟ್ ಸೃಜಿಸುವುದು ಅಸಾಧ್ಯವೇ ಸರಿ. ಆದರೆಇದೂ ಸಾಧ್ಯ!’ ಎಂದು ಸಾಧಿಸಿ ತೋರಿಸಿದ್ದಾಳೆ ಶ್ರೀಲಕ್ಷ್ಮಿ ಸುರೇಶ್. ಅದೂ ಕೇವಲ ತನ್ನ ಎಂಟನೇ ವಯಸ್ಸಿನಲ್ಲಿ. ಜೊತೆಗೆ ಒಂದು .ಟಿ. ಕಂಪನಿಯ ಸಿ.. ಕೂಡಾ.
     ಶ್ರೀಲಕ್ಷ್ಮಿ ಸುರೇಶ್ ನೆರೆಯ ಕೇರಳ ರಾಜ್ಯದವಳು. ಪ್ರಸ್ತುತ ಕೇರಳದ ಕಾಲಿಕಟ್ ಸೇಂಟ್ ಜೋಸೆಫ್ ದೇವಗಿರಿ ಕಾಲೇಜಿನಲ್ಲಿ ಮೊದಲನೇ ವರ್ಷದ ಎಂ.ಬಿ. ಓದುತ್ತಿದ್ದಾಳೆ. ವಕೀಲರಾದ ತಂದೆ ಸುರೇಶ್ ಮೆನನ್ ಅವರ ಮಾತುಗಳಿಂದ ಸ್ಪೂರ್ತಿ ಪಡೆದು 8ನೇ ವಯಸ್ಸಿನಲ್ಲಿ ವೆಬ್ಸೈಟ್ ತಯಾರಿಸಿದಳು.
     2007ರಲ್ಲಿ 3ನೇತರಗತಿ ಓದುತ್ತಿದ್ದಾಗ ತನ್ನ ಶಾಲೆಗೊಂದು ವೆಬ್ಸೈಟ್ ಇಲ್ಲದಿರುವುದನ್ನು ಗಮನಿಸಿದ ಶ್ರೀಲಕ್ಷ್ಮಿ ಶಾಲೆಗಾಗಿ ವೆಬ್ಸೈಟ್ ತಯಾರಿಸುವ ಹುಚ್ಚು ಸಾಹಸಕ್ಕೆ ಕೈಹಾಕಿ ಯಶಸ್ವಿಯಾದಳು. ಅವಳ ಸಾಧನೆ ಇಡೀ ವಿಶ್ವದ ಗಮನ ಸೆಳೆಯಿತು. ಅದಕ್ಕಾಗಿ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಳು.
     “3ನೇ ವಯಸ್ಸಿನಲ್ಲೇ ಕಂಪ್ಯೂಟರ್ ಮೈಕ್ರೋಸಾಫ್ಟ್ ಪೇಂಟ್ ಮೂಲಕ ಚಿತ್ರ ರಚಿಸುವ ನಂತರ ಟೈಪಿಂಗ್ ಮಾಡುವ ಕೌಶಲ ಕಲಿತಳು. ಮುಂದೆ ನಮಗರಿವಿಲ್ಲದಂತೆ ಅವಳು ಉನ್ನತ ಹಂತಕ್ಕೆ ಬೆಳೆದಳು ಎಂದು ತಂದೆ ಸುರೇಶ್ ಅಭಿಮಾನದಿಂದ ಹೇಳುತ್ತಾರೆ.
     ಶಾಲೆಗಾಗಿ ವೆಬ್ಸೈಟ್ ತಯಾರಿಸಿದ ನಂತರ ತನ್ನದೇ ಆದ-ಡಿಸೈನ್ ಟೆಕ್ನಾಲಜಿಸ್ ಎಂಬ ವೆಬ್ಡಿಸೈನ್ ಕಂಪನಿಯೊಂದನ್ನು ಸ್ಥಾಪಿಸಿ ಅದರ ಸಿ.. ಆಗಿದ್ದಾಳೆ. ಹಾಗಾಗಿ ಜಗತ್ತಿನ ಕಿರಿಯ ಸಿ.. ಎಂಬ ಕೀರ್ತಿಗೂ ಭಾಜನಳಾಗಿದ್ದಾಳೆ. ಮಹತ್ಸಾಧನೆಗಾಗಿಅಸೋಸಿಯೇಷನ್ ಆಫ್ ಅಮೇರಿಕನ್ ವೆಬ್ಮಾಸ್ಟರ್ ಇವಳಿಗೆ ಸದಸ್ಯತ್ವ ನೀಡಿ ಗೌರವಿಸಿದೆ.
     ಕೇರಳ ಸರ್ಕಾರದ ಅಧಿಕೃತ ವೇಬ್ಸೈಟ್ ಸೇರಿದಂತೆ ಹಲವಾರು ಪ್ರಮುಖ ವೆಬ್ಸೈಟ್ಗಳನ್ನು ಸೃಜಿಸಿರುವ ಶ್ರೀಲಕ್ಷ್ಮಿ ಇಲ್ಲಿಯವರೆಗೆ ಒಟ್ಟು 150ಕ್ಕೂ ಹೆಚ್ಚು ವೆಬ್ಸೈಟ್ ರೂಪಿಸಿದ್ದಾಳೆ. ಈಗ ಓದಿನ ಕಡೆ ಹೆಚ್ಚು ಗಮನ ನೀಡಿದ್ದು ಮುಂದೆ -ಡಿಸೈನ್ ಕಂಪನಿಯನ್ನು ಜಗತ್ಪ್ರಸಿದ್ದ ಕಂಪನಿಯಾಗಿ ಬೆಳೆಸುವ ಕನಸು ಹೊಂದಿದ್ದಾಳೆ.
     ಅವಳ ವೆಬ್ಡಿಸೈನ್ ಬಗ್ಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗವೆಬ್ಸೈಟ್ ರಚಿಸುವುದು ಕಷ್ಟವೇನಲ್ಲ. ಕಂಪ್ಯೂಟರ್ ಬಗ್ಗೆ ಮೂಲಮಾಹಿತಿ ಗೊತ್ತಿರುವ ಯಾರು ಬೇಕಾದರೂ ವೆಬ್ಸೈಟ್ ರಚಿಸಬಹುದು. ಆದರೆ ಕ್ರಿಯೇಟಿವ್ ಆಗಿ ರೂಪಿಸುವುದು ಕಷ್ಟದ ಕೆಲಸ. ಇದಕ್ಕೆ ಸಹನೆ ಮತ್ತು ಸೃಜನಶೀಲತೆ ಮುಖ್ಯ ಎನ್ನುತ್ತಾಳೆ.
     ಭವಿಷ್ಯದಲ್ಲಿ ಎಲ್ಲರಿಗೂ ಅನುಕೂಲಕರವಾದ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ತಯಾರಿಸುವ ಆಸೆ ಹೊಂದಿದ್ದಾಳೆ. “ಬಡತನ ಹಾಗೂ ನಿರುದ್ಯೋಗಗಳು ನಮ್ಮ ಸಮಾಜಕ್ಕೆ ಅಂಟಿದ ಕಳಂಕಗಳು. ಬಡತನಕ್ಕೆ ನಿರುದ್ಯೋಗ ಮತ್ತು ಅನಕ್ಷರತೆಯೇ ಕಾರಣ ಹಾಗೂ ಅನಕ್ಷರತೆಯೇ ನಿರುದ್ಯೋಗದ ಮೂಲ. ಇವೆರಡನ್ನೂ ಹೊಡೆದೋಡಿಸಲು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎನ್ನುತ್ತಾಳೆ.
     ‘ಇಂದಿನ ಜಗತ್ತು ಸ್ಪರ್ಧಾತ್ಮಕವಾಗಿದ್ದು, ಸತತ ಪರಿಶ್ರದಿಂದ ಮಾತ್ರ ಸ್ಪರ್ಧೆಯಲ್ಲಿ ಗೆಲ್ಲಲು ಮತ್ತು ಗುರಿಯನ್ನು ತಲುಪಲು ಸಾಧ್ಯ ಎನ್ನುವ ಅವಳ ನಂಬಿಕೆ ನಮ್ಮ ಯುವಕರಿಗೆ ಸ್ಪೂರ್ತಿಯಾದೀತೇ? ಕಾದು ನೋಡೋಣ!. ಶ್ರೀಲಕ್ಷ್ಮಿಯನ್ನು ಅವರ ತಂದೆಯ ಮೊಬೈಲ್ ಸಂಖ್ಯೆ 09847070002 ಗೆ ಡಯಲ್ ಮಾಡಿ ಸಂಪರ್ಕಿಸಬಹುದು(ಸಂಜೆ 6ಗಂಟೆಯ ನಂತರ ಮಾತ್ರ).
    

ಶ್ರೀಲಕ್ಷ್ಮಿಯ ಮುಡಿಗೇರಿದ ಕೆಲವು ಪ್ರಶಸ್ತಿಯ ಗರಿಗಳು
* ಗ್ಲೋಬಲ್ ಇಂಟರ್ನೆಟ್ ಡೈರೆಕ್ಟರಿಸ್ ಅವಾರ್ಡ್(ಯು.ಎಸ್.)
* ವಲ್ರ್ಡ್ ವೆಬ್ ಅವಾರ್ಡ್ ಆಫ್ ಎಕ್ಸಲೆನ್ಸ್(ಯು.ಎಸ್.)
* ಸಿಕ್ಸ್ಟಿ ಪ್ಲಸ್ ಎಜುಕೇಷನ್ ಅವಾರ್ಡ್ ಆಫ್ ಎಕ್ಸಲೆನ್ಸ್(ಕೆನಡಾ)
* ಲಾ ಲುನಾ ನಿಕ್ ಬೆಸ್ಟ್ ಆಫ್ ವೆಬ್ ಅವಾರ್ಡ್(ಯು.ಕೆ)
* ಪೋಯಟಿಕ್ ಸೋಲ್ ಅವಾರ್ಡ್(ಬ್ರೆಜಿಲ್)
* ಅಲೋಹ ಅವಾರ್ಡ್ ಫಾರ್ ಎಕ್ಸಲೆನ್ಸ್ ವೆಬ್ಸೈಟ್(ಹವಾಯಿ)
* ಸ್ವದೇಶಿ ಸೈನ್ಸ್ ಮೂಮೆಂಟ್ ಎಕ್ಸಲೆನ್ಸ್ ಅವಾರ್ಡ್ 2007(ಭಾರತ)
* ಲಯನ್ಸ್ ಕ್ಲಬ್ ಬಿಗ್ ಅಚೀವರ್ ಅವಾರ್ಡ್ 2007(ಭಾರತ)
* ವಿಶೇಷ ಸಾಧನೆಗಾಗಿ ನ್ಯಾಷನಲ್ ಚೈಲ್ಡ್ ಅವಾರ್ಡ್ 2008(ಭಾರತ)

ಆರ್.ಬಿ.ಗುರುಬಸವರಾಜ ಹೊಳಗುಂದಿ