February 18, 2015

ವಿದೇಶಿ ವ್ಯಾಸಂಗ

                                     ವಿದೇಶಿ ವ್ಯಾಸಂಗದ ಕನಸು

                           ಪರೀಕ್ಷೆ ಪಾಸಾದ್ರೆ ನನಸು


    ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಜಗತ್ತು ಕಿರಿದಾಗತೊಡಗಿದೆ. ಜಾಗತೀಕರಣ ಜಗತ್ತಿನಲ್ಲಿ ಅನೇಕ ಅಂತರರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳು ಹುಟ್ಟಿಕೊಂಡಿವೆ. ಅಂತರರಾಷ್ಟ್ರೀಯ ಮಟ್ಟದ ವಿದ್ಯಮಾನಗಳಿಗೆ ಸ್ಪಂದಿಸಲು, ಅಂತರರಾಷ್ಟ್ರೀಯ ಸಮಸ್ಯೆಗಳಿಗೆ ಕಾರಣಗಳನ್ನು ಕಂಡುಕೊಳ್ಳಲು ಯೋಗ್ಯ ನಾಗರೀಕರನ್ನು ತಯಾರಿಸುವುದು ಪ್ರತೀ ದೇಶದ ಸವಾಲಾಗಿದೆ.   
    ಆ ನಿಟ್ಟಿನಲ್ಲಿ ಭಾರತೀಯ ವಿದ್ಯಾರ್ಥಿಗಳು ಬಹುರಾಷ್ಟ್ರೀಯ/ಪ್ರತಿಷ್ಟಿತ ಕಂಪನಿಗಳ ಎಲ್ಲಾ ಹುದ್ದೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಅಗತ್ಯವಿದೆ. ಜಾಗತಿಕ ಮಟ್ಟದ ಶೈಕ್ಷಣಿಕ ಪೈಪೋಟಿಗೆ ಭಾರತದ ವಿದ್ಯಾರ್ಥಿಗಳು ಸಿದ್ದಗೊಳ್ಳಬೇಕಾಗಿದೆ. ಅದಕ್ಕಾಗಿ ಭಾರತೀಯ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗ ಅನಿವಾರ್ಯವಾಗುತ್ತಿದೆ. ಭಾರತೀಯ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗ ಅನಿವಾರ್ಯವಾಗಲು ಪ್ರಮುಖ ಕಾರಣವೆಂದರೆ ಭಾರತದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳ ಕೊರತೆ ಹಾಗೂ ಆ ಶಿಕ್ಷಣ ಸಂಸ್ಥೆಗಳ ಸೀಮಿತ ಸ್ಥಾನಗಳಿಗೆ ಇರುವ ಸ್ಪರ್ದೆ. ಅಲ್ಲದೇ ವಿದೇಶಗಳಲ್ಲಿ ಉನ್ನತ ಶಿಕ್ಷಣದ ಖರ್ಚು ಕಡಿಮೆ. ಏಕೆಂದರೆ ಅಲ್ಲಿನ ಶಿಕ್ಷಣ ಸಂಸ್ಥೆಗಳು ವಿದ್ಯಾಭ್ಯಾಸಕ್ಕೆ ಸಾಕಾಗುವಷ್ಟು ವಿದ್ಯಾರ್ಥಿ ವೇತನ ನೀಡುತ್ತವೆ. ಜೊತೆಗೆ ವಿದ್ಯಾಭ್ಯಾಸದ ನಂತರ ಅರೆಕಾಲಿಕ ಹಾಗೂ ಪೂರ್ಣಪ್ರಮಾಣದ ವೃತ್ತಿ ಅವಕಾಶಗಳು ಹೆಚ್ಚು.
    ಇವುಗಳಲ್ಲದೇ ವಿವಿಧ ಐತಿಹಾಸಿಕತೆಗಳ ಅನುಭವ ಪಡೆಯಲು, ಸಾಂಸ್ಕøತಿಕ ಭಿನ್ನತೆಗಳು ಹಾಗೂ ಜಾಗತಿಕ ಮಾನವೀಯ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ವಿದೇಶಿ ವ್ಯಾಸಂಗದ ಅವಶ್ಯಕತೆ ಇದೆ.
    ವ್ಯಾಸಂಗದ ನಂತರ ವೃತ್ತಿ ಅವಕಾಶಗಳನ್ನು ಹುಡುಕಿ ವಿದೇಶಕ್ಕೆ ಹಾರುತ್ತಿದ್ದ ಅನೇಕ ಭಾರತೀಯ ಪ್ರತಿಭೆಗಳು ಇಂದು ವ್ಯಾಸಂಗಕ್ಕೂ ವಿದೇಶಕ್ಕೆ ಹಾರಬಯಸುವುದು ತಪ್ಪೇನಿಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂಬ ಕನಸು ಗರಿಗೆದರುವುದು ಸಾಮಾನ್ಯವಾಗಿದೆ. ವಿದೇಶಿ ವ್ಯಾಸಂಗ ಕನಸನ್ನು ನನಸು ಮಾಡಿಕೊಳ್ಳಲು  ಕೆಲವು ಪ್ರವೇಶ ಪರೀಕ್ಷೆಗಳು ಇವೆ. ಈ ಪ್ರವೇಶ ಪರೀಕ್ಷೆಗಳು ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗದ ಕನಸಿಗೆ ರೆಕ್ಕೆ ಪುಕ್ಕ ಹಚ್ಚಿ ವಿದೇಶಕ್ಕೆ ಹಾರಲು ಸಹಾಯ ಮಾಡುತ್ತವೆ.
    ವಿದೇಶದಲ್ಲಿ ಪದವಿ ಪೂರ್ವ ವ್ಯಾಸಂಗಕ್ಕಾಗಿ “ಸ್ಯಾಟ್” ಎದುರಿಸಬೇಕಾಗುತ್ತದೆ. ಪದವಿ ತರಗತಿಗಳಿಗಾಗಿ ಜಿ-ಮ್ಯಾಟ್, ಜಿಆರ್‍ಇ ಪರೀಕ್ಷೆಗಳು ಅವಶ್ಯಕ. ಐಇಎಲ್ಟಿಎಸ್, ಟೋಫೆಲ್ ಇತ್ಯಾದಿಗಳು ಇಂಗ್ಲೀಷ್ ಭಾಷಾ ಜ್ಞಾನದ ಪರೀಕ್ಷೆಗಳಾಗಿವೆ. ವಿದೇಶಿ ವ್ಯಾಸಂಗದ ಪ್ರವೇಶ ಪರೀಕ್ಷೆಯಲ್ಲಿ ಈ ಪರೀಕ್ಷೆಗಳು ರಹದಾರಿಗಳಾಗಿವೆ. ಶಾಲಾ ಶಿಕ್ಷಣದಲ್ಲಿ ಕಡಿಮೆ ಅಂಕ/ಶ್ರೇಣಿ ಪಡೆದಿದ್ದರೂ ನಿಮ್ಮ ಅನುಭವ ಹಾಗೂ ಅನ್ವಯಗಳ ಆಧಾರದ ಮೇಲೆ ಇನ್ನಿತರೇ ಕ್ಷೇತ್ರಗಳಲ್ಲಿನ ನಿಮ್ಮ ಸಾಮಥ್ರ್ಯ ಪ್ರದರ್ಶಿಸುವ ಮೂಲಕ ವಿದೇಶಿ ವ್ಯಾಸಂಗದ ಕನಸನ್ನು ನನಸಾಗಿ ಮಾಡಿಕೊಳ್ಳಬಹುದು. ಅಂತಹ ಕೆಲವು ಪರೀಕ್ಷೆಗಳ ಬಗ್ಗೆ ಒಂದು ಕಿರು ಝಲಕ್ ಇಲ್ಲದೆ.
ಸ್ಯಾಟ್(Scholastic Aptitude Test) : ಇದೊಂದು ಪ್ರಮಾಣೀಕೃತ ತಾರ್ಕಿಕ ಪರೀಕ್ಷೆಯಾಗಿದ್ದು, ಯುನೈಟೆಡ್ ಸ್ಟೇಟ್ಸ್‍ನ ಕಾಲೇಜುಗಳಲ್ಲಿ ಪ್ರವೇಶ ಹೊಂದಲು ಅವಶ್ಯಕ. ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುವ ಯಾವುದೇ ಹಂತದ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಇದಕ್ಕೆ ಕನಿಷ್ಟ ಅಂಕಗಳ ಅವಶ್ಯಕತೆ ಇಲ್ಲ. ಆದಾಗ್ಯೂ ಕೆಲವು ಕಾಲೇಜುಗಳು ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಉತ್ತಮ ಅಂಕ ಹಾಗೂ ಉತ್ತಮ ಶೈಕ್ಷಣಿಕ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತವೆ. ಕೆಲವು ಕಾಲೇಜುಗಳು ಅಲ್ಲಿನ ಕೋರ್ಸಿನ ವಿಷಯಗಳನ್ನಾಧರಿಸಿ ಹೆಚ್ಚು ಅಂಕಗಳನ್ನು ನಿರೀಕ್ಷಿಸುತ್ತವೆ.
ಆಕ್ಟ(American College Test): ಇದು ಅಮೇರಿಕಾದಲ್ಲಿ ವ್ಯಾಸಂಗ ಮಾಡಲು ಇರುವ ಪ್ರವೇಶ ಪರೀಕ್ಷೆಯಾಗಿದೆ. ಇದೊಂದು ಪ್ರಮಾಣೀಕೃತ ಪರೀಕ್ಷೆಯಾಗಿದ್ದು, ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದು ಅಮೇರಿಕಾದ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕಡ್ಡಾಯವಾದ ಪರೀಕ್ಷೆಯಾಗಿದ್ದು, ವರ್ಷಕ್ಕೆ 5 ಬಾರಿ ನಡೆಸಲಾಗುತ್ತದೆ.
ಜಿಆರ್‍ಇ(Graduate Record Exam) : ಸಾಮಾನ್ಯ ಪದವಿ ಅಥವಾ ವ್ಯವಹಾರಿಕ ಪದವಿಯು ವಿದೇಶದಲ್ಲಿ ಸಾಕಷ್ಟು ವೃತ್ತಿ ಅವಕಾಶಗಳನ್ನು ನೀಡುತ್ತದೆ. ವಿಶ್ವದೆಲ್ಲೆಡೆ ಪದವಿ ಮತ್ತು ವ್ಯವಹಾರಿಕ ಕಾರ್ಯಕ್ರಮಗಳು ಉತ್ತಮ ಮಾರ್ಗದರ್ಶನದಲ್ಲಿ ಗುರಿ ತಲುಪಲು ಜಿಆರ್‍ಇ ಎಂಬ ಸಾಮಾನ್ಯ ಪರೀಕ್ಷೆ ಅವಶ್ಯಕ.
    ಕೆಲವು ಪದವಿ/ವ್ಯವಹಾರಿಕ ಕಾಲೇಜುಗಳು ಅಭ್ಯರ್ಥಿಗಳ ಪದವಿ ವ್ಯಾಸಂಗದ ಸಿದ್ದತೆಯನ್ನು ಅಳೆಯಲು ಈ ಪರೀಕ್ಷೆ ನಡೆಸುತ್ತವೆ. ಈ ಪರೀಕ್ಷೆಯು ತಾರ್ಕಿಕ ಮಾತಿಗಾರಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ವಿಶ್ಲೇಷಣಾತ್ಮಕ ಬರಹದ ಕೌಶಲಗಳನ್ನು ಮೌಲ್ಯಮಾಪನ ಮಾಡುತ್ತದೆ.
ಜಿ-ಮ್ಯಾಟ್(Graduate Management Admission Test) : ಇದೊಂದು ಪದವಿ ತರಗತಿಗಳ ಅದರಲ್ಲೂ ಮುಖ್ಯವಾಗಿ ವ್ಯವಹಾರಿಕ ಪದವಿಯ ಪ್ರವೇಶ ಪರೀಕ್ಷೆಯಾಗಿದೆ. ಪದವಿಪೂರ್ವ ವ್ಯಾಸಂಗದಲ್ಲಿನ ಇಂಗ್ಲೀಷ್ ಭಾಷೆ ಹಾಗೂ ಗಣಿತಗಳ  ಕಂಪ್ಯೂಟರ್‍ನ ಅನ್ವಯಗಳನ್ನು ತಿಳಿಯುವ ಅರ್ಹತಾ ಪರೀಕ್ಷೆಯಾಗಿದೆ.
    ವ್ಯವಹಾರೋಧ್ಯಮ ಕಾಲೇಜುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಅಳೆಯಲು ಬಳಸುವ ಹಲವು ಮಾನದಂಡಗಳಲ್ಲಿ ಜಿ-ಮ್ಯಾಟ್ ಪ್ರಮುಖವಾದದ್ದು. ಇಲ್ಲಿ ಪ್ರಮುಖವಾಗಿ ಗಣಿತ ಮತ್ತು ಇಂಗ್ಲೀಷ್ ಭಾಷೆಗಳ ಸಾಮಥ್ರ್ಯವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಈ ಪರೀಕ್ಷೆಗಳನ್ನು ಪ್ರಪಂಚದಾದ್ಯಂತ ವರ್ಷಕ್ಕೆ 2 ಬಾರಿ ಆನ್‍ಲೈನ್ ಮೂಲಕ ನಡೆಸಲಾಗುತ್ತದೆ. ಆನ್‍ಲೈನ್ ವ್ಯವಸ್ಥೆ ಇಲ್ಲದವರಿಗಾಗಿ ಕೆಲವು ನಿರ್ದಿಷ್ಟ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್‍ಗಳ ಮೂಲಕ ಈ ಪರೀಕ್ಷೆ ನಡೆಸಲಾಗುತ್ತದೆ.
ಎಂ-ಕ್ಯಾಟ್(Medical College Admission Test) : ವಿದೇಶದಲ್ಲಿ ವೈದ್ಯಕೀಯ ವಿಜ್ಞಾನದ ಪ್ರವೇಶಕ್ಕಾಗಿ ಎಂ-ಕ್ಯಾಟ್ ಪರೀಕ್ಷೆ ನಡೆಸಲಾಗುತ್ತದೆ. ಇದು ಬಹುಆಯ್ಕೆಯ ಪ್ರಶ್ನೆಗಳುಳ್ಳ ಪರೀಕ್ಷೆಯಾಗಿದ್ದು, ಅಭ್ಯರ್ಥಿಗಳ ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಬಿಡಿಸುವ ವಿಧಾನ, ಬರಹ ಕೌಶಲ್ಯ, ವೈದ್ಯಕೀಯ ವಿಜ್ಞಾನದ ಮೂಲ ಪರಿಕಲ್ಪನೆ, ತತ್ವಗಳನ್ನಾಧರಿಸಿದ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ. ಜೊತೆಗೆ ಭೌತಶಾಸ್ತ್ರ, ಜೀವರಸಾಯನಶಾಸ್ತ್ರ, ತಾರ್ಕಿಕ ಮಾತುಗಾರಿಕೆ ಇತ್ಯಾದಿಗಳಲ್ಲಿನ ಅಂಕಗಳನ್ನೂ ಸಹ ಗಣನೆಗೆ ತೆಗೆದುಕೊಳ್ಳಾಗುತ್ತದೆ. ಯುನೈಟೆಡ್ ಸ್ಟೇಟ್ಸ್‍ನ ಯಾವುದೇ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಜಿ-ಮ್ಯಾಟ್ ಕಡ್ಡಾಯವಾಗಿದೆ.
ಟೋಯ್ಫೆಲ್ (Test Of English as a Foreign Language) : ಆಂಗ್ಲ ಭಾಷೆಯಲ್ಲಿನ ಸಾಮಥ್ರ್ಯ, ಬಳಕೆಯ ವಿಧಾನ ಮತ್ತು ಅನ್ವಯಗಳ ಕುರಿತ ಶೈಕ್ಷಣಿಕ ಮೌಲ್ಯಮಾಪನಕ್ಕಾಗಿ ಟೋಯ್ಫೆಲ್ ಪರೀಕ್ಷೆ ನಡೆಸಲಾಗುತ್ತದೆ. ಕೆಲವು ವಿದೇಶಿ ಕಾಲೇಜುಗಳು/ವಿಶ್ವವಿದ್ಯಾಲಯಗಳು ಸ್ಥಳೀಯ ಇಂಗ್ಲೀಷ್ ಭಾಷಿಕರಲ್ಲದವರಿಗಾಗಿ ಈ ಪರೀಕ್ಷೆ ನಡೆಸುತ್ತವೆ. ಕೆಲವು ವಿದೇಶಿ ಸರಕಾರಿ ಸಂಸ್ಥೆಗಳು, ಪರವಾನಿಗೆ ಸಂಸ್ಥೆಗಲ್ಲಿನ ವೃತ್ತಿಗಾಗಿ ಅಥವಾ ಕೆಲವು ಕಾಲೇಜುಗಳಲ್ಲಿನ ಸ್ಕಾಲರ್‍ಶಿಪ್‍ಗಾಗಿ ಟೋಯ್ಫೆಲ್ ಪರೀಕ್ಷೆಯ ಅವಶ್ಯಕತೆ ಇದೆ.
    ಈ ಅರ್ಹತಾ ಪರೀಕ್ಷೆಯ ಉತ್ತೀರ್ಣತೆಯ ಪ್ರಮಾಣಪತ್ರ 2 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ. ವೃತ್ತಿಯಲ್ಲಿರುವವರು 2 ವರ್ಷಗಳಿಗೊಮ್ಮೆ ಈ ಪರೀಕ್ಷೆ ಉತ್ತೀರ್ಣರಾಗುವುದು ಕಡ್ಡಾಯ.     ಇಂಗ್ಲೀಷ್ ಮಾತನಾಡುವ ರಾಷ್ಟ್ರಗಳಲ್ಲಿ ವ್ಯಾಸಂಗ, ಉದ್ಯೋಗ ಮತ್ತು ವ್ಯವಹಾರಕ್ಕಾಗಿ ಟೋಯ್ಫೆಲ್ ಪರೀಕ್ಷೆ ಕಡ್ಡಾಯವಾಗಿದೆ.
ಐಇಎಲ್‍ಟಿಎಸ್(International English Language Testing System) : ಜಗತ್ತಿನಾದ್ಯಂತ ಇಂಗ್ಲೀಷ್‍ನ ಕುಶಲತೆಯನ್ನು ತಿಳಿಯಲು ಈ ಪರೀಕ್ಷೆ ನಡೆಸಲಾಗುತ್ತದೆ. ಇದು ವಿಶ್ವದ ಅತ್ಯಂತ ಶ್ರೇಷ್ಟ ಇಂಗ್ಲೀಷ್ ಪರೀಕ್ಷೆಯಾಗಿದ್ದು, ಈಗಾಗಲೇ 1.4 ಮಿಲಿಯನ್ ಪರೀಕ್ಷೆಗಳನ್ನು ನಡೆಸಲಾಗಿದೆ. ವಿಶ್ವದಾದ್ಯಂತ 500 ಕೇಂದ್ರಗಳಲ್ಲಿ ತಿಂಗಳಿಗೆ 4 ಬಾರಿ ನಡೆಸಲಾಗುತ್ತದೆ. ಇದು ಅಂತರರಾಷ್ಟ್ರೀಯ ವೈವಿಧ್ಯತೆಯನ್ನು ಗೌರವಿಸುವುದರ ಜೊತೆಗೆ ಆಯಾ ರಾಷ್ಟ್ರಗಳಲ್ಲಿನ ಆಂಗ್ಲ ಭಾಷೆಯ ಮೇಲಿನ ಉದ್ಯೋಗಾವಕಾಶಗಳಿಗೂ ಇದು ಅನುಕೂಲಕರ.
    ಇದರಲ್ಲಿ 2 ರೀತಿಯ ಪರೀಕ್ಷೆಗಳಿವೆ. ಒಂದು ಶೈಕ್ಷಣಿಕ ಪರೀಕ್ಷೆ, ಇನ್ನೊಂದು ಸಾಮಾನ್ಯ ಪರೀಕ್ಷೆ. ಉನ್ನತ ವ್ಯಾಸಂಗಕ್ಕಾಗಿ ಶೈಕ್ಷಣಿಕ ಪರೀಕ್ಷೆ ಮೀಸಲಿದ್ದರೆ, ಉದ್ಯೋಗ, ವ್ಯಾಪಾರ ಹಾಗೂ ಇನ್ನಿತರೇ ಕೆಲಸಗಳಿಗೆ ಸಾಮಾನ್ಯ ಪರೀಕ್ಷೆ ಮೀಸಲು. ಈ ಎರಡೂ ವಿಧದ ಪರೀಕ್ಷೆಗಳಲ್ಲಿ ಭಾಷಾ ಕೌಶಲ್ಯಗಳಾದ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆಯನ್ನು ಆಧರಿಸಿದ ಪ್ರಶ್ನೆಗಳಿರುತ್ತವೆ.
ಓಯಟ್(Occupational English Test) : ಬೇರೆ ಬೇರೆ ರಾಷ್ಟ್ರಗಳಲ್ಲಿ ವೃತ್ತಿ ಮಾಡಲು ಅರ್ಹರಾದ ವೈದ್ಯಕೀಯ ವೃತ್ತಿಪರರಿಗೆ  ಹಾಗೂ ತಮ್ಮ ವೃತ್ತಿಯಲ್ಲಿ ಹೆಚ್ಚಿನ ಅಭ್ಯಾಸ ಮಾಡಲು ತಾತ್ಕಾಲಿಕವಾಗಿ ನೊಂದಣಿ ಮಾಡಿಸಿಕೊಂಡವರಿಗೆ ಈ ಪರೀಕ್ಷೆ ನಡೆಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿನ ಇಂಗ್ಲೀಷ್ ಭಾಷಾ ಬಳಕೆಯ ವಿಧಾನ ಅರಿಯಲು ಈ ಪರೀಕ್ಷೆ ನಡೆಸಲಾಗುತ್ತದೆ. ಇದನ್ನು ವಿಶ್ವದ 40 ಪರೀಕ್ಷಾ ಕೇಂದ್ರಗಳಲ್ಲಿ ವರ್ಷಕ್ಕೆ 10 ಬಾರಿ ನಡೆಸಲಾಗುತ್ತದೆ.
    ಮೇಲಿನ ಪರೀಕ್ಷೆಗಳಲ್ಲದೇ ಕೆಲವು ರಾಷ್ಟ್ರಗಳು ತಮ್ಮದೇ ಆದ ಕೆಲವು ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತವೆ. ಒಟ್ಟಾರೆ ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಚಿಸುವವರು ಒಂದಲ್ಲ ಒಂದು ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕಾದುದು ಕಡ್ಡಾಯ. ನಿಮ್ಮ ವಿದೇಶಿ ವ್ಯಾಸಂಗದ ಕನಸನ್ನು ನನಸಾಗಿಸುವ ಪರೀಕ್ಷೆಗಳಿಗೆ ಇಂದೇ ಸಿದ್ದರಾಗಿರಿ.

ವಿದೇಶಿ ವ್ಯಾಸಂಗಕ್ಕಾಗಿ ಕೆಲವು ಅಂತರಜಾಲ ತಾಣಗಳು


               www.embassy.org/embassies/index.html,
               www.goabroad.com
               www.language-learning.net,
               www.studyabroad.com
               www.cie.uci.edu
               internationalcenter.umich.edu/swt/index.html
               www.international.umn.edu
               www.globaled.us/wwcu/
               www.aasianst.org
               www.amscan.org
 


                                                                                                                             ಆರ್.ಬಿ.ಗುರುಬಸವರಾಜ

February 11, 2015

ಹೈಡ್ರೋಜನ್ ಪೆರಾಕ್ಸೈಡ್

ಹೈಡ್ರೋಜನ್ ಪೆರಾಕ್ಸೈಡ್   ಔಷಧ ಒಂದು ಚಿಕಿತ್ಸೆ ಹಲವು
    ಹೈಡ್ರೋಜನ್ ಪೆರಾಕ್ಸೈಡ್ ನೀರು ಮತ್ತು ಆಮ್ಲಜನಕ ಇರುವ ಏಕೈಕ ರೋಗಾಣುಕಾರಕ ಔಷಧವಾಗಿದೆ. ಹೈಡ್ರೋಜನ್ ಪೆರಾಕ್ಸೈಡ್‍ನ್ನು 19ನೇ ಶತಮಾನದಲ್ಲಿ ಅಸ್ತಮಾ, ಕ್ಷಯ, ಕಾಲರಾ, ಸಿಫಿಲಸ್, ಟೈಫಾಯಿಡ್, ನಾಯಿಕೆಮ್ಮು, ಹುಣ್ಣುಗಳು ಮುಂತಾದ ಕಾಯಿಲೆಗಳ ಚಿಕಿತ್ಸೆಗಾಗಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. 20ನೇ ಶತಮಾನದಲ್ಲಿ ಇದರ ಬಳಕೆ ಕಡಿಮೆಯಾಗಿತ್ತಾದರೂ ಈಗ ಪುನಃ ಅದರ ಬಳಕೆ ಹೆಚ್ಚುತ್ತಿದೆ. ಅನೇಕ ಜನರು ಸಾಂಪ್ರದಾಯಿಕ ಚಿಕಿತ್ಸೆಗಾಗಿ ಹೈಡ್ರೋಜನ್ ಪೆರಾಕ್ಸೈಡ್‍ನ ಮೊರೆಹೋಗುತ್ತಿದ್ದಾರೆ. ಇದರಲ್ಲಿ ಯಾವುದೇ ವಿಷಕಾರಕ ರಸಾಯನಿಕಗಳು ಇಲ್ಲದೇ ಇರುವುದು ಇದರ ಬಳಕೆ ಹೆಚ್ಚಲು ಕಾರಣವಾಗಿವೆ. ಹೈಡ್ರೋಜನ್ ಪೆರಾಕ್ಸೈಡ್‍ನ ಚಿಕಿತ್ಸೆಯನ್ನು “ಆಕ್ಸಿಜನ್ ಥೆರಪಿ” ಎಂದು ಕರೆಯಲಾಗುತ್ತದೆ.
    ಇದು ವಿಶ್ವದ ಎಲ್ಲಾ ಕಡೆಗಳಲ್ಲಿ ಸುಲಭವಾಗಿ ದೊರೆಯುವ ಸುರಕ್ಷಿತ, ನೈಸರ್ಗಿಕ ಮತ್ತು ಪರಿಣಾಮಕಾರಿಯಾದ ನಿರ್ಮಲೀಕಾರಕವಾಗಿದೆ. ಹೈಡ್ರೋಜನ್ ಪೆರಾಕ್ಸೈಡ್ ಮಾನವ ದೇಹದಲ್ಲಿನ ಸೊಂಕುಗಳ ವಿರುದ್ದ ಹೋರಾಡುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ನೋವು ನಿವಾರಕ ಔಷಧವಲ್ಲದಿದ್ದರೂ ಬ್ಯಾಕ್ಟೀರಿಯಾ, ವೈರಸ್, ಶಿಲೀಂದ್ರಗಳ ವಿರೋಧಿ ಔಷಧವಾಗಿದೆ. ಅಂದರೆ ಸೊಂಕು ಚಿಕಿತ್ಸೆಗೆ ಪರಿಣಾಮಕಾರಿಯಾದ ಔಷಧವಾಗಿದೆ. ಇದು ಅನೇಕ ಆರೋಗ್ಯಕಾರಿ ಹಾಗೂ ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ.

ಆರೋಗ್ಯಕಾರಿ ಪ್ರಯೋಜನಗಳು :
    ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚು ಸಮಯ ಕಾಲು ಚೀಲ ಬಳಸುವುದರಿಂದ ಪಾದಗಳು ಸೊಂಕಿಗೆ ಒಳಗಾಗುತ್ತವೆ. ಈ ಸೊಂಕನ್ನು ನಿವಾರಿಸಲು ಪ್ರತಿರಾತ್ರಿ ಪಾದಗಳಿಗೆ ಹೈಡ್ರೋಜನ್ ಪೆರಾಕ್ಸೈಡ್ ಹಚ್ಚುವುದರಿಂದ ಶಿಲೀಂದ್ರಗಳು ನಾಶವಾಗಿ ಪಾದಗಳು ಆರೋಗ್ಯಕಾರಿಯಾಗಿರುತ್ತವೆ.
    ಒಸಡುಗಳ ಉರಿಯೂತ ನಿವಾರಣೆಗೆ ಹೈಡ್ರೋಜನ್ ಪೆರಾಕ್ಸೈಡ್ ದಿವ್ಯೌಷಧವಾಗಿದೆ. ದಿನಕ್ಕೆ ಎರಡು ಬಾರಿ ಹೈಡ್ರೋಜನ್ ಪೆರಾಕ್ಸೈಡ್‍ನ ನಾಲ್ಕಾರು ಹನಿಗಳನ್ನು ಒಂದು ಲೋಟ ನೀರಿಗೆ ಸೇರಿಸಿ ಮುಕ್ಕಳಿಸುವುದರಿಂದ ಒಸಡುಗಳ ಉರಿಯೂತ ನಿವಾರಣೆ ಆಗುತ್ತದೆ. ಜೊತೆಗೆ ಒಸಡುಗಳ ಆರೋಗ್ಯ ಹೆಚ್ಚುತ್ತದೆ.
     ಚರ್ಮ ರಂದ್ರಗಳಲ್ಲಿನ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳ ಜಮಾವಣೆಯೇ ಮೊಡವೆಗಳು. ಹರಳೆ(ಹತ್ತಿ)ಗೆ ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ನೆನೆಸಿ ಮೊಡವೆಗೆ ಸವರುವುದರಿಂದ ಸೂಕ್ಷ್ಮಾಣು ಜೀವಿಗಳು ನಾಶವಾಗಿ ಮೊಡವೆಗಳು ನಿರ್ಮೂಲನೆಯಾಗುತ್ತವೆ ಮತ್ತು ಚರ್ಮದ ಕಾಂತಿ ಹೆಚ್ಚುತ್ತದೆ.
    ಬಾಯಿಯೊಳಗಿನ ಬ್ಯಾಕ್ಟೀರಿಯಾಗಳ ಬೆಳವಣಿಗೆಯಿಂದಾದ ದುರ್ಗಂಧಕ್ಕೆ ಹೈಡ್ರೋಜನ್ ಪೆರಾಕ್ಸೈಡ್ ಉತ್ತಮ ಔಷಧವಾಗಿದೆ. ಒಂದು ಚಮಚ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಒಂದು ಲೋಟ ನೀರಿಗೆ ಸೇರಿಸಿ ಬಾಯಿಗೆ ಹಾಕಿ ಮುಕ್ಕಳಿಸುವುದರಿಂದ ದುರ್ಗಂಧ ನಿವಾರಣೆ ಆಗುತ್ತದೆ ಹಾಗೂ ಬಾಯಿಯಲ್ಲಿ ತಾಜಾತನದ ಆಹ್ಲಾದ ಇರುತ್ತದೆ.
    ದೇಹದ ಯಾವುದೇ ಭಾಗದಲ್ಲಿನ ತೀವ್ರವಾದ ಯೀಸ್ಟ್ ಸೊಂಕನ್ನು ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ತೊಳೆಯುವುದರಿಂದ ಸೊಂಕು ನಿವಾರಣೆಯಾಗುತ್ತದೆ.
    ದುರ್ಬಲಗೊಳಿಸಿದ ಹೈಡ್ರೋಜನ್ ಪೆರಾಕ್ಸೈಡ್ ತುರಿಕೆ ಹಾಗೂ ಗಾಯಗಳನ್ನು ನಿವಾರಿಸುತ್ತದೆ.
    ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾದ ಚರ್ಮದ ಸೊಂಕು, ಗ್ಯಾಂಗ್ರಿನ್‍ನ ಚಿಕಿತ್ಸೆಗೆ ಹೈಡ್ರೋಜನ್ ಪೆರಾಕ್ಸೈಡ್ ಅತ್ಯುತ್ತಮ ಔಷಧವಾಗಿದೆ.
    ಹೈಡ್ರೋಜನ್ ಪೆರಾಕ್ಸೈಡ್ ಚರ್ಮದ ಮೇಲಿನ ಕ್ರಿಮಿಕೀಟಗಳನ್ನು ಕೊಲ್ಲುವ ಔಷಧವಾಗಿದ್ದು, ಚರ್ಮದ ರಕ್ಷಣೆ ಮಾಡುತ್ತದೆ.
    ಒಂದು ಚಮಚ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಒಂದು ಲೋಟ ಕ್ಲೋರಿನೇಟೆಡ್ ಅಲ್ಲದ ನೀರಿಗೆ ಸೇರಿಸಿ ಮೂಗಿನ ಒಳಭಾಗದಲ್ಲಿ ಸ್ಪ್ರೇ ಮಾಡಿಕೊಳ್ಳುವುದರಿಂದ ನಾಸಿಕ ನಾಳದ ಸಮಸ್ಯೆಗಳು ನಿವಾರಣೆ ಆಗುತ್ತವೆ.
    ಹೈಡ್ರೋಜನ್ ಪೆರಾಕ್ಸೈಡ್‍ನ್ನು ವೈದ್ಯಕೀಯ ಕ್ಷೇತ್ರದಲ್ಲಿ ಯಥೇಚ್ಚವಾಗಿ ಗಾಯಗಳನ್ನು ತೊಳೆಯಲು, ಸತ್ತ ಜೀವಕೋಶಗಳನ್ನು ತೆಗೆಯಲು ಮತ್ತು ಬಾಯಿಯ ಹುಣ್ಣನ್ನು ನಿವಾರಿಸಲು ಬಳಸಲಾಗುತ್ತದೆ.
    ದುರ್ಬಲಗೊಳಿಸದ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಕಿವಿಯ ಮೇಣವನ್ನು ತೆಗೆಯಲು ಬಳಸಲಾಗುತ್ತದೆ. ಇದು ಕಿವಿಯ ಮೇಣದಿಂದಾದ ನೋವಿಗೆ ಉಪಶಮನ ನೀಡುವುದರ ಜೊತೆಗೆ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
    ದುರ್ಬಲಗೊಳಿಸಿದ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಒಂದು ಲೋಟ ನೀರಿಗೆ ಸೇರಿಸಿ ಬಾಯಿಗೆ ಹಾಕಿ ಮುಕ್ಕಳಿಸುವುದರಿಂದ ಗಂಟಲಿನ ಉರಿಯೂತವನ್ನು ತೆಗೆದು ಹಾಕುತ್ತದೆ.

ಸೌಂದರ್ಯಕಾರಿ ಪ್ರಯೋಜನಗಳು :
    ಹೈಡ್ರೋಜನ್ ಪೆರಾಕ್ಸೈಡ್‍ನ 3 ಹನಿಗಳನ್ನು ಒಂದು ಲೋಟ ನೀರಿಗೆ ಸೇರಿಸಿ ಬಾಯಿಗೆ ಹಾಕಿ ಮುಕ್ಕಳಿಸುವುದರಿಂದ ಹಲ್ಲುಗಳು ಪಳಪಳನೇ ಹೊಳೆಯುತ್ತವೆ. ಜೊತೆಗೆ ಬಾಯಿಯ ತಾಜಾತನ ಕಾಪಾಡುತ್ತದೆ.
    ನೇಲ್ ಪಾಲಿಷ್‍ನ ಕಲೆಯನ್ನು ಹೋಗಲಾಡಿಸಲು ಹೈಡ್ರೋಜನ್ ಪೆರಾಕ್ಸೈಡ್ ಸಹಾಐ ಮಾಡುತ್ತದೆ ಹಾಗೂ ಉಗುರುಗಳು ಹೊಳೆಯುವಂತೆ ಮಾಡುತ್ತದೆ.
    ಬೇಕಿಂಗ್ ಸೋಡಾದ ಜೊತೆಗೆ ಹೈಡ್ರೋಜನ್ ಪೆರಾಕ್ಸೈಡ್ ಸೇರಿಸಿ ಪೇಸ್ಟ್ ತಯಾರಿಸಿ ಹಲ್ಲುಗಳಿಗೆ ಉಜ್ಜುವುದರಿಂದ ಹಲ್ಲುಗಳ ಕಲೆಯು ಮಾಯವಾಗುತ್ತದೆ.
    ಹೈಡ್ರೋಜನ್ ಪೆರಾಕ್ಸೈಡ್‍ನಿಂದ ಸೌಂದರ್ಯ ಸಾಧನಕ್ಕೆ ಬಳಸುವ ಬ್ರಷ್, ಬಾಚಣಿಕೆ ಮತ್ತು ಹಲ್ಲುಜ್ಜುವ ಬ್ರಷ್‍ಗಳನ್ನು ತೊಳೆಯುವುದರಿಂದ ಅವುಗಳಲ್ಲಿನ ಸೂಕ್ಷ್ಮಜೀವಿಗಳನ್ನು ನಾಶವಾಗುತ್ತವೆ.
    ತಲೆಗೂದಲಿನ ಗಾಢವಾದ ಕೃತಕ ಬಣ್ಣವನ್ನು ಕಡಿಮೆ ಮಾಡಲು ಹೈಡ್ರೋಜನ್ ಪೆರಾಕ್ಸೈಡ್ ಸಹಾಯ ಮಾಡುತ್ತದೆ. ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
    ಹೈಡ್ರೋಜನ್ ಪೆರಾಕ್ಸೈಡ್ ಕಾಂಟಾಕ್ಟ್ ಲೆನ್ಸ್‍ನ್ನು ಶುಚಿಗೊಳಿಸಲು ಸಹಾಯ ಮಾಡುತ್ತದೆ. ಲೆನ್ಸ್‍ನಲ್ಲಿನ ಸೂಕ್ಷ್ಮಜೀವಿಗಳನ್ನು ನಾಶ ಮಾಡಿ ಸೋಂಕು ನಿವಾರಕದಂತೆ ಕಾರ್ಯ ನಿರ್ವಹಿಸುತ್ತದೆ.
    ಹೀಗೆ ಅನೇಕ ಆರೋಗ್ಯಕಾರಿ ಹಾಗೂ ಸೌಂದರ್ಯಕಾರಿ ಪ್ರಯೋಜನಗಳನ್ನು ಹೊಂದಿದ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಎಲ್ಲಾ ವಯಸ್ಸಿನವರೂ ಬಳಸಬಹುದು. ಏಕೆಂದರೆ ಇದು ಯಾವುದೇ ಅಡ್ಡಪರಿಣಾಮಗಳಿಲ್ಲದ ಒಂದು ದಿವ್ಯೌಷಧವಾಗಿದೆ.

‘ಟೀಚರ್’ ಫೆಬ್ರವರಿ 2015                                                                            ಆರ್.ಬಿ.ಗುರುಬಸವರಾಜ



ಶಿಕ್ಷಕರು ಮತ್ತು ವಚನ ಸಾಹಿತ್ಯ

 ಫೆಬ್ರವರಿ 2015 ರ 'ಗುರುಮಾರ್ಗ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ
                  ಶಿಕ್ಷಕರು ಮತ್ತು ವಚನ ಸಾಹಿತ್ಯ
    ನಾಡಿನ ಸಮಸ್ತ ಓದುಗರಿಗೆ ಹಾಗೂ ಜನತೆಗೆ ‘ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು’. ಇಂದು ಕನ್ನಡಕ್ಕೆ ಎಂಟು ಜ್ಞಾನಪೀಠಗಳು ಲಭಿಸಿರುವುದಕ್ಕೆ ಪರೋಕ್ಷವಾಗಿ ಶಿಕ್ಷಕರೇ ಕಾರಣ. ಏಕೆಂದರೆ ಪ್ರತಿಯೊಬ್ಬ ಸಾಹಿತಿಗೆ ಸಾಹಿತ್ಯದ ಹುಚ್ಚು ಹಚ್ಚಿದವರು ಶಿಕ್ಷಕರೆಂದರೆ ಅತಿಶಯೋಕ್ತಿಯೇನಲ್ಲ. ಇಂದು ಕನ್ನಡ ಸಾಹಿತ್ಯವೆಂಬುದು ಹಲವಾರು ಪ್ರಕಾರಗಳಿಂದ ಕೂಡಿ ಸಂಪದ್ಭರಿತವಾಗಿದೆ. ಆ ಪ್ರಕಾರಗಳಲ್ಲಿ ‘ವಚನ ಸಾಹಿತ್ಯ’ವೂ ಒಂದು. ವಚನ ಸಾಹಿತ್ಯದ ದೃಷ್ಟಿಯಿಂದ ಹೇಳುವುದಾದರೆ ಹನ್ನೆರಡನೇ ಶತಮಾನ ಚಿನ್ನದ ಕಾಲ ಎನ್ನಬಹುದು. ಅದೊಂದು ಕನ್ನಡ ಸಾಹಿತ್ಯದ ಮೌಲಿಕ ಘಟ್ಟ. ಕಾವ್ಯವಾಹಿನಿ ಶ್ರೀಸಾಮಾನ್ಯನ ಬಳಿಗೆ ಬಂದ ಕಾಲ. ಈ ವಚನ ಸಾಹಿತ್ಯದ ಪ್ರತಿಯೊಬ್ಬ ವಚನಕಾರರೂ ಒಂದಲ್ಲ ಒಂದು ವೈಶಿಷ್ಟ್ಯದಿಂದ ನಕ್ಷತ್ರದಂತೆ ಮಿನುಗಿದ್ದಾರೆ.
    ಆ ಕಾಲದ ವಚನ ಸಾಹಿತ್ಯ ಇಂದಿಗೂ ಜೀವಂತವಾಗಿದೆ, ಚಲನಶೀಲವಾಗಿದೆ ಎಂದರೆ ಅದಕ್ಕೆ ಮೂಲ ಕಾರಣರೇ ಶಿಕ್ಷಕರು ಎಂಬುದು ನನ್ನ ಭಾವನೆ. ಯಾಕೆಂದರೆ ಮಗುವಿನ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗಿನ ವಿವಿಧ ಹಂತಗಳ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ವಚನ ಸಾಹಿತ್ಯದ ರಸ-ರುಚಿಯನ್ನು ತುಂಬಿ ಮುಂದಿನ ಪೀಳಿಗೆಗೆ ಸಾಗಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಿದ್ದಾರೆ. ಇಂತಹ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡ ಶಿಕ್ಷಕರಿಗೆ ವಚನ ಸಾಹಿತ್ಯದ ಆಳ ಅರಿವು ಇರಬೇಕಾದುದು ಅವಶ್ಯಕವಾಗಿದೆ.
ವಚನ ಸಾಹಿತ್ಯದ ಪರಿಕಲ್ಪನೆ
    ಹನ್ನೆರಡನೇ ಶತಮಾನದ ಕನ್ನಡ ನೆಲದಲ್ಲಿ ಜೀವಿಸಿದ್ದ ಸಾವಿರಾರು ಶರಣರು ತಮ್ಮ ಕೈಯಲ್ಲಿನ ಕಾಯಕ, ಮನದಲ್ಲಿನ ಭಕ್ತಿ, ಮಾತಿನಲ್ಲಿನ ಸ್ಪಷ್ಟತೆಯಿಂದ ಒಡಗೂಡಿ ರಚಿಸಿದ ಸಾಹಿತ್ಯವೇ ‘ವಚನ ಸಾಹಿತ್ಯ’. ಕನ್ನಡದ ಆಡು ನುಡಿಯನ್ನು ಬಳಸಿಕೊಂಡು, ಅನುಭವ ಅಭಿವ್ಯಕ್ತಿಗಳಿಂದ ವಚನ ಸಾಹಿತ್ಯವು ಉದಯಿಸಿ ಬಂದಿದೆ. ಅನುಭಾವಿಗಳಾದ ಶರಣರು ನೀಡಿದ ವಚನ ಸಾಹಿತ್ಯವು ಜಾಗತಿಕ ಅನುಭಾವ ಸಾಹಿತ್ಯದಲ್ಲಿ ಆದ್ಯಾತ್ಮಿಕ ಸಾಧನೆ ಸಿದ್ದಿಯ ಮಹೋನ್ನತಿಯನ್ನು ಮನಮೆಚ್ಚುವಂತೆ ತೆರೆದು ತೋರುವ ಶ್ರೇಷ್ಠ ಸಾಹಿತ್ಯ ರಾಶಿ. ಮತ್ತೆ ಮತ್ತೆ ಮೊಗೆಮೊಗೆದು ಸವಿದರೂ ಮುಗಿಯಲಾರದ ಅನುಭಾವದ ರಸಪಾಕ. ಇಂದಿಗೂ ಅಚ್ಚುಮೆಚ್ಚಾದ  ಜೋತಿರ್ಮಯ ಸಾಹಿತ್ಯ.
    ಹನ್ನೆರಡನೇ ಶತಮಾನದ ಕರ್ನಾಟಕದಲ್ಲಿ ನಡೆದ ಶಿವಶರಣರ ಬಹುಮುಖ ಕ್ರಾಂತಿಯು ಜಾಗತಿಕ ಇತಿಹಾಸದಲ್ಲಿ ಒಂದು ಅಪೂರ್ವ ಘಟನೆ. ಕಲುಷಿತವಾಗಿದ್ದ ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಪರಿಸರ ಈ ಕ್ರಾಂತಿಗೆ ಮೂಲವಾಗಿತ್ತು. ಶಿಕ್ಷಕರಾದ ನಾವು ಈ ಹಿನ್ನಲೆಯನ್ನು ಗಮನದಲ್ಲಿಟ್ಟುಕೊಂಡು, ವಚನಗಳನ್ನು ಇಂದಿನ ಅಗತ್ಯತೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಭೋದಿಸಬೇಕು. ಸಮಕಾಲಿನ ಸಮಸ್ಯೆಗಳನ್ನು ಕುರಿತು ಮಕ್ಕಳಲ್ಲಿ ಚಿಂತನಶೀಲ ಗುಣ ಬೆಳೆಸಿ, ಅವುಗಳಿಗೆ ಕಾರಣ ಮತ್ತು ಕಾರ್ಯ ಸಂಬಂಧವನ್ನು ಹುಡುಕಿ ಪರಿಹಾರವನ್ನು ಕಂಡುಕೊಳ್ಳುವ ಸಾಮಥ್ರ್ಯವನ್ನು ಬೆಳೆಸುವಲ್ಲಿ ವಚನ ಸಾಹಿತ್ಯ ಪೂರಕ ಅಂಶಗಳನ್ನು ಒದಗಿಸುತ್ತದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ.
ವಚನ ಸಾಹಿತ್ಯದ ಉಗಮ ಮತ್ತು ಆರಂಭ
    ವಚನ ಸಾಹಿತ್ಯದ ಉಗಮದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಅನ್ಯ ಭಾಷೆಗಳ ಮಾದರಿಯನ್ನು ಯಾವುದೇ ದೃಷ್ಟಿಯಿಂದಲೂ ಅನುಕರಿಸದೇ ಅಥವಾ  ಆರಂಭವಾಗಿಟ್ಟುಕೊಳ್ಳದೇ ಕೇವಲ ಅನುಭವದಿಂದಲೇ ಮೂಡಿ ರೂಪಿತವಾದ ಈ ಪ್ರಕಾರ ಕನ್ನಡದ ಹೆಮ್ಮೆಯಾಗಿದೆ. ವಿಶ್ವ ಸಾಹಿತ್ಯಕ್ಕೆ ಕನ್ನಡವು ನೀಡಿದ ಕಾಣಿಕೆಯಾಗಿದೆ.
    ಕ್ರಿ.ಶ 11-12ನೇ ಶತಮಾನದ ಕರ್ನಾಟಕದಲ್ಲಿ ರಾಜಮನೆತನಗಳು ರಾಜ್ಯಕ್ಕಾಗಿ, ಸಿಂಹಾಸನಕ್ಕಾಗಿ ತಮ್ಮತಮ್ಮಲ್ಲೇ ಹೊಡೆದಾಡುತ್ತಿದ್ದು, ಬೇರೆ ವಿಷಯಗಳತ್ತ ಗಮನ ಹರಿಸಲು ಸಾಧ್ಯವಿಲ್ಲದಂತಾಗಿ ಜನಸಾಮಾನ್ಯರನ್ನು ನಿರ್ಲಕ್ಷಿಸಲಾಗಿತ್ತು. ಸಮಾಜದಲ್ಲಿ ಅಭದ್ರತೆ, ಅಸ್ಥಿರತೆ ತಾಂಡವವಾಡುತ್ತಿದ್ದವು. ನೆರೆಯ ತಮಿಳುನಾಡಿನಲ್ಲಿ ಪ್ರಾರಂಭವಾಗಿದ್ದ ಭಕ್ತಿ ಆಂದೋಲನ ಕರ್ನಾಟಕದಲ್ಲಿ ಬೇರೊಂದು ರೀತಿಯ ಆಂದೋಲನವನ್ನು ಹುಟ್ಟು ಹಾಕಿತು. ಸಮಾಜದ ಅಮೂಲಾಗ್ರ ಬದಲಾವಣೆಯನ್ನು ಹಮ್ಮಿಕೊಂಡು ವೈಚಾರಿಕ ಕ್ರಾಂತಿಯನ್ನುಂಟು ಮಾಡುವ ಮೂಲಕ ಜನತೆಯ ಬುದ್ದಿ ಮತ್ತು ಹೃದಯಗಳನ್ನು ತಟ್ಟಿ, ಜನಜಾಗೃತಿ ಮೂಡಲು ವಚನಕಾರರು ಉದಯಿಸಿದರು. ವಸ್ತು, ರೀತಿ, ಅಲಂಕಾರ, ರಸ ಹೀಗೆ ಎಲ್ಲ ದೃಷ್ಟಿಯಿಂದಲೂ ಸರ್ವತಂತ್ರ ಸ್ವತಂತ್ರವಾದ ಸಾಹಿತ್ಯ ಸೃಷ್ಟಯಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಮನ್ವಂತರ ಪ್ರಾರಂಭವಾಯತು.
    ವಚನ ಸಾಹಿತ್ಯ ಸಹಜ ಸ್ಪೂರ್ತಿಯ ಹಿನ್ನಲೆಯನ್ನೊಳಗೊಂಡು ಶ್ರೀಸಾಮಾನ್ಯನ ಮಧ್ಯದಿಂದಲೇ ಬಂದ ಸಾಹಿತ್ಯ ಪ್ರಕಾರವಾದುದುರಿಂದ ಇದಕ್ಕೆ ಅನ್ಯಭಾಷಾ ಸಾಹಿತ್ಯ ಪ್ರಕಾರಗಳು ನೇರವಾದ ಪ್ರಭಾವ ಬೀರಿದವು ಎಂಬುದು ವಿಚಾರಣೀಯವಾದ ಅಂಶ. ವಚನಕಾರರು ಪ್ರಜ್ಞಾವಂತರಾಗಿದ್ದು, ಸಮಾಜದ ನೇರ ಅನುಭವವನ್ನು ಪಡೆದು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಂಡು ಅದರ ಸಾಕ್ಷಾತ್ಕಾರ ಮಾಡಿಕೊಂಡು ನಿಜವಾದ ನೆಲೆ-ಬೆಲೆಗಳನ್ನು ಅರಿತು ಬದುಕಿದ್ದರು. ಹೀಗಾಗಿ ಅವರಿಂದ ಹೊರಟ ಪ್ರತಿಯೊಂದು ನುಡಿಯೂ ಅಂದಿನ ಸಮಾಜದ ಪರಿಸ್ಥಿಯ ಅರಿವನ ನುಡಿಯಾಯಿತು. ಅನುಭಾವದ ನುಡುಯಾಯಿತು. ವಚನಕಾರರೇ ಈ ವಚನ ಸಾಹಿತ್ಯದ ಮೊದಲಿಗರಾದರು.
    ಕನ್ನಡದಲ್ಲಿ ವಚನ ಸಾಹಿತ್ಯ ಯಾವಾಗ ಆರಂಭವಾಯಿತು ಎಂಬುದಕ್ಕೆ ಖಚಿತ ಆಧಾರಗಳಿಲ್ಲವಾದರೂ ಬಸವಣ್ಣನವರ ಕಾಲದ ಹೊತ್ತಿಗೆ ವಿಜೃಂಭಿಸುತ್ತಿದ್ದ ವಚನ ಸಾಹಿತ್ಯ, ಬಸವಣ್ಣನಿಗಿಂತ ಪೂರ್ವದಲ್ಲಿ ಇದ್ದಿತೆನ್ನಲು ಸಾಕಷ್ಟು ಪುರಾವೆಗಳಿವೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಕೆಲವು ಹಿರಿಯ ವಚನಕಾರರಾದ ದೇವರ ದಾಸಿಮಯ್ಯ, ಮಾದರಸ ಮುಂತಾದವರನ್ನು ಸ್ತುತಿಸಿರುವುದರಿಂದ ಅವರಿಗಿಂತಲೂ ಹಿಂದೆಯೇ ವಚನ ಸಾಹಿತ್ಯ ಇತ್ತೆಂಬುದು ವೇದ್ಯವಾಗುತ್ತದೆ. “ವಚನ ವಾಗ್ಮಯದ ಕಾಲ ಬಸವಣ್ಣನಿಗಿಂತ ಒಂದು ಶತಮಾನದಷ್ಟು ಹಿಂದೆಯೇ ಇತ್ತೆಂದು ಊಹಿಸಬಹುದು” ಎಂದು ಆರ್.ಸಿ.ಹಿರೇಮಠರವರು ಹೇಳುತ್ತಾರೆ. ‘ವಚನ ಸಾಹಿತ್ಯವು ಕ್ರಿ.ಶ 09-10ನೇ ಶತಮಾನದಲ್ಲಿ ಇತ್ತೆಂದು, ಈಗ ಉಪಲಬ್ದವಿರುವ ಎಷ್ಟೋ ವಚನಗಳು ಪಂಪನ ಸಾಹಿತ್ಯಕ್ಕಿಂತ ಪ್ರಾಚೀನ’ ಎಂದು ಎಲ್.ಬಸವರಾಜರವರು ಅಭಿಪ್ರಾಯ ಪಡುತ್ತಾರೆ. ಹೀಗಾಗಿ ವಚನ ಸಾಹಿತ್ಯದ ಉಗಮದ ಬಗ್ಗೆ ನಾನಾ ರೀತಿಯ ಹೇಳಿಕೆಗಳಿದ್ದಾಗ್ಯೂ 12ನೇ ಶತಮಾನದಲ್ಲಿ ಉಚ್ಪ್ರಾಯ ಸ್ಥಿತಿಯಲ್ಲಿತ್ತೆಂದು ತಿಳಿಯಬಹುದಾಗಿದೆ.
ವಚನ ಸಾಹಿತ್ಯದ ಸ್ವರೂಪ
    ವಚನ ಸಾಹಿತ್ಯದ ಉಗಮದ ಬಗ್ಗೆ ಭಿನ್ನಾಭಿಪ್ರಾಯಗಳು ಇರುವಂತೆ ಸ್ವರೂಪದ ಬಗ್ಗೆಯೂ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ. ವಚನ ಸಾಹಿತ್ಯ ಗದ್ಯಪದ್ಯಗಳ ಹದವಾದ ಮಿಶ್ರಣವಾಗಿದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ವಚನಗಳಲ್ಲಿ ಗದ್ಯದ ನಿರರ್ಗಳತೆ ಇಲ್ಲದಿದ್ದರೂ ಸರಳತೆ ಇದೆ. ಪದ್ಯದ ಕ್ರಮಬದ್ದ ಛಂದೋಗತಿ ಇಲ್ಲದಿದ್ದರೂ ಲಯವಿದೆ.
    “ವಚನಗಳು ಗದ್ಯಪದ್ಯಗಳ ಮಧ್ಯದ ಇನ್ನೊಂದು ಜಾತಿಯಾಗಿದ್ದು, ಅವುಗಳನ್ನು ಲಯಾನ್ವಿತ ಗದ್ಯವೆಂದೂ, ಅನಿಶ್ಚಿತ ಲಯವಿರುವ ಪದ್ಯವೆಂದೂ ಕರೆಯಬಹುದು” ಎಂಬುದು ಎಂ.ಚಿದಾನಂದಮೂರ್ತಿಯವರ ನಿಲುವು. ಸ್ಪಷ್ಟವಾಗಿ ಹೇಳುವುದಾದರೆ ವಚನಗಳೆಂದರೆ ನಡುಗನ್ನಡ ಶೈಲಿಯ ಅನುಭಾವ ಗದ್ಯದಲ್ಲಿ ಉಸುರಿದ ಆದ್ಮಾತ್ಮಿಕ ಭಾವಗೀತೆಗಳು.
    “ವಚನಗಳು ಪದ್ಯದ ಲಯವನ್ನು, ಗದ್ಯದ ಸ್ವಾಚ್ಛಂಧವನ್ನು ಒಳಗೊಂಡಿವೆ. ಗದ್ಯದಂತೆ ಓದಬಹುದು, ಪದ್ಯದಂತೆ ಹೇಳಬಹುದು, ಗೀತದಂತೆ ಹಾಡಬಹುದು” ಎಂಬುದು ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಮಾತು. ಹೀಗೆ ವಿವಿಧ ಅಭಿಪ್ರಾಯಗಳನ್ನು ಸಂಗ್ರಹಿಸಿ ಅವಲೋಕಿಸುವುದಾದರೆ ವಚನಗಳು ಕಾಲಮಾನದ ಎಲ್ಲಾ ಬಯಕೆ ಬೇಡಿಕೆಗಳನ್ನು ತನ್ನ ನಡೆ ನುಡಿಯಲ್ಲಿ  ಪರಿಮಳದಂತೆ ಅರಳಿಸಿದ ಸಂಪ್ರದಾಯಗಳನ್ನು ಗಾಳಿಗೆ ತೂರಿ, ಹೊಸ ಮಾರ್ಗವೊಂದನ್ನು ಸೃಷ್ಟಿಸಿದ ಸಾಹಿತ್ಯವಾಗಿದೆ. ಗದ್ಯಪದ್ಯಗಳೆರಡರ ಗುಣಾಂಶಗಳನ್ನು ಒಳಗೊಂಡು ತಂತಾನೇ ಅನುಭಾವ ಸಿದ್ದಿಸಿದ ಸಾಕ್ಷಾತ್ಕಾರದ ಸಾಕಾರದ ಆದ್ಯಾತ್ಮಿಕ ಭಾವಗೀತೆಗಳು ಎನಿಸುತ್ತವೆ.
ವಚನ ಸಾಹಿತ್ಯದಲ್ಲಿನ ಜೀವನ ಮೌಲ್ಯಗಳು
    ‘ಜೀವನ ಮೌಲ್ಯಗಳು ಅಧಃಪತನಕ್ಕಿಳಿದಿವೆ’ ಎಂಬಂತಹ ಮಾತು ಇತ್ತೀಚಿಗೆ ಕೇಳಿಬರುತ್ತಿವೆ. ಇದನ್ನು ಹೋಗಲಾಡಿಸಿ ಮಕ್ಕಳಲ್ಲಿ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಲು ವಚನಗಳು ವಿಪುಲ ಅವಕಾಶ ಒದಗಿಸಿ ಕೊಡುತ್ತವೆ. ಪ್ರತಿಯೊಂದು ವಚನಗಳು ಮಾನವೀಯ/ಜೀವನ ಮೌಲ್ಯಗಳನ್ನು ತಮ್ಮ ಒಡಲಲ್ಲಿ ತುಂಬಿಕೊಂಡಿರುತ್ತವೆ. ಅವುಗಳನ್ನು ಗುರುತಿಸಿ ಮಕ್ಕಳಲ್ಲಿ ಬೆಳೆಸಬೇಕಾದುದು ಶಿಕ್ಷಕರಿಗೆ ಅನಿವಾರ್ಯವಾಗಿದೆ.
    ಶರಣರು ವಚನ ಸೃಷ್ಟಿಗೈದುದು ತಮಗಾಗಿ ಅಲ್ಲ, ಜನಸಾಮಾನ್ಯರಿಗಾಗಿ. ಅದು ಅವರಲ್ಲಿನ ನಿಸ್ವಾರ್ಥ ಮನೋಭಾವನೆಯನ್ನು, ನಿಷ್ಕಾಮ ಪ್ರೇಮವನ್ನು, ನಿಷ್ಕಲ್ಮಷ ಮನಸ್ಸನ್ನು ತೋರಿಸುತ್ತದೆ. ಇದನ್ನು ನಮ್ಮ ಮಕ್ಕಳಿಗೆ ಮನದಟ್ಟು ಮಾಡಿಸಬೇಕಾಗಿದೆ. ವಿಶ್ವಶಾಂತಿಗೆ ಶರಣತತ್ವ ಶಾಂತಿ ಸಮಾದಾನ ನೀಡಬಲ್ಲದು. ದ್ವೇಷ, ವಿರಸ, ದ್ವಂದ್ವ ರಹಿತ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯದ ಅಧ್ಯಯನ ಬಹಳ ಮುಖ್ಯ. ಇದನ್ನು ನಮ್ಮ ಪೀಳಿಗೆಗೆ ತಿಳಿಸಿ ಹೇಳಬೇಕಾಗಿದೆ. ವಚನ ಜ್ಞಾನ ವ್ಯಕ್ತಿಯಲ್ಲಿರುವ ಅಜ್ಞಾನವನ್ನು ಸುಟ್ಟುಹಾಕಿ ಅವನನ್ನು ಚೈತನ್ಯ ಸ್ವರೂಪನನ್ನಾಗಿಸುತ್ತದೆ. ಈ ಹಿನ್ನಲೆಯಲ್ಲಿ ವಚನ ಸಾಹಿತ್ಯದ ಮೂಲಕ ಜೀವನ ಮೌಲ್ಯಗಳು ವ್ಯಕ್ತಿಯಲ್ಲಿ ಹಾಗೂ ಸಮಾಜದಲ್ಲಿ ಹೇಗೆ ಅರ್ವಿಭಾವಿಸಿವೆ ಎಂಬುದು ತಿಳಿದು ಬರುತ್ತದೆ.
    ಜ್ಞಾನ ಉದಯಿಸಿದ ಕ್ಷಣದಲ್ಲಿ ಅಜ್ಞಾನಕ್ಕೆ ಜಾಗವಿಲ್ಲ. ನಮ್ಮ ಸುತ್ತಲೂ ಆವರಿಸಿದ ಕತ್ತಲು ಒಂದು ಸಣ್ಣ ಬೆಳಕಿನಿಂದ ದೂರ ಸರಿಯುವಂತೆ, ವಿದ್ಯೆ ಮತ್ತು ಜ್ಞಾನಗಳು ವ್ಯಕ್ತಿಯ ಅಜ್ಞಾನ ತೊಲಗಿಸಿ ಸುಜ್ಞಾನ ಮೂಡಿಸುತ್ತವೆ. ವಚನಗಳ ಅಧ್ಯಯನದಿಂದ ಮಕ್ಕಳಲ್ಲಿ ಇಂತಹ ಸುಜ್ಞಾನ ಮೂಡಿ ಸರಳತೆ, ಸಜ್ಜನಿಕೆಗಳು ಮೇಳವಿಸಿ, ಭೇಧ ಮರೆತು ಸಮರಸರಿಂದ ಬಾಳುವ ವಿಶ್ವಭ್ರಾತೃತ್ವ ಗುಣಗಳನ್ನು ಬೆಳೆಸಬಹುದಾಗಿದೆ.
    ಸದ್ಗುಣಗಳು ಮಾನವನಿಗೆ ಆಭರಣ ಇದ್ದಂತೆ. ವ್ಯಕ್ತಿಯು ಮೊದಲು ಗುಣಾಢ್ಯನಾಗಬೇಕು. ಪ್ರತಿಕ್ಷಣ ತನ್ನನ್ನು ತಾನೇ ಸ್ವವಿಮರ್ಶೆಗೆ ಒಳಪಡಿಸಿಕೊಂಡು ಅಂಕು-ಡೊಂಕುಗಳನ್ನು ತಿದ್ದಿಕೊಳ್ಳಲು ಶ್ರಮಿಸಬೇಕು ಎಂಬುದನ್ನು ವಚನಗಳು ತಿಳಿಸಿಕೊಡುತ್ತವೆ.
    ವಚನ ಸಾಹಿತ್ಯ ವಿಸ್ತಾರವಾದ ನೆಲೆಗಟ್ಟುಳ್ಳದ್ದಾಗಿದ್ದು, ಜೀವನದ ಮೌಲ್ಯಗಳನ್ನು ವ್ಯಕ್ತಿಯಲ್ಲಿ ಬೆಳೆಸಲು ಪೂರಕವಾಗಿವೆ. ವ್ಯಕ್ತಿಗೆ ಅವಶ್ಯಕವಾದ ಸಂಸ್ಕಾರಯುತ ಮೌಲ್ಯಗಳನ್ನು ವಚನ ಸಾಹಿತ್ಯ ನೀಡುತ್ತದೆ. ಇಂದಿನ ವಿಶ್ವದ ವಿಷಮ ಸ್ಥಿತಿಗೆ ವಚನ ಸಾಹಿತ್ಯ ಸಿದ್ದೌಷಧವೆಂದರೆ ಅತಿಶಯೋಕ್ತಿ ಏನಲ್ಲ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕಾಗಿದೆ. ವಚನ ಸಾಹಿತ್ಯವನ್ನು ತಮ್ಮ ಬಾಹ್ಯ ಮತ್ತು ಆಂತರಿಕ ಶಾಲಾ ಪರಿಸರಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಬೆಳೆಯುವಂತೆ ಮಾಡುವಲ್ಲಿ ಶಿಕ್ಷಕರ ಶ್ರಮ ಅಡಗಿದೆ. ಇದನ್ನು ಅರಿತು ನಾವೆಲ್ಲರೂ ಮುನ್ನುಗ್ಗೋಣ. ಆ ಮೂಲಕ ವಚನ ಸಾಹಿತ್ಯವನ್ನು ವಿಶ್ವಭ್ರಾತೃತ್ವಕ್ಕೆ ಬಳಸಿಕೊಂಡು ಹೊಸ ಮನ್ವಂತರಕ್ಕೆ ಸಾಕ್ಷಿಯಾಗೋಣ.
‘ಗುರುಮಾರ್ಗ’ ನವೆಂಬರ್ 2014                                                                       ಆರ್.ಬಿ.ಗುರುಬಸವರಾಜ.
       

                                   

   

ಮಾತಿನ ಮೋಡಿ

                               ಮಾತಿನ ಮೋಡಿ

 

    ಇಂದಿನ ಯುವಕರಿಗೆ ಭಾಷಣ ಕೇಳುವುದೆಂದರೆ ಅಲರ್ಜಿ. ಕೆಲವರಿಗೆ ಭಾಷಣ ಮಾಡುವುದೆಂದರೆ ಭಯ. ಆದರೆ ಭಾಷಣವು ಜನತೆಯ ವಿಚಾರವಂತಿಕೆಯನ್ನು, ಜ್ಞಾನಾರ್ಜನೆಯನ್ನು ವೃದ್ದಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂಬುದನ್ನು ಬಹುತೇಕರು ಗಮನಿಸಿಲ್ಲ.
    ಭಾಷಣವು ವಿಶಿಷ್ಟ ರೀತಿಯ ವಾಗ್ವಿಲಾಸವೂ, ಕಲಾತ್ಮಕವಾದ ಮಾತುಗಾರಿಕೆಯೂ, ಜನತೆಯ ಬುದ್ದಿ ಭಾವಗಳನ್ನು ಅಭಿವೃದ್ದಿಪಡಿಸುವ ಸಾಧನವೂ ಆಗಿದೆ. ಇಂದಿನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೂ ಭಾಷಣ ಕಲೆಯ ಅರಿವು ಇರಬೇಕಾದುದು ಅವಶ್ಯವಾಗಿದೆ. ಕ್ರಾಂತಿಯೂ ಭಾಷಣದಿಂದ, ಶಾಂತಿಯೂ ಭಾಷಣದಿಂದ ಎಂಬುದನ್ನು ನಾವು ಇತಿಹಾಸದುದ್ದಕ್ಕೂ ಓದುತ್ತೇವೆ. ಉತ್ತಮವಾದ ಭಾಷಣವು ಲೋಕಕಲ್ಯಾಣಕ್ಕೆ ಕಾರಣವಾಯಿತೆಂಬುದನ್ನು ಇತಿಹಾಸ ಸಾರಿ ಸಾರಿ ಹೇಳುತ್ತದೆ. ಹಾಗಾದರೆ ಭಾಷಣ ಎಂದರೇನು? ಭಾಷಣಕಾರ ಹೇಗಿರಬೇಕು? ಪರಿಣಾಮಕಾರಿ ಭಾಷಣ ಹೇಗಿರಬೇಕು? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಅಂತಹ ಕೆಲವು ಪ್ರಶ್ನೆಗಳಿಗೆ ಕಿರು ಮಾಹಿತಿ ಇಲ್ಲಿದೆ.
   ಬುದ್ದಿಪೂರ್ವಕವಾಗಿ, ತರ್ಕಬದ್ದವಾಗಿ, ನ್ಯಾಯಯೋಚಿತವಾಗಿ, ಪ್ರಾಸಂಗಕ್ಕನುಗುಣವಾಗಿ ವಿಚಾರದ ಪ್ರತಿಪಾದನೆಯೇ ಭಾಷಣ. ಭಾಷಣವು ಕೇವಲ ಮಾತಿನ ಚತುರತೆಯಾಗಿರದೇ, ಜನತೆಯ ಮೇಲೆ ಪ್ರಭಾವ ಬೀರುವ ವಿಚಾರಶಕ್ತಿಯ ರೂಪವೂ ಆಗಿದೆ. ಉತ್ತಮ ಭಾಷಣವು ಒಂದು ಕಲೆಯಾಗಿದ್ದು, ಅದಕ್ಕೆ ಹೆಚ್ಚಿನ ನೈಪುಣ್ಯತೆ, ಸಿದ್ದತೆ, ಚತುರತೆ, ನಿರ್ಭಯತೆಗಳು ಅಗತ್ಯವಾಗಿವೆ. ಕೇಳುತ್ತಿರುವ ಇಡೀ ಜನಸ್ತೋಮವನ್ನು ತನ್ನೆಡೆಗೆ ಸೆಳೆದುಕೊಂಡು ವಿಷಯವನ್ನು ನಿರೂಪಿಸುವುದು ಸುಲಭದ ಕೆಲಸವಲ್ಲ.
    ಭಾಷಣಕಾರ ಹೇಗಿರಬೇಕು? : ಭಾಷಣವೆಂಬುದು ಒಂದು ವಿಷಯದ ಗಂಭೀರ ನಿರೂಪಣೆಯಾಗಿದೆ. ಇದು ವಿಚಾರದ ಪ್ರಚೋದನೆಯೂ, ಸಂದೇಶದ ವಾಹಕವೂ ಹಾಗೂ ಜನಜಾಗೃತಿಯ ಸಾಧನವೂ ಆಗಿದೆ. ಆದ್ದರಿಂದ ಭಾಷಣಕಾರನು ಹೆಚ್ಚಿನ ಮಾನಸಿಕ ಹಾಗೂ ಬೌದ್ದಿಕ ಸಾಮಥ್ರ್ಯ ಹೊಂದಿದ್ದು, ಸಭಿಕರಿಗೆ ರಸದೌತಣ ನೀಡುವಂತಿರಬೇಕು. ಭಾಷಣಕಾರನು ಎಲ್ಲರಂತೆ ತಾನೂ ಒಬ್ಬ ಪ್ರೇಕ್ಷಕ ಎಂದು ತಿಳಿಯದೇ, ತಾನು ನಿರ್ದಿಷ್ಟ ವಿಷಯವನ್ನು ತಿಳಿಸಲು ಬಂದಿರುವ ಸಂದೇಶವಾಹಕ ಎಂಬ ಪ್ರಜ್ಞೆ ಇರಬೇಕು. ಆದ್ದರಿಂದ ಭಾಷಣಕಾರನಿಗೆ ಜಾಣ್ಮೆ, ವಿದ್ವತ್ತು ಮತ್ತು ವಿವೇಕಗಳ ಜೊತೆಗೆ ಸಮಯಪ್ರಜ್ಞೆ ಇರಬೇಕು.
    ಭಾಷಣಕಾರನಿಗೆ ಅನುಭವ ಪಾಂಡಿತ್ಯ ಮತ್ತು ಪರಿಶ್ರಮಗಳೇ ಬಂಡವಾಳ. ಇವುಗಳನ್ನು ಗಳಿಸಿಕೊಳ್ಳಲು ಸತತ ಅಭ್ಯಾಸ ಅಗತ್ಯ. ಭಾಷಣವು ಸಮಯೋಚಿತವಾಗಿದ್ದು, ವಿಷಯ ನಿರೂಪಣೆ ಸರಳವೂ, ಗಂಭೀರವೂ, ಹೃದ್ಯವೂ ಆಗಿರಬೇಕು. ಭಾಷಣಕಾರನು ಸದಾ ಜಾಗೃತನಾಗಿದ್ದು, ಸಭಿಕರನ್ನು ತನ್ನ ಮಾತಿನ ಮೋಡಿಯಿಂದ ವಶೀಕರಿಸಿಕೊಂಡು ಮೈಮರೆಸಬೇಕು. ಆಗಾಗ ಸಭಿಕರನ್ನು ನಗಿಸುವ ಕಲೆಯನ್ನು ಕರಗತ ಮಾಡಿಕೊಂಡಿರಬೇಕು.
    ಭಾಷಣವು ವಿದ್ವತ್ತು ಪ್ರತಿಭೆ ಮತ್ತು ಅನುಭವಗಳಿಗೆ ಸಂಬಂಧಿಸಿದೆಯಾದರೂ ಮಂದಸ್ಮಿತ ಮುಖ, ಉತ್ಸಾಹ, ಉಡುಪುಗಳೂ ಸಹ ಪ್ರಭಾವಕಾರಿ ಅಂಶಗಳಾಗಿವೆ. ಧ್ವನಿಯು ಸ್ಪಷ್ಟತೆಯಿಂದ ಕೂಡಿದ್ದು, ಸೂಕ್ತ ಧ್ವನಿಯ ಏರಿಳಿತದೊಂದಿಗೆ ವಿಚಾರಕ್ರಾಂತಿಗೆ ಮುನ್ನುಡಿ ಬರೆಯಬೇಕು. ವಿಚಾರಗಳನ್ನು ಕ್ರಮಬದ್ದವಾಗಿ, ರಸಭರಿತವಾಗಿ, ಸ್ವಾರಸ್ಯಕರವಾಗಿ ನಿರೂಪಿಸಬೇಕು. ವೈಯಕ್ತಿಕ ವಿಚಾರಗಳಿಗಿಂತ ವೈಚಾರಿಕ ವಿಚಾರಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಅಂದಾಗ ಮಾತ್ರ ಸಭಿಕರ ಮತ್ತು ವ್ಯವಸ್ಥಾಪಕರ ನಿರೀಕ್ಷೆ ಮತ್ತು ಆಶೋತ್ತರಗಳನ್ನು ಈಡೇರಿಸಲು ಸಾಧ್ಯ.  ಭಾಷಣದ ಪ್ರಾರಂಭ ಮತ್ತು ಮುಕ್ತಾಯದ ವೇಳೆ ಅಧ್ಯಕ್ಷರಿಗೆ, ಅತಿಥಿಗಳಿಗೆ, ಸಭಿಕರಿಗೆ, ಮಾಧ್ಯಮದವರಿಗೆ ಮತ್ತು ಆಯೋಜಕರಿಗೆ  ಗೌರವಪೂರ್ವಕ ವಂದನೆ ಸಲ್ಲಿಸಬೇಕು.
                                                    ಉತ್ತಮ ಭಾಷಣಕ್ಕೆ ಅಷ್ಟ ಮಾರ್ಗಗಳು
ವಿಷಯ ತಿಳಿಯಿರಿ : ನೀವು ಮಾತನಾಡಬೇಕಾದ ವಿಷಯದ ಸಂಪೂರ್ಣ ಜ್ಞಾನ ಇರಲಿ. ನಿಮ್ಮದೇ ಆದ ಭಾಷಾ ಶೈಲಿಯನ್ನು ಬಳಸಿ ವಿಷಯವನ್ನು ನಿರೂಪಿಸಿ. ಹೇಳಬೇಕಾದ ವಿಷಯದ ಮೇಲೆ ಸಂಪೂರ್ಣ ನಿಗಾ ಇರಲಿ, ವಿಷಯವನ್ನು ಮರೆಯಬೇಡಿ.
ಅಬ್ಯಾಸ ಮಾಡಿ : ವೇದಿಕೆಗೆ ತೆರಳುವ ಮುಂಚೆ ಸಾಕಷ್ಟು ಅಭ್ಯಾಸ ಮುಖ್ಯ. ನಿಮಗೆ ದೊರೆಯುವ ಎಲ್ಲಾ ಸಾಧನ ಸಲಕರಣೆಗಳನ್ನು ಬಳಸಿಕೊಂಡು ನಿಮ್ಮದೇ ಆದ ಯೋಜನೆಯಂತೆ ಅಭ್ಯಾಸ ಮಾಡಿ. ಸಾಧ್ಯವಾದರೆ ನಿಮ್ಮ ಭಾಷಾ ಶೈಲಿಯನ್ನು ಮೊಬೈಲ್‍ನಲ್ಲಿ ರೆಕಾರ್ಡ ಮಾಡಿ ಕೇಳಿಸಿಕೊಳ್ಳಿ. ಅಗತ್ಯವಿದ್ದಲ್ಲಿ ಬದಲಾವಣೆ ಮಾಡಿಕೊಳ್ಳಿ. ಆಂಗಿಕ ಚಲನೆ(ದೇಹಭಾಷೆ) ಬಳಸಿ. ಇದಕ್ಕಾಗಿ ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡಿ. ತಪ್ಪುಗಳನ್ನು ತಿದ್ದಿಕೊಳ್ಳಿ. ನಿಗದಿತ ಸಮಯದಲ್ಲಿ ವಿಷಯದ ಹೊಂದಾಣಿಕೆ ಮಾಡಿಕೊಳ್ಳಿ.
ಪ್ರೇಕ್ಷಕರ ಬಗ್ಗೆ ತಿಳಿಯಿರಿ : ನೀವು ಯಾರಿಗೆ ಭಾಷಣ ಮಾಡುತ್ತೀರಿ, ಪ್ರೇಕ್ಷಕರ ಮನೋಸ್ಥಿತಿ, ಸಾಂಸ್ಕøತಿಕತೆ, ವೈಚಾರಿಕತೆ ಇವುಗಳ ಬಗ್ಗೆ ತಿಳಿಯಿರಿ. ಭಾಷಣದ ಪ್ರಾರಂಭದಲ್ಲಿ ಅಲ್ಲಿನ ಕೆಲವು ವ್ಯಕ್ತಿಗಳ ಹೆಸರನ್ನು, ಸಂಘ-ಸಂಸ್ಥೆಗಳ ಹೆಸರನ್ನು, ಸ್ನೇಹಿತರ ಗುಂಪುಗಳ ಹೆಸರನ್ನು ಉಲ್ಲೇಖಿಸಿ. ಇದು ಅಪರಿಚಿತರನ್ನು ಪರಿಚಿತರನ್ನಾಗಿಸುತ್ತದೆ.
ಸ್ಥಳದ ಬಗ್ಗೆ ತಿಳಿಯಿರಿ : ಮಾತನಾಡಬೇಕಾದ ವೇದಿಕೆಯು ಒಳಾಂಗಣವೋ, ಹೊರಾಂಗಣವೋ ತಿಳಿಯಿರಿ. ಕಾರ್ಯಕ್ರಮ ಪ್ರಾರಂಭಕ್ಕಿಂತ ಮುಂಚೆ ಸ್ಥಳ ಪರಿಶೀಲನೆ ನಡೆಸಿ. ಧ್ವನಿವರ್ಧಕ ಹಾಗೂ ದೃಶ್ಯ ಸಾಧನಗಳ ಕಾರ್ಯಕ್ಷಮತೆಯನ್ನೂ ಪರಿಶೀಲಿಸಿ.
ನಿರಾಳವಾಗಿರಿ : ಧೀರ್ಘವಾದ ಉಸಿರಾಟ ನಡೆಸಿ. ಭಾಷಣದ ಪ್ರಾರಂಭದಲ್ಲಿ ವೇದಿಕೆಯಲ್ಲಿನ ಗಣ್ಯರನ್ನು, ಸಭಿಕರನ್ನು ಉದ್ದೇಶಿಸಿ ಮಾತು ಪ್ರಾರಂಭಿಸಿ. ಇದು ಸಭಾಕಂಪನವನ್ನು ಹತೋಟಿಗೆ ತರುತ್ತದೆ.
ಮಾತುಗಳಿಗೆ ದೃಶ್ಯರೂಪ ನೀಡಿ : ಸ್ಪಷ್ಟವಾದ, ಗಟ್ಟಿಯಾದ ಧ್ವನಿಯಿಂದ ನಿಮ್ಮ ಮಾತುಗಳಿಗೆ ಚಲನಶೀಲತೆ ನೀಡಿ. ಧ್ವನಿಯಲ್ಲಿ ಹಿಡಿತವಿರಲಿ, ಅಗತ್ಯಕ್ಕೆ ತಕ್ಕ ಏರಿಳಿತವಿರಲಿ, ಧ್ವನಿಯಲ್ಲಿ ಆತ್ಮ ವಿಶ್ವಾಸವಿರಲಿ. ವಚನಗಳು, ಗಾದೆಮಾತುಗಳು, ಹಾಸ್ಯ, ರಮ್ಯತೆ ಇವುಗಳಿಂದ ವಿಷಯವು ಶ್ರೀಮಂತವಾಗಿರಲಿ. ಆಗ ನಿಸ್ಸಂದೇಹವಾಗಿ ನಿಮ್ಮ ಮಾತುಗಳಿಗೆ ದೃಶ್ಯರೂಪ ಸಿಗುತ್ತದೆ.
ವಶೀಕರಣಗೊಳಿಸಿ : ನಿಮ್ಮ ಮಾತಿನ ಮೋಡಿಯಿಂದ ಸಭಿಕರ ಮನಸ್ಸನ್ನು ಕೇಂದ್ರೀಕರಿಸಿ. ಮಾಹಿತಿಗಳು, ಅಂಕಿ-ಅಂಶಗಳಿಂದ ಕಾತುರತೆ ಹುಟ್ಟಿಸಿ. ಜೊತೆಗೆ ಮನೋರಂಜನೆ ನೀಡುತ್ತಾ ಪ್ರೇಕ್ಷಕರ ಮನಸ್ಸನ್ನು ವಶೀಕರಣಗೊಳಿಸಿ.
ಸಂದೇಶದ ಮೇಲೆ ಗಮನವಿರಲಿ : ನೀವೊಬ್ಬ ಸಂದೇಶವಾಹರು ಎಂಬುದನ್ನು ಮರೆಯದೇ, ನಿಮ್ಮ ಭಾಷಣದಿಂದ ಜನರಿಗೆ ತಲುಪಬೇಕಾದ ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಿ. ಇತರರ ಮಾತಿಗೆ ಕಿವಿಗೊಡಬೇಡಿ.    

               ಭಾಷಣಗಳಲ್ಲಿನ ವೈವಿಧ್ಯತೆ
ಸ್ವಾಗತ ಭಾಷಣ : ಕಾರ್ಯಕ್ರಮ/ಸಭೆಗೆ ಆಗಮಿಸಿದ ಅತಿಥಿಗಳ ಸೂಕ್ಷ್ಮ ಪರಿಚಯದೊಂದಿಗೆ ಪ್ರೀತಿ ಪೂರ್ವಕ ಸ್ವಾಗತ ಕೋರುವುದು. ಜೊತೆಗೆ ಸಭಿಕರಿಗೆ, ಮಾಧ್ಯಮದವರಿಗೆ, ಆಯೋಜಕರಿಗೆ ಸ್ವಾಗತ ಕೋರುವುದು.
ಪರಿಚಯ ಭಾಷಣ : ವಿಶೇಷ ಆಹ್ವಾನದ ಮೇರೆಗೆ ಬರಮಾಡಿಕೊಂಡ ಅತಿಥಿಗಳ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದು.
ಉದ್ಘಾಟನಾ ಭಾಷಣ : ವಿವಿಧ ಮೂಲ ಸೌಲಭ್ಯಗಳ ಉದ್ಘಾಟನೆ, ಸಂಘ-ಸಂಸ್ಥೆಗಳ ಉದ್ಘಾಟನೆ, ಕ್ರೀಡಾಕೂಟಗಳು, ಸಾಂಸ್ಕøತಿಕ ಸ್ಪರ್ದೆಗಳು ಇತ್ಯಾದಿಗಳನ್ನು ಉದ್ಘಾಟಿಸಿ ಮಾಡುವ ಸಂಕಲ್ಪ ಭಾಷಣ.
ಸಮಾರೋಪ ಭಾಷಣ : ತರಬೇತಿ, ಕ್ರೀಡಾಕೂಟಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ವಾರ್ಷಿಕೋತ್ಸವಗಳ ಮುಕ್ತಾಯ ಸಮಾರಂಭದ ಭಾಷಣ.
ಬಹುಮಾನ ವಿತರಣಾ ಭಾಷಣ : ವಿವಿಧ ಸ್ಪರ್ದೆಗಳಲ್ಲಿ ಜಯಶೀಲರಾದವರಿಗಾಗಿ ಪ್ರೋತ್ಸಾಹದಾಯಕ ಭಾಷಣ.
ಅತಿಥಿಗಳ ಭಾಷಣ : ಆಯಾ ದಿನದ ಅಥವಾ ಕಾರ್ಯಕ್ರಮದ ವಿಶೇಷತೆ ಕುರಿತು ಮಾಡುವ ಬಾಷಣ.
ಅಧ್ಯಕ್ಷರ ಭಾಷಣ : ಇಡೀ ಕಾರ್ಯಕ್ರಮದ ಸೂಕ್ಷ್ಮಾವಲೋಕನ ಭಾಷಣ. ಇದು ಇಡೀ ಕಾರ್ಯಕ್ರಮದ ಘನತೆಯ ಭಾಷಣ.
ವಂದನಾರ್ಪಣ ಭಾಷಣ : ಆಗಮಿಸಿದ ಅತಿಥಿಗಳಿಗೆ, ಸಭಿಕರಿಗೆ, ಆಯೋಜಕರಿಗೆ, ಕಾರ್ಯಕ್ರಮಕ್ಕೆ ಶ್ರಮಿಸಿದವರಿಗೆ ಕೃತಜ್ಞತೆ ಸಮರ್ಪಿಸುವ ಭಾಷಣ.
ಬೀಳ್ಕೋಡಿಗೆ ಭಾಷಣ : ಸನ್ಮಿತ್ರರು, ಸಹುದ್ಯೋಗಿಗಳು ವರ್ಗ/ಬಡ್ತಿ/ನಿವೃತ್ತಿ ಆದಾಗ ಮಾಡುವ ಭಾಷಣ.
ಅಭಿನಂದನಾ ಭಾಷಣ : ಹೊಸ ಹುದ್ದೆ ಗಳಿಸಿದಾಗ, ಉನ್ನತ ಹುದ್ದೆಗೆ ಬಡ್ತಿ ದೊರೆತಾಗ, ಬಹುಮಾನ ಪಡೆದಾಗ, ಮಹಾತ್ಕಾರ್ಯ ನೆರವೇರಿಸಿದಾಗ ಸಹೃದಯತೆಯಿಂದ ಅಭಿನಂದಿಸುವ ಭಾಷಣ.
ದಿನಾಚರಣೆ/ಜಯಂತೋತ್ಸವ ಭಾಷಣ : ಆಯಾ ದಿನದ ವಿಶೇಷತೆ ಕುರಿತು ಮಾಡುವ ಭಾಷಣ.
ಶಂಕುಸ್ಥಾಪನಾ ಭಾಷಣ : ಜನಹಿತ ಕಾರ್ಯಗಳ ನಿರ್ಮಾಣ ಕುರಿತ ಉಪನ್ಯಾಸ ಭಾಷಣ.
ಮನವಿ ಭಾಷಣ : ಧಾರ್ಮಿಕ, ಸಾಮಾಜಿಕ ಸೇವಾ ಸಂಸ್ಥೆಗಳ ಸ್ಥಾಪನೆ, ಜೀರ್ಣೋದ್ದಾರಕ್ಕಾಗಿ ಧನಸಹಾಯ ಕೋರಿ ಮನವಿ ಭಾಷಣ.
ಸಂತಾಪಸೂಚಕ ಭಾಷಣ : ವಿಶ್ವ, ದೇಶ ಅಥವಾ  ಸಾಮಾಜಿಕ ಉದ್ದಾರಕ್ಕಾಗಿ ಶ್ರಮಿಸಿ ದಿವಂಗತರಾದ ಮಹನೀಯರಿಗೆ ಸಂತಾಪ ಸೂಚಿಸಿ ಮಾಡುವ ಭಾಷಣ.
ಆಶುಭಾಷಣ : ಪೂರ್ವ ಸಿದ್ದತೆಯಿಲ್ಲದೇ, ಇದ್ದಕ್ಕಿದ್ದಂತೆ ಸಮಯಸ್ಪೂರ್ತಿಯಿಂದ ಮಾಡುವ ಭಾಷಣ.

‘ವಿಜಯವಾಣಿ’ಯ ಮಸ್ತ್ ಪುರವಣಿ 11-02-2015
                                                                                                             ಆರ್.ಬಿ.ಗುರುಬಸವರಾಜ ಶಿಕ್ಷಕರು