May 27, 2015

ಇಲೆಕ್ಟ್ರಾನಿಕ್ ಕೀಟಗಳು

  ದಿನಾಂಕ 27-05-2015 ರ ವಿಜಯವಾಣಿಯಲ್ಲಿ ಪ್ರಕಟವಾದ 'ಇವು ಇಲೆಕ್ಟ್ರಾನಿಕ್ ಕೀಟಗಳು' ಎಂಬ ನನ್ನ ಕಿರುಬರಹ
 

                   ಇವು ಇಲೆಕ್ಟ್ರಾನಿಕ್ ಕೀಟಗಳು!

    ಬಹುತೇಕ  ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ನಂತರ ಉದ್ಯೋಗ ಹುಡುಕಿಕೊಂಡು ಹಣ ಗಳಿಸುತ್ತಾರೆ. ಆದರೆ ವಿದ್ಯಾರ್ಥಿ ದೆಸೆಯಲ್ಲೇ ಹಣ ಗಳಿಸುವಂತಾದರೆ ಹೇಗೆ? ಪಾಲಕರಿಗೂ ಕೊಂಚ ಹೊರೆ ತಪ್ಪಿಸಬಹುದಲ್ಲವೇ? ಇಂತಹ ಒಂದು ಹುಚ್ಚು ಕ್ರಿಯಾಶೀಲತೆಗೆ ಸಾಕ್ಷಿಯಾದವಳು ಇಂಗ್ಲೆಂಡಿನ 23 ವಯಸ್ಸಿನ ಜ್ಯೂಲಿ ಅಲೈಸ್ ಚಾಪೆಲ್.
    ಇಂಗ್ಲೆಂಡಿನ ಪೋಟ್ರ್ಸಮೌತ್ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಎಂ.ಎ(ಫೈನ್ ಆಟ್ರ್ಸ)ನಲ್ಲಿ ಅಭ್ಯಾಸ ಮಾಡುತ್ತಿರುವ ಚಾಪೆಲ್ ಆಧುನಿಕ ಯುಗದ ಘನತ್ಯಾಜ್ಯವಾದ ಇ-ತ್ಯಾಜ್ಯದಿಂದ ಆಕರ್ಷಕ ಕಲಾಕೃತಿಗಳನ್ನು ತಯಾರಿಸಿ ಹಣ ಗಳಿಸುವ ಮೂಲಕ ಪರಿಸರ ಸಂರಕ್ಷಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾಳೆ.
    ವಿಜ್ಞಾನ ಮತ್ತು ತಂತ್ರಜ್ಞಾನದಿಂದ ನಮ್ಮ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗಿದೆ. ಆರ್ಥಿಕ ದುರಾಸೆಯಿಂದ ಬಳಸಿ ಬಿಸಾಡುವ ವಸ್ತುಗಳ ಉತ್ಪಾದನಾ ಪ್ರಮಾಣ ಅಧಿಕವಾಗುತ್ತಿದೆ. ಅದರಲ್ಲೂ ಎಲೆಕ್ಟ್ರಾನಿಕ್ ವಸ್ತುಗಳಿಂದಾದ ಇ-ಕಸ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಪರಿಸರ ಹಾಳಾಗುತ್ತಿದೆ. ಈ ಇ-ಕಸದಿಂದ ಆಕರ್ಷಕ ಕಲಾಕೃತಿಗಳನ್ನು ತಯಾರಿಸುತ್ತಿದ್ದಾಳೆ. ಚಿತ್ರಕಲಾ ಪದವೀಧರೆಯಾದ ಚಾಪೆಲ್ ತನ್ನ ಸೃಜನಾತ್ಮಕ ದೃಷ್ಠಿಕೋನದಿಂದ ಕಸವನ್ನು ರಸವನ್ನಾಗಿಸುತ್ತಿದ್ದಾಳೆ.
    ಕಂಪ್ಯೂಟರ್ ಹಾಗೂ ವೀಡಿಯೋ ಗೇಮ್‍ಗಳ ಬಳಸಿ ಬಿಸಾಡಿದ ವಿದ್ಯುನ್ಮಾನ ಮಂಡಲದ ಬೋರ್ಡಗಳನ್ನು, ಸೆಮಿ ಕಂಡಕ್ಟರ್‍ಗಳನ್ನು, ತಂತಿಗಳನ್ನು ಹಾಗೂ ಎಲ್.ಇ.ಡಿ ಬಲ್ಬ್‍ಗಳನ್ನು ಸೂಕ್ತ ರೀತಿಯಲ್ಲಿ ಸಂಯೋಜಿಸಿ ಆಕರ್ಷಕವಾದ ಹಾಗೂ ವರ್ಣಮಯವಾದ ಕೀಟಗಳು, ಚಿಟ್ಟೆಗಳು, ಜೀರುಂಡೆಗಳು, ಜೇಡಗಳು ಮುಂತಾದ ಚಿಕ್ಕ ಚಿಕ್ಕ ಜೀವಿಗಳ ಮಾದರಿಗಳನ್ನು ತಯಾರಿಸುತ್ತಾಳೆ.     ಮೂಲತಃ ಚಿತ್ರಕಲಾವಿದೆಯಾದ ಇವಳು ನೈಜ ಜೀವನದಲ್ಲಿನ ಚಿಕ್ಕ ಚಿಕ್ಕ ವಸ್ತುಗಳ ಮಾದರಿಗಳನ್ನು ರಚಿಸುವುದು ಹವ್ಯಾಸವಾಗಿದೆ. ಬಳಸಿ ಬಿಸಾಡಿದ ಇ-ತ್ಯಾಜ್ಯ ವಸ್ತುಗಳನ್ನು ಬಳಸಿ ದೃಶ್ಯಕಾವ್ಯದ ಮೆರಗು ನೀಡುತ್ತಾಳೆ.
    ಇ-ತ್ಯಾಜ್ಯದಿಂದ ಪರಿಸರಕ್ಕೆ ಆಗುವ ಅಪಾಯಗಳನ್ನು ಹೈಲೈಟ್ ಮಾಡುವ ಜೊತೆಗೆ ಜಾಣ್ಮೆ ಹಾಗೂ ಜ್ಞಾನದಿಂದ ಮರುಬಳಕೆಯ ವಸ್ತುಗಳನ್ನು ಸೃಷ್ಟಿಸಬಹುದು ಎಂಬುದು ಚಾಪೆಲ್‍ಳ ವಾದ. “ನೈಸರ್ಗಿಕ ವಿಶ್ವದ ಮೇಲೆ ಮಾನವನ ಕ್ರೌರ್ಯದಿಂದಾಗುವ ಶೋಷಣೆಯನ್ನು ತಪ್ಪಿಸಿ ಸುಂದರವಾದ ಮತ್ತು ಅಮೂಲ್ಯವಾದ ವಿಶ್ವವನ್ನು ಸೃಷ್ಟಿಸಲು ಪ್ರಯತ್ನಿಸುವುದು ನನ್ನ ಗುರಿ” ಎನ್ನುವ ಚಾಪೆಲ್‍ಳ ಕನಸಿನಲ್ಲಿ ಪರಿಸರ ಪ್ರಜ್ಞೆಯ ಕಾಳಜಿ ಇದೆ.
    ಇವಳ ಎಲ್ಲಾ ಕಲಾಕೃತಿಗಳಲ್ಲಿ ಗಣಿತೀಯ ಸೂತ್ರಗಳು, ಜ್ಯಾಮಿತಿಯ ಆಕೃತಿಗಳು ಜೀವ ತಳೆದು ಅವುಗಳ ಸುಸಂಘಟಿತ ರಚನೆಯನ್ನು ಪ್ರಾತಿನಿಧಿಸುತ್ತವೆ. ಹಾಗಾಗಿ ಇವಳ ಕಲಾಕೃತಿಗಳಲ್ಲಿ ಸಂಶೋಧನೆಯ ಹೊಳಹುಗಳನ್ನು ಕಾಣಬಹುದು.
    ಪೂರ್ಣಕಾಲಿಕ ಫ್ರೀಲ್ಯಾನ್ಸ್ ಚಿತ್ರಕಲಾವಿದೆಯಾದ ಇವಳು ನಿರಂತರವಾಗಿ ಕಲಾಕೃತಿಗಳನ್ನು ರಚಿಸಿ, ಚಿಕ್ಕ ಚಿಕ್ಕ ಗುಂಪುಗಳಲ್ಲಿ ಪ್ರದರ್ಶಿಸಿ ಮಾರಾಟ ಮಾಡುತ್ತಾಳೆ. ಇವಳ ಬಹುತೇಕ ಕಲಾಕೃತಿಗಳು ಅನೇಕ ಕಲಾವಿದರ ಹಾಗೂ ಕಲಾಸಕ್ತರ ಪ್ರಶಂಸೆಗೆ ಪಾತ್ರವಾಗಿವೆ. ಮುಂದೆ ಇ-ತ್ಯಾಜ್ಯ ಮರುಬಳಕೆಯ ವಸ್ತುಗಳ ತಯಾರಿಕಾ ತರಬೇತಿ ಶಾಲೆ ಪ್ರಾರಂಭಿಸುವ ಕನಸನ್ನು ಹೊಂದಿದ್ದಾಳೆ.
    ಜ್ಯೂಲಿ ಅಲೈಸ್ ಚಾಪೆಲ್‍ಳ ಪರಿಸರ ಪ್ರಜ್ಞೆ ನಮ್ಮೆಲ್ಲರಲ್ಲೂ ಬರಲಿ. ಅವಳಂತೆ ನಾವೂ ಕೂಡಾ ನಮ್ಮ ಜ್ಞಾನಕ್ಕೆ ತಂತ್ರಗಾರಿಕೆ ಬೆರೆಸಿ ನವೀನ ಅತ್ಯಾಕರ್ಷಕ ವಸ್ತುಗಳನ್ನು ಸೃಷ್ಟಿಸುವ ಮೂಲಕ ಹಣ ಗಳಿಕೆಯ ಹಾದಿ ಹುಡುಕೋಣ. ಜೊತೆಗೆ ಇ-ತ್ಯಾಜ್ಯ ಮುಕ್ತ ಪರಿಸರ ನಿರ್ಮಿಸಲು ಪ್ರಯತ್ನಿಸೋಣವೇ?
                                                                                                              ಆರ್.ಬಿ.ಗುರುಬಸವರಾಜ.ಹೊಳಗುಂದಿ
   

May 21, 2015

`ಮ್ಯೂಸಿಯಾಲಜಿ’

ದಿನಾಂಕ 06-05-2015 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ 'ಈಸಿಯಾಗಿ ಮಾಡಿ ಮ್ಯೂಸಿಯಾಲಜಿ ಕೋರ್ಸ್' ಎಂಬ  ಲೇಖನ.

                                      ಕಲೆ ಮತ್ತು ವಿಜ್ಞಾನಗಳ ಸಂಗಮ

                                 `ಮ್ಯೂಸಿಯಾಲಜಿ’

    ಅನೇಕ ವರ್ಷಗಳವರೆಗೆ ಇತಿಹಾಸ ಎಂಬುದು ಜನಸಾಮಾನ್ಯರಿಗೆ ನಿಲುಕದ ಕಲ್ಪನಾ ವಿಷಯವಾಗಿತ್ತು. ಅಂತ್ಯವಿಲ್ಲದ ಹೆಸರುಗಳು, ನೋಡದೇ ಇರುವ ಇಸ್ವಿಗಳು ವಿಷಯವನ್ನು ಬೋರ್ ಹೊಡೆಸುತ್ತವೆ. ಕಳೆದ ಮೂರ್ನಾಲ್ಕು ದಶಕಗಳವರೆಗೆ ಇತಿಹಾಸ ಎಂಬುದು ಕೋಟೆ ಕೊತ್ತಲಗಳಲ್ಲಿ, ಗವಿ ಗುಡಿಗಳಲ್ಲಿ ಅವಿತು ಕುಳಿತ್ತಿತ್ತು. ಅದನ್ನು ಪ್ರಚುರ ಪಡಿಸಿದ ಕೀರ್ತಿ ವಸ್ತು ಸಂಗ್ರಹಾಲಯಗಳಿಗೆ ಸಲ್ಲುತ್ತದೆ.
    ಇತಿಹಾಸ ಎಂಬುದು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರ ಸೀಮಿತ ಎಂಬುದು ಬಹುತೇಕರ ಅಭಿಮತ. ಇದೆಲ್ಲದರ ನಡುವೆ ಇತ್ತೀಚಿನ ವರ್ಷಗಳಲ್ಲಿ ಇತಿಹಾಸ ಅಧ್ಯಯನಕ್ಕೆ ಹೆಚ್ಚು ಮಹತ್ವ ದೊರೆಯುತ್ತಿದೆ. ಅನೇಕ ಉತ್ಸಾಹಿ ಯುವಕರು ಇತಿಹಾಸದಲ್ಲಿ ಹೊಸ ಹೊಸ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಅನೇಕ ಐತಿಹಾಸಿಕ ರಹಸ್ಯಗಳನ್ನು ಬಿಚ್ಚಿಡುತ್ತಿದ್ದಾರೆ. ಆ ಮೂಲಕ ತಮ್ಮ ವೃತ್ತಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ.
    ಹೀಗೆ ಇತಿಹಾಸದ ಸಂಶೋಧನೆಯ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಬಯಸುವವರಿಗೆ ‘ಮ್ಯೂಸಿಯಾಲಜಿ’ ಅತ್ಯುತ್ತಮ ಕ್ಷೇತ್ರವಾಗಿದೆ. ಇದು ಭಾರತದಲ್ಲಿ ಸಾಕಷ್ಟು ವೃತ್ತಿ ಅವಕಾಶಗಳನ್ನು  ಹೊಂದಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಮಹತ್ವ ಪಡೆದ ಜನಪ್ರಿಯ ವಿಷಯವಾಗಿದೆ.
ಏನಿದು ಮ್ಯೂಸಿಯಾಲಜಿ?
    ಮ್ಯೂಸಿಯಾಲಜಿ ಎಂಬುದು 2 ವರ್ಷಗಳ ಸ್ನಾತಕ ಪದವಿ ಕೋರ್ಸ ಆಗಿದ್ದು, ವಸ್ತು ಸಂಗ್ರಹಾಲಯದ ಆಡಳಿತ ಮತ್ತು ನಿರ್ವಹಣಾ ಅಧ್ಯಯನವಾಗಿದೆ. ಇದೊಂದು ಬಹುಕಾರ್ಯ ವಿಧಾನಗಳುಳ್ಳ ಕ್ಷೇತ್ರವಾಗಿದೆ. ಕಲೆ ಹಾಗೂ ವಿಜ್ಞಾನದ ಹಿನ್ನಲೆಯುಳ್ಳ ವಿದ್ಯಾರ್ಥಿಗಳಿಗೆ ಈ ಕೋರ್ಸ ಉತ್ತಮ. ಈ ಕೋರ್ಸನ ಮೂಲಭೂತ ಅವಶ್ಯಕತೆ ಎಂದರೆ ಇತಿಹಾಸದ ಪರಿಚಯ. ವಿಶೇಷವಾಗಿ ಪ್ರಾಚೀನ ಭಾರತದ ಇತಿಹಾಸದ ಪರಿಚಯ ಇರಬೇಕಾದುದು ಅಪೇಕ್ಷಣೀಯ.
ಇವರಿಗೆ ಸೂಕ್ತ
    ಪುರಾತತ್ವ ಸಮಸ್ಯೆಗಳಿಗೆ ಸೈದ್ದಾಂತಿಕ ಹಾಗೂ ವೈಜ್ಞಾನಿಕ ತತ್ವ ಮತ್ತು ಪರಿಕಲ್ಪನೆಗಳನ್ನು ಅನ್ವಯಿಸುವ ಸಾಮಥ್ರ್ಯ ಇರುವವರಿಗೆ, ಉತ್ಖನನದಲ್ಲಿ ಆಸಕ್ತಿ ಇರುವವರಿಗೆ, ಐತಿಹಾಸಿಕ ಸಮೀಕ್ಷೆ ಮತ್ತು ದಾಖಲೀಕರಣದಲ್ಲಿ ಆಸಕ್ತಿ ಇರುವವರಿಗೆ ಈ ಕೋರ್ಸ ಸೂಕ್ತವಾದುದು.
    ಪುರಾತತ್ವ ಪ್ರಯೋಗಾಲಯದ ಮಾಹಿತಿ ದಾಖಲೀಕರಣ, ಸಂಖ್ಯಾ ಸಂಗ್ರಹಣೆ, ವಿಶ್ಲೇಷಣೆ, ಆಂಕಿಕ ವಿಧಾನಗಳ ಅನ್ವಯಿಕ ಪ್ರಕ್ರಿಯೆಯಲ್ಲಿ ಆಸಕ್ತಿ ಇರುವವರಿಗೆ, ಪುರಾತನ ವಸ್ತುಗಳ ವ್ಯಾಖ್ಯಾನ ಮಡುವವರಿಗೆ, ಉನ್ನತ ವ್ಯಾಸಂಗಗಳ ಕಾಲೇಜುಗಳಲ್ಲಿ ಬೋಧಕರಾಗಲು ಬಯಸುವವರಿಗೆ ಈ ಕೋರ್ಸ ಉತ್ತಮ.
    ಸಂಶೋಧನಾ ಪ್ರವೃತ್ತಿ ಹೊಂದಿರುವ ಈಗಾಗಲೇ ಕೆಲವು ವೃತ್ತಿಗಳಲ್ಲಿ ತೊಡಗಿರುವ, ಸಂಶೋಧನೆ ಮಾಡಲಾಗದೇ ಪದೇ ಪದೇ ವೃತ್ತಿ ಬದಲಾಯಿಸುವವರೂ ಮ್ಯೂಸಿಯಾಲಜಿ ಕೋರ್ಸಗೆ ಸೇರಬಹುದಾಗಿದೆ.
ವಿದ್ಯಾರ್ಹತೆ ಮತ್ತು ವೆಚ್ಚ :    ಯಾವುದೇ ಪದವಿಯಲ್ಲಿ ಶೇಕಡಾ 50 ಅಂಕಗಳೊಂದಿಗೆ ಪ್ರವೇಶ ಪರೀಕ್ಷೆಯ ಉತ್ತೀರ್ಣತೆ ಹಾಗೂ ಸಂದರ್ಶನ ಕಡ್ಡಾಯ. 2 ವರ್ಷಗಳ ಈ ಕೋರ್ಸನ ವೆಚ್ಚ ರೂ.15-20 ಸಾವಿರಗಳು ಮಾತ್ರ. ಕೋರ್ಸನ ನಂತರ ಕೆಲವು ಶೈಕ್ಷಣಿಕ ಸಂಸ್ಥೆಗಳು ಇಂಟರ್ನಶಿಪ್ ಸೇವೆ ಒದಗಿಸುತ್ತವೆ. ಇಂಟರ್ನಶಿಪ್‍ನಲ್ಲಿ ಪುರಾತತ್ವ ಮೂಲಗಳ ಸಂರಕ್ಷಣೆ, ದಾಖಲೀಕರಣ, ಲೆಕ್ಕಪತ್ರ, ಸಾರ್ವಜನಿಕ ಸಂಬಂಧಗಳು, ಪ್ರದರ್ಶನ ವಿನ್ಯಾಸ ಮತ್ತು ವಿವಿಧ ರೀತಿಯ ವಸ್ತು ಸಂಗ್ರಹಾಲಯ ರೂಪಿಸುವ ಬಗ್ಗೆ ತರಬೇತಿ ನೀಡುತ್ತವೆ. ಕೆಲವು ಸಂಸ್ಥೆಗಳು ಇಂಡರ್ನಶಿಪ್‍ನಲ್ಲಿ ಗೌರವಧನ ನೀಡುತ್ತವೆ.

       ಕೋರ್ಸನಲ್ಲಿ ಕಲಿಯುವ ಪರಿಕಲ್ಪನೆಗಳು
•    ವಸ್ತು ಸಂಗ್ರಹಾಲಯದ ಇತಿಹಾಸ ಮತ್ತು ಸಂಗ್ರಹಗಳು
•    ದಾಖಲೀಕರಣ ಪ್ರಸ್ತುತಿ ಮತ್ತು ವ್ಯಾಖ್ಯಾನ
•    ಮ್ಯೂಸಿಯಂ ಶಿಕ್ಷಣ ಮತ್ತು ಸಂಶೋಧನೆ
•    ಮ್ಯೂಸಿಯಂನಲ್ಲಿ ಕಂಪ್ಯೂಟರ್ ಅನ್ವಯಿಕ
•    ಭಾರತೀಯ ಕಲೆ ಮತ್ತು ತತ್ವಶಾಸ್ತ್ರ
•    ಭಾರತೀಯ ಚಿತ್ರಕಲೆ ವರ್ಗೀಕರಣ ಮತ್ತು ಸಂಗ್ರಹಿಸುವುದು
•    ಮ್ಯೂಸಿಯಂ ನಿರ್ವಹಣೆ ಮತ್ತು ಆಡಳಿತ
•    ಮ್ಯೂಸಿಯಂ ಮತ್ತು ಸಾರ್ವಜನಿಕ ಸಂಪರ್ಕ
•    ಹೊಸ ಮ್ಯೂಸಿಯಾಲಜಿ ಹಾಗೂ ಭಾರತೀಯ ಮ್ಯೂಸಿಯಾಲಜಿ ನಿಯಮಗಳು
•    ಭಾರತೀಯ ಶಿಲ್ಪ/ಮೂರ್ತಿ
•    ಯೋಜನಾವರದಿ ಮತ್ತು ಪ್ರವಾಸ ವರದಿ
•    ಪ್ರದರ್ಶನ ಮತ್ತು ನಿರ್ವಹಣೆ
•    ಭಾರತೀಯ ಅಲಂಕಾರಿಕ ಕಲೆ
•    ಮ್ಯೂಸಿಯಂ ಸಂರಕ್ಷಣೆ ಮತ್ತು ಪ್ರಾಯೋಗಿಕ ತರಬೇತಿ
•    ವಿಜ್ಞಾನ ಮತ್ತು ಮಾನವಶಾಸ್ತ್ರೀಯ ಸಂಬಂಧಗಳಿಗೆ ಮ್ಯೂಸಿಯಂನ ಆಯಾಮಗಳು

ಕೋರ್ಸ ನಂತರದ ಹುದ್ದೆಗಳು
•    ಪ್ರದರ್ಶನ ಸಲಹೆಗಾರರು
•    ಉಪಮೇಲ್ವಿಚಾರಕರು
•    ಮ್ಯೂಸಿಯಂ ಗೈಡ್
•    ಒಳಾಂಗಣ ಕಲಾ ವಿನ್ಯಾಸಕಾರರು
•    ಗ್ರಾಫಿಕ್ ಡಿಸೈನರ್
•    ಮ್ಯೂಸಿಯಂ ಸಂರಕ್ಷಣಾಧಿಕಾರಿ
•    ಉಪನ್ಯಾಸಕರು

ಇನ್ನಿತರೇ ಲಾಭಗಳು : ಶೈಕ್ಷಣಿಕ, ಕಲೆ ಮುಂತಾದ ವಸ್ತು ಸಂಗ್ರಹಾಲಯಗಳು ಮತ್ತು ಪ್ರವಾಸಿ ಸಂಬಂಧಿತ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಆಯ್ದ ವಿಷಯಗಳಲ್ಲಿ ಉನ್ನತ ಅಧ್ಯಯನಕ್ಕೆ ಸಹಕಾರಿಯಾಗಿದೆ. ಪುರಾತತ್ವ ಗುತ್ತಿಗೆದಾರರು, ಪುರಾತತ್ವ ವಿಶ್ವ ವಿದ್ಯಾಲಯಗಳಲ್ಲಿ, ರಾಷ್ಟ್ರೀಯ ಪರಂಪರಾ ಸಂಸ್ಥೆಗಳಲ್ಲಿ ಪುರಾತತ್ವ ಸಲಹೆಗಾರರಾಗಲು ಸಾಕಷ್ಟು ಅವಕಾಶಗಳಿವೆ. ಇತಿಹಾಸದ ಕುರುಹುಗಳ ಸಂರಕ್ಷಣೆಯ ಜೊತೆಗೆ ಜನಸಾಮಾನ್ಯರಿಗೆ ಮಾಹಿತಿ ಒದಗಿಸುವ ಮಾಹಿತಿದಾರರಾಗಿ ಸೇವೆ ಸಲ್ಲಿಸಬಹುದು.
    ಇದೊಂದು ಬಹುಕಾರ್ಯ ವಿಧಾನಗಳುಳ್ಳ ಹಾಗೂ ನಮ್ಮ ದೇಶದಲ್ಲಿ ಸಾಕಷ್ಟು ವ್ಯಾಪ್ತಿ ಹೊಂದಿದ ಕ್ಷೇತ್ರವಾಗಿದ್ದು, ಭಾರತದಲ್ಲಿ ಉಜ್ವಲತೆಯನ್ನು ಗಳಿಸುವ ಸವಾಲಿನ ಕ್ಷೇತ್ರವೂ ಆಗಿದೆ. ‘ಇತಿಹಾಸ ತಿಳಿಯಲಾರದವರು ಇತಿಹಾಸ ನಿರ್ಮಿಸಲಾರರು’ ಎಂಬ ಮಾತನ್ನು ಸಾಕಾರಗೊಳಿಸಲು ಈ ಕೋರ್ಸ ಅತ್ಯುತ್ತಮವಾಗಿದೆ. ಏಕೆಂದರೆ ಭವಿಷ್ಯದ ಪೀಳಿಗೆಗೆ ಏನಾದರೊಂದು ಉತ್ತಮ ಕಾಣ್ಕೆ ನೀಡಲು ಹಿಂದಿನ ಇತಿಹಾಸ ಅಗತ್ಯವಲ್ಲವೇ?

ಭಾರತದ ಸಂಸ್ಕøತಿ ಹಾಗೂ ಪರಂಪರೆಯ ಬಗ್ಗೆ ಕಲಿಯಲು ಆಸಕ್ತಿ ಇರುವವರಿಗಾಗಿ ಮತ್ತು ಅಂತಹ ಕುರುಹುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಜೀವಂತವಾಗಿಡುವ ಉದ್ದೇಶ ಹೊಂದಿರುವವರಿಗಾಗಿ ಈ ಕೋರ್ಸ. ಇದು ಇತಿಹಾಸ ತಿಳಿಯುವವರಿಗೆ ಅತ್ಯಂತ ಕುತೂಹಲಕಾರಿಯಾದ ಮತ್ತು ಸಮರ್ಪಣಾ ಮನೋಭಾವದ ಕೋರ್ಸ ಆಗಿದೆ.
-    ಶ್ರೀಮತಿ ರಶ್ಮಿ ಚಟರ್ಜಿ
     ಮ್ಯೂಸಿಯಾಲಜಿಸ್ಟ್ ಆಂಡ್ ಸೂಪರ್‍ವೈಸರ್
          ದ ಹಾಲೋ ಹೆರಿಟೇಜ್ ಆರ್ಟ ಗ್ಯಾಲರಿ ಕೋಲ್ಕತ್ತಾ

   ಕೋರ್ಸ ನೀಡುವ ಕೆಲವು ಸಂಸ್ಥೆಗಳು
•    ಬನಾರಸ್ ಹಿಂದೂ ವಿಶ್ವ ವಿದ್ಯಾಲಯ, ವಾರಣಾಸಿ.
•    ಜವಾಯಿ ವಿಶ್ವ ವಿದ್ಯಾಲಯ, ಗ್ವಾಲಿಯರ್.
•    ಮಹಾರಾಜ ಸಯಜಿರಾವ್ ಯೂನಿರ್ವಸಿಟಿ ಆಫ್ ಬರೋಡಾ, ವಡೋದರಾ, ಗುಜರಾತ್.
•    ರವೀಂದ್ರ ಭಾರತೀ ವಿಶ್ವ ವಿದ್ಯಾಲಯ, ಕೋಲ್ಕತ್ತಾ.
•    ಕೋಲ್ಕತ್ತಾ ವಿಶ್ವ ವಿದ್ಯಾಲಯ, ಕೋಲ್ಕತ್ತಾ.
•    ರಾಜಸ್ಥಾನ ವಿಶ್ವ ವಿದ್ಯಾಲಯ, ಜೈಪುರ.
•    ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹಿಸ್ಟರಿ ಆಫ್ ಆಟ್ರ್ಸ, ಕನ್ಸರ್‍ವೇಷನ್ ಆಂಡ್ ಮ್ಯೂಸಿಯಾಲಜಿ, ನವದೆಹಲಿ.

                                                                                                            ಆರ್.ಬಿ.ಗುರುಬಸವರಾಜ. ಹೊಳಗುಂದಿ

May 17, 2015

ರಜಾ ವಿತ್ ಮಜಾ

ದಿನಾಂಕ 04-04-2015 ರ ವಿಜಯವಾಣಿಯ 'ಪುಟಾಣಿ' ಪುರವಣಿಯಲ್ಲಿ ಪ್ರಕಟವಾದ ಲೇಖನ


                                                       ರಜಾ ವಿತ್ ಮಜಾ

                                                  ಬೇಸಿಗೆ ರಜೆ ಬಂದ್ಬಿಡ್ತು
    ಏಪ್ರಿಲ್ ಬಂತೆಂದರೆ ಸಾಕು, ಯುವ ಮನಸ್ಸುಗಳಲ್ಲಿ ರೋಮಾಂಚನ ಶುರುವಾಗುತ್ತದೆ. ಅಕಾಡೆಮಿಕ್ ಕೋರ್ಸ ಮುಕ್ತಾಯವಾಗಿರುತ್ತದೆ. ಕ್ಲಾಸ್ ಮತ್ತು ಎಕ್ಸಾಂ ಟೆನ್ಶನ್ ಇರುವುದಿಲ್ಲ. ಪರೀಕ್ಷೆಗಳು ಮುಗಿದು ರಜಾ ಆರಂಭವಾಗಿರುತ್ತದೆ. ಮೈಂಡ್ ರಿಫ್ರೆಶ್ ಮಾಡಿಕೊಳ್ಳಲು ಹಾಗೂ ಜೋಶ್ ಆಗಿರಲು  ರಜೆ ಎಂಬುದು ವರ್ಷದ ಅತ್ಯುತ್ತಮ ಅವಧಿ. ರಜೆಯಲ್ಲಿ ಕುಟುಂಬದ ಸದಸ್ಯರು, ಗೆಳೆಯರು ಅಥವಾ ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯಲು ಸಾಕಷ್ಟು ಅವಕಾಶಗಳಿರುತ್ತವೆ.
    ಇತ್ತೀಚೆಗೆ ಬಹುತೇಕ ಕುಟುಂಬಗಳೆಲ್ಲವೂ ಒಂಟಿ ಕುಟುಂಬಗಳಾಗಿದ್ದು, ಅದರಲ್ಲಿನ ಸದಸ್ಯರ ಸಂಖ್ಯೆ ಐದಕ್ಕಿಂತ ಕಡಿಮೆ ಇರುತ್ತದೆ. ಅದರಲ್ಲೂ ಯುವ ಮನಸ್ಸುಗಳ ಸಂಖ್ಯೆ ಇನ್ನೂ ಕಡಿಮೆ. ಹಾಗಾಗಿ ರಜೆ ಎಂಬುದು ಕೆಲವರ ಪಾಲಿಗೆ ಸಜೆ ಆಗುವುದುಂಟು. ಈ ರೀತಿ ರಜೆಯನ್ನು ಸಜೆಯನ್ನಾಗಿಸುವ ಬದಲು ಮಜವನ್ನಾಗಿಸಿಕೊಳ್ಳಲು ಅನೇಕ ಅವಕಾಶಗಳಿವೆ. ನಿಮ್ಮ ವಿಚಾರ, ಚಿಂತನೆಗಳಿಗೆ ಸರಿಹೊಂದುವ ಗೆಳೆಯರ ಬಳಗ ಸೇರಿಸಿಕೊಳ್ಳಿ ಅಥವಾ ನೀವೇ ಆ ಬಳಗಕ್ಕೆ ಸೇರಿಕೊಳ್ಳಿ. ರಜೆ ಎಂಬುದು ಎಲ್ಲರಿಗೂ ಸಂತೋಷವನ್ನು ಅನುಭವಿಸಲು ಇರುವ ಮಹತ್ತರ ಅವಕಾಶ ಎಂಬುದು ನೆನಪಿರಲಿ.
    ರಜೆ ಮಜವಾಗುವ ಜೊತೆಗೆ ಅರ್ಥಪೂರ್ಣವಾಗಿರಲು ಅನೇಕ ಅಂಶಗಳಿವೆ. ಅವುಗಳನ್ನು ಪಾಲಿಸಿದರೆ ನಾವು ಖುಷಿಪಡುವ ಜೊತೆಗೆ ಇತರರನ್ನೂ ಖುಷಿಪಡಿಸಬಹುದು.
ಮೆಲುಕುಹಾಕಿ : ಕಳೆದ ವರ್ಷಗಳ ಧನಾತ್ಮಕ ಅಂಶಗಳನ್ನು ಮೆಲುಕುಹಾಕಿ. ನೀವು ಉನ್ನತ ಹಂತಕ್ಕೆ ಏರಲು ಸಣ್ಣ ಸಣ್ಣ ಸಾಧನೆಗಳು ಹೇಗೆ ಸಹಕಾರಿಯಾದವು ಎಂಬುದನ್ನು ನೆನಪಿಸಿಕೊಳ್ಳಿ. ಇದರಿಂದ ನಿಮ್ಮಲ್ಲಿ ಧನಾತ್ಮಕ ಮನೋಭಾವ ಮೂಡುತ್ತದೆ. ಜೊತೆಗೆ ಬಾಲ್ಯದ ದಿನಗಳು, ಕುಟುಂಬದ ಸಂತಸದ ಕ್ಷಣಗಳನ್ನು ಮೆಲುಕುಹಾಕಿ.
ಹಬ್ಬಮಾಡಿ : ನಿಮ್ಮ ಬಗ್ಗೆ ಕಾಳಜಿ ಇರುವವರೊಂದಿಗೆ ಅಂದರೆ ಕುಟುಂಬದ ಸದಸ್ಯರು, ಗೆಳೆಯರೊಂದಿಗೆ ಹೆಚ್ಚು ಸಮುಯವನ್ನು ಕಳೆಯಿರಿ. ಮಧುರ ಕ್ಷಣಗಳನ್ನು ಹಂಚಿಕೊಳ್ಳಿ. ರಜಾದಿನಗಳನ್ನು ಹಬ್ಬದಂತೆ ಕಳೆಯಿರಿ. ಏಕೆಂದರೆ ಪ್ರತಿದಿನವೂ ಅಮೂಲ್ಯವಾದುದು.
ಖುಷಿ ನೀಡುವ ಕೆಲಸ ಮಾಡಿ : ಚಲನಚಿತ್ರ ನೋಡುವುದಿರಲಿ, ಆಟ ಆಡುವುದಿರಲಿ, ಟ್ರಿಪ್ ಹೋಗುವುದಿರಲಿ ಅಥವಾ ಇನ್ನಾವುದೇ ಚಟುವಟಿಕೆಗಳಿಂದ ನಿಮಗೆ ಖುಷಿ ಸಿಗಬೇಕೇ ವಿನಹ ನೋವು ತರುವಂತಹ ಅಥವಾ ಇತರರಿಗೆ ನೋವಾಗುವಂತಹ ಕೆಲಸ ಮಾಡಬೇಡಿ. ನಿಮ್ಮ ನೆಚ್ಚಿನ ಚಟುವಟಿಕೆಗಳಿಂದ ಎಲ್ಲರಿಗೂ ಸಂತೋಷ ಸಿಗುವುದು ಎಂಬುದನ್ನು ಖಚಿತಪಡಿಸಿಕೊಳ್ಳಿ.
ಸದಾ ಆಕ್ಟೀವ್ ಆಗಿರಿ : ವರ್ಷದುದ್ದಕ್ಕೂ ಮಾಡಲಾಗದೇ ಇರುವ ಕೆಲವು ಚಟುವಟಿಕೆಗಳನ್ನು ಕೈಗೊಳ್ಳಿ.  ಸ್ವಿಮ್, ಜಿಮ್, ವ್ಯಾಯಾಮ, ಯೋಗದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಇವು ನೀವು ಫುಲ್ ಆಕ್ಟಿವ್ ಆಗಿರಲು ಸಹಾಯ ಮಾಡುತ್ತವೆ. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ. ರಜೆಯಲ್ಲಿ ಸಿಕ್ಕಿದ್ದನ್ನೆಲ್ಲಾ ತಿಂದು ಅನಾವಶ್ಯಕವಾಗಿ ಬಾಡಿ ಬೆಳೆಸಿಕೊಳ್ಳುವ ಬದಲು ಸ್ಲಿಮ್ ಆಗಲು ಇದು ಸಕಾಲ.
ಪತ್ರ ಚಳುವಳಿ ಪ್ರಾರಂಭಿಸಿ : ಮೆಸೇಜ್, ಇಮೆಲ್ ಅಥವಾ ಚಾಟಿಂಗ್‍ನಿಂದಾಗಿ ಪತ್ರ ಬರೆಯುವ ಕೌಶಲ್ಯ ಮಾಯವಾಗುತ್ತಿದೆ. ರಜೆಯಲ್ಲಿ ಸಾಧ್ಯವಾದಷ್ಟೂ ಮೆಸೇಜ್ ಇಮೇಲ್ ಬಳಕೆ ಕಡಿಮೆ ಮಾಡಿ ಪತ್ರ ಚಳುವಳಿ ಪ್ರಾರಂಭಿಸಿ. ಇದು ನಿಮ್ಮ ಬರವಣೆಗೆಯ ಕೌಶಲ್ಯವನ್ನು ಜೀವಂತವಾಗಿಡುತ್ತದೆ ಹಾಗೂ ಭವಿಷ್ಯದಲ್ಲಿ ದಾಖಲೆಯ ರೂಪದಲ್ಲಿ ನೆನಪುಗಳನ್ನು ಮಧುರವಾಗಿಸುತ್ತದೆ. ನೀವು ಪತ್ರ ಚಳುವಳಿ ಪ್ರಾರಂಬಿಸುವ ಜೊತೆಗೆ ಗೆಳೆಯರನ್ನೂ ಪತ್ರ ಬರೆಯಲು ಪ್ರೋತ್ಸಾಹಿಸಿ.
ಅಲಂಕಾರಗೊಳಿಸಿ : ರಜಾವಧಿಯಲ್ಲಿ ಮನೆಯನ್ನು ಅಂದವಾಗಿಡಲು ಪ್ರಯತ್ನಿಸಿ. ರೀಡಿಂಗ್ ರೂಮ್, ಡೈನಿಂಗ್ ರೂಮ್, ಹಾಲ್, ಗೆಸ್ಟ್ ರೂಮ್ ಇತ್ಯಾದಿಗಳನ್ನು ವಿಶೇಷವಾಗಿ ಅಲಂಕರಿಸಲು ಪ್ರಯತ್ನಿಸಿ. ಅಲಂಕಾರ ನಿಮ್ಮ ಕನಸಿಗೆ ಬಣ್ಣ ಕೊಡುವಂತಿರಲಿ. ಅಲಂಕಾರವು ನಿಮ್ಮ ಸೃಜನಶೀಲತೆಯನ್ನು ಬಿಂಬಿಸುವುದಲ್ಲದೇ ನೋಡುಗರಿಗೆ ರಸದೌತಣ ನೀಡುತ್ತದೆ. ಕಡಿಮೆ ಬೆಲೆಯ ಅಥವಾ ಬಳಸಿ ಬಿಸಾಡಿದ ವಸ್ತುಗಳಿಂದ ಕ್ರಿಯೇಟಿವ್ ಆಗಿ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ನೇತು ಹಾಕಿ. ಇವು ಮನೆಯ ಅಂದ ಹೆಚ್ಚಿಸುವುದಲ್ಲದೇ ಮನಸ್ಸಿಗೆ ಮುದ ನೀಡುತ್ತವೆ.
ಆತ್ಮೀಯರನ್ನು ಆಮಂತ್ರಿಸಿ : ರಜೆಯಲ್ಲಿ ಆತ್ಮೀಯ ಕುಟುಂಬಗಳ ಸದಸ್ಯರನ್ನು ಸ್ನೇಹಿತರನ್ನು ಆಮಂತ್ರಿಸಿ. ಇದರಿಂದ ಪರಸ್ಪರ ಕುಟುಂಬಗಳ ನಡುವಿನ ಭಾಂದವ್ಯ ಗಟ್ಟಿಗೊಳ್ಳುವುದಲ್ಲದೇ ಮನೋರಂಜನೆ ದೊರೆಯುತ್ತದೆ. ಏಕಾಂಗಿತನ ಕಳೆದು ಸಂತೋಷ ಹೆಚ್ಚುತ್ತದೆ.
ಸ್ವಯಂ ಸೇವಕರಾಗಿ : ಅವಕಾಶ ದೊರೆತಾಗಲೆಲ್ಲ ನಿರಾಶ್ರಿತರಿಗೆ, ಅಶಕ್ತರಿಗೆ ಸಹಾಯ ಮಾಡುವ ಸ್ವಯಂ ಸೇವಕರಾಗಿ. ಬಡಮಕ್ಕಳಿಗೆ ಪಾಠ ಹೇಳಿ ಅಥವಾ ಸ್ನೇಹಿತರೊಡಗೂಡಿ ಆರೋಗ್ಯ/ಯೋಗದಂತಹ ಶಿಬಿರಗಳನ್ನು ನಡೆಸಿ. ಹೀಗೆ ಮಾಡುವುದರಿಂದ ನೀವು ವಾಸಿಸುವ ಸಮುದಾಯದ ಸಕ್ರಿಯ ಸದಸ್ಯರಾಗುತ್ತೀರಿ.
ವಿಶೇಷ ವ್ಯಕ್ತಿಗಳನ್ನು ಸಂಪರ್ಕಿಸಿ : ನಿಮ್ಮ ಸುತ್ತಮುತ್ತಲಿನ ವಿಶೇಷ ವ್ಯಕ್ತಿಗಳನ್ನು ಅಂದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಸಂಪರ್ಕಿಸಿ. ಅವರ ಜೀವನದ ಸಾಧನೆಯ ಮೈಲಿಗಲ್ಲುಗಳನ್ನು ತಿಳಿದುಕೊಳ್ಳಿ. ನೀವೂ ಉನ್ನತ ಹಂತಕ್ಕೆ ಬೆಳೆಯಲು ಇವು ಸಹಕಾರಿ.
ಬರವಣಿಗೆಯ ಕೌಶಲ್ಯ ಬೆಳೆಸಿಕೊಳ್ಳಿ : ನಿಮ್ಮ ಶಕ್ತಿ ಸಾಮಥ್ರ್ಯಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಅಥವಾ ಪ್ರಚಾರ ಪಡಿಸಲು ಬರವಣಿಗೆ ಅತ್ಯಂತ ಪ್ರಭಾವಿ ಮಾಧ್ಯಮ. ನಿಮ್ಮ ಭಾವನೆಗಳಿಗೆ, ಅಭಿಪ್ರಾಯಗಳಿಗೆ, ಜೀವನದ ಮಧುರ ಕ್ಷಣಗಳಿಗೆ ಬರವಣಿಗೆಯ ಸ್ವರೂಪ ನೀಡಿ. ಈ ಹವ್ಯಾಸವನ್ನು ವೃದ್ದಿಸಿಕೊಂಡರೆ ನಿಮ್ಮನ್ನು ನೀವು ಉನ್ನತ ಹಂತಕ್ಕೆ ಕೊಂಡೊಯ್ಯಬಹುದು. ನಿಮ್ಮ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳನ್ನು ಹಾಗೂ ಗುರಿಗಳನ್ನೂ ಸಹ ಪಟ್ಟಿಮಾಡಿ. ಇವು ನೀವು ಸರಿದಾರಿಯಲ್ಲಿ ನೆಡೆಯಲು ಸಹಕಾರಿಯಾಗುತ್ತವೆ. ಆದ್ದರಿಂದ ಸಮಯ ದೊರೆತಾಗಲೆಲ್ಲ  ಬರವಣಿಗೆಯಲ್ಲಿ ತೊಡಗಿಸಿಕೊಳ್ಳಿ.
ಕಿರುಚಿತ್ರ/ಸಾಕ್ಷ್ಯಚಿತ್ರ ನಿರ್ಮಿಸಿ : ಇತ್ತೀಚೆಗೆ ಯೂಟ್ಯೂಬ್‍ನಂತಹ ವೆಬ್‍ಸೈಟ್‍ಗಳಲ್ಲಿ ಅತ್ಯುತ್ತಮವಾದ ಕಿರುಚಿತ್ರಗಳು ಜನಪ್ರಿಯ ಆಗುತ್ತಿರುವುದನ್ನು ನೋಡಿದರೆ ವೀಕ್ಷಕರಿಗೆ ಕಿರುಚಿತ್ರದ ಜ್ವರ ಹಿಡಿದಿರುವಂತೆ ಭಾಸವಾಗುತ್ತದೆ. ಉತ್ತಮ ಸಂದೇಶಗಳನ್ನು ರವಾನಿಸಲು ವಿಡಿಯೋಗಳು ಅತ್ಯಂತ ಪ್ರಭಾವಿ ಮಾಧ್ಯಮಗಳಾಗಿವೆ. ಸ್ನೇಹಿತರ ಜೊತೆಗೂಡಿ ಸ್ವಸ್ಥ ಸಮಾಜಕ್ಕೆ ಪೂರಕವಾದ ಅಥವಾ ಪರಿಸರ ಕಾಳಜಿ ಕುರಿತ ಸಾಕ್ಷ್ಯಚಿತ್ರ ನಿರ್ಮಿಸಬಹುದು. ಸಾಮಾನ್ಯವಾಗಿ ಇಂದು ಬಹುತೇಕರ ಬಳಿ ಮಲ್ಟಿ ಮೀಡಿಯಾ ಮೋಬೈಲ್ ಇರುತ್ತದೆ. ಇಂತಹ ಮೊಬೈಲ್‍ಗಳಿಂದಲೇ ಚಿತ್ರೀಕರಣ ಮಾಡಿ 5-10 ನಿಮಿಷಗಳ ಕಿರುಚಿತ್ರ ನಿರ್ಮಿಸಬಹುದು. ಇದಕ್ಕೆ ಬೇಕಾದ ಥೀಮ್, ಸಂಭಾಷಣೆ ಇತ್ಯಾದಿಗಳನ್ನು ಸ್ನೇಹಿತರೇ ಸೇರಿ ಹೊಂದಾಣಿಕೆ ಮಾಡಿಕೊಂಡರೆ ಇನ್ನೂ ಉತ್ತಮ. ಇದೊಂದು ಉತ್ತಮ ಹವ್ಯಾಸವಾಗಿದ್ದು, ಸಾಮಾಜಿಕ ಪರಿವರ್ತನೆಯಲ್ಲಿ ತಂತ್ರಜ್ಞಾನದ ಸಹಾಯ ಪಡೆಯಲು ಸಹಕಾರಿಯಾಗಿದೆ.
ಸಮ್ಮರ್ ಕ್ಯಾಂಪ್ ನಡೆಸಿ : ನೀವು ವಾಸಿಸುವ ಪರಿಸರದಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗಾಗಿ ಸಮ್ಮರ್ ಕ್ಯಾಂಪ್ ನಡೆಸಿ. ಸಾಮಾನ್ಯವಾಗಿ ಖಾಸಗೀ ಅಥವಾ ನಗರ ಶಾಲೆಗಳ ಮಕ್ಕಳು ವಿವಿಧ ಕ್ಯಾಂಪ್‍ಗಳಲ್ಲಿ ಭಾಗವಹಿಸುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳು ಇದರಿಂದ ವಂಚಿತರಾಗಿರುತ್ತಾರೆ. ಈ ಕೊರತೆಯನ್ನು ನೀಗಿಸಲು ಹಾಗೂ ನಿಮ್ಮನ್ನು ಆಕ್ಟೀವ್ ಆಗಿಡಲು ಇಂತಹ ಕ್ಯಾಂಪ್‍ಗಳು ಸಹಕಾರಿ. ಇವು ನಿಮಗೆ ಗೌರವ ಸಮರ್ಪಣೆಯ ಅವಕಾಶಗಳು.
ಆಲ್ಬಂ ರಚಿಸಿ : ಹಳೆಯ ಚಿತ್ರಗಳನ್ನು, ಫೋಟೋಗಳನ್ನು, ಅಂಚೆಚೀಟಿಗಳನ್ನು, ವಿವಿಧ ದೇಶಗಳ ನೋಟುಗಳನ್ನು ನಾಣ್ಯಗಳನ್ನು ಸಂಗ್ರಹಿಸಿ ಆಲ್ಬಂ ತಯಾರಿಸಿ. ಇವು ಕಾಲಘಟ್ಟದ ಘಟನೆಗಳನ್ನು ಮೆಲುಕು ಹಾಕಲು ಇರುವ ಉತ್ತಮ ಚಟುವಟಿಕೆಗಳು.
ಹೊಸದನ್ನು ಕಲಿಯಿರಿ : ವಿಶೇಷವಾದುದನ್ನು ಮಾಡಲು ಅಥವಾ ಹೊಸ ಅಂಶಗಳನ್ನು ಕಲಿಯಲು ರಜಾವಧಿ ಅತ್ಯುತ್ತಮ ಅವಕಾಶ. ಅದು ಹೊಸ ಆಟವಾಗಿರಬಹುದು, ಹೊಸ ರುಚಿಯಾಗಿರಬಹುದು, ಸಂಗೀತ ಕಲಿಯುವುದು ಆಗಿರಬಹುದು ಅಥವಾ ಹೊಸ ಭಾಷೆ ಕಲಿಯುವುದು ಆಗಿರಬಹುದು. ಒಟ್ಟಾರೆ ಯಾವುದೇ ಧನಾತ್ಮಕ ಹೊಸ ಅಂಶ ಕಲಿಯಲು ಇರುವ ಉತ್ತಮ ಅವಕಾಶ ಕಳೆದುಕೊಳ್ಳಬೇಡಿ.
    ಮೇಲಿನ ಅಂಶಗಳಲ್ಲದೇ ನಿಮ್ಮ ವ್ಯಕ್ತಿತ್ವ ವೃದ್ದಿಸಲು ಸಹಕಾರಿಯಾದ ಇನ್ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳಿ. ಅವಕಾಶಗಳಿಗೆ ಕೊನೆಯಿಲ್ಲ ನಿಜ. ಆದರೆ ಇರುವ ಅವಕಾಶ ಕಳೆದುಕೊಂಡರೆ ಮತ್ತೆ ದೊರಕಲಾರದು ಎಂಬುದನ್ನು ನೆನಪಿಡಿ. ರಜೆಯನ್ನು ಸಂಪೂರ್ಣವಾಗಿ ಅರ್ಥಪೂರ್ಣವಾಗಿ ಕಳೆಯಿರಿ. ಮಸ್ತ್ ಮಜಾ ಮಾಡಿ. ಖುಷಿ ಪಡಿ.
ಆರ್.ಬಿ.ಗುರುಬಸವರಾಜ
ಹೊಳಗುಂದಿ(ಪೊ)
ಹಡಗಲಿ(ತಾ)
ಬಳ್ಳಾರಿ(ಜಿ) 583219
9902992905