August 17, 2015

ವೆಬ್ ಡಿಸೈನರ್ WORLD'S FIRST YOUNG WEB DESIGNER


 ದಿನಾಂಕ 12-08-2015ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ.

ಜಗತ್ತಿನ ಕಿರಿಯ ವೆಬ್ ಡಿಸೈನರ್

     ವೆಬ್ಸೈಟ್ಗಳನ್ನು ಸೃಜಿಸಲು .ಟಿ.ಯಂತಹ ಔಪಚಾರಿಕ ಶಿಕ್ಷಣ ಅಗತ್ಯ. ಇಂತಹ ಔಪಚಾರಿಕ ಶಿಕ್ಷಣದ ನೆರವಿಲ್ಲದೇ ವೆಬ್ಸೈಟ್ ಸೃಜಿಸುವುದು ಅಸಾಧ್ಯವೇ ಸರಿ. ಆದರೆಇದೂ ಸಾಧ್ಯ!’ ಎಂದು ಸಾಧಿಸಿ ತೋರಿಸಿದ್ದಾಳೆ ಶ್ರೀಲಕ್ಷ್ಮಿ ಸುರೇಶ್. ಅದೂ ಕೇವಲ ತನ್ನ ಎಂಟನೇ ವಯಸ್ಸಿನಲ್ಲಿ. ಜೊತೆಗೆ ಒಂದು .ಟಿ. ಕಂಪನಿಯ ಸಿ.. ಕೂಡಾ.
     ಶ್ರೀಲಕ್ಷ್ಮಿ ಸುರೇಶ್ ನೆರೆಯ ಕೇರಳ ರಾಜ್ಯದವಳು. ಪ್ರಸ್ತುತ ಕೇರಳದ ಕಾಲಿಕಟ್ ಸೇಂಟ್ ಜೋಸೆಫ್ ದೇವಗಿರಿ ಕಾಲೇಜಿನಲ್ಲಿ ಮೊದಲನೇ ವರ್ಷದ ಎಂ.ಬಿ. ಓದುತ್ತಿದ್ದಾಳೆ. ವಕೀಲರಾದ ತಂದೆ ಸುರೇಶ್ ಮೆನನ್ ಅವರ ಮಾತುಗಳಿಂದ ಸ್ಪೂರ್ತಿ ಪಡೆದು 8ನೇ ವಯಸ್ಸಿನಲ್ಲಿ ವೆಬ್ಸೈಟ್ ತಯಾರಿಸಿದಳು.
     2007ರಲ್ಲಿ 3ನೇತರಗತಿ ಓದುತ್ತಿದ್ದಾಗ ತನ್ನ ಶಾಲೆಗೊಂದು ವೆಬ್ಸೈಟ್ ಇಲ್ಲದಿರುವುದನ್ನು ಗಮನಿಸಿದ ಶ್ರೀಲಕ್ಷ್ಮಿ ಶಾಲೆಗಾಗಿ ವೆಬ್ಸೈಟ್ ತಯಾರಿಸುವ ಹುಚ್ಚು ಸಾಹಸಕ್ಕೆ ಕೈಹಾಕಿ ಯಶಸ್ವಿಯಾದಳು. ಅವಳ ಸಾಧನೆ ಇಡೀ ವಿಶ್ವದ ಗಮನ ಸೆಳೆಯಿತು. ಅದಕ್ಕಾಗಿ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಳು.
     “3ನೇ ವಯಸ್ಸಿನಲ್ಲೇ ಕಂಪ್ಯೂಟರ್ ಮೈಕ್ರೋಸಾಫ್ಟ್ ಪೇಂಟ್ ಮೂಲಕ ಚಿತ್ರ ರಚಿಸುವ ನಂತರ ಟೈಪಿಂಗ್ ಮಾಡುವ ಕೌಶಲ ಕಲಿತಳು. ಮುಂದೆ ನಮಗರಿವಿಲ್ಲದಂತೆ ಅವಳು ಉನ್ನತ ಹಂತಕ್ಕೆ ಬೆಳೆದಳು ಎಂದು ತಂದೆ ಸುರೇಶ್ ಅಭಿಮಾನದಿಂದ ಹೇಳುತ್ತಾರೆ.
     ಶಾಲೆಗಾಗಿ ವೆಬ್ಸೈಟ್ ತಯಾರಿಸಿದ ನಂತರ ತನ್ನದೇ ಆದ-ಡಿಸೈನ್ ಟೆಕ್ನಾಲಜಿಸ್ ಎಂಬ ವೆಬ್ಡಿಸೈನ್ ಕಂಪನಿಯೊಂದನ್ನು ಸ್ಥಾಪಿಸಿ ಅದರ ಸಿ.. ಆಗಿದ್ದಾಳೆ. ಹಾಗಾಗಿ ಜಗತ್ತಿನ ಕಿರಿಯ ಸಿ.. ಎಂಬ ಕೀರ್ತಿಗೂ ಭಾಜನಳಾಗಿದ್ದಾಳೆ. ಮಹತ್ಸಾಧನೆಗಾಗಿಅಸೋಸಿಯೇಷನ್ ಆಫ್ ಅಮೇರಿಕನ್ ವೆಬ್ಮಾಸ್ಟರ್ ಇವಳಿಗೆ ಸದಸ್ಯತ್ವ ನೀಡಿ ಗೌರವಿಸಿದೆ.
     ಕೇರಳ ಸರ್ಕಾರದ ಅಧಿಕೃತ ವೇಬ್ಸೈಟ್ ಸೇರಿದಂತೆ ಹಲವಾರು ಪ್ರಮುಖ ವೆಬ್ಸೈಟ್ಗಳನ್ನು ಸೃಜಿಸಿರುವ ಶ್ರೀಲಕ್ಷ್ಮಿ ಇಲ್ಲಿಯವರೆಗೆ ಒಟ್ಟು 150ಕ್ಕೂ ಹೆಚ್ಚು ವೆಬ್ಸೈಟ್ ರೂಪಿಸಿದ್ದಾಳೆ. ಈಗ ಓದಿನ ಕಡೆ ಹೆಚ್ಚು ಗಮನ ನೀಡಿದ್ದು ಮುಂದೆ -ಡಿಸೈನ್ ಕಂಪನಿಯನ್ನು ಜಗತ್ಪ್ರಸಿದ್ದ ಕಂಪನಿಯಾಗಿ ಬೆಳೆಸುವ ಕನಸು ಹೊಂದಿದ್ದಾಳೆ.
     ಅವಳ ವೆಬ್ಡಿಸೈನ್ ಬಗ್ಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗವೆಬ್ಸೈಟ್ ರಚಿಸುವುದು ಕಷ್ಟವೇನಲ್ಲ. ಕಂಪ್ಯೂಟರ್ ಬಗ್ಗೆ ಮೂಲಮಾಹಿತಿ ಗೊತ್ತಿರುವ ಯಾರು ಬೇಕಾದರೂ ವೆಬ್ಸೈಟ್ ರಚಿಸಬಹುದು. ಆದರೆ ಕ್ರಿಯೇಟಿವ್ ಆಗಿ ರೂಪಿಸುವುದು ಕಷ್ಟದ ಕೆಲಸ. ಇದಕ್ಕೆ ಸಹನೆ ಮತ್ತು ಸೃಜನಶೀಲತೆ ಮುಖ್ಯ ಎನ್ನುತ್ತಾಳೆ.
     ಭವಿಷ್ಯದಲ್ಲಿ ಎಲ್ಲರಿಗೂ ಅನುಕೂಲಕರವಾದ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ತಯಾರಿಸುವ ಆಸೆ ಹೊಂದಿದ್ದಾಳೆ. “ಬಡತನ ಹಾಗೂ ನಿರುದ್ಯೋಗಗಳು ನಮ್ಮ ಸಮಾಜಕ್ಕೆ ಅಂಟಿದ ಕಳಂಕಗಳು. ಬಡತನಕ್ಕೆ ನಿರುದ್ಯೋಗ ಮತ್ತು ಅನಕ್ಷರತೆಯೇ ಕಾರಣ ಹಾಗೂ ಅನಕ್ಷರತೆಯೇ ನಿರುದ್ಯೋಗದ ಮೂಲ. ಇವೆರಡನ್ನೂ ಹೊಡೆದೋಡಿಸಲು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎನ್ನುತ್ತಾಳೆ.
     ‘ಇಂದಿನ ಜಗತ್ತು ಸ್ಪರ್ಧಾತ್ಮಕವಾಗಿದ್ದು, ಸತತ ಪರಿಶ್ರದಿಂದ ಮಾತ್ರ ಸ್ಪರ್ಧೆಯಲ್ಲಿ ಗೆಲ್ಲಲು ಮತ್ತು ಗುರಿಯನ್ನು ತಲುಪಲು ಸಾಧ್ಯ ಎನ್ನುವ ಅವಳ ನಂಬಿಕೆ ನಮ್ಮ ಯುವಕರಿಗೆ ಸ್ಪೂರ್ತಿಯಾದೀತೇ? ಕಾದು ನೋಡೋಣ!. ಶ್ರೀಲಕ್ಷ್ಮಿಯನ್ನು ಅವರ ತಂದೆಯ ಮೊಬೈಲ್ ಸಂಖ್ಯೆ 09847070002 ಗೆ ಡಯಲ್ ಮಾಡಿ ಸಂಪರ್ಕಿಸಬಹುದು(ಸಂಜೆ 6ಗಂಟೆಯ ನಂತರ ಮಾತ್ರ).
    

ಶ್ರೀಲಕ್ಷ್ಮಿಯ ಮುಡಿಗೇರಿದ ಕೆಲವು ಪ್ರಶಸ್ತಿಯ ಗರಿಗಳು
* ಗ್ಲೋಬಲ್ ಇಂಟರ್ನೆಟ್ ಡೈರೆಕ್ಟರಿಸ್ ಅವಾರ್ಡ್(ಯು.ಎಸ್.)
* ವಲ್ರ್ಡ್ ವೆಬ್ ಅವಾರ್ಡ್ ಆಫ್ ಎಕ್ಸಲೆನ್ಸ್(ಯು.ಎಸ್.)
* ಸಿಕ್ಸ್ಟಿ ಪ್ಲಸ್ ಎಜುಕೇಷನ್ ಅವಾರ್ಡ್ ಆಫ್ ಎಕ್ಸಲೆನ್ಸ್(ಕೆನಡಾ)
* ಲಾ ಲುನಾ ನಿಕ್ ಬೆಸ್ಟ್ ಆಫ್ ವೆಬ್ ಅವಾರ್ಡ್(ಯು.ಕೆ)
* ಪೋಯಟಿಕ್ ಸೋಲ್ ಅವಾರ್ಡ್(ಬ್ರೆಜಿಲ್)
* ಅಲೋಹ ಅವಾರ್ಡ್ ಫಾರ್ ಎಕ್ಸಲೆನ್ಸ್ ವೆಬ್ಸೈಟ್(ಹವಾಯಿ)
* ಸ್ವದೇಶಿ ಸೈನ್ಸ್ ಮೂಮೆಂಟ್ ಎಕ್ಸಲೆನ್ಸ್ ಅವಾರ್ಡ್ 2007(ಭಾರತ)
* ಲಯನ್ಸ್ ಕ್ಲಬ್ ಬಿಗ್ ಅಚೀವರ್ ಅವಾರ್ಡ್ 2007(ಭಾರತ)
* ವಿಶೇಷ ಸಾಧನೆಗಾಗಿ ನ್ಯಾಷನಲ್ ಚೈಲ್ಡ್ ಅವಾರ್ಡ್ 2008(ಭಾರತ)

ಆರ್.ಬಿ.ಗುರುಬಸವರಾಜ ಹೊಳಗುಂದಿ


August 9, 2015

ಪಠ್ಯದ ಜೊತೆಗೆ ಸಹಪಠ್ಯವೂ ಇರಲಿ!

 ಜುಲೈ 2015ರ 'ಶಿಕ್ಷಣವಾರ್ತೆ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ.

ಪಠ್ಯದ ಜೊತೆಗೆ ಸಹಪಠ್ಯವೂ ಇರಲಿ!

    ಇಂದಿನ ಪಾಲಕರು ಅಂಕಗಳಿಸುವುದೇ ತಮ್ಮ ಮಕ್ಕಳ  ಮುಖ್ಯ ಗುರಿ ಎಂಬಂತೆ ಅವರನ್ನು ಬೆಳೆಸುತ್ತಿದ್ದಾರೆ. ಇದು ಮಕ್ಕಳಲ್ಲಿ ತೀವ್ರ ಒತ್ತಡವನ್ನು ಉಂಟುಮಾಡುತ್ತಿದೆ. ಹೋವರ್ಕ್, ಟ್ಯೂಷನ್‍ಗಳ ಹೆಸರಿನಲ್ಲಿ ಮಕ್ಕಳ ಆಟ, ಮನೊರಂಜನೆಗೆ ಕಡಿವಾಣ ಬೀಳುತ್ತಿದೆ. ಇದರಿಂದ ಮಕ್ಕಳಲ್ಲಿ ಖಿನ್ನತೆ, ಮಾನಸಿಕ ತೊಳಲಾಟಗಳಂತಹ ಮಾನಸಿಕ ಕಾಯಿಲೆಗಳು ಅಂಟಿಕೊಳ್ಳುತ್ತಿವೆ.
    ಪಠ್ಯ ಚಟುವಟಿಕೆಗಳು ಎಷ್ಟು ಪ್ರಮುಖವೋ ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಮುಖ್ಯ ಎಂಬುದು ಪಾಲಕರಿಗೆ ಇನ್ನೂ ಅರ್ಥವಾದಂತಿಲ್ಲ ಅಥವಾ ಅರ್ಥವಾದರೂ ಪ್ರತಿಷ್ಠೆಗಾಗಿ ಅಥವಾ ಅನಿವಾರ್ಯತೆಯ ಸೃಷ್ಟಿಗಾಗಿ ತಮ್ಮ ಮಕ್ಕಳ ಭವಿಷ್ಯವನ್ನು ತಾವೇ ಕರಾಳಕ್ಕೆ ನೂಕುತ್ತಿದ್ದಾರೆಯೇ? ಎಂಬ ಪ್ರಶ್ನೆ ಎದುರಾಗುತ್ತಿದೆ.
    ಯಾವುದೇ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಮುನ್ನುಗಲು ಶೈಕ್ಷಣಿಕ ಅರ್ಹತೆಯೊಂದಿಗೆ ಪಠ್ಯೇತರ ಚಟುವಟಿಕೆಗಳೂ ಅಗತ್ಯ. ವ್ಯಕ್ತಿಯ ಮನೋಸ್ಥೈರ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ ಪಠ್ಯೇತರ ಚಟುವಟಿಕೆಗಳು ಪೂರಕ ಎಂಬುದನ್ನು ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ ನಾವ್ಯಾರು ಈ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಲೇ ಇಲ್ಲ. ಮಕ್ಕಳ ಧನಾತ್ಮಕ ಬೆಳವಣಿಗೆಯ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬ ಪಾಲಕರೂ ಈ ಬಗ್ಗೆ ಆಲೋಚಿಸಿ ಅದರಂತೆ ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ತರಬಹುದು.
ಜೀವನ ಕೌಶಲ್ಯಗಳ ಕಲಿಕೆ : ಮಕ್ಕಳು ಹೊರಗಡೆ ಹೋಗಿ ಆಟ ಆಡುವುದರಿಂದ ವಿವಿಧ ರೀತಿಯ ಕೌಶಲ್ಯಗಳನ್ನು ಕಲಿಯುತ್ತಾರೆ. ಈ ಕೌಶಲ್ಯಗಳು ಮುಂದಿನ ಜೀವನಕ್ಕೆ ಅತ್ಯುಪಯುಕ್ತವಾದವುಗಳು. ಪಠ್ಯೇತರ ಚಟುವಟಕೆಗಳು ಯಾವುದೇ ಶಾಲೆ ಕಾಲೇಜುಗಳು ಕಲಿಸಲಾರದಂತಹ ಜೀವನ ಕೌಶಲ್ಯಗಳಾಗಿವೆ. ಸಾಕಷ್ಟು ಮಕ್ಕಳು ಒಂದೆಡೆ ಸೇರಿ ಆಟವಾಡುವುದರಿಂದ ಅವರಲ್ಲಿ ತಂಡಸ್ಪೂರ್ತಿ ಮತ್ತು ಕ್ರೀಡಾ ಮನೋಭಾವ ಬೆಳೆಯುತ್ತವೆ.
ಸಾಮಾಜಿಕ ಅಭಿವೃದ್ದಿ : ಸ್ನೇಹಿತರೊಂದಿಗಿನ ಪರಸ್ಪರ ಸಂವಹನ ಕೌಶಲ್ಯಗಳೇ ಸಾಮಾಜಿಕ ಕೌಶಲ್ಯಗಳಾಗಿರುತ್ತವೆ. ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಮಕ್ಕಳು ಸಾಕಷ್ಟು ಹೊರ ಸ್ನೇಹಿತರನ್ನು ಗಳಿಸುತ್ತಾರೆ ಮತ್ತು ಅವರೊಂದಿಗೆ ಬೆರೆಯುತ್ತಾರೆ. ಇದು ಮುಂದೆ ಟೀಂವರ್ಕ್ ಮಾಡಲು ಸಹಾಯ ಮಾಡುತ್ತದೆ. ಸಾರ್ವಜನಿಕವಾಗಿ ಮಾತನಾಡುವುದನ್ನು ಮತ್ತು ಭಾಗಿಯಾಗುವುದನ್ನು ಮಕ್ಕಳು ಕಲಿಯುತ್ತಾರೆ.
ಸಂಕೋಚ ಕಡಿಮೆಯಾಗುತ್ತದೆ : ನಿಮ್ಮ ಮಗು ತರಗತಿಯಲ್ಲಿ ಅಥವಾ ಅತಿಥಿಗಳ ಮುಂದೆ ನಿಂತು ಹಾಡು ಹೇಳಲು ಅಥವಾ ಪದ್ಯ ಹೇಳಲು ಸಂಕೋಚಪಡುತ್ತದೆಯೇ? ಹೌದು ಎಂದಾದರೆ ನಿಮ್ಮ ಮಗುವನ್ನು  ಹಾಡು, ನೃತ್ಯ, ಚಿತ್ರಕಲೆ ಅಥವಾ ಗುಂಪು ಆಟಗಳಲ್ಲಿ ತೊಡಗಲು ಪ್ರೋತ್ಸಾಹಿಸಿ. ಇದು ಅವರ ನಾಚಿಕೆ ಸ್ವಭಾವವನ್ನು ಹೋಗಲಾಡಿಸುತ್ತದೆ.
ದೈಹಿಕ ಬೆಳವಣಿಗೆ : ದೈಹಿಕ ಆರೋಗ್ಯ ಹೆಚ್ಚಿದರೆ ಮಾನಸಿಕ ಮತ್ತು ಆರೋಗ್ಯವೂ ವೃದ್ದಿಸುತ್ತದೆ. ಪಠ್ಯೇತರ ಚಟುವಟಕೆಗಳು ಮಕ್ಕಳನ್ನು ಸಧೃಢರನ್ನಾಗಿ ಬೆಳೆಸಲು ಸಹಕಾರಿ.
ಶೈಕ್ಷಣಿಕ ಸಾಧನೆಯೂ ವೃದ್ದಿ : ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಂಡರೆ ಪಟ್ಯ ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ ಎಂಬುದು ಪಾಲಕರ ತಪ್ಪು ಕಲ್ಪನೆಯಾಗಿದೆ. ಆದರೆ ಶಾಲಾ ವೇಳೆಯ ನಂತರ ನಿಗದಿತ ಅವಧಿಯವರೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡ ಮಕ್ಕಳು  ಇತರ ಮಕ್ಕಳಿಗಿಂತ ಹೆಚ್ಚು ಶೈಕ್ಷಣಿಕವಾಗಿ ಮುಂದೆ ಇರುವುದು ಸಾಬೀತಾಗಿದೆ. ಪಠ್ಯೇತರ ಚಟುವಟಿಕೆಗಳು ಮಕ್ಕಳನ್ನು ಓದಿನ ಕಡೆಗೆ ಆಸಕ್ತರನ್ನಾಗಿ ಮಾಡುತ್ತದೆ.
ಸಮಯ ಪ್ರಜ್ಞೆ :  ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮಗು ಸಮಯಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತದೆ.  ಶಾಲಾ ದಿನಗಳಲ್ಲಿ ಬೆಳೆಸಿಕೊಂಡ ಈ ಸಮಯಪ್ರಜ್ಞೆ ದೊಡ್ಡವರಾದ ನಂತರವೂ ಮುಂದುವರೆಯುತ್ತದೆ.
ಒತ್ತಡ ನಿವಾರಿಸುತ್ತದೆ : ಟ್ಯೂಷನ್, ಹೋಂವರ್ಕ್, ಪರೀಕ್ಷೆಗಳು ಮಕ್ಕಳಿಗೆ ಮಾನಸಿಕ ಒತ್ತಡ ನೀಡುತ್ತಿವೆ. ಇದರಿಂದಾಗಿ ಮಕ್ಕಳು ಓದಿನ ಕಡೆಗೆ ಹೆಚ್ಚು ಗಮನ ನೀಡಲಾಗುವುದಿಲ್ಲ. ಮತ್ತು ಪರೀಕ್ಷೆಗಳಲ್ಲಿ ಮಾನಸಿಕವಾಗಿ ಒತ್ತಡ ಅನುಭವಿಸುವಂತಾಗುತ್ತದೆ. ಪಠ್ಯೇತರ ಚಟುವಟಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ನಿರಾಳವಾಗಿ ಒತ್ತಡ ಮುಕ್ತರಾಗುತ್ತಾರೆ.
    ಹಾಗಾಗಿ ಮಕ್ಕಳಿಗೆ ಇಷ್ಟವಾಗುವ ಪಠ್ಯೇತರ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವ ಮೂಲಕ ಅವರಲ್ಲಿ ಮಾನಸಿಕ ಸ್ಥೈರ್ಯ ಹಾಗೂ ಸಮಸ್ಯೆ ಎದುರಿಸುವ ಕೌಶಲ್ಯಗಳನ್ನು ಬೆಳೆಸಬಹುದಾಗಿದೆ. ಮಕ್ಕಳ ಹವ್ಯಾಸಗಳೇ ಅವರಿಗೆ ಮಾರ್ಗದರ್ಶಿಯೂ ಆಗಬಹುದು. ಆಗ ಮಾತ್ರ ನೀವೊಬ್ಬ ಮಕ್ಕಳ ಮನಸ್ಸನ್ನು ಅರಿತ ಪಾಲಕರಾಗುತ್ತೀರಿ.
                                                                                                    ಆರ್.ಬಿ.ಗುರುಬಸವರಾಜ