November 30, 2016

ಮಕ್ಕಳ ಹಕ್ಕುಗಳು CHILD RIGHTS CLUB

ದಿನಾಂಕ 24-10-2016ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಮಕ್ಕಳ ಗ್ರಾಮಸಭೆ

ದಿನಾಂಕ 19-11-2016ರ ವಿಜಯವಾಣಿ ಹಾಗೂ 21-11-2016ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ






ಗ್ಲಿಸರಿನ್ USES OF GLISERINE

ದಿನಾಂಕ 12-10-2016ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ


ಟೈಂ ಮ್ಯಾನೇಜ್ ಮೆಂಟ್TIME MANEGEMENT

ದಿನಾಂಕ 19-10-2016ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಟೈಂ ಅನ್ನೋದು ಪಕ್ಕಾ 420 ಅಲ್ಲ!

ಫುಟ್ ವೇರ್ ಡಿಸೈನ್ ಕೋರ್ಸ್ FOOTWEAR DESIGN COURSES

ದಿನಾಂಕ 28-09-2016ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಫುಟ್ ವೇರ್ ಡಿಸೈನ್ ಕೋರ್ಸ್

ಗೊಣ್ಣಿಗನೂರು ಶಾಲೆ GONNIGANUR SCHOOL RAICHURE

ದಿನಾಂಕ 8-9-2016ರ ಪ್ರಜಾವಾಣಿಯ ಸಹಪಾಠಿಯಲ್ಲಿ ಪ್ರಕಟವಾದ ನನ್ನ ಬರಹ

ಬಿಸಿಲ ನಾಡಲ್ಲಿ ಮಲೆನಾಡ ಶಾಲೆ

ಬಲಗೊಳ್ಳಲಿ ಶಾರೀರಿಕ ಶಿಕ್ಷಣ STRENGTHENING PHYSICAL EDUCATION

ದಿನಾಂಕ 26-09-2016ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಬಲಗೊಳ್ಳಲಿ ಶಾರೀರಿಕ ಶಿಕ್ಷಣ

ನೆಪ ಹೇಳಬೇಡಿ NEPASITIES

ದಿನಾಂಕ 12-10-2016ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಕುಂಟುನೆಪ ತೋರದಿರಿ

ನಂಬಿಕೆಯ ನಿಗೂಢತೆ EFFECTS OF TRUST

ದಿನಾಂಕ 30-08-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಬರಹ

ನಂಬಿಕೆಯ ನಿಗೂಢತೆ


ಗುಹೆ ಗಮ್ಮತ್ತು CAVES

ದಿನಾಂಕ 30-07-2016ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಗುಹೆ ಗಮ್ಮತ್ತು



June 3, 2016

ಕುಗ್ರಾಮದಲ್ಲೊಬ್ಬ ಆದರ್ಶ ಶಿಕ್ಷಕ MODEL TEACHER KOTRESH

ದಿನಾಂಕ 26-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.

ಕುಗ್ರಾಮದಲ್ಲೊಬ್ಬ ಆದರ್ಶ ಶಿಕ್ಷಕ 


ಬಿರುಬಿಸಿಲಿಗೆ ಹೆಸರುವಾಸಿಯಾದ ರಾಯಚೂರು ಜಿಲ್ಲೆಯಲ್ಲೊಂದು ಖಾಸಗೀ ಹಾಗೂ ಮಲೆನಾಡ ಶಾಲೆಗಳನ್ನು ಮೀರಿಸುವಂತಹ ಶಾಲೆಯೊಂದಿದೆ. ಅದುವೇ ಸಿಂಧನೂರು ತಾಲೂಕಿನ ಕುಗ್ರಾಮ ಗೊಣ್ಣಿಗನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ.  ಈಗ ಅಲ್ಲಿ 300 ಕ್ಕೂ ಹೆಚ್ಚಿನ ಮರಗಳು ಫಲ ಮತ್ತು ನೆರಳು ನೀಡಲು ಸಜ್ಜಾಗಿವೆ. ಇದಕ್ಕಿಂತ ಮುಖ್ಯವಾಗಿ ಇಡೀ ಗ್ರಾಮವೀಗ ಬಯಲು ಶೌಚಮುಕ್ತ, ಹೊಗೆ ರಹಿತ ಗ್ರಾಮ ಹಾಗೂ ಸಂಪೂರ್ಣ ಸೋಲಾರ್ ಗ್ರಾಮವಾಗಿದೆ. ಇದೆಲ್ಲಾ ಒಬ್ಬ ಶಿಕ್ಷಕನಿಂದ ಎಂದರೆ ಆಶ್ಚರ್ಯವಾಗುತ್ತದೆ. ನಂಬಲು ಅಸಾಧ್ಯ ಎನ್ನುವಂತಾಗುತ್ತದೆ. ಶಿಕ್ಷಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲಿನ ಶಿಕ್ಷಕರಾದ ಕೊಟ್ರೇಶ್ ಹಿರೇಮಠ ಅವರೇ ಸಾಕ್ಷಿ. 
2004ಕ್ಕೂ ಮುಂಚೆ ಅದನ್ನು ಶಾಲೆ ಎನ್ನುವಂತಿರಲಿಲ್ಲ. ಕಟ್ಟಡದ ಸುತ್ತ ಬೆಳೆದ ಮುಳ್ಳು ಕಂಟೆಗಳು, ಕಳೆ ಗಿಡಗಳು, ಕಸದ ತಿಪ್ಪೆಗಳು, ಚರಂಡಿ ನೀರಿನ ಗುಂಡಿಗಳು. ಅಕ್ಷರಶಃ ಅದು ಶಾಲೆ ಎನ್ನುವ ಬದಲು ಪಾಳು ಕಟ್ಟಡ ಎನ್ನುವಂತಿತ್ತು. ಇಷ್ಟೆಲ್ಲಾ ಸಮಸ್ಯೆಗಳಿರುವ ಶಾಲೆಗೆ 2004ರಲ್ಲಿ ಹೊಸದಾಗಿ ಕೊಟ್ರೇಶ್ ಅವರು ಶಿಕ್ಷಕರಾಗಿ ನೇಮಕಗೊಳ್ಳುತ್ತಾರೆ. ಇವರನ್ನು ಸೇವೆಗೆ ಸೇರಿಕೊಳ್ಳಲು ಇನ್ನೊಬ್ಬ ಶಿಕ್ಷಕರೂ ಸಹ ಇಲ್ಲ. 
       ಇಂತಹ ಶಾಲೆಯ ವಾತಾವರಣ ನೋಡಿದ ಶಿಕ್ಷಕರಿಗೆ ಶಾಲೆಯ ಸಹವಾಸವೇ ಬೇಡ, ನೌಕರಿಯೂ ಬೇಡ ಎನ್ನಿಸಿತು. ಆದರೂ ಗಟ್ಟಿ ಮನಸ್ಸು ಮಾಡಿ ಸುಂದರ ಶಾಲೆಯನ್ನಾಗಿಸುವ ಪಣ ತೊಡುತ್ತಾರೆ. ಯೋಜನೆ ಸಿದ್ದ ಪಡಿಸುತ್ತಾರೆ. ಶ್ರಮವಹಿಸಿ ಶ್ರದ್ದೆಯಿಂದ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ. 
ಸಮುದಾಯದ ಸಹಭಾಗಿತ್ವ
              ಶಾಲೆಯ ಸುತ್ತಮುತ್ತ ಇದ್ದ ಮೇವಿನ ಬಣವೆ, ತಿಪ್ಪೆಗಳನ್ನು ತೆರವುಗೊಳಿಸುವುದು ಸವಾಲಾಗಿತ್ತು. ತೆರವುಗೊಳಿಸುವಾಗ ಕೆಲವು ವೇಳೆ ಅವುಗಳ ಮಾಲೀಕರೊಂದಿಗೆ ವಾಗ್ವಾದವೂ ನಡೆದಿತ್ತು. ಆದರೂ ದೃತಿಗೆಡದೇ ಸಮುದಾಯದ ಸಹಕಾರ ಪಡೆದು ಬಣವೆ ತಿಪ್ಪೆಗಳನ್ನು ತೆರವುಗೊಳಿಸುವಲ್ಲಿ ಸಫಲರಾದರು. ಒತ್ತುವರೆಯಾಗಿದ್ದ 240ಚ.ಮೀ ಶಾಲಾ ಜಾಗವನ್ನು ಮರುವಶಪಡಿಸಿಕೊಂಡ ನಂತರ ತಂತಿಬೇಲಿ ನಿರ್ಮಿಸಿದರು. 2006ರಲ್ಲಿ ಶಾಲಾ ಆವರಣಕ್ಕೊಂದು ನಿಶ್ಚಿತ ಎಲ್ಲೆ ಹಾಗೂ ಭದ್ರತೆ ದೊರೆತ ಮೇಲೆ ಗಿಡಗಳನ್ನು ನೆಡಲು ಪ್ರಾರಂಭಿಸಿದರು. ನೀರಿನ ಕೊರತೆಯಿಂದ ಗಿಡಗಳನ್ನು ಬೆಳೆಸುವುದು ತೊಂದರೆಯಾಗಿತ್ತು. ವಿದ್ಯಾರ್ಥಿಗಳಿಂದ ಗಿಡಗಳಿಗೆ ನೀರುಣಿಸುವುದು ಸಮಸ್ಯೆಯಾದಾಗ ಗ್ರಾಮಸ್ಥರ ಸಹಕಾರದಿಂದ 2008ರಲ್ಲಿ ಪೈಪ್‍ಲೈನ್ ವ್ಯವಸ್ಥೆ ಮಾಡಿದರು. 
       ಅಂತೆಯೇ ಮಕ್ಕಳಿಗೆ ಬಿಸಿಯೂಟಕ್ಕಾಗಿ ತಟ್ಟೆಲೋಟ ಸಂಗ್ರಹಿಸಿದರು. ಎಲ್ಲಾ ಮಕ್ಕಳಿಗೂ ಶಾಲಾ ಬ್ಯಾಗ್, ನೋಟ್ ಪುಸ್ತಕ, ಕಲರ್ ಪೆನ್ಸ್, ಟೈ-ಬೆಲ್ಟ್, ಕಂಪ್ಯೂಟರ್, ಟಿ.ವಿ, ಡೆಸ್ಕ್, ಪರೀಕ್ಷೆ ಬರೆಯಲು ಪ್ಯಾಡ್‍ಗಳನ್ನೂ ದಾನಿಗಳಿಂದ ಸಂಗ್ರಹಿಸಿದ್ದಾರೆ. ಏಕೋಪಾಧ್ಯಾಯ ಶಿಕ್ಷಕರಾದ ಕೊಟ್ರೇಶ್ ಅವರು ಬೋಧನೆಯಲ್ಲೂ ವಿಶಿಷ್ಠತೆ ಮೆರೆದಿದ್ದಾರೆ. ಪ್ರತಿವರ್ಷವೂ ಶೇಕಡಾ70 ರಷ್ಟು 5ನೇ ತರಗತಿ ಮಕ್ಕಳು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಆದರ್ಶ, ನವೋದಯದಂತಹ ವಿವಿಧ  ವಸತಿ ಶಾಲೆಗಳಿಗೆ ಆಯ್ಕೆಯಾಗುತ್ತಾರೆ. 
ಬದಲಾಯಿತು ಇಡೀ ಹಳ್ಳಿಯ ಚಿತ್ರಣ
         ಅಂದು ಕುಗ್ರಾಮ ಎಂಬ ಕುಖ್ಯಾತಿ ಹೊಂದಿದ್ದ ಗೊಣ್ಣಿಗನೂರು ಇಂದು ಇಡೀ ರಾಜ್ಯದಲ್ಲಿಯೇ ಅತ್ಯುತ್ತಮ ಮಾದರಿ ಗ್ರಾಮವಾಗಲು ಸಜ್ಜಾಗುತ್ತಿದೆ. ಪ್ರಸ್ತುತ ಗ್ರಾಮದಲ್ಲಿ 92 ಮನೆಗಳಿದ್ದು, ಸಿಂಧನೂರಿನ ರುದ್ರಗೌಡ ಪಾಟೀಲ್ ಪ್ರತಿಷ್ಠಾನದ ನೆರವಿನೊಂದಿಗೆ  ಬಯಲು ಶೌಚಮುಕ್ತ ಗ್ರಾಮವಾಗಿ ಘೋಷಣೆಯಾಗಿದೆ. ಈ ಘೋಷಣೆ ಕೇವಲ ದಾಖಲೆಯಲ್ಲಿ ಅಲ್ಲ. ಪ್ರತಿ ಕುಟುಂಬಗಳು ಶೌಚಾಲಯ ಬಳಸುತ್ತಿದ್ದಾರೆ. ಅಂತೆಯೇ ಸಿಂಧನೂರಿನ ಸೆಲ್ಕೋ ಸೋಲಾರ್ ನೆರವಿನೊಂದಿಗೆ ಪ್ರತೀ ಮನೆಗೂ ಸೋಲಾರ್ ವಿದ್ಯುತ್ ವ್ಯವಸ್ಥೆ ಪೂರ್ಣಗೊಂಡಿದೆ. ಅಲ್ಲದೇ ಸಿಂಧನೂರಿನ ಶ್ರೀಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸೀಸ್ ಇವರ ಸಹಕಾರದಿಂದ ಇಡೀ ಗ್ರಾಮ ಹೊಗೆ ಮುಕ್ತ ಗ್ರಾಮವಾಗಿದೆ. ಈಗಾಗಲೇ ಗ್ರಾಮದಲ್ಲಿ ಸಂಪೂರ್ಣ ಚರಂಡಿ ವ್ಯವಸ್ಥೆ ಉತ್ತಮ ಗುಣಮಟ್ಟದ ಸಿ.ಸಿ.ರಸ್ತೆಗಳು ಪ್ರಗತಿಯಲ್ಲಿವೆ. ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ಶಿಕ್ಷಕರಿಂದ ಎಂಬುದು ಗ್ರಾಮಸ್ಥರ ಅಭಿಮತ. 
ಪಬ್ಲಿಕ್ ಹೀರೋ
             ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಬಾವಿಹಳ್ಳಿ ಗ್ರಾಮದವರಾದ ಕೊಟ್ರೇಶ್ ಅವರು ಕೇವಲ ಸಾಮಾನ್ಯ ಶಿಕ್ಷಕರಲ್ಲ. ಅವರೊಬ್ಬ ಪಬ್ಲಿಕ್ ಹೀರೋ ಆಗಿ ರೂಪುಗೊಂಡಿದ್ದಾರೆ. ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಉದಾರ ಸಹಾಯ ಮಾಡಿದ್ದಾರೆ. ಎಂ.ಎ, ಬಿ.ಇಡಿ ಪದವಿ ಪಡೆದ ಅವರು ಈಗಲೂ ಗ್ರಾಮದ ಉನ್ನತ ವ್ಯಾಸಂಗದಲ್ಲಿ ತೊಡಗಿದ ಮಕ್ಕಳಿಗೆ ಉಚಿತ ಮನೆಪಾಠ ಮಾಡುವ ಮೂಲಕ ಅವರ ಭವಿಷ್ಯದ ಶಿಕ್ಷಣಕ್ಕೆ ಮಾರ್ಗದರ್ಶಿಯಾಗಿದ್ದಾರೆ.  ಶಿಕ್ಷಕರ ಸೇವೆಯನ್ನು ಗಮನಿಸಿದ ಶಿಕ್ಷಣ ಇಲಾಖೆ ಸದ್ರಿ ಶಿಕ್ಷಕರಿಗೆ 2015ರಲ್ಲಿ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ ನೀಡಿ ಗೌರವಿಸಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದ ಪಬ್ಲಿಕ್ ಚಾನಲ್‍ನವರು ದಿನಾಂಕ 17-03-2016 ರಂದು ‘ಪಬ್ಲಿಕ್ ಹೀರೋ’ ಕಾರ್ಯಕ್ರಮದಲ್ಲಿ ಇವರ ಸೇವೆಯ ಬಗ್ಗೆ ಕಾರ್ಯಕ್ರಮ ಭಿತ್ತರಿದ್ದಾರೆ. ಈ ಕಾರ್ಯಕ್ರಮದ ನಂತರ ಶಾಲೆಗೆ ದಾನಿಗಳ ಸಂಖ್ಯೆ ಹೆಚ್ಚಾಗಿದೆ. ಚೆಕ್, ಡಿ.ಡಿಗಳ ಮೂಲಕ ಹಣವನ್ನು ಅಥವಾ ಅವಶ್ಯಕ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡುತ್ತಲಿದ್ದಾರೆ. ಜೊತೆಗೆ ಗ್ರಾಮಕ್ಕೆ ಭೇಟಿ ನೀಡುವ ವೀಕ್ಷಕರ ಸಂಖ್ಯೆಯೂ ಹೆಚ್ಚಿದೆ ಎನ್ನುತ್ತಾರೆ  ಗ್ರಾಮಸ್ಥರು. ಗುಡಿಸಲು ಮುಕ್ತ ಗ್ರಾಮವನ್ನಾಗಿಸಲುವ ಭವಿಷ್ಯದ ಯೋಜನೆ ಕೊಟ್ರೇಶ್ ಹಿರೇಮಠ ಅವರದು. ಹೀಗೆ ವಿಭಿನ್ನ ವ್ಯಕ್ತಿತ್ವದ ಮೂಲಕ ಕೊಟ್ರೇಶ್ ಇತರರಿಗೆ ಪ್ರೇರಣೆಯಾಗಿದ್ದಾರೆ. 
ಆರ್.ಬಿ.ಗುರುಬಸವರಾಜ

ಕೇಶ ರಕ್ಷಣೆಗೆ ಹಾಗಲಕಾಯಿ ಜ್ಯೂಸ್

ದಿನಾಂಕ 23-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.

ಕೇಶ ರಕ್ಷಣೆಗೆ  ಹಾಗಲಕಾಯಿ ಜ್ಯೂಸ್


ಆಯುರ್ವೇದ ವೈದ್ಯ ಪದ್ದತಿಯಲ್ಲಿ ಹಾಗಲಕಾಯಿ ತನ್ನದೇ ಆದ ಪ್ರಮುಖ ಸ್ಥಾನ ಪಡೆದಿದೆ. ಇದು ರುಚಿಯಲ್ಲಿ ಕಹಿಯಾದರೂ ಆರೋಗ್ಯಕ್ಕೆ ಸಿಹಿಯನ್ನುಂಟು ಮಾಡುತ್ತದೆ. ಮಧುಮೇಹಿ ರೋಗಿಗಳಿಗಂತೂ ಹಾಗಲಕಾಯಿ ಅತ್ಯುತ್ತಮ ತರಕಾರಿಯಾಗಿದೆ.
‘ಮೊಮೊರ್ಡಿಕಾ ಚಾರಂಟಿಯಾ’ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಹಾಗಲಕಾಯಿ ಹೆಚ್ಚಾಗಿ ಏಷಿಯಾ, ದಕ್ಷಿಣ ಅಮೇರಿಕಾ ಹಾಗೂ ಆಫ್ರಿಕಾದ ಉಷ್ಣವಲಯಗಳಲ್ಲಿ ದೊರೆಯುತ್ತದೆ. ಇದು ಭಾರತ ಮೂಲದ ತರಕಾರಿಯಾಗಿದ್ದು ಚೀನಾಕ್ಕೆ ವಲಸೆ ಹೋಯಿತು. ನಂತರ ಅಲ್ಲಿಂದ ವಿವಿಧ ರಾಷ್ಟ್ರಗಳಿಗೆ ಪ್ರಸಾರವಾಯಿತು.
ಹಾಗಲಕಾಯಿ ಕೇವಲ ಚರ್ಮ ಮತ್ತು ಉತ್ತಮ ಆರೋಗ್ಯಕ್ಕೆ ಅಲ್ಲದೇ ಕೂದಲಿನ ವಿವಿಧ ಸಮಸ್ಯೆಗಳಿಗೂ ಸೂಕ್ತ ಔಷಧವಾಗಿದೆ. ಈ ಕುರಿತ ಒಂದಷ್ಟು ಟಿಪ್ಸ್ ಇಲ್ಲಿವೆ.
ಕಪ್ಪು ಕೂದಲಿಗಾಗಿ : ಕೂದಲಿನ ಕಪ್ಪು ಬಣ್ಣವನ್ನು ಕಾಪಾಡಲು ಮತ್ತು ನಯವಾದ ಕೂದಲನ್ನು ಪಡೆಯಲು ಹಾಗಲಕಾಯಿ ರಸ ಅತ್ಯುತ್ತಮವಾದುದು. 
ಬೇಕಾಗುವ ಸಾಮಗ್ರಿಗಳು: (1)ಅಡುಗೆ ಎಣ್ಣೆ (2)ಹಾಗಲಕಾಯಿ (3) ಕೊಬ್ಬರಿ ಎಣ್ಣೆ
ವಿಧಾನ : ಒಂದು ಹಾಗಲಕಾಯಿಯನ್ನು ಚಿಕ್ಕ ಚಿಕ್ಕ ಹೋಳುಗಳಾಗಿ ಕತ್ತರಿಸಿ 4 ಚಮಚ ಅಡುಗೆ ಎಣ್ಣೆಯಲ್ಲಿ ಹಾಕಿ 4 ದಿನಗಳವರೆಗೆ ನೆನೆಯಲು ಬಿಡಿ. 4 ದಿನಗಳ ನಂತರ ಎಣ್ಣೆಯಲ್ಲಿನ ಹೋಳುಗಳನ್ನು ಬಾಣಲೆಗೆ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಬೇಕು. ಅದು ತಣ್ಣಗಾದ ನಂತರ ಕೊಬ್ಬರಿ ಎಣ್ಣೆ ಹಾಕಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ತಲೆಗೆ ಹಚ್ಚಿಕೊಳ್ಳಬೇಕು. 15-20 ನಿಮಿಷಗಳ ನಂತರ ಕೂದಲನ್ನು ಸ್ವಚ್ಚವಾಗಿ ತೊಳೆಯಬೇಕು. ನಿಯಮಿತವಾಗಿ ಈ ಪ್ರಕ್ರಿಯೆ ಪುನರಾವರ್ತಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
ಕೂದಲು ಉದುರುವುದನ್ನು ತಡೆಯಲು :  ಸ್ವಚ್ಚವಾಗಿ ತೊಳೆದ ಹಾಗಲಕಾಯಿ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ನಂತರ ಸ್ವಲ್ಪ ನೀರನ್ನು ಹಾಕಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಈ ಪೇಸ್ಟನ್ನು ನೆತ್ತಿಯ ಭಾಗಕ್ಕೆ ಅಥವಾ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಬೇಕು. 15-20 ನಿಮಿಷಗಳ ನಂತರ ತಲೆಸ್ನಾನ ಮಾಡಬೇಕು. ವಾರಕ್ಕೆ 2 ಬಾರಿ ಈ ರೀತಿ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.
ತಲೆಹೊಟ್ಟು ನಿವಾರಿಸಲು : ಇಂದಿನ ಆಹಾರ ಸೇವನೆಯ ಪದ್ದತಿಗಳಿಂದ ತಲೆಹೊಟ್ಟು ಸಾಮಾನ್ಯವಾದ ಕೂದಲಿನ ಸಮಸ್ಯೆಯಾಗಿದೆ. ಅದರ ನಿವಾರಣೆಗೆ ಹಾಗಲಕಾಯಿ ಉತ್ತಮ ಪರಿಹಾರವಾಗಿದೆ.
ಬೇಕಾಗುವ ಸಾಮಗ್ರಿಗಳು: (1) ಹಾಗಲಕಾಯಿ (2) ಜೀರಿಗೆ
ವಿಧಾನ : ಮೊದಲು ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ರುಬ್ಬಿ ಕಾಲು ಕಪ್ ರಸ ತಯಾರಿಸಿಕೊಳ್ಳಿ. ಅದಕ್ಕೆ 2 ಚಮಚ ಜೀರಿಗೆ ಪುಡಿಯನ್ನು ಚೆನ್ನಾಗಿ ಕಲಸಿ ಲತೆಗೆ ಹಚ್ಚಿಕೊಳ್ಳಿ. 15-20 ನಿಮಿಷಗಳ ನಂತರ ಸ್ವಚ್ಚವಾದ ನೀರಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೊಮ್ಮೆ ಈ ಪ್ರಕ್ರಿಯೆ ಮುಂದುವರೆಸಿ. ಉತ್ತಮ ಫಲಿತಾಂಶ ದೊರೆಯುತ್ತದೆ.
ಒರಟು ಕೂದಲಿನಿಂದ ಮುಕ್ತಿ ಪಡೆಯಲು : ತಾಜಾ ಹಾಗಲಕಾಯಿಯ ಪೇಸ್ಟನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ಸ್ವಚ್ಚವಾದ ನೀರಿನಿಂದ ತೊಳೆಯಬೇಕು. ತಿಂಗಳಿಗೆ 2 ಬಾರಿ ಈ ರೀತಿ ಮಾಡುವುದರಿಂದ ನಯವಾದ ಕೂದಲನ್ನು ಹೊಂದುತ್ತೀರಿ.
ಬಾಲನೆರೆ ತಡೆಯಲು : ಹಾಗಲಕಾಯಿ ರಸವನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ತಲೆಸ್ನಾನ ಮಾಡಬೇಕು. 10 ದಿನಗಳಿಗೊಮ್ಮೆ ಈ ಪ್ರಕ್ರಿಯೆ ಪುನರಾವರ್ತನೆ ಮಾಡುವುದರಿಂದ ಬಾಲನೆರೆ ತಡೆಯಬಹುದು.
ಹೊಳೆಯುವ ಕೂದಲಿಗಾಗಿ : ಒಂದು ಕಪ್ ಹಾಗಲಕಾಯಿ ರಸಕ್ಕೆ ಸ್ವಲ್ಪ ಮೊಸರು ಸೇರಿಸಿ ಕೂದಲಿಗೆ ಹಚ್ಚಿಕೊಂಡು 30 ನಿಮಿಷಗಳ ನಂತರ ಕೂದಲನ್ನು ಚೆನ್ನಾಗಿ ತೊಳೆಯಬೇಕು. ತಿಂಗಳಿಗೆ 2 ಬಾರಿ ಈ ರೀತಿ ಮಾಡುವುದರಿಂದ ಹೊಳೆಯುವ ರೇಶಿಮೆಯಂತಹ ಕೂದಲು ನಿಮ್ಮದಾಗುತ್ತದೆ.

ಆರ್.ಬಿ.ಗುರುಬಸವರಾಜ.


ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸೋಣ EXAM PREPARE

ಏಪ್ರಿಲ್ 2016ರ 'ಗುರುಮಾರ್ಗ'ದಲ್ಲಿ ಪ್ರಕಟವಾದ ನನ್ನ ಕಿರುಬರಹ

ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸೋಣ


ವರ್ಷಾಂತ್ಯಕ್ಕೆ ನಡೆಯುವ ಪರೀಕ್ಷೆ ಕೇವಲ ಮಕ್ಕಳ ಭವಿಷ್ಯಕ್ಕೆ ಅಲ್ಲ. ಅದು ಶಿಕ್ಷಕರ ಹಾಗೂ ಶಾಲಾ ಪರಿಸರಗಳ ಗುಣಮಟ್ಟದ ಪ್ರತೀಕ ಎಂದರೆ ತಪ್ಪಲ್ಲ. ಇತ್ತೀಚೆಗೆ ವಾರ್ಷಿಕ ಫಲಿತಾಂಶವೇ ಶಾಲಾ ಮಾನಕಗಳಾಗಿರುವುದು ನಮ್ಮ ದುರ್ದೈವ. ಶಿಕ್ಷಕರಾದ ನಾವು ಈ ವ್ಯವಸ್ಥೆಗೆ ಹೊಂದಿಕೊಂಡು ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವುದು ಅನಿವಾರ್ಯ. 
ಪ್ರಸ್ತುತ ಶಿಕ್ಷಕರ ಮುಂದಿರುವ ಬಹುದೊಡ್ಡ ಸವಾಲು ಎಂದರೆ ಉತ್ತಮ ಫಲಿತಾಂಶದೊಂದಿಗೆ ಶಾಲೆಯನ್ನು ಮುನ್ನಡೆಸುವುದು. ಉತ್ತಮ ಫಲಿತಾಂಶ ಪಡೆಯಲು ಮಕ್ಕಳನ್ನು ಪರೀಕ್ಷೆಗೆ ಉತ್ತಮವಾಗಿ ಸಿದ್ದಪಡಿಸುವುದು ನಮ್ಮೆಲ್ಲರ ಮೇಲಿನ ಗುರುತರ ಹೊಣೆಗಾರಿಕೆಯಾಗಿದೆ. ವರ್ಷದುದ್ದಕ್ಕೂ ಕಲಿಕೆ-ಬೋಧನೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದರೂ ಪರೀಕ್ಷೆಯ ವೇಳೆ ಯಾವ ಮಕ್ಕಳ ಫಲಿತಾಂಶ ಏನಾಗುವುದೋ ಎಂಬ ಆತಂಕ ಸಹಜ. ಈ ಆತಂಕ ನಿವಾರಣೆಗಾಗಿ ಪ್ರತಿಯೊಬ್ಬ ಶಿಕ್ಷಕರೂ ಕೆಲವು ಯೋಜಿತ ತಂತ್ರಗಳನ್ನು ಅನುಸರಿಸುವ ಮೂಲಕ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. 
ಫೆಬ್ರವರಿ ಅಂತ್ಯದ ವೇಳೆಗೆ ಪ್ರತೀ ಮಗುವಿನ ಕಲಿಕೆಯ ಅಂದಾಜು ಮಟ್ಟ ನಮಗೆ ತಿಳಿದಿರುತ್ತದೆ. ಕಲಿಕೆಯ ಪರಿಕಲ್ಪನೆಗಳನ್ನು ಆಧಾರವಾಗಿಟ್ಟುಕೊಂಡು ಮಕ್ಕಳ ಮಾನಸಿಕ ಮತ್ತು ಬೌದ್ದಿಕ ಮಟ್ಟಕ್ಕನುಗುಣವಾಗಿ ಮಕ್ಕಳಿಗೆ ಸ್ವಾವಲೋಕನ ಕಾರ್ಡ್‍ಗಳನ್ನು ತಯಾರಿಸಬೇಕು. ಅವುಗಳನ್ನು ಮಕ್ಕಳಿಗೆ ನೀಡಿ ಅವರ ಕಲಿಕಾ ಮಟ್ಟವನ್ನು ಅವರೇ ಕಂಡುಕೊಳ್ಳಲು ಯೋಜನೆ ರೂಪಿಸಿಬೇಕು. ಇದು ತೀರಾ ಸಂಕೀರ್ಣ ಎನಿಸಿದರೂ ಪ್ರತೀ ಮಗುವೂ ತನ್ನ ಸಾಮಥ್ರ್ಯ ತಿಳಿದು ಪರೀಕ್ಷೆ ಎದುರಿಸಲು ಸಿದ್ದತೆ ನಡೆಸಲು ಇದು ಸಹಕಾರಿ. 
ಪ್ರತೀ ಮಕ್ಕಳ ಕಲಿಕಾ ಮಟ್ಟ ತಿಳಿದ ನಂತರ ಅವರನ್ನು ನಿಗದಿತ ಗುಂಪುಗಳಾಗಿ ವಿಂಗಡಿಸಿ. ಗುಂಪುವಾರು ಅಧ್ಯಯನಕ್ಕೆ ಆಧ್ಯತೆ ನೀಡಿ. ಮೇಲುಸ್ತುವಾರಿ ವಹಿಸುತ್ತಾ ಮಾರ್ಗದರ್ಶನ ನೀಡಿ. ಸಮಯ ಹೊಂದಾಣಿಕೆ ಮಾಡಿಕೊಂಡು ಪೂರ್ಣಗೊಳಿಸಿದ ಘಟಕಗಳನ್ನು ಪುನರಾರ್ತನೆಗೊಳಿಸಿ. ಕೆಲವು ಮಕ್ಕಳಿಗೆ ಪುನರಾವರ್ತನೆ ಬೇಜಾರಾಗಬಹುದು. ಇದನ್ನು ನಿವಾರಿಸಲು ದೈನಂದಿನ ಸಾಮಾನ್ಯ ಬೋಧನೆಗಿಂತ ವಿಭಿನ್ನವಾದ ತಂತ್ರಗಾರಿಕೆ ಬಳಸಿ. ಕಲಿತ ಪರಿಕಲ್ಪನೆಗಳನ್ನು ಗಟ್ಟಿಗೊಳಿಸಲು ಪುನರಾವರ್ತನೆ ತುಂಬಾ ಸಹಕಾರಿ. 
ಪರೀಕ್ಷೆ ಪ್ರಾರಂಭಕ್ಕೂ ಒಂದು ತಿಂಗಳು ಮುನ್ನವೇ ಅದರ ಭಯ ನಮ್ಮಲ್ಲಿ ಆವರಿಸುವುದು ಸಹಜ. ಸಿಲಬಸ್ ಮುಗಿಸಿಲ್ಲ ಎಂಬ ಬಗ್ಗೆಯಾಗಲೀ, ಮಕ್ಕಳು ಹೇಗೆ ಉತ್ತರಿಸುತ್ತಾರೋ ಎಂಬ ಬಗ್ಗೆಯಾಗಲೀ ಭಯಭೀತರಾಗಿರುವುದು ಯಾವುದೇ ಕಾರಣಕ್ಕೂ ಮಕ್ಕಳಿಗೆ ತಿಳಿಯಬಾರದು. ಪರೀಕ್ಷೆಯ ಭಯ ನಮ್ಮನ್ನು ಆವರಿಸಿರುವುದು ಮಕ್ಕಳಿಗೆ ತಿಳಿದರೆ ಅವರು ಅಧೀರರಾಗುವ ಸಂಧರ್ಭ ಇರುತ್ತದೆ. ಮೊದಲು ನಮ್ಮಲ್ಲಿನ ಭಯ ಬಿಟ್ಹಾಕಿ ಪರೀಕ್ಷೆ ಎದುರಿಸಲು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸೋಣ. 
ನಿತ್ಯವೂ ಮಕ್ಕಳಿಗೆ ನಿಗದಿತ ಕಲಿಕಾ ಗುರಿಗಳನ್ನು ನೀಡುವುದು ಒಂದು ಉತ್ತಮ ಪ್ರಯತ್ನ. ವಾಸ್ತವಾಂಶಗಳಿಂದ ಕೂಡಿದ, ಮಕ್ಕಳು ನಿರ್ವಹಿಸಲು  ಸಾಧ್ಯವಿರುವ ಗುರಿಗಳನ್ನು ನೀಡಬೇಕು. ಗುರಿ ಸಾಧಿಸಿದಾಗ ಅವರನ್ನು ಪ್ರಶಂಸಿಸಿ ಭಾವನಾತ್ಮಕವಾಗಿ ಸದೃಢಗೊಳಿಸಿ. ಆಗ ಇತರೇ ಮಕ್ಕಳಲ್ಲಿಯೂ ಸ್ವಾಭಿಮಾನದ ಕಿಚ್ಚು ಹೆಚ್ಚುತ್ತದೆ. ತಾವೂ ಇತರರಂತೆ ಮುಂದೆ ಬರಲು ಪ್ರಯತ್ನಿಸುತ್ತಾರೆ. ಇದರಿಂದ ಅವರಲ್ಲಿ ಪರೀಕ್ಷಾ ಭಯ ಹಿಮ್ಮೆಟ್ಟುತ್ತದೆ. 
ಮಕ್ಕಳಿಗೆ ಪರೀಕ್ಷೆಯ ವೇಳೆ ಅವರ ವಾಸ್ತವಿಕ ಕಲಿಕಾ ಮಟ್ಟವನ್ನು ತಿಳಿಸಿ. ಯಾವುದೇ ಕಾರಣಕ್ಕೂ ಅವರ ಕಲಿಕೆಯ ಮಟ್ಟವನ್ನು ಮರೆಮಾಚಬೇಡಿ. ತಮ್ಮ ನಿರೀಕ್ಷೆಗಳನ್ನು ಕಲಿಕಾ ಮಟ್ಟದೊಂದಿಗೆ ಹೋಲಿಸಿ ಪರೀಕ್ಷೆಗೆ ಸಿದ್ದತೆ ನಡೆಸಲು ಸಹಕಾರಿಯಾಗುತ್ತದೆ. ಬಾಹ್ಯ ಒತ್ತಡ ಅಥವಾ ಆಮಿಷಗಳಿಂದ ಸುಳ್ಳು ಭರವಸೆ ನೀಡುವುದನ್ನು ತಪ್ಪಿಸುತ್ತದೆ. 
ಶಾಲೆಯಲ್ಲಿನ ಪ್ರತಿ ಸಹುದ್ಯೋಗಿಯೂ ಒಂದು ಅಮೂಲ್ಯ ನಿಧಿ ಇದ್ದಂತೆ. ಸದಾ ನಮ್ಮ ಬಳಿ ಇರುವ ಈ ನಿಧಿಯ ಸದ್ಭಳಕೆ ಮಾಡಿಕೊಳ್ಳುವ ಕುಶಲತೆ ಬೆಳೆಸಿಕೊಳ್ಳಬೇಕು. ಬೋಧನಾ ವಿಧಾನ, ಮೌಲ್ಯಮಾಪನ ತಂತ್ರಗಳು, ಬಳಸಬಹುದಾದ ಆಕರಗಳು ಇತ್ಯಾದಿ ವಿಷಯಗಳನ್ನು ಸಹುದ್ಯೋಗಿಗಳೊಂದಿಗೆ ಚರ್ಚಿಸಿ ಉತ್ತಮಾಂಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. 
ಪರೀಕ್ಷೆಗೆ ಮಕ್ಕಳನ್ನು ಸಿದ್ದ ಪಡಿಸುವುವಾಗ ಪ್ರತೀ ವಿಷಯದ ಮೂಲಾಂಶಗಳನ್ನು ಮನದಟ್ಟು ಮಾಡಿಸಬೇಕು. ಮೂಲಾಂಶಗಳ ಬಳಕೆಯಿಂದ ಅನ್ವಯಿಕ ಪ್ರಶ್ನೆಗಳಿಗೆ ತಾರ್ಕಿಕವಾಗಿ ಉತ್ತರಿಸುವ ಕಲೆಯನ್ನು ಅಭಿವೃದ್ದಿ ಪಡಿಸಬೇಕು. ಒಬ್ಬ ಮೌಲ್ಯಮಾಪಕರಾಗಿ ಮಕ್ಕಳಿಂದ ಏನನ್ನು ನಿರೀಕ್ಷಿಸುತ್ತೇವೆಯೋ ಅದನ್ನೇ ನಮ್ಮ ತರಗತಿಯ ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳ ಕೈಬರಹದ ದೋಷಗಳನ್ನು ಸರಿಪಡಿಸಿ, ಸ್ಪುಟವಾಗಿ ಸುಂದರವಾಗಿ ಬರೆಯುವ ಕಲೆಯನ್ನು ಅಭಿವೃದ್ದಿಪಡಿಸಿ. ಕಾಗುಣಿತ, ಒತ್ತಾಕ್ಷರಗಳು, ಚಿಹ್ನೆಗಳು, ವ್ಯಾಕರಣಾಂಶಗಳು, ಸೂತ್ರಗಳು, ಚಿತ್ರಗಳು ಇತ್ಯಾದಿಗಳನ್ನು ದೋಷರಹಿತವಾಗಿ ಬರೆಯುವ ಅಭ್ಯಾಸ ಮಾಡಿಸಬೇಕು.
ಮಕ್ಕಳು ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಬೇಕೆಂಬ ಧಾವಂತದಲ್ಲಿ ಮಾರ್ಚ್ ತಿಂಗಳಲ್ಲಿ ದಿನವೂ ಪರೀಕ್ಷೆ ನಡೆಸುವ ಪರಿಪಾಠ ಬೆಳೆದು ಬಂದಿದೆ. ಇದು ನಿಲ್ಲಬೇಕು. ಪರೀಕ್ಷೆಗಾಗಿ ಪರೀಕ್ಷೆ ನಡೆಸದೇ ಮಕ್ಕಳನ್ನು ಮಾನಸಿಕವಾಗಿ ಮತ್ತು ಬೌದ್ದಿಕವಾಗಿ ಪರೀಕ್ಷೆಗಳಿಗೆ ಸಿದ್ದಪಡಿಸಬೇಕು. ಕ್ವಿಜ್, ಗುಂಪುಚರ್ಚೆ, ಪ್ರಶ್ನೋತ್ತರ ಮಾಲಿಕೆ ಇತ್ಯಾದಿಗಳಿಂದ ಮಕ್ಕಳ ಕಲಿಕೆಯನ್ನು ದೃಢಪಡಿಸಬೇಕು. 
ಪರೀಕ್ಷೆಯ ವೇಳೆ ಪ್ರತೀ ಮಗುವಿನ ಆರೋಗ್ಯದ ಕಡೆಗೂ ಗಮನ ನೀಡಬೇಕು. ಮುಖ್ಯವಾಗಿ ಮಾನಸಿಕ ಆರೋಗ್ಯದ ಕಡೆ ಗಮನ ನೀಡಬೇಕು. ಒತ್ತಡ  ನಿವಾರಿಸಿ ಮಾನಸಿಕ ಸ್ಥೈರ್ಯ ತುಂಬಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮತ್ತು ಅಗತ್ಯ ನಿದ್ರೆ ಮಾಡುವಂತೆ ಸಲಹೆ ನೀಡಬೇಕು. 
ಇವೆಲ್ಲಕ್ಕಿಂತ ಮುಖ್ಯವಾಗಿ ಪಾಲಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದೂ ಮುಖ್ಯ. ತರಗತಿ ಮಕ್ಕಳ ಕಲಿಕೆಯ ಬಗ್ಗೆ ನಿಮಯಮಿತವಾಗಿ ಪಾಲಕರೊಂದಿಗೆ ಚರ್ಚಿಸಬೇಕು. ಮಕ್ಕಳ ಕಲಿಕೆಯಲ್ಲಿ ಅವರೂ ಪಾಲುದಾರರು ಎಂಬ ಅಂಶವನ್ನು  ಮನವರಿಕೆ ಮಾಡಬೇಕು ಹಾಗೂ ತಮ್ಮ ಮಕ್ಕಳ ಕಲಿಕೆಯ ಮೇಲೆ ನಿಗಾವಹಿಸಲು ತಿಳಿಸಬೇಕು. ಆಧುನಿಕ ತಂತ್ರಜ್ಞಾನದ ಪರಿಕರಗಳಾದ ಟಿ.ವಿ, ಮೊಬೈಲ್, ಕಂಪ್ಯೂಟರ್, ಟ್ಯಾಬ್ ಇತ್ಯಾದಿಗಳಿಂದ ಮಕ್ಕಳನ್ನು ದೂರ ಇಡಲು ಕಿವಿಮಾತು ಹೇಳಬೇಕು.
ಮೇಲಿನ ಕೆಲವು ಅಂಶಗಳಲ್ಲದೇ ಇನ್ನಿತರೇ ಉತ್ತಮಾಂಶಗಳನ್ನು ಅಳವಡಿಸಿಕೊಂಡು ಪರೀಕ್ಷೆಗೆ ಮಕ್ಕಳನ್ನು ಸಿದ್ದಪಡಿಸಬೇಕಾದ ಅವಶ್ಯಕತೆ ಇದೆ. ಅನಾರೋಗ್ಯಕರ ಪ್ರಯತ್ನಗಳು ನಮ್ಮನ್ನು ಅದಃಪತನಕ್ಕೆ ನೂಕುತ್ತವೆ ಎಂಬ ಅರಿವು ನಮ್ಮಲ್ಲಿರಲಿ. ಆರೋಗ್ಯಕರ ಪ್ರಯತ್ನಗಳು ಮಾತ್ರ ನಮ್ಮನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತವೆ. ಆದ್ದರಿಂದ ಆರೋಗ್ಯಕರ ಪ್ರಯತ್ನಗಳನ್ನು ಕೈಗೊಳ್ಳುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ಬೆಂಬಲಿಸೋಣ. ಆ ಮೂಲಕ ಮೌಲ್ಯವರ್ಧಿತ ಸಮಾಜಕ್ಕೆ ಮುನ್ನುಡಿ ಬರೆಯೋಣ.

ಆರ್.ಬಿ.ಗುರುಬಸವರಾಜ

May 16, 2016

ಇಟ್ಟಿಗೆ ಗೂಡಲ್ಲಿ ಗಟ್ಟಿಗೊಂಡ ಬದುಕು

ದಿನಾಂಕ 16-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.

ಇಟ್ಟಿಗೆ ಗೂಡಲ್ಲಿ ಗಟ್ಟಿಗೊಂಡ ಬದುಕು


ಪ್ರತಿಯೊಬ್ಬರಿಗೂ ಒಂದು ಒಳ್ಳೆ ಮನೆ ಕಟ್ಟಬೇಕು, ಅದರಲ್ಲಿ ಸುಖವಾದ ಜೀವನ ಸಾಗಿಸಬೇಕೆಂಬ ಹಂಬಲ, ಕನಸು ಇರುವುದು ಸಹಜ. ಈ ಕನಸಿನ ಮಾಯಾಲೋಕದಲ್ಲಿ ವಾಸ್ತವವಾಗಿ  ಮನೆ ಕಟ್ಟಲು ಬೇಕಾಗುವ ಇಟ್ಟಿಗೆ ನಿರ್ಮಾತೃಗಳನ್ನೇ ಮರೆತುಬಿಡುತ್ತೇವೆ.  ಇಟ್ಟಿಗೆ ತಯಾರಕರ ಬದುಕನ್ನು ತೀರಾ ಹತ್ತಿರದಿಂದ ಕಂಡವರು ಬಹಳ ಕಡಿಮೆ. 
ಇಟ್ಟಿಗೆ ಬದುಕು ಕರ್ನಾಟಕದಲ್ಲಿ ಅತೀ ಪ್ರಮುಖ ದುಡಿಮೆ ಹಾಗೂ ವೃತ್ತಿಯಾಗಿದೆ. ಅದರಲ್ಲೂ ಮಧ್ಯ ಕರ್ನಾಟಕ ಎಂದೇ ಖ್ಯಾತಿಯಾದ ದಾವಣಗೆರೆ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಇಟ್ಟಿಗೆಯ ನಂಬಿ ಜೀವನ ಸಾಗಿಸುವವರೇ ಹೆಚ್ಚು. ಪ್ರತಿವರ್ಷ ಹರಿಹರದ ಸುತ್ತಮುತ್ತ ಸಾವಿರಾರು ಇಟ್ಟಿಗೆ ಭಟ್ಟಿಗಳು ತಲೆ ಎತ್ತುತ್ತವೆ. ಈ ಭಟ್ಟಿಗಳಲ್ಲಿ ಸಾವಿರಾರು ಕುಟುಂಬಗಳು ತಮ್ಮ ಮುಂದಿನ ಒಂದು ವರ್ಷದ ಜೀವನಕ್ಕೆ ಬೇಕಾದ ಸಕಲ ಸೌಲಭ್ಯಗಳನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತವೆ. 
ರಾಜ್ಯದ ಬೇರೆ ಬೇರೆ ಭಾಗಗಳಿಂದ ಕೂಲಿ ಕಾರ್ಮಿಕರನ್ನು ಕರೆತಂದು ಮೂರ್ನಾಲ್ಕು ತಿಂಗಳುಗಳಿಗೆ ಬೇಕಾದ ಸಕಲ ವಸತಿ ಸೌಲಭ್ಯ ಒದಗಿಸುವುದು ಹಾಗೂ ಅವರ ಜೀವನ ನಿರ್ವಹಣೆಗೆ ಬೇಕಾದ ಹಣಕಾಸಿನ ವ್ಯವಸ್ಥೆ ಮಾಡುವುದು ಇಟ್ಟಿಗೆ ಮಾಲೀಕರಿಗೆ ಸವಾಲಿನ ಕೆಲಸ. ಕೂಲಿಕಾರ್ಮಿಕರಿಗೆ ಮುಂಗಡವಾಗಿ ಹಣ ನೀಡಿ ಕೆಲಸಕ್ಕೆ ಖಾಯಂಗೊಳಿಸಿಕೊಳ್ಳುವುದು ಮೊದಲ ಆಧ್ಯತೆ. ಕೆಲವು ಭಟ್ಟಿಗಳಲ್ಲಿ ತಮಿಳುನಾಡು, ಆಂದ್ರಪ್ರದೇಶಗಳಿಂದ ಕೂಲಿ ಆಳುಗಳನ್ನು ಕರೆತರುವುದೂ ಉಂಟು.
ಇಟ್ಟಿಗೆ ತಯಾರಿಕೆಯಲ್ಲಿ ಮಾಲೀಕರು ಮತ್ತು ಕೂಲಿ ಕಾರ್ಮಿಕರರಲ್ಲಿ ಹೊಂದಾಣಿಕೆ ಮುಖ್ಯ. ಇವರಿಬ್ಬರೂ ಸೀಸನ್ ಇಲ್ಲದ ತಿಂಗಳುಗಳಲ್ಲಿ ಬೇರೆ ಬೇರೆ ವೃತ್ತಿಗಳಲ್ಲಿ ನಿರತರಾಗಿದ್ದು, ಸೀಸನ್ ಪ್ರಾರಂಭಕ್ಕೆ ಮುಂಚೆ ಪರಸ್ಪರ ಭೇಟಿ ಮತ್ತು ಮಾತುಕತೆಯೊಂದಿಗೆ ವ್ಯವಹಾರ ಮತ್ತು ವೃತ್ತಿ ಪ್ರಾರಂಭವಾಗುತ್ತದೆ. 
ಸೀಸನ್ ಇಲ್ಲದ ಸಮಯದಲ್ಲಿ ಮಾಲೀಕರು ಇಟ್ಟಿಗೆ ತಯಾರಿಸಲು ಬೇಕಾದ ಮಣ್ಣು, ಮರಳು, ಹೊಟ್ಟು, ಕಲ್ಲಿದ್ದಲು ಇನ್ನಿತರೇ ಸಾಮಗ್ರಿಗಳ ಸಂಗ್ರಹಣೆಯಲ್ಲಿ ನಿರತರಾಗಿರುತ್ತಾರೆ. ಸುಟ್ಟ ಇಟ್ಟಿಗೆಗಳಿಗೆ ಹೆಚ್ಚು ಬೇಡಿಕೆ ಇದೆ. ಅದಕ್ಕನುಗುಣವಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಇದು ಕೇವಲ ಕೆಲವೇ ತಿಂಗಳುಗಳ ಉದ್ಯೋಗ ಆಗಿರುವುದರಿಂದ ಬೇಡಿಕೆಗನುಗುಣವಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ. 
ಪ್ರತೀ ಮಾಲೀಕರೂ ಒಂದು ಸೀಸನ್‍ನಲ್ಲಿ ಕನಿಷ್ಟ 5-10 ಲಕ್ಷ ಇಟ್ಟಿಗೆಗಳ ಭಟ್ಟಿ ತಯಾರಿಸುತ್ತಾರೆ. ಒಟ್ಟಾರೆ ಒಂದು ಇಟ್ಟಿಗೆ ತಯಾರಾಗಲು ಕಚ್ಛಾ ಸಾಮಗ್ರಿ ಸಂಗ್ರಹಣೆ, ಕೂಲಿ ಕಾರ್ಮಿಕರ ವೇತನ, ಸುಡಲು ಬೇಕಾದ ಹೊಟ್ಟು ಮತ್ತು ಕಲ್ಲಿದ್ದಲು, ಸಾಮಗ್ರಿಗಳ ಸಾಗಾಣಿಕೆ ಎಲ್ಲಾ ನಿರ್ವಹಣಾ ವೆಚ್ಚ ಸೇರಿ 4-5ರೂ ತಗಲುತ್ತದೆ. ಬೇಡಿಕೆ ಹೆಚ್ಚಾದರೆ ಹೂಡಿದ ಬಂಡವಾಳಕ್ಕಿಂತ ಅಲ್ಪ ಆದಾಯ ದೊರೆಯುತ್ತದೆ. 
ತೀರಾ ಸೀಸನಲ್ ದುಡಿಮೆಯಾದ ಇಟ್ಟಿಗೆ ಬದುಕು ಕೇವಲ ಕೆಲವೇ ತಿಂಗಳುಗಳು ಮಾತ್ರ. ದೀಪಾವಳಿಯ ಆಸುಪಾಸು ಪ್ರಾರಂಭವಾಗುವ ಈ ಬದುಕು ಹೋಳಿ ಹುಣ್ಣಿಮೆಯಲ್ಲಿ ಅಂತ್ಯಗೊಳ್ಳುತ್ತದೆ. ಕೆಲವೊಮ್ಮೆ ಪ್ರಕೃತಿಯ ವಿಕೋಪ ಅಥವಾ ಅಕಾಲಿಕ ಮಳೆಯಿಂದ  ಲಾಭಕ್ಕಿಂತ ನಷ್ಟವೇ ಹೆಚ್ಚು. ಇಂತಹ ಸಂದರ್ಭಗಳಲ್ಲಿ ಇಟ್ಟಿಗೆಯಿಂದ ಕಟ್ಟಿಕೊಂಡ ಬದುಕು ಮೂರಾಬಟ್ಟೆಯಾಗುತ್ತದೆ. ನಷ್ಟ ಅನುಭವಿಸಿದ ಕೆಲ ಮಾಲೀಕರು ಸಾವಿಗೆ ಶರಣಾಗುವುದೂ ಉಂಟು. 
ಬಹುತೇಕ ಇಟ್ಟಿಗೆ ಭಟ್ಟಿಗಳು ಉಳುಮೆ ಜಮೀನಿನಲ್ಲೇ ಪ್ರಾರಂಭವಾಗಿವೆ. ಅಕ್ಕಪಕ್ಕದವರು ಭಟ್ಟಿ ಪ್ರಾರಂಭಿಸಿದ್ದು ಕಂಡು ತಾವೂ ಪ್ರಾರಂಭಿಸಬೇಕೆಂಬ ಹಠಕ್ಕೆ ಬಿದ್ದು ಪ್ರಾರಂಭಿಸಿದವರೇ ಹೆಚ್ಚು. ಕಚ್ಛಾ ಸಾಮಗ್ರಿ ಸರಬರಾಜು, ಮಾರುಕಟ್ಟೆ ವ್ಯವಸ್ಥೆಯ ನಿರ್ವಹಣಾ ಕೌಶಲ್ಯ ಇಲ್ಲದೇ ಕೆಲವು ಮಾಲೀಕರು ನಷ್ಟ ಅನುಭವಿಸುತ್ತಾರೆ. ಸೂಕ್ತ ಮುಂಜಾಗರೂಕತೆ ವಹಿಸಿ ವ್ಯವಹಾರ ಕುದುರಿಸಿ ಈ ವೃತ್ತಿಯಲ್ಲಿ ಬದುಕನ್ನು ಗಟ್ಟಿಗೊಳಿಸಿಕೊಂಡವರೇ ಹೆಚ್ಚು. ಇತ್ತೀಚೆಗೆ ನಿರುದ್ಯೋಗಿ ವಿದ್ಯಾವಂತ ಯುವಕರು ಈ ವೃತ್ತಿಯನ್ನು ನಂಬಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವುದು ಸಂತೋಷದಾಯಕವಾಗಿದೆ. 

ಆರ್.ಬಿ.ಗುರುಬಸವರಾಜ 


ಪ್ರೇಕ್ಷಕರಿಗೆ ರಂಗಹುಚ್ಚು ಹಿಡಿಸಿದ ಮಳೆಹುಚ್ಚ ಮತ್ತು ಬೆಪ್ಪ ತಕ್ಕಡಿ ಬೋಳೆ ಶಂಕರ

ದಿನಾಂಕ 12-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.



ಪ್ರೇಕ್ಷಕರಿಗೆ ರಂಗಹುಚ್ಚು ಹಿಡಿಸಿದ 
ಮಳೆಹುಚ್ಚ ಮತ್ತು ಬೆಪ್ಪ ತಕ್ಕಡಿ ಬೋಳೆ ಶಂಕರ

     ಬೇಸಿಗೆ ರಜೆ ಬಂತೆಂದರೆ ಸಾಕು ಗ್ರಾಮ ಮಟ್ಟದಿಂದ ರಾಜಧಾನಿಯವರೆಗೆ ಮಕ್ಕಳ ಬೇಸಿಗೆ ಶಿಬಿರಗಳು ಆಯೋಜನೆಗೊಳ್ಳುತ್ತವೆ. ವಿಪರ್ಯಾಸವೆಂದರೆ ಬಹುತೇಕ ಶಿಬಿರಗಳು ಮತ್ತೊಂದು ರೀತಿಯ ಟ್ಯೂಷನ್ ಕ್ಲಾಸ್‍ಗಳಂತಾಗಿವೆ. ಇವೆಲ್ಲವುಗಳ ನಡುವೆ ಕೇವಲ ಬೆರಳೆಣಿಕೆಯ ಶಿಬಿರಗಳು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ, ಅದಕ್ಕೊಂದು ಹೊಸ ಮಾರ್ಗವನ್ನು ಸೂಚಿಸುವ ಕೇಂದ್ರಗಳಾಗಿವೆ. ಅಂತಹ ವಿರಳಾತಿವಿರಳ ಶಿಬಿರಗಳಲ್ಲಿ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ‘ರಂಗಭಾರತಿ’ ಸಂಸ್ಥೆ ನಡೆಸಿದ “ಚಿಣ್ಣರ ಮೇಳ” ವಿಶಿಷ್ಟವೂ  ವಿಭಿನ್ನವೂ ಆಗಿತ್ತು. ಏಕೆಂದರೆ ಇಲ್ಲಿನ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ರಂಗಭೂಮಿಯ ಕ್ರಿಯಾಶೀಲ ನಟರು, ನೃತ್ಯಗಾರರು, ರಂಗ ನಿರ್ದೇಶಕರು, ಸೃಜನಶೀಲ ಕಾರ್ಯಕರ್ತರು ಆಗಿದ್ದರಿಂದ ಶಿಬಿರ ವಿಶೇಷತೆಯಿಂದ ಕೂಡಿತ್ತು. ಸದಾ ಕ್ರಿಯಾಶೀಲ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡ ರಂಗಭಾರತಿ ಮಕ್ಕಳಲ್ಲಿ ಅಪೇಕ್ಷಿತ ಕ್ರಿಯೆಗಳನ್ನು ಹೊರಹೊಮ್ಮುವಂತೆ ಮಾಡಿತ್ತು. 
‘ಸಂಗೀತ, ನೃತ್ಯ ಮತ್ತು ನಾಟಕೋತ್ಸವ’ ಎಂಬ ಅಡಿಬರಹದಲ್ಲಿ 20 ದಿನಗಳ ಕಾಲ ಮೂಡಿಬಂದ ಶಿಬಿರದ ಸಮಾರೋಪದಲ್ಲಿ ನಡೆದ ಮಕ್ಕಳ ನಾಟಕಗಳು ಅಪಾರ ಪ್ರೇಕ್ಷಕರನ್ನು ರಂಜಿಸಿದವು. ಎರಡು ದಿನ ನಡೆದ ಸಮಾರೋಪದಲ್ಲಿ ಪ್ರತಿದಿನ ಒಂದು ಮಕ್ಕಳ ನಾಟಕ ಮತ್ತು ಇನ್ನೊಂದು ದೊಡ್ಡವರ ನಾಟಕ ಇದ್ದವು. ಜೊತೆಗೆ ಮಕ್ಕಳ ನೃತ್ಯ ರೂಪಕಗಳು ಇದ್ದವು.
     ದೊಡ್ಡವರ ನಾಟಕಗಳಿಗಿಂತ ಹೆಚ್ಚು ಖುಷಿ ನೀಡಿದ್ದು ಮಕ್ಕಳ ನಾಟಕಗಳು. ‘ಮಳೆಹುಚ್ಚ’ (ರಚನೆ: ಕೃಷ್ಣಮೂರ್ತಿ ಬಿಳಿಗೆರೆ) ಮತ್ತು ‘ಬೆಪ್ಪ ತಕ್ಕಡಿ ಬೋಳೆ ಶಂಕರ’ (ರಚನೆ: ಡಾ||ಚಂದ್ರಶೇಖರ ಕಂಬಾರ) ಪ್ರೇಕ್ಷಕರಿಗೆ ರಂಗಹುಚ್ಚು ಹಿಡಿಸಿ ಬಾಯಿಯ ಮೇಲೆ ಬೆರಳಿಡುವಂತೆ ಮಾಡಿದವು. ಮಕ್ಕಳು ಹೇಗೆ ಅಭಿನಯಿಸಿದರೂ ಚೆಂದ ಸಾಮಾನ್ಯ ಭ್ರಮೆಗಿಂತ ಅವರ ವಾಸ್ತವದ ಪ್ರಯತ್ನಗಳು ಪ್ರೇಕ್ಷಕರಿಗೆ ಪ್ರಿಯವಾಗಿದ್ದವು. ಪ್ರೀತಿ, ಪ್ರೇಮ, ದುಗುಡ, ಸಿಟ್ಟು, ಆಕ್ರೋಶ, ಗಂಭೀರತೆ, ಶಾಂತತೆ, ನಿರಾಶೆ ಹೀಗೆ ಎಲ್ಲಾ ಭಾವನೆಗಳನ್ನು ಅಚ್ಚುಕಟ್ಟಾಗಿ ತಮ್ಮ ಹಾವ ಭಾವದಿಂದ ಪ್ರದರ್ಶಿಸಿದ ಪರಿ ಮನೋಜ್ಞವಾಗಿತ್ತು.  ಪಾತ್ರಗಳ ವ್ಯಕ್ತಿತ್ವವನ್ನು ತಮ್ಮಲ್ಲಿ ಅವಗಾಹಿಸಿಕೊಂಡು ಪಾತ್ರವೇ ತಾನೆಂಬಂತೆ ಅಭಿನಯಿಸಿದರು. ಇಲ್ಲಿ ದೊಡ್ಡವರ ಅನುಕರಣೆ ಇದ್ದರೂ ಅದರಲ್ಲಿ ಸೃಜನಶೀಲತೆ ಮತ್ತು ಕಲೆಯನ್ನು ಗೌರವಿಸುವ ಮನೋವಿಕಾಸದ ಮಾರ್ಗಗಳಿದ್ದವು. ಪರಸ್ಪರ ಪಾತ್ರಧಾರಿಗಳ ಕೌಶಲ್ಯಗಳನ್ನು ಗೌರವಿಸುತ್ತಾ, ತಮ್ಮ ತಂಡದ ಉತ್ತಮ ಪ್ರದರ್ಶನಕ್ಕಾಗಿ ಪ್ರಯತ್ನಿಸುತ್ತಿದ್ದರು. ಸಾಧನೆಯ ಹಂಬಲ ಗೊತ್ತಿಲ್ಲದ ಮಕ್ಕಳು ಮುಕ್ತವಾಗಿ ಅಭಿನಯಿಸಿದರು.
       ರಂಗಸ್ಥಳದ ಸದ್ಭಳಕೆ, ರಂಗಪರಿಕರ ಮತ್ತು ರಂಗಸಜ್ಜಿಕೆಯಲ್ಲಿ ಹಿರಿಯರನ್ನು ಮೀರಿಸಿದ ಅವರ ಜಾಣ್ಮೆ ಪ್ರೇಕ್ಷಕರಿಗೆ ಪ್ರಿಯವಾದವು. ಧ್ವನಿಯ ಏರಿಳಿತ, ಔಚಿತ್ಯಪೂರ್ಣ ಹಾವ ಭಾವಗಳು ಎಂತಹ ಪರಿಣಿತ ವೃತ್ತಿಪರ ರಂಗಕರ್ಮಿಗಳನ್ನೂ ಮೀರಿಸುವಂತಿದ್ದವು. ‘ಮಕ್ಕಳಿಗೆ ಸೂಕ್ತ ರಂಗ ತರಬೇತಿ ನೀಡಿದರೆ ಉತ್ತಮ ನಟರಾಗುತ್ತಾರೆ ಜೊತೆಗೆ ಮಾನವೀಯ ಪ್ರಜ್ಞೆ ಬೆಳೆಸಿಕೊಳ್ಳುತ್ತಾರೆ’ ಎಂದು ಜ್ಹೀ ಕನ್ನಡ ವಾಹಿನಿಯಲ್ಲಿ ಡ್ರಾಮಾ ಜೂನಿಯರ್ ಎಂಬ ರಿಯಾಲಿಟಿ ಶೋ ಪ್ರಾರಂಭದಲ್ಲಿ ಹಿರಿಯ ನಟಿ ಲಕ್ಷ್ಮಿಯವರು ಹೇಳಿದ ಮಾತು ಅಕ್ಷರಶಃ ಸತ್ಯ. 20 ದಿನಗಳ ಚಿಣ್ಣರ ಮೇಳದಲ್ಲಿ ಕೆಲವೇ ದಿನಗಳು ನಡೆದ ರಂಗತಾಲೀಮು ಮಕ್ಕಳ ಕಲೆಯನ್ನು ಒರೆಗೆ ಹಚ್ಚಿದ್ದವು. 
          ‘ಕಲೆ ಎಂದರೆ ಕೇವಲ ಅಬ್ಬರದ ಪೋಷಾಕುಗಳ, ಧ್ವನಿವರ್ಧಕಗಳ, ದೀಪಗಳ ವ್ಯವಸ್ಥೆ ಅಲ್ಲ. ಅದೊಂದು ಕಲಿಕೆಯ ವ್ಯವಸ್ಥೆ. ಜೀವನದ ಪಾಠ. ವಿಚಾರ, ದೈಹಿಕ ಶ್ರಮ ಮತ್ತು ನೈತಿಕತೆಗಳನ್ನು ಕಲಿಸುವ ಏಕೈಕ ವೇದಿಕೆ’ ಎಂದು ಖ್ಯಾತ ರಂತಗಕರ್ಮಿ ಪ್ರಸನ್ನ ಅವರು ಸಮಾರೋಪ ನುಡಿಯಲ್ಲಿ ಮಕ್ಕಳ ನಾಟಕ ಕಲೆಯನ್ನು ಪ್ರೋತ್ಸಾಹಿಸುವ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಎಲೆಕ್ಟ್ರಾನಿಕ್ ಮಾಧ್ಯಮದ ಭರಾಟೆಯಲ್ಲೂ ಮಕ್ಕಳ ರಂಗಾಭಿನಯ ಪ್ರೇಕ್ಷಕರನ್ನು ಮೂಕವಿಸ್ಮತರನ್ನಾಗಿಸಿತು.
ಆರ್.ಬಿ.ಗುರುಬಸವರಾಜ 

ಬಸವಣ್ಣ ಮತ್ತು ಸಾಮಾಜಿಕ ಹೋರಾಟ

ದಿನಾಂಕ 09-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.


ಬಸವಣ್ಣ ಮತ್ತು ಸಾಮಾಜಿಕ ಹೋರಾಟ


ಹೆಣ್ಣಿಗಾಗಿ ಸತ್ತವರು ಕೋಟಿ,
ಮಣ್ಣಿಗಾಗಿ ಸತ್ತವರು ಕೋಟಿ,
ಹೊನ್ನಿಗಾಗಿ ಸತ್ತವರು ಕೋಟಿ,
ನಿನಗಾಗಿ ಸತ್ತವರರಾರನೂ ಕಾಣೆ ಗುಹೇಶ್ವರಾ !
ಇತಿಹಾಸದ ಪುಟಗಳನ್ನ ತಿರುವಿ ಹಾಕಿದರೆ ನಮಗೆ ಅಲ್ಲಿ ಸಿಗುವುದು ಹೆಣ್ಣು, ಹೊನ್ನು, ಮಣ್ಣಿಗಾಗಿ ಹೋರಾಡಿದ ರಾಜ-ಮಹಾರಾಜರ ಕಥೆ. ಇದನ್ನು ‘ಅಲ್ಲಮಪ್ರಭು’ ತಮ್ಮ ವಚನದಲ್ಲಿ ವಿಡಂಬನಾತ್ಮಕವಾಗಿ ಹೇಳಿರುವುದು ನಿಜಕ್ಕೂ ಸರ್ವ ಸಮ್ಮತ. ಇತಿಹಾಸದಲ್ಲಿ ತಾವು ಬಯಸಿದ ಹೆಣ್ಣಿಗಾಗಿ, ಹಣ-ಐಶ್ವರ್ಯಕ್ಕಾಗಿ, ಸಾಮ್ರಾಜ್ಯ ವಿಸ್ತರಣೆ ಅಥವಾ ಸಾಮ್ರಾಜ್ಯ ಉಳಿಸಿಕೊಳ್ಳುವುದಕ್ಕಾಗಿ ಯುದ್ದಗಳು ನಡೆದಿವೆ. ಆದರೆ ತಮ್ಮ ಅನುಯಾಯಿಗಳಾದ ಸಾಮಂತರಿಗಾಗಲೀ, ಸೈನಿಕರಿಗಾಗಲೀ, ಜನಸಾಮಾನ್ಯರಿಗಾಗಲೀ ಯುದ್ದ ಮಾಡಿದವರಾರೂ ಇಲ್ಲವೆನ್ನಬಹುದು. ಮಾನವರೆಲ್ಲರ ಒಳಿತಿಗಾಗಿ, ಸಮಾಜದ ಹಿತಕ್ಕಾಗಿ ನಡೆದ ಹೋರಾಟಗಳು ಅತಿವಿರಳ.
ಅಂತಹ ವಿರಳಾತೀತ ಹೋರಾಟಗಳಲ್ಲಿ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಹೋರಾಟ ಮಾಡಿದ ಮಹಾನ್ ಮಾನವತಾವಾದಿ ಎಂದರೆ 12ನೇ ಶತಮಾನದ  ಬಸವಣ್ಣ. ಇವರ ಹೋರಾಟಗಳು ರಾಜ-ಮಹಾರಾಜರ ಹೋರಾಟಗಳಲ್ಲ, ಹೆಣ್ಣಿಗಾಗಿ, ಮಣ್ಣಿಗಾಗಿ, ಹೊನ್ನಿಗಾಗಿ ನಡೆದ ಹೋರಾಟಗಳಲ್ಲ. ಅಖಂಡ ವಿಶ್ವದ ಜನರ ಕಲ್ಯಾಣವನ್ನು ಬಯಸಿ, ಸಕಲ ಜೀವಾತ್ಮರಿಗೆ ಒಳಿತನ್ನು ಉಂಟುಮಾಡುವ ಹೋರಾಟಗಳಾಗಿದ್ದವು. ಈ ಹೋರಾಟದ ಮೂಲಮಂತ್ರ `ಮಾನವೀಯತೆ` ಎಂಬುದನ್ನು ನಾವೆಲ್ಲರೂ ಗಮನಿಸಬೇಕು. ಜನರು ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಮಾನತೆ ಸಾಧಿಸಲು ಹೋರಾಟವನ್ನು ರೂಪಿಸಿದವರು. ಜನಸಾಮಾನ್ಯರ ಕಷ್ಟ-ಸುಖ, ನೋವು-ನಲಿವುಗಳಿಗೆ ಸ್ಪಂದಿಸಿದ ಈ ಮಹಾನ್ ಚೇತನನ ಉದ್ದೇಶ ಮಾನವ ಸಮಾಜದ ಉದ್ದಾರವಾಗಿತ್ತೇ ವಿನಃ ಯಾವುದೇ ಸ್ವಾರ್ಥವಾಗಲೀ, ಅಧಿಕಾರದ ಲಾಲಸೆಯಾಗಲೀ, ಘನತೆ ಗೌರವಗಳ ಸ್ವಂತಿಕೆಯಾಗಲೀ ಇರಲಿಲ್ಲ. ಬಸವಣ್ಣನವರ ಹೋರಾಟಗಳು ಮಾನವನ ಸರ್ವಾಂಗೀಣ ಪ್ರಗತಿಗೆ ಪೂರಕವಾದ್ದರಿಂದಲೇ ಅಸಂಖ್ಯಾತ ಬೆಂಬಲಿಗರನ್ನು ಪಡೆದ ಹೋರಾಟಗಳಾಗಿದ್ದವು. 

ಬಸವಣ್ಣನವರು ವಚನಗಳ ಮೂಲಕ ತಮ್ಮ ಅನುಭಾವಗಳನ್ನು ಜನರಲ್ಲಿ ಪ್ರಚುರ ಪಡಿಸಿದರು.     ಅವರು ಜೀವಿಸಿದ್ದಂತಹ 12ನೇ ಶತಮಾನ ಹಲವಾರು ವೈರುಧ್ಯಗಳಿಂದ ಕೂಡಿದ ಕಾಲಮಾನ. ಧಾರ್ಮಿಕ ಆಚರಣೆ ಅಚಲವಾಗಿದ್ದ ಕಾಲ. ಇಂತಹ ಕಾಲಘಟ್ಟದಲ್ಲಿ ಕಲ್ಯಾಣದಲ್ಲಿ ಕ್ರಾಂತಿಯ ಕಿಡಿಗಳನ್ನು ಹೊತ್ತಿಸಿದ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ. ಬಸವಣ್ಣನವರು ವಚನಗಳ ಮೂಲಕ ಜನಸಾಮಾನ್ಯರಿಗೆ ಅರಿವನ್ನುಂಟು ಮಾಡಿದರು. ಶೋಷಿತರನ್ನೆಲ್ಲ ಸಂಘಟಿಸಿ ತಮ್ಮ ವಿಮೋಚನೆಗಾಗಿ ಹೋರಾಟಕ್ಕೆ ಹುರಿದುಂಬಿಸಿದರು. ಇವರ ಕ್ರಾಂತಿಯಲ್ಲಿ ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆ ಮತ್ತು ಶೋಷಣೆಯ ವಿರುದ್ದ ಹೋರಾಟದ ಧ್ವನಿಯನ್ನು ಕಾಣುತ್ತೇವೆ. ಮೇಲ್ಜಾತಿ, ಕೀಳ್ಜಾತಿಗಳ ನಡುವಿನ ಸಂಘರ್ಷ ನಿರಂತರವಾದುದು. ಬಸವಣ್ಣನವರು 12ನೇ ಶತಮಾನದಲ್ಲೇ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿರುದನ್ನು ಅವರ ಅನೇಕ ವಚನಗಳಲ್ಲಿ ಕಾಣಬಹುದು. 

``ನೆಲವೊಂದೇ ಹೊಲಗೇರಿ, ಶಿವಾಲಯಕ್ಕೆ,
ಜಲವೊಂದೇ ಶೌಚಾಚಮನಕ್ಕೆ,
ಫಲವೊಂದೇ ಷಡುದರುಶನ ಮುಕ್ತಿಗೆ,
ಕುಲವೊಂದೇ  ತನ್ನ ತಾನರಿದವರಿಗೆ,
ನಿಲುವೊಂದೇ ಕೂಡಲ ಸಂಗಮದೇವಾ ನಿಮ್ಮನರಿದವರಿಗೆ’’  
ಎಂಬ ವಚನದಲ್ಲಿ ನೆಲ, ಜಲ, ಫಲ ಎಲ್ಲಾ ಜಾತಿ ಕುಲದವರಿಗೂ ಒಂದೇ ಎಂಬ ವಾಸ್ತವ ಸತ್ಯವನ್ನು ಹೊರಹಾಕಿದ್ದಾರೆ. ಬಸವಣ್ಣನವರು ‘ಎಲ್ಲಾ ದುರ್ಬಲ ವರ್ಗಗಳ ವಿಮೋಚನೆಯಾಗದ ಹೊರತು ನಾಡಿನ ಆಡಳಿತ ಅರ್ಥ ರಹಿತ’’ ಎಂಬ ಮೂಲತತ್ವ ಪ್ರತಿಪಾದಿಸಿದರು. 

ಮಾನವ ಸಂಘ ಜೀವಿ ಎನ್ನುತ್ತೇವೆ. ಆದರೆ ತಮ್ಮ ತಮ್ಮಲ್ಲೇ ಹೊಡೆದಾಟ, ಬಡಿದಾಟ, ಭಿನ್ನತೆ, ಮೇಲು-ಕೀಳು, ಸಿರಿತನ-ಬಡತನ, ಸ್ವಾರ್ಥತೆ ಇತ್ಯಾದಿ ಕಾರಣಗಳಿಗಾಗಿ ತನ್ನಂತೆ ಇರುವ ಇತರರನ್ನು ಪ್ರಾಣಿಗಳಿಗಿಂತ ಕೀಳಾಗಿ ಶೋಷಿಸುತ್ತಿರುವುದನ್ನು ಕಂಡರೆ, ಅವನು ಸಂಘಜೀವಿಯಾಗಿದ್ದುಕೊಂಡು ಹೀಗೇಕೆ ವರ್ತಿಸುತ್ತಾನೆ ಎಂಬುದೇ ಅಚ್ಚರಿಯ ವಿಷಯ. ಯಾವಾಗ ವ್ಯಕ್ತಿಯು ತಾನೊಬ್ಬನೇ ಶ್ರೇಷ್ಠ, ಇತರರು ಕನಿಷ್ಠವೆಂದು ಭಾವಿಸುತ್ತಾನೋ ಆಗಲೇ ಅವನು ಇತರರನ್ನು ಶೋಷಿಸಲು ಪ್ರಾರಂಭಿಸುತ್ತಾನೆ. 
``ಪ್ರಬಲ ಶಕ್ತಿಗಳು ಅತಿಕ್ರಮಣ ಮಾಡಿದಾಗ ದುರ್ಬಲ ಶಕ್ತಿಗಳು ಇಲ್ಲವಾಗುತ್ತವೆ’’ ಎಂಬ ‘ಡಾರ್ವಿನ್’ನ ಹೇಳಿಕೆ ಸರ್ವಕಾಲಿಕ ಸರ್ವಸಮ್ಮತ ಎಂಬುದನ್ನು ಇತಿಹಾಸ ಸಾರುತ್ತದೆ. ಪ್ರಬಲ ಜಾತಿಗಳು ದುರ್ಬಲ ಜಾತಿಗಳನ್ನು, ಆರ್ಥಿಕ ಸಬಲರು ಆರ್ಥಿಕ ದುರ್ಬಲರನ್ನು, ಮೇಲ್ವರ್ಗ ಕೆಳವರ್ಗವನ್ನು ಶೋಷಿಸುತ್ತಾ ಬಂದಿರುವುದನ್ನು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಈ ದುಷ್ಟಶಕ್ತಿಗಳ ಪ್ರಾಬಲ್ಯ ಹೆಚ್ಚಾದಾಗಲೆಲ್ಲಾ ಒಬ್ಬೊಬ್ಬ ಅವತಾರ ಪುರುಷರು ಉದಯಿಸಿರುವುದನ್ನು ಪುರಾಣಗಳು ತಿಳಿಸುತ್ತವೆ. ಅಂತೆಯೇ 12ನೇ ಶತಮಾನದಲ್ಲಿನ ಜಾತಿ ಸಂಘರ್ಷವನ್ನು ತೊಡೆದು ಸಮಾನತೆಯ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಉದಿಸಿ ಬಂದರು. 
ಮುಖ್ಯವಾಗಿ ನಾವಿಲ್ಲಿ ಚಿಂತನೆ ಮಾಡಬೇಕಾಗಿರುವುದು ಬಸವಣ್ಣನವರ ವಿಭಿನ್ನ ರೀತಿಯ ಆದರೆ ನಿರ್ದಿಷ್ಟ ಉದ್ದೇಶದ ಹೋರಾಟಗಳ ಬಗ್ಗೆ. ಬಸವಣ್ಣನವರು ಧಾರ್ಮಿಕ ಹಿನ್ನಲೆಯಲ್ಲಿ ವಚನಗಳ ಮೂಲಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಹೋರಾಟ ಮಾಡಿದರು.
ಜಾತಿ ಪಂಥಗಳು ಅಗ್ರಸ್ಥಾನವಾದ ನಮ್ಮ ದೇಶದಲ್ಲಿ ಮೇಲ್ಜಾತಿ, ಕೆಳಜಾತಿ ಎಂಬ ಭೇಧಗಳು ಮಾನವ ಕಲ್ಪಿತ ಎಂಬ ಕಟುಸತ್ಯ ನಮಗಿದ್ದರೂ, ಅವು ನಮ್ಮ ರಾಜಕೀಯ, ಸಾಮಾಜಿಕ , ಆರ್ಥಿಕ ವ್ಯವಸ್ಥೆಯಲ್ಲಿ ಪ್ರಬಲ ಶಕ್ತಿಗಳಾಗಿವೆ. ಇಂಥಹ ವರ್ಣ, ವರ್ಗ ಪ್ರಧಾನ ಸಮಾಜದಲ್ಲಿ ಮಾನವೀಯತೆಗೆ ಜಾಗವಿಲ್ಲದಿರುವ ಸಂದರ್ಭದಲ್ಲಿ ಮನುಕುಲದ ಹೋರಾಟಕ್ಕಿಳಿದು ಕಷ್ಟನಷ್ಟ ಲೆಕ್ಕಿಸದೇ, ತಮ್ಮ ಧ್ಯೇಯಕ್ಕೆ, ಸಿದ್ದಾಂತಕ್ಕೆ ಬದ್ಧರಾಗಿದ್ದುಕೊಂಡು ಹೋರಾಡಿದ ಬಸವಣ್ಣನವರು ಎಂದೆಂದೂ  ಆದರ್ಶಪ್ರಾಯರಾಗಿ ನಿಲ್ಲುತ್ತಾರೆ. ಈ ಮಹನೀಯನಲ್ಲಿ ಇರುವ ಮಾನವೀಯ ಮೌಲ್ಯಗಳು, ಶೋಷಿತ ವರ್ಗ/ವರ್ಣ ವ್ಯವಸ್ಥೆಯ ವಿರುದ್ದ ಇವರು ಸಂಘಟಿಸಿದ ಹೋರಾಟ, ಮಾನವ ಜನಾಂಗಕ್ಕೆ ನೀಡಿದ ಸಂದೇಶಗಳು ಇಂದು ಸಮಾಜ ಸೇವಕರಾಗಬೇಕೆನ್ನುವವರಿಗೆ ದಾರಿದೀಪವಾಗಿವೆ. 
       ಪ್ರತಿವರ್ಷ ಬಸವಣ್ಣನವರ ಜಯಂತಿಯಂದು ಮಾತ್ರ ಅವರ ತತ್ವಾದರ್ಶಗಳನ್ನು ಕೊಂಡಾಡದೇ ಪ್ರತಿನಿತ್ಯ ನಮ್ಮ ಬದುಕಿನ ಒಂದು ಭಾಗವಾಗಿ ಆಚರಣೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವಣ್ಣ ಜನಿಸಿದ ನಾಡಿನಲ್ಲಿ ನಾವು ಜನಿಸಿದ್ದಕ್ಕೆ ಸಾರ್ಥಕವಾಗುತ್ತದೆ. ಪ್ರತಿ ಸಂಧರ್ಭದಲ್ಲೂ ಅವರ ವಿಚಾರಗಳನ್ನು ಹೆಚ್ಚು ಹೆಚ್ಚು ಮನನ ಮಾಡಿಕೊಳ್ಳುತ್ತಾ ಅವರ ತತ್ವಗಳನ್ನು, ಜೀವನಾದರ್ಶಗಳನ್ನು ಪಾಲಿಸುತ್ತಾ ಸಾಗೋಣ. 
ಆರ್.ಬಿ.ಗುರುಬಸವರಾಜ 

April 20, 2016

ಕಾರ್ಕಳದ ಶಿಲ್ಪಗಳು SATISH ACHARYA

ದಿನಾಂಕ 19-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಬರಹ

ರಾಷ್ಟ್ರಪತಿ ಭವನಕ್ಕೆ ಹೊರಟ ಕಾರ್ಕಳದ ಶಿಲ್ಪಗಳು


ಅವು ಸಾಧಾರಣ ಶಿಲ್ಪಗಳಲ್ಲ. ಎರಡು ನಿಮಿಷಕ್ಕೂ ಹೆಚ್ಚು ಹೊತ್ತು ತದೇಕ ಚಿತ್ತದಿಂದ ವೀಕ್ಷಿಸಿದಲ್ಲಿ ಜೀವ ತಳೆದು ಮಾತನಾಡುವಂತೆ ಭಾಸವಾಗುತ್ತದೆ. ಪುನೀತ ಭಾವದಿಂದ ಪುಳಕಿತರಾಗುತ್ತೇವೆ. ಸೂಕ್ಷ್ಮ ಕೆತ್ತನೆಯ ಕುಸುರಿ  ಕೈಚಳಕಕ್ಕೆ ಅಚ್ಚರಿಗೊಳ್ಳುತ್ತೇವೆ. ಅಂದಹಾಗೆ ಈ ಶಿಲ್ಪಗಳು ದೇಶದ ಪ್ರಥಮ ಪ್ರಜೆಯ ನಿವಾಸಕ್ಕೆ ಕಾಲಿಡಲು ಸಜ್ಜಾಗಿವೆ. ಅಂದರೆ ರಾಷ್ಟ್ರಪತಿ ಭವನಕ್ಕೆ ತೆರಳಲು ತಯಾರಾಗಿವೆ. ಇಂತಹ ಶಿಲ್ಪಗಳು  ನಮ್ಮ ಕರ್ನಾಟಕದಲ್ಲಿ ನಿರ್ಮಾವಾಗಿವೆ ಎಂದರೆ ಆಶ್ಚರ್ಯವಾಗುತ್ತದೆ. ಉಡುಪಿಯ ಕಾರ್ಕಳದಲ್ಲಿ ನಿರ್ಮಿತವಾದ ಈ ಶಿಲ್ಪಗಳು ಇಡೀ ವಿಶ್ವದ ಗಮನ ಸೆಳೆಯುವ ದೇಶದ ಶಕ್ತಿ ಕೇಂದ್ರದ ಆವರಣದಲ್ಲಿ ನೆಲೆ ನಿಲ್ಲುತ್ತಿವೆ.
ನಿರ್ಮಾತೃ : ಈ ಶಿಲ್ಪಗಳು ಕಾರ್ಕಳದ ಪ್ರಸಿದ್ದ ಶಿಲ್ಪಿ ಕೆ.ಶ್ಯಾಮರಾಯಾಚಾರ್ಯ ಅವರ ಪುತ್ರ ಸತೀಶ್ ಆಚಾರ್ಯ ಅವರ ಕೈಚಳಕದ ಪ್ರತೀಕಗಳಾಗಿವೆ. ಸತೀಶ್ ಆಚಾರ್ಯ ಅವರ ಕಲಾಪ್ರತಿಭೆಗೆ ತಲೆದೂಗದವರಿಲ್ಲ. ಧರ್ಮ, ಅಧರ್ಮದ ವಿಚಾರಗಳನ್ನು ತಮ್ಮ ಶಿಲ್ಪರಚನಾ ಪ್ರವೃತ್ತಿಯಲ್ಲಿ ವೇದ್ಯವಾಗುವಂತೆ ನಿರ್ಮಿಸಿ ಪ್ರೇಕ್ಷಕನಿಗೆ ಅಮಿತಾನಂದವನ್ನು ನೀಡಿದವರು ಸತೀಶ ಆಚಾರ್ಯ.
ಪ್ರಪಂಚವನ್ನೇ ಕಾಣದ ಕುರುಡನೂ ಕೂಡಾ ಶಿಲ್ಪಗಳನ್ನು ಸ್ಪರ್ಶಿಸಿ ಅದರ ರಸಾನುಭವವನ್ನು ಸವಿಯುವಂತೆ ಶಿಲ್ಪಗಳನ್ನು ನಿರ್ಮಿಸುವ ಕಲೆ ಸತೀಶ ಅವರಿಗೆ ಕರಗತವಾಗಿದೆ. ಪ್ರತೀ ಶಿಲ್ಪಗಳೂ ಕೂಡಾ ಶಿಲ್ಪಶಾಸ್ತ್ರಕ್ಕೆ ಅನುಗುಣವಾಗಿ ರಚಿತವಾಗಿರುವುದರಿಂದ ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವೇ ಇಲ್ಲ. 
ಈ ಶಿಲ್ಪಗಳನ್ನು ಕಾರ್ಕಳದ ಬಳಿಯ ನೆಲ್ಲಿಕಾರು ಅರಣ್ಯಗಳಲ್ಲಿ ಮಾತ್ರ ದೊರೆಯುವ ಕೃಷ್ಣಶಿಲೆಗಳಿಂದ ನಿರ್ಮಿಸಲಾಗಿದೆ.  ಕೆತ್ತನೆಯಲ್ಲಿ  ಜಕಣಾಚಾರಿ, ಡಕ್ಕಣಾಚಾರಿಯವರ ಶೈಲಿ ಅನುಸರಿಸಿದ್ದರೂ ಸಂಪೂರ್ಣವಾಗಿ ಸತೀಶ್ ಆಚಾರ್ಯ ಅವರ ವಿನ್ಯಾಸ ಹಾಗೂ ಕುಸುರಿ ಕೆತ್ತನೆ ಎದ್ದು ಕಾಣುತ್ತದೆ. ಕೆತ್ತನೆಯಲ್ಲಿ ತಂತ್ರಸಮುಚ್ಛಯ ಅನುಸರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಪ್ರವೃತ್ತಿಯೇ ವೃತ್ತಿಯಾದಾಗ,,,,,, : ಸತೀಶ್ ಆಚಾರ್ಯರಿಗೆ ಬಾಲ್ಯದಿಂದಲೂ ಶಿಲ್ಪಕಲೆಯಲ್ಲಿ ಆಸಕ್ತಿ ಇತ್ತು. ತಂದೆ ರಚಿಸುತ್ತಿದ್ದ ಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸಿ ಬಿಡುವಿನ ವೇಳೆಯಲ್ಲಿ ತಂದೆಯ ಜೊತೆ ಕೆತ್ತನಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಪಿ.ಯು.ಸಿ ನಂತರ ಎಲೆಕ್ಟ್ರಿಕಲ್ ಇಂಜಿಯರಿಂಗ್‍ನಲ್ಲಿ ಡಿಪ್ಲಾಮೋ ಪಡೆದರು. ‘ರೋಲ್ ಇಲೆಕ್ಟ್ರಾನಿಕ್ಸ್’ನಲ್ಲಿ ಸೇವೆಗೆ ಸೇರಿದರು. ಅದಾಗಲೇ ಅವರ ಮನಸ್ಸು ಶಿಲ್ಪಕಲೆಯ ಕಡೆಗೆ ವಾಲತೊಡಗಿತ್ತು. ತಂದೆಯವರ ಶಿಲ್ಪಕಲೆಯಿಂದ ಪ್ರೇರಿತರಾಗಿ 1986ರಲ್ಲಿ ಸಂಪೂರ್ಣವಾಗಿ ಪ್ರವೃತ್ತಿಯನ್ನೇ ವೃತ್ತಿಯಾಗಿಸಿಕೊಂಡರು.
ಬಿಡುವಿಲ್ಲದ ಕಾಯಕ : ತಂದೆಯವರ ಮಾರ್ಗದರ್ಶನದ ಗರಡಿಯಲ್ಲಿ ಪಳಗಿದ ಸತೀಶ್ ಅವರ ಕೆಲಸದ ಬಗ್ಗೆ ಅವರೇ ರಚಿಸಿದ ಶಿಲ್ಪಗಳೇ ಮಾತನಾಡುತ್ತವೆ. ರಾಜ್ಯದ ನಾನಾ ಭಾಗಗಳಿಂದ ಕಲಾರಸಿಕರು, ಕಲಾರಾಧಕರು ತಂಡ ತಂಡವಾಗಿ ಆಗಮಿಸಿ ತಮಗೆ ಬೇಕಾದ ಶಿಲ್ಪಗಳ ಆರ್ಡರ್ ನೀಡತೊಡಗಿದರು. ಬೇಡಿಕೆ ಹೆಚ್ಚಿದಂತೆಲ್ಲಾ ಕೆಲಸದ ಒತ್ತಡವೂ ಅಧಿಕವಾಯಿತು. ಒಬ್ಬ ಅಸಾಮಾನ್ಯ ಶಿಲ್ಪಿಗಿರಬೇಕಾದ ಚತುರತೆ, ಸಂಯಮ, ಮಾತುಗಾರಿಕೆ, ಪರಿಶುದ್ದ ಮನಸ್ಸು, ಮತ್ತು ಆತ್ಮವಿಶ್ವಾಸಗಳು ಅವರನ್ನು ವಿಶಿಷ್ಟ ಶಿಲ್ಪಿಯನ್ನಾಗಿಸಿದವು. 
ದೇಶ ವಿದೇಶದಲ್ಲಿ ಶಿಲ್ಪಗಳ ವೈಭವ : ಸತೀಶ ಆಚಾರ್ಯ ಅವರ ಶಿಲ್ಪ ವೈಭವ ಕೇವಲ ಕರ್ನಾಟಕ ಅಥವಾ ಭಾರತಕ್ಕೆ ಸೀಮೀತವಾಗಿಲ್ಲ. ವಿದೇಶಗಳಲ್ಲೂ ಇವರ ಶಿಲ್ಪಗಳು ಕಲಾ ರಸಿಕರ ಮನಸೆಳೆದಿವೆ. ಸತೀಶ್ ಅವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟ ಶಿಲ್ಪಾಕೃತಿಯೆಂದರೆ ದೆಹಲಿಯ ಮೆಹರೋಲಿಯಲ್ಲಿನ ಹದಿಮೂರುವರೆ ಅಡಿ ಎತ್ತರದ ಬೃಹದಾಕಾರದ ಧ್ಯಾನಮುದ್ರೆಯ ಶ್ರೀಮಹಾವೀರನ ಶಿಲ್ಪ. 20 ಟನ್ ತೂಕದ ನಸುಗೆಂಪು ಗ್ರಾನೈಟ್ ಶಿಲೆಯಿಂದ ನಿರ್ಮಿಸಿದ ಈ ಶಿಲ್ಪವು ಸತೀಶ್ ಆಚಾರ್ಯರ ಕೀರ್ತಿಯನ್ನು ದಿಕ್ಕುದಿಕ್ಕಿಗೂ ಪಸರಿಸಿತು. ಇವರ ಶಿಲ್ಪಗಳು ಇಟಲಿ, ಕೆನಡಾ, ಲಂಡನ್, ಜಪಾನ್, ದುಬೈ ಮುಂತಾದ ವಿದೇಶಗಳಲ್ಲಿ ಕಲಾರಸಿಕರ ಮನೆಮಾತಾಗಿವೆ. 
ಶಿಲ್ಪಗ್ರಾಮ : ‘ಕಲೆಯನ್ನು ಉಳಿಸಲು ಕಲಿಸಬೇಕಾದುದು ಅನಿವಾರ್ಯ’ ಎಂಬ ತತ್ವ ಸಿದ್ದಾಂತದೊಂದಿಗೆ ಕಾರ್ಕಳದಲ್ಲಿ 2 ಎಕರೆ ಜಮೀನಿನಲ್ಲಿ ‘ವಿಜಯ ಶಿಲ್ಪಕಲಾ ಕೇಂದ್ರ’ವನ್ನು ಸ್ಥಾಪಿಸಿ ಅದರ ಮೂಲಕ ಕಲೆಯನ್ನು ಕಲಿಸುತ್ತಿದ್ದಾರೆ. ಪ್ರಸ್ತುತ 15 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈಗಾಗಲೇ ನೂರಾರು ವಿದ್ಯಾರ್ಥಿಗಳು ಶಿಲ್ಪಕಲೆಯನ್ನು ಕಲಿತು ಸ್ವತಂತ್ರವಾಗಿ ಉದ್ಯೋಗದಲ್ಲಿದ್ದಾರೆ. ಅದರಲ್ಲಿ 25ಕ್ಕೂ ಹೆಚ್ಚು ಜನ ಇಲ್ಲಿಯೇ ವೃತ್ತಿ ನಡೆಸುತ್ತಿದ್ದರೆ. ಸಾಂಸ್ಕøತಿಕ ರಾಯಭಾರಿಗಳನ್ನು ನಿರ್ಮಿಸಿ ಕಲೆಯ ಪಾಳೆಯಗಾರರನ್ನು ಸೃಷ್ಟಿಸುವಲ್ಲಿ ಶಿಲ್ಪಗ್ರಾಮವು ತನ್ನದೇ ಆದ ಹೆಗ್ಗುರುತು ಹೊಂದಿದೆ. 
ಭವಿಷ್ಯದ ಕನಸು : ಸರ್ಕಾರದ ಯಾವುದೇ ಸಹಾಯಗಳ ಹಂಗಿಲ್ಲದೇ ಸಾಗಿದ ಅವರ ಶಿಲ್ಪಸೇವೆಯ ಭವಿಷ್ಯದಲ್ಲಿ ಅನೇಕ ಯೋಜನೆಗಳಿವೆ. ಅವುಗಳಲ್ಲಿ ಮುಖ್ಯವಾಗಿ ಶಿಲ್ಪಕಲಾ ಸಂಶೋಧಕರಿಗಾಗಿ ಶಿಲ್ಪಕಲಾ ಮ್ಯೂಸಿಯಂ  ಮತ್ತು ಗ್ರಂಥಾಲಯ ನಿರ್ಮಿಸುವ ಯೋಜನೆ ಹೊಂದಿದ್ದಾರೆ. ಅಲ್ಲದೇ ವಿಶ್ವಕರ್ಮದವರಲ್ಲಿ ಇರಬೇಕಾದ  ಪಂಚಲೋಹ, ಶಿಲೆ, ಕಾಷ್ಠ, ಚಿನ್ನ, ಕಮ್ಮಾರಿಕೆ ಈ ಐದು ಕಲೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನದಲ್ಲಿದ್ದಾರೆ.
ಸರಳ ಜೀವನ, ಸನ್ಮಾನಗಳ ಹೂರಣ : ತೀರಾ ಸರಳ ಜೀವನ ನಡೆಸುವ ಸತೀಶ್ ಆಚಾರ್ಯ ಅವರ ಕಲೆಯನ್ನು ಮೆಚ್ಚಿ ಅನೇಕ ಸಂಘ-ಸಂಸ್ಥೆಗಳು ಅಭಿನಂದಿಸಿ ಗೌರವಿಸಿವೆ. ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಆದರೆ ಅವೆಲ್ಲವುಗಳಿಗಿಂತ ಮಿಗಿಲಾದ ಮಂದಸ್ಮಿತ, ಆತ್ಮೀಯತೆಯ ಉಪಚಾರ, ಸಕಲರಿಗೂ ಶ್ರೇಷ್ಠತೆಯನ್ನು ಬಯಸುವ ಅವರ ಗುಣಗಳಿಗೆ ಯಾವುದೇ ಪ್ರಶಸ್ತಿ/ಸನ್ಮಾನಗಳು ಸಾಟಿಯಲ್ಲ. ಅವರಿಗೆ ಅವರೇ ಸಾಟಿ.
ಆರ್.ಬಿ.ಗುರುಬಸವರಾಜ 

ಹಳ್ಳಿ ಹೈದರ ರಜಾ-ಮಜಾ

ದಿನಾಂಕ 18-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ

ಹಳ್ಳಿ ಹೈದರ ರಜಾ-ಮಜಾ


ಬೇಸಿಗೆ ರಜೆ ಬಂತೆಂದರೆ ಸಾಕು. ಮಕ್ಕಳಲ್ಲಿ ಒಂದು ಹೊಸ ಸಂಚಲನ ಪ್ರಾರಂಭವಾಗುತ್ತದೆ. ಅದು ಶಾಲೆಗೆ ಹೋಗುವ ಕಾಟ, ಹೋಮ್‍ವರ್ಕ್‍ನ ಕಿರಿಕಿರಿ, ಟೆಸ್ಟ್ ಪರೀಕ್ಷೆಗಳ ರಗಳೆ ಹೀಗೆ ಯಾಂತ್ರಿಕೃತ ಜೀವನ ಸ್ವಲ್ಪ ದಿನಗಳವರೆಗೆ ತಪ್ಪಿತಲ್ಲ ಎಂಬುದೇ ಅವರ ಖುಷಿಗೆ ಕಾರಣವಾಗಿರಬಹುದು. 
ಬೇಸಿಗೆ ರಜೆ ಮಕ್ಕಳಿಗೆ ಖುಷಿಯ ವಿಷಯವಾದರೆ ಪಾಲಕರಿಗೆ ತಲೆನೋವಿನ ವಿಷಯ. ರಜೆಯ ಎರಡು ತಿಂಗಳಲ್ಲಿ ಈ ಮಕ್ಕಳನ್ನು ಹೇಗಪ್ಪಾ ಸಂಭಾಳಿಸೋದು ಎಂಬುದು ಅವರ ತಲೆನೋವಿಗೆ ಕಾರಣ. ಅದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಅವರು ಕಂಡುಕೊಂಡ ಸುಲಭ ಮಾರ್ಗ ಎಂದರೆ ಮಕ್ಕಳನ್ನು ಶಿಬಿರಗಳಿಗೆ ಸೇರಿಸುವುದು. ಈ ಶಿಬಿರಗಳೂ ಸಹ ಶಾಲೆಯ ಮತ್ತೊಂದು ರೂಪ ಎಂಬುದನ್ನು ಬಹುತೇಕ ಪಾಲಕರು ಇನ್ನೂ ಅರ್ಥೈಸಿಕೊಂಡಿಲ್ಲ. 
ಮಕ್ಕಳನ್ನು ಶಿಬಿರಕ್ಕೆ ಸೇರಿಸುವ ಬದಲು ಹಳ್ಳಿಗಳಿಗೆ ಕರೆದೊಯ್ದರೆ ಜೀವನದ ನಿಜವಾದ ಮತ್ತು ಬೆಲೆಕಟ್ಟಲಾಗದ ಪಾಠವನ್ನು ಕಲಿಯುತ್ತಾರೆ. ಮಕ್ಕಳನ್ನು ಹಳ್ಳಿಗಳಿಗೆ ಕರೆದೊಯ್ಯುವುದರಿಂದ ಅವರು ಅಲ್ಲಿ ಗ್ರಾಮೀಣ ಆಟಗಳು, ಜನಜೀವನ, ಕಲೆ, ಸಂಸ್ಕøತಿ, ಸೊಗಡು, ವ್ಯವಸಾಯ, ಗುಡಿಕೈಗಾರಿಕೆಗಳು, ವಿವಿಧ ಕಸಬುದಾರರು ಬಗ್ಗೆ ತಿಳಿದುಕೊಳ್ಳುತ್ತಾರೆ.
ಇವೆಲ್ಲವುಗಳಿಗಿಂತ ಹೆಚ್ಚು ಖುಷಿಯನ್ನು ಆಟಗಳ ಮೂಲಕ ಪಡೆಯುತ್ತಾರೆ. ಬಹುತೇಕ ಮಕ್ಕಳ ಗ್ರಾಮೀಣ ಆಟಗಳಲ್ಲಿ ಪಾಲಕರ ಅನುಕರಣೆ ಇರುತ್ತದೆಯಾದರೂ ಅದರಲ್ಲಿ ಸೃಜನಶೀಲತೆ ಎದ್ದು ಕಾಣುತ್ತದೆ. ಹೊಸತನದ ಹುಡುಕಾಟ ಇರುತ್ತದೆ. ಕಸದಿಂದ ರಸ ಸೃಷ್ಟಿಸುವ ಅಂದರೆ ಅನಗತ್ಯ ವಸ್ತುಗಳಿಗೆ ಬಳಕೆಯ ರೂಪ ನೀಡುವ ಗುಣಗಳನ್ನು ಕಲಿಯುತ್ತಾರೆ. ಇಂತಹ ಚಟುವಟಿಕೆಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ಪೂರಕ ಸಾಮಗ್ರಿಗಳಾಗುತ್ತವೆ ಎಂಬುದನ್ನು ಗಮನಿಸಬೇಕಾಗುತ್ತದೆ. ರಜೆ ಸಜೆಯಾಗುವ ಬದಲು ಮಜವಾಗಬೇಕೆಂದು ಎಲ್ಲಾ ಮಕ್ಕಳು ಬಯಸುವುದರಲ್ಲಿ ತಪ್ಪಿಲ್ಲ ಅಲ್ಲವೇ?
ಆರ್.ಬಿ.ಗುರುಬಸವರಾಜ.

ಹಚ್ಚೆಯ ಬಣ್ಣ ಶಾಶ್ವತವೇ? WHY TATOO IS PERMANENT

ದಿನಾಂಕ 07-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ.

ಹಚ್ಚೆಯ ಬಣ್ಣ ಶಾಶ್ವತವೇ?


ಹಚ್ಚೆಯ ಕುರಿತು ಮಾತನಾಡುವಾಗ ಒಂದು ಪ್ರಶ್ನೆ ಬರುವುದು ಸಹಜ. ಅದೇನೆಂದರೆ ಹಚ್ಚೆಯ ಬಣ್ಣವೇಕೆ ಶಾಶ್ವತ?. ಈ ಪ್ರಶ್ನೆಗೆ ಬಹುತೇಕರಲ್ಲಿ ಉತ್ತರವಿಲ್ಲ. ಇದ್ದರೂ ಅಸ್ಪಸ್ಟ ಉತ್ತರ. ಇದಕ್ಕೆ ಸ್ಪಷ್ಟ ಉತ್ತರ ವಿಜ್ಞಾನದಲ್ಲಿ ದೊರೆಯುತ್ತದೆ. 
     ಮಾನವರ ಚರ್ಮವು ಪ್ರತಿಗಂಟೆಗೆ 40000 ಕೋಶಗಳನ್ನು ಕಳೆದುಕೊಳ್ಳುತ್ತದೆ. ಅಂದರೆ ದಿನಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಕೋಶಗಳು ನಾಶವಾದರೂ ಹಚ್ಚೆ ಶಾಶ್ವತವಾಗಿ ಉಳಿಯುವುದ್ಹೇಗೆ ಎಂಬುದೇ ಸೋಜಿಗ.
ಹಚ್ಚೆ ಹಾಕುವ ಸೂಜಿಯಲ್ಲಿನ ಶಾಯಿಯು ಚರ್ಮದ ಹೊರಪದರದಲ್ಲಿ ರಂದ್ರಗಳನ್ನು ಮಾಡಿ ರಕ್ತನಾಳ ಮತ್ತು ನರಗಳ ಮೂಲಕ ಒಳಪದರದ ಆಳದೊಳಕ್ಕೆ ಜಿನುಗುತ್ತದೆ. ಪ್ರತಿಬಾರಿ ಸೂಜಿಯು ಚುಚ್ಚುವಿಕೆಯಿಂದ ಉಂಟಾದ ಗಾಯದಲ್ಲಿ ಈ ಶಾಯಿಯು ಹರಡಲ್ಪಡುತ್ತದೆ. ಗಾಯವು ಉರಿಯೂತಕ್ಕೆ ಕಾರಣವಾಗುತ್ತದೆ. ಚರ್ಮದಲ್ಲಿನ ಜೀವಕೋಶಗಳು ಪ್ರತಿರಕ್ಷಣಾ ವ್ಯವಸ್ಥೆಯಿಂದ ಗಾಯದ ಸ್ಥಳವನ್ನು ಆಕ್ರಮಿಸಿ ಬಣ್ಣವನ್ನು ಪಡೆದುಕೊಳ್ಳುತ್ತವೆ. ಹಾಗಾಗಿ ಗಾಯಗೊಂಡ ಸ್ಥಳದಲ್ಲಿನ ಶಾಯಿಯ ಬಣ್ಣ ಪಡೆದುಕೊಂಡ ಜೀವಕೋಶಗಳು ಅಲ್ಲಿಯೇ ಉಳಿದು ಶಾಶ್ವತ ಬಣ್ಣಕ್ಕೆ ತಿರುಗುತ್ತವೆ. ಜೀವಕೋಶದಲ್ಲಿನ ಫೈಬ್ರೋಪ್ಲಾಸ್ಟ್ ಮತ್ತು ಮಾಕ್ರೋಪೇಜ್‍ಗಳೆಂಬ ಅಂಶಗಳು ಬಣ್ಣವನ್ನು ಹೀರಿಕೊಂಡು ಚರ್ಮದ ಒಳಭಾಗವನ್ನು ಲಾಕ್ ಮಾಡುತ್ತವೆ ಮತ್ತು ಬಣ್ಣವನ್ನು ಹೊರಸೂಸುತ್ತವೆ. 
ಆರಂಭದಲ್ಲಿ ಶಾಯಿಯು ಚರ್ಮದ ಹೊರಪದರದ ಕೆಳಭಾಗದಲ್ಲಿ ಸಂಗ್ರಹವಾಗುತ್ತದೆ. ನಂತರ ಹಾನಿಗೊಳಗಾದ ಹೊರಚರ್ಮದ ಜೀವಕೊಶಗಳು ದುರಸ್ತಿಯ ನಂತರ ಬಣ್ಣವನ್ನು ಹೊರಸೂಸುತ್ತವೆ. ಬಿಸಿಲು ಗಾಳಿಗೆ ಹೊರಚರ್ಮದ ಗಾಯಗೊಂಡ ಕೋಶಗಳು ನಾಶವಾಗಿ ಸಿಪ್ಪೆಸುಲಿದು ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತವೆ ಮತ್ತು ಶಾಯಿಯ ಶಾಶ್ವತ ಬಣ್ಣ ಪಡೆದುಕೊಳ್ಳುತ್ತವೆ. 
ಪ್ರಾಚೀನತೆಯಿಂದ ಇತ್ತೀಚಿನವರೆಗೆ,,,,
ಹಚ್ಚೆಯು ಕೇವಲ ಫ್ಯಾಷನ್ನಿನ ಪ್ರತೀಕವಲ್ಲ. ಅದು ಪುರಾತನ ಕಾಲದಿಂದ ಮಾನವನ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ. ಜನರ ಆಚಾರ ವಿಚಾರ ಸಂಸ್ಕøತಿ ಧಾರ್ಮಿಕ ಸಂಪ್ರದಾಯಗಳ ಪ್ರತಿಬಿಂಬವಾಗಿದೆ. ಸಂಸ್ಕøತಿಯಿಂದ ಸಂಸ್ಕøತಿಗೆ, ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಹಚ್ಚೆಯ ಸ್ವರೂಪಗಳು ಬದಲಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. 
ಟ್ಯಾಟೂ ಎಂಬ ಇಂಗ್ಲೀಷ್ ಪದ ‘ಟಾಟೂ’ ಎಂಬ ಟಾಹಿಟಿ ದ್ವೀಪದ ಮೂಲದ್ದು. ಅಂದರೆ ‘ಗುರುತಿಸುವಿಕೆ’ ಎಂದರ್ಥ.
ಟ್ಯಾಟೂವಿನ ಇತಿಹಾಸ ಹುಡುಕಿ ಹೊರಟರೆ ಅದು ನಮ್ಮನ್ನು ಪೆರುವಿನ ಮಮ್ಮಿಗೆ ಕರೆದೊಯ್ಯುತ್ತದೆ. ಈಜಿಪ್ತಿನಲ್ಲಿ ಹುಟ್ಟಿಕೊಂಡ ಈ ಕಲೆಯು ಸಾಮ್ರಾಜ್ಯಗಳ ವಿಸ್ತರಣೆಯಿಂದ ವಿವಿಧ ನಾಗರೀಕತೆಗಳನ್ನು ತಲುಪಿತು. ಕ್ರೀಟ್, ಗ್ರೀಸ್, ಪರ್ಷಿಯಾ, ಅರೇಬಿಯನ್ ನಾಗರೀಕತೆಗಳಿಗೂ ವಿಸ್ತರಿಸಿತು. ಕ್ರಿ.ಪೂ.2000 ರಲ್ಲಿ ಈ ಕಲೆ ಚೀನಾ ತಲುಪಿತು. 
ಕ್ರಿ.ಪೂ.6000 ರಲ್ಲಿ ಪೆರುವಿನ ಮಮ್ಮಿಯಲ್ಲಿ ಜಗತ್ತಿನ ಮೊದಲ ದಾಖಲಿತ ಹಚ್ಚೆಯು ಪತ್ತೆಯಾಗಿದೆ.
ಹಚ್ಚೆಯ ಕಲೆಯು ಪಾಶ್ಚಿಮಾತ್ಯರ ಸಂಸ್ಕøತಿಯ ಪ್ರತೀಕವೇ ಆಗಿತ್ತು ಎಂಬುದಕ್ಕೆ ಅವರು ಆಗಿದ್ದಾಂಗ್ಗೆ ಏರ್ಪಡಿಸುತ್ತಿದ್ದ ಹಚ್ಚೆ ಉತ್ಸವಗಳೇ ಸಾಕ್ಷಿ. ಪ್ರತಿ ಉತ್ಸವದಲ್ಲಿ ಹೊಸ ಹೊಸ ಶೈಲಿಗಳು, ವಿನ್ಯಾಸಗಳು ಪ್ರದರ್ಶಿತವಾಗುತ್ತಿದ್ದವು. ಈ ಉತ್ಸವಗಳ ಕಿರಿಕಿರಿಯಿಂದ ಮನನೊಂದÀ  ಪೋಪ್ ಹೆಡ್ರಿ ಕ್ರಿ.ಶ.747 ರಲ್ಲಿ ಹಚ್ಚೆ ಹಾಕುವುದನ್ನು ನಿಷೇಧಿಸಿದರು. ಪುನಃ 12 ಶತಮಾನದಲ್ಲಿ ಪ್ರಾರಂಭವಾದರೂ 16 ನೇ ಶತಮಾನದವರೆಗೂ ಅದರ ಬಳಕೆ ಆಮೆ ವೇಗದಲ್ಲಿತ್ತು. 1691 ರಲ್ಲಿ ಪಾಶ್ಚಿಮಾತ್ಯ ನಾವಿಕ ವಿಲಿಯಂ ಡ್ಯಾಂಫರ್ ಪುನಃ ಹಚ್ಚೆಯ ಬಳಕೆಗೆ ಮುನ್ನುಡಿ ಬರೆದನು. ಅಲ್ಲಿಂದ ಹಚ್ಚೆಯು ಪಾಶ್ಚಿಮಾತ್ಯ ಸಂಸ್ಕøತಿಯ ಒಂದು ಭಾಗವೇ ಆಯಿತು. 
ಪಾಶ್ಚಿಮಾತ್ಯರಲ್ಲಿ ಹಚ್ಚೆಯ ಬಳಕೆ ಕಡಿಮೆಯಾದ ಕಾಲಕ್ಕೆ ಜಪಾನ್‍ನಲ್ಲಿ ಪ್ರಸಿದ್ದಿ ಪಡೆಯಿತು. ಪ್ರಾರಂಭದಲ್ಲಿ ಅಪರಾಧಿಗಳನ್ನು ಗುರುತಿಸಲು ಅವರ ಹಣೆಗೆ ಹಚ್ಚೆಯ ಗೆರೆ  ಹಾಕಲಾಗುತ್ತಿತ್ತು. ಕಾಲಕ್ರಮೇಣವಾಗಿ ಜಪಾನ್‍ನಲ್ಲಿ ಹಚ್ಚೆಯು ಸೌಂದರ್ಯಕಲೆಯಾಗಿ ಬೆಳೆಯಿತು. 1700 ರ ಸುತ್ತಮುತ್ತ ಜಪಾನ್‍ನಲ್ಲಿ ಹಚ್ಚೆ ಬಳಕೆಯ ಬಗ್ಗೆ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರಲಾಯಿತು. ಆಗ ಕೇವಲ ಶ್ರೀಮಂತರು ಮಾತ್ರ ಅಲಂಕಾರಿಕ ಉಡುಪುಗಳನ್ನು ಧರಿಸಲು ಅವಕಾಶವಿತ್ತು. ಇದಕ್ಕೆ ಪ್ರತಿಯಾಗಿ ಮಧ್ಯಮ ವರ್ಗದ ಜನರು ತಮ್ಮ ದೇಹವನ್ನು ಹಚ್ಚೆಯಿಂದ ಅಲಂಕರಿಸತೊಡಗಿದರು. ಇದು ಎಲ್ಲರನ್ನು ಆಕರ್ಷಿಸತೊಡಗಿತು. ಹೀಗಾಗಿ ಹಚ್ಚೆಯು ಹೆಚ್ಚು ವ್ಯಾಪಕವಾಗಿ ಜಗತ್ತಿನ ಎಲ್ಲೆಡೆ ಪಸರಿಸಿತು. ಹಚ್ಚೆಗೆ ಯಂತ್ರಗಳ ಬಳಕೆಯ ನಂತರ ಅದರ ವೇಗ ಹೆಚ್ಚಾಯಿತು.
ಇಂದು ಬಳಸುವ ಯಂತ್ರಗಳು ಪ್ರತಿನಿಮಿಷಕ್ಕೆ 50 ರಿಂದ 3000 ತರಂಗಾಂತರದಲ್ಲಿ ಚರ್ಮಕ್ಕೆ ಬಣ್ಣವನ್ನು ಸೇರಿಸುತ್ತವೆ. 


ಹಚ್ಚೆಯನ್ನೂ ಅಳಿಸಬಹುದು!
ಒಮ್ಮೆ ಹಾಕಿದ ಹಚ್ಚೆಯನ್ನು ಅಳಿಸುವುದು ತುಂಬಾ ಕಷ್ಟಕರ. ಕೆಲವರು ಹಚ್ಚೆಯ ಭಾಗವನ್ನು ಕತ್ತರಿಸುವ ಅಥವಾ ಸುಟ್ಟುಕೊಳ್ಳುವಂಥಹ ಹುಚ್ಚು ಕೃತ್ಯಕ್ಕೆ ಮುಂದಾಗಿರುವುದೂ ಸತ್ಯ. ಇವುಗಳನ್ನು ಹೊರತುಪಡಿಸಿ ಹಚ್ಚೆಯನ್ನು ಅಳಿಸಿ ಹಾಕಲು ಅನೇಕ ವಿಧಾನಗಳಿವೆ. ಶಸ್ತ್ರ ಚಿಕಿತ್ಸೆ ಮಾಡಿಸುವುದು, ಡರ್ಮಬ್ರೆಷನ್, ರೇಡಿಯೋ ಫ್ರೀಕ್ವೆನ್ಸಿ ಮುಂತಾದವು ಚಾಲ್ತಿಯಲ್ಲಿವೆ. ಆದರೆ ಇವು ಸಂಪೂರ್ಣವಾಗಿ ಅಳಿಸಿ ಹಾಕುವುದಿಲ್ಲ. ಅಲ್ಪ ಪ್ರಮಾಣದ ಕಲೆ ಉಳಿಯುತ್ತದೆ. ಇವೆಲ್ಲವುಗಳಿಗಿಂತ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದರೆ ಕ್ಯೂ ಲೇಸರ್ ವಿಧಾನ. ಇದು ಹಚ್ಚೆಯ ಕಲೆಯನ್ನು ಪೂರ್ಣ ಪ್ರಮಾಣದಲ್ಲಿ ಅಳಿಸಿಹಾಕುವ  ಅತ್ಯಾಧುನಿಕ ಲೇಸರ್ ಚಿಕಿತ್ಸೆ. ಇದು ತುಂಬಾ ವೆಚ್ಚದಾಯಕವಾದರೂ ಅತ್ಯಂತ ಸುರಕ್ಷಿತ ವಿಧಾನವಾಗಿದೆ. 
ಆರ್.ಬಿ.ಗುರುಬಸವರಾಜ


April 5, 2016

ಹೆಲಿಕಾಪ್ಟರ್ ನಿರ್ಮಿಸಿದ ಅನಕ್ಷರಸ್ಥ ಯುವಕ

ದಿನಾಂಕ 05-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.
                                     

ಹೆಲಿಕಾಪ್ಟರ್ ನಿರ್ಮಿಸಿದ ಅನಕ್ಷರಸ್ಥ ಯುವಕ


ಏನನ್ನಾದರೂ ವಿಶೇಷವಾದುದನ್ನು ಆವಿಷ್ಕರಿಸಲು ಅಲಂಕಾರಿಕ ಪದವಿ ಅಗತ್ಯ ಎಂಬುವವರೇ ಹೆಚ್ಚು. ಪುಸ್ತಕ ಜ್ಞಾನ ಇಲ್ಲದೆ ಕೇವಲ ಬಲವಾದ ಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದಲೂ ಹೊಸದನ್ನು ಆವಿಷ್ಕರಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ 25ರ ಹರೆಯದ ಯುವಕ ಸಾಗರ್ ಪ್ರಸಾದ್ ಶರ್ಮಾ. 
ಪ್ರಸ್ತುತ ಅಸ್ಸಾಂನ ಧೇಮಾಜಿ ಜಿಲ್ಲೆಯ ದೇಮೌ ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವ ಸಾಗರ್ ಓದಿದ್ದು ಕೇವಲ 3ನೇ ತರಗತಿ. ಬಡತನದಿಂದಾಗಿ ಮುಂದೆ ಓದಲು ಆಗದೇ ಶಾಲೆ ಬಿಟ್ಟು ಕೂಲಿ ಕೆಲಸ ಮಾಡುತ್ತಾ ಇದ್ದ ಬಾಲಕನಿಗೆ ಬಾನಂಗಳದ ಲೋಹದ ಬಾನಾಡಿ ಆಕರ್ಷಿಸಿತ್ತು. ಆಗ ಮೂಡಿದ ಕನಸು ಈಗ ನನಸಾಗಿದೆ. ಇದಕ್ಕೆ ಅವನಲ್ಲಿದ್ದ ಅಚಲ ಛಲ ಮತ್ತು ಪರಿಶ್ರಮಗಳು ಸಾಗರ್‍ನನ್ನು ಒಬ್ಬ ಆಟೋಮೊಬೈಲ್ ಇಂಜಿನಿಯರ್‍ನನ್ನಾಗಿಸಿದವು. 
ಮೂಲತಃ ವೆಲ್ಡರ್ ಆಗಿದ್ದ ಸಾಗರ್ ಪ್ರಸಾದ್ ತನ್ನ ಕನಸಿಗೆ ಬಣ್ಣ ನೀಡಲು ನಿರ್ಧರಿಸಿದ. ಮೂರು ವರ್ಷಗಳ ಸತತ ಪರಿಶ್ರಮದ ಫಲವಾಗಿ ಹೊರಹೊಮ್ಮಿದ ಹೆಲಿಕಾಪ್ಟರ್ ಹಾರಲು ಸಿದ್ದವಾಗಿದೆ. ಸ್ಥಳೀಯ ತಂತ್ರಜ್ಞಾನ ಹಾಗೂ ಸ್ಥಳೀಯ ಎಸ್.ಯು.ವಿ. ಯಂತ್ರಗಳನ್ನು ಬಳಸಿ ಡೀಸಲ್‍ನಿಂದ ಕಾರ್ಯನಿರ್ವಹಿಸುವ ಹೆಲಿಕಾಪ್ಟರ್ ನಿರ್ಮಿಸಿದ್ದಾನೆ. ಈ ಹೆಲಿಕಾಪ್ಟರ್‍ನ ಹೊರಮೈಗೆ ಲೋಹದ ಹೊದಿಕೆ ಮಾಡಲಾಗಿದೆ. 2 ಆಸನಗಳುಳ್ಳ ಈ ಕಾಪ್ಟರ್ ಭೂಮಿಯಿಂದ 30 ರಿಂದ 50 ಅಡಿ ಹಾರುವ ಸಾಮಥ್ರ್ಯ ಹೊಂದಿದೆ. ಈ ಕಾಪ್ಟರ್‍ಗೆ ಸೇನಾ ಕಾಪ್ಟರ್ ಅಥವಾ ಇನ್ನಿತರೇ ಖಾಸಗೀ ಬ್ರಾಂಡೆಡ್ ಕಾಪ್ಟರ್‍ಗಳಂತೆ ವೇಗವಾಗಿ ಹಾರುವ ಸಾಮಥ್ರ್ಯ ಇಲ್ಲ. ಸಾಧಾರಣವಾಗಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಮಾತ್ರ ಹಾರಾಟ ನಡೆಸಬಲ್ಲುದು.  15 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾದ ಇದಕ್ಕೆ ಆರ್ಥಿಕ ಸಹಾಯ ಒದಗಿಸಿದ ಸ್ನೇಹಿತ ತಪನ್ ಗಿಮೈರ್‍ನ ಸಹಾಯ ಮತ್ತು ಬೆಂಬಲವನ್ನು ನೆನೆಯುತ್ತಾರೆ. 
ಪ್ರಾರಂಭದಲ್ಲಿ ತಾನು ಹೆಲಿಕಾಪ್ಟರ್ ನಿರ್ಮಿಸುವ ವಿಷಯವನ್ನು ತನ್ನ ಗೆಳೆಯರಿಗೆ ತಿಳಿಸಿದಾಗ ಅವರಲ್ಲಿ ಗೇಲಿ ಮಾಡಿ ನಕ್ಕವರೇ ಹೆಚ್ಚು. ಏಕೆಂದರೆ ಸಾಗರ್ ಪ್ರಸಾದ್ ಔಪಚಾರಿಕ ಶಿಕ್ಷಣ ಪಡೆಯದೇ ಇರುವುದು ಹಾಗೂ ಹೆಲಿಕಾಪ್ಟರ್‍ನಂತಹ ವಾಹನಗಳನ್ನು ನಿರ್ಮಿಸಲು ಶಾಸ್ತ್ರೀಯ ಅಭ್ಯಾಸ ಬೇಕೆಂಬುದು ಅವರ ನಗುವಿಗೆ ಕಾರಣವಾಗಿರಬಹುದು. ಈಗ ಅದು ಸಾಧ್ಯವಾದಾಗ ಅಂದು ಗೇಲಿ ಮಾಡಿ ನಕ್ಕವರೆಲ್ಲ ಇಂದು ಬಾಯಿಯ ಮೇಲೆ ಬೆರಳಿಟ್ಟಿದ್ದಾರೆ.  
ಮೂರು ವರ್ಷಗಳ ಹಿಂದೆ ಸಣ್ಣದೊಂದು ಶೆಡ್‍ನಲ್ಲಿ ಪ್ರಾರಂಭವಾದ ಕೆಲಸಕ್ಕೆ ಸ್ಪೂರ್ತಿ ತುಂಬಿ ಹೆಲಿಕಾಪ್ಟರ್ ಸಂಪೂರ್ಣ ಸಿದ್ದವಾಗುವವರೆಗೂ ಜೊತೆಗಿದ್ದು ಸಹಕರಿಸಿದವರು ಸಾಗರ್ ಪ್ರಸಾದ್‍ನ ಮಡದಿ ಜನ್ಮೋನಿ ಮಾಯಾಂಕ್. ಶೇಕಡಾ 90ರಷ್ಟು ಕೆಲಸಗಳು ಸಂಪೂರ್ಣವಾದ ಮೇಲೆಯೇ ಕಾಪ್ಟರ್‍ನ್ನು ಹೊರಗೆ ತಂದಿದ್ದಾರೆ. ಹೆಲಿಕಾಪ್ಟರ್ ನಿರ್ಮಾಣವಾದ ಸುದ್ದಿ ಹಳ್ಳಿಯಲ್ಲಿ ಹಬ್ಬುತ್ತಿದ್ದಂತೆ ಜನರು ತಂಡ ತಂಡವಾಗಿ ಇವರ ಮನೆಗೆ ನುಗ್ಗತೊಡಗಿದ್ದಾರೆ.  ಬಾನಿನಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ಹಳ್ಳಿಯ ನೆಲದಲ್ಲೇ ನಿರ್ಮಾಣಗೊಂಡದ್ದು ಹಳ್ಳಿಯ ಜನರಿಗೆÉ ಖುಷಿ ತಂದಿದೆ. 
ಈಗಾಗಲೇ ಪ್ರಯೋಗಾರ್ಥ ಪರೀಕ್ಷೆಯಲ್ಲಿ ಸಂಪೂರ್ಣ ಯಶಸ್ವಿಯಾದ ಈ ಕಾಪ್ಟರ್‍ಗೆ ‘ಪವನ ಶಕ್ತಿ’ ಅಥವಾ ‘ಪವನ ಪುತ್ರ’ ಎಂಬ ಹೆಸರಿಡಲು ನಿರ್ಧರಿಸಿದ್ದಾನೆ. ಮೇಕ್ ಇನ್ ಇಂಡಿಯಾಗೆ ಹೆಚ್ಚು ಒತ್ತು ಕೊಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅನುಮೋದನೆಗೆ ಪತ್ರ ಕಳಿಸಲಾಗಿದೆ. 
‘ಇದನ್ನು ನನ್ನ ಹಳ್ಳಿ ಜನರ ಸರಕು ಸಾಮಗ್ರಿ ಸರಬರಾಜು ಮಾಡುವ ಉದ್ದೇಶದಿಂದ ತಯಾರಿಸಿದ್ದೇನೆ’ ಎನ್ನುವ ಸಾಗರ್ ಪ್ರಸಾದ್ ಅವರ ಮಾತುಗಳಲ್ಲಿ ಹಳ್ಳಿ ಜನರ ಸಂಕಷ್ಟಗಳನ್ನು ನಿವಾರಿಸುವ ಬದ್ದತೆಯಿದೆ. 
‘ಯಶಸ್ಸು ಗಳಿಸಲು ಶಿಕ್ಷಣವೊಂದೇ ಸಾಧನವಲ್ಲ. ಅಸಾಧಾರಣ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಶಿಕ್ಷಣದ ಹೊರತಾಗಿಯೂ ಯಶಸ್ಸು ಗಳಿಸಲು ಸಾಧ್ಯವಿದೆ’ ಎನ್ನುವ ಪ್ರಸಾದ್ ಅವರ ಮಾತುಗಳು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಸ್ಪೂರ್ತಿಯಾಗುತ್ತವೆ. 
ಆರ್.ಬಿ.ಗುರುಬಸವರಾಜ

April 3, 2016

ಆಧುನಿಕ ಕಂಪ್ಯೂಟರ್‍ನ ಪೂರ್ವಜರು ANCESTORS OF MODREN COMPUTER

ದಿನಾಂಕ 02-04-2016 ರ ಸಂಯುಕ್ತ ಕರ್ನಾಟಕಕಿಂದರಿ ಜೋಗಿಯಲ್ಲಿ ಪ್ರಕಟವಾದ ನನ್ನ ಕಿರುಬರಹ.

ಆಧುನಿಕ ಕಂಪ್ಯೂಟರ್‍ನ ಪೂರ್ವಜರು



ಅದೊಂದು ಅಸಾಮಾನ್ಯ ಗೊಂಬೆ. ಪಿಳಪಿಳನೇ ಕಣ್ಣ ರೆಪ್ಪೆ ಬಡಿಯುತ್ತಾ ನೀವು ಹೇಳಿದ ಶಬ್ದವನ್ನು ಆಲಿಸಿ ಕೈಯಲ್ಲಿನ ಗರಿಯನ್ನು ಮಸಿಯಲ್ಲಿ ಅದ್ದಿ, ತನ್ನ ಮುಂದಿನ ಕಾಗದದಲ್ಲಿ ಪದಗಳನ್ನು ಬರೆಯುತ್ತದೆ. ಅದರ ಪಕ್ಕದಲ್ಲಿ ಇನ್ನೊಂದು ಚಿತ್ರ ಬಿಡಿಸುವ ಗೊಂಬೆ. ಅವೆರಡರ ಮಧ್ಯೆ ಮತ್ತೊಂದು ಸಂಗೀತವಾದ್ಯ ನುಡಿಸುವ ಗೊಂಬೆ. ಈ ಸ್ವಯಂಚಾಲಿತ ಗೊಂಬೆಗಳನ್ನು ನೋಡುತ್ತಾ ನಿಂತರೆ ನಿಮ್ಮನ್ನೇ ನೀವು ಮರೆತುಬಿಡುತ್ತೀರಿ. ಆಧುನಿಕ ಕಂಪ್ಯೂಟರ್ ಯುಗದಲ್ಲಿ ಇದೆಲ್ಲವೂ ತೀರಾ ಮಾಮೂಲು ಎನಿಸುತ್ತದೆ ಅಲ್ಲವೇ?  ಈ ಗೊಂಬೆಗಳು ಆಧುನಿಕ ಗೊಂಬೆಗಳಲ್ಲ. ಇವು ತಯಾರಾಗಿ ಇಂದಿಗೆ 250 ವರ್ಷಗಳು ಕಳೆದಿವೆ ಎಂದರೆ ಆಶ್ಚರ್ಯವಾಗುತ್ತದೆ. ಆದರೆ ಇಂದಿಗೂ ಈ ಗೊಂಬೆಗಳು ಸುಸ್ಥಿತಿಯಲ್ಲಿವೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಇನ್ನೂ ಆಶ್ಚರ್ಯದ ಸಂಗತಿ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಂಶೋಧನಾ ಕ್ಷೇತ್ರಗಳಲ್ಲಿ ಈ ಯಂತ್ರಗಳನ್ನು ಆಧುನಿಕ ಕಂಪ್ಯೂಟರ್‍ನ ಪೂರ್ವಜರು ಎಂದೇ ಭಾವಿಸಲಾಗಿದೆ. 
ಎಲ್ಲಿವೆ ಈ ಗೊಂಬೆಗಳು : ಪ್ರಸ್ತುತ ಸ್ವಿಟ್ಜರ್‍ಲ್ಯಾಂಡ್ ನ್ಯೂಚಾಟಲ್‍ನ ಇತಿಹಾಸ ಮತ್ತು ಪುರಾತತ್ವ ಸಂಸ್ಥೆಯ ವಸ್ತು ಸಂಗ್ರಹಾಲಯದಲ್ಲಿವೆ. ಈ ಯಂತ್ರ ಮಾನವರ ನಿರ್ಮಾತೃ ಸ್ವಿಟ್ಜರ್‍ಲ್ಯಾಂಡಿನ ಪಿಯರೆ ಜಾಕ್ವೆಟ್ ಡ್ರೋಜರ್. ವಿಶ್ವಪ್ರಸಿದ್ದ ಸ್ವಿಸ್ ಗಡಿಯಾರ ತಯಾರಕರಾದ ಡ್ರೋಜ್‍ರವರಿಗೆ ಸಮಯದ ಯಂತ್ರಗಳೊಂದಿಗೆ ಆಟವಾಡುವ ಕಲೆ ಸಿದ್ದಿಸಿತ್ತು. ಅವರ ಅಪಾರ ಅನುಭವ ಮತ್ತು ಉತ್ತಮ ಕಾರ್ಯವೈಖರಿಯ ಫಲವಾಗಿ ಈ ಮೂರು ಯಂತ್ರ ಮಾನವರನ್ನು ಸೃಷ್ಟಿ ಮಾಡಿದರು. 1906ರಲ್ಲಿ ನ್ಯೂಚಾಟಲ್‍ನ ಇತಿಹಾಸ ಮತ್ತು ಪುರಾತತ್ವ ಸಂಸ್ಥೆ 75 ಸಾವಿರ ಗೋಲ್ಡ್ ಪ್ರಾಂಕ್ಸ್‍ಗಳಿಗೆ ಈ ಯಂತ್ರಗಳನ್ನು ಖರೀದಿಸಿದ್ದಾರೆ. 
1767 ರಿಂದ 1774 ರ ಅವಧಿಯಲ್ಲಿ ರಚಿತವಾದ ಈ ಸಂಕೀರ್ಣ ಗೊಂಬೆಗಳು ಇಂದಿನ ಆಂಡ್ರಾಯ್ಡ್ ಸಾಧನಗಳನ್ನು ಹೋಲುತ್ತಿವೆ. ಇಲ್ಲಿ ಮೂರು ಗೊಂಬೆಗಳಿದ್ದು, ಅವುಗಳಲ್ಲಿ ಒಂದಕ್ಕೆ ರೈಟರ್, ಇನ್ನೊಂದಕ್ಕೆ ಡ್ರಾಫ್ಟ್‍ಮ್ಯಾನ್, ಮತ್ತೊಂದಕ್ಕೆ ಲೇಡಿ ಮ್ಯೂಜಿಸಿಯನ್ ಎಂದು ಹೆಸರಿಸಲಾಗಿದೆ. 
ರೈಟರ್ : ರೈಟರ್ 1772 ರಲ್ಲಿ ಪೂರ್ಣಗೊಂಡಿದ್ದು 15ನೇ ಲೂಯಿಯ ಶೈಲಿಯಲ್ಲಿದೆ. 6000 ಬಿಡಿಭಾಗಗಳಿಂದ ನಿರ್ಮಾಣವಾದ ಈ ಗೊಂಬೆಯ ಕೈಯಲ್ಲಿ ಲೇಖನಿ ಇದೆ. ನೀವು ಹೇಳಿದ ಶಬ್ದವನ್ನು ಆಲಿಸಿ ಲೇಖನಿಯ ಸಹಾಯದಿಂದ ತನ್ನ ಮುಂದಿನ ಕಾಗದದಲ್ಲಿ ಬರೆಯುತ್ತದೆ. 4 ಸಾಲುಗಳ 40 ಶಬ್ದಗಳನ್ನು ಬರೆಯುವ ಸಾಮಥ್ರ್ಯ ರೈಟರ್‍ಗೆ ಇದೆ. 
ಕೇಂದ್ರ ಭಾಗದಲ್ಲಿ ಗೊಂಬೆಯ ಚಲನೆಗೆ ಅನುಕೂಲವಾಗುವಂತೆ 40 ಚಕ್ರಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ರೇಖೀಯ ಚಲನೆ ಅಥವಾ ಪ್ರತಿಕ್ರಮದಲ್ಲಿ ರೋಟರಿ ಚಲನೆ ಪರಿವರ್ತಿಸುವ ಯಾಂತ್ರಿಕ ರಚನೆಗಳಿಂದ ಕೂಡಿದೆ. ಎಲ್ಲಾ ಚಕ್ರಗಳು ದೊಡ್ಡ ಚಕ್ರ ಅಥವಾ ಡಿಸ್ಕ್‍ನಿಂದ ನಿಯಂತ್ರಿಸಲ್ಪಟ್ಟಿವೆ. ದೊಡ್ಡ ಚಕ್ರವು ಟೈಪ್ ರೈಟರ್ ಮಾದರಿಯ ಅಕ್ಷರಗಳನ್ನು   ಹೊಂದಿದೆ. ಪೂರ್ವ ಮುದ್ರಿತ ಧ್ವನಿ ಸಂದೇಶದ ಮೂಲಕ ಆಲಿಸಿದ ಶಬ್ದಗಳಿಗೆ ಅಕ್ಷರ ರೂಪು ಕೊಡುವಂತೆ ವಿನ್ಯಾಸಗೊಳಿಸಲಾಗಿದೆ. ಬರೆಯುವಾಗ ಕಣ್ಣುಗಳ ಚಲನೆ ಬರೆಯುವ ಕಾಗದದ ಮೇಲೆ ಇರುವಂತೆ ವಿನ್ಯಾಸಗೊಳಿಸಿರುವುದು ವಿನ್ಯಾಸಕಾರರ ಕೈಚಳಕಕ್ಕೆ ಸಾಕ್ಷಿಯಾಗಿದೆ.
ಡ್ರಾಫ್ಟ್‍ಮ್ಯಾನ್ : ಡ್ರಾಫ್ಟ್‍ಮ್ಯಾನ್ ಅಥವಾ ಚಿತ್ರಗಾರ ಗೊಂಬೆಯು ರೈಟರ್‍ನ ಶೈಲಿಯನ್ನೇ ಹೋಲುತ್ತದೆ. ಇದರಲ್ಲಿ 2000 ಬಿಡಿ ಭಾಗಗಳನ್ನು ಬಳಸಲಾಗಿದೆ. ಪೆನ್ಸಿಲ್ ಬಳಸಿ 4 ಚಿತ್ರಗಳನ್ನು ರಚಿಸುವಂತೆ ಪ್ರೋಗ್ರಾಂ ಅಳವಡಿಸಲಾಗಿದೆ. ಆಗಿಂದ್ದಾಗ್ಗೆ ಚಿತ್ರಗಾರ ತನ್ನ ಕುರ್ಚಿಯಿಂದ ಚಲಿಸುವಂತೆ, ಪೆನ್ಸಿಲ್‍ನ ಧೂಳನ್ನು ಬಾಯಿಂದ ಊದಿ ತೆಗೆಯುವಂತೆ ಹಾಗೂ ಚಿತ್ರಿಸುವಾಗ ಕೈಗಳ ಚಲನೆ ಮತ್ತು ಕಣ್ಣುಗಳ ಚಲನೆಗೂ ಹೊಂದಾಣಿಕೆ ಇರುವಂತೆ ರೂಪಿಸಲಾಗಿದೆ. ನೂರು ವರ್ಷಗಳ ಹಿಂದೆ ಪೆನ್ಸಿಲ್ ಬದಲಿಗೆ ಬಾಲ್ ಪಾಯಿಂಟ್ ಪೆನ್ ಅಳವಡಿಸಲಾಗಿದೆ. 
ಲೇಡಿ ಮ್ಯೂಜಿಸಿಯನ್ : 2500 ಬಿಡಿ ಭಾಗಗಳಿಂದ ನಿರ್ಮಿತವಾದ ಲೇಡಿ ಮ್ಯೂಜಿಸಿಯನ್ ಇವೆರಡಕ್ಕಿಂತ ವಿಭಿನ್ನವಾದ ರಚನೆ ಹೊಂದಿದೆ. 1.80 ಮೀಟರ್ ಎತ್ತರದ ಈ ಗೊಂಬೆ ತನ್ನ ಮುಂದಿನ ವಾದ್ಯದ ಸಹಾಯದಿಂದ ಸಂಗೀತ ಉಪಕರಣ ನಿರ್ವಹಿಸುವಂತೆ ರೂಪಿಸಲಾಗಿದೆ. ತನ್ನ 10 ಬೆರಳುಗಳ ಯಾಂತ್ರಿಕ ಕ್ರಿಯೆಯಿಂದ  ಐದು ವಿವಿಧ ಸಂಗೀತ ಸ್ವರಗಳನ್ನು ಸಂಯೋಜಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸಂಗೀತ ನುಡಿಸುವಾಗ ಕೈಗಳಿಗೂ ಕಣ್ಣುಗಳಿಗೂ ನೇರ ಸಂಪರ್ಕ ಕಲ್ಪಿಸಲಾಗಿದೆ. ಜೊತೆಗೆ ವಿಶೇಷವಾಗಿ ಗೊಂಬೆಯು ಉಸಿರಾಡುವಂತೆ ವಿನ್ಯಾಸಗೊಳಿಸಲಾಗಿದೆ. ಉಸಿರಾಡುವಾಗ ಎದೆಯ ಭಾಗದಲ್ಲಿ ಏರಿಳಿತಗಳು ಉಂಟಾಗುವಂತೆ ರೂಪಿಸಿರುವುದು ನೋಡುಗರ ದೃಷ್ಟಿಯನ್ನು ಹಿಡಿದು ನಿಲ್ಲಿಸುತ್ತದೆ.  
ಅಸಾಧಾರಣ ವ್ಯಕ್ತಿಯ ಗಮನಾರ್ಹ ವಿನ್ಯಾಸ : ಪಿಯರೆ ಜಾಕ್ವೆಟ್ ಡ್ರೋಜರ್ ಆ ಕಾಲದ ಅಸಾಧಾರಣ ವ್ಯಕ್ತಿಯಾಗಿದ್ದರು. ಡ್ರೋಜ್ ಕುಟುಂಬದವರು ವಿಶೇಷವಾಗಿ ಕೈಗಡಿಯಾರ  ಮತ್ತು ಇತರೆ ಅದ್ಬುತ ಯಂತ್ರಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದರು. ಕೈಗಡಿಯಾರಗಳು, ಅನಿಮೇಟೆಡ್ ಗೊಂಬೆಗಳು, ಸ್ವಯಂಚಾಲಿತ ಮತ್ತು ಯಾಂತ್ರಿಕ ಪಕ್ಷಿಗಳ ವಿನ್ಯಾಸ ಮತ್ತು ನಿರ್ಮಾಣ ಕಾರ್ಯದಲ್ಲಿ ಪಳಗಿದ್ದರು. ಯುರೋಫ್, ಚೀನಾ, ಭಾರತ, ಜಪಾನ್‍ಗಳ ಕೆಲವು ಚಕ್ರವರ್ತಿಗಳ ಆಕರ್ಷಕ ಅನಿಮೇಟೆಡ್ ಗೊಂಬೆಗಳನ್ನು ತಯಾರಿಸಿದ್ದರು. ಇವು ಯುರೋಪಿನಾದ್ಯಂತ ಮತ್ತು ಜಗತ್ತಿನ ಇತರೆಡೆ ಪ್ರದರ್ಶಿತಗೊಂಡಿವೆ. ಅಪಾರ ಜನಮನ ಸೂರೆಗೊಂಡಿವೆ.
ಈ ಮೂರೂ ಯಂತ್ರಗಳು ಆಧುನಿಕ ಯಂತ್ರಮಾನವ ರೋಬಾಟನ್ನು ಹೋಲುತ್ತವೆ. ಆದ್ದರಿಂದ ಇವುಗಳೇ ಆಧುನಿಕ ಕಂಪ್ಯೂಟರ್‍ನ ಪೂರ್ವಜರು ಎಂದು ಭಾವಿಸಿರುವುದು ಹೆಚ್ಚು ಸೂಕ್ತ ಎನಿಸುತ್ತದೆ.
ಆರ್.ಬಿ.ಗುರುಬಸವರಾಜ


ಶಿಲ್ಪವನದಲ್ಲಿ ಜಲಚರಗಳು AQUATICS IN SHILPAVANA HAMPI UNIVERSITY

ದಿನಾಂಕ 01-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡ ನನ್ನ ಲೇಖನ.

ಶಿಲ್ಪವನದಲ್ಲಿ ಜಲಚರಗಳು


ಹಂಪೆ ಎಂದೊಡನೆ ಹಾಳಾಗಿ ಅಳಿದುಳಿದ ಕಲ್ಲಿನ ಕೆತ್ತನೆಗಳ ಚಿತ್ರಣ ಕಣ್ಮುಂದೆ ಹಾದು ಹೋಗುತ್ತವೆ. ಆದರೆ ಹಂಪೆಯ ಒಂದು ಭಾಗವೇ ಆಗಿರುವ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿನ ಶಿಲ್ಪವನದ ಚಿತ್ರಣಗಳು ತಾಜಾತನದೊಂದಿಗೆ ಕಂಗೊಳಿಸುತ್ತಿವೆ. 
ಈ ಬಾರಿ ಶಿಲ್ಪವನಕ್ಕೆ ಹೊಸ ಅತಿಥಿಗಳ ಸೇರ್ಪಡೆಯಾಗಿದೆ. ಈ ಅತಿಥಿಗಳು ಜಲವಿದೆಡೆಯೂ ಜೀವಿಸಬಲ್ಲೆವು ಎಂಬುದನ್ನು ಸಾಬೀತು ಮಾಡಲಿರುವ ಜಲಚರಗಳು. ಆಶ್ಚರ್ಯವಾಗುತ್ತಿದೆಯೇ? ಹೌದು ಶಿಲ್ಪವನದಲ್ಲೀಗ ಭಾರೀ ಗಾತ್ರದ ಮೀನುಗಳು, ಮೊಸಳೆಗಳು, ಆಮೆಗಳು, ಕಪ್ಪೆಗಳು ಬೀಡುಬಿಟ್ಟಿವೆ. 
ಎಲ್ಲಿದೆ ಶಿಲ್ಪವನ? : ಹಂಪೆಯ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಶಿಲ್ಪವನವಿದೆ. ಇಲ್ಲಿ ಪ್ರಾಕೃತಿಕವಾಗಿ ಅಲ್ಲಲ್ಲಿ ಬಿದ್ದಿರುವ ಕಲ್ಲುಗಳಿಗೆ ಅವುಗಳ ಆಕಾರಕ್ಕೆ ತಕ್ಕಂತೆ ಕೆತ್ತನೆಯ ಸ್ಪರ್ಶ ನೀಡಿ ಆಕರ್ಷಕ ಶಿಲ್ಪಗಳನ್ನಾಗಿ ಮಾಡಲಾಗಿದೆ.
ಈಗಾಗಲೇ ಇರುವ ಅನೇಕ ಕಲಾಕೃತಿಗಳ ಜೊತೆ ಜಲಚರಗಳು ಸ್ಥಾನ ಪಡೆದಿವೆ. ಪ್ರಾಕೃತಿಕವಾಗಿ ಬಿದ್ದಿರುವ ಕಲ್ಲುಗಳಿಗೆ ಜಲಚರಗಳ ರೂಪು ನೀಡಿ ಶಿಲ್ಪವನವನ್ನು ಆಕರ್ಷಕಗೊಳಿಸಲಾಗಿದೆ. ಇಲ್ಲಿನ ದೈತ್ಯ ಕಲ್ಲುಬಂಡೆಗೆ ಕಲೆಯ ಸ್ಪರ್ಶ ನೀಡಿ ಆಮೆ, ಮೊಸಳೆ, ಮೀನು, ಮತ್ಸಕನ್ಯೆ, ಕಡಲ್ಗುದುರೆ, ಕಪ್ಪೆ ಹೀಗೆ ಮುಂತಾದ ಜಲಚರಗಳ ಆಕೃತಿಗಳ ಕೆತ್ತಲಾಗಿದೆ. ಇವು ನೋಡುಗರ ಆಕರ್ಷಣೆಯ ವಸ್ತುಗಳಾಗಿವೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗಂತೂ ಆಟದ ಸಾಮಗ್ರಿಗಳಾಗಿ ಪರಿಣಮಿಸಿವೆ. ಮಕ್ಕಳು ಅವುಗಳ ಮೇಲೆ ಕುಳಿತು, ಬಾಯಲ್ಲಿ ಕೈಯಿಟ್ಟು ಮೋಜನ್ನು ಅನುಭವಿಸುತ್ತಾರೆ. ಪ್ರೇಕ್ಷಕರಂತೂ ಮೊಬೈಲ್‍ನಲ್ಲಿ ಅವುಗಳ ಚಿತ್ರ ಸೆರೆಹಿಡಿಯುವರಲ್ಲೇ ಮಗ್ನರಾಗುತ್ತಾರೆ. 
ಸಾಹಿತ್ಯದ ಲಾಲಿತ್ಯ: ಜಲಚರಗಳ ಜೊತೆಗೆ ಅನೇಕ ನವ್ಯ ಶೈಲಿಯ ಕಲಾಕೃತಿಗಳೂ ಕೂಡಾ ಶಿಲ್ಪವನವನ್ನು ಶ್ರೀಮಂತಗೊಳಿಸಿವೆ. ಶಿಲ್ಪಗಳಿಗೆ ಸಾಹಿತ್ಯದ ಮೆರಗನ್ನು ನೀಡಿರುವುದು ನೋಡುಗರಿಗೆ ಸಾಹಿತ್ಯದ ಲಾಲಿತ್ಯವನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಡಾ//ಚಂದ್ರಶೇಖರ ಕಂಬಾರರ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಅನೇಕ ಕಲಾಕೃತಿಗಳು ಪ್ರೇಕ್ಷಕರಿಗೆ ರಸದೌತಣ ನೀಡುತ್ತವೆ. ನೀವೇನಾದರೂ ಹಂಪೆಗೆ ಪ್ರವಾಸ ಕೈಗೊಂಡರೆ ತಪ್ಪದೇ ಕನ್ನಡ ವಿಶ್ವವಿದ್ಯಾಲಯಕ್ಕೂ ಭೇಟಿಕೊಡಿ.
                                        ಚಿತ್ರ ಬರಹ : ಆರ್.ಬಿ.ಗುರುಬಸವರಾಜ



March 31, 2016

ಹಚ್ಚೆ TATOO

2016ರ ಏಪ್ರಿಲ್ 7 ರ "ಸುಧಾ" ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.

ಹಚ್ಚೆಯಲ್ಲಿ  ಬೆಚ್ಚನೆಯ ಭಾವ!




ಕುತ್ತಿಗೆಯ ಮೇಲೆ ಕಚಗುಳಿಯಿಡುವ ಬಣ್ಣಬಣ್ಣದ ಚಿಟ್ಟೆ, ಸೊಂಟವನ್ನು ಸುತ್ತುವರೆದು ದೇಹಕ್ಕೆ ಬಿಗಿ ಹೆಚ್ಚಿಸಿದ ಹಾವು, ಎದೆಯ ಮೇಲೆ ಪ್ರೇಯಸಿಯ ಹೆಸರು, ವಕ್ಷಸ್ಥಳವನ್ನೆಲ್ಲಾ ಆವರಿಸಿಕೊಂಡ ವಿವಿಧ ಚಿತ್ತಾರಗಳು, ರಟ್ಟೆಯಲ್ಲಿ ಘರ್ಜಿಸುವÀ ಹುಲಿ, ಚಿರತೆ, ಸಿಂಹಗಳು, ಬೆನ್ನಿನ ಮೇಲೆ ಲಾಸ್ಯವಾಡುವ ಗಿಡಮರಗಳ ಬಳ್ಳಿಗಳು, ಮುಂಗೈಯಲ್ಲಿ ಪ್ರಿಯಕರನ ಹೆಸರಿನ ಮೊದಲಕ್ಷರ, ಇತ್ಯಾದಿ ಇತ್ಯಾದಿ,,,, ಇದು ಯಾವುದೋ ಚಿತ್ರಕಲಾವಿದ ರಚಿಸಿದ ಚಿತ್ರವಲ್ಲ. ಬದಲಿಗೆ ಇಂದಿನ ಯುವ ಪೀಳಿಗೆಯ ಮೈಮೇಲೆ ನಲಿದಾಡುವ ರಂಗುರಂಗಿನ ಹಚ್ಚೆಯ ಚಿತ್ತಾರದ ಸೊಬಗು. 
ಹೌದು ಇತ್ತೀಚೆಗೆ ಹಚ್ಚೆಯೆಂಬುದು ಯುವಪೀಳಿಗೆಯನ್ನು ಆಕರ್ಷಿಸುವ ಕಲೆಯಾಗಿದೆ. ಇದು ಚರ್ಮದ ಮೇಲಿನ ಶಾಸನ ಇದ್ದಂತೆ. ಯುವಪೀಳಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಟ್ಯಾಟೂ ಜನಪ್ರಿಯ ಮಾಧ್ಯಮವಾಗಿದೆ. ಕೇವಲ ರೂಪದರ್ಶಿಗಳು, ಕಲಾವಿದರು, ಸಾಹಸಿಗರು ಅಥವಾ ಸೈನಿಕರು ಮಾತ್ರ ಹಾಕಿಸಿಕೊಳ್ಳುತ್ತಿದ್ದ ಹಚ್ಚೆ ಇಂದು ಎಲ್ಲರನ್ನು ಆಕರ್ಷಿಸತೊಡಗಿದೆ. ಆಧುನಿಕ ಯಂತ್ರಗಳ ಸಹಾಯದಿಂದ ಹಾಕುವ ವೈವಿಧ್ಯಮಯ ವಿನ್ಯಾಸಗಳು, ವಿವಿಧ ಶೈಲಿಗಳು, ವೈವಿಧ್ಯಮಯ ವರ್ಣಗಳು, ರಂಗುರಂಗಿನ ಚಿತ್ತಾರಗಳು ಇಂದಿನ ಯುವಕರ ದೇಹವನ್ನು ಹಚ್ಚೆಯ ರೂಪದಲ್ಲಿ ಅಲಂಕರಿಸಿವೆ. ಕಣ್ಣು, ತುಟಿಗಳನ್ನು ಹೊರತುಪಡಿಸಿ ದೇಹದ ಬಹುತೇಕ ಭಾಗಗಳು ಹಚ್ಚೆಯಿಂದ ಆವೃತ್ತವಾಗಿವೆ ಎಂದರೆ ಅತಿಶಯೋಕ್ತಿ ಏನಲ್ಲ. ಏಕೆಂದರೆ ಹಚ್ಚೆ ಮೊದಲಿನಂತೆ ನಿಷೇಧಿತ ಅಭಿವ್ಯಕ್ತಿಯಾಗಿ ಉಳಿದಿಲ್ಲ. ಅದೊಂದು ಕಲೆಯ ಅಭಿವ್ಯಕ್ತಿ, ಭಾವನೆಗಳನ್ನು ಬಿಂಬಿಸುವ ಮಾಧ್ಯಮ, ವ್ಯಕ್ತಿತ್ವದ ಸಂಕೇತ ಹಾಗೂ ಫ್ಯಾಷನ್ ಆಗಿದೆ.
ಹಚ್ಚೆಯ ಬಣ್ಣವೇಕೆ ಶಾಶ್ವತ?
ಹಚ್ಚೆಯ ಕುರಿತು ಮಾತನಾಡುವಾಗ ಒಂದು ಪ್ರಶ್ನೆ ಬರುವುದು ಸಹಜ. ಅದೇನೆಂದರೆ ಹಚ್ಚೆಯ ಬಣ್ಣವೇಕೆ ಶಾಶ್ವತ?. ಈ ಪ್ರಶ್ನೆಗೆ ಬಹುತೇಕರಲ್ಲಿ ಉತ್ತರವಿಲ್ಲ. ಇದ್ದರೂ ಅಸ್ಪಸ್ಟ ಉತ್ತರ. ಇದಕ್ಕೆ ಸ್ಪಷ್ಟ ಉತ್ತರ ವಿಜ್ಞಾನದಲ್ಲಿ ದೊರೆಯುತ್ತದೆ. 
ಮಾನವರ ಚರ್ಮವು ಪ್ರತಿಗಂಟೆಗೆ 40000 ಕೋಶಗಳನ್ನು ಕಳೆದುಕೊಳ್ಳುತ್ತದೆ. ಅಂದರೆ ದಿನಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಕೋಶಗಳು ನಾಶವಾದರೂ ಹಚ್ಚೆ ಶಾಶ್ವತವಾಗಿ ಉಳಿಯುವುದ್ಹೇಗೆ ಎಂಬುದೇ ಸೋಜಿಗ.
ಹಚ್ಚೆ ಹಾಕುವ ಸೂಜಿಯಲ್ಲಿನ ಶಾಯಿಯು ಚರ್ಮದ ಹೊರಪದರದಲ್ಲಿ ರಂದ್ರಗಳನ್ನು ಮಾಡಿ ರಕ್ತನಾಳ ಮತ್ತು ನರಗಳ ಮೂಲಕ ಒಳಪದರದ ಆಳದೊಳಕ್ಕೆ ಜಿನುಗುತ್ತದೆ. ಪ್ರತಿಬಾರಿ ಸೂಜಿಯು ಚುಚ್ಚುವಿಕೆಯಿಂದ ಉಂಟಾದ ಗಾಯದಲ್ಲಿ ಈ ಶಾಯಿಯು ಹರಡಲ್ಪಡುತ್ತದೆ. ಗಾಯವು ಉರಿಯೂತಕ್ಕೆ ಕಾರಣವಾಗುತ್ತದೆ. ಚರ್ಮದಲ್ಲಿನ ಜೀವಕೋಶಗಳು ಪ್ರತಿರಕ್ಷಣಾ ವ್ಯವಸ್ಥೆಯಿಂದ ಗಾಯದ ಸ್ಥಳವನ್ನು ಆಕ್ರಮಿಸಿ ಬಣ್ಣವನ್ನು ಪಡೆದುಕೊಳ್ಳುತ್ತವೆ. ಹಾಗಾಗಿ ಗಾಯಗೊಂಡ ಸ್ಥಳದಲ್ಲಿನ ಶಾಯಿಯ ಬಣ್ಣ ಪಡೆದುಕೊಂಡ ಜೀವಕೋಶಗಳು ಅಲ್ಲಿಯೇ ಉಳಿದು ಶಾಶ್ವತ ಬಣ್ಣಕ್ಕೆ ತಿರುಗುತ್ತವೆ. ಜೀವಕೋಶದಲ್ಲಿನ ಫೈಬ್ರೋಪ್ಲಾಸ್ಟ್ ಮತ್ತು ಮಾಕ್ರೋಪೇಜ್‍ಗಳೆಂಬ ಅಂಶಗಳು ಬಣ್ಣವನ್ನು ಹೀರಿಕೊಂಡು ಚರ್ಮದ ಒಳಭಾಗವನ್ನು ಲಾಕ್ ಮಾಡುತ್ತವೆ ಮತ್ತು ಬಣ್ಣವನ್ನು ಹೊರಸೂಸುತ್ತವೆ. 
ಆರಂಭದಲ್ಲಿ ಶಾಯಿಯು ಚರ್ಮದ ಹೊರಪದರದ ಕೆಳಭಾಗದಲ್ಲಿ ಸಂಗ್ರಹವಾಗುತ್ತದೆ. ನಂತರ ಹಾನಿಗೊಳಗಾದ ಹೊರಚರ್ಮದ ಜೀವಕೊಶಗಳು ದುರಸ್ತಿಯ ನಂತರ ಬಣ್ಣವನ್ನು ಹೊರಸೂಸುತ್ತವೆ. ಬಿಸಿಲು ಗಾಳಿಗೆ ಹೊರಚರ್ಮದ ಗಾಯಗೊಂಡ ಕೋಶಗಳು ನಾಶವಾಗಿ ಸಿಪ್ಪೆಸುಲಿದು ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತವೆ ಮತ್ತು ಶಾಯಿಯ ಶಾಶ್ವತ ಬಣ್ಣ ಪಡೆದುಕೊಳ್ಳುತ್ತವೆ. 
ಪ್ರಾಚೀನತೆಯಿಂದ ಇತ್ತೀಚಿನವರೆಗೆ,,,,
ಹಚ್ಚೆಯು ಕೇವಲ ಫ್ಯಾಷನ್ನಿನ ಪ್ರತೀಕವಲ್ಲ. ಅದು ಪುರಾತನ ಕಾಲದಿಂದ ಮಾನವನ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ. ಜನರ ಆಚಾರ ವಿಚಾರ ಸಂಸ್ಕøತಿ ಧಾರ್ಮಿಕ ಸಂಪ್ರದಾಯಗಳ ಪ್ರತಿಬಿಂಬವಾಗಿದೆ. ಸಂಸ್ಕøತಿಯಿಂದ ಸಂಸ್ಕøತಿಗೆ, ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಹಚ್ಚೆಯ ಸ್ವರೂಪಗಳು ಬದಲಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. 
ಟ್ಯಾಟೂ ಎಂಬ ಇಂಗ್ಲೀಷ್ ಪದ ‘ಟಾಟೂ’ ಎಂಬ ಟಾಹಿಟಿ ದ್ವೀಪದ ಮೂಲದ್ದು. ಅಂದರೆ ‘ಗುರುತಿಸುವಿಕೆ’ ಎಂದರ್ಥ.
ಟ್ಯಾಟೂವಿನ ಇತಿಹಾಸ ಹುಡುಕಿ ಹೊರಟರೆ ಅದು ನಮ್ಮನ್ನು ಪೆರುವಿನ ಮಮ್ಮಿಗೆ ಕರೆದೊಯ್ಯುತ್ತದೆ. ಈಜಿಪ್ತಿನಲ್ಲಿ ಹುಟ್ಟಿಕೊಂಡ ಈ ಕಲೆಯು ಸಾಮ್ರಾಜ್ಯಗಳ ವಿಸ್ತರಣೆಯಿಂದ ವಿವಿಧ ನಾಗರೀಕತೆಗಳನ್ನು ತಲುಪಿತು. ಕ್ರೀಟ್, ಗ್ರೀಸ್, ಪರ್ಷಿಯಾ, ಅರೇಬಿಯನ್ ನಾಗರೀಕತೆಗಳಿಗೂ ವಿಸ್ತರಿಸಿತು. ಕ್ರಿ.ಪೂ.2000 ರಲ್ಲಿ ಈ ಕಲೆ ಚೀನಾ ತಲುಪಿತು. 
ಕ್ರಿ.ಪೂ.6000 ರಲ್ಲಿ ಪೆರುವಿನ ಮಮ್ಮಿಯಲ್ಲಿ ಜಗತ್ತಿನ ಮೊದಲ ದಾಖಲಿತ ಹಚ್ಚೆಯು ಪತ್ತೆಯಾಗಿದೆ.
ಹಚ್ಚೆಯ ಕಲೆಯು ಪಾಶ್ಚಿಮಾತ್ಯರ ಸಂಸ್ಕøತಿಯ ಪ್ರತೀಕವೇ ಆಗಿತ್ತು ಎಂಬುದಕ್ಕೆ ಅವರು ಆಗಿದ್ದಾಂಗ್ಗೆ ಏರ್ಪಡಿಸುತ್ತಿದ್ದ ಹಚ್ಚೆ ಉತ್ಸವಗಳೇ ಸಾಕ್ಷಿ. ಪ್ರತಿ ಉತ್ಸವದಲ್ಲಿ ಹೊಸ ಹೊಸ ಶೈಲಿಗಳು, ವಿನ್ಯಾಸಗಳು ಪ್ರದರ್ಶಿತವಾಗುತ್ತಿದ್ದವು. ಈ ಉತ್ಸವಗಳ ಕಿರಿಕಿರಿಯಿಂದ ಮನನೊಂದÀ  ಪೋಪ್ ಹೆಡ್ರಿ ಕ್ರಿ.ಶ.747 ರಲ್ಲಿ ಹಚ್ಚೆ ಹಾಕುವುದನ್ನು ನಿಷೇಧಿಸಿದರು. ಪುನಃ 12 ಶತಮಾನದಲ್ಲಿ ಪ್ರಾರಂಭವಾದರೂ 16 ನೇ ಶತಮಾನದವರೆಗೂ ಅದರ ಬಳಕೆ ಆಮೆ ವೇಗದಲ್ಲಿತ್ತು. 1691 ರಲ್ಲಿ ಪಾಶ್ಚಿಮಾತ್ಯ ನಾವಿಕ ವಿಲಿಯಂ ಡ್ಯಾಂಫರ್ ಪುನಃ ಹಚ್ಚೆಯ ಬಳಕೆಗೆ ಮುನ್ನುಡಿ ಬರೆದನು. ಅಲ್ಲಿಂದ ಹಚ್ಚೆಯು ಪಾಶ್ಚಿಮಾತ್ಯ ಸಂಸ್ಕøತಿಯ ಒಂದು ಭಾಗವೇ ಆಯಿತು. 
ಪಾಶ್ಚಿಮಾತ್ಯರಲ್ಲಿ ಹಚ್ಚೆಯ ಬಳಕೆ ಕಡಿಮೆಯಾದ ಕಾಲಕ್ಕೆ ಜಪಾನ್‍ನಲ್ಲಿ ಪ್ರಸಿದ್ದಿ ಪಡೆಯಿತು. ಪ್ರಾರಂಭದಲ್ಲಿ ಅಪರಾಧಿಗಳನ್ನು ಗುರುತಿಸಲು ಅವರ ಹಣೆಗೆ ಹಚ್ಚೆಯ ಗೆರೆ  ಹಾಕಲಾಗುತ್ತಿತ್ತು. ಕಾಲಕ್ರಮೇಣವಾಗಿ ಜಪಾನ್‍ನಲ್ಲಿ ಹಚ್ಚೆಯು ಸೌಂದರ್ಯಕಲೆಯಾಗಿ ಬೆಳೆಯಿತು. 1700 ರ ಸುತ್ತಮುತ್ತ ಜಪಾನ್‍ನಲ್ಲಿ ಹಚ್ಚೆ ಬಳಕೆಯ ಬಗ್ಗೆ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರಲಾಯಿತು. ಆಗ ಕೇವಲ ಶ್ರೀಮಂತರು ಮಾತ್ರ ಅಲಂಕಾರಿಕ ಉಡುಪುಗಳನ್ನು ಧರಿಸಲು ಅವಕಾಶವಿತ್ತು. ಇದಕ್ಕೆ ಪ್ರತಿಯಾಗಿ ಮಧ್ಯಮ ವರ್ಗದ ಜನರು ತಮ್ಮ ದೇಹವನ್ನು ಹಚ್ಚೆಯಿಂದ ಅಲಂಕರಿಸತೊಡಗಿದರು. ಇದು ಎಲ್ಲರನ್ನು ಆಕರ್ಷಿಸತೊಡಗಿತು. ಹೀಗಾಗಿ ಹಚ್ಚೆಯು ಹೆಚ್ಚು ವ್ಯಾಪಕವಾಗಿ ಜಗತ್ತಿನ ಎಲ್ಲೆಡೆ ಪಸರಿಸಿತು. ಹಚ್ಚೆಗೆ ಯಂತ್ರಗಳ ಬಳಕೆಯ ನಂತರ ಅದರ ವೇಗ ಹೆಚ್ಚಾಯಿತು.
ಇಂದು ಬಳಸುವ ಯಂತ್ರಗಳು ಪ್ರತಿನಿಮಿಷಕ್ಕೆ 50 ರಿಂದ 3000 ತರಂಗಾಂತರದಲ್ಲಿ ಚರ್ಮಕ್ಕೆ ಬಣ್ಣವನ್ನು ಸೇರಿಸುತ್ತವೆ. 

20 ನೇ ಶತಮಾನದ ತಿರುವಿನಲ್ಲಿ ಹಚ್ಚೆಯು ಕಾರ್ಮಿಕ ವರ್ಗದ ಆಕರ್ಷಣೆಯ ಕೇಂದ್ರವಾಯಿತು. ನಂತರ ಮನೆ ಮನೆಗಳಲ್ಲಿ ಹಚ್ಚೆ ಹಾಕುವವರ ಸಂಖ್ಯೆಯೂ ಹೆಚ್ಚಿತು. ಎರಡನೇ ಮಹಾಯುದ್ದದ ನಂತರ ಹಚ್ಚೆಯು ಜಗತ್ತಿನ ಎಲ್ಲೆಡೆ ಪಸರಿಸಿತು. 1961 ರಲ್ಲಿ ಹೆಪಟೈಟೀಸ್‍ನ ಭೀತಿಯಿಂದ ಬಳಕೆಯ ಪ್ರಮಾಣ ಕುಗ್ಗಿತಾದರೂ ಸಂಸ್ಕರಿಸಿದ ಸೂಜಿ ಬಳಕೆಯಿಂದ ಪುನಶ್ಚೇತನ ಪಡೆಯಿತು. 
ಇಂದು ಹಚ್ಚೆಯು ಎಲ್ಲಾ ವರ್ಗದ ಜನರನ್ನು ತಲುಪಿದೆ. ಅದಕ್ಕಾಗಿ ಅನೇಕ ಪಾರ್ಲರ್‍ಗಳೂ ತಲೆ ಎತ್ತಿವೆ. ಪ್ರಸಿದ್ದ ಹಚ್ಚೆ ಕಲಾವಿದರಿಗೆ ಬೇಡಿಕೆಯೂ ಹೆಚ್ಚಿದೆ. ಈ ಜನಪ್ರಿಯತೆ ಹಚ್ಚೆ ಕಲಾವಿದರನ್ನು ಫೈನ್ ಆಟ್ರ್ಸ್ ವಿಭಾಗಕ್ಕೆ ಸೇರಿಸಿದೆ. ಇಂದಿನ ಹಚ್ಚೆ ಕಲಾವಿದರು ತಮ್ಮ ಅನನ್ಯ ಮತ್ತು ಅದ್ಭುತ ಕಲಾಶಕ್ತಿಯಿಂದ ದೇಹದ ಮೇಲೆ ವೈವಿಧ್ಯ ಶೈಲಿಯ ಚಿತ್ರಗಳನ್ನು ರಚಿಸುತ್ತಾರೆ. 
ಆರೋಗ್ಯ ಸಮಸ್ಯೆಗಳು
ಇಷ್ಟೆಲ್ಲಾ ಆಡಂಬರದ ಅಲಂಕಾರಿಕ ಕಲೆಯಾದ ಹಚ್ಚೆಯು ಕೆಲವು ವೇಳೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಚ್ಚೆಗೆ ಬಳಸುವ ಶಾಯಿಯು ಆರೋಗ್ಯ ಇಲಾಖೆಯ ನಿಯಂತ್ರಣದಲ್ಲಿ ಇರುವುದಿಲ್ಲ. ಶಾಯಿಯಲ್ಲಿ ಕಾರ್ಬನ್, ಕ್ರೋಮಿಯಂ, ಕಬ್ಬಿಣದಂತಹ ಕೆಲವು ಅಪಾಯಕಾರಿ ಲೋಹದ ಅಂಶಗಳು ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹೊಸದಾಗಿ ಹಾಕಿಸಿಕೊಂಡ ಹಚ್ಚೆಯು ಅಸುರಕ್ಷಿತ ಕ್ರಮಗಳಿಂದ ಸೊಂಕು ತಗಲಬಹುದು. ಇದರಿಂದಾಗಿ ತುರಿಕೆ, ಉರಿಯೂತ ಮುಂತಾದ ಚರ್ಮಕ್ಕೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳು ವರದಿಯಾಗಿವೆ. ಇವುಗಳ ಜೊತೆಗೆ ವಿರಳವಾಗಿ ಹೆಪಟೈಟಿಸ್, ಕ್ಷಯ, ಹೆಚ್.ಐ.ವಿ.ಯಂತಹ ಆತಂಕಕಾರಿ ಸಮಸ್ಯೆಗಳನ್ನು ತಂದೊಡ್ಡಬಹುದು. ಕೆಲವು ದೇಶದಲ್ಲಿ ಹಚ್ಚೆ ಹಾಕಿಸಿಕೊಂಡವರ ರಕ್ತವನ್ನು ದಾನವಾಗಿ ಸ್ವೀಕರಿಸುವುದಿಲ್ಲ. 
ವಯಸ್ಸು ಮೀರಿದಂತೆ ಹಚ್ಚೆಯು ಕೆಲವೊಂದು ಸಮಸ್ಯೆಗಳನ್ನು ತರಬಹುದು. ಚರ್ಮದ ಆಳದಲ್ಲಿನ ಬಣ್ಣ ಮಂದವಾಗಬಹುದು. ಇಂತಹ ಅಸ್ಪಷ್ಟತೆಯಿಂದಾಗಿ ದೇಹವು ವಿಕಾರವಾಗುತ್ತದೆ. ಅಲ್ಲದೇ ದೇಹದ ಮೇಲೆ ಹಾಕಿಸಿಕೊಂಡ ಪ್ರೀತಿ ಪಾತ್ರದವರ ಹೆಸರು ಕೆಲವೊಮ್ಮೆ ಸಮಸ್ಯೆಗಳನ್ನು ತಂದೊಡ್ಡಬಹುದು. ಬೇಕು ಅಂದಾಗ ಚುಚ್ಚಿಸಿಕೊಂಡು ಬೇಡವೆಂದಾಗ ಅಳಿಸಿ ಹಾಕಲು ಇದು ಸಾಮಾನ್ಯ ಪ್ರಕ್ರಿಯೆಯಲ್ಲ. 


ಹಚ್ಚೆಯನ್ನೂ ಅಳಿಸಬಹುದು!
ಒಮ್ಮೆ ಹಾಕಿದ ಹಚ್ಚೆಯನ್ನು ಅಳಿಸುವುದು ತುಂಬಾ ಕಷ್ಟಕರ. ಕೆಲವರು ಹಚ್ಚೆಯ ಭಾಗವನ್ನು ಕತ್ತರಿಸುವ ಅಥವಾ ಸುಟ್ಟುಕೊಳ್ಳುವಂಥಹ ಹುಚ್ಚು ಕೃತ್ಯಕ್ಕೆ ಮುಂದಾಗಿರುವುದೂ ಸತ್ಯ. ಇವುಗಳನ್ನು ಹೊರತುಪಡಿಸಿ ಹಚ್ಚೆಯನ್ನು ಅಳಿಸಿ ಹಾಕಲು ಅನೇಕ ವಿಧಾನಗಳಿವೆ. ಶಸ್ತ್ರ ಚಿಕಿತ್ಸೆ ಮಾಡಿಸುವುದು, ಡರ್ಮಬ್ರೆಷನ್, ರೇಡಿಯೋ ಫ್ರೀಕ್ವೆನ್ಸಿ ಮುಂತಾದವು ಚಾಲ್ತಿಯಲ್ಲಿವೆ. ಆದರೆ ಇವು ಸಂಪೂರ್ಣವಾಗಿ ಅಳಿಸಿ ಹಾಕುವುದಿಲ್ಲ. ಅಲ್ಪ ಪ್ರಮಾಣದ ಕಲೆ ಉಳಿಯುತ್ತದೆ. ಇವೆಲ್ಲವುಗಳಿಗಿಂತ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದರೆ ಕ್ಯೂ ಲೇಸರ್ ವಿಧಾನ. ಇದು ಹಚ್ಚೆಯ ಕಲೆಯನ್ನು ಪೂರ್ಣ ಪ್ರಮಾಣದಲ್ಲಿ ಅಳಿಸಿಹಾಕುವ  ಅತ್ಯಾಧುನಿಕ ಲೇಸರ್ ಚಿಕಿತ್ಸೆ. ಇದು ತುಂಬಾ ವೆಚ್ಚದಾಯಕವಾದರೂ ಅತ್ಯಂತ ಸುರಕ್ಷಿತ ವಿಧಾನವಾಗಿದೆ. 
ಕಾಳಜಿ ಮುಖ್ಯ
ಕೇವಲ ಹಚ್ಚೆ ಹೇಗೆ ಶಾಶ್ವತವಾಗಿ ಉಳಿಯುತ್ತದೆ ಎಂದು ತಿಳಿದರೆ ಸಾಲದು. ಹಚ್ಚೆ ಹಾಕಿಸಿಕೊಳ್ಳುವ ಮುನ್ನ ಅದನ್ನು ಕಾಪಾಡಿಕೊಳ್ಳುವ ಸಂರಕ್ಷಣಾ ತಂತ್ರಗಳ ಬಗ್ಗೆ ತಿಳುವಳಕೆ ಮುಖ್ಯ. ಈ ತಂತ್ರಗಳನ್ನು ಅನುಸರಿಸಿದರೆ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು ಮತ್ತು ಗುಣಮಟ್ಟವನ್ನು ಉಳಿಸಿಕೊಳ್ಳಬಹುದು. ಹಚ್ಚೆ ಹಾಕಿಸಿಕೊಂಡ ನಂತರ ಅನುಸರಿಸುವ ಕೆಲವು ಸಾಮಾನ್ಯ ನಿಯಮಗಳು.
ಹಚ್ಚೆಯನ್ನು ಪರಿಣಿತ ತಜ್ಞರ ಬಳಿ ಮಾತ್ರ ಹಾಕಿಸಿಕೊಳ್ಳಬೇಕು.
ಹಚ್ಚೆ ಹಾಕಿಸಿಕೊಂಡ ನಂತರ ಕಟ್ಟಿದ ಬ್ಯಾಂಡೇಜನ್ನು 1-2 ಗಂಟೆಯ ನಂತರ ತೆಗೆಯಬೇಕು.
ನಂಜು ನಿವಾರಕ ಸೋಪಿನಿಂದ ಗಾಯವನ್ನು ತಣ್ಣೀರ ಸಹಾಯದಿಂದ ತೊಳೆಯಬೇಕು.
ಹಚ್ಚೆಯ ಭಾಗವನ್ನು ನಿಧಾನವಾಗಿ ಒತ್ತಿ ಒರೆಸಬೇಕು. ಉಜ್ಜಬಾರದು.
ಹಚ್ಚೆಯ ಭಾಗದಲ್ಲಿ ತೆಳುವಾಗಿ ನಂಜುನಿವಾರಕ ಮಲಾಮು ಹಚ್ಚಬೇಕು. ಹೆಚ್ಚಿಗೆ ಮಲಾಮು ಹಚ್ಚುವುದರಿಂದ ಬಣ್ಣ ಕದಡುವ ಸಂಭವ ಹೆಚ್ಚು.
ಗಾಯದ ಮೇಲೆ ನೇರವಾಗಿ ನೀರು ಸುರಿಯಬೇಡಿ ಅಥವಾ ನೀರಿನಲ್ಲಿ ನೆನಸಬೇಡಿ.
ಸೂರ್ಯ ಕಿರಣಗಳು ಗಾಯದ ಮೇಲೆ ನೇರವಾಗಿ ಬೀಳದಿರಲಿ. ಗಾಯದ ಮೇಲಿನ ಹಕ್ಕಳೆಗಳನ್ನು ಕೀಳಬೇಡಿ. ಸ್ವಾಭಾವಿಕವಾಗಿ ಉದುರಲು ಬಿಡಿ.
ಗಾಯ ಊದಿಕೊಂಡು ಉರಿಯೂತ ಹೆಚ್ಚಾಗಿದ್ದರೆ ಐಸ್ ಗಡ್ಡೆಯನ್ನಿಡಿ. ನೋವು ಅಧಿಕವಾಗಿದ್ದರೆ ಚರ್ಮ ತಜ್ಞರನ್ನು ಭೇಟಿಯಾಗಿ.
ಸುರಕ್ಷಿತ ಟ್ಯಾಟೂ ಪಾರ್ಲರ್
ಟ್ಯಾಟೂ ಹಾಕಿಸಿಕೊಳ್ಳುವುದು ಅನಿವಾರ್ಯ ಎಂದಾದರೆ ಸುರಕ್ಷಿತ ಟ್ಯಾಟೂ ಪಾರ್ಲರ್‍ಗಳಲ್ಲೇ ಹಾಕಿಸಿಕೊಳ್ಳಿ. ಜಾತ್ರೆ ಅಥವಾ ಸಂತೆಗಳ ರಸ್ತೆ ಬದಿಯಲ್ಲಿನ ಟ್ಯಾಟೂ ಹಾಕುವವರಿಂದ ದೂರವಿರಿ. ಟ್ಯಾಟೂ ಪಾರ್ಲರ್‍ಗಳು ಸಂಬಂಧಿತ ಇಲಾಖೆಯಿಂದ ಪರವಾನಿಗೆ ಪಡೆದಿರಬೇಕು. ಪಾರ್ಲರ್‍ಗಳಲ್ಲಿ ಸ್ವಚ್ಛತೆ ಹಾಗೂ ವೃತ್ತಿಪರ ಪ್ರಮಾಣ ಪತ್ರ ಇರುವುದನ್ನು ಖಾತ್ರಿಪಡಿಸಿಕೊಳ್ಳಿ.
ಕ್ರಿಮಿನಾಶಕ ಅಥವಾ ಬಳಸಿ ಬಿಸಾಡುವ ಸೂಜಿ ಬಳಸಲು ಒತ್ತಾಯಿಸಿ. ಒಮ್ಮೆ ಬಳಸಿದ ಕೈಗವಸು ಹಾಗೂ ಇತರೆ ಸಾಮಗ್ರಿಗಳನ್ನು ಪುನಃ ಬಳಸದಿರಲು ಕೇಳಿಕೊಳ್ಳಿ. ಹಚ್ಚೆ ಹಾಕುವವರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಬಗ್ಗೆ ಮತ್ತು ಅವರ ಗಮನ ಹಚ್ಚೆ ಹಾಕುವತ್ತ ಕೇಂದ್ರೀಕೃತವಾಗಿರುವದನ್ನು ದೃಡಪಡಿಸಿಕೊಳ್ಳಿ. ಹಚ್ಚೆ ಕಲಾವಿದರ ಅರ್ಹತೆ ಹಾಗೂ ಸೇವಾನುಭವವನ್ನು ಕೇಳಿ ತಿಳಿಯಿರಿ. 
ಆರ್.ಬಿ.ಗುರುಬಸವರಾಜ


ರೋಬೋ ರೀಡಿಂಗ್ ROBO READING

ಮಾರ್ಚ್2016ರ  ಕಸ್ತೂರಿ ಕಿರಣ ಪಾಕ್ಷಿಕದಲ್ಲಿ ಪ್ರಕಟಗೊಂಡ ನನ್ನ ಲೇಖನ

ಸ್ಪರ್ಧಾತ್ಮಕ ಪರೀಕ್ಷೆಗೆ ರೋಬೋ ರೀಡಿಂಗ್

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಸ್ಪರರಲ್ಲಿ ಸ್ಪರ್ದೆ ಹೆಚ್ಚುತ್ತಿದೆ. ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಅಭ್ಯರ್ಥಿಗಳು ಸಾಕಷ್ಟು ಅಧ್ಯಯನ ಸಾಮಗ್ರಿ ಹೊಂದಿರಬೇಕಾದುದು ಅವಶ್ಯಕ. ಕಡಿಮೆ ಅವಧಿಯಲ್ಲಿ ಹೆಚ್ಚು ಅಂಶಗಳನ್ನು ಓದಬೇಕಾಗಿದೆ. ವೇಗವಾಗಿ ಓದುವುದೊಂದೇ ಇದಕ್ಕೆ ಪರಿಹಾರ. ಕಷ್ಟಪಟ್ಟು ಓದುವ ಬದಲು ಚಾಣಾಕ್ಷತನದಿಂದ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ವೇಗವಾಗಿ ಓದುವುದನ್ನು ಅಬ್ಯಾಸ ಮಾಡಿಕೊಳ್ಳಲು ಕೆಲವು ಟಿಪ್ಸ್‍ಗಳು ಇಲ್ಲಿವೆ.
ಪ್ರತಿದಿನ ಓದಬೇಕಾದ ಅಂಶಗಳನ್ನು ದಿನಚರಿಯಲ್ಲಿ ಗುರುತಿಸಿಕೊಳ್ಳಿ. ವೇಳಾಪಟ್ಟಿಯಂತೆ ಅಧ್ಯಯನ ನಡೆಸಿ. ರಾತ್ರಿವೇಳೆ ಅಂದು ಓದಿದ ಅಂಶಗಳನ್ನು ಗುರುತಿಸಿಕೊಳ್ಳಿ. ನಿಮ್ಮ ಯೋಜನೆಯಂತೆ ಓದಿನ ವೇಗ ಸಾಗಿದೆಯೋ, ಇಲ್ಲವೋ ಗಮನಿಸಿ. ಇಲ್ಲದಿದ್ದರೆ ಓದಿನ ವೇಗ ಹೆಚ್ಚಿಸಿಕೊಳ್ಳಿ.
ಓದಿನ  ಸಾಧನೆಗಾಗಿ ನಿಮ್ಮನ್ನು ನೀವೇ ಅಭಿಪ್ರೇರೇಪಿಸಿಕೊಳ್ಳಿ. ನಿಮಗೆ ದೊರೆತ ಸಮಯವನ್ನು ಓದಿನ ಗುರಿಯನ್ನು ಕಾರ್ಯ ರೂಪಕ್ಕೆ ತರಲು ಯಶಸ್ವಿಯಾಗಿ ಬಳಸಿ.
ಪ್ರತಿ ವಿಷಯಕ್ಕೂ ಒಂದೊಂದು ನೋಟ್‍ಬುಕ್ ಇಟ್ಟುಕೊಂಡು, ಓದಿದ ಪ್ರಮುಖಾಂಶಗಳನ್ನು ಅದರಲ್ಲಿ ಬರೆದಿಟ್ಟುಕೊಳ್ಳಿ. ಸಾಧ್ಯವಾದಷ್ಟೂ 4-12ನೇ ತರಗತಿಗಳ ಆSಇಖಖಿ ಮತ್ತು ಓಅಇಖಖಿ ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಿ ನೋಟ್ಸ್ ತಯಾರಿಸಿಕೊಳ್ಳಿ.
ಓದುವ ವೇಳೆ ನಿರಾಳವಾಗಿರಿ. ಯಾವುದೇ ಒತ್ತಡಗಳಿಲ್ಲದೇ ಮನಸ್ಸನ್ನು ಪ್ರಶಾಂತವಾಗಿರಿಸಿಕೊಂಡು ಓದಲು ಪ್ರಯತ್ನಿಸಿ. ಒತ್ತಡದ ಮನಸ್ಸಿಗಿಂತ ನಿರಾಳ ಮನಸ್ಸು ಹೆಚ್ಚು ಅಂಶಗಳನ್ನು ಮನನ ಮಾಡಿಕೊಳ್ಳುತ್ತದೆ. ಅಗತ್ಯವಿದ್ದಲ್ಲಿ ಧ್ಯಾನ, ಪ್ರಾಣಾಯಾಮಗಳನ್ನು ಕೈಗೊಳ್ಳಿ. 
ಓದುವ ವೇಳೆ ಸಂಗೀತ ಆಲಿಸುತ್ತಾ ಓದುವುದು ಬೇಡ. ಇದು ಓದಿನ ಗಮನವನ್ನು ವಿಕೇಂದ್ರೀಕರಿಸುತ್ತದೆ.
ನಿಮ್ಮಷ್ಟಕ್ಕೆ ನೀವೇ ಓದಿನ ಟಾರ್ಗೆಟ್ ಹಾಕಿಕೊಳ್ಳಿ. ಅದರಂತೆ ಓದಲು ಪ್ರಯತ್ನಿಸಿ. ನಾನೇನು ಓದಿತ್ತಿದ್ದೇನೆ? ನಾನೇಕೆ ಓದುತ್ತಿದ್ದೇನೆ? ಎಂಬುದರ ಬಗ್ಗೆ ಗಮನವಿರಲಿ. 
ಶೀರ್ಷಿಕೆ ಹಾಗೂ ಉಪಶೀರ್ಷಿಕೆಗಳ ಮೇಲೆ ಹೆಚ್ಚು ನಿಗಾ ಇರಲಿ. 
ಪದಗಳ ಶಕ್ತಿಯನ್ನು ಅರ್ಥೈಸಿಕೊಳ್ಳುತ್ತಾ ಓದಿ. ಉದಾಹರಣಗೆ ‘ಪರಿಣಾಮವಾಗಿ’, ‘ಆದ್ದರಿಂದ’, ‘ಒಟ್ಟಾರೆಯಾಗಿ’, ಇತ್ಯಾದಿಯಂತಹ ಪದಗಳು ಒಂದು ಉಪಸಂಹಾರವನ್ನು ನೀಡುತ್ತಿರುತ್ತವೆ. ‘ಮೇಲಾಗಿ’, ‘ಜೊತೆಗೆ’ ಎಂಬಂತಹ ಪದಗಳು ಹೊಸ ಪರಿಕಲ್ಪನೆಗಳ ಭಾಗವನ್ನು ವಿಸ್ತರಿಸುತ್ತವೆ. ಆದ್ದರಿಂದ ಓದುವಾಗ ಇಂತಹ ಪದಗಳ ಮೇಲೆ ಗಮನವಿರಿಸಿ ಅರ್ಥೈಸಿಕೊಂಡು ಓದಿ.
ಗಟ್ಟಿಯಾಗಿ ಓದುವುದನ್ನು ತಪ್ಪಿಸಿ. ತುಟಿಗಳು ಓದಿನ ವೇಗವನ್ನು ಕಡಿಮೆಮಾಡುತ್ತವೆ.
ಓದುವ ಪಠ್ಯದ ಮೇಲೆ ಬೆರಳಿಟ್ಟು ಓದಿ. ಇದು ಓದಿನ ಗಮನವನ್ನು ಕೇಂದ್ರೀಕರಿಸಲು ಸಹಾಯಮಾಡುತ್ತದೆ. ಹೀಗೆ ಓದುವಾಗ ಪ್ರತೀ ಪದದ ಮೇಲೆ ಬೆರಳಿಟ್ಟು ಓದದೇ ಸಾಲಿನಿಂದ ಸಾಲಿಗೆ ಅಥವಾ ಪ್ಯಾರಾದಿಂದ ಪ್ಯಾರಾಕ್ಕೆ ಬೆರಳಿಟ್ಟು ಓದಿ. ಓದಿನ ವೇಗ ಮತ್ತು ಬೆರಳಿನ ವೇಗ ಪರಸ್ಪರ ಹೊಂದಾಣಿಕೆ ಇರಲಿ.
ಅಭ್ಯಾಸ! ಅಭ್ಯಾಸ! ಅಭ್ಯಾಸ! ಸತತಾಭ್ಯಾಸವು ಮಾತ್ರ ನಿಮ್ಮನ್ನು ಪರಿಪೂರ್ಣರನ್ನಾಗಿಸುತ್ತದೆ. ಏಕರೂಪತೆಯಿಂದ ಓದಿನ ವೇಗ ಹೆಚ್ಚಿಸಿಕೊಳ್ಳಿ.
ಹಳೆಯ ಅಥವಾ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ಅವಧಿಯಲ್ಲಿ ಬಿಡಿಸಲು ಪ್ರಯತ್ನಿಸಿ. ಇದು ಪರೀಕ್ಷೆಯಲ್ಲಿ ಉತ್ತರಿಸುವ ವೇಗವನ್ನು ಹೆಚ್ಚಿಸುತ್ತದೆ. ಜೊತೆಗೆ ಪ್ರಶ್ನೆಪತ್ರಿಕೆಯ ಸ್ವರೂಪ ಹಾಗೂ ಅಂಕಗಳ ಹಂಚಿಕೆಯ ವಿವರಗಳನ್ನು ಕೊಡುತ್ತದೆ.
ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡಿದ್ದೇ ಆದಲ್ಲಿ ಖಂಡಿತ ನೀವೊಬ್ಬ ರೋಬೋ ರೀಡರ್ ಆಗುತ್ತೀರಿ. ಆ ಮೂಲಕ ಯಶಸ್ಸು ನಿಮ್ಮದಾಗುತ್ತದೆ.

ಆರ್.ಬಿ.ಗುರುಬಸವರಾಜ.

March 14, 2016

ಪರೀಕ್ಷೆಗೆ ಟಾನಿಕ್ ನೀಡಿದ್ದೀರಾ!

ಮಾರ್ಚ್ 2016ರ 'ಕಸ್ತೂರಿ ಕಿರಣ' ಪಾಕ್ಷಿಕದಲ್ಲಿ ಪ್ರಕಟವಾದ ನನ್ನ ಲೇಖನ.

ಪರೀಕ್ಷೆಗೆ ಟಾನಿಕ್ ನೀಡಿದ್ದೀರಾ!

ಫೆಬ್ರವರಿ ಕಳೆದು ಮಾರ್ಚ್‍ಗೆ ಕಾಲಿಡುತ್ತಿದ್ದತೆ ಒಂದೆಡೆ ಬಿಸಿಲಿನ ಬಿಸಿ ಹೆಚ್ಚುತ್ತದೆ. ಇನ್ನೊಂದೆಡೆ ಪಾಲಕರಲ್ಲಿ ತಮ್ಮ ಮಕ್ಕಳ ಪರೀಕ್ಷಾ ಬಿಸಿ ಏರುತ್ತದೆ. ಹೌದು! ಪರೀಕ್ಷೆ ಎಂಬುದು ಮಕ್ಕಳಿಗಿಂತ ಪೋಷಕರಿಗೇ ಹೆಚ್ಚು ಒತ್ತಡ ತರುತ್ತದೆ. ತಮ್ಮ ಮಕ್ಕಳು ಇತರೆ ಮಕ್ಕಳಿಗಿಂತ ಹೆಚ್ಚು ಅಂಕ ಗಳಿಸಬೇಕು, ಫಸ್ಟ್ ರ್ಯಾಂಕ್ ಬರಬೇಕು, ಅವರ ಉತ್ತಮ ಫಲಿತಾಂಶದಿಂದ ಪ್ರಸಿದ್ದ ಕಾಲೇಜಿನಲ್ಲಿ  ಉಚಿತ ಸೀಟು ದೊರೆಯಬೇಕು, ಪತ್ರಿಕೆಗಳಲ್ಲಿ ತಮ್ಮ ಮಕ್ಕಳ ಜೊತೆ ತಮ್ಮ ಫೋಟೋ ಬರಬೇಕು ಎಂದೆಲ್ಲಾ ಆಸೆ, ಒತ್ತಾಸೆ ಇರುವುದು ಸಹಜ. ಆದರೆ ಈ ಆಸೆ ಒತ್ತಾಸೆಗಳಿಗೆ ಪಾಲಕರಾದ ನಾವು ಎಷ್ಟರ ಮಟ್ಟಿಗೆ ಮಕ್ಕಳನ್ನು ತಯಾರಿಸಿದ್ದೇವೆ ಎಂದು ಪ್ರಶ್ನಿಸಿಕೊಂಡರೆ ಉತ್ತರ ಬಹುತೇಕ ಶೂನ್ಯ. ಮಕ್ಕಳ ಉತ್ತಮ ಫಲಿತಾಂಶದಲ್ಲಿ ಕೇವಲ ಮಕ್ಕಳ ಶ್ರಮವಿದ್ದರೆ ಸಾಲದು. ಪಾಲಕರೂ ಮಕ್ಕಳ ಶಿಕ್ಷಣದಲ್ಲಿ ಅಂದರೆ ಕಲಿಕೆಯಲ್ಲಿ ಒಂದು ಭಾಗವಾಗಿರಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. 
ಅದಕ್ಕಾಗಿ ಪಾಲಕರು ಕೆಲವು ವರ್ತನೆಗಳನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ಪರೀಕ್ಷೆಗೂ ಮೊದಲು ಮಕ್ಕಳನ್ನು ಮಾನಸಿಕವಾಗಿ ಸಿದ್ದಗೊಳಿಸಬೇಕಿದೆ. ಅಂದರೆ ಪರೀಕ್ಷೆಯ ಬಗ್ಗೆ ಅವರಲ್ಲಿರುವ ಭಯವನ್ನು ಮೊದಲು ಹೋಗಲಾಡಿಸುವುದು ಪ್ರತಿಯೊಬ್ಬ ಪಾಲಕರ ಆದ್ಯತೆಯಾಗಬೇಕು. ಪರೀಕ್ಷೆಗಳೇ ಜೀವನದ ಕೊನೆಯ ಗುರಿಯಲ್ಲ. ಪ್ರತೀ ಪೋಷಕರಿಗೂ ತಮ್ಮ ಮಕ್ಕಳ ಸಾಮಥ್ರ್ಯಗಳ ಅರಿವು ಇರಬೇಕು. ಮಕ್ಕಳು ಕಲಿಕೆಯಲ್ಲಿ ತೊಂದರೆ ಅನುಭವಿಸುವ ವಿಷಯಗಳು ಅಥವಾ ಪರಿಕಲ್ಪನೆಗಳ ಬಗ್ಗೆ ತಿಳಿದಿರಬೇಕು. ಮಕ್ಕಳೊಂದಿಗೆ ಮುಕ್ತ ಸಂವಾದ ನಡೆಸುವ ಮೂಲಕ ಈ ಕೊರತೆಗಳಿಗೆ ಕಾರಣಗಳನ್ನು ಪತ್ತೆ ಹಚ್ಚಿ ನಿವಾರಿಸಲು ಪ್ರಯತ್ನಿಸಬೇಕು. 
ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಕ್ಕಳ ಚಲನ ವಲನಗಳಲ್ಲಿ ವರ್ತನೆಗಳಲ್ಲಿ ಬದಲಾವಣೆಗಳಾಗುವುದು ಸಹಜ. ಈ ಬದಲಾವಣೆಗಳನ್ನು ಪೋಷಕರಾದ ನಾವು ಗುರುತಿಸಿ ಮಕ್ಕಳಲ್ಲಿ ಒತ್ತಡವನ್ನು ತುಂಬದೇ ಸಹಜ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಬೇಕು. ಮುಖ್ಯವಾಗಿ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಸಮಯಕ್ಕೆ ಸರಿಯಾಗಿ ಊಟ ಮತ್ತು ನಿದ್ರೆಗಳನ್ನು ಪೂರೈಸಲು ಅವಕಾಶ ನೀಡಬೇಕು. ಬೇಸಿಗೆಯ ದಿನಗಳಾದ್ದರಿಂದ ಸಾಧ್ಯವಾದಷ್ಟೂ ಪೌಷ್ಟಿಕಾಂಶವಿರುವ ದ್ರವ ರೂಪದ ಆಹಾರ ನೀಡಿ. ಮಕ್ಕಳು ಓದುವ ಕೊಠಡಿಯು ಸಾಕಷ್ಟು ಗಾಳಿ ಬೆಳಕಿನಿಂದ ಕೂಡಿದ್ದು, ಪ್ರಶಾಂತವಾಗಿರಬೇಕು. ಟಿ.ವಿ, ಕಂಪ್ಯೂಟರ್, ಮೊಬೈಲ್‍ಗಳಿಂದ ಮಕ್ಕಳನ್ನು ದೂರವಿಡಬೇಕು. ಪ್ರತಿದಿನ ಕನಿಷ್ಠ 3-4 ಗಂಟೆ ಮಕ್ಕಳ ಜೊತೆಗಿದ್ದು, ವಿದ್ಯಾಭ್ಯಾಸದ ಮೇಲೆ ನಿಗಾ ವಹಿಸಬೇಕು. 
ಸಾದ್ಯವಾದರೆ ಮಕ್ಕಳಿಗೆ ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಒದಗಿಸಿ ಕೊಟ್ಟು ಅವುಗಳನ್ನು ಬಿಡಿಸಲು ಸಹಾಯ ಮಾಡಬೇಕು. ಇದರಿಂದ ಮಕ್ಕಳಿಗೆ ತಮ್ಮ ಸಾಮಥ್ರ್ಯ ತಿಳಿಯುವುದಲ್ಲದೇ ಕೊರತೆಯ ಬಗ್ಗೆ ತಿಳಿಯುತ್ತದೆ.  ಇನ್ನೂ ತಯಾರಾಗಬೇಕಾದ ಅಂಶಗಳತ್ತ ಗಮನ ಹರಿಸಲು ಇದು ಸಹಾಯಕ. 
ಪರೀಕ್ಷಾ ಸಮಯದಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಮಕ್ಕಳ ಮೇಲೆ ಹೇರಬೇಡಿ. ಇದು ಮಕ್ಕಳಲ್ಲಿ ನಕಾರಾತ್ಮಕ ಭಾವನೆ ಬೆಳೆದು ಪರೀಕ್ಷೆಗಳನ್ನೇ ಧಿಕ್ಕರಿಸುವ ಸಂದರ್ಭ ಬರುತ್ತವೆ. ಆದ್ದರಿಂದ ಪರೀಕ್ಷಾ ಸಮಯದಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಮಕ್ಕಳಿಗೆ ತಿಳಿಸಬೇಡಿ. ಪ್ರತೀ ಮಗುವಿನ ಕಲಿಕಾ ಮಟ್ಟ ಬೇರೆ ಬೇರೆ ಆಗಿರುವುದರಿಂದ ನಿಮ್ಮ ಮಗುವನ್ನು ಉತ್ತಮ ಕಲಿಕೆಯಲ್ಲಿರುವ ಇನ್ನೊಂದು ಮಗುವಿನೊಂದಿಗೆ ಹೋಲಿಸಬೇಡಿ. 
ಪರೀಕ್ಷೆಯ ಸಮಯದಲ್ಲಿ ಹೆಚ್ಚು ಅಂಕಗಳಿಸುವಂತೆ ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ಒತ್ತಡ ಹೇರಬಾರದು. ಕೆಲವು ವೇಳೆ  ಒತ್ತಡವು ಮಕ್ಕಳ ಮನಸ್ಸಿನ ಮೇಲೆ ಅಹಿತಕರ ಪರಿಣಾಮ ಬೀರಿ ಮಕ್ಕಳಲ್ಲಿ ಅಘಾತಕಾರಿ ವರ್ತನೆಗಳು ಪ್ರಕಟಗೊಳ್ಳಬಹುದು. ಎಲ್ಲರೂ ಫಸ್ಟ್  ಬರಲು ಸಾಧ್ಯವಿಲ್ಲ, ಎಲ್ಲರೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಮಕ್ಕಳಿಗೆ ತಿಳಿಸಿ. ಪರೀಕ್ಷೆ ಸಮೀಪಿಸಿದಾಗ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ಆ ತರಗತಿಗೆ ಮಕ್ಕಳು ಪ್ರವೇಶಿಸಿದಾಗಲೇ ಅವರ ಕಲಿಕೆಯ ಜೊತೆಗೆ ನಾವೂ ಭಾಗೀದಾರರಾಗಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಪರೀಕ್ಷಾ ಸಮಯದಲ್ಲಿ ಮಕ್ಕಳ ಮಾನಸಿಕ ಸ್ಥೈರ್ಯ ತುಂಬುವ ಪೋಷಕರಾಗೋಣ. ಪರೀಕ್ಷೆಯ ವೇಳೆ ಮಕ್ಕಳಿಗೆ ಪ್ರೀತಿ ವಿಶ್ವಾಸಗಳ ಕಾಳಜಿಯುತ ಟಾನಿಕ್ ನೀಡಬೇಕೇ ಹೊರತು ಮಕ್ಕಳ ಮನಸ್ಸನ್ನು ಮಲೀನಗೊಳಿಸುವ ಅಹಿತಕರಗೊಳಿಸವ ಅನಾರೋಗ್ಯಕರ ಔಷಧ ಅಲ್ಲ.  ಪರೀಕ್ಷಾ ಸಮಯದಲ್ಲಿ ಮಕ್ಕಳು ದ್ವೇಷಿಸುವ ಪೋಷಕರಾಗುವ ಬದಲು ಮಗುಸ್ನೇಹಿ ಪೋಷಕರಾಗೋಣ.
ಆರ್.ಬಿ.ಗುರುಬಸವರಾಜ


ಮಾನವ ಹಕ್ಕುಗಳ ಅಭಿಯಾನ HUMAN RIGHTS

ಫೆಬ್ರವರಿ 2016 ರ 'ಹೊಸತು' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.
ಡಿಸೆಂಬರ್ 10 “ವಿಶ್ವ ಮಾನವ ಹಕ್ಕುಗಳ ದಿನ” ದ ನಿಮಿತ್ತ ಲೇಖನ

ಮಾನವ ಹಕ್ಕುಗಳ ಅಭಿಯಾನವಾಗಲಿ!



ಪ್ರತಿ ವರ್ಷ ಡಿಸೆಂಬರ್ 10 ನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಮಾನವ ಹಕ್ಕುಗಳ ದಿನ’ವನ್ನಾಗಿ ಆಚರಿಸಲಾಗುತ್ತದೆ. ಜನತೆಗೆ ಮಾನವ ಹಕ್ಕುಗಳ ಬಗ್ಗೆ ತಿಳಿಸಿಕೊಡುವ ದಿನ ಇದಾಗಿದೆ. 1948 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಡಿಸೆಂಬರ್ 10 ನ್ನು ‘ಮಾನವ ಹಕ್ಕುಗಳ ದಿನ’ ಎಂದು ಘೋಷಣೆ ಮಾಡಲಾಯಿತು. ಅಂದಿನಿಂದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಲ್ಲವೂ ಮಾನವ ಹಕ್ಕುಗಳನ್ನು ಸಂರಕ್ಷಿಸುವ ಪಣ ತೊಟ್ಟವು. 
“ಎಲ್ಲಾ ಮಾನವರೂ ಹುಟ್ಟಿನಿಂದ ಸಮಾನರು. ಜಾತಿ, ವರ್ಣ, ಲಿಂಗ, ಭಾಷೆ, ಧರ್ಮ, ಆಸ್ತಿ ಅಥವಾ ಇತರ ಸ್ಥಿತಿಗಳ ಯಾವುದೇ ಪರಿಗಣನೆಗೆ ಒಳಗಾಗದೇ ಸಮಾನ ಹಕ್ಕು, ಗೌರವಗಳಿಗೆ ಎಲ್ಲರೂ ಪಾತ್ರರು” ಎಂಬುದು ಮಾನವ ಹಕ್ಕುಗಳ ಘೋಷಣೆಯಾಗಿದೆ. 
ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರ ರಕ್ಷಣೆಯೇ ಮಾನವ ಹಕ್ಕುಗಳ ಉದ್ದೇಶ. ಮಾನವ ಹಕ್ಕುಗಳನ್ನು ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ಮೊದಲನೆ ವರ್ಗದಲ್ಲಿ ಬದುಕಿನ ಹಕ್ಕು, ಸ್ವಾತಂತ್ರದ ಹಕ್ಕು, ವ್ಯಕ್ತಿ ಭದ್ರತಾ ಹಕ್ಕು, ಆಲೋಚನಾ ಸ್ವಾತಂತ್ರದ ಹಕ್ಕು. ಎರಡನೇ ವರ್ಗದಲ್ಲಿ ಸಾಮಾಜಿಕ ಭದ್ರತೆಯ ಹಕ್ಕು, ದುಡಿಮೆಯ ಹಕ್ಕು, ವಿಶ್ರಾಂತಿಯ ಹಕ್ಕು, ಸಮರ್ಪಕ ಜೀವನ ನಡೆಸುವ ಹಕ್ಕು, ಹಾಗೂ ಶೈಕ್ಷಣಿಕ ಹಕ್ಕುಗಳು ಸೇರಿವೆ. ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು 14ನೇ ವಿಧಿಯಿಂದ 32ನೇ ವಿಧಿಯವರೆಗೆ ನೀಡಿರುವುದು ಗಮನಾರ್ಹ.
ಬಡತನ ನಿರ್ಮೂಲನೆ ಮತ್ತು ಮಾನವನ ಯೋಗಕ್ಷೇಮವನ್ನು ಉತ್ತಮ ಪಡಿಸುವುದು ಮಾನವ ಹಕ್ಕುಗಳ ದಿನಾಚರಣೆಯ ಪ್ರಮುಖ ಗುರಿ. ಜೊತೆಗೆ ಮಾನವ ಹಕ್ಕುಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಹಾಗೂ ಎಲ್ಲಾ ವರ್ಗ, ಸಮುದಾಯಗಳ ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರು, ಬಡವರು ಸೇರಿದಂತೆ ದುರ್ಬಲ ವರ್ಗಗಳ ಜನರ ಬದುಕನ್ನು ಹಸನಾಗಿಸಲು ಶ್ರಮಿಸುವುದು ಈ ದಿನಾಚರಣೆಯ ಪ್ರಮುಖ ಉದ್ದೇಶ.
ಆದರೆ ಇಂದು ಮಾನವ ಹಕ್ಕುಗಳ ಕುರಿತು ಆಗಿರುವ ಮತ್ತು ಆಗುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ ಭವಿಷ್ಯ ಕರಾಳವೆನಿಸುತ್ತದೆ. ಏಕೆಂದರೆ ಮನುಷ್ಯನನ್ನು ಮಾನವ ಹಕ್ಕುಗಳಿಂದ ವಂಚಿಸುವುದು ಕ್ರೂರತ್ವವಾಗಿದೆ. ಇಂದು ಎಲ್ಲಾ ಮಾನವರ ಹಕ್ಕುಗಳು ಸುರಕ್ಷಿತವಾಗಿಲ್ಲ. ಅದರಲ್ಲೂ ಮಕ್ಕಳು ಮತ್ತು ಮಹಿಳೆಯರ ಜೀವನ ಅಭದ್ರವಾಗಿದೆ.
ಇಂದು ಬಹುತೇಕ ಮಾನವ ಹಕ್ಕುಗಳಿಂದ ಶೋಷಿತರಾಗುತ್ತಿರುವುದು ಕೆಳಹಂತದ ಸಾಮಾನ್ಯ ಜನರು ಎನ್ನುವುದು ಶೋಚನೀಯ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಉನ್ನತ ಸ್ಥಾನದಲ್ಲಿರುವವರೇ ಶೋಷಿಸುತ್ತಿರುವವರು. ಮಾನವರೇ ಮಾನವರನ್ನು ಶೋಷಿಸುತ್ತಿರುವುದು ನಾಗರೀಕ ಸಮಾಜದ ಅಧಃಪತನವಲ್ಲವೇ? ಜನಸಾಮಾನ್ಯರಿಗೆ ಮಾನವ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು ಅಭಿವೃದ್ದಿಯಾಗುತ್ತಿರುವ ಭಾರತದ ದುರಂತ. ಭಾರತದಲ್ಲಿ ಮಕ್ಕಳ ಅದರಲ್ಲೂ ಬಾಲಕಿಯರ ಹಾಗೂ ಮಹಿಳೆಯರ ಹಕ್ಕುಗಳಿಗೆ ಯಾವುದೇ ಕಿಮ್ಮತ್ತಿಲ್ಲ ಎನ್ನುವುದನ್ನು ಪ್ರತಿನಿತ್ಯ ಕಾಣುತ್ತಿದ್ದೇವೆ. ಅಪರಾಧಿಗಳಿಗೆ ಎಷ್ಟೇ ಶಿಕ್ಷೆ ನೀಡಿದರೂ ಸಹ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿಲ್ಲ. ಸರಕಾರಿ ಅಂಕಿ-ಅಂಶಗಳ ಪ್ರಕಾರ ಶಿಕ್ಷೆ ಜಾರಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಶೇಕಡಾ 5 ರಷ್ಟು ಮಾತ್ರ. ಇನ್ನುಳಿದ ಶೇಕಡಾ 95 ರಷ್ಟು ಪ್ರಕರಣಗಳು ರಾಜಕೀಯ ಅಥವಾ ಇನ್ನಾವುದೋ ಪ್ರಭಾವದಿಂದಾಗಿ ಮುಚ್ಚಿಹಾಕಲ್ಪಡುತ್ತವೆ ಅಥವಾ ವಜಾಗೊಳಿಸಲ್ಪಡುತ್ತವೆ. 
ಮಹಿಳಾ ದೌರ್ಜನ್ಯದಲ್ಲಿ ದೇಶದ ರಾಜಧಾನಿ ದೆಹಲಿ ಒಂದನೇ ಸ್ಥಾನದಲ್ಲಿದ್ದರೆ, ರಾಜ್ಯದ ರಾಜಧಾನಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಇತ್ತೀಚಿಗೆ ಇಡೀ ರಾಜ್ಯದ ಮೂಲೆ ಮೂಲೆಗಳಲ್ಲೂ ಸಹ ಅಪರಾಧ ಪ್ರಕರಣಗಳು ಹೆಚ್ಚಿವೆ. ಅಂದರೆ ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಇದಕ್ಕೆಲ್ಲಾ ಕಾರಣ ಮಾನವ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಮತ್ತು ಜನಜಾಗೃತಿ ಇಲ್ಲದಿರುವುದು. ದೃಶ್ಯ ಮಾಧ್ಯಮಗಳೂ ಸಹ ಅಪರಾಧ ಹೆಚ್ಚಾಗಲು ಕಾರಣವಾಗಿವೆ ಎಂದರೆ ಅತಿಶಯೋಕ್ತಿಯೇನಲ್ಲ. ದೃಶ್ಯ ಮಾಧ್ಯಮಗಳು ಅತ್ಯಾಚಾರ ಪ್ರಕರಣಕ್ಕೆ ಪ್ರಚಾರ ಕೊಟ್ಟು ಮುನ್ನಲೆಗೆ ಬರುವಂತೆ ಮಾಡಲು ಎಷ್ಟು ಕಾರಣವಾದವೂ, ಅನ್ಯಾಯ, ಅಕ್ರಮ, ಅತ್ಯಾಚಾರಗಳಂತಹ ಹೇಯ ಕೃತ್ಯಗಳು ನಡೆಯಲು ಅಷ್ಟೇ ಕಾರಣವಾಗಿವೆ.
ಇಂದಿನ ಅಸಂಖ್ಯಾತ ಚಾನಲ್ಲುಗಳ ಸೀರಿಯಲ್ಲುಗಳಲ್ಲಿ, ಜಾಹೀರಾತುಗಳಲ್ಲಿ, ಕೆಟ್ಟ ಸಿನೇಮಾಗಳಲ್ಲಿ, ರಿಯಾಲಿಟಿ ಷೋಗಳಲ್ಲಿ ಹೆಣ್ಣನ್ನು ಒಂದು ರುಚಿಯಾದ ತಿನಿಸು ಎಂಬಂತೆ ಪ್ರತಿಬಿಂಬಿಸುತ್ತಿರುವುದೇ ಇದಕ್ಕೆಲ್ಲಾ ಕಾರಣ. ಕೆಟ್ಟದ್ದನ್ನು ಒಳ್ಳೆಯದನ್ನಾಗಿ, ಅನವಶ್ಯಕವಾದುದನ್ನು ಅವಶ್ಯಕವನ್ನಾಗಿ, ಅಶ್ಲೀಲವನ್ನು ಶೀಲವನ್ನಾಗಿ, ಅನರ್ಥವನ್ನು ಅರ್ಥವನ್ನಾಗಿಸಿ ಅಹಿತಕರವಾದುದನ್ನು ವೈಭವೀಕರಿಸಿ ತೋರಿಸುತ್ತಿರುವುದೇ ಮಾನವ ಹಕ್ಕುಗಳ ಉಲ್ಲಂಘನೆಯಾಗಲು ಕಾರಣವಾಗಿವೆ.
ಅಪರಾಧಗಳು ಹೆಚ್ಚಲು ಅಂತರ್ಜಾಲ ತಾಣಗಳೂ ಸಹ ಕಾರಣವಾಗಿವೆ. ಅಶ್ಲೀಲ ಜಾಲತಾಣ ವೀಕ್ಷಣೆಯಲ್ಲಿ ಭಾರತೀಯರೇ ಮುಂದು ಎನ್ನುತ್ತದೆ ಒಂದು ಸರ್ವೆ.  ಕಾಮಕೇಳಿಯ ಅಶ್ಲೀಲ ದೃಶ್ಯಗಳು ಇಂದಿನ ಯುವಕರ ಫೆವರಿಟ್ ಡಾಕ್ಯುಮೆಂಟ್ ಆಗಿವೆ. ಇಂತಹ ಅಶ್ಲೀಲ ದೃಶ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ಅನೇಕ ಆಪ್‍ಗಳಿವೆ. ಇವೆಲ್ಲವೂ ಅಪರಾಧ ಹೆಚ್ಚಲು ಕಾರಣವಾಗಿವೆ. ಎಲ್ಲೆಲ್ಲಿ ಅಪರಾಧಗಳು ನಡೆಯುತ್ತವೆಯೋ ಅಲ್ಲೆಲ್ಲಾ ಮಾನವ ಹಕ್ಕುಗಳು ಉಲ್ಲಂಘನೆ ಆಗುತ್ತವೆ ಎಂಬುದನ್ನು ನಾವು ಗಮನಿಸಬೇಕಿದೆ.
ಮಾನವ ಹಕ್ಕುಗಳ ಕುರಿತು ಈಗ ಆಗಿರುವ ಮತ್ತು ಆಗುತ್ತಿರುವ ಕಹಿ ಘಟನೆಗಳನ್ನು ಕುರಿತು ಚಿಂತಿಸುವ ಬದಲು ಆಗಬೇಕಾದ ಕಾರ್ಯಗಳತ್ತ ಚಿತ್ತ ಹರಿಸಬೇಕಿದೆ. ಜನಪರ ಆಡಳಿತದ ಮೂಲಕ ದುಡಿದುಣ್ಣುವ ಜನರ ಬದುಕನ್ನು ಹಸನಾಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಮಹಿಳೆಯರು, ಮಕ್ಕಳು ಅದರಲ್ಲೂ ಬಾಲಕಿಯರ ಕುರಿತಂತೆ ಸಮಾಜದ ರೋಗಗ್ರಸ್ಥ ಮನೋಸ್ಥಿತಿಯನ್ನು ಸರಿಪಡಿಸಬೇಕು. ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಪೌರಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತರು, ಬಿಸಿಯೂಟ ಕಾರ್ಯಕರ್ತೆಯರು, ಗಾಮೆರ್ಂಂಟ್ಸ್, ಮನೆಗೆಲಸದವರು, ಬೀಡಿ ಕಟ್ಟುವವವರು, ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಬೇಕು. 
ಪ್ರಜಾತಂತ್ರದ ಉಸಿರನ್ನೇ ಹತ್ತಿಕ್ಕಲು ಪ್ರಯತ್ನಿಸುವ ತುರ್ತು ಪರಿಸ್ಥಿತಿ, ಕೋಮುದಳ್ಳುರಿ, ನರಮೇಧ, ಭ್ರಷ್ಟಾಚಾರ, ಮೌಢ್ಯತೆಗಳನ್ನು ನಿರ್ಮೂಲನೆ ಮಾಡಬೇಕು. ಸರಕಾರಿ ವ್ಯವಸ್ಥೆಯನ್ನು ಅಲುಗಾಡಿಸುತ್ತಿರುವ ಖಾಸಗೀ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ಅನ್ಯಾಯ, ಅತ್ಯಾಚಾರ, ದೌರ್ಜನ್ಯಗಳಿಂದ ನೊಂದವರಿಗೆ ಸಂವಿಧಾನ ನೀಡಿದ ಮಾನವ ಹಕ್ಕು ಕಾಯ್ದೆಯಡಿ ಪರಿಹಾರ ನೀಡಬೇಕು. ಅಶ್ಲೀಲ ಜಾಲತಾಣ ವೀಕ್ಷಣೆಗೆ ಸೂಕ್ತ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ದುರಂತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತದೆ.
ಮಾನವ ಹಕ್ಕುಗಳ ದಿನ ಕೇವಲ ಆಚರಣೆ ಮಾತ್ರ ಸೀಮಿತವಾಗಬಾರದು. ಮಾನವ ಹಕ್ಕುಗಳ ಕುರಿತ ಜಾಗೃತಿ ಅಭಿಯಾನವಾಗಬೇಕು. ಯಾರಿಗೆ ಈ ಹಕ್ಕುಗಳ ಬಗ್ಗೆ ತಿಳಿಸಿಕೊಡಬೇಕೋ ಅವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಅಂದರೆ ಶೋಷಿತರನ್ನು, ದೀನ ದಲಿತರನ್ನು, ಬಡವರನ್ನು, ನಿರ್ಗತಿಕರನ್ನು, ಅಂಗವಿಕಲರನ್ನು ಆಹ್ವಾನಿಸಿ ಅವರ ಹಕ್ಕುಗಳ ಬಗ್ಗೆ ಮಾಹಿತಿ ನೀಡಬೇಕು. ಪ್ರತಿಯೊಬ್ಬ ನಾಗರೀಕರನ್ನೂ ದೈಹಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ನೈತಿಕವಾಗಿ, ಸಾಂಸ್ಕøತಿಕವಾಗಿ ಸಶಕ್ತರನ್ನಾಗಿಸಲು ಪಣ ತೊಡಬೇಕು. ಅಂದಾಗ ಮಾತ್ರ ಈ ಆಚರಣೆಗೆ ಒಂದು ಗಟ್ಟಿಯಾದ ನೆಲೆ, ಬೆಲೆ ಸಿಗುತ್ತದೆ. ಪ್ರತಿಯೊಂದು ಹಳ್ಳಿ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೀಗೆ ಎಲ್ಲಾ ಹಂತಗಳಲ್ಲೂ ಮಾನವ ಹಕ್ಕು ಚಳುವಳಿಯ ಕಾವು ಹೆಚ್ಚಬೇಕು. ಮಾನವ ಹಕ್ಕು ದಿನಾಚರಣೆಯು ಉತ್ತಮ ವಿಶ್ವ ಸೃಷ್ಟಿಸುವ ಮಾನವೀಯತೆಯ ಹೋರಾಟ ಎಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು. ಪ್ರತಿದಿನವೂ  ಎಲ್ಲಾ ಮಾನವರೂ ಮಾನವ ಹಕ್ಕುಗಳನ್ನು ಅನುಭವಿಸುವಂತಾಗಬೇಕು. ಅಂದಾಗ ಮಾತ್ರ ಸುಖೀ ರಾಜ್ಯದ ಕನಸು ನನಸಾಗುತ್ತದೆ. 
ಆತ್ಮಬಲ ಹೆಚ್ಚಿಸಿಕೊಳ್ಳಲು ಇದು ಸಕಾಲವಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ನಾಗರೀಕರೂ ಸಜ್ಜಾಗಬೇಕು ಅಲ್ಲವೇ? ಮಹಾನ್ ಮಾನವತಾವಾದಿ, ಚಿಂತಕ ಕಾರ್ಲ್‍ಮಾಕ್ಸ್ ಹೇಳುವಂತೆ “ ಮಾನವ ಕುಲದ ಒಳಿತಿಗಾಗಿ ಎಲ್ಲದಕ್ಕಿಂತ ಹೆಚ್ಚು ದುಡಿಯುವುದಕ್ಕೆ ಅವಕಾಶವಿರುವಂಥ ಕೆಲಸವನ್ನು ಆರಿಸಿಕೊಳ್ಳಲು  ನಮಗೆ ಸಾಧ್ಯವಾದರೆ, ಎಂಥ ಕಷ್ಟದ ಭಾರವೂ ನಮ್ಮನ್ನು ಬಗ್ಗಿಸಲಾರದು”. ಅಂದರೆ ಮಾನವ ಜನಾಂಗದ ಪ್ರಗತಿಗಾಗಿ ಸಮಾನತೆಯ ಹೋರಾಟದಲ್ಲಿ ಎಂತಹ ಕಷ್ಟಗಳು ಬಂದರೂ ಧೈರ್ಯದಿಂದ ಕೆಲಸಮಾಡುವುದೇ ಪರಮಸಂತೋಷ ಎಂಬ ಅವರ ಮಾತು ಮಾನವ ಹಕ್ಕುಗಳನ್ನು ಸಂರಕ್ಷಿಸಲು ಸ್ಫೂರ್ತಿಯ ಸೆಲೆ ಅಲ್ಲವೇ?
ಆರ್.ಬಿ.ಗುರುಬಸವರಾಜ