May 16, 2016

ಇಟ್ಟಿಗೆ ಗೂಡಲ್ಲಿ ಗಟ್ಟಿಗೊಂಡ ಬದುಕು

ದಿನಾಂಕ 16-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.

ಇಟ್ಟಿಗೆ ಗೂಡಲ್ಲಿ ಗಟ್ಟಿಗೊಂಡ ಬದುಕು


ಪ್ರತಿಯೊಬ್ಬರಿಗೂ ಒಂದು ಒಳ್ಳೆ ಮನೆ ಕಟ್ಟಬೇಕು, ಅದರಲ್ಲಿ ಸುಖವಾದ ಜೀವನ ಸಾಗಿಸಬೇಕೆಂಬ ಹಂಬಲ, ಕನಸು ಇರುವುದು ಸಹಜ. ಈ ಕನಸಿನ ಮಾಯಾಲೋಕದಲ್ಲಿ ವಾಸ್ತವವಾಗಿ  ಮನೆ ಕಟ್ಟಲು ಬೇಕಾಗುವ ಇಟ್ಟಿಗೆ ನಿರ್ಮಾತೃಗಳನ್ನೇ ಮರೆತುಬಿಡುತ್ತೇವೆ.  ಇಟ್ಟಿಗೆ ತಯಾರಕರ ಬದುಕನ್ನು ತೀರಾ ಹತ್ತಿರದಿಂದ ಕಂಡವರು ಬಹಳ ಕಡಿಮೆ. 
ಇಟ್ಟಿಗೆ ಬದುಕು ಕರ್ನಾಟಕದಲ್ಲಿ ಅತೀ ಪ್ರಮುಖ ದುಡಿಮೆ ಹಾಗೂ ವೃತ್ತಿಯಾಗಿದೆ. ಅದರಲ್ಲೂ ಮಧ್ಯ ಕರ್ನಾಟಕ ಎಂದೇ ಖ್ಯಾತಿಯಾದ ದಾವಣಗೆರೆ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಇಟ್ಟಿಗೆಯ ನಂಬಿ ಜೀವನ ಸಾಗಿಸುವವರೇ ಹೆಚ್ಚು. ಪ್ರತಿವರ್ಷ ಹರಿಹರದ ಸುತ್ತಮುತ್ತ ಸಾವಿರಾರು ಇಟ್ಟಿಗೆ ಭಟ್ಟಿಗಳು ತಲೆ ಎತ್ತುತ್ತವೆ. ಈ ಭಟ್ಟಿಗಳಲ್ಲಿ ಸಾವಿರಾರು ಕುಟುಂಬಗಳು ತಮ್ಮ ಮುಂದಿನ ಒಂದು ವರ್ಷದ ಜೀವನಕ್ಕೆ ಬೇಕಾದ ಸಕಲ ಸೌಲಭ್ಯಗಳನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತವೆ. 
ರಾಜ್ಯದ ಬೇರೆ ಬೇರೆ ಭಾಗಗಳಿಂದ ಕೂಲಿ ಕಾರ್ಮಿಕರನ್ನು ಕರೆತಂದು ಮೂರ್ನಾಲ್ಕು ತಿಂಗಳುಗಳಿಗೆ ಬೇಕಾದ ಸಕಲ ವಸತಿ ಸೌಲಭ್ಯ ಒದಗಿಸುವುದು ಹಾಗೂ ಅವರ ಜೀವನ ನಿರ್ವಹಣೆಗೆ ಬೇಕಾದ ಹಣಕಾಸಿನ ವ್ಯವಸ್ಥೆ ಮಾಡುವುದು ಇಟ್ಟಿಗೆ ಮಾಲೀಕರಿಗೆ ಸವಾಲಿನ ಕೆಲಸ. ಕೂಲಿಕಾರ್ಮಿಕರಿಗೆ ಮುಂಗಡವಾಗಿ ಹಣ ನೀಡಿ ಕೆಲಸಕ್ಕೆ ಖಾಯಂಗೊಳಿಸಿಕೊಳ್ಳುವುದು ಮೊದಲ ಆಧ್ಯತೆ. ಕೆಲವು ಭಟ್ಟಿಗಳಲ್ಲಿ ತಮಿಳುನಾಡು, ಆಂದ್ರಪ್ರದೇಶಗಳಿಂದ ಕೂಲಿ ಆಳುಗಳನ್ನು ಕರೆತರುವುದೂ ಉಂಟು.
ಇಟ್ಟಿಗೆ ತಯಾರಿಕೆಯಲ್ಲಿ ಮಾಲೀಕರು ಮತ್ತು ಕೂಲಿ ಕಾರ್ಮಿಕರರಲ್ಲಿ ಹೊಂದಾಣಿಕೆ ಮುಖ್ಯ. ಇವರಿಬ್ಬರೂ ಸೀಸನ್ ಇಲ್ಲದ ತಿಂಗಳುಗಳಲ್ಲಿ ಬೇರೆ ಬೇರೆ ವೃತ್ತಿಗಳಲ್ಲಿ ನಿರತರಾಗಿದ್ದು, ಸೀಸನ್ ಪ್ರಾರಂಭಕ್ಕೆ ಮುಂಚೆ ಪರಸ್ಪರ ಭೇಟಿ ಮತ್ತು ಮಾತುಕತೆಯೊಂದಿಗೆ ವ್ಯವಹಾರ ಮತ್ತು ವೃತ್ತಿ ಪ್ರಾರಂಭವಾಗುತ್ತದೆ. 
ಸೀಸನ್ ಇಲ್ಲದ ಸಮಯದಲ್ಲಿ ಮಾಲೀಕರು ಇಟ್ಟಿಗೆ ತಯಾರಿಸಲು ಬೇಕಾದ ಮಣ್ಣು, ಮರಳು, ಹೊಟ್ಟು, ಕಲ್ಲಿದ್ದಲು ಇನ್ನಿತರೇ ಸಾಮಗ್ರಿಗಳ ಸಂಗ್ರಹಣೆಯಲ್ಲಿ ನಿರತರಾಗಿರುತ್ತಾರೆ. ಸುಟ್ಟ ಇಟ್ಟಿಗೆಗಳಿಗೆ ಹೆಚ್ಚು ಬೇಡಿಕೆ ಇದೆ. ಅದಕ್ಕನುಗುಣವಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಇದು ಕೇವಲ ಕೆಲವೇ ತಿಂಗಳುಗಳ ಉದ್ಯೋಗ ಆಗಿರುವುದರಿಂದ ಬೇಡಿಕೆಗನುಗುಣವಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ. 
ಪ್ರತೀ ಮಾಲೀಕರೂ ಒಂದು ಸೀಸನ್‍ನಲ್ಲಿ ಕನಿಷ್ಟ 5-10 ಲಕ್ಷ ಇಟ್ಟಿಗೆಗಳ ಭಟ್ಟಿ ತಯಾರಿಸುತ್ತಾರೆ. ಒಟ್ಟಾರೆ ಒಂದು ಇಟ್ಟಿಗೆ ತಯಾರಾಗಲು ಕಚ್ಛಾ ಸಾಮಗ್ರಿ ಸಂಗ್ರಹಣೆ, ಕೂಲಿ ಕಾರ್ಮಿಕರ ವೇತನ, ಸುಡಲು ಬೇಕಾದ ಹೊಟ್ಟು ಮತ್ತು ಕಲ್ಲಿದ್ದಲು, ಸಾಮಗ್ರಿಗಳ ಸಾಗಾಣಿಕೆ ಎಲ್ಲಾ ನಿರ್ವಹಣಾ ವೆಚ್ಚ ಸೇರಿ 4-5ರೂ ತಗಲುತ್ತದೆ. ಬೇಡಿಕೆ ಹೆಚ್ಚಾದರೆ ಹೂಡಿದ ಬಂಡವಾಳಕ್ಕಿಂತ ಅಲ್ಪ ಆದಾಯ ದೊರೆಯುತ್ತದೆ. 
ತೀರಾ ಸೀಸನಲ್ ದುಡಿಮೆಯಾದ ಇಟ್ಟಿಗೆ ಬದುಕು ಕೇವಲ ಕೆಲವೇ ತಿಂಗಳುಗಳು ಮಾತ್ರ. ದೀಪಾವಳಿಯ ಆಸುಪಾಸು ಪ್ರಾರಂಭವಾಗುವ ಈ ಬದುಕು ಹೋಳಿ ಹುಣ್ಣಿಮೆಯಲ್ಲಿ ಅಂತ್ಯಗೊಳ್ಳುತ್ತದೆ. ಕೆಲವೊಮ್ಮೆ ಪ್ರಕೃತಿಯ ವಿಕೋಪ ಅಥವಾ ಅಕಾಲಿಕ ಮಳೆಯಿಂದ  ಲಾಭಕ್ಕಿಂತ ನಷ್ಟವೇ ಹೆಚ್ಚು. ಇಂತಹ ಸಂದರ್ಭಗಳಲ್ಲಿ ಇಟ್ಟಿಗೆಯಿಂದ ಕಟ್ಟಿಕೊಂಡ ಬದುಕು ಮೂರಾಬಟ್ಟೆಯಾಗುತ್ತದೆ. ನಷ್ಟ ಅನುಭವಿಸಿದ ಕೆಲ ಮಾಲೀಕರು ಸಾವಿಗೆ ಶರಣಾಗುವುದೂ ಉಂಟು. 
ಬಹುತೇಕ ಇಟ್ಟಿಗೆ ಭಟ್ಟಿಗಳು ಉಳುಮೆ ಜಮೀನಿನಲ್ಲೇ ಪ್ರಾರಂಭವಾಗಿವೆ. ಅಕ್ಕಪಕ್ಕದವರು ಭಟ್ಟಿ ಪ್ರಾರಂಭಿಸಿದ್ದು ಕಂಡು ತಾವೂ ಪ್ರಾರಂಭಿಸಬೇಕೆಂಬ ಹಠಕ್ಕೆ ಬಿದ್ದು ಪ್ರಾರಂಭಿಸಿದವರೇ ಹೆಚ್ಚು. ಕಚ್ಛಾ ಸಾಮಗ್ರಿ ಸರಬರಾಜು, ಮಾರುಕಟ್ಟೆ ವ್ಯವಸ್ಥೆಯ ನಿರ್ವಹಣಾ ಕೌಶಲ್ಯ ಇಲ್ಲದೇ ಕೆಲವು ಮಾಲೀಕರು ನಷ್ಟ ಅನುಭವಿಸುತ್ತಾರೆ. ಸೂಕ್ತ ಮುಂಜಾಗರೂಕತೆ ವಹಿಸಿ ವ್ಯವಹಾರ ಕುದುರಿಸಿ ಈ ವೃತ್ತಿಯಲ್ಲಿ ಬದುಕನ್ನು ಗಟ್ಟಿಗೊಳಿಸಿಕೊಂಡವರೇ ಹೆಚ್ಚು. ಇತ್ತೀಚೆಗೆ ನಿರುದ್ಯೋಗಿ ವಿದ್ಯಾವಂತ ಯುವಕರು ಈ ವೃತ್ತಿಯನ್ನು ನಂಬಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವುದು ಸಂತೋಷದಾಯಕವಾಗಿದೆ. 

ಆರ್.ಬಿ.ಗುರುಬಸವರಾಜ 


ಪ್ರೇಕ್ಷಕರಿಗೆ ರಂಗಹುಚ್ಚು ಹಿಡಿಸಿದ ಮಳೆಹುಚ್ಚ ಮತ್ತು ಬೆಪ್ಪ ತಕ್ಕಡಿ ಬೋಳೆ ಶಂಕರ

ದಿನಾಂಕ 12-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.



ಪ್ರೇಕ್ಷಕರಿಗೆ ರಂಗಹುಚ್ಚು ಹಿಡಿಸಿದ 
ಮಳೆಹುಚ್ಚ ಮತ್ತು ಬೆಪ್ಪ ತಕ್ಕಡಿ ಬೋಳೆ ಶಂಕರ

     ಬೇಸಿಗೆ ರಜೆ ಬಂತೆಂದರೆ ಸಾಕು ಗ್ರಾಮ ಮಟ್ಟದಿಂದ ರಾಜಧಾನಿಯವರೆಗೆ ಮಕ್ಕಳ ಬೇಸಿಗೆ ಶಿಬಿರಗಳು ಆಯೋಜನೆಗೊಳ್ಳುತ್ತವೆ. ವಿಪರ್ಯಾಸವೆಂದರೆ ಬಹುತೇಕ ಶಿಬಿರಗಳು ಮತ್ತೊಂದು ರೀತಿಯ ಟ್ಯೂಷನ್ ಕ್ಲಾಸ್‍ಗಳಂತಾಗಿವೆ. ಇವೆಲ್ಲವುಗಳ ನಡುವೆ ಕೇವಲ ಬೆರಳೆಣಿಕೆಯ ಶಿಬಿರಗಳು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ, ಅದಕ್ಕೊಂದು ಹೊಸ ಮಾರ್ಗವನ್ನು ಸೂಚಿಸುವ ಕೇಂದ್ರಗಳಾಗಿವೆ. ಅಂತಹ ವಿರಳಾತಿವಿರಳ ಶಿಬಿರಗಳಲ್ಲಿ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ‘ರಂಗಭಾರತಿ’ ಸಂಸ್ಥೆ ನಡೆಸಿದ “ಚಿಣ್ಣರ ಮೇಳ” ವಿಶಿಷ್ಟವೂ  ವಿಭಿನ್ನವೂ ಆಗಿತ್ತು. ಏಕೆಂದರೆ ಇಲ್ಲಿನ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ರಂಗಭೂಮಿಯ ಕ್ರಿಯಾಶೀಲ ನಟರು, ನೃತ್ಯಗಾರರು, ರಂಗ ನಿರ್ದೇಶಕರು, ಸೃಜನಶೀಲ ಕಾರ್ಯಕರ್ತರು ಆಗಿದ್ದರಿಂದ ಶಿಬಿರ ವಿಶೇಷತೆಯಿಂದ ಕೂಡಿತ್ತು. ಸದಾ ಕ್ರಿಯಾಶೀಲ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡ ರಂಗಭಾರತಿ ಮಕ್ಕಳಲ್ಲಿ ಅಪೇಕ್ಷಿತ ಕ್ರಿಯೆಗಳನ್ನು ಹೊರಹೊಮ್ಮುವಂತೆ ಮಾಡಿತ್ತು. 
‘ಸಂಗೀತ, ನೃತ್ಯ ಮತ್ತು ನಾಟಕೋತ್ಸವ’ ಎಂಬ ಅಡಿಬರಹದಲ್ಲಿ 20 ದಿನಗಳ ಕಾಲ ಮೂಡಿಬಂದ ಶಿಬಿರದ ಸಮಾರೋಪದಲ್ಲಿ ನಡೆದ ಮಕ್ಕಳ ನಾಟಕಗಳು ಅಪಾರ ಪ್ರೇಕ್ಷಕರನ್ನು ರಂಜಿಸಿದವು. ಎರಡು ದಿನ ನಡೆದ ಸಮಾರೋಪದಲ್ಲಿ ಪ್ರತಿದಿನ ಒಂದು ಮಕ್ಕಳ ನಾಟಕ ಮತ್ತು ಇನ್ನೊಂದು ದೊಡ್ಡವರ ನಾಟಕ ಇದ್ದವು. ಜೊತೆಗೆ ಮಕ್ಕಳ ನೃತ್ಯ ರೂಪಕಗಳು ಇದ್ದವು.
     ದೊಡ್ಡವರ ನಾಟಕಗಳಿಗಿಂತ ಹೆಚ್ಚು ಖುಷಿ ನೀಡಿದ್ದು ಮಕ್ಕಳ ನಾಟಕಗಳು. ‘ಮಳೆಹುಚ್ಚ’ (ರಚನೆ: ಕೃಷ್ಣಮೂರ್ತಿ ಬಿಳಿಗೆರೆ) ಮತ್ತು ‘ಬೆಪ್ಪ ತಕ್ಕಡಿ ಬೋಳೆ ಶಂಕರ’ (ರಚನೆ: ಡಾ||ಚಂದ್ರಶೇಖರ ಕಂಬಾರ) ಪ್ರೇಕ್ಷಕರಿಗೆ ರಂಗಹುಚ್ಚು ಹಿಡಿಸಿ ಬಾಯಿಯ ಮೇಲೆ ಬೆರಳಿಡುವಂತೆ ಮಾಡಿದವು. ಮಕ್ಕಳು ಹೇಗೆ ಅಭಿನಯಿಸಿದರೂ ಚೆಂದ ಸಾಮಾನ್ಯ ಭ್ರಮೆಗಿಂತ ಅವರ ವಾಸ್ತವದ ಪ್ರಯತ್ನಗಳು ಪ್ರೇಕ್ಷಕರಿಗೆ ಪ್ರಿಯವಾಗಿದ್ದವು. ಪ್ರೀತಿ, ಪ್ರೇಮ, ದುಗುಡ, ಸಿಟ್ಟು, ಆಕ್ರೋಶ, ಗಂಭೀರತೆ, ಶಾಂತತೆ, ನಿರಾಶೆ ಹೀಗೆ ಎಲ್ಲಾ ಭಾವನೆಗಳನ್ನು ಅಚ್ಚುಕಟ್ಟಾಗಿ ತಮ್ಮ ಹಾವ ಭಾವದಿಂದ ಪ್ರದರ್ಶಿಸಿದ ಪರಿ ಮನೋಜ್ಞವಾಗಿತ್ತು.  ಪಾತ್ರಗಳ ವ್ಯಕ್ತಿತ್ವವನ್ನು ತಮ್ಮಲ್ಲಿ ಅವಗಾಹಿಸಿಕೊಂಡು ಪಾತ್ರವೇ ತಾನೆಂಬಂತೆ ಅಭಿನಯಿಸಿದರು. ಇಲ್ಲಿ ದೊಡ್ಡವರ ಅನುಕರಣೆ ಇದ್ದರೂ ಅದರಲ್ಲಿ ಸೃಜನಶೀಲತೆ ಮತ್ತು ಕಲೆಯನ್ನು ಗೌರವಿಸುವ ಮನೋವಿಕಾಸದ ಮಾರ್ಗಗಳಿದ್ದವು. ಪರಸ್ಪರ ಪಾತ್ರಧಾರಿಗಳ ಕೌಶಲ್ಯಗಳನ್ನು ಗೌರವಿಸುತ್ತಾ, ತಮ್ಮ ತಂಡದ ಉತ್ತಮ ಪ್ರದರ್ಶನಕ್ಕಾಗಿ ಪ್ರಯತ್ನಿಸುತ್ತಿದ್ದರು. ಸಾಧನೆಯ ಹಂಬಲ ಗೊತ್ತಿಲ್ಲದ ಮಕ್ಕಳು ಮುಕ್ತವಾಗಿ ಅಭಿನಯಿಸಿದರು.
       ರಂಗಸ್ಥಳದ ಸದ್ಭಳಕೆ, ರಂಗಪರಿಕರ ಮತ್ತು ರಂಗಸಜ್ಜಿಕೆಯಲ್ಲಿ ಹಿರಿಯರನ್ನು ಮೀರಿಸಿದ ಅವರ ಜಾಣ್ಮೆ ಪ್ರೇಕ್ಷಕರಿಗೆ ಪ್ರಿಯವಾದವು. ಧ್ವನಿಯ ಏರಿಳಿತ, ಔಚಿತ್ಯಪೂರ್ಣ ಹಾವ ಭಾವಗಳು ಎಂತಹ ಪರಿಣಿತ ವೃತ್ತಿಪರ ರಂಗಕರ್ಮಿಗಳನ್ನೂ ಮೀರಿಸುವಂತಿದ್ದವು. ‘ಮಕ್ಕಳಿಗೆ ಸೂಕ್ತ ರಂಗ ತರಬೇತಿ ನೀಡಿದರೆ ಉತ್ತಮ ನಟರಾಗುತ್ತಾರೆ ಜೊತೆಗೆ ಮಾನವೀಯ ಪ್ರಜ್ಞೆ ಬೆಳೆಸಿಕೊಳ್ಳುತ್ತಾರೆ’ ಎಂದು ಜ್ಹೀ ಕನ್ನಡ ವಾಹಿನಿಯಲ್ಲಿ ಡ್ರಾಮಾ ಜೂನಿಯರ್ ಎಂಬ ರಿಯಾಲಿಟಿ ಶೋ ಪ್ರಾರಂಭದಲ್ಲಿ ಹಿರಿಯ ನಟಿ ಲಕ್ಷ್ಮಿಯವರು ಹೇಳಿದ ಮಾತು ಅಕ್ಷರಶಃ ಸತ್ಯ. 20 ದಿನಗಳ ಚಿಣ್ಣರ ಮೇಳದಲ್ಲಿ ಕೆಲವೇ ದಿನಗಳು ನಡೆದ ರಂಗತಾಲೀಮು ಮಕ್ಕಳ ಕಲೆಯನ್ನು ಒರೆಗೆ ಹಚ್ಚಿದ್ದವು. 
          ‘ಕಲೆ ಎಂದರೆ ಕೇವಲ ಅಬ್ಬರದ ಪೋಷಾಕುಗಳ, ಧ್ವನಿವರ್ಧಕಗಳ, ದೀಪಗಳ ವ್ಯವಸ್ಥೆ ಅಲ್ಲ. ಅದೊಂದು ಕಲಿಕೆಯ ವ್ಯವಸ್ಥೆ. ಜೀವನದ ಪಾಠ. ವಿಚಾರ, ದೈಹಿಕ ಶ್ರಮ ಮತ್ತು ನೈತಿಕತೆಗಳನ್ನು ಕಲಿಸುವ ಏಕೈಕ ವೇದಿಕೆ’ ಎಂದು ಖ್ಯಾತ ರಂತಗಕರ್ಮಿ ಪ್ರಸನ್ನ ಅವರು ಸಮಾರೋಪ ನುಡಿಯಲ್ಲಿ ಮಕ್ಕಳ ನಾಟಕ ಕಲೆಯನ್ನು ಪ್ರೋತ್ಸಾಹಿಸುವ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಎಲೆಕ್ಟ್ರಾನಿಕ್ ಮಾಧ್ಯಮದ ಭರಾಟೆಯಲ್ಲೂ ಮಕ್ಕಳ ರಂಗಾಭಿನಯ ಪ್ರೇಕ್ಷಕರನ್ನು ಮೂಕವಿಸ್ಮತರನ್ನಾಗಿಸಿತು.
ಆರ್.ಬಿ.ಗುರುಬಸವರಾಜ 

ಬಸವಣ್ಣ ಮತ್ತು ಸಾಮಾಜಿಕ ಹೋರಾಟ

ದಿನಾಂಕ 09-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.


ಬಸವಣ್ಣ ಮತ್ತು ಸಾಮಾಜಿಕ ಹೋರಾಟ


ಹೆಣ್ಣಿಗಾಗಿ ಸತ್ತವರು ಕೋಟಿ,
ಮಣ್ಣಿಗಾಗಿ ಸತ್ತವರು ಕೋಟಿ,
ಹೊನ್ನಿಗಾಗಿ ಸತ್ತವರು ಕೋಟಿ,
ನಿನಗಾಗಿ ಸತ್ತವರರಾರನೂ ಕಾಣೆ ಗುಹೇಶ್ವರಾ !
ಇತಿಹಾಸದ ಪುಟಗಳನ್ನ ತಿರುವಿ ಹಾಕಿದರೆ ನಮಗೆ ಅಲ್ಲಿ ಸಿಗುವುದು ಹೆಣ್ಣು, ಹೊನ್ನು, ಮಣ್ಣಿಗಾಗಿ ಹೋರಾಡಿದ ರಾಜ-ಮಹಾರಾಜರ ಕಥೆ. ಇದನ್ನು ‘ಅಲ್ಲಮಪ್ರಭು’ ತಮ್ಮ ವಚನದಲ್ಲಿ ವಿಡಂಬನಾತ್ಮಕವಾಗಿ ಹೇಳಿರುವುದು ನಿಜಕ್ಕೂ ಸರ್ವ ಸಮ್ಮತ. ಇತಿಹಾಸದಲ್ಲಿ ತಾವು ಬಯಸಿದ ಹೆಣ್ಣಿಗಾಗಿ, ಹಣ-ಐಶ್ವರ್ಯಕ್ಕಾಗಿ, ಸಾಮ್ರಾಜ್ಯ ವಿಸ್ತರಣೆ ಅಥವಾ ಸಾಮ್ರಾಜ್ಯ ಉಳಿಸಿಕೊಳ್ಳುವುದಕ್ಕಾಗಿ ಯುದ್ದಗಳು ನಡೆದಿವೆ. ಆದರೆ ತಮ್ಮ ಅನುಯಾಯಿಗಳಾದ ಸಾಮಂತರಿಗಾಗಲೀ, ಸೈನಿಕರಿಗಾಗಲೀ, ಜನಸಾಮಾನ್ಯರಿಗಾಗಲೀ ಯುದ್ದ ಮಾಡಿದವರಾರೂ ಇಲ್ಲವೆನ್ನಬಹುದು. ಮಾನವರೆಲ್ಲರ ಒಳಿತಿಗಾಗಿ, ಸಮಾಜದ ಹಿತಕ್ಕಾಗಿ ನಡೆದ ಹೋರಾಟಗಳು ಅತಿವಿರಳ.
ಅಂತಹ ವಿರಳಾತೀತ ಹೋರಾಟಗಳಲ್ಲಿ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಹೋರಾಟ ಮಾಡಿದ ಮಹಾನ್ ಮಾನವತಾವಾದಿ ಎಂದರೆ 12ನೇ ಶತಮಾನದ  ಬಸವಣ್ಣ. ಇವರ ಹೋರಾಟಗಳು ರಾಜ-ಮಹಾರಾಜರ ಹೋರಾಟಗಳಲ್ಲ, ಹೆಣ್ಣಿಗಾಗಿ, ಮಣ್ಣಿಗಾಗಿ, ಹೊನ್ನಿಗಾಗಿ ನಡೆದ ಹೋರಾಟಗಳಲ್ಲ. ಅಖಂಡ ವಿಶ್ವದ ಜನರ ಕಲ್ಯಾಣವನ್ನು ಬಯಸಿ, ಸಕಲ ಜೀವಾತ್ಮರಿಗೆ ಒಳಿತನ್ನು ಉಂಟುಮಾಡುವ ಹೋರಾಟಗಳಾಗಿದ್ದವು. ಈ ಹೋರಾಟದ ಮೂಲಮಂತ್ರ `ಮಾನವೀಯತೆ` ಎಂಬುದನ್ನು ನಾವೆಲ್ಲರೂ ಗಮನಿಸಬೇಕು. ಜನರು ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಮಾನತೆ ಸಾಧಿಸಲು ಹೋರಾಟವನ್ನು ರೂಪಿಸಿದವರು. ಜನಸಾಮಾನ್ಯರ ಕಷ್ಟ-ಸುಖ, ನೋವು-ನಲಿವುಗಳಿಗೆ ಸ್ಪಂದಿಸಿದ ಈ ಮಹಾನ್ ಚೇತನನ ಉದ್ದೇಶ ಮಾನವ ಸಮಾಜದ ಉದ್ದಾರವಾಗಿತ್ತೇ ವಿನಃ ಯಾವುದೇ ಸ್ವಾರ್ಥವಾಗಲೀ, ಅಧಿಕಾರದ ಲಾಲಸೆಯಾಗಲೀ, ಘನತೆ ಗೌರವಗಳ ಸ್ವಂತಿಕೆಯಾಗಲೀ ಇರಲಿಲ್ಲ. ಬಸವಣ್ಣನವರ ಹೋರಾಟಗಳು ಮಾನವನ ಸರ್ವಾಂಗೀಣ ಪ್ರಗತಿಗೆ ಪೂರಕವಾದ್ದರಿಂದಲೇ ಅಸಂಖ್ಯಾತ ಬೆಂಬಲಿಗರನ್ನು ಪಡೆದ ಹೋರಾಟಗಳಾಗಿದ್ದವು. 

ಬಸವಣ್ಣನವರು ವಚನಗಳ ಮೂಲಕ ತಮ್ಮ ಅನುಭಾವಗಳನ್ನು ಜನರಲ್ಲಿ ಪ್ರಚುರ ಪಡಿಸಿದರು.     ಅವರು ಜೀವಿಸಿದ್ದಂತಹ 12ನೇ ಶತಮಾನ ಹಲವಾರು ವೈರುಧ್ಯಗಳಿಂದ ಕೂಡಿದ ಕಾಲಮಾನ. ಧಾರ್ಮಿಕ ಆಚರಣೆ ಅಚಲವಾಗಿದ್ದ ಕಾಲ. ಇಂತಹ ಕಾಲಘಟ್ಟದಲ್ಲಿ ಕಲ್ಯಾಣದಲ್ಲಿ ಕ್ರಾಂತಿಯ ಕಿಡಿಗಳನ್ನು ಹೊತ್ತಿಸಿದ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ. ಬಸವಣ್ಣನವರು ವಚನಗಳ ಮೂಲಕ ಜನಸಾಮಾನ್ಯರಿಗೆ ಅರಿವನ್ನುಂಟು ಮಾಡಿದರು. ಶೋಷಿತರನ್ನೆಲ್ಲ ಸಂಘಟಿಸಿ ತಮ್ಮ ವಿಮೋಚನೆಗಾಗಿ ಹೋರಾಟಕ್ಕೆ ಹುರಿದುಂಬಿಸಿದರು. ಇವರ ಕ್ರಾಂತಿಯಲ್ಲಿ ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆ ಮತ್ತು ಶೋಷಣೆಯ ವಿರುದ್ದ ಹೋರಾಟದ ಧ್ವನಿಯನ್ನು ಕಾಣುತ್ತೇವೆ. ಮೇಲ್ಜಾತಿ, ಕೀಳ್ಜಾತಿಗಳ ನಡುವಿನ ಸಂಘರ್ಷ ನಿರಂತರವಾದುದು. ಬಸವಣ್ಣನವರು 12ನೇ ಶತಮಾನದಲ್ಲೇ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿರುದನ್ನು ಅವರ ಅನೇಕ ವಚನಗಳಲ್ಲಿ ಕಾಣಬಹುದು. 

``ನೆಲವೊಂದೇ ಹೊಲಗೇರಿ, ಶಿವಾಲಯಕ್ಕೆ,
ಜಲವೊಂದೇ ಶೌಚಾಚಮನಕ್ಕೆ,
ಫಲವೊಂದೇ ಷಡುದರುಶನ ಮುಕ್ತಿಗೆ,
ಕುಲವೊಂದೇ  ತನ್ನ ತಾನರಿದವರಿಗೆ,
ನಿಲುವೊಂದೇ ಕೂಡಲ ಸಂಗಮದೇವಾ ನಿಮ್ಮನರಿದವರಿಗೆ’’  
ಎಂಬ ವಚನದಲ್ಲಿ ನೆಲ, ಜಲ, ಫಲ ಎಲ್ಲಾ ಜಾತಿ ಕುಲದವರಿಗೂ ಒಂದೇ ಎಂಬ ವಾಸ್ತವ ಸತ್ಯವನ್ನು ಹೊರಹಾಕಿದ್ದಾರೆ. ಬಸವಣ್ಣನವರು ‘ಎಲ್ಲಾ ದುರ್ಬಲ ವರ್ಗಗಳ ವಿಮೋಚನೆಯಾಗದ ಹೊರತು ನಾಡಿನ ಆಡಳಿತ ಅರ್ಥ ರಹಿತ’’ ಎಂಬ ಮೂಲತತ್ವ ಪ್ರತಿಪಾದಿಸಿದರು. 

ಮಾನವ ಸಂಘ ಜೀವಿ ಎನ್ನುತ್ತೇವೆ. ಆದರೆ ತಮ್ಮ ತಮ್ಮಲ್ಲೇ ಹೊಡೆದಾಟ, ಬಡಿದಾಟ, ಭಿನ್ನತೆ, ಮೇಲು-ಕೀಳು, ಸಿರಿತನ-ಬಡತನ, ಸ್ವಾರ್ಥತೆ ಇತ್ಯಾದಿ ಕಾರಣಗಳಿಗಾಗಿ ತನ್ನಂತೆ ಇರುವ ಇತರರನ್ನು ಪ್ರಾಣಿಗಳಿಗಿಂತ ಕೀಳಾಗಿ ಶೋಷಿಸುತ್ತಿರುವುದನ್ನು ಕಂಡರೆ, ಅವನು ಸಂಘಜೀವಿಯಾಗಿದ್ದುಕೊಂಡು ಹೀಗೇಕೆ ವರ್ತಿಸುತ್ತಾನೆ ಎಂಬುದೇ ಅಚ್ಚರಿಯ ವಿಷಯ. ಯಾವಾಗ ವ್ಯಕ್ತಿಯು ತಾನೊಬ್ಬನೇ ಶ್ರೇಷ್ಠ, ಇತರರು ಕನಿಷ್ಠವೆಂದು ಭಾವಿಸುತ್ತಾನೋ ಆಗಲೇ ಅವನು ಇತರರನ್ನು ಶೋಷಿಸಲು ಪ್ರಾರಂಭಿಸುತ್ತಾನೆ. 
``ಪ್ರಬಲ ಶಕ್ತಿಗಳು ಅತಿಕ್ರಮಣ ಮಾಡಿದಾಗ ದುರ್ಬಲ ಶಕ್ತಿಗಳು ಇಲ್ಲವಾಗುತ್ತವೆ’’ ಎಂಬ ‘ಡಾರ್ವಿನ್’ನ ಹೇಳಿಕೆ ಸರ್ವಕಾಲಿಕ ಸರ್ವಸಮ್ಮತ ಎಂಬುದನ್ನು ಇತಿಹಾಸ ಸಾರುತ್ತದೆ. ಪ್ರಬಲ ಜಾತಿಗಳು ದುರ್ಬಲ ಜಾತಿಗಳನ್ನು, ಆರ್ಥಿಕ ಸಬಲರು ಆರ್ಥಿಕ ದುರ್ಬಲರನ್ನು, ಮೇಲ್ವರ್ಗ ಕೆಳವರ್ಗವನ್ನು ಶೋಷಿಸುತ್ತಾ ಬಂದಿರುವುದನ್ನು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಈ ದುಷ್ಟಶಕ್ತಿಗಳ ಪ್ರಾಬಲ್ಯ ಹೆಚ್ಚಾದಾಗಲೆಲ್ಲಾ ಒಬ್ಬೊಬ್ಬ ಅವತಾರ ಪುರುಷರು ಉದಯಿಸಿರುವುದನ್ನು ಪುರಾಣಗಳು ತಿಳಿಸುತ್ತವೆ. ಅಂತೆಯೇ 12ನೇ ಶತಮಾನದಲ್ಲಿನ ಜಾತಿ ಸಂಘರ್ಷವನ್ನು ತೊಡೆದು ಸಮಾನತೆಯ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಉದಿಸಿ ಬಂದರು. 
ಮುಖ್ಯವಾಗಿ ನಾವಿಲ್ಲಿ ಚಿಂತನೆ ಮಾಡಬೇಕಾಗಿರುವುದು ಬಸವಣ್ಣನವರ ವಿಭಿನ್ನ ರೀತಿಯ ಆದರೆ ನಿರ್ದಿಷ್ಟ ಉದ್ದೇಶದ ಹೋರಾಟಗಳ ಬಗ್ಗೆ. ಬಸವಣ್ಣನವರು ಧಾರ್ಮಿಕ ಹಿನ್ನಲೆಯಲ್ಲಿ ವಚನಗಳ ಮೂಲಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಹೋರಾಟ ಮಾಡಿದರು.
ಜಾತಿ ಪಂಥಗಳು ಅಗ್ರಸ್ಥಾನವಾದ ನಮ್ಮ ದೇಶದಲ್ಲಿ ಮೇಲ್ಜಾತಿ, ಕೆಳಜಾತಿ ಎಂಬ ಭೇಧಗಳು ಮಾನವ ಕಲ್ಪಿತ ಎಂಬ ಕಟುಸತ್ಯ ನಮಗಿದ್ದರೂ, ಅವು ನಮ್ಮ ರಾಜಕೀಯ, ಸಾಮಾಜಿಕ , ಆರ್ಥಿಕ ವ್ಯವಸ್ಥೆಯಲ್ಲಿ ಪ್ರಬಲ ಶಕ್ತಿಗಳಾಗಿವೆ. ಇಂಥಹ ವರ್ಣ, ವರ್ಗ ಪ್ರಧಾನ ಸಮಾಜದಲ್ಲಿ ಮಾನವೀಯತೆಗೆ ಜಾಗವಿಲ್ಲದಿರುವ ಸಂದರ್ಭದಲ್ಲಿ ಮನುಕುಲದ ಹೋರಾಟಕ್ಕಿಳಿದು ಕಷ್ಟನಷ್ಟ ಲೆಕ್ಕಿಸದೇ, ತಮ್ಮ ಧ್ಯೇಯಕ್ಕೆ, ಸಿದ್ದಾಂತಕ್ಕೆ ಬದ್ಧರಾಗಿದ್ದುಕೊಂಡು ಹೋರಾಡಿದ ಬಸವಣ್ಣನವರು ಎಂದೆಂದೂ  ಆದರ್ಶಪ್ರಾಯರಾಗಿ ನಿಲ್ಲುತ್ತಾರೆ. ಈ ಮಹನೀಯನಲ್ಲಿ ಇರುವ ಮಾನವೀಯ ಮೌಲ್ಯಗಳು, ಶೋಷಿತ ವರ್ಗ/ವರ್ಣ ವ್ಯವಸ್ಥೆಯ ವಿರುದ್ದ ಇವರು ಸಂಘಟಿಸಿದ ಹೋರಾಟ, ಮಾನವ ಜನಾಂಗಕ್ಕೆ ನೀಡಿದ ಸಂದೇಶಗಳು ಇಂದು ಸಮಾಜ ಸೇವಕರಾಗಬೇಕೆನ್ನುವವರಿಗೆ ದಾರಿದೀಪವಾಗಿವೆ. 
       ಪ್ರತಿವರ್ಷ ಬಸವಣ್ಣನವರ ಜಯಂತಿಯಂದು ಮಾತ್ರ ಅವರ ತತ್ವಾದರ್ಶಗಳನ್ನು ಕೊಂಡಾಡದೇ ಪ್ರತಿನಿತ್ಯ ನಮ್ಮ ಬದುಕಿನ ಒಂದು ಭಾಗವಾಗಿ ಆಚರಣೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವಣ್ಣ ಜನಿಸಿದ ನಾಡಿನಲ್ಲಿ ನಾವು ಜನಿಸಿದ್ದಕ್ಕೆ ಸಾರ್ಥಕವಾಗುತ್ತದೆ. ಪ್ರತಿ ಸಂಧರ್ಭದಲ್ಲೂ ಅವರ ವಿಚಾರಗಳನ್ನು ಹೆಚ್ಚು ಹೆಚ್ಚು ಮನನ ಮಾಡಿಕೊಳ್ಳುತ್ತಾ ಅವರ ತತ್ವಗಳನ್ನು, ಜೀವನಾದರ್ಶಗಳನ್ನು ಪಾಲಿಸುತ್ತಾ ಸಾಗೋಣ. 
ಆರ್.ಬಿ.ಗುರುಬಸವರಾಜ