November 27, 2017

ಮಕ್ಕಳ ಬೆಳವಣಿಗೆ ಮತ್ತು ಸಾಮಾಜಿಕರಣ Children Development and Socialization

ದಿನಾಂಕ 27-11-2017ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಮಕ್ಕಳ ಬೆಳವಣಿಗೆ ಮತ್ತು ಸಾಮಾಜಿಕರಣ


ಎಂಟನೇ ತರಗತಿಯಲ್ಲಿ ಓದುತ್ತಿರುವ ಕಾರ್ತೀಕ ಯಾವಾಗಲೂ ತಾನಾಯಿತು, ತನ್ನ ಓದುವ ಬರೆಯುವ ಕೆಲಸವಾಯಿತು ಎನ್ನುವಂತೆ ಇದ್ದಾನೆ. ರಜೆಯ ದಿನ ಅಪರೂಪಕ್ಕೆ ಎಂಬಂತೆ ವಠಾರದ ಮಕ್ಕಳೊಂದಿಗೆ ಆಟವಾಡಲು ಹೊರಗೆ ಹೋಗುತ್ತಾನೆ. ಸ್ವಲ್ಪ ಹೊತ್ತಿನಲ್ಲೇ ಜಗಳದೊಂದಿಗೆ ಮನೆಗೆ ಹಿಂದಿರುಗುತ್ತಾನೆ. ಇತರೆ ಮಕ್ಕಳೊಂದಿಗೆ ಹೊಂದಿಕೊಂಡು ಆಡುವ ಗುಣ ತಿಳಿದಿಲ್ಲ. ಮನೆಗೆ ಯಾರೇ ಅಥಿತಿಗಳು ಬಂದರೂ ಅವರೊಂದಿಗೆ ಮಾತನಾಡುವುದಿಲ್ಲ. ಚಿಕ್ಕ ಚಿಕ್ಕ ಸಾಮಾನುಗಳನ್ನು ತರಲು ಅಂಗಡಿಗೆ ಕಳಿಸಿದರೆ ಸರಿಯಾಗಿ ಲೆಕ್ಕಾಚಾರ ಮಾಡದೇ ಕೊಟ್ಟ ಹಣವನ್ನೆಲ್ಲಾ ಅಂಗಡಿಯವನಿಗೆ ಕೊಟ್ಟು ಬರುತ್ತಾನೆ. ಈ ಬಗ್ಗೆ ಕೇಳಿದರೆ ರೇಗುತ್ತಾನೆ. ನಾನು ಇನ್ಮುಂದೆ ಅಂಗಡಿಗೆ ಹೋಗುವುದಿಲ್ಲ ಎಂದು ಹೆದರಿಸುತ್ತಾನೆ. ಮನೆಯ ಹಿರಿಯರಿಗೆ ಗೌರವವನ್ನೇ  ಕೊಡುವುದಿಲ್ಲ. ಇವನು ಹೀಗೇಕೆ ಎಂಬುದೇ ತಾಯಿಯ ಚಿಂತೆ.
ಆರನೇ ತರಗತಿಯಲ್ಲಿ ಓದುವ ಮೊನಿಕ ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆ ವಠಾರದ ಮಕ್ಕಳೊಂದಿಗೆ ಆಟವಾಡುತ್ತಾಳೆ. ಮನೆಯವರು ಕರೆದ ತಕ್ಷಣ ಓಡಿಹೋಗಿ ಅವರು ಹೇಳಿದ ಕೆಲಸ ಮಾಡುತ್ತಾಳೆ. ರಜೆಯ ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ಗೆಳೆಯರೊಂದಿಗೆ ಆಟವಾಡುತ್ತಾಳೆ. ಅಂಗಡಿಗೆ ಹೋದರೆ ನಿಖರವಾಗಿ ಲೆಕ್ಕಾಚಾರ ಮಾಡಿ ಸರಿಯಾದ ಹಣ ನೀಡುತ್ತಾಳೆ. ಅಂಗಡಿವನಿಗೆ ಏನಾದರೂ ಒಂದು ತರಲೆ ಪ್ರಶ್ನೆ ಕೇಳಿ ಅದಕ್ಕೆ ತಾನೇ ಸೂಕ್ತ ಉತ್ತರ ನೀಡಿ ಬಹುಮಾನ ಪಡೆಯುತ್ತಾಳೆ. ಮನೆಯವರಿಗೆ ಅಷ್ಟೇ ಅಲ್ಲ ವಠಾರದ ಎಲ್ಲಾ ಹಿರಿಯರಿಗೂ ಗೌರವ ನೀಡುತ್ತಾಳೆ. ಅವರು ಹೇಳಿದ ಮಾತು ಕೇಳುತ್ತಾಳೆ. ಎಲ್ಲರಿಗೂ ಮೊನಿಕ ಎಂದರೆ ಪಂಚಪ್ರಾಣ.
ಕಾರ್ತೀಕ ಮತ್ತು ಮೊನಿಕ ಇಬ್ಬರೂ ಒಂದೇ ವಠಾರದವರಾದರೂ ಇಬ್ಬರ ಮನೆಯ ಪರಿಸರ ಬೇರೆ ಬೇರೆ. ಕಾರ್ತೀಕನನ್ನು ಅವರ ತಂದೆ ತಾಯಿ ಹೆಚ್ಚಾಗಿ ಮನೆಯಿಂದ ಹೊರಗೆ ಕಳಿಸುವುದಿಲ್ಲ. ಹಾಗಾಗಿ ಅವನಿಗೆ ಲೋಕಜ್ಞಾನ ತುಂಬಾ ಕಡಿಮೆ. ಮೊನಿಕ ದಿನದ ಹೆಚ್ಚು ಸಮಯ ಮನೆಯಿಂದ ಹೊರಗೆ ಇರುತ್ತಾಳೆ. ವಠಾರದ ಮಕ್ಕಳೊಂದಿಗೆ ಆಟವಾಡುತ್ತಾಳೆ. ಯಾರೊಂದಿಗೆ ಹೇಗಿರಬೇಕೆಂಬುದನ್ನು ಚೆನ್ನಾಗಿ ತಿಳಿದಿದ್ದಾಳೆ. ಆದ್ದರಿಂದ ಅವಳ ವ್ಯವಹಾರ ಜ್ಞಾನ ಚೆನ್ನಾಗಿದೆ. ಇದನ್ನೇ ಸಾಮಾಜಿಕರಣ ಎನ್ನುವುದು. ಸಾಮಾಜಿಕರಣಗೊಂಡ ಮಕ್ಕಳು ಎಲ್ಲರೊಂದಿಗೆ ಕೂಡಿ ಆಡುವ, ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿರುತ್ತಾರೆ.
ಸಾಮಾಜಿಕರಣ; ಹಾಗಂದರೇನು? : ಸಂಸ್ಕøತಿಯ ಭಾಗವಾಗುವುದನ್ನು ಕಲಿಯುವ ಸಾಮಾಜಿಕ ಪ್ರಕ್ರಿಯೆಯೇ ಸಾಮಾಜಿಕರಣ. ಸಾಮಾಜಿಕತೆಯ ಮೂಲಕ ತಮ್ಮ ಸಂಸ್ಕøತಿಯ ಭಾಷೆ, ದೈನಂದಿನ ಜೀವನದಲ್ಲಿ ತಮ್ಮ ಪಾತ್ರದ ಅಗತ್ಯತೆ ಮತ್ತು ಸಮಾಜದ ನಿರೀಕ್ಷೆಯ ಬಗ್ಗೆ ಕಲಿಯುವುದೇ ಸಾಮಾಜಿಕರಣ.
ಸಾಮಾಜಿಕ ಪ್ರಕ್ರಿಯೆಯು ವ್ಯಕ್ತಿಯು ತಮ್ಮ ಸಂಸ್ಕøತಿಯ ಮೂಲಕ ಸಂಪೂರ್ಣ ಮಾನವನಾಗುವ ಪ್ರಕ್ರಿಯೆಯಾಗಿದೆ. ವ್ಯಕ್ತಿಯೊಬ್ಬ ಸಾಮಾಜಿಕರಣಗೊಳ್ಳದೇ ಹೋದರೆ ಸಾಮಾಜಿಕ ಕಂಟಕನಾಗಿ ಪರಿವರ್ತಿತಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಮಕ್ಕಳಲ್ಲಿ ಸಾಮಾಜಿಕರಣದ ಅಗತ್ಯತೆ
“ಓಣಿಯ ಮಗು ಬೆಳೆಯಿತು, ಕೋಣಿಯ ಮಗು ಕೊಳೆಯಿತು” ಎಂಬ ಗಾದೆ ಮಾತು ಸಾಮಾಜಿಕರಣದ ಮಹತ್ವವನ್ನು ಒತ್ತಿ ಹೇಳುತ್ತದೆ. ಸಾಮಾಜಿಕರಣವು ಜೀವನಪರ್ಯಂತ ನಡೆಯುವ ಪ್ರಕ್ರಿಯೆಯಾದರೂ ಬಾಲ್ಯದ ಸಾಮಾಜಿಕರಣವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುತ್ತೇವೆ. ಭವಿಷ್ಯದ ಪ್ರಜೆಗಳು ಉತ್ತಮರಾಗಲು ಇಂದೇ ಸರಿಯಾದ ತರಬೇತಿ ಅಗತ್ಯ. ಈ ತರಬೇತಿಯೇ ಮಕ್ಕಳನ್ನು ಸಾಮಾಜಿಕರಣಗೊಳಿಸುವುದು. ಮಕ್ಕಳನ್ನು ಹೊರಗಿನ ಪ್ರಪಂಚಕ್ಕೆ ಬಿಡುವುದರಿಂದ ಅವರು ತಮ್ಮ ಸಮವಯಸ್ಕರೊಂದಿಗೆ ಸಂವಹನ ಮಾಡುವ ಕೌಶಲ್ಯ ಬೆಳೆಯುತ್ತದೆ ಮತ್ತು ಇತರೆ ಮಕ್ಕಳೊಂದಿಗೆ ಆಟವಾಡುವ ಮೂಲಕ ದೈಹಿಕ ಕೌಶಲ್ಯಗಳನ್ನು ಕಲಿಯುತ್ತಾರೆ. ತಮ್ಮ ಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ತಾವೇ ಮೈಗೂಡಿಸಿಕೊಳ್ಳುತ್ತಾರೆ.
ಗುಂಪು ಆಟಗಳಲ್ಲಿ ಭಾಗವಹಿಸುವ ಮೂಲಕ ಇತರರ ಆಲೋಚನೆಗಳನ್ನು ಗ್ರಹಿಸುವ ಹಾಗೂ ತನ್ನ ಆಲೋಚನೆಗಳನ್ನು ಇತರರಿಗೆ ತಿಳಿಸುವ ಕೌಶಲ್ಯ ಗಳಿಸುತ್ತಾರೆ. ಜೊತೆಗೆ ಉತ್ತಮ ಸಂವಹನ ಕೌಶಲ್ಯದಿಂದ ಎಲ್ಲರೊಂದಿಗೆ ಬೆರೆಯುವ ಗುಣ ಕಲಿಯುತ್ತಾರೆ. ತಾವೂ ಸಮಾಜದ ಒಂದು ಭಾಗ. ಹಾಗಾಗಿ ಸಮುದಾಯ/ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡುಗೆ ನೀಡಬೇಕು ಎಂದು ಅರಿಯುತ್ತಾರೆ. ಸಾಮಾಜಿಕರಣವು ಮಕ್ಕಳಲ್ಲಿ ಭಾವನಾತ್ಮಕ, ಸಾಮಾಜಿಕ ಮತ್ತು ದೈಹಿಕ ಕೌಶಲ್ಯಗಳನ್ನು ಬೆಳೆಸುವ ಮೂಲಕ ಸರ್ವಾಂಗೀಣ ಅಭಿವೃದ್ದಿಗೆ ಸಹಾಯವಾಗುತ್ತದೆ.
ಮಕ್ಕಳು ಸಾಮಾಜಿಕರಣಕ್ಕೆ ಒಳಪಡುವುದರಿಂದ ಇತರರ ಯೋಗಕ್ಷೇಮ ವಿಚಾರಿಸುವುದನ್ನು ಕಲಿಯುತ್ತಾರೆ. ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ದಿಗೊಳಿಸಿಕೊಳ್ಳುವ ಮೂಲಕ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಾರೆ. ಆಲೋಚನಾ ಸಾಮಥ್ರ್ಯ ಹೆಚ್ಚುವುದರಿಂದ ಸಾಮಾನ್ಯ ಜ್ಞಾನವೂ ಹೆಚ್ಚುತ್ತದೆ. ಭಾಷಾ ಬಳಕೆಯಲ್ಲಿ ಚತುರತೆ ಹೆಚ್ಚುತ್ತದೆ. ಭವಿಷ್ಯದಲ್ಲಿ ಜೀವನವನ್ನು ಹೇಗೆ ಚೆಂದಗೊಳಿಸಿಕೊಳ್ಳಬೇಕೆಂಬ ನಿಖರತೆ ಬೆಳೆಯುತ್ತದೆ.
ಸಾಮಾಜಿರಣದ ಲಾಭಗಳು :
ಸಂವಹನ (ಕೇಳುವ, ಮಾತನಾಡುವ, ಓದುವ ಮತ್ತು ಬರೆಯುವ) ಕೌಶಲ್ಯ ಹೆಚ್ಚುತ್ತದೆ.
ವಿಶ್ಲೇಷಣಾತ್ಮಕ ಮತ್ತು ಸಂಶೋಧನಾ ಮನೋಭಾವದ ಬೆಳವಣಿಗೆ.
ಹೊಂದಾಣಿಕೆಯ ಮಹತ್ವ ಅರಿಯುತ್ತಾರೆ.
ವೈಯಕ್ತಿಕ ಸಾಮಥ್ರ್ಯ ಹೆಚ್ಚುತ್ತದೆ.
ತೀರ್ಮಾನಗಳನ್ನು ಕೈಗೊಳ್ಳುವ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಾಮಥ್ರ್ಯ ಬೆಳೆಯುತ್ತದೆ.
ಯೋಜನೆ, ಸಂಘಟನಾ ಚತುರತೆ ಗಳಿಸುತ್ತಾರೆ.
ನಾಯಕತ್ವ ಮತ್ತು ನಿರ್ವಹಣಾ ಕೌಶಲ್ಯ ಬೆಳೆಯುತ್ತವೆ.
ಧನಾತ್ಮಕ ಮತ್ತು ರಚನಾತ್ಮಕ ಮಾನವೀಯ ಸಂಬಂಧಗಳು ನಿರ್ಮಾಣಗೊಳ್ಳುತ್ತವೆ.
ಮನಸ್ಸು ನೈಜ ಆಲೋಚನೆಗಳನ್ನು ಆಕ್ರಮಿಸಿಕೊಳ್ಳುವುದರಿಂದ ಮಾನಸಿಕ ಕಾರ್ಯನಿರ್ವಹಣೆ ಹೆಚ್ಚುತ್ತದೆ.
ಒತ್ತಡ ಮತ್ತು ಆತಂಕಗಳು ದೂರವಾಗುತ್ತವೆ. ಖಿನ್ನತೆ ಆವರಿಸುವುದಿಲ್ಲ.
ವಿವಿಧ ರೀತಿಯ ಜನರನ್ನು ಮತ್ತು ಅವರ ಆಲೋಚನಾ ಕ್ರಮಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಜಗತ್ತನ್ನು ಮುಖಾಮುಖಿಯಾಗಿ ಎದುರಿಸುವುದನ್ನು ಕಲಿಸುತ್ತದೆ. ಇದರಿಂದ ಆತ್ಮವಿಶ್ವಾಸ ವೃದ್ದಿಯಾಗುತ್ತದೆ.
ಸ್ನೇಹಿತರು ಅಥವಾ ಕುಟುಂಬದವರ ಕಷ್ಟಕಾಲವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಸಹಚರರ ಪ್ರೀತಿ ವಿಶ್ವಾಸ ಮತ್ತು ಪ್ರಚೋದನೆಗಳಿಂದ ಜೀವನೋತ್ಸಾಹ ಹೆಚ್ಚುತ್ತದೆ.
ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ದೂರವಿಡುತ್ತದೆ.
ಜೀವನವನ್ನು ಕಟ್ಟಿಕೊಳ್ಳುವ ಜೀವನಕಲೆ ತಿಳಿಯುತ್ತದೆ.
ಸಾಮಾಜಿಕಣದ ಏಜೆನ್ಸಿಗಳು:
ಕುಟುಂಬ: ಸಾಮಾನ್ಯವಾಗಿ ಕುಟುಂಬವನ್ನು ಸಮಾಜದ ಮುಖ್ಯ ಪ್ರತಿನಿಧಿ ಎಂದು ಪರಿಗಣಿಸಲಾಗಿದೆ. ಇಡೀ ನಮ್ಮ ಉಜ್ವಲ ಭವಿಷ್ಯಕ್ಕೆ ಕುಟುಂಬದ ಅವಲಂಬನೆ ಅನಿವಾರ್ಯವಾಗಿದೆ. ಹಾಗಾಗಿ ಸಾಮಾಜಿಕರಣ ಪ್ರಕ್ರಿಯೆಯಲ್ಲಿ ಕುಟುಂಬದ ಪಾತ್ರ ಪ್ರಧಾನವಾಗಿದೆ. ಗುಂಪಿನೊಂದಿಗೆ ಹೊಂದಿಕೊಂಡು ಕೆಲಸ ಮಾಡುವ ಮನೋಭಾವ ಹಾಗೂ ಸಂಬಂಧಗಳ ಪರಿಕಲ್ಪನೆಯನ್ನು ಗಟ್ಟಿಗೊಳಿಸುವಲ್ಲಿ ಕುಟುಂಬವೇ ಮುಖ್ಯ ಸಾಮಾಜಿಕರಣದ ಸೂತ್ರಧಾರವಾಗಿದೆ. ಮೌಲ್ಯಗಳು, ರೂಢಿಗಳು, ಆಚರಣೆಗಳು, ನಂಬಿಕೆಗಳ ವ್ಯವಸ್ಥೆಯನ್ನು ಒದಗಿಸುತ್ತದೆ. ಕುಟುಂಬವು ಸಾಮಾನ್ಯವಾಗಿ ಸಾಮಾಜಿಕ ಸ್ಥಾನಮಾನ, ಧರ್ಮ, ಜನಾಂಗೀಯ ಗುಂಪು ಮೊದಲಾದವುಗಳ ಪ್ರತಿಬಿಂಬವಾಗಿದೆ.
ಶಾಲೆ: ಕುಟುಂಬದ ನಂತರ ಶಾಲೆಯೂ ಕೂಡಾ ಅತ್ಯಂತ ಪ್ರಮುಖ ಸಾಮಾಜಿಕರಣದ ಅಂಗವಾಗಿದೆ. ಸಾಮಾನ್ಯವಾಗಿ ಶಾಲೆಯು ವಿಷಯ ಜ್ಞಾನವನ್ನು ವರ್ಗಾವಣೆ ಮಾಡುತ್ತದೆ. ಜೊತೆಗೆ ಕೆಲವು ಜೀವನ ಕೌಶಲ್ಯಗಳನ್ನು ಅಧಿಕೃತವಾಗಿ ಕಲಿಸುತ್ತದೆ. ಶಾಲೆಯು ಮುಖ್ಯವಾಗಿ ಸಂವಹನ ಕೌಶಲ್ಯಗಳನ್ನು ಕಲಿಸುತ್ತದೆ. ಶಿಸ್ತು ಮತ್ತು ಸಂಯಮವನ್ನು ಕಲಿಸುವ ಏಕೈಕ ಕೇಂದ್ರ ಶಾಲೆಯಾಗಿದೆ.
ಸಹವರ್ತಿಗಳು: ಮಾನವೀಯ ಮೌಲ್ಯಗಳನ್ನು ಯಾವ ಪಠ್ಯಪುಸ್ತಕವೂ, ಯಾವ ವಿಶ್ವವಿದ್ಯಾನಿಲಯವೂ ಕಲಿಸಲಾರದು. ಆದರೆ ಸಹವರ್ತಿಗಳಿಂದ ಮಾತ್ರ ಇಂತಹ ಮೌಲ್ಯಗಳ ಕಲಿಕೆ ಸಾಧ್ಯ. ಪರಸ್ಪರರಲ್ಲಿ ಪ್ರೀತಿ, ಕಾಳಜಿ, ಸಹಕಾರ, ನಂಬಿಕೆ, ಕ್ಷಮೆ, ಸಹಾನುಭೂತಿ, ಬೆಂಬಲ, ಶಿಷ್ಟಾಚಾರಗಳಂತಹ ಮಾನವೀಯ ಮೌಲ್ಯಗಳನ್ನು ಸಹವರ್ತಿಗಳಿಂದ ಬೆಳೆಸಿಕೊಳ್ಳುತ್ತಾರೆ.
ಸಾಮಾಜಿಕರಣ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ:
ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾದ ಸಾಮಾಜಿಕರಣ ಪ್ರಕ್ರಿಯೆಯಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು. ಮಗುವನ್ನು ಸಾಮಾಜಿಕರಣಗೊಳಿಸಲು ಕೆಳಗಿನ ಅಂಶಗಳು ಸಹಕಾರಿಯಾಗುತ್ತವೆ.
ಮಗು ಅಂತರ್ಮುಖಿಯಾಗುವಂತಹ ಅಥವಾ ಅವಮಾನವಾಗುವಂತಹ ಅಂಶ ಯಾವುದೂ ಇಲ್ಲ ಎಂಬುದನ್ನು ಖಚಿತಪಡಿಸಿ.
ಮಗುವಿನ ಮನೋಧರ್ಮವನ್ನು ಅರ್ಥೈಸಿಕೊಳ್ಳಿ.
ವಿವಿಧ ಸಂದರ್ಭಗಳಲ್ಲಿ ಮಗುವಿಗೆ ಹೊಸ ಜನರನ್ನು ಪರಿಚಯಿಸಿ. ಅವರ ಸಂಬಂಧಗಳನ್ನು ತಿಳಿಸಿ.
ಕುಟುಂಬದ ಒಳಗೆ ಮತ್ತು ಹೊರಗೆ ಹಿರಿಯರಿಗೆ ಮತ್ತು ಕಿರಿಯರಿಗೆ ಗೌರವ ನೀಡುವ ಮೂಲಕ ಪ್ರತಿವ್ಯಕ್ತಿಯನ್ನು ಗೌರವಿಸಿ.
ಸಾಮಾಜಿಕ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಮಗುವಿಗೆ ಅವಕಾಶ ನೀಡಿ.
ಮಗುವಿನ ಆರಂಭದ ಭಯ ಗೆಲುವಿನಲ್ಲಿ ಅಂತ್ಯ ಕಾಣುವುದನ್ನು ಖಚಿತಪಡಿಸಿ.
ಮಗುವಿನಲ್ಲಿ ಭಾವನೆಗಳು ಬೆಳೆಯಲು ಸಹಾಯ ಮಾಡಿ.
ಮಗುವಿನ ಅಂತರ್ಮುಖಿತ್ವ ಕುರಿತು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ.
ಮಗುವಿನಲ್ಲಿ ಧನಾತ್ಮಕ ಸ್ವಾಭಿಮಾನ ಮೂಡಿಸಿ ಸ್ವಾವಲಂಬಿಯಾಗುವಂತೆ ಮಾಡಿ.
ಮಗುವಿನ ನಾಚಿಕೆ ಸ್ವಾಭಾವವನ್ನು ಹೊಡೆದೋಡಿಸಿ.
ಮಗುವಿನ ಸ್ನೇಹಿತರ ಮೇಲೆ ನಿಗಾ ಇರಲಿ.
ಸಮಯ ದೊರೆತಾಗಲೆಲ್ಲ ವೈಯಕ್ತಿಕ ಅಭಿವೃದ್ದಿಯ ಕುರಿತ ಘಟನಾವಳಿಗಳನ್ನು ಹೇಳಿ.
ಮಗುವಿನ ಮನೋಧರ್ಮ ಕುರಿತು ಮೆಚ್ಚುಗೆ ವ್ಯಕ್ತಿಪಡಿಸಿ.
ಸಂಭಾವ್ಯ ವಿಚಿತ್ರ ಪರಿಸ್ಥಿತಿ ಎದುರಿಸಲು ಸಿದ್ದತೆ ಮಾಡಿ.
ಮಗುವಿನಲ್ಲಿ ಹಾಸ್ಯ ಪ್ರಜ್ಞೆ ಮೂಡಿಸಿ.
ಸಾಮಾಜಿಕ ಮಾಲ್ಯಗಳ  ಕುರಿತು ಮಗುವಿನೊಂದಿಗೆ ಮಾತನಾಡಿ. ಸಾಮಾಜಿಕ ಗುರಿಯನ್ನು ಹಾಕಿಕೊಡಿ.
ಸಾಮಾಜಿಕ ಗುರಿಗಳನ್ನು ಬಲಪಡಿಸಲು ಸಹಾಯ ಮಾಡಿ. ಇದಕ್ಕೆ ಶಿಕ್ಷಕರು ಮತ್ತು ಸಲಹೆಗಾರರ ಮಾರ್ಗದರ್ಶನ ಪಡೆಯಿರಿ.
ಸಾಮಾಜಿಕ ಕೌಶಲ್ಯಗಳನ್ನು ಅಭ್ಯಾಸ ಮಾಡಿಸಿ.
ಮಗು ಇತರ ಮಕ್ಕಳೊಂದಿಗೆ ಬೆರೆಯುವಾಗ ಖರ್ಚು ವೆಚ್ಚಗಳ ಮೇಲ್ವಿಚಾರಣೆ ಇರಲಿ.
ಮಗುವಿಗೆ ಇತರರ ಭಾವನೆಗಳು ಮತ್ತು ಪ್ರತಿಕ್ರಿಯೆಗಳ ಬಗ್ಗೆ ಯೋಚಿಸಲು ಅವಕಾಶ ಮಾಡಿಕೊಡಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ
ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು
ಹೊಳಗುಂದಿ(ಪೊ) ಹಡಗಲಿ(ತಾ) ಬಳ್ಳಾರಿ(ಜಿ)
9902992905

ವಿಜ್ಞಾನದ ಪಾಠ ಹೇಳುವ ಹಂಪಿ Science and Technology in Hampi

ದಿನಾಂಕ 07-10-2017ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ.

ವಿಜ್ಞಾನದ ಪಾಠ ಹೇಳುವ ಹಂಪಿ


ಚಿತ್ರ ಬರಹ - ಆರ್.ಬಿ.ಗುರುಬಸವರಾಜ ಹೊಳಗುಂದಿ
‘ಹಂಪೆ’ ಎಂದಾಕ್ಷಣ ಹಾಳಾದ ಕಲ್ಲಿನ ಕೆತ್ತನೆಗಳ ಚಿತ್ರಣ ಕಣ್ಮುಂದೆ ಹಾದು ಹೋಗುತ್ತದೆ. ಹಂಪೆ ಅದೆಷ್ಟೇ ಹಾಳಾಗಿದ್ದರೂ ಅಳಿದುಳಿದ ಶಿಲ್ಪಗಳನ್ನು ನೋಡುವುದೇ ಸೊಗಸು. ಏಕೆಂದರೆ ಹಂಪೆಯ ಶಿಲ್ಪಕಲೆಯೊಳಗೆ ಅಡಗಿದ ವಿಜ್ಞಾನ ಮತ್ತು ತಂತ್ರಜ್ಞಾನ ಎಂಥವರನ್ನೂ ಮಂತ್ರ ಮುಗ್ದರನ್ನಾಗಿಸುತ್ತದೆ.  ಆಧುನಿಕ ವಿಜ್ಞಾನವನ್ನೂ ಮೀರಿದ ತಂತ್ರಗಾರಿಕೆ ಹಂಪೆಯಲ್ಲಿ ಅಡಗಿದೆ ಎಂದರೆ ಅಚ್ಚರಿಯಾಗುತ್ತದೆ. ಈ ಕಾರಣಕ್ಕೆ ಇಂದಿಗೂ ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಇತ್ತೀಚೆಗೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನಮ್ಮೆಲ್ಲರ ಹೆಮ್ಮೆ. ಹಾಗಾದರೆ ಹಂಪೆಯೊಳಗಿನ ವಿಜ್ಞಾನ ಮತ್ತು ತಂತ್ರಜ್ಞಾನ ಯಾವುದು ಎಂದು ತಿಳಿಯುವ ಬನ್ನಿ.
ತಲೆ ಕೆಳಗಾದ ಗೋಪುರ
ಇದೇನಿದು? ಗೋಪುರ ಎಲ್ಲಾದರೂ ತಲೆ ಕೆಳಗಾಗಲು ಸಾಧ್ಯವೇ? ಎಂದು ಹುಬ್ಬೇರಿಸಬೇಡಿ. ಇಂತಹ ಒಂದು ವಿಜ್ಞಾನದ ಮಾದರಿ ಹಂಪೆಯಲ್ಲಿದೆ. ಹಂಪೆಯ ಪ್ರಮುಖ ಆರಾಧ್ಯ ದೈವವಾದ ವಿರುಪಾಕ್ಷ ದೇವಾಲಯದ ಆವರಣದಲ್ಲಿ ಇಂತಹ ಒಂದು ಚಮತ್ಕಾರ ಅಡಗಿದೆ. ದೇವಾಲಯದ ಹಿಂಬಾಗದಲ್ಲಿ ಒಂದಿಷ್ಟು ಮೆಟ್ಟಿಲುಗಳನ್ನು ಹತ್ತಿ ಹೋದರೆ ಹಿಂದಿನ ಬಾಗಿಲನ್ನು ತಲುಪುವ ಮೊದಲೇ ಬಲಭಾಗದಲ್ಲಿ ಕತ್ತಲೆಯ ಕಟ್ಟೆಯೊಂದು ಕಾಣುತ್ತದೆ. ಅಲ್ಲಿಗೆ ನೀವು ಹೋದರೆ ಗೋಡೆಯ ಮೇಲೆ ಗೋಪುರದ ತಲೆ ಕೆಳಗಾದ ನೆರಳನ್ನು ಕಾಣಬಹುದು. ಆ ನೆರಳಿಗೆ ಎದುರಾದ ಗೋಡೆಯ ಮೇಲೆ ಕಿಂಡಿಯೊಂದಿದೆ. ಆ ಕಿಂಡಿಯಿಂದ ಹಾಯ್ದುಬಂದ ಸೂರ್ಯನ ಕಿರಣ ದೂರದ ರಾಯಗೋಪುರದ ನೆರಳನ್ನು ತಲೆ ಕೆಳಗಾಗಿ ಬೀಳುವಂತೆ ಮಾಡುತ್ತದೆ. ಇಂದಿನ ಪಿನ್ ಹೋಲ್ ಕ್ಯಾಮೆರಾದಲ್ಲಿರುವ ತಂತ್ರಜ್ಞಾನವನ್ನು ಅಂದಿನವರು ತಿಳಿದಿದ್ದರು ಎಂಬುದಕ್ಕೆ ಸಾಕ್ಷಿ. 1685ರಲ್ಲಿ ಪಿನ್ ಹೋಲ್ ಕ್ಯಾಮೆರಾವನ್ನು ಆವಿಷ್ಕರಿಸಲಾಯಿತು. ಆದರೆ ಇದಕ್ಕೂ ಮೊದಲೇ ದೇವಸ್ಥಾನ ನಿರ್ಮಣದಲ್ಲಿ ಈ ತಂತ್ರಜ್ಞಾನ ಬಳಸಿರುವುದ ಅಚ್ಚರಿಯಲ್ಲವೇ? 165 ಅಡಿ ಎತ್ತರವಿರುವ ರಾಯ ಗೋಪುರದ ನೆರಳು 300 ಅಡಿ ದೂರದಲ್ಲಿರುವ ಸಣ್ಣ ರಂದ್ರದ ಮೂಲಕ ಹಾಯ್ದು ನೆರಳನ್ನು ಉಂಟುಮಾಡುವ ಪ್ರಕ್ರಿಯೆ ವಿಸ್ಮಯವೇ ಸರಿ. ಇದನ್ನು ಹಗಲಿನ ಎಲ್ಲಾ ಸಮಯದಲ್ಲೂ ನೋಡಬಹುದು.
ಕಲ್ಲಿನ ರಥವೂ,,,, ಶಿಲೆಗಳ ಸಂಗೀತವೂ,,,,
ಕಟ್ಟಿಗೆ ಅಥವಾ ಲೋಹದ ರಥಗಳು ನೋಡಲು ಸಾಕಷ್ಟು ದೊರೆಯುತ್ತವೆ. ಆದರೆ ಕಲ್ಲಿನ ರಥ ನೋಡಲು ನೀವು ಹಂಪೆಗೆ ಬರಬೇಕು. ಈ ಕಲ್ಲಿನ ರಥವೇ ಹಂಪೆಯ ಹೆಗ್ಗುರುತು. ಹೌದು ಹಂಪೆಯ ವಿಜಯವಿಠ್ಠಲ ದೇವಸ್ಥಾನದ ಆವರಣದಲ್ಲಿನ ಕಲ್ಲಿನ ತೇರು ಇಡೀ ಕರ್ನಾಟಕದ ಶಿಲ್ಪಕಲೆಯ ಹೆಗ್ಗುರುತು ಎಂದರೆ ತಪ್ಪಾಗಲಿಕ್ಕಿಲ್ಲ. ಕೋನಾರ್ಕದ ಸೂರ್ಯ ದೇವಾಲಯದಲ್ಲಿನ ಕಲ್ಲಿನ ರಥವನ್ನು ಹೋಲುವಂತೆ ಈ ರಥವನ್ನು ಏಕಶಿಲೆಯಿಂದ ಕೆತ್ತಿರುವುದೇ ವಿಶೇಷ. ಪ್ರಾರಂಭದಲ್ಲಿ ಇದಕ್ಕೆ ಕಲ್ಲಿನ ಗೋಪುರ ಇತ್ತೆಂದು ತಿಳಿದು ಬರುತ್ತದೆ. ಆದರೆ ವಿದೇಶಿಗರ ದಾಳಿ ಹಾಗೂ ಇನ್ನಿತರೇ ಕಾರಣಗಳಿಂದ ಅದು ಹಾಳಾಗಿದೆ. ಈ ಕಲ್ಲಿನ ರಥದಲ್ಲಿನ ವಿಜ್ಞಾನ ಎಂದರೆ ಇದಕ್ಕೆ ಬಳಸಿದ ಬಣ್ಣ. ಇದನ್ನು ಕೆತ್ತಿದಾಗ ಇದರ ಹೊರಮೈಗೆ ನೈಸರ್ಗಿಕ ಬಣ್ಣ ಬಳಿಯಲಾಗಿತ್ತು. ಅದು ಮಳೆ, ಗಾಳಿ, ಬಿಸಿಲುಗಳಿಗೆ ಮಾಸಿ ಹೋಗಿದೆ. ಆದರೆ ಬಿಸಿಲು ಮತ್ತು ಮಳೆ ನೀರು ಬೀಳದ ಸ್ಥಳಗಳಲ್ಲಿ ಈಗಲೂ ನೈಸರ್ಗಿಕ ಬಣ್ಣವನ್ನು ಕಾಣಬಹುದು. 500 ವರ್ಷಗಳ ಹಿಂದೆ ಬಳಿದ ಬಣ್ಣ ಇಂದಿಗೂ ಉಳಿದಿರುವುದು ಅಂದಿನವರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ.
ಇದೇ ದೇವಾಲಯದ ಆವರಣದಲ್ಲಿನ ಕಲ್ಲಿನ ಸಂಗೀತ ಕಂಬಗಳು ವಿಶ್ವ ವಿಖ್ಯಾತಿ ಪಡೆದಿವೆ. ಇಲ್ಲಿ ಒಟ್ಟು 56 ಕಂಬಗಳಿದ್ದು ಎಲ್ಲಾ ಕಂಬಗಳು ಸಂಗೀತದ ನಾದವನ್ನು ಹೊರಡಿಸುತ್ತಿವೆ. ಈ ಕಂಬಗಳು ಕೆಳಭಾಗ ಮತ್ತು ಮೇಲ್ಭಾಗದಲ್ಲಿ ಕಲ್ಲಿನಿಂದ ಬಂಧಿಸಿದ್ದು, ಮಧ್ಯಭಾಗದ  ಮೂರ್ನಾಲ್ಕು ಅಡಿ ಉದ್ದ ಮತ್ತು 8-10 ಇಂಚು ದಪ್ಪದ ಕಲ್ಲಿನ ಕಂಬದಿಂದ ಸಂಗೀತನಾದ ಹೊಮ್ಮುತ್ತದೆ. ಇವು ಗಟ್ಟಿ ಶಿಲೆಯ ಕಲ್ಲುಗಳಾಗಿದ್ದು ಮಧ್ಯಭಾಗವನ್ನು ಕೈಬೆರಳಿನಿಂದ ಬಾರಿಸಿದಾಗ ಸಂಗೀತದ ನಾದ ಹೊರಹೊಮ್ಮುತ್ತದೆ. ಅಂದರೆ ಶಿಲೆಯಲ್ಲಿ ಉಂಟಾದ ಕಂಪನವು ನಾದದ ರೀತಿಯಲ್ಲಿ ಕೇಳಿಸುತ್ತದೆ. ಬೆರಳಿನಿಂದ ಬಾರಿಸಲು ಬೆರಳು ಗಟ್ಟಿಯಾಗಿರಬೇಕು ಮತ್ತು ಬಾರಿಸುವ ಕಲೆ ತಿಳಿದಿರಬೇಕು. ಇತ್ತೀಚೆಗೆ ಪ್ರವಾಸಿಗರ ಹಾವಳಿ ಹೆಚ್ಚಾಗಿದ್ದರಿಂದ ಪ್ರವಾಸಿಗರು ಬಾರಿಸಲು ನಿರ್ಬಂದ ಹೇರಲಾಗಿದೆ.
ಹವಾಮಹಲ್
ಇಡೀ ಹಂಪೆಯ ಪ್ರದೇಶವು ವರ್ಷವಿಡೀ ಹೆಚ್ಚುಕಾಲ ಬಿಸಿಲಿನಿಂದ ಕೂಡಿರುತ್ತದೆ. ತಮ್ಮ ಕುಟುಂಬವನ್ನು ಇಂತಹ ಬಿಸಿಲ ಬೇಗೆಯಿಂದ ರಕ್ಷಿಸಲು ಅಂದಿನ ರಾಜರು ವಿಶೇಷ ಮಹಲನ್ನು ಕಟ್ಟಿಸಿದರು. ಇದೇ ಕಮಲ್‍ಮಹಲ್ ಎಂದು ಹೆಸರುವಾಸಿಯಾದ ಹವಾಮಹಲ್. ಎಲ್ಲಾ ದಿಕ್ಕಿನಿಂದಲೂ ಗಾಳಿ ಬರುವಂತೆ ಇದನ್ನು ನಿರ್ಮಿಸಲಾಗಿದೆ. ಇದರ ಮೇಲಂತಸ್ತಿನ ಕಟ್ಟಡದ ಒಳಗೋಡೆಗಳಲ್ಲಿ ಸದಾ ನೀರು ಸಂಚರಿಸಲು ನಳಿಕೆಗಳನ್ನು ಅಳವಡಿಸಲಾಗಿದೆ. ಬೇಸಿಗೆಯಲ್ಲಿ ಈ ನಳಿಕೆಗಳಿಗೆ ನೀರನ್ನು ತುಂಬಿಸಲಾಗುತ್ತದೆ. ಗಾಳಿ ಬೀಸಿದಾಗ ನೀರ ನಳಿಕೆಗಳು ತಂಪುಗೊಂಡು ಇಡೀ ಕಟ್ಟಡ ತಂಪಾಗಿರುತ್ತದೆ. ಇದು ಇಂದಿನ ಹವಾನಿಯಂತ್ರಿತ ಕೊಠಡಿ ತಂತ್ರಗಾರಿಕೆಯ ದ್ಯೋತಕವಾಗಿದೆ. ಇಡೀ ಕಟ್ಟಡವನ್ನು ಕಮಲದ ಆಕಾರದ ಕಮಾನುಗಳಿಂದ ಕಟ್ಟಲಾಗಿದೆ. ಆದ್ದರಿಂದ ಇದಕ್ಕೆ ಕಮಲಮಹಲ್ ಎಂಬ ಹೆಸರು ಬಂದಿದೆ.
ಜಲ ಸಂಗ್ರಾಹಕ ಪುಷ್ಕರಣಿ
ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ, ನೀರನ ಸಮಸ್ಯೆ ಎಷ್ಟೇ ಎದುರಾಗಿದ್ದರೂ ನಮಗಿನ್ನೂ ಜಲ ಸಂರಕ್ಷಣೆಯ ಮಹತ್ವ ತಿಳಿದಿಲ್ಲ. ಆದರೆ ವಿಜಯನಗರ ಅರಸರು 600 ವರ್ಷಗಳ ಹಿಂದೆಯೇ ಜಲ ಸಂರಕ್ಷಣೆಯ ಬಗ್ಗೆ ತಿಳಿದಿದ್ದರು ಎಂಬುದಕ್ಕೆ ಪುಷ್ಕರಣೆಯೇ ಸಾಕ್ಷಿ. ವರ್ಷವಿಡೀ ನೀರಿನ ಕೊರತೆಯಾಗದಂತೆ ತುಂಗಭದ್ರಾ ನದಿಯಿಂದ ಕಾಲುವೆಗಳ ಮೂಲಕ ನೀರನ್ನು ತಂದು ಈ ಪುಷ್ಕರಣಿಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಗೃಹೋಪಯೋಗಿ ಹಾಗೂ ವ್ಯವಸಾಯಗಳಿಗೆ ಈ ನೀರನ್ನು ಬಳಸಲು ಅನುಕೂಲವಾಗುವಂತೆ ಕಲ್ಲಿನ ಕಾಲುವೆಗಳನ್ನು ನಿರ್ಮಿಸಿರುವುದು ಜಲ ಸಂರಕ್ಷಣೆ ಮತ್ತು ಅದರ ಸದ್ಭಳಕೆ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ಬದ್ದತೆಯನ್ನು ಎತ್ತಿ ತೋರಿಸುತ್ತದೆ.
ಸ್ವಿಮ್ಮಿಂಗ್ ಫೂಲ್ ಮಾದರಿಯ ಸ್ನಾನಗೃಹ
ಆಧುನಿಕ ತಂತ್ರಜ್ಞಾನ ಮಾದರಿಯ ಸ್ವಿಮ್ಮಿಂಗ್ ಫೂಲನ್ನು ಅಂದೇ ವ್ಯವಸ್ಥಿತವಾಗಿ ಕಟ್ಟಲಾಗಿತ್ತು. ಅದಕ್ಕೆ ರಾಣಿಯರ ಸ್ನಾನಗೃಹ ಎಂದು ನಾಮಕರಣ ಮಾಡಲಾಗಿದೆ. ಈ ಸ್ನಾನಗೃಹಕ್ಕೆ ಕಾಲುವೆಗಳ ಮೂಲಕ ನೀರನ್ನು ಸರಬರಾಜು ಮಾಡುವ ವ್ಯವಸ್ಥೆ ಅಳವಡಿಸಿಕೊಂಡಿದ್ದರು. ಕಲುಷಿತ ನೀರು ಹೊರಹೋಗಲು ಮತ್ತು ಶುದ್ದ ನೀರನ್ನು ಒಳಗೆ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಕಟ್ಟಡದ ಒಳಭಾಗದ ಪ್ರಾಂಗಣದಲ್ಲಿ ರಾಣಿಯರು ಬಟ್ಟೆ ಬದಲಾಯಿಸಿಕೊಳ್ಳಲು ಹಾಗೂ ವಿಶ್ರಾಂತಿ ಪಡೆಯಲು ಕಮಾನು ಕಟ್ಟೆಗಳನ್ನು ಕಟ್ಟಲಾಗಿದೆ. ಇದು ಇಂದಿನ ಸ್ವಿಮ್ಮಿಂಗ್ ಫೂಲ್‍ಗಳ ತಂತ್ರಗಾರಿಕೆಯ ಕುಶಲತೆಯ ಪ್ರತೀಕವಾಗಿದೆ.
ಶೌಚಗೃಹ
ಸ್ವಚ್ಛ ಮತ್ತು ಸುರಕ್ಷಿತ ಆರೋಗ್ಯಕ್ಕಾಗಿ ಶೌಚಗೃಹಗಳು ಅಗತ್ಯ. ಪ್ರತೀ ಕುಟುಂಬವೂ ಶೌಚಗೃಹ ನಿರ್ಮಿಸಿಕೊಳ್ಳಲು ಸರ್ಕಾರಗಳು ಅನೇಕ ಸೌಲಭ್ಯಗಳನ್ನು ನೀಡುತ್ತಿವೆ. ಆದಾಗ್ಯೂ ನಮ್ಮ ಜನತೆ ಶೌಚಗೃಹ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಆದರೆ ಶೌಚಾಲಯದ ನಿರ್ಮಾಣ ಮತ್ತು ಬಳಕೆ ವಿಜಯನಗರ ಕಾಲದಲ್ಲೇ ಪ್ರಚಲಿತದಲ್ಲಿತ್ತು ಎಂಬುದಕ್ಕೆ ಮಹಾನವಮಿ ದಿಬ್ಬದ ಬಳಿಯ ಪ್ರಾಂಗಣದಲ್ಲಿ ದೊರೆತ ಶೌಚಾಲಯಗಳೇ ಸಾಕ್ಷಿ. ಅವರು  ಆರೋಗ್ಯ ಹಾಗೂ ನೈರ್ಮಲ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು ಎಂಬುದು ತಿಳಿಯುತ್ತದೆ.
ರಕ್ಷಣೆಗಾಗಿ ಕಾವಲು ಗೋಪುರಗಳು
ನಮ್ಮ ಇಂದಿನ ರಕ್ಷಣಾ ವ್ಯವಸ್ಥೆಗಿಂತ ಉತ್ತಮವಾದ ರಕ್ಷಣಾ ತಂತ್ರಗಾರಿಕೆ ವ್ಯವಸ್ಥೆಯನ್ನು  ವಿಜಯನಗರ ಅರಸರು ಅಳವಡಿಸಿಕೊಂಡಿರುವುದಕ್ಕೆ ಅನೇಕ ಸಾಕ್ಷ್ಯಗಳು ದೊರೆಯುತ್ತವೆ. ವಿದೇಶಿಗರ ದಾಳಿಯನ್ನು ತಿಳಿಯಲು ಹಾಗೂ ವಿವಿಧ ಭಾಗಗಳಿಂದ ಕೊಟೆಯೊಳಗೆ ಆಗಮಿಸುವವರ ಬಗ್ಗೆ ತಿಳಿಯಲು ಹಂಪೆಯ ಪ್ರದೇಶಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿತ್ತು. ಒಟ್ಟು 520 ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದ್ದರೆಂದು ತಿಳಿದು ಬರುತ್ತದೆ. ಈ ಗೋಪುರಗಳಲ್ಲಿ ಕಾವಲುಗಾರರು ಹಗಲು ರಾತ್ರಿ ಕಾವಲು ಕಾಯ್ದು ದೇಶವನ್ನು ರಕ್ಷಿಸುತ್ತಿದ್ದರು.
ಶಿಲೆಗಳ ಸರಬರಾಜು
ಇಡೀ ಹಂಪೆಯ ಸಮೂಹವು ಕಲ್ಲು ಬೆಟ್ಟಗಳಿಂದ ಆವೃತ್ತವಾಗಿದೆ. ಹಂಪೆಯ ಎಲ್ಲಾ ಶಿಲ್ಪಕಲೆಗೆ ಈ ಕಲ್ಲುಗಳನ್ನೇ ಬಳಸಲಾಗಿದೆ. ಇಲ್ಲಿನ ಕಲ್ಲುಗಳು ಅತ್ಯಂತ ಗಟ್ಟಿ ಶಿಲೆಗಳಾಗಿದ್ದು ಕೆತ್ತನೆಗೆ ಹೆಚ್ಚು ಸೂಕ್ತವಾಗಿದೆ.
ಕಲ್ಲು ಬಂಡೆಗಳನ್ನು ಒಡೆಯುವಲ್ಲಿಯೂ ವಿಜ್ಞಾನದ ತಂತ್ರಗಾರಿಕೆ ಅನುಸರಿಸಲಾಗಿದೆ. ಕಲ್ಲು ಬಂಡೆಗಳಲ್ಲಿ ನೇರವಾದ ಸಾಲಿನಲ್ಲಿ ಅಲ್ಲಲ್ಲಿ ರಂದ್ರಹಾಕುತ್ತಿದ್ದರು. ಅದಕ್ಕೆ ಸರಿಯಾಗುವಂತೆ ಒಣ ಕಟ್ಟಿಗೆಯ ತುಂಡನ್ನು ಕೆತ್ತಿ ರಂದ್ರ ಮುಚ್ಚುತ್ತಿದ್ದರು ಮತ್ತು  ಅದಕ್ಕೆ ಆಗಾಗ್ಗೆ ನೀರನ್ನು ತುಂಬುತ್ತಿದ್ದರು. ಕಾಲಕ್ರಮೇಣ ಕಟ್ಟಿಗೆಯ ತುಂಡು ವಿಸ್ತರಿಸಿ ಕಲ್ಲುಗಳನ್ನು ಸೀಳುವಂತೆ ಮಾಡುತ್ತಿತ್ತು. ಹೀಗೆ ಕಲ್ಲುಗಳನ್ನು ಸೀಳಿ ಆನೆಗಳ ಸಹಾಯದಿಂದ ದೇಗುಲಗಳ ಬಳಿ ಸಾಗಿಸುತ್ತಿದ್ದರು. ಹಂಪೆಯ ಹೊರಭಾಗದಲ್ಲಿನ ಪರ್ವತಗಳ ಕಲ್ಲನ್ನು ನೋಡಿದರೆ ಕಲ್ಲುಗಳನ್ನು ಹೇಗೆ ಸೀಳಿದ್ದರು ಎಂಬುದನ್ನು ಗಮನಿಸಬಹುದು.
ಗಾರೆಯ ಗಂಬಂಧ
ಹಂಪೆಯ ಬಹುತೇಕ ದೇವಾಲಯಗಳ ನಿರ್ಮಾಣದಲ್ಲಿ ಸುಟ್ಟ ಇಟ್ಟಿಗೆ ಮತ್ತು ಗಾರೆ ಬಳಸಿರುವುದು ಕಂಡು ಬರುತ್ತದೆ. ಒಂದು ಭಾಗ ಸುಣ್ಣ, ಎರಡು ಭಾಗ ಮರಳು, ಒಂದು ಭಾಗ ಬೆಲ್ಲ ಮತ್ತು ಅರ್ದಭಾಗ ಅಂಟುವಾಳಕಾಯಿ ಮಿಶ್ರಣಗಳನ್ನು ನುಣ್ಣಗೆ ಅರೆದು ಗಾರೆಯನ್ನು ತಯಾರಿಸಲಾಗುತ್ತದೆ. ಇದು ಇಂದಿನ ಸಿಮೆಂಟಿಗಿಂತಲೂ ಗಟ್ಟಿ ಹಾಗೂ ಬಹುಕಾಲ ಬಾಳಿಕೆ ಬರುತ್ತದೆ. ರಾಣಿಯರ ಸ್ನಾನಗೃಹ, ಕಮಲಮಹಲು, ಕಾವಲು ಗೋಪುರಗಳ ಗೋಡೆಗಳಿಗೆ ಹಾಗೂ ಆನೆಲಾಯ, ಮಾಲ್ಯವಂತ ರಘುನಾಥ ದೇವಾಲಯ, ವಿಠ್ಠಲ ದೇವಸ್ಥಾನ, ಅಚ್ಯುತರಾಯ ದೇವಾಲಯ, ಪಟ್ಟಾಭಿರಾಮ ದೇವಾಲಯಗಳಲ್ಲಿನ ಶಿಖರ(ಗೋಪುರ)ಗಳಲ್ಲಿ ಗಾರೆಯನ್ನು ಬಳಸಲಾಗಿದೆ.  ಹಾಗಾಗಿ ಇಡೀ ಹಂಪೆಯ ದೇವಾಲಯಗಳ ನಿರ್ಮಾಣದಲ್ಲಿ ಗಾರೆಯನ್ನು ಗಂಬಂಧ(ಅಂಟಿನ ಬಂಧ) ರೀತಿಯಲ್ಲಿ ಬಳಸಲಾಗಿದೆ.
ಭುವಿಯ ಮೇಲಿನ ಸ್ವರ್ಗ
ಒಟ್ಟಾರೆ ಹಂಪೆಯ ಪ್ರದೇಶವು 214 ಪರ್ವತಗಳನ್ನು, 1250 ಸ್ಮಾರಕಗಳನ್ನು, 8000 ಮಂಟಪಗಳನ್ನು, 520 ಗೋಪುರಗಳನ್ನು, 7 ಅಂತರರಾಷ್ಟ್ರೀಯ ಪುರಾತತ್ವ ಕೇಂದ್ರಗಳನ್ನು ಒಳಗೊಂಡಿದೆ. ಹಾಗಾಗಿ ಇದೊಂದು ಭುವಿಯ ಮೇಲಿನ ಸ್ವರ್ಗ ಎಂದರೆ ತಪ್ಪಲ್ಲ.

ಆರ್.ಬಿ.ಗುರುಬಸವರಾಜ ಹೊಳಗುಂದಿ
ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು
ಹೊಳಗುಂದಿ(ಪೊ) ಹಡಗಲಿ(ತಾ) ಬಳ್ಳಾರಿ(ಜಿ)
9902992905

ವಿಜಯವಾಣಿ 07-10-17