January 1, 2014

ಕತೆ ಹೇಳುವ ಕಲ್ಲುಗಳು

ದಿನಾಂಕ 20-08-2013 ರ ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ಪ್ರಕಟವಾದ ನನ್ನ ಲೇಖನ.
ಕತೆ ಹೇಳುವ ಕಲ್ಲುಗಳು

































 ‘ನಾನು ಒಂದು ಕಲ್ಲು. ಈ ಹಿಂದೆ ಅನಾಥನಾಗಿದ್ದ ನಾನು ಈಗ ಅನಾಥನಲ್ಲ. ಏಕೆಂದರೆ ಒಬ್ಬ ಶಿಲ್ಪಿ ನನಗೆ ಜೀವ ನೀಡಿದ್ದಾನೆ. ಆತನ ಸೃಜನಶೀಲತೆಯನ್ನು ನನ್ನ ಮೂಲಕ ಜಗಕ್ಕೆ ಪರಿಚಯಿಸಿದ್ದಾನೆ. ನನ್ನನ್ನು ಎಲ್ಲರೂ ಮೆಚ್ಚುವಂತೆ ಮಾಡಿ  ಪುನೀತಗೊಳಿಸಿದ್ದಾನೆ’ ಎಂದು ಕಲ್ಲುಗಳು ಮಾತನಾಡುತ್ತಿವೆ.
ಈ ಮಾತನಾಡುವ ಕಲ್ಲುಗಳನ್ನು ನೋಡಲು ಹಂಪೆಯ ಕನ್ನಡ ವಿಶ್ವವಿದ್ಯಾನಿಲಯದ ಆವರಣದಲ್ಲಿನ “ಶಿಲ್ಪವನ”ಕ್ಕೆ ಭೇಟಿ ಕೊಡಬೇಕು. ‘ಶಿಲ್ಪವನ’ದಲ್ಲಿರುವ ಪ್ರತಿಯೊಂದು ಕಲ್ಲು ಒಂದೊಂದು ಕತೆಯನ್ನು ಹೇಳುವಂತಿವೆ. ಪ್ರಾಕೃತಿಕವಾಗಿ ಬಿದ್ದಿರುವ ಕಲ್ಲುಗಳಿಗೆ ಕಲೆಯ ಸ್ಪರ್ಶ ನೀಡಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಲಾಗಿದೆ. ಕಲ್ಲುಗಳ ನೈಸರ್ಗಿಕತೆ ಹಾಳಾಗದಂತೆ ಹೊಸರೂಪ ಕೊಡುವ ಉದ್ದೇಶದಿಂದ ಈ “ಶಿಲ್ಪವನ” ನಿರ್ಮಿಸಲಾಗಿದೆ.

“ಸಾಂಪ್ರದಾಯಿಕ ಶಿಲ್ಪಕಲೆಯನ್ನು ಮುಂದಿನ ಪೀಳಿಗೆಗೆ ಸಾಗಿಸುವ ಉದ್ದೇಶದಿಂದ ಇಲ್ಲಿನ ಶಿಲೆಗಳಿಗೆ ಕಲೆಯ ಮೆರಗು ನೀಡಲಾಗುತ್ತದೆ ಹಾಗೂ ಇದನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡುವ ಗುರಿ ಹೊಂದಲಾಗಿದೆ” ಎಂಬುದು ಇಲ್ಲಿನ ಶಿಲ್ಪಕಲಾ ವಿಭಾಗದ ಮುಖ್ಯಸ್ಥರಾದ ಡಾ//ಎಸ್.ಸಿ.ಪಾಟೀಲರ ಅಭಿಪ್ರಾಯ.

ಬಾದಾಮಿಯ ಶಿಲ್ಪಕಲಾ ವಿದ್ಯಾರ್ಥಿಗಳಿಂದ ಇಲ್ಲಿ ಪ್ರತಿವರ್ಷ 15-20 ದಿನಗಳ ಶಿಬಿರ ಏರ್ಪಡಿಸಲಾಗುತ್ತದೆ. ಈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ‘ಶಿಲ್ಪವನ’ದಲ್ಲಿನ ಶಿಲೆಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಹೊಸ ರೂಪ ನೀಡುತ್ತಾರೆ. ಕೇವಲ ವಿದ್ಯಾರ್ಥಿಗಳಿಂದ ಅಲ್ಲದೇ ಕೆಲವು ತಜ್ಞ ಶಿಲ್ಪಿಗಳಿಂದ ರಚಿಸಿದ ಕಲಾಕೃತಿಗಳೂ ಸಹ ಇಲ್ಲಿವೆ. ಕಳೆದ 10 ವರ್ಷಗಳಿಂದ ಈ ಶಿಲ್ಪವನ್ನು ಅಭಿವೃದ್ದಿ ಪಡಿಸುತ್ತಿದ್ದು ಭಿನ್ನ ಶೈಲಿ, ವಿವಿಧ ರೂಪ ಮತ್ತು ವಿಭಿನ್ನ ಆಕಾರದ ಕಲಾಕೃತಿಗಳು ಇಲ್ಲಿವೆ. ಆಧುನಿಕ, ಸಾಂಪ್ರದಾಯಿಕ ಹಾಗೂ ಕಲ್ಲಿನ ಗಾತ್ರಕ್ಕನುಗುಣವಾಗಿ ರಚಿಸಿದ ಕಲಾಕೃತಿಗಳು ನೋಡುಗರನ್ನು ಆಕರ್ಷಿಸುತ್ತವೆ.

ಹೊಸ ಹೊಸ ಪ್ರತಿಭೆಗಳ ಶೋಧ ಮತ್ತು ಸಾಮಥ್ರ್ಯಗಳ ಸದ್ಬಳಕೆ ಕನ್ನಡ ವಿಶ್ವವಿದ್ಯಾನಿಲಯದ ಅಂತಃಶಕ್ತಿಯಾಗಿದ್ದು, ಅದಕ್ಕನುಗುಣವಾಗಿ ವೈಶಿಷ್ಟ್ಯಪೂರ್ಣ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಕನ್ನಡ ನಾಡಿನ ಐತಿಹಾಸಿಕತೆಯನ್ನು, ಸಾಂಸ್ಕøತಿಕತೆಯನ್ನು ವಿಶ್ವವ್ಯಾಪಿಯಾಗಿ ಪಸರಿಸುವ ಗುರಿ ಹೊಂದಿದ ಕನ್ನಡ ವಿಶ್ವವಿದ್ಯಾನಿಯದಲ್ಲಿನ ಕಲ್ಲುಗಳು ವಿಶಿಷ್ಟ ಕತೆಗಳನ್ನು ಬಿಚ್ಚಿಡುತ್ತವೆ. ಕೆಲವು ವಿಶ್ವವಿದ್ಯಾನಿಲಯಗಳು ಕೇವಲ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದರೆ, ಕನ್ನಡ ವಿಶ್ವವಿದ್ಯಾನಿಲಯದ ವ್ಯಾಪ್ತಿ ಅಖಂಡ ಕರ್ನಾಟಕವಲ್ಲದೇ, ದೇಶ ವಿದೇಶಗಳಲ್ಲೂ ಹಬ್ಬಿದೆ. ಕನ್ನಡ ನಾಡನ್ನು ಪ್ರೀತಿಸುವ, ನಾಡಿನ ಬಗ್ಗೆ ಕುತೂಹಲವಿರುವ ಪ್ರತಿಯೊಬ್ಬರೂ ನೋಡಲೇಬೇಕಾದ ವಿದ್ಯಾಸಂಸ್ಥೆ “ಕನ್ನಡ ವಿಶ್ವವಿದ್ಯಾನಿಲಯ”.
- ಆರ್.ಬಿ.ಗುರುಬಸವರಾಜ.

No comments:

Post a Comment