December 11, 2021

ಪಿಥೋರಾ ; ರಾಥ್ವಾಗಳ ವರ್ಣವೈಭವ

 ದಿನಾಂಕ 15-09-2019ರ ಪ್ರಜಾವಾಣಿಯ  ಭಾನುವಾರದ ಪುರವಣಿ ಯಲ್ಲಿ ಪ್ರಕಟವಾದ ನನ್ನ ಬರಹ.



 ಪಿಥೋರಾ ; ರಾಥ್ವಾಗಳ  ವರ್ಣವೈಭವ



ಭಾರತದ ಸಾಂಸ್ಕೃತಿಕ ಹಿನ್ನೆಲೆಯನ್ನು ಗಮನಿಸದರೆ ಅಲ್ಲಿ ಬಹು ಸುಂದರವಾದ ಚಿತ್ರಣ ಕಾಣಸಿಗುತ್ತದೆ. ಬಹುತೇಕವಾಗಿ ಈ ಚಿತ್ರಣವೆಲ್ಲವೂ ಆದಿವಾಸಿ ಅಥವಾ ಬುಡಕಟ್ಟು ಜನಾಂಗಗಳಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ಅದಕ್ಕೆ ಅಲ್ಲಲ್ಲಿ ಕಾಣಸಿಗುವ ಉದಾಹರಣೆಗಳೇ ಸಾಕ್ಷಿಯಾಗುತ್ತವೆ. ಅಂತಹ ಒಂದು ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗುವ ಬುಡಕ್ಕಟ್ಟು ಎಂದರೆ ಗುಜರಾತಿನ ರಾಥ್ವಾ ಸಮುದಾಯ. ಭಿಲ್ಲಾ ಬುಟಕಟ್ಟಿನ ಉಪಪಂಗಡವಾದ ರಾಥ್ವಾ ಸಂಸ್ಕೃತಿಯು ಐತಿಹಾಸಿಕ ಮತ್ತು ಪುರಾಣ ಹಿನ್ನಲೆಯ ವರ್ಣರಂಜಿತವಾದ ಹಬ್ಬಗಳು, ಆಚರಣೆಗಳು, ಸಂಗೀತ ಕೂಟಗಳು ಮತ್ತು ಚಿತ್ರಕಲೆಗಳನ್ನು ಒಳಗೊಂಡಿದೆ. ಅದರಲ್ಲಿ ಪಿಥೋರಾ ಎಂಬ ಹೆಸರಿನ ಚಿತ್ರಕಲೆಯು ಸಾಂಪ್ರದಾಯಿಕ ಮಹತ್ವ ಹೊಂದಿದೆ.

ಪಾರಂಪರಿಕ ಆಚರಣೆ

ಪಿಥೋರಾ ಚಿತ್ರಕಲೆಯು ರಾಥ್ವಾ ಜನಾಂಗದ ಪ್ರಮುಖ ಆಚರಣೆಯಾಗಿದೆ. ಇದು ಅವರ ಮುಖ್ಯ ಆರಾಧ್ಯ ದೈವವಾದ ಬಾಬಾ ಪಿಥೋರಾನಿಂದ ವರವನ್ನು ಪಡೆಯಲು ಮತ್ತು ತಮ್ಮ ಹರಕೆಗಳನ್ನು ಪೂರೈಸಲು ಮಾಡಿದ ಆಚರಣೆಯ ಭಾಗವಾಗಿದೆ. ಇದೊಂದು ಗ್ರಾಮೀಣ ಚಿತ್ರಕಲೆಯಾಗಿದ್ದು, ಪ್ರತಿಯೊಂದು ರಾಥ್ವಾಗಳ ಮನೆ ಗೋಡೆಯ ಮೇಲೆ ಈ ಕಲೆಯನ್ನು ಕಾಣಬಹುದು. ಇದು ರಾಥ್ವಾ ಜನಾಂಗದ ನೈಜತೆಗಳ ಆಚರಣೆಯಾಗಿದೆ. ಕಷ್ಟದ ಸಮಯದಲ್ಲಿ ಮನೆಯ ಮಾಲೀಕನು ಬಾಬಾ ಪಿಥೋರಾನ ಹೆಸರಿನಲ್ಲಿ ಹರಕೆ ಹೋರುತ್ತಾರೆ. ಹರಕೆ ಹೊತ್ತ ಎರಡರಿಂದ ಮೂರುವರ್ಷದೊಳಗೆ ಅದನ್ನು ತೀರಿಸುವ ಆಚರಣೆಯೇ ಪಿಥೊರಾ ಚಿತ್ರ ರಚನೆ. ಮನೆಯ ಮಾಲೀಕನನ್ನು ‘ಘರ್ಧಾನಿ’ ಎನ್ನಲಾಗುತ್ತದೆ. ಘರ್ಧಾನಿ ಹರಕೆ ಹೋರುತ್ತಾನೆ. ಅದನ್ನು ತೀರಿಸುವ ಸಮಯ ಬಂದಾಗ ಗ್ರಾಮದ ‘ಬದ್ವಾ’ ಹೆಸರಿನ ಪ್ರಧಾನ ಅರ್ಚಕರ ಬಳಿಗೆ ತೆರಳುತ್ತಾನೆ. ಅಲ್ಲಿ ಅವರ ಮಾರ್ಗದರ್ಶನ ಮೇರೆಗೆ ಪಿಥೋರಾ ಆಚರಣೆಯ ಕಾರ್ಯಯೋಜನೆಗೆ ಚಾಲನೆ ದೊರೆಯುತ್ತದೆ. ಬದ್ವಾ ಪೂರ್ವಜರಿಂದ ಸಾಂಪ್ರದಾಯಿಕ ಕೌಶಲ್ಯಗಳನ್ನು ಪಡೆದಿರುತಾನೆ. ಅದರ ಆಧಾರದ ಮೇಲೆ ಬಾಬಾ ಪಿಥೋರಾನಿಂದ ವರವನ್ನು ಪಡೆಯುವ ಸಲುವಾಗಿ ಪಿಥೋರಾ ಚಿತ್ರಿಸಲು ಮಾರ್ಗದರ್ಶನ ಮಾಡುತ್ತಾನೆ. ಬದ್ವಾ ಮತ್ತು ಘರ್ಧಾನಿಯ ಭೇಟಿಯ ನಂತರ ‘ಲಖರಾ’ ಎಂದು ಕರೆಯುವ ಪಿಥೋರಾ ಚಿತ್ರಿಸುವ ವ್ಯಕ್ತಿಯನ್ನು ಆಹ್ವಾನಿಸಿ ಆತನೊಂದಿಗೆ ಹರಕೆಯ ವಿವರಗಳನ್ನು ಚರ್ಚಿಸಲಾಗುತ್ತದೆ. ನಂತರ ಬದ್ವಾ, ಘರ್ಧಾನಿ ಹಾಗೂ ಲಖರಾ ಮೂರು ಜನ ಒಟ್ಟಾಗಿ ಪಿಥೋರಾ ಆಚರಣೆಯ ದಿನವನ್ನು ನಿರ್ಧಸುತ್ತಾರೆ. ಪಿಥೋರಾ ಚಿತ್ರ ರಚನೆಯ ನಂತರ ಹರಕೆ ಅಂತ್ಯಕಾಣುತ್ತದೆ. ಅಂತ್ಯಕ್ಕೆ ಹಳ್ಳಿಯ ಜನರೊಂದಿಗೆ ಭೋಜನ ಕೂಟ ನೆರವೇರುತ್ತದೆ. ಪಿಥೋರಾ ಚಿತ್ರರಚನೆಯ ಸಂಪನ್ನತೆಯಿAದ ತಮ್ಮ ಕಷ್ಟಗಳು ದೂರವಾಗುತ್ತವೆ ಹಾಗೂ ದೇವರು ಸಂತೃಪ್ತಿಯಿAದ ಹರಸುತ್ತಾನೆ ಎಂಬ ನಂಬಿಕೆ ರಾಥ್ವಾಗಳಲ್ಲಿ ಇದೆ.

ಪರಿಕಲ್ಪನಾತ್ಮಕ ರಚನೆ

ಪಿಥೋರಾ ಒಂದು ಆಕರ್ಷಕ ಸಾಂಪ್ರದಾಯಿಕ ಚಿತ್ರಕಲೆಯಾಗಿದೆ. ಬಾಬಾ ಪಿಥೋರಾ ಹಾಗೂ ದೇವಿ ಪಿಥೋರಿಯರ ವಿವಾಹವೇ ಪಿಥೋರಾ ವರ್ಣಚಿತ್ರದ ಪ್ರಮುಖ ಪರಿಕಲ್ಪನೆಯಾಗಿದೆ. ಬ್ರಹ್ಮಾಂಡವನ್ನು ಪ್ರತಿನಿಧಿಸುವ ಸೂರ್ಯ, ಚಂದ್ರ, ನಕ್ಷತ್ರ, ಪ್ರಾಣಿ, ಪಕ್ಷಿ, ಗಿಡಮರಗಳು ವರ್ಣಚಿತ್ರದಲ್ಲಿ ಸ್ಥಾನ ಪಡೆದಿವೆ. ಬಾಬಾ ಪಿಥೋರಾನ ಪ್ರಮುಖ ವಾಹನ ಕುದುರೆಯು ವಿಶೇಷ ಸ್ಥಾನ ಪಡೆದಿದೆ. ಜೊತೆಗೆ ಹಸು, ಮೇಕೆಗಳೂ ಸಹ ಪ್ರಾತಿನಿಧಿಕ ಪ್ರಾಣಿಗಳಾಗಿವೆ. ಪರಿಸರ ಹಾಗೂ ಪ್ರಾಣಿ ರಕ್ಷಣೆಯ ತಾತ್ವಿಕ ಹಿನ್ನಲೆಯಲ್ಲಿ ಪಿಥೋರಾ ಚಿತ್ರವು ರೂಪುತಾಳುತ್ತದೆ. 

ಮೊದಲು ಗೋಡೆಯ ಆಯ್ಕೆ ನಡೆಯುತ್ತದೆ. ಸಾಮಾನ್ಯವಾಗಿ ಮನೆಯ ಹಜಾರದ ಮೂರು ಗೊಡೆಗಳನ್ನು(ಪ್ರವೇಶ ಬಾಗಿಲಿಗೆ ಎದುರಾದ ಗೋಡೆ ಮತ್ತು ಅದರ ಅಕ್ಕಪಕ್ಕದ ಎರಡು ಗೋಡೆಗಳು) ಚಿತ್ರ ರಚನೆಗೆ ಆಯ್ಕೆ ಮಾಡಲಾಗುತ್ತದೆ. ಗೋಡೆಯನ್ನು ಸುಣ್ಣ, ಹಸುವಿನ ಸಗಣಿ ಮತ್ತು ಗಂಜಲದಿAದ ಸಮತಟ್ಟಾಗಿ ಮಾಡಿಕೊಳ್ಳಲಾಗುತ್ತದೆ. ಈ ಕಾರ್ಯವನ್ನು ಮನೆಯ ಅವಿವಾಹಿತ ಬಾಲಕಿ/ಯುವತಿಯರು ಮಾಡುತ್ತಾರೆ. ಅವರು ಹೀಗೆ ಮಾಡುವುದರಿಂದ ಬೇಗನೇ ವಿವಾಹವಾಗುತ್ತದೆ ಎಂಬ ನಂಬಿಕೆ ಅವರದ್ದು. ಹಿನ್ನಲೆಗೆ ಬಿಳಿ ಸುಣ್ಣವನ್ನು ಬಳಿಯಲಾಗುತ್ತದೆ. ಪಿಥೋರಾ ವರ್ಣಚಿತ್ರದ ಸಾಂಪ್ರದಾಯಿಕ ಗಾತ್ರ 11 x 8 ಅಡಿಗಳು ಆಗಿದೆ. ಚಿತ್ರರಚನೆಗೆ ಸಂಪೂರ್ಣವಾಗಿ ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿರುವುದು ವಿಶೇಷ. ಸಸ್ಯದ ಎಲೆಗಳು, ಕಾಯಿಗಳು, ಬೇರುಗಳು, ಹೂಗಳಿಂದ ನೈಸರ್ಗಿಕ ಬಣ್ಣಗಳ ಪುಡಿ ತಯಾರಿಸಿಕೊಂಡಿರುತ್ತಾರೆ. ಹೀಗೆ ತಯಾರಿಸಿದ ಬಣ್ಣಗಳಿಗೆ ‘ಮಹುದಾ’ ಎಂಬ ಸ್ಥಳೀಯ ಮಧ್ಯವನ್ನು ಹಾಲಿನೊಂದಿಗೆ ಬೆರೆಸಿ ಪೇಂಟ್ ತಯಾರಿಸಿ ಬಳಸುತ್ತಾರೆ. ವಿವಿಧ ಬಣ್ಣಗಳನ್ನು ಒಟ್ಟಾಗಿ ಬೆರೆಸಿ ಆಕರ್ಷಕ ಬಣ್ಣಗಳನ್ನು ಸೃಜಿಸಿಕೊಳ್ಳುತ್ತಾರೆ. ಚಿತ್ರ ರಚನೆಯಲ್ಲಿ ಹಳದಿ, ಹಸಿರು, ನೀಲಿ, ಊದಾ, ಕಿತ್ತಳೆ, ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಬಳಸಲಾಗುತ್ತದೆ.

ನಿಗದಿತ ದಿನದಂದು ಬೆಳಿಗ್ಗೆ ಘರ್ಧಾನಿಯ ಮನೆಯವರೆಲ್ಲರೂ ವಾದ್ಯಗಳೊಂದಿಗೆ ಬದ್ವಾ ಹಾಗೂ ಲಖರಾ ಅವರ ಮನೆಗೆ ತೆರಳಿ ಅವರನ್ನು ಕರೆತರುತ್ತಾರೆ. ನಂತರ ಕುಟುಂಬದವರೆಲ್ಲರೂ ಪೂಜೆ ಸಲ್ಲಿಸಿದ ನಂತರ ಬದ್ವಾ ಬಾಬಾ ಪಿಥೋರಾನ ಸಾಧನೆಗಳನ್ನು ತಿಳಿಸುವ ಹಾಡನ್ನು ಹೇಳುತ್ತಾ ಹೋಗುತ್ತಾನೆ. ಲಖರಾ ಹಾಡಿಗೆ ತಕ್ಕಂತೆ ಚಿತ್ರ ರಚಿಸುತ್ತಾ ಹೋಗುತ್ತಾನೆ. ರಾಥ್ವಾಗಳ ಸಂಪ್ರದಾಯದ ಪ್ರಕಾರ ಚಿತ್ರರಚನೆಯ ಸಮಯದಲ್ಲಿ ಮಹಿಳೆಯರು ಭಾಗವಹಿಸುವಂತಿಲ್ಲ. ಬುಡಕಟ್ಟು ಜನಾಂಗಗಳಲ್ಲಿ ಪುರುಷ ಪ್ರಧಾನ್ಯತೆ ಎದ್ದು ಕಾಣುವುದನ್ನು ಗಮನಿಸಬಹುದು. ಚಿತ್ರ ರಚನೆಯು ಸಂಜೆಯವರೆಗೂ ನಡೆಯುತ್ತದೆ. ರಚನೆ ಪೂರ್ಣಗೊಂಡ ನಂತರ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ಬಾಬಾ ಪಿಥೋರಾನನ್ನು ಆಹ್ವಾನಿಸಿ ಆತನಿಗೆ ನೈವೇದ್ಯವಾಗಿ ಮಾಂಸಹಾರವನ್ನು ಸಲ್ಲಿಸಲಾಗುತ್ತದೆ. ರಾತ್ರಿ ವೇಳೆಗೆ ಇಡೀ ಗ್ರಾಮದ ಸಮುದಾಯವರೆಲ್ಲರಿಗೂ ಬೋಜನ ವ್ಯವಸ್ಥೆ ಇರುತ್ತದೆ. ಎಲ್ಲರೂ ಮಧ್ಯದ ಸಮಾರಾಧನೆಯ ನಂತರ ಮಾಂಸಾಹಾರವನ್ನು ಸವಿಯುತ್ತಾರೆ. 

ಪಿಥೋರಾದಲ್ಲಿ ಏನಿರುತ್ತದೆ?

ಪಿಥೋರಾ ವರ್ಣಚಿತ್ರವು ಪ್ರಮುಖವಾಗಿ ಸಮುದಾಯದ ಪುರಾಣಗಳನ್ನು ಪ್ರತಿನಿಧಿಸುತ್ತದೆ. ಚಿತ್ರದಲ್ಲಿ ಕಾಣಿಸಿಕೊಳ್ಳುವ ಮುಖ್ಯ ದೇವತೆಗಳೆಂದರೆ, ಬಾಬಾ ಗನೆಹ್(ಗಣೇಶ), ಬಾಬಾ ಇಂದ್(ಇAದ್ರ), ಬಾಬಾ ಪಿಥೋರಾ, ಪಿಥೋರಿ ರಾಣಿ, ರಾಣಿ ಕಾಜಲ್, ಬಾರ್ ಮಾಥಾ ಧನಿ ರಾಜಾಭೋಜ್ ಮತ್ತು ಕುದುರೆ. ಇವುಗಳ ಜೊತೆಗೆ ಅವರ ಕುಟುಂಬದ ಪೂರ್ವಜರು ಅಲ್ಲಿರುತ್ತಾರೆ. ದೈನಂದಿನ ಮಾನವ ಚಟುವಟಿಕೆಗಳು, ಪ್ರಾಣಿ-ಪಕ್ಷಿಗಳು, ಕೃಷಿ, ವ್ಯಾಪಾರ, ಸಮುದಾಯದ ಪ್ರಮುಖ ಸದಸ್ಯರು ಹೀಗೆ ಒಟ್ಟಾರೆ ರಾಥ್ವಾ ಜನಾಂಗದ ಪ್ರಮುಖ ವ್ಯಕ್ತಿಗಳೆಲ್ಲರನ್ನು ಈ ಚಿತ್ರಗಳಲ್ಲಿ ಕಾಣಬಹುದು.

ಪಿಥೋರಾ ಚಿತ್ರಗಳಲ್ಲಿ ಪ್ರಕೃತಿಗೆ ಪ್ರಥಮ ಆಧ್ಯತೆ ನೀಡಿರುವುದು ಅವರ ಪರಿಸರ ಪ್ರಜ್ಞೆಯನ್ನು ತೋರಿಸುತ್ತದೆ. ಭೂಮಿ, ಆಕಾಶ, ಸಸ್ಯ, ಪ್ರಾಣಿ, ಪಕ್ಷಿಗಳೆಲ್ಲವನ್ನು ಸಮಗ್ರವಾಗಿ ಸಂಯೋಜಿಸಲಾಗುತ್ತದೆ. ಇಲ್ಲಿ ಚಿತ್ರಿತವಾಗುವ ಪ್ರತಿ ಪ್ರಾಣಿ, ಸಸ್ಯ ಹಾಗೂ ಪಕ್ಷಿಗಳು ಅವರ ಸಂಸ್ಕೃತಿಯ ಅಗಾಧ ನಂಬಿಕೆಯ ಪ್ರತೀಕಗಳಾಗಿವೆ. ಅವರು ವರ್ಣಚಿತ್ರದ ಮೂಲಕ ಬ್ರಹ್ಮಾಂಡದ ವಿವೇಕಯುತ ತಿಳಿವಳಿಕೆಯನ್ನು ಪ್ರದರ್ಶಿಸುತ್ತಾರೆ. ಪ್ರಕೃತಿಯ ಅಂಶಗಳಿಗೆ ಸಂಬAಧಿಸಿದ ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ಆಕಾಶಕಾಯಗಳು, ಮತ್ತು ಗಿಡಮರಗಳನ್ನು ಪವಿತ್ರವೆಂದು ಪರಿಗಣಿಸಿ ಅವುಗಳನ್ನು ಚಿತ್ರದ ಮೂಲಕ ಬಿಂಬಿಸುತ್ತಾರೆ. 

ರಾಥ್ವಾ ಜನಾಂಗವು ಹಸು ಮತ್ತು ಎಮ್ಮೆಗಳನ್ನು ಪವಿತ್ರ ಪ್ರಾಣಿಗಳೆಂದು ಪರಿಗಣಿಸುತ್ತಾರೆ. ಹಾಗಾಗಿ ಇವೂ ಸಹ ಚಿತ್ರದಲ್ಲಿ ಪ್ರತಿಬಿಂಬಿತವಾಗುತ್ತವೆ. ಜೊತೆಗೆ ತಮ್ಮ ಪೂರ್ವಜರು ಸಾಕಿದ ಮೊದಲ ಪ್ರಾಣಿ ಮೇಕೆಯೂ ಸಹ ಚಿತ್ರದಲ್ಲಿ ಸ್ಥಾನ ಪಡೆದಿದೆ. ರಾಥ್ವಾ ಆದಿವಾಸಿಗಳ ಸಾಂಸ್ಕೃತಿಕ ಸಂಪ್ರದಾಯದಲ್ಲಿ ವೀರರ ಶೋಷಣೆಯ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ವೀರರು ಮತ್ತು ಅವರು ಯುದ್ದಕ್ಕೆ ಬಳಸುತ್ತಿದ್ದ ಕುದುರೆಗಳು ಚಿತ್ರದಲ್ಲಿ ಹೇರಳವಾಗಿ ದೊರೆಯುತ್ತವೆ. ಸಾಲು ಸಾಲು ಕುದುರೆಗಳ ಚಿತ್ರ ಬರೆಯುವ ಮೂಲಕ ಯುದ್ದದ ವರ್ಣನೆಯನ್ನು ತಿಳಿಸಲಾಗುತ್ತದೆ. ಶಕ್ತಿ, ಧರ್ಮ ಮತ್ತು ದೇವತೆಗಳ ವಾಹನದ ಸಂಕೇತವಾಗಿ ಸಿಂಹವು ಸ್ಥಾನ ಪಡೆದಿದೆ. ಹುಲಿಯನ್ನು ರಕ್ಷಕನಾಗಿ ಚಿತ್ರಿಸಲಾಗುತ್ತದೆ. ಸಿಂಹ ಮತ್ತು ಹುಲಿಗಳನ್ನು ಆಕಾಶ ದ್ವಾರದ ಮೇಲೆ ಚಿತ್ರಿಸಲಾಗುತ್ತದೆ. ಏಕೆಂದರೆ ಇವು ಎಲ್ಲರನ್ನೂ ರಕ್ಷಿಸುತ್ತವೆ ಎಂಬ ನಂಬಿಕೆ ರಾಥ್ವಾಗಳದ್ದು. ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂಟೆಯೂ ಮಹತ್ವದ್ದು. ಹಾಗಾಗಿ ಇದೂ ಸಹ ಪಿಥೋರಾದಲ್ಲಿ ಸ್ಥಾನಪಡೆದಿದೆ. ಜಿಂಕೆಗಳನ್ನು ಸೌಂದರ್ಯ, ಮುಗ್ಧತೆ, ಪ್ರಾಮಾಣಿಕತೆಯ ಸಂಕೇತ ಎಂದು ರಾಥ್ವಾಗಳು ನಂಬಿದ್ದಾರೆ. ಪಿಥೋರಾದಲ್ಲಿ ಕೆಲವೊಮ್ಮೆ ಎರಡು ತಲೆಯ ಜಿಂಕೆಗಳೂ ಸಹ ಚಿತ್ರಿತವಾಗುತ್ತವೆ. ಪ್ರಾಣಿಗಳ ತ್ಯಾಗ ಬಲಿದಾನಕ್ಕೆ ಕೋಳಿ ಆಯ್ಕೆಯಾಗಿದೆ. ನವಿಲು ದೇವತೆಗಳ ವಾಹನವಾಗಿ ಕಾಣಸಿಗುತ್ತದೆ. ಬಾಬಾ ಪಿಥೋರಾನಿಗೆ ಜನ್ಮನೀಡಿದ ರಾಣಿ ಕೋಯಲ್‌ಳ ನೆನಪಿನಲ್ಲಿ ಕೋಗಿಲೆ ಸಾಂಕೇತಕವಾಗಿ ನಿರೂಪಣೆಯಾಗಿದೆ. ರಾಥ್ವಾಗಳು ಪ್ರಾಣಿ ಪಕ್ಷಿ ಪ್ರಿಯರಾಗಿದ್ದು, ಅವುಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು ಎಂಬುದಕ್ಕೆ ಇಲ್ಲಿ ಚಿತ್ರಿತವಾಗುವ ಪ್ರಾಣಿ ಪಕ್ಷಿಗಳೇ ಸಾಕ್ಷಿ. 

ತಾಳೆ ಜಾತಿಯ ತಾಡ್ ಮರವು ರಾಥ್ವಾಗಳಿಗೆ ಬಹಳ ಇಷ್ಟವಾದ ಮರ. ತಾಡ್ ಮರದ ತಡ್ಕಲಿ ಎಂಬ ಚಿಕ್ಕ ಹಣ್ಣುಗಳು ತಿನ್ನಲು ತುಂಬಾ ಸೊಗಸಾಗಿರುತ್ತವೆ. ರಾಥ್ವಾಗಳು ತಾಡ್ ಮರದಿಂದ ನೀರಾ ತಯಾರಿಸುತ್ತಾರೆ. ಇದು ತುಂಬಾ ಆರೋಗ್ಯಕರವಾದ ಔಷಧೀಯ ಪಾನೀಯವಾಗಿದೆ. ಜೊತೆಗೆ ತಾಡ್ ಮರದಿಂದ ಮಧ್ಯವನ್ನೂ ಸಹ ತಯಾರಿಸುತ್ತಾರೆ. ಇದರ ಎಲೆಗಳನ್ನು ಮನೆಗಳ ಛಾವಣಿಗೆ ಮತ್ತು ಗೋಡೆಗೆ ಬಳಸುತ್ತಾರೆ. ಹಾಗಾಗಿ ತಾಡ್ ಮರವು ಪಿಥೋರಾದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ. ಮನೆ ನಿರ್ಮಾಣದಲ್ಲಿ ಬಿದಿರನ್ನು ಹೆಚ್ಚು ಬಳಸುವುದರಿಂದ ಬಿದಿರೂ ಸಹ ಅಲ್ಲಿ ಸ್ಥಾನ ಪಡೆದಿದೆ. 

ಆಧುನಿಕ ಜಗತ್ತಿನಲ್ಲಿ ಪಿಥೋರಾ

ಭಾರತದ ಹೆಚ್ಚಿನ ಬುಡಕಟ್ಟು ಕಲೆಗಳಂತೆ ಪಿಥೋರಾ ವರ್ಣಚಿತ್ರವು ಜಗತ್ತಿನಾದ್ಯಂತ ಜನಮನ್ನಣೆ ಗಳಿಸಿದೆ. ಆಧುನಿಕ ಜಗತ್ತು ಈ ಕಲೆಯನ್ನು ಅಲಂಕಾರಿಕವಾಗಿ ನೋಡುತ್ತಿದೆ. ಇದು ಸಂಪೂರ್ಣವಾಗಿ ವರ್ಲಿ ಚಿತ್ರವನ್ನು ಹೋಲುವುದರಿಂದ ಗೋಡೆಗಳ ಅಲಂಕಾರಕ್ಕೆ ಸೂಕ್ತ ಚಿತ್ರಕಲಾ ಪ್ರಕಾರವಾಗಿದೆ. ಆದರೆ ಇದು ರಾಥ್ವಾಗಳ ಪಾರಂಪರಿಕ ಹಾಗೂ ಸಾಂಪ್ರದಾಯಿಕ ಕಲೆಯಾದ್ದರಿಂದ ಅದನ್ನು ವ್ಯಾಪಾರೀಕರಣಗೊಳಿಸಲು ಅವರು ಸಿದ್ದರಿಲ್ಲ. ಆದಾಗ್ಯೂ ಅವರ ಕಲೆಯು ಆಧುನಿಕತೆಯ ಸ್ಪರ್ಶ ಹೊಂದುತ್ತಿದೆ. ಹಿಂದೆ ಚಿತ್ರ ರಚನೆಗೆ ತಾವೇ ತಯಾರಿಸಿದ ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿದ್ದರು. ಬಿದಿರಿನ ಕಟ್ಟಿಗೆಯಿಂದ ತಾವೇ ಬ್ರಷ್ ತಯಾರಿಸಿಕೊಳ್ಳುತ್ತಿದ್ದರು. ಆದರೆ ಇಂದು ಬಹುತೇಕವಾಗಿ ಮಾರುಕಟ್ಟೆಯಲ್ಲಿ ದೊರೆಯುವ ರಸಾಯನಿಕ ಬಣ್ಣ ಹಾಗೂ ಬ್ರಷ್‌ಗಳನ್ನು ಬಳಸುತ್ತಾರೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪಿಥೋರಾ ಚಿತ್ರಕಲೆ ತನ್ನದೇ ಆದ ಸಾಂಪ್ರದಾಯಿಕ ಹಿನ್ನಲೆ ಹೊಂದಿದೆ. ಪಿಥೋರಾ ಸಂಪೂರ್ಣವಾಗಿ ನಂಬಿಕಗಳ ಆಚರಣೆ ಆಗಿರುವುದರಿಂದ ಅದನ್ನು ಜಾಗತೀಕರಣದ ನೆಲೆಯಲ್ಲಿ ನೋಡುವುದು ರಾಥ್ವಾಗಳಿಗೆ ಇಷ್ಟವಿಲ್ಲ. ಅವರ ನಂಬಿಕೆಯ ನೆಲೆಯಲ್ಲಿಯೇ ನಿಂತು ಅದಕ್ಕೆ ಬೇಕಾದ ಮಾರ್ಗದರ್ಶನ ನೀಡುವ ಮೂಲಕ ಕಲೆಯನ್ನು ಪ್ರೋತ್ಸಾಹಿಸುವ ಮತ್ತು ಬೆಳೆಸುವ ಪ್ರಯತ್ನ ಮಾಡಬೇಕಿದೆ.






No comments:

Post a Comment