April 28, 2014

1947ಕ್ಕಿಂತ ಮುಂಚಿನ ಮತ್ತು ನಂತರ ಕಾಲದ ಶಿಕ್ಷಣದ ಸ್ಥಿತಿಗತಿ:ಒಂದು ಪಕ್ಷಿನೋಟ

1947ಕ್ಕಿಂತ ಮುಂಚಿನ ಮತ್ತು ನಂತರ ಕಾಲದ ಶಿಕ್ಷಣದ ಸ್ಥಿತಿಗತಿ:ಒಂದು ಪಕ್ಷಿನೋಟ

         ಶಿಕ್ಷಣದ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಮಾನವನಿಗೆ ಯೋಚನಾಶಕ್ತಿ, ಕಲಿಯುವ ಕಾತರ, ಹುಡುಕುವ ತವಕ ಮೂಡಿಬಂದ ದಿನಗಳಿಂದ ಶಿಕ್ಷಣದ ಪ್ರಕ್ರಿಯೆ ಹುಟ್ಟಿ ಬೆಳೆಯುತ್ತಾ ಸಾಗಿದೆ. ಅಂದಿನಿಂದ ಇಂದಿನವರೆಗೆ ಅನೇಕ ಶಿಕ್ಷಣ ಪದ್ಧತಿಗಳು ಕಾಲಗರ್ಭದಲ್ಲಿ ಹುದುಗಿ ಇತಿಹಾಸ ಸೇರಿವೆ. ಅವುಗಳನ್ನೆಲ್ಲಾ ಅವಲೋಕಿಸಿದಾಗ ಕಲಿಯುವವರಲ್ಲಿ ಕಲಿಕೆಯನ್ನು ಮೂಡಿಸಿ ಶಾಶ್ವತಗೊಳಿಸುವುದೇ ಪ್ರಮುಖ ಗುರಿಯಾಗಿರುವುದು ಕಂಡುಬರುತ್ತದೆ.

 ಸ್ವಾತಂತ್ರಕ್ಕಿಂತ (1947) ಮೊದಲ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯತ್ತ ಕಣ್ಣು ಹಾಯಿಸಿದರೆ ನಮಗೆ ಮೊದಲು ಗೋಚರಿಸುವುದು ‘ವೇದಗಳ ಕಾಲದ ಶಿಕ್ಷಣ’ ಅಂದಿನ ಶಿಕ್ಷಣ ಗುರುಕುಲಗಳಲ್ಲಿ ನಡೆಯುತ್ತಿದ್ದು, ಅದು ಸಮಾಜದ ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿತ್ತು. ಅಂದರೆ ಅಂದಿನ ಸಮುದಾಯದ ಮೇಲ್ವರ್ಗಗಳೆನಿಸಿಕೊಂಡ ಕ್ಷತ್ರಿಯರು, ಬ್ರಾಹ್ಮಣರು ಮತ್ತು ವೈಣಿಕರಿಗೆ ಮಾತ್ರ ಅದೂ ಕೇವಲ ಪುರುಷರಿಗೆ ಮಾತ್ರ ಮೀಸಲಾಗಿತ್ತು. ಮಹಿಳೆಯರು ಮತ್ತು ಶೂದ್ರರು ಶಿಕ್ಷಣದಿಂದ ವಂಚಿತರಾಗಿದ್ದರು. ಕ್ಷತ್ರಿಯರಿಗೆ ಶಸ್ತ್ರಾಭ್ಯಾಸ, ಗಜಶಾಸ್ತ್ರ ಮತ್ತು ರಾಜನೀತಿ ಶಾಸ್ತ್ರಗಳು ಮೀಸಲಾಗಿದ್ದರೆ, ಬ್ರಾಹ್ಮಣರಿಗೆ ವೇದ ಮತ್ತು ಉಪನಿಷತ್ತುಗಳ ಅಧ್ಯಯನ ಹಾಗೂ ಪಠಣ, ಹಾಗೂ ವೈಣಿಕರಿಗೆ ವಿಜ್ಞಾನ ಮತ್ತು ಗಣಿತಶಾಸ್ತ್ರ ಮೀಸಲಾಗಿತ್ತು. ಹೀಗೆ ಅಂದಿನ ಶಿಕ್ಷಣವು ನಿರ್ದಿಷ್ಟ ವ್ಯಕ್ತಿಗಳಿಗೆ, ನಿರ್ದಿಷ್ಟ ವಿಷಯಗಳಿಗೆ ಮಾತ್ರ ಸೀಮಿತಗೊಂಡಿತ್ತು. ‘ಮನುಸ್ಮøತಿ’ಯ ಪ್ರಕಾರ ಕೆಳಜಾತಿಯವರು ಮತ್ತು ಮಹಿಳೆಯರನ್ನು ಶಿಕ್ಷಣದಿಂದ ದೂರವಿಡಲಾಗಿತ್ತು. ಅವರು ಶಿಕ್ಷಣ ಪಡೆಯುವುದು ಅಪರಾಧವಾಗಿತ್ತು. ವೇದಗಳ ಕಾಲದ ಕೊನೆಗೆ ಈ ಕಟ್ಟುಪಾಡುಗಳಲ್ಲಿ ಸ್ವಲ್ಪ ಬದಲಾವಣೆಯಾಗಿ ಮಹಿಳೆಯರೂ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಲಾಯಿತು.

ಬ್ರಿಟಿಷರು ಭಾರತಕ್ಕೆ ಬಂದ ಸಂದರ್ಭದ ಶಿಕ್ಷಣದಲ್ಲಿಯೂ ಯಾವ ಮಹತ್ತರವಾದ ಬದಲಾವಣೆಗಳೇನೂ ಸಂಭವಿಸಲಿಲ್ಲ. ಈ ಸಮಯದಲ್ಲಿ ಶಿಕ್ಷಣದ ಮೇಲಿನ ನಿರ್ಬಂಧಗಳು ಸ್ವಲ್ಪ ಸಡಿಲಗೊಂಡವಾದರೂ ಕೆಳವರ್ಗದವರು, ಮಹಿಳೆಯರು ಶಿಕ್ಷಣ ಪಡೆಯುವಲ್ಲಿ ಹೆಚ್ಚಿನ ಆಸಕ್ತಿ ತೋರಲಿಲ್ಲ. ಬ್ರಿಟಿಷರು ಶಿಕ್ಷಣ ಕ್ಷೇತ್ರದ ಮೇಲೆ ತಮ್ಮ ಹಿಡಿತ ಸಾಧಿಸಿದ ಮೇಲೆ ತಮ್ಮ ಆಡಳಿತಕ್ಕನುಗುಣವಾಗುವಂತಹ ಶಿಕ್ಷಣವನ್ನು ನೀಡಿದರು. ಆದರೆ ಅದು ಜನರಿಗಾಗಲೀ, ಜನಸಮುದಾಯದ ಏಳಿಗೆಗಾಗಲೀ ಸಹಕಾರಿಯಾಗಲಿಲ್ಲ. 

1950ರಲ್ಲಿ ಸಂವಿಧಾನದ ಮೂಲಕ ನಮ್ಮ ದೇಶವು ಪ್ರಜಾಪ್ರಭುತ್ವದ ಆಶೋತ್ತರಗಳನ್ನು ಘೋಷಿಸಿಕೊಂಡು ಶಿಕ್ಷಣದ ಸಾರ್ವತ್ರೀಕರಣದ ಕನಸನ್ನು ಕಂಡಿತು. ಶಿಕ್ಷಣವು ಸಾರ್ವತ್ರೀಕರಣಗೊಳ್ಳದಿದ್ದರೆ ‘ಮನುಷ್ಯರೆಲ್ಲ ಹುಟ್ಟಿನಿಂದ ಸಮಾನರು’ ಎಂಬ ತತ್ವದ ಆಧಾರದ ಮೇಲೆ ರೂಪಿತಗೊಂಡ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅರ್ಥವಿಲ್ಲವೆಂಬುದನ್ನು ತಿಳಿದ ಅಂದಿನ ರಾಷ್ಟ್ರನಾಯಕರು, ತತ್ವಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರು ಶಿಕ್ಷಣದ ಸಾರ್ವತ್ರೀಕರಣವನ್ನು ಸಾಧಿಸುವ ಗುರಿ ಹೊಂದಿದ್ದರು. ಇದರಿಂದ ಸಮುದಾಯದ ಎಲ್ಲಾ ಜನರಿಗೂ ಹೆಣ್ಣು-ಗಂಡು ಎಂಬ ಬೇಧವಿಲ್ಲದೇ (ಅವರಿಗೆ ಇಷ್ಟವಾದ) ಶಿಕ್ಷಣ ಪಡೆಯುವ ಅವಕಾಶ ದೊರೆಯಿತು. ಅಂದಿನಿಂದ ಇಂದಿನವರೆಗೆ ಸಮಾಜದ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ದೊರೆಯುತ್ತಿದೆಯಾದರೂ ಇನ್ನೂ ನಾವು ತಲುಪಿಲ್ಲ. ಸರ್ಕಾರವು 6-14 ವಯೋಮಾನದ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಪ್ರಯತ್ನಗಳಂತೂ ಮುಂದುವರಿಯುತ್ತಿವೆ.

ಪ್ರಜಾಪ್ರಭುತ್ವ ವ್ಯವಸ್ಥೆಯು ಜಾರಿಗೆ ಬಂದು ಐದು ದಶಕಗಳು ಕಳೆದರೂ, ನಮ್ಮಲ್ಲಿ ಇನ್ನೂ ಪಾಳೆಗಾರಿಕೆ ಸಮಾಜ ವ್ಯವಸ್ಥೆ (ಈeuಜಚಿಟism) ಯ ಲಕ್ಷಣಗಳು ಮರೆಯಾಗಿಲ್ಲ. ಭೂಮಿ ಅಥವಾ ಆಸ್ತಿ ಕೆಲವೇ ಶ್ರೀಮಂತರ ಕೈಯಲ್ಲಿ ಕೇಂದ್ರೀಕೃತವಾಗಿದೆ. ಚಾಮರಾಜನಗರ, ಮಂಡ್ಯ, ಬಳ್ಳಾರಿ, ಕೋಲಾರ, ರಾಯಚೂರು ಹೀಗೆ ಅನೇಕ ಜಿಲ್ಲೆಗಳಲ್ಲಿ ಈಗಲೂ ಜಾರಿಯಲ್ಲಿರುವ ಪಾಳೆಗಾರಿಕೆ ಪದ್ಧತಿಯಿಂದ ಶಿಕ್ಷಣ ಕುಂಟಿತಗೊಳ್ಳುತ್ತಿದೆ. ಬಡತನವೆಂಬ ಮಾರಿಯು ಶಿಕ್ಷಣ ಕ್ಷೇತ್ರಕ್ಕೆ ಪೆಂಡಭೂತವಾಗಿ ಕಾಡುತ್ತಿದೆ.

ಆಡಳಿತಶಾಹಿಯ ಅಧಿಕಾರ ಕೇಂದ್ರೀಕರಣ ವ್ಯವಸ್ಥೆಯೂ ಸಹ ಶಿಕ್ಷಣ ಕ್ಷೇತ್ರಕ್ಕೆ ಅಡ್ಡಿಗಲ್ಲಾಗಿದೆ. ಅಂದರೆ ಕೇಂದ್ರ ಸರ್ಕಾರವು ಎನ್.ಸಿ.ಇ.ಆರ್.ಟಿ ಮೂಲಕ, ರಾಜ್ಯ ಸರ್ಕಾರವು ಡಿ.ಎಸ್.ಇ.ಆರ್.ಟಿ ಮೂಲಕ ಅವರ ಪರಿಕಲ್ಪನೆಗಳನ್ನು ಧರಿಸಿದ ಪಠ್ಯ ಚೌಕಟ್ಟು ರೂಪಿಸಿ ಸಿದ್ಧಪಡಿಸುತ್ತಿರುವುದು ಆಡಳಿತ ವ್ಯವಸ್ಥೆಯ ಪ್ರತಿರೂಪ. ಇತ್ತೀಚಿನ ಶಿಕ್ಷಣವು ಶಿಕ್ಷಕರಿಗೆ ಪ್ರತಿಬಂಧಕಾಜ್ಞೆಗಳನ್ನು ಹೇರುತ್ತಿದೆ. ಇದನ್ನೇ ಕಲಿಸಬೇಕು, ಹೀಗೇ ಕಲಿಸಬೇಕು, ಇಷ್ಟೇ ಕಲಿಸಬೇಕು, ಹೀಗೇ ಇರಬೇಕು ಎಂಬಿತ್ಯಾದಿ ಹೆಚ್ಚಿನ ಹೊರೆ ಶಿಕ್ಷಕನ ಮೇಲಿದೆ. ಆದರೆ ಕಲಿಸುವವರಿಗೆ ಕಲಿಸುವ ಕ್ರಿಯೆಯಲ್ಲಿನ ತಮ್ಮದೇ ಆದ ಸ್ವಾತಂತ್ರ್ಯಕ್ಕೆ ಕಿಲುಬು ಕಾಸಿನ ಇಮ್ಮತ್ತಿಲ್ಲದಂತಾಗಿದೆ. ಇಂದಿನ ಶಿಕ್ಷಣ ಶಿಕ್ಷಕರಿಗೆ ಕುದುರೆ ಲಗಾಮಿನಂತಾಗಿದೆ.

ಇನ್ನು ಶಿಕ್ಷಕರಾದ ನಮ್ಮಲ್ಲೂ ಸಹ ಅರೆಪಾಳಿಗಾರಿಕೆ ಪ್ರವೃತ್ತಿಗಳು ಮನೆಮಾಡಿವೆ. ಅಂದರೆ ಮಕ್ಕಳು ಮತ್ತು ಶಿಕ್ಷಕರ ನಡುವಿನ ಮುಕ್ತ ಸಂವಹನಕ್ಕೆ ಅವಕಾಶವಿಲ್ಲದಂತಾಗಿದೆ. ನಾವು ಮಕ್ಕಳನ್ನು ಪ್ರಶ್ನಿಸಲು ಬಿಡುತ್ತಿಲ್ಲ. ಅವರದೇ ಆದ ಕಲಿಕಾ ಸ್ವಾತಂತ್ರ್ಯವನ್ನು ನಾವು ಕಿತ್ತುಕೊಳ್ಳುತ್ತಿದ್ದೇವೆ. ಇಂದು ಮಗು-ಕೇಂದ್ರಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದೆ ಎಂದು ಹೇಳುತ್ತೇವೆ. ಆದರೆ ನಮ್ಮ ಎಷ್ಟು ಶಾಲೆಗಳಲ್ಲಿ ಮಕ್ಕಳಿಗೆ ಮುಕ್ತ ಅವಕಾಶಗಳನ್ನು ಕಲ್ಪಸಿದ್ದೇವೆ? ಶಿಸಿನ ಹೆಸರಿನಲ್ಲಿ ಮಕ್ಕಳ ವೈಯಕ್ತಿಕತೆ ಮತ್ತು ಸ್ವತಂತ್ರ ಮನೋಭಾವವನ್ನು ಕಸಿದುಕೊಳ್ಳುತ್ತಿದ್ದೇವೆ.

ಇಂದಿನ ಶಿಕ್ಷಣವು ಅನೇಕ ಮುಕ್ತ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ. ಆದರೆ ಅದನ್ನು ಕೊಡುವವರು ಮತ್ತು ಪಡೆದುಕೊಳ್ಳುವವರ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಶಿಕ್ಷಣ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು ಎಂದು ಹೇಳುತ್ತೇವೆ. ಆದರೆ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬರ ಕರ್ತವ್ಯವು ಹೌದು. ಅದನ್ನು ಸಮುದಾಯದ ಎಲ್ಲಾ ವರ್ಗವೂ ಅರಿತು, ಮಕ್ಕಳ ಇಷ್ಟಪಡುವಂತಹ ಶಿಕ್ಷಣ ನೀಡಬೇಕು. ಶಿಕ್ಷಣ ಕ್ಷೇತ್ರದಲ್ಲಿನ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಇನ್ನೊಬ್ಬರ ಮೇಲೆ ಹಾಕದೆ ತಾವೇ ನಿಭಾಯಿಸಿಕೊಂಡು ಹೋಗಬೇಕು. ನಾವಿಂದು ವಾಸ್ತವಿಕತೆಯನ್ನು ಮರೆತು ಆದರ್ಶಗಳಲ್ಲಿ ತೇಲಾಡುತ್ತಿದ್ದೇವೆ. ಆಕಾಶದಲ್ಲಿ ಹಾರಾಡುವ ಬದಲು ನಿಂತ ನೆಲವನ್ನು ತಿಳಿಯಲು ಪ್ರಯತ್ನಿಸಬೇಕು. ಶಿಕ್ಷಣದಲ್ಲಿ ಕನಸು ಕಾಣುವುದರ ಜೊತೆಗೆ ಪರಿಸ್ಥಿಯನ್ನು ಅರ್ಥಮಾಡಿಕೊಳ್ಳವ ಪ್ರಯತ್ನವಾಗಬೇಕು. ಎಲ್ಲಿಯವರೆಗೆ ಪ್ರಾಥಮಿಕ ಶಿಕ್ಷಣ ಬಲವಾಗುವುದಿಲ್ಲವೋ ಅಲ್ಲಿಯವರೆಗೆ ದೇಶದ ಪ್ರಗತಿ ಕುಂಟುತ್ತಾ ಸಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ

‘ಟೀಚರ್’ ಫೆಬ್ರವರಿ 2006
- ಆರ್.ಬಿ.ಗುರುಬಸವರಾಜ

April 20, 2014

ಮಂಚೂಣಿಯಲ್ಲಿನ ಮಹಿಳಾ ಮಣಿಗಳು

ಮಂಚೂಣಿಯಲ್ಲಿನ ಮಹಿಳಾ ಮಣಿಗಳು
           21ನೇ ಶತಮಾನದ ಮಹಿಳೆ ಎಲ್ಲಾ ರಂಗಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಮಾರ್ಚ ತಿಂಗಳು ಬಂತೆಂದರೆ ಸಾಕು ಎಲ್ಲಾ ಮಹಿಳಾ ಸಂಘಟನೆಗಳಲ್ಲೂ ಸಂಚಲನೆಯುಂಟಾಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲ್ಪಡುವ ಮಹಿಳಾ ದಿನಾಚರಣೆ ನಿಮಿತ್ತ ಈ ಲೇಖನ.
ಅಂದಿನ ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇವಲ ಪುರುಷರಿಗೆ ಮಾತ್ರ ಮೀಸಲಾಗಿತ್ತು. ಆದರೆ ಇಂದು ಆ ಕ್ಷೇತ್ರದಲ್ಲಿ ಮಹಿಳೆಯ ಸಾಧನೆ ಅದ್ವಿತೀಯ. ಅಂತಹ ವಿಶಿಷ್ಟ ಸಾಧನೆಗೈದ ಕೆಲವು ಮಹಿಳಾ ವಿಜ್ಞಾನಿಗಳ ಕಿರು ಪರಿಚಯ ಇಲ್ಲಿದೆ. 

ಹಿಪಾಥಿಯಾ(370-415) : ರೋಮನ್ ದೇಶದ ಗಣಿತಜ್ಞೆ ಹಾಗೂ ಖಗೋಳ ವಿಜ್ಞಾನಿ ಹಿಪಾಥಿಯಾ ಇತಿಹಾಸದಲ್ಲಿ ಮೊದಲ ಮಹಿಳಾ ವಿಜ್ಞಾನಿ ಎಂಬ ಪಟ್ಟ ಧರಿಸಿದ್ದಾಳೆ. ಶಿಕ್ಷಣದಿಂದ ಮಹಿಳೆಯರನ್ನು ದೂರವಿರಿಸಿದ್ದ ಕಾಲದಲ್ಲಿ ಗಣಿತ, ಖಗೋಳ ವಿಜ್ಞಾನ ಹಾಗೂ ಪರಿಸರ ವಿಜ್ಞಾನಗಳನ್ನು ಕಲಿತು ಅಲೆಕ್ಸಾಂಡ್ರಿಯಾ ವಿಶ್ವ ವಿದ್ಯಾಲಯದಲ್ಲಿ ಗಣಿತ ಮತ್ತು ತತ್ವಶಾಸ್ತ್ರ ಉಪನ್ಯಾಸಕಿಯಾಗಿ ಆಯ್ಕೆಯಾದಳಯ. ನಂತರ ಅಲ್ಲಿಯ ಮುಖ್ಯಸ್ಥಳಾಗಿ ಸೇವೆ ಸಲ್ಲಿಸಿದಳು. 
ಹಿಪಾಥಿಯಾ ಗಣಿತ ಕುರಿತಾಗಿ ಅನೇಕ ಪುಸ್ತಕಗಳನ್ನು ಬರೆದಳು. ತನ್ನ ಬೋಧನೆಗೆ ಅಗತ್ಯವಿರುವ ಉಪಕರಣಗಳನ್ನು ತಾನೇ ತಯಾರಿಸಿಕೊಳ್ಳುತ್ತಿದ್ದಳು. ಇದರಿಂದ ಅನೇಕ ಹೊಸ ಹೊಸ ಉಪಕರಣಗಳನ್ನು ಕಂಡುಹಿಡಿಯಲು ಸಾಧ್ಯವಾಯಿತು. ವೈವಿಧ್ಯಮಯ, ಕ್ರಿಯಾತ್ಮಕ ನಾವೀನ್ಯ ತಂತ್ರಗಾರಿಕೆಯ ಬೋಧನಾ ವಿಧಾನಗಳಿಂದ ಹೊಟ್ಟೆಕಿಚ್ಚು ಪಟ್ಟ ಆಡಳಿತ ಮಂಡಳಿ ಇವಳನ್ನು ಕೊಲೆ ಮಾಡಿಸಿದ್ದು ದುರಂತ. ಅಲ್ಲದೇ ಅವಳ ಎಲ್ಲಾ ಬರಹಗಳನ್ನು ನಾಶ ಮಾಡಿದ್ದು ಇನ್ನೂ ಘೋರ ದುರಂತ. ಆದರೂ ಇತಿಹಾಸದಲ್ಲಿ ಅವಳ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.

ಮರಿಯಾ ಮೈಕೆಲ್(1818-1889) : ಖಗೋಳ ಶಾಸ್ತ್ರಜ್ಞೆಯಾದ ಮರಿಯಾ ಯುನೈಟೆಡ್ ಸ್ಟೇಟ್ಸ್‍ನಲ್ಲಿ ಜನಿಸಿದಳು. ಕೆಲವೇ ವಿಶ್ವ ವಿದ್ಯಾಲಯಗಳು ಮಹಿಳೆಯರಿಗೆ ಪ್ರವೇಶ ನೀಡುತ್ತಿದ್ದ ಕಾಲದಲ್ಲಿ ಬಡತನದಿಂದಾಗಿ ವಿಶ್ವ ವಿದ್ಯಾಲಯದಲ್ಲಿ ಪ್ರವೇಶ ದೊರೆಯದೇ ಕಂಗಾಲಾದಳು. ಆದರೂ ದೃತಿಗೆಡದೇ ತನ್ನ ಸ್ವ-ಪರಿಶ್ರಮದಿಂದ ಅಬ್ಯಾಸ ಮಾಡಿ ಗ್ರಂಥಾಲಯವೊಂದರಲ್ಲಿ ಕೆಲಸಕ್ಕೆ ಸೇರಿದಳು. ಅಲ್ಲಿಂದ ಅವಳ ಜೀವನದ ಹೊಸ ಅಧ್ಯಾಯ ಪ್ರಾರಂಭವಾಯಿತು. ಅಲ್ಲಿ ವೈವಿಧ್ಯಮಯ ಪುಸ್ತಕಗಳನ್ನು ಓದಲು ಅವಕಾಶ ದೊರೆಯಿತು. ಮರಿಯಾ ಗಣಿತದಲ್ಲಿ ತುಂಬಾ ಪ್ರತಿಭೆ ಉಳ್ಳವಳಾಗಿದ್ದು, ಖಗೋಳ ಶಾಸ್ತ್ರಜ್ಞನಾದ ತಂದೆಗೆ ನಕ್ಷತ್ರಗಳ ದೂರ ಅಳೆಯಲು ಸಹಾಯ ಮಾಡುತ್ತಿದ್ದಳು.
1847ರಲ್ಲಿ ಮರಿಯಾ ದೂರದರ್ಶಕದ ಸಹಾಯದಿಂದ ಬಿಳಿಯದಾದ ಆಕಾಶಕಾಯವೊಂದನ್ನು ಪತ್ತೆ ಹಚ್ಚಿದಳು. ಅದುವರೆಗೂ ಯಾರೂ ಪತ್ತೆ ಹಚ್ಚಿರದ ಧೂಮಕೇತು ಒಂದನ್ನು ಪತ್ತೆ ಹಚ್ಚಿದ್ದಳು. ಅನಂತರದಲ್ಲಿ ಅವಳು ಜಗದ್ವಿಖ್ಯಾತಿಯಾದಳು. ಪ್ರಪಂಚದ ನಾನಾ ಕಡೆ ಪ್ರವಾಸ ಮಾಡಿ ಅನೇಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿದಳು. ಸೂರ್ಯನ ಮೇಲ್ಮೈ ಛಾಯಾ ಚಿತ್ರ ತೆಗೆದವರಲ್ಲಿ ಮರಿಯಾ ಮೊದಲಿಗಳು. ಜೀವನದುದ್ದಕ್ಕೂ ಇತರೆ ಮಹಿಳೆಯರು ಉನ್ನತ ಮಟ್ಟಕ್ಕೆ ಬೆಳೆಯಲು ಪ್ರೇರಣೆ ನೀಡಿದಳು.

ಫ್ಲಾರೆನ್ಸ್ ನೈಟಿಂಗೇಲ್(1820-1910) : ಇಂಗ್ಲೆಂಡ್‍ನಲ್ಲಿ ಆಸ್ಪತ್ರೆಗಳೆಂದರೆ ರೋಗ ಹರಡುವ ತಾಣಗಳಂತಿದ್ದ ಕಾಲದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಬಿರುಗಾಳಿಯಾಗಿ ಬಂದು ವೈದ್ಯಕೀಯ ಕೊಳೆಯನ್ನೆಲ್ಲಾ ತೆಗೆದಳು. ಪಾಲಕರ ವಿರೋಧದ ನಡುವೆಯೂ ಜರ್ಮನಿಗೆ ತೆರಳಿ ನರ್ಸಿಂಗ್‍ನಲ್ಲಿ ಹೆಚ್ಚಿನ ತರರಬೇತಿ ಪಡೆದಳು. ಕ್ರಿಮಿಯನ್ ವಾರ್ ನಡೆದ ಸಂಧರ್ಭದಲ್ಲಿ ಸೈನಿಕ ಆಸ್ಪತ್ರೆಯ ಮೇಲ್ವಿಚಾರಕಿಯಾಗಿದ್ದಳು. ಪರಿಪೂರ್ಣವಾಗಿ ನರ್ಸ ತರಬೇತಿ ಪಡೆದ ನಂತರವೇ ಆಸ್ಪತ್ರಗಳನ್ನು ಶೂಚಿಗೊಳಿಸುವ ಕಾರ್ಯ ಕೈಗೊಂಡಳು. ಆಸ್ಪತ್ರೆಗಳನ್ನು ಸ್ವಚ್ಚ ಮಂದಿರಗಳನ್ನಾಗಿಸಲು ಶ್ರಮಿಸಿದಳು. ಸೈನಿಕರಿಗೆ ವಿಶೇಷ ಗಮನ ನೀಡಿ ಉಪಚರಿಸುತ್ತಿದ್ದಳು. ಜರ್ಮನಿಯಿಂದ ಹಿಂದಿರುಗಿ ಬಂದ ಮೇಲೆ ನರ್ಸಿಂಗ್ ಶಾಲೆ ತೆರೆದಳು. ಇಂಗ್ಲೆಂಡ್ ಅಲ್ಲದೇ ಭಾರತೀಯ ಆಸ್ಪತ್ರೆಗಳ ಪರಿಸ್ಥಿತಿಗಳನ್ನು ಬದಲಾಯಿಸಲು ಶ್ರಮಿಸಿದಳು. ಉತ್ತಮ ನರ್ಸಿಂಗ್ ಸೇವೆ ಮತ್ತು ಕೌಶಲ್ಯಾಭಿವೃದ್ದಿ ಕುರಿತು ಅನೇಕ ಪುಸ್ತಕಗಳನ್ನು ಬರೆದಳು. ಅಲ್ಲದೇ ಸಂಘಟನೆ, ಪರಿವೀಕ್ಷಣೆ, ಸ್ವಚ್ಚತೆ, ಹಾಗೂ ರೋಗಿಗಳೊಂದಿಗಿನ ಒಡನಾಟ ಕುರಿತ ಪುಸ್ತಕಗಳನ್ನೂ ಬರೆದಳು.

ಮಾರ್ಗರೇಟ್ ಸ್ಯಾಂಗರ್(1879-1966) : ಅಮೇರಿಕಾದಲ್ಲಿ ನರ್ಸ ಆಗಿದ್ದ ಮಾರ್ಗರೇಟ್ ತನ್ನ ಸೇವೆಯಲ್ಲಿ ಶ್ರೀಮಂತ ಕುಟುಂಬಗಳಿಗಿಂತ ಬಡ ಕುಟುಂಬಗಳು ಹೆಚ್ಚು ಮಕ್ಕಳನ್ನು ಹೊಂದಿರುವುದನ್ನು ಪತ್ತೆ ಹಚ್ಚಿದಳು. ತಮ್ಮ ಮಕ್ಕಳ ಪಾಲನೆ ಪೋಷಣೆ, ಆರೋಗ್ಯಕ್ಕಾಗಿ ಹಣದ ಅಭಾವ ಎದುರಿಸುತ್ತಿದ್ದ ಬಡ ಕುಟುಂಬಗಳನ್ನು ದಿನವಿಡೀ ನೋಡುತ್ತಿದ್ದಳು. ಬಡ ಹೆಣ್ಣು ಮಕ್ಕಳು ಪದೆ ಪದೇ ಗರ್ಭ ಧರಿಸುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸುವ ಅಂದರೆ ಜನನ ಪ್ರಮಾಣ ಕಡಿಮೆ ಮಾಡುವ ಸಲುವಾಗಿ ತನ್ನೆಲ್ಲ ಆಸ್ತಿ ಮಾರಿಕೊಂಡು ಗಂಡ ಮತ್ತು ಮಕ್ಕಳೊಂದಿಗೆ ಯುರೋಪ್‍ಗೆ ತೆರಳಿದಳು. 
ಯುರೋಪ್‍ನಿಂದ ಮರಳಿ ಬಂದ ಮೇಲೆ ಮಹಿಳೆಯರು ಸ್ವಾವಲಂಬಿಗಳಾಗಲು ಮತ್ತು ಚಿಕ್ಕ ಕುಟುಂಬ ಹೊಂದಲು ಬೇಕಾದ ಶಿಕ್ಷಣವನ್ನು ಬಡವರಿಗೆ ನೀಡಿದಳು. ಅದಕ್ಕಾಗಿ ಕ್ಲಿನಿಕ್ ತೆರೆದು ಬಡ ಜನರಿಗೆ ಆರೋಗ್ಯ ಶಿಕ್ಷಣ ನೀಡುತ್ತಾ ಜನನ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಿದಳು. ಇದು ಆ ಸಮಯದಲ್ಲಿ ಕಾನೂನಿಗೆ ವಿರುದ್ದವಾದುದು ಆಗಿತ್ತು. ಆ ಕಾರಣಕ್ಕಾಗಿ ಅವಳನ್ನು ಅನೇಕ ಬಾರಿ ಬಂಧಿಸಲಾಗಿತ್ತು. ಆದರೂ ಹಠಬಿಡದ ತ್ರಿವಿಕ್ರಮನಂತೆ ತನ್ನ ವಿಚಾರಗಳನ್ನು ಜನರಿಗೆ ತಿಳಿಸುತ್ತಾ ಪ್ರಪಂಚದ ನಾನಾ ಕಡೆಗಳಲ್ಲಿ ಪ್ರವಾಸ ಮಾಡುತ್ತಾ ಬಡಜನರಿಗೆ ಉಪದೇಶ ನೀಡಿದಳು. ನಂತರದ ದಿನಗಳಲ್ಲಿ ಅವಳು ಸಲ್ಲಿಸಿದ ಸೇವೆಯನ್ನು ಗಮನಿಸಿ ಪಾಲಕರ ಮೊದಲ ಅಧ್ಯಕ್ಷಿಣಿಯನ್ನಾಗಿ ಆಯ್ಕೆ ಮಾಡಲಾಯಿತು.

ಗ್ರೇಸ್ ಹೂಪರ್(1906-1992) : ಸಾಧನೆಗೆ ಅಂಗವೈಫಲ್ಯ ಕಾರಣವಲ್ಲ ಎಂಬುದನ್ನು ಸಾಧಿಸಿ ತೋರಿಸಿದ ಧೀಮಂತ ಮಹಿಳೆ  ಅಮೇರಿಕಾದ ಗ್ರೇಸ್ ಹೂಪರ್. ತಮ್ಮ ಮಗಳಿಗೆ ಅಂಗವೈಫಲ್ಯದ ಪರಿಣಾಮ ಕಿಂಚಿತ್ತೂ ಗೊತ್ತಾಗದ ರೀತಿಯಲ್ಲಿ ತಂದೆ-ತಾಯಿಗಳು ಅವಳನ್ನು ಬೆಳೆಸಿದರು. ತಾಯಿಯಿಂದ ಪ್ರೀತಿ ವಾತ್ಸಲ್ಯಗಳ ಜೊತೆಗೆ ಗಣಿತವನ್ನು ಹಾಗೂ ತಂದೆಯಿಂದ ಕಷ್ಟಗಳಿಂದ ಹೊರಬರುವ ಕೌಶಲ್ಯವನ್ನು ಕಲಿತಳು. ಅಂದಿನ ಕಾಲದಲ್ಲಿ ವಾಸ್ಸರ್ ಕಾಲೇಜ್ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡುತ್ತಿದ್ದ ಏಕೈಕ ಕಾಲೇಜ್ ಎಂದು ಪ್ರಸಿದ್ದವಾಗಿತ್ತು. ಆ ವಾಸ್ಸರ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿ ನಂತರ ಅಲ್ಲಿಯೇ ಗಣಿತ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದಳು.
ಪ್ರತಿಷ್ಟಿತ ಯಾಲೆ ವಿಶ್ವ ವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದಳು. ಪ್ರಪಂಚದ ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್ ನೌಕಾಪಡೆಗೆ ಸೇರಿದಳು. ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಾ ಹಾರ್ವರ್ಡ ವಿಶ್ವ ವಿದ್ಯಾಲಯದಲ್ಲಿ ಸಂಶೋಧನೆ ಮುಂದುವರೆಸಿದಳು. ಈ ಸಂಶೋಧನೆಯಿಂದ ಮೊದಲ ಪೀಳಿಗೆಯ ಕಂಪ್ಯೂಟರ್ ಅಭಿವೃದ್ದಿ ಪಡಿಸಿದಳು. ಮೊದಲ ಕಂಪ್ಯೂಡರ್ ಕಾರ್ಯ ತತ್ರಾಂಶ ರೂಪಿಸಿದವರಲ್ಲಿ ಗ್ರೇಸ್ ಮೊದಲಿಗಳು. ಪ್ರಾರಂಭದಲ್ಲಿ ಕಂಪ್ಯೂಟರ್ ಭಾಷೆ ಅತ್ಯಂತ ಸಂಕೀರ್ಣವಾಗಿತ್ತು. ಇದನ್ನು ಗಮನಿಸಿದ ಗ್ರೇಸ್ ಜನರು ಬಳಸಲು ಅನುಕೂಲಕರವಾದಂತಹ ಕಂಪ್ಯೂಟರ್ ರೂಪಿಸಬಯಸಿದಳು. ಡಾ//ಗ್ರೇಸ್ COBOL ಎಂಬ ಕಂಪ್ಯೂಟರ್ ತತ್ರಾಂಶ ಭಾಷೆ ಅಭಿವೃದ್ದಿ ಪಡಿಸಿದಳು. COBOL ಈಗಲೂ ಬಳಕೆಯಲ್ಲಿರುವ ಕಂಪ್ಯೂಟರ್ ತತ್ರಾಂಶ. ಅವಳ ಸಾಧನೆಗಾಗಿ ಯು.ಎಸ್ ವಿಶ್ವದ ನೌಕಾಪಡೆಯ ಮೊದಲ ಮಹಿಳಾ ಅಡ್ಮಿರಲ್ ಆಗಿ ನೇಮಿಸಿತು.

'ಟೀಚರ್' ಮಾರ್ಚ 2014
ಆರ್.ಬಿ.ಗುರುಬಸವರಾಜ. 

ಮಂಚೂಣಿಯಲ್ಲಿನ ಮಹಿಳಾ ಮಣಿಗಳು

ಮಂಚೂಣಿಯಲ್ಲಿನ ಮಹಿಳಾ ಮಣಿಗಳು

ಆತ್ಮೀಯರ ಆಹ್ವಾನದ ಮೇರೆಗೆ ತಾಲೂಕು ಮಟ್ಟದ ಬೋಧನೆ-ಕಲಿಕೋಪರಣಗಳ (ಟಿ.ಎಲ್.ಎಂ) ಮೇಳವೊಂದನ್ನು ವೀಕ್ಷಿಸಲು ಹೋಗಿದ್ದೆ. ಅಲ್ಲಿನ ಟಿ.ಎಲ್.ಎಂ.ಗಳು ನಿಜಕ್ಕೂ ಬಹಳ ಉತ್ತಮವಾಗಿದ್ದವು. ತಯಾರಿಸಿದ ಶಿಕ್ಷಕರು ಅತ್ಯಂತ ಕಾಳಜಿ ವಹಿಸಿ ಅವುಗಳನ್ನು ಜೋಡಿಸಿಟ್ಟಿದ್ದರು. ಅವುಗಳಲ್ಲಿ ಕೆಲವನ್ನು ತಾವೇ ಸ್ವತಃ ತಯಾರಿಸಿದ್ದರು. ಇನ್ನು ಕೆಲವನ್ನು ಬೇರೆಡೆಯಿಂದ ಸಂಗ್ರಹಿಸಿದ್ದರು. ಅವುಗಳನ್ನು ನೋಡಿದಾಗ ನಾವ್ಯಾಕೆ ವಿದ್ಯಾರ್ಥಿಗಳಾಗಬಾರದಿತ್ತು ಎಂದೆನಿಸಿತು.
ಅಮೂರ್ತ ಕಲ್ಪನೆಗಳನ್ನು ಮಕ್ಕಳಿಗೆ ಸುಲಭವಾಗಿ ಮೂರ್ತಗೊಳಿಸಲು ಟಿ.ಎಲ್.ಎಂ.ಗಳು ಬಹಳ ಪರಿಣಾಮಕಾರಿಯಾಗುತ್ತವೆ. ಶಿಕ್ಷಕರ ಶ್ರಮ ಕಡಿಮೆ ಮಾಡಿ ಮಕ್ಕಳ ಕಲಿಕೆ ಸರಳ, ಸುಗಮ, ಸಂತಸದಾಯಕ ಹಾಗೂ ಶಾಶ್ವತವಾಗಲು ಟಿ.ಎಲ್.ಎಂ.ಗಳು ಬಹಳ ಸಹಕಾರಿ.
ಈ ಪ್ರದರ್ಶನ ವೀಕ್ಷಿಸಿದ ನಂತರ ನನ್ನಲ್ಲಿ ಕೆಲವು ಪ್ರಶ್ನೆಗಳು ಉಧ್ಬವಿಸಿದವು. ಅವುಗಳಲ್ಲಿ ಮೊದಲನೆಯದು ಈ ಎಲ್ಲಾ ಟಿ.ಎಲ್.ಎಂ.ಗಳನ್ನು ತರಗತಿಯಲ್ಲಿ ಬಳಸಲು ಸಾಧ್ಯವೇ? ಎರಡನೆಯದು ನಿಜಕ್ಕೂ ಈ ಎಲ್ಲಾ ಟಿ.ಎಲ್.ಎಂ.ಗಳು ತರಗತಿಯಲ್ಲಿ ಬಳಕೆಯಾಗುತ್ತವೆಯಾ? ಈ ಎರಡೂ ಪ್ರಶ್ನೆಗಳು ನನ್ನನ್ನು ಗೊಂದಲಕ್ಕೀಡು ಮಾಡಿದವು.
ಮೊದಲನೆ ಪ್ರಶ್ನೆ ಕುರಿತು ವಿಶ್ಲೇಷಿಸುವುದಾದರೆ ಬಹುತೇಕ ಶಿಕ್ಷಕರು(ನನ್ನನ್ನೂ ಸೇರಿ) ಟಿ.ಎಲ್.ಎಂ.ಗಳನ್ನು ಬಳಸುತ್ತಿಲ್ಲ. ಇದಕ್ಕೆ ನಾವು ಹೇಳುವ ಕುಂಟು ನೆಪಗಳು ಅನೇಕ. ಅವೆಂದರೆ ಟಿ.ಎಲ್.ಎಂ.ಗಳ ಬಳಕೆಯಿಂದ ಪಾಠಗಳನ್ನು ನಿಗದಿತ ಅವಧಿಗೆ ಮುಗಿಸಲಾಗುವುದಿಲ್ಲ, ಬೇರೆ ಬೇರೆ ಕೆಲಸಗಳ ಒತ್ತಡದಿಂದ ಟಿ.ಎಲ್.ಎಂ.ಗಳನ್ನು ತಯಾರಿಸಲು ಆಗುತ್ತಿಲ್ಲ, ಎಷ್ಟೇ ಹೇಳಿದರೂ ಈ ಮಕ್ಕಳು ಕಲಿಯುವುದು ಅಷ್ಟಕಷ್ಟೇ. ಹೀಗೆ ನಾನಾ ಕಾರಣಗಳನ್ನು ಹೇಳುತ್ತೇವೆ.
ಎರಡನೇ ಪ್ರಶ್ನೆ ಕುರಿತು ವಿಶ್ಲೇಷಿಸುವುದಾದರೆ ಆ ಪ್ರದರ್ಶನದಲ್ಲಿದ್ದ ಬಹುತೇಕ ಟಿ.ಎಲ್.ಎಂ.ಗಳು ಕೇವಲ ಪ್ರದರ್ಶನಕ್ಕೆಂದು ತಯಾರಿಸಿದಂತಿದ್ದವು. ಹಾಗಾದರೆ ತರಗತಿಯಲ್ಲಿ ಬಳಸದೇ ಕೇವಲ ಪ್ರದರ್ಶನಕ್ಕೆಂದೋ ಅಥವಾ ಬೇರೆ ಯಾರಿಂದಲೋ ಶಭಾಷಗಿರಿ/ಪ್ರಶಸ್ತಿ ಗಿಟ್ಟಿಸುವುದಕ್ಕಾಗಿ ತಯಾರಿಸಿದ ಟಿ.ಎಲ್.ಎಂ.ಗಳು ನಿಜವಾದ ಟಿ.ಎಲ್.ಎಂ.ಗಳಾ? ಎಂಬುದು. 
ಆ ಪ್ರದರ್ಶನದ ಕೊನೆಗೆ ಇನ್ನೂ ಒಂದು ಮೋಜಿನ ಪ್ರಸಂಗ ನಡೆಯಿತು. ಅತ್ಯುತ್ತಮವಾದ ಟಿ.ಎಲ್.ಎಂ.ಗಳಿಗೆ ಪ್ರಥಮ ಸ್ಥಾನ ನೀಡಲಾಯಿತು. ಹೀಗೆ ಪ್ರಥಮ ಸ್ಥಾನ ಪಡೆದ ಶಿಕ್ಷಕರು ಟಿ.ಎಲ್.ಎಂ.ನಲ್ಲಿ ನಾನೇ ಫಸ್ಟ್ ಎಂದು ಹೇಳಿಕೊಳ್ಳುವ ಬದಲು ಎಲ್.ಟಿ.ಎಂ.(ಎಡಗೈ ಹೆಬ್ಬೆರಳು)ನಲ್ಲಿ ನಾನೇ ಫಸ್ಟ್ ಎಂದು ಹೇಳಿಕೊಂಡು ತಿರುಗಾಡಿದ್ದು ಆಯ್ಕೆ ಮಾಡಿದವರನ್ನು ಅಣಕಿಸುವಂತಿತ್ತು. ಹಾಗಾದರೆ ಟಿ.ಎಲ್.ಎಂ.ನ ಅರ್ಥ ಏನಾಯಿತು? ಸಿ.ಆರ್.ಸಿ, ಬಿ.ಆರ್.ಸಿ, ಡೈಯಟ್‍ಗಳು ಟಿ.ಎಲ್.ಎಂ. ತಯಾರಿಕೆ ಹಾಗೂ ಬಳಕೆ ಕುರಿತು ನಡೆಸಿದ ಕಾರ್ಯಾಗಾರಗಳ ಫಲವೇನಾಯಿತು? ಎಂಬ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು.
ರಾಜ್ಯದಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ(ಡಿ.ಪಿ.ಇ.ಪಿ) ಜಾರಿಗೆ ಬಂದ ನಂತರ ತರಗತಿಯಲ್ಲಿ ಚಟುವಟಿಕೆ ಆಧಾರಿತ ಬೋಧನೆ-ಕಲಿಕೆಗೆ ಒತ್ತು ನೀಡಲಾಯಿತು. ಅಂದಿನಿಂದ ಪಾಠೋಪಕರಣ ತಯಾರಿಕೆ ಮತ್ತು ಬಳಕೆಗಾಗಿ ಅನೇಕ ಹಂತದ ಕಾರ್ಯಾಗಾರಗಳು ನಡೆದವು. ಅದಕ್ಕಾಗಿ ಅನೇಕ ತರಬೇತಿ ಸಂಸ್ಥೆಗಳು ಹುಟ್ಟಿಕೊಂಡವು. ಇಷ್ಟೆಲ್ಲಾ ಆದಾಗ್ಯೂ ನಾವು ಟಿ.ಎಲ್.ಎಂ.ಗಳನ್ನು ಇನ್ನೂ ಮೀನಮೇಷ ಎಣಿಸುತ್ತಿದೇವೆ. 
ಪ್ರಾಥಮಿಕ ಶಾಲೆಗಳಲ್ಲಿ ಅದರಲ್ಲೂ ಕಿರಿಯ ಪ್ರಾಥಮಿಕ ತರಗತಿಗಳಲ್ಲಿ ಮೂಲ ಸಾಮಥ್ರ್ಯದ ಕಲ್ಪನೆ ಮೂಡಿಸಲು ಟಿ.ಎಲ್.ಎಂ.ಗಳ ಬಳಕೆ ತೀರಾ ಅವಶ್ಯಕತೆ ಇದೆ ಎಂಬುದರ ಅರಿವು ನಮಗಿದ್ದರೂ ನಾವ್ಯಾಕೆ ಟಿ.ಎಲ್.ಎಂ.ಗಳನ್ನು ಸರಿಯಾಗಿ ಬಳಸುತ್ತಿಲ್ಲ? ಟಿ.ಎಲ್.ಎಂ. ತಯಾರಿಸಲೆಂದೇ ಇಲಾಖೆ ನೀಡಿದ ಹಣ ಕೇವಲ ದಾಖಲೆಗಳಲ್ಲಿ ಮಾತ್ರ ಬಳಕೆಯಾಯಿತೇ? ಹಾಗಾದರೆ ನಾವು ಎಡವಿದ್ದೆಲ್ಲಿ? ವ್ಯವಸ್ಥೆಯ ಲೋಪವೇ? ಅಥವಾ ನಾವಿನ್ನೂ ಆ ವ್ಯವಸ್ಥೆಗೆ ಹೊಂದಿಕೊಳ್ಳದಿರುವುದೇ? ಇಂತಹ ಪ್ರಶ್ನೆಗಳಿಗೆ ನಾವಿನ್ನೂ ಸೂಕ್ತ ಉತ್ತರ ಕಂಡುಕೊಳ್ಳಬೇಕಾಗಿದೆ.
ಎಲ್ಲಾ ಶಿಕ್ಷಕರು ಟಿ.ಎಲ್.ಎಂ.ಬಳಸುತ್ತಿಲ್ಲ ಎಂದರೆ ತಪ್ಪಾಗುತ್ತದೆ. ಕೆಲವು ಉತ್ಸಾಹಿ ಶಿಕ್ಷಕರು ತರಗತಿ ಕೋಣೆಗೆ ತೆರಳುವ ಮುನ್ನ ಅಗತ್ಯವಿರುವ ಟಿ.ಎಲ್.ಎಂ.ಗಳನ್ನು ಪೂರ್ವಯೋಜನೆಯಂತೆ ತಯಾರಿಸಿಕೊಂಡು ಆಸಕ್ತಿಯಿಂದ ಬಳಸುತ್ತಾರೆ. ಆದರೆ ಟಿ.ಎಲ್.ಎಂ.ಗಳನ್ನು ಎಲ್ಲರೂ ಸರಿಯಾಗಿ ಬಳಸುವಂತಾದರೆ ನಮ್ಮ ಶಿಕ್ಷಣದ ಗುಣಮಟ್ಟವನ್ನು ಇನ್ನೂ ಹೆಚ್ಚಿಸಬಹುದಲ್ಲವೇ?

‘ಟೀಚರ್’ ಜನವರಿ 2009
ಆರ್.ಬಿ.ಗುರುಬಸವರಾಜ

ಶಿಕ್ಷಣ ಹಾಗೂ ಮಾನಸಿಕ ಒತ್ತಡ

ಶಿಕ್ಷಣ ಹಾಗೂ ಮಾನಸಿಕ ಒತ್ತಡ

ಶಿಕ್ಷಣವೆಂಬುದು ನಿಂತ ನೀರಲ್ಲ. ಅದು ಚಲನಶೀಲವಾದುದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಶಿಕ್ಷಣದಲ್ಲಾಗುವ ಬದಲಾವಣೆಗಳು ಹೊಸದೇನಲ್ಲ. ಇಂದು ಹೊಸತೆನಿಸಿದ ವಿಷಯಗಳು ನಾಳೆ ಹಳತಾಗಬಹುದು. ಹೊಸ ಪದ್ದತಿ ಜಾರಿಗೆ ಬಂದಾಗ ಅದಕ್ಕೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಕಷ್ಟವಾದರೂ, ನಷ್ಟವಾದರೂ ಅದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾದಾಗ, ಹೊಂದಿಕೊಳ್ಳಬೇಕಾದವರು ಮಾನಸಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಹಳೆಯದನ್ನು ಕೈ ಬಿಡದೇ ಹೊಸದನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೇ, ಯಾವುದು ಹಿತ, ಯಾವುದು ಅಹಿತ ಎಂಬುದನ್ನು ವಿವೇಚಿಸದೇ ಡೋಲಾಯಮಾನ ಪರಿಸ್ಥಿತಿ ಏರ್ಪಟ್ಟು ಮಾನಸಿಕ ಒತ್ತಡ ಪ್ರಾರಂಭವಾಗುತ್ತದೆ.

ಈ ಮಾನಸಿಕ ಒತ್ತಡ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಕಟವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿನ ಎಲ್ಲರೂ ಅಂದರೆ ಸರ್ಕಾರ, ಅಧಿಕಾರಿ ವರ್ಗ, ಶಿಕ್ಷಕರು, ವಿದ್ಯಾರ್ಥಿಗಳು, ಸಮುದಾಯ ಹೀಗೆ ವಿವಿಧ ಹಂತಗಳಲ್ಲಿ ಇರುವವರೆಲ್ಲರನ್ನೂ ಮಾನಸಿಕ ಒತ್ತಡ ಕಾಡತೊಡಗುತ್ತದೆ.

ಎಲ್ಲರಿಗೂ ಶಿಕ್ಷಣ ಒದಗಿಸುವ, ಶಿಕ್ಷಣ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ಈ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ, ಶಿಕ್ಷಣಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಗೆ ಕನಿಷ್ಟ ಅವಶ್ಯಕತೆ ಪೂರೈಸುವಲ್ಲಿ, ಶಿಕ್ಷಣ ಕ್ಷೇತ್ರದಲ್ಲಾಗುವ ದೋಷಗಳನ್ನು ಸರಿಪಡಿಸುವಲ್ಲಿ ಸರ್ಕಾರಕ್ಕೆ ಅನೇಕ ಸವಾಲುಗಳು ಎದುರಾಗಿ ಸರ್ಕಾರ ನಡೆಸುವವರಿಗೆ ಮಾನಸಿಕ ಒತ್ತಡ ಏರ್ಪಡುತ್ತದೆ.

ಇನ್ನು ಅಧಿಕಾರಿ ವರ್ಗದಲ್ಲಂತೂ ಮಾನಸಿಕ ಒತ್ತಡ ತನ್ನ ಸಾಮ್ರಾಜ್ಯವನ್ನೇ ಸ್ಥಾಪಿಸಿಕೊಂಡಿರುತ್ತದೆ. ಸರ್ಕಾರಗಳು ಬದಲಾದಂತೆ ಶಿಕ್ಷಣ ಕ್ಷೇತ್ರದಲ್ಲಾಗುವ ಬದಲಾವಣೆಗಳನ್ನು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಲುಪಿಸುವಾಗ ಅನೇಕ ಸಮಸ್ಯೆಗಳು ಎದುರಾಗಿ ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಸಮುದಾಯ ಮತ್ತು ಶಾಲೆಗಳ ನಡುವೆ ಉಂಟಾಗುವ ಕೆಲವು ಸಮಸ್ಯೆಗಳನ್ನು ಬಗೆಹರಿಸುವಾಗ ಅಧಿಕಾರಿ ವರ್ಗದವರ ಪಾಡು ಹೇಳತೀರದು. ಸಮುದಾಯದ ಬೇಡಿಕೆ ಈಡೇರಿಸುವಲ್ಲಿ, ಶಿಕ್ಷಣ ಪದ್ದತಿಗಳನ್ನು ಜಾರಿಗೊಳಿಸುವಲ್ಲಿ, ಸರ್ಕಾರದ ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಉಂಟಾಗುವ ಸಮಸ್ಯೆಗಳನ್ನು ಬಗೆ ಹರಿಸುವಾಗ ಅಧಿಕಾರಿಗಳು ಮಾನಸಿಕ ಸಂಘರ್ಷಕ್ಕೆ ಒಳಗಾಗುತ್ತಾರೆ. ಇನ್ನು ಕೈ ಕೆಳಗಿನ ನೌಕರರ ಮೇಲಿನ ಅಭಿಮಾನಕ್ಕೊ, ಮಮಕಾರಕ್ಕೊ ಅಥವಾ ಅವರ ಮೇಲೆ ತೋರುವ ಕರುಣೆ ಕನಿಕರಗಳಿಂದಲೂ ಸಹ ಅಧಿಕಾರಿ ವರ್ಗ ಕೆಲವೊಮ್ಮೆ ತೊಳಲಾಟದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ. ಹಾಗೂ ಮೇಲಾಧಿಕಾರಿಗಳಿಂದ ಕಾರ್ಯ ಒತ್ತಡ ಬಂದಾಗಲೂ ಸಹ ಮಾನಸಿಕ ಒತ್ತೆಕ್ಕೊಳಗಾಗುತ್ತಾರೆ.

ಶಿಕ್ಷಣ ಕ್ಷೇತ್ರದ ಸಾಧಕ ಸೈನಿಕರಾದ ಶಿಕ್ಷಕರ ಮೇಲಂತೂ ಮಾನಸಿಕ ಒತ್ತಡ ತನ್ನ ಅಟ್ಟಹಾಸವನ್ನೇ ಬೀರಿದೆ. ಪ್ರತಿಯೊಂದು ಹೊಸ ಯೋಜನೆಗಳನ್ನು, ಪದ್ದತಿಗಳನ್ನು ಜಾರಿಗೊಳಿಸಬೇಕಾಗಿರುವುದು ಶಿಕ್ಷಕರ ಆದ್ಯ ಕರ್ತವ್ಯ. ಈ ಕರ್ತವ್ಯವನ್ನು ನಿಭಾಯಿವಲ್ಲಿ ಅನೇಕ ತೊಂದರೆ ಅಥವಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗದ ಸ್ಥಿತಿ ತಲುಪಿದಾಗ ಶಿಕ್ಷಕರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಒಂದೆಡೆ ಅಧಿಕಾರಿ ವರ್ಗ, ಇನ್ನೊಂದೆಡೆ ಸಮುದಾಯ, ಮತ್ತೊಂದೆಡೆ ವಿದ್ಯಾರ್ಥಿಗಳು, ಮಗದೊಂದೆಡೆ ಸರ್ಕಾರದ ಯೋಜನೆಗಳು, ಇವುಗಳೆಲ್ಲವುಗಳಿಗೂ ಹೊಂದಿಕೊಂಡು ಕಾರ್ಯ ನಿರ್ವಹಿಸುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯ. ಈ ಎಲ್ಲದರ ಮಧ್ಯವರ್ತಿಯಾದ ಶಿಕ್ಷಕನ ಪಾಡು ಜೇಡನ ಬಲೆಗೆ ಸಿಕ್ಕಿಕೊಂಡ ನೊಣದಂತಾಗಿರುತ್ತದೆ. ಎಲ್ಲದರಲ್ಲೂ ಸಾಮರಸ್ಯ ಮಾಡಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯುವುದು ತುಂಬಾ ತ್ರಾಸದಾಯಕ ಕೆಲಸ. ಈ ಎಲ್ಲಾ ಕಾರಣಗಳಲ್ಲದೇ ಶಿಕ್ಷಕನ ವೈಯಕ್ತಿಕ ಜೀವನದಿಂದಲೂ ಸಹ ಮಾನಸಿಕ ನೆಮ್ಮದಿ ಹಾಳಾಗುತ್ತದೆ.

ಈ ಮಾನಸಿಕ ಒತ್ತಡ ಸಮುದಾಯ ಮತ್ತು ವಿದ್ಯಾರ್ಥಿಗಳನ್ನೂ ಬಿಟ್ಟಿಲ್ಲ. ದಿನದಿನಕ್ಕೂ ಬದಲಾಗುತ್ತಿರುವ ಶಿಕ್ಷಣದ ವಿದ್ಯಮಾನಗಳು, ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳು ನಾನಾ ಕಾರಣಗಳಿಂದ ಸರಿಯಾಗಿ ಮಕ್ಕಳಿಗೆ ತಲುಪದೇ ಇರುವುದು, ಸ್ಥಳೀಯ ಬೇಡಿಕೆಗಳನ್ನು ಸರ್ಕಾರವಾಗಲೀ ಅಧಿಕಾರಿಗಳಾಗಲೀ ಈಡೇರಿಸದೇ ಇರುವುದು ಹೀಗೆ ಅನೇಕ ಕಾರಣಗಳಿಂದ ಸಮುದಾಯ ಮಾನಸಿಕ ಒತ್ತಡಕ್ಕೊಳಗಾಗುತ್ತದೆ. ಶಾಲೆಯಲ್ಲಿ ಶಿಕ್ಷಕರ ಕೊರತೆ, ಮೂಲಭೂತ ಸೌಲಭ್ಯಗಳ ಕೊರತೆ, ಪಾಲಕರ ನಿರಾಸಕ್ತಿ, ಬಡತನ, ಕಡಿಮೆ ಬೌದ್ದಿಕ ಮಟ್ಟ, ಕಲಿಕೆಯಲ್ಲಿ ನಿರಾಸಕ್ತಿ, ಕೀಳರಿಮೆ, ಹಿಂಜರಿಕೆ, ಭಯ, ಆತಂಕ ಹೀಗೆ ಅನೇಕ ಕಾರಣಗಳಿಂದ ವಿದ್ಯಾರ್ಥಿಗಳು ಮಾನಸಿಕ ತೊಳಲಾಟದಲ್ಲಿ ತೇಲಾಡುತ್ತಾರೆ.
ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ಮೇಲಿನಿಂದ ಕೆಳಗಿನ ಹಂತದವರೆಗಿನ ಎಲ್ಲಾ ವರ್ಗದವರೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಭಾವನಾ ಜೀವಿಗಳಲ್ಲಿ ಇದರ ತೀವ್ರತೆ ಇನ್ನೂ ಹೆಚ್ಚಾಗಿರುತ್ತದೆ. ಇದರಿಂದ ಶಿಕ್ಷಣ ಕ್ಷೇತ್ರ ವಾಗವಾಗಿ ಮುಂದುವರೆಯದೇ ನಿಧಾನಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ.

ಎಲ್ಲಾ ಹಂತದವರಿಗೂ ಮಾನಸಿಕ ಒತ್ತಡ ಉಂಟಾಗಲು ಕಾರಣವೇನೆಂದರೆ ಪ್ರತಿಯೊಂದು ಯೋಜನೆಯ ತಯಾರಿಕೆಯಲ್ಲಿ ಆಯಾ ಹಂತದ ಪರಿಣಿತರನ್ನು, ಅನುಭವಿಗಳನ್ನು ಸೇರಿಸಿಕೊಂಡು ಯೋಜನೆ ತಯಾರಿಸದೇ ಇರುವುದು, ಗ್ರಾಮೀಣ ಭಾಗದವರಿಗೆ ಹೆಚ್ಚು ಒತ್ತು ಕೊಡದೇ ಇರುವುದು ಹಾಗೂ ಪ್ರತಿಯೊಬ್ಬರೂ ತಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸದೇ ಇರುವುದರಿಂದ ಮಾನಸಿಕ ಒತ್ತಡದಲ್ಲಿ ಸಿಲುಕುತ್ತಿರುವುದು ಕಂಡು ಬರುತ್ತದೆ. ಇದರಿಂದಾಗಿ ಗುಣಾತ್ಮಕವಾದ ಹಾಗೂ ಪ್ರಮಾಣಾತ್ಮಕವಾದ ಶಿಕ್ಷಣ ಇಂದು ಎಲ್ಲರಿಗೂ ದೊರೆಯದಂತಾಗಿದೆ. ಆದ್ದರಿಂದ ಎಲ್ಲರೂ ಅವರವರ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿ ಮಾನಸಿಕ ಒತ್ತಡ ರಹಿತ ಸಮಾಜಕ್ಕೆ ನಾಂದಿ ಹಾಡೋಣವೇ?

‘ಟೀಚರ್’ ಸೆಪ್ಟಂಬರ್ 2005
ಆರ್.ಬಿ.ಗುರುಬಸವರಾಜ

April 19, 2014

ಪೇಪರ್ ಕಟಿಂಗ್ಸ್ ಗಳೇ ಕಲಿಕಾ ಸಾಧನಗಳಾದರೆ.......!

ಪೇಪರ್ ಕಟಿಂಗ್ಸ್ ಗಳೇ ಕಲಿಕಾ ಸಾಧನಗಳಾದರೆ.......!
ದಿನಪತ್ರಿಕೆಗಳನ್ನು ಓದುವ ಹವ್ಯಾಸ ಉಳ್ಳವರಿಗೆ ಪತ್ರಿಕೆ ಬೇಗನೇ ಬರದಿದ್ದರೆ ಏನೋ ಕಳೆದುಕೊಂಡಂತೆ ಆಗುತ್ತದೆ. ವಿಚಾರಗಳನ್ನು ಜೀವಂತವಾಗಿಡಲು ಮತ್ತು ಜನರ ತಿಳುವಳಿಕೆಯ ಮಟ್ಟವನ್ನು ಎತ್ತಿ ಹಿಡಿಯಲು ವೃತ್ತಪತ್ರಿಕೆ ಒಂದು ದೊಡ್ಡ ಸಾಧನ. ಹಾಗಾಗಿ ಪತ್ರಿಕೆಯನ್ನೊಮ್ಮೆ ಓದಿದಾಗಲೇ ಸಮಾದಾನ. ಮರುದಿನ ಆ ವೃತ್ತಪತ್ರಿಕೆ ಹಳಸಲಾಗಿ ಮೂಲೆಗುಂಪಾಗುತ್ತದೆ. ಅಂದರೆ ವೃತ್ತಪತ್ರಿಕೆಗೆ ಜೀವ ಇರುವುದು ಒಂದೇ ಒಂದು ಮಾತ್ರ. ಆದರೆ ಅದೇ ಪತ್ರಿಕೆಯನ್ನು ಬಹಳ ದಿನಗಳವರೆಗೆ ಜೀವಂತವಾಗಿ ಇಡುವಂತಾದರೆ ಹೇಗೆ? ಅದರಲ್ಲಿನ ವಿಚಾರಗಳನ್ನು, ಜ್ಞಾನವನ್ನು, ಮೌಲ್ಯಗಳನ್ನು ಪದೇ ಪದೇ ಬಳಸಲು ಬರುವಂತಿದ್ದರೆ ಒಳಿತಲ್ಲವೇ? ಹೌದು ಅದು ಎಂದೆಂದಿಗೂ ಮರೆಯದ ಪತ್ರಿಕೆಯಾಗಿ ಜ್ಞಾನವನ್ನು ವೃದ್ದಿಸುತ್ತ ಇರುತ್ತದೆ. ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದವರು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಮರಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ದೇವರಾಜ ಅವರು. 
ಮಾಡಿದ್ದಾದರೂ ಏನು? : ದಿನ ಪತ್ರಿಕೆಗಳನ್ನು ಓದಿದ ನಂತರ ಬಿಸಾಡದೇ ಅದರಲ್ಲಿನ ಪ್ರಮುಖ ಅಂಕಣ ಬರಹಗಳನ್ನು, ಪ್ರಮುಖ ಸುದ್ದಿಗಳನ್ನು ಕತ್ತರಿಸಿ ಒಂದೆಡೆ ಇಟ್ಟುಕೊಳ್ಳುತ್ತಾರೆ. ಉದಾಹರಣೆಗೆ ಸಂಗತ, ಕೃಷಿವಿಶೇಷ, ಶಿಕ್ಷಣ, ವಿಜ್ಞಾನ ವಿಶೇಷ, ಕರ್ನಾಟಕ ದರ್ಶನ, ಮಿನುಗು ಮಿಂಚು, ಒಂಚೂರು, ಪುಟ್ಟಿ, ರಾಮನ್, ವಾರದ ವಿನೋದ, ಪದಬಂಧ, ಹೀಗೆ ವಿವಿಧ ಅಂಕಣ ಬರಹಗಳಲ್ಲದೇ ಪ್ರಮುಖ ತಲೆಬರಹಗಳ ಲೇಖನ, ಸುದ್ದಿಗಳನ್ನು ಚಿತ್ರ ಸಹಿತ ಕತ್ತರಿಸಿ ಇಟ್ಟುಕೊಳ್ಳುತ್ತಾರೆ.
ಕತ್ತರಿಸಿದ ಪತ್ರಿಕಾ ತುಣುಕುಗಳನ್ನು ಅಂಕಣವಾರು ವಿಷಯವಾರು ವಿಂಗಂಡಿಸಿ ಸೂಕ್ತವಾದ ಕಾಗದಕ್ಕೆ ಅಂಟಿಸುತ್ತಾರೆ. 40-50 ಪುಟಗಳ ಕಾಗದಗಳು ಸಂಗ್ರಹವಾದ ನಂತರ ಪಿನ್ ಹಾಕಿ ಬೈಂಡ್ ಮಾಡುತ್ತಾರೆ. ಹೀಗೆ ಒಟ್ಟು 86 ತಲೆಬರಹಗಳಡಿ 175ಕ್ಕೂ ಹೆಚ್ಚು ಪುಸ್ತಕಗಳನ್ನು ತಯಾರಿಸಿದ್ದಾರೆ. ಇವುಗಳಲ್ಲಿ ಬಹುಪಾಲು ‘ಪ್ರಜಾವಾಣಿ’ ಪತ್ರಿಕೆಯ ತುಣುಕುಗಳಾಗಿವೆ. 
ಇದು ಕೇವಲ ಒಂದುದಿನ ಒಂದುವಾರ ಅಥವಾ ಒಂದು ತಿಂಗಳಲ್ಲಿ ಸಂಗ್ರಹಿಸಿದ ಕಾರ್ಯವಲ್ಲ. ಸುಮಾರು ಆರೆಂಟು ವರ್ಷಗಳಿಂದ ಅನೂಚಾನವಾಗಿ ಶ್ರಮವಹಿಸಿ ಪುಸ್ತಕಗಳ ರೂಪದಲ್ಲಿ ಸಂಗ್ರಹಿಸಿಕೊಂಡು ಬಂದಿದ್ದಾರೆ. ಒಂದೊಂದು ಪುಸ್ತಕ ಒಂದೊಂದು ವಿಶ್ವಕೊಶದಂತೆ ಮಾಹಿತಿಯ ಆಗರಗಳೇ ಆಗಿವೆ. 
ಬಳಕೆ ಹೀಗೆ : ಈ ಸಂಗ್ರಹ ಕೇವಲ ಹವ್ಯಾಸಕ್ಕಾಗಿ ಅಲ್ಲ. ಕಲಿಕಾಂಶಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗುತ್ತದೆ. ಇದರಿಂದ ಕಲಿಕೆ ಸಂತಸದಾಯಕ ಹಾಗೂ ವೈವಿಧ್ಯಮಯವಾಗಿ ಇರುತ್ತದೆ ಎಂಬುದು ದೇವರಾಜ ಅವರ ಅನಿಸಿಕೆ. ಪತ್ರಿಕೆಯ ಕೆಲವು ತುಣುಕುಗಳನ್ನು ಮಕ್ಕಳೂ ಸಂಗ್ರಹಿಸುವುದರಿಂದ ಅವರಿಗೆ ಕಲಿಕೆ ಸುಗಮ ಹಾಗೂ ಸರಳವಾಗುತ್ತದೆ. ಮಕ್ಕಳಲ್ಲಿ ಜ್ಞಾನ ಸಂಗ್ರಹದ ಅರಿವನ್ನು ಈಗಿನಿಂದಲೇ ಬೆಳೆಸುವ ಆಶಯ ಇವರದು. 
ಶೈಕ್ಷಣಿಕ ಮೌಲ್ಯ : ಶಿಕ್ಷಕ ಸೃಜನಶೀಲನಾಗಿದ್ದರೆ ಎಂತಹ ರಚನಾತ್ಮಕ ಕಾರ್ಯವನ್ನಾದರೂ ಮಾಡಬಹುದು ಎಂಬುದಕ್ಕೆ ದೇವರಾಜ ಮಾದರಿಯಾಗುತ್ತಾರೆ. ಅದು ಅವರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ವಿರಾಮ ವೇಳೆಯ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಶ್ರಮವಹಿಸಿ ಸೃಜನಾತ್ಮಕತೆಯಲ್ಲಿ ತೊಡಗಿರುವುದು ಗೋಚರಿಸುತ್ತದೆ. ಶಿಕ್ಷಕರಲ್ಲಿ ಬೆಳೆಯಬೇಕಾಗುರುವುದು ಇಂತಹ ಮೌಲ್ಯಗಳಲ್ಲವೇ?
ಅಚ್ಚುಟ್ಟುತನ : ಇವರು ತಯಾರಿಸಿದ ಪುಸ್ತಕಗಳಲ್ಲಿ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಕತ್ತರಿಸಿದ ಪತ್ರಿಕಾ ತುಣುಕುಗಳನ್ನು ಸಮಗಾತ್ರದ ಹಾಳೆಗಳಿಗೆ ಅಂದವಾಗಿ ಅಂಟಿಸಿ ಪುಸ್ತಕಗಳನ್ನು ತಯಾರಿಸಿದ್ದಾರೆ. ಸೂಕ್ತವಾದ ತಲೆಬರಹಗಳನ್ನು ಸ್ಪುಟವಾಗಿ ಬರೆದಿರುವುದು ನೋಡುಗರನ್ನು/ಓದುಗರನ್ನು ಆಕರ್ಷಿಸುತ್ತದೆ. 
ಎಲೆ ಮರೆಯ ಕಾಯಿ : ಇದನ್ನೆಲ್ಲಾ ಮಾಡಿದ್ದು ಯಾರೋ ಮೆಚ್ಚಲಿ ಅಥವಾ ಪ್ರಶಸ್ತಿ ನೀಡಲಿ ಎಂದಲ್ಲ. ಪಾಠಕ್ಕೆ ಪೂರಕವಾಗಿ ಬಳಕೆಯಾಗುವುದರಿಂದ ಮಕ್ಕಳು ಹೆಚ್ಚು ಖುಷಿ ಪಡುತ್ತಾರೆ. ಇದರಿಂದ ಸಂತೃಪ್ತಿ ನೆಮ್ಮದಿ ದೊರೆಯುತ್ತದೆ. ಇವುಗಳು ಕ್ಲಸ್ಟರ್ ಹಾಗೂ ತಾಲೂಕ ಹಂತದ ಕಲಿಕೋಪಕರಣ ಮೇಳದಲ್ಲಿ ಪ್ರದರ್ಶಿತವಾಗಿವೆ. ಕೆಲವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಕೆಲವರು ಉದಾಸೀನ ಮಾಡಿದ್ದಾರೆ. ಇದನ್ನು ಯಾವುದೇ ಪ್ರಚಾರಕ್ಕಾಗಲೀ ಪ್ರಖ್ಯಾತಿಗಾಗಲೀ ಮಾಡಿಲ್ಲ ಎನ್ನುವ ಅವರ ಆಂತರ್ಯದ ಮಾತುಗಳು ಅವರ ಸಹೃದಯತೆಯನ್ನು ತೋರಿಸುತ್ತದೆ. 
ಷೋಕೇಸ್ ಆಗಲಿ! : ಇಂತಹ ಅದೆಷ್ಟೋ ಸಾಧಕ ಶಿಕ್ಷಕರು ಯಾವುದೇ ಪ್ರತಿಷ್ಠೆ ಪ್ರತಿಫಲ ಬಯಸದೇ ತಮ್ಮಷ್ಟಕ್ಕೆ ತಾವೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಇಂತಹ ಶಿಕ್ಷಕರ ಸಾಧನೆಯನ್ನು ಇಲಾಖೆ ಗುರುತಿಸಿ ಅವರ ಕಾರ್ಯವನ್ನು ಷೋಕೇಸ್ ಮಾಡಬೇಕು. ಅದು ಇತರರಿಗೂ ಮಾದರಿಯಾಗುತ್ತದೆ ಅಲ್ಲವೇ?

'ಟೀಚರ್' ಏಪ್ರಿಲ್ 2014
- ಆರ್.ಬಿ.ಗುರುಬಸವರಾಜ. 

ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ

ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ

ಆಡಿ,,, ಬಾ,,,, ನನ ಕಂದ

ಅಂಗಾಲ ತೊಳೆದೇನಾ

ತೆಂಗಿನ ಕಾಯಿ ತಿಳಿನೀರ.../ ತೆಂಗಿನ ಕಾಯಿ ತಿಳಿನೀರ

ತಕ್ಕೊಂಡು ಬಂಗಾರದ ಮುಖವ ತೊಳೆದೇನ.......

ಎಂಬ ಹಾಡನ್ನು ನಾವು ಚಿಕ್ಕವರಾಗಿದ್ದಾಗ ನಮ್ಮ ತಮ್ಮ-ತಂಗಿಯರನ್ನು ಮಲಗಿಸುವಾಗ ಕೇಳಿಸಿಕೊಂಡ ನೆನಪು. ಆದರೆ ಇಂದಿನ ಯಾಂತ್ರಿಕ ಜೀವನದಲ್ಲಿ ನಮ್ಮ ತಾಯಂದಿರಿಗೆ ಮಕ್ಕಳನ್ನು ಜೋಗುಳ ಹಾಡಿ ತೂಗಿ ಮಲಗಿಸಲು ಪುರುಸೊತ್ತೆಲ್ಲಿದೆ? ಅಂದಿನ ದಿನಗಳ ಮಧುರ ನೆನಪುಗಳೆಲ್ಲವೂ ‘ಕಾಲಾಯ ತಸೈನಮಃ’ ಎಂಬಂತೆ ಕಾಲಗರ್ಭದಲ್ಲಿ ಹುದುಗಿ ಹೋಗಿವೆ.

ಅಂದಿನ ತಂದೆ ತಾಯಿಗಳು ಮಕ್ಕಳ ಲಾಲನೆ ಪಾಲನೆ ಆರೋಗ್ಯದ ಬಗೆಗಿನ ಕಾಳಜಿ, ಮಕ್ಕಳ ಇಷ್ಟಾರ್ಥಗಳನ್ನು ತಿಳಿದುಕೊಳ್ಳುವ ಹಾಗೂ ಅವರ ಭಾವನೆಗಳಿಗೆ ಸ್ಪಂದಿಸುವ ರೀತಿ ಮಕ್ಕಳಿಗೆ ಅಪ್ಯಾಯಮಾನವೆನಿಸುತ್ತಿತ್ತು. ಆದರೆ ಇಂದಿನ ಜಂಜಡದ ಜೀವನದಲ್ಲಿ ಮಕ್ಕಳ ಭಾವನೆಗಳಿಗೆ ಸ್ಪಂದಿಸುವ ತಂದೆ ತಾಯಿಗಳ ಸಂಖ್ಯೆ ತೀರಾ ಇಳಿಮುಖವಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಮಕ್ಕಳ ಭಾವನೆಗಳಿಗೆ ಸ್ಪಂದಿಸುವುದಿರಲಿ ಅವರನ್ನು ಮಾತನಾಡಿಸದಷ್ಟೂ, ಅವರ ಇಷ್ಟ-ಕಷ್ಟಗಳನ್ನು ಆಲಿಸಲಾರದಷ್ಟೂ ವ್ಯವಧಾನವನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ.

ಪತಿ-ಪತ್ನಿಯರಿಬ್ಬರೂ ದುಡಿಮೆಯಲ್ಲಿ ತೊಡಗಿದ್ದರಂತೂ ಅವರ ಮಕ್ಕಳಿಗೆ ಆಯಾಳೆ ತಂದೆ-ತಾಯಿ, ಗುರು ಎಲ್ಲವೂ ಆಗಿರುತ್ತಾಳೆ. ಅಂತಹ ಮಕ್ಕಳಿಗೆ ಎಲ್ಲಾ ಸೌಲಭ್ಯಗಳು ಇರುತ್ತವಾದರೂ ಅವರು ತಂದೆ-ತಾಯಿಗಳ ಪ್ರೀತಿ ವಾತ್ಸಲ್ಯಗಳಿಂದ ವಂಚಿತರಾಗಿ, ವಿವೇಚನಾ ರಹಿತ ಜೀವನಕ್ಕೆ ಹೊಂದಿಕೊಂಡು ಲೋಕ ಕಂಠಕರಾಗುವ ಸಾಧ್ಯತೆ ಹೆಚ್ಚು. ಕೇವಲ ಹಣ ಗಳಿಕೆಯನ್ನೇ ಪ್ರಧಾನ ಗುರಿಯಾಗಿಸಿಕೊಂಡ ನಾವಿಂದು ನಮ್ಮ ಮುಖ್ಯ ಆಸ್ತಿಗಳಾದ ಮಕ್ಕಳನ್ನು ಕಡೆಗಣಿಸಿ ಅವರ ಜೀವನವನ್ನು ನರಕ ಕೂಪವಾಗಿಸುತ್ತಿದೇವೆ.

ನಗರ ಜೀವನದಲ್ಲಿ ದುಡಿಯುವ ತಂದೆ-ತಾಯಿಗಳ ಮಕ್ಕಳ ಕಥೆ ಒಂದು ರೀತಿಯಾದರೆ ಗ್ರಾಮೀಣ ಪ್ರದೇಶದಲ್ಲಿನ ಆರ್ಥಿಕವಾಗಿ ಹಿಂದುಳಿದ ತಂದೆ-ತಾಯಂದಿರ ಮಕ್ಕಳ ವ್ಯಥೆ ಇನ್ನೊಂದು ರೀತಿಯದು. ತಮ್ಮ ಮಕ್ಕಳ ಬಗ್ಗೆ ಕಾಳಜಿಯೇ ಇಲ್ಲದ, ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಮಕ್ಕಳನ್ನೇ ಬಲಿಪಶು ಮಾಡುತ್ತಿರುವ ಪೋಷಕರಿಗೇನೂ ನಮ್ಮಲ್ಲಿ ಬರವಿಲ್ಲ. ಅವರು ತಮ್ಮ ಮಕ್ಕಳ ಕನಿಷ್ಠ ಅವಶ್ಯಕತೆಗಳಾದ ಅನ್ನ, ಅರಿವೆ, ಆರೋಗ್ಯ ಮುಂತಾದವುಗಳನ್ನು ವ್ಯವಸ್ಥೆಗೊಳಿಸಲಾರದ ಸ್ಥಿತಿಯಲ್ಲಿರುವಾಗ, ಮಕ್ಕಳ ಶಿಕ್ಷಣದ ಬಗ್ಗೆ, ಅವರ ಬೇಕು ಬೇಡಗಳ ಬಗ್ಗೆ, ಚಿಂತಿಸಲಾರದಷ್ಟು ಹೀನ ಸ್ಥಿತಿಯಲ್ಲಿದ್ದಾರೆ. ಇಂತಹ ಮಕ್ಕಳ ಸ್ಥಿತಿಗತಿ ನೋಡಿದರೆ ‘ಕೊಟಗಾನಹಳ್ಳಿ ರಾಮಯ್ಯ’ನವರು ಮಕ್ಕಳನ್ನು ಕುರಿತು ಬರೆದ

ಹಳ್ಳಿಗಾಡ ಹಸುಗೂಸೆ......

ಹಸು ಕಾಯೋ ಧೀರ ಬಾಲನೇ

ಶಾಲೆ ಮರೆತು ದಿನವೆಷ್ಟಾಯಿತೋ

ಓ ಹಾಲಿಗೆನ್ನೆಯಾ ಜೀತಗಾರ

ಜೀತ ಸೇರಿ ದಿನವೆಷ್ಟಾಯಿತೋ// ಎಂಬ ಕವನದ ಸಾಲುಗಳು ನೆನಪಾಗುತ್ತವೆ. ಹೌದು, ನಿಜಕ್ಕೂ ಗ್ರಾಮೀಣ ಪರಿಸರದಲ್ಲಿರುವ ಎಷ್ಟೋ ಮಕ್ಕಳ ಪರಿಸ್ಥಿತಿ ಇನ್ನೂ ಗಂಭಿರವಾಗಿಯೇ ಇದೆ. ಇಂತಹ ಮಕ್ಕಳ ಪರಿಸ್ಥಿತಿ ನಿವಾರಿಸುವುದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತದೆ. ಆದರೆ ಈ ಯೋಜನೆಗಳು ಯಾರನ್ನು ತಲುಪಬೇಕಾಗಿತ್ತೋ, ಹೇಗೆ ತಲುಪಬೇಕಾಗಿತ್ತೋ ಹಾಗೆ ಅವರನ್ನು ತಲುಪುತ್ತಿಲ್ಲ. ಕೇವಲ ದಾಖಲೆಗಳಲ್ಲಿ ಮಾತ್ರ ಪ್ರಗತಿಯಾಗಿದೆಯೇ ಹೊರತು ನಿಜ ಸ್ಥಿತಿಯಲ್ಲಿ ಅಲ್ಲ.

ಕೆಲವು ಬುದ್ದಿ ಜೀವಿಗಳು, ವಿಚಾರ ವಾದಿಗಳು, ಪ್ರಜ್ಞಾವಂತರು, ಸಮಾಜ ಸೇವಕರು, ಸಂಘಟನೆಗಳು ನವೆಂಬರ್ ಬಂತೆಂದರೆ ಪ್ರಮುಖವಾಗಿ ಎರಡು ವಿಷಯಗಳ ಬಗ್ಗೆ ತಮ್ಮ ವಿಚಾರಗಳನ್ನು ಹರಿಯಬಿಡುತ್ತಾರೆ. ಒಂದು ಕರ್ನಾಟಕದಲ್ಲಿ ಕನ್ನಡದ ಸ್ಥಿತಿ-ಗತಿ, ಅದರ ರಕ್ಷಣೆ ಕುರಿತಾದದ್ದು, ಇನ್ನೊಂದು ಮಕ್ಕಳನ್ನು ಕುರಿತಾದದ್ದು. ಮಕ್ಕಳ ದಿನಾಚರಣೆಯ ನೆಪದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿ, ಕೆಲವು ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ನೀಡಿ, ನಾಲ್ಕಾರು ಮೆಚ್ಚುಗೆಯ ಮಾತುಗಳನ್ನಾಡಿ ಪುನಃ ಮತ್ತದೇ ಯಾಂತ್ರಿಕ ಜೀವನಕ್ಕೆ ಒಗ್ಗಿ ಕೊಳ್ಳುತ್ತೇವೆ. ಇಂದಿಗೂ ಅನೇಕ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಸರಿಯಾದ ಕಲ್ಪನೆ ಇಲ್ಲ ಅಲ್ಲದೇ ಹಕ್ಕುಗಳನ್ನು ಅನುಭವಿಸಲು ಸರಿಯಾದ ಅವಕಾಶಗಳು ಇಲ್ಲವೆಂದೇ ಹೇಳಬಹುದು.

ಯಾರಾದರೂ ಪರಿಚಯಸ್ತರೋ, ಸಂಬಂಧಿಗಳೋ ಸ್ನೇಹಿತರೋ ಸಿಕ್ಕಾಗ ಕುಶಲ ಸಮಾಚಾರದ ಜೊತೆಗೆ ಮಕ್ಕಳ ಕುಶಲ ಸಮಾಚಾರ ವಿಚಾರಿಸುವುದು ವಾಡಿಕೆ. ಇತ್ತೀಚಿಗೆ ಸರ್ಕಾರಿ ನೌಕರಿಯಲ್ಲಿರುವವರು ಭೇಟಿಯಾದರಂತೂ ‘ನಿಮ್ಮ ಮಕ್ಕಳ ಹೆಸರಿನಲ್ಲಿ ಎಷ್ಟೆಷ್ಟು ಹಣ ಇಟ್ಟಿದ್ದೀರಿ, ಅವರಿಗಾಗಿ ಏನೇನು ಆಸ್ತಿ ಮಾಡಿದ್ದೀರಿ’ ಎಂದು ಕೇಳುವವರೇ ಹೆಚ್ಚು. ಮಕ್ಕಳಿಗಾಗಿ ಆಸ್ತಿ ಮಾಡಿ ಎಂದು ಎಲ್ಲರೂ ಹೇಳುತ್ತಾರೆಯೇ ಹೊರತು ‘ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ’ ಎಂದು ಹೇಳುವವರೇ ಇಲ್ಲದಂತಾಗಿದೆ.

ಮಕ್ಕಳ ಬಗ್ಗೆ ನಿಜವಾದ ಕಾಳಜಿ ಇರುವ ತಂದೆ-ತಾಯಿಗಳು ಮೊದಲು ಆ ಮಕ್ಕಳ ಭಾವನೆಗಳಿಗೆ ಸ್ಪಂದಿಸಿ, ಅವರ ಹಕ್ಕುಗಳನ್ನು ಅನುಭವಿಸಲು ಮುಕ್ತ ಸ್ವಾತಂತ್ರ ಕೊಟ್ಟಾಗಲೇ ಮಕ್ಕಳು ಕುಟುಂಬದ ಹಾಗೂ ದೇಶದ ಆಸ್ತಿಗಳಾಗಲು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳನ್ನು ಪ್ರಚಾರಗೊಳಿಸುವ ಹಾಗೂ ಜನರನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ ಬಾಗವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ‘ಮಕ್ಕಳ ಹಕ್ಕುಗಳ ಅಭಿಯಾನ’ ಎಂಬ ವಿನೂತನ ಕಾರ್ಯಕ್ರಮ ರೂಪಿಸಿದೆ. ಪ್ರತಿ ನೆವೆಂಬರ್ ತಿಂಗಳಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಹಂತದಲ್ಲಿ ‘ಮಕ್ಕಳ ಗ್ರಾಮಸಭೆ’ ನಡೆಸುವ ಮೂಲಕ ಈ ಅಭಿಯಾನ ಆಚರಿಸಲಾಗುತ್ತದೆ. ಮಕ್ಕಳ ಕೇವಲ ಇಂತಹ ಕಾರ್ಯಕ್ರಗಳಲ್ಲಿ ಭಾಗವಹಿಸಿದ್ದಾಗ ಮಾತ್ರ ತಮ್ಮ ಹಕ್ಕುಗಳನ್ನು ಅನುಭವಿಸದೇ ದಿನನಿತ್ಯವೂ ಅನುಭವಿಸುವಂತಾಗಲಿ ಎಂಬುದೇ ಮಕ್ಕಳ ಪ್ರೇಮಿಗಳ ಆಶಯವಾಗಿದೆ. ಈ ಆಶಯ ಈಡೇರಿಸಲು ಎಲ್ಲರೂ ಕೈ ಕೈ ಜೋಡಿಸಿ ಹೆಗಲಿಗೆ ಹೆಗಲು ಹಚ್ಚಿ, ಮನಸ್ಸು ಕೊಟ್ಟು ಶ್ರಮಿಸೋಣ ಬನ್ನಿ!.


‘ಟೀಚರ್’ ನವೆಂಬರ್ 2006

ಆರ್.ಬಿ.ಗುರುಬಸವರಾಜ

ಜವಾಬ್ದಾರಿಯುತರೇ ಮೈಮರೆತರೆ...

ಜವಾಬ್ದಾರಿಯುತರೇ ಮೈಮರೆತರೆ...
ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲೀಷ್ ಕಲಿಕೆ ಕುರಿತು ರಾಜ್ಯದಾದ್ಯಂತ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಇಂಗ್ಲೀಷ್ ಕಲಿಕೆಯ ಅಗತ್ಯತೆಯನ್ನು ಕುರಿತು ಪ್ರಾಥಮಿಕ ಹಂತದಿಂದ ಇಂಗ್ಲೀಷ್ ಬೇಕು ಎಂದು ಒಂದು ವರ್ಗ ವಾದಿಸಿದರೆ, ಕನ್ನಡ ಪರ ಹೋರಾಟ ನಡೆಸುತ್ತಿರುವ ಇನ್ನೊಂದು ಗುಂಪು  ಇಂಗ್ಲೀಷ್ ಕಲಿಕೆಯನ್ನು ವಿರೋಧಿಸುತ್ತದೆ. 
ಪ್ರಾಥಮಿಕ ಹಂತದಿಂದ ಇಂಗ್ಲೀಷ್ ಕಲಿಕೆಯ ಪರ ಮತ್ತು ವಿರೋಧ ಕುರಿತು ಚರ್ಚಿಸುವ ಮೊದಲು ಇಂಗ್ಲೀಷ್ ಕಲಿಕೆಯನ್ನು ಸಾಮಾಜಿಕ ಸಂರಚನೆಯ ಹಿನ್ನಲೆಯಲ್ಲಿ, ಜಾಗತೀಕರಣ ಮತ್ತು ಖಾಸಗೀಕರಣದ ಹಿನ್ನಲೆಯಲ್ಲಿ ನೋಡುವ ಅಗತ್ಯವಿದೆ.
ಸಾಮಾಜಿಕ ಸಂರಚನೆಯ ಹಿನ್ನಲೆಯಲ್ಲಿ ನೋಡಿದಾಗ ಸಮಾಜದ ಕೆಳಸ್ತರದಲ್ಲಿರುವ ಬಡವರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಇಂಗ್ಲೀಷ್ ಕಲಿಕೆಯ ಪರ ವಾದಿಸುತ್ತಿವೆ. ಏಕೆಂದರೆ ಸಮಾಜದ ಉನ್ನತ ವರ್ಗಗಳ, ಶ್ರೀಮಂತ ಮಕ್ಕಳಂತೆ ತಮ್ಮ ಮಕ್ಕಳೂ ಸಹ ಕಾನ್ವೆಂಟ್ ಶಾಲೆಗೆ ಹೋಗಬೇಕು, ಯೂನಿಫಾರಂ, ಬೂಟು ಟೈ ಹಾಕಿಕೊಂಡು ಟಾಕುಟೀಕಾಗಿರಬೇಕು ಮತ್ತು ತಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸದಿಂದ ತಮ್ಮ ಸಂಕಷ್ಟಗಳು ಪರಿಹಾರವಾಗಬೇಕು ಎಂದು ಹಂಬಲಿಸುತ್ತಿದ್ದಾರೆ. 
ಸಮಾಜದ ಅನೇಕ ವರ್ಗಗಳ ಜನರು ಇಂಗ್ಲೀಷ್ ಬೇಕು ಎಂದು ಒತ್ತಾಯಿಸುವ ಪರಿಸ್ಥಿತಿ ನಿರ್ಮಾಣವಾಗಲು  ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳೇ ಕಾರಣ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಖಾಸಗೀಕರಣದ ಅಟ್ಟಹಾಸವನ್ನು ನೋಡುತ್ತಿದ್ದೇವೆ. ಅದು ಶಿಕ್ಷಣ ಕ್ಷೇತ್ರವನ್ನು ಸಹ ಬಿಟ್ಟಿಲ್ಲ. ಹೀಗಾಗಿ ಇಂದು ಖಾಸಗೀಕರಣ ವಿಸ್ತಾರಗೊಳ್ಳುತ್ತಿದೆ, ಸಾರ್ವಜನೀಕರಣ ಕುಗ್ಗುತ್ತಿದೆ. ಈ ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳಿಂದಾಗಿ ಕನ್ನಡ ನೆಲದಲ್ಲಿ ನಿಂತು ಅನೇಕ ಭಾಷೆಗಳ ನಡುವೆ ಬದುಕಬೇಕಾದ ಅನಿವಾರ್ಯತೆ ಇದೆ. ಇತ್ತ ಕನ್ನಡ ಬಿಡಲಾರದ ಅತ್ತ ಇಂಗ್ಲೀಷ್ ತಬ್ಬಿಕೊಳ್ಳಲಾರದ ಪರಿಸ್ಥಿತಿ ಉಂಟಾಗಿದೆ. ಇದಕ್ಕೆಲ್ಲ ಸರ್ಕಾರದ ಅವೈಜ್ಞಾನಿಕ ನೀತಿಗಳೇ ಕಾರಣ. 
ಈಗ ಸರ್ಕಾರ ಪ್ರಸ್ತಾಪ ಮಾಡಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಿಕ್ಷಣ ನೀತಿಯೂ ಒಂದು ಅವೈಜ್ಞಾನಿಕ ನೀತಿಯಾಗಿದೆ. ಮಗುವಿನ ಶಿಕ್ಷಣ ಮಾತೃಭಾಷೆಯಲ್ಲಿ ಇರಬೇಕಾದುದು ಅಪೇಕ್ಷಣೀಯ. ಹಿರಿಯ ಪ್ರಾಥಮಿಕ ಹಂತ ತಲುಪುವ ವೇಳೆಗೆ ಆ ಮಗುವಿಗೆ ಎರಡು/ಮೂರು ಭಾಷೆಗಳನ್ನು ಕಲಿಯುವ ಸಾಮಥ್ರ್ಯ ಬರುತ್ತದೆ ಎಂಬುದೂ ಸತ್ಯ. ಆದರೆ ಮಗುವಿನ ಮಾತೃಭಾಷೆಯಲ್ಲೇ ಗುಣಮಟ್ಟದ ಶಿಕ್ಷಣ ದೊರೆಯದೇ ಹೋದರೆ, ಆ ಮಗು ಇನ್ನಿತರೆ ಭಾಷೆಗಳನ್ನು ಕಲಿಯಲು ಹೇಗೆ ಸಾಧ್ಯ? ತನ್ನ ಭಾವನೆಗಳನ್ನು, ಅನಿಸಿಕೆಗಳನ್ನು ಮುಕ್ತವಾಗಿ ಮಾತೃಭಾಷೆಯಲ್ಲೇ ಹಂಚಿಕೊಳ್ಳಲು ಅವಕಾಶವಿಲ್ಲದ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಗು ಇನ್ನೊಂದು ಭಾಷೆಯಲ್ಲಿ ವ್ಯವಹರಿಸಲು ಹೇಗೆ ಸಾಧ್ಯ?
2007-08ರಿಂದ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ‘1ನೇ ತರಗತಿಯಿಂದ ಇಂಗ್ಲೀಷ್ ಕಲಿಕೆ’ಯನ್ನು ಗಮನಿಸುತ್ತಿದ್ದೇವೆ. ಈ ಇಂಗ್ಲೀಷ್ ಕಲಿಕೆಯ ಸಾಧಕ-ಬಾಧಕಗಳ ಬಗ್ಗೆ ಅಂದರೆ, ಕಲಿಕಾ ಪದ್ದತಿಗಳ ಬಗ್ಗೆ, ಕಲಿಕೆಯ ಪರಿಣಾಮದ ಬಗ್ಗೆ, ಆದ ದೋಷಗಳ ಬಗ್ಗೆ, ಆಗಬೇಕಾದ ಬದಲಾವಣೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸದ ಸರ್ಕಾರ, ಏಕಾಏಕಿಯಾಗಿ ಸರ್ಕಾರಿ ಶಾಲೆಗಳಲ್ಲೇ ಇಂಗ್ಲೀಷ್ ಮಾಧ್ಯಮ ಶಿಕ್ಷಣ ನೀಡ ಹೊರಟಿರುವುದು ಶುದ್ದ ಅವೈಜ್ಞಾನಿಕ ಮತ್ತು ಖಾಸಗೀ ಪ್ರಚೋದಕ. 
ರಾಜ್ಯದಲ್ಲಿ ಬೇಕಾಬಿಟ್ಟಿಯಾಗಿ ಖಾಸಗೀ ಶಾಲೆಗಳನ್ನು ತೆರೆಯಲು ಅನುಮತಿ ನೀಡಿದ್ದೇ ಒಂದು ದೊಡ್ಡ ದುರಂತ. ಅಲ್ಲಿಂದಲೇ ಸರ್ಕಾರಿ ಶಾಲೆಗಳ ಅವನತಿ ಶುರುವಾಯಿತು ಎನ್ನಬಹುದು. ಪ್ರಾಥಮಿಕ ಶಿಕ್ಷಣವನ್ನು ಮಗುವಿನ ಮಾತೃಭಾಷೆಯಲ್ಲೇ ನೀಡಬೇಕು ಎಂಬ ನಿಯಮವನ್ನು ಖಾಸಗೀ ಶಾಲೆಗಳು ಗಾಳಿಗೆ ತೂರಿ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುತ್ತಿವೆ. ಇದಕ್ಕೆ ಪರ್ಯಾಯ ಮಾರ್ಗವೆಂದು ಸರ್ಕಾರ ‘1ನೇ ತರಗತಿಯಿಂದ ಇಂಗ್ಲೀಷ್ ಬೋಧನೆ’ ಜಾರಿಗೆ ಬಂದಿತು. ಇದ್ದ ಅಲ್ಪಸ್ವಲ್ಪ ಸರ್ಕಾರಿ ಶಾಲೆಗಳ ಮರ್ಯಾದೆ ಈ ನೀತಿಯಿಂದಾಗಿ ಹಾಳಾಯಿತು. 
ಇನ್ನು ಸರ್ಕಾರಿ ಇಂಗ್ಲೀಷ್ ಮಾಧ್ಯಮ ಪ್ರಾರಂಭವಾದರೆ ಅವುಗಳು ಸಂಪೂರ್ಣವಾಗಿ ನಿರ್ನಾಮ ಆಗುವುದಂತೂ ಖಂಡಿತ. ಇಲ್ಲಿ ಸರ್ಕಾರ ಪರೋಕ್ಷವಾಗಿ ಖಾಸಗೀ ಶಾಲೆಗಳಿಗೆ ಉತ್ತೇಜನ ನೀಡುತ್ತಿರುವುದು ಕಂಡುಬರುತ್ತದೆ. ಇದು ಕೇವಲ ಮಾಧ್ಯಮದ ಅಥವಾ ಭಾಷೆಯ ಪ್ರಶ್ನೆಯಲ್ಲ. ಆ ಭಾಷೆಯನ್ನಾಡುವ ಜನರ ಆಶೋತ್ತರಗಳು, ನಂಬಿಕೆಗಳು, ಆಚಾರ ವಿಚಾರಗಳು, ಸಂಸ್ಕøತಿ ಮತ್ತು ಆ ಭಾಷೆಯ ಇತಿಹಾಸದ ಪ್ರಶ್ನೆ ಉದ್ಭವಿಸುತ್ತದೆ. 
ಕೇವಲ ಇಂಗ್ಲೀಷ್ ಮಾಧ್ಯಮದ ಕಲಿಕೆಯಿಂದ ಜ್ಞಾನ ವೃದ್ದಿಸುತ್ತದೆ ಎನ್ನುವುದಾದರೆ ಇನ್ನುಳಿದ ಭಾಷೆಗಳೆಲ್ಲ ಜ್ಞಾನರಹಿತವೇ? ಪ್ರಾದೇಶಿಕತೆಗೆ, ಪ್ರಾದೇಶಿಕ ಭಾಷೆಗೆ ಅರ್ಥವೇ ಇಲ್ಲವೇ? ಅಲ್ಲಿನ ಜನಜೀವನ, ಸಂಸ್ಕøತಿ ಇವುಗಳ ಪಾಡೇನು? ಎಲ್ಲವನ್ನೂ ಜಾಗತೀಕರಣದ ದೃಷ್ಟಿಯಲ್ಲಿ ನೋಡುವುದಾದರೆ ನಮ್ಮತನಕ್ಕೆ ಬೆಲೆಯಿಲ್ಲವೇ? ಅಥವಾ ನಮ್ಮತನವನ್ನು ಇನ್ನೊಬ್ಬರಿಗೆ ಒತ್ತೆ ಇಟ್ಟು ಅವರ ಅಡಿಯಾಳಾಗಿ ಬಾಳಬೇಕೆ? ಪ್ರಾದೇಶಿಕತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊತ್ತ ಸರ್ಕಾರಗಳೇ ಅವುಗಳನ್ನು ಕಡೆಗಣಿಸುವುದು ಸರಿಯೇ? ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಸೂಕ್ತ ಉತ್ತರ ಕಂಡುಕೊಂಡು ನಿರ್ಧಾರ ಕೈಗೊಳ್ಳಬೇಕಾಗಿದೆ.
ನಮ್ಮ ಜನರು ಬಡವರಿರಬಹುದು. ಆದರೆ ನಮ್ಮ ಸರ್ಕಾರಿ ಶಾಲೆಗಳೇಕೆ ದರಿದ್ರವಾಗಬೇಕು? ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗೀಯವರನ್ನು ಬೆಳೆಸುವುದು ಯಾವ ನ್ಯಾಯ? ಖಾಸಗೀಕರಣವನ್ನು ಶಕ್ತಿಹೀನವಾಗಿ ಮಾಡಬೇಕಾದರೆ ನಾಡಿನ ಕನ್ನಡಿಗರೆಲ್ಲ ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ. ಕನ್ನಡ ನೆಲದಲ್ಲಿ ನಿಂತು ಕನ್ನಡತ್ವ ಉಳಿಸಿಕೊಳ್ಳಲು ನಾವೆಲ್ಲರೂ ಒಕ್ಕೊರೆಲಿನಿಂದ ಹೋರಾಡಬೇಕಾಗಿದೆ. ಅದಕ್ಕಾಗಿ ಕನ್ನಡಿಗರು ಕೆಚ್ಚೆದೆಯ ವೀರರು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಬೇಕಾಗಿದೆ. ಬನ್ನಿ ಎಲ್ಲರೂ ಕೈಜೋಡಿಸಿ ಕರ್ನಾಟಕದಲ್ಲಿ ಕನ್ನಡತ್ವವನ್ನು, ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸೋಣ.

ಆರ್.ಬಿ.ಗುರುಬಸವರಾಜ. ಸ.ಶಿ





ಶಿಕ್ಷಣದಲ್ಲಿ ಋಣಾತ್ಮಕತೆ

ಶಿಕ್ಷಣದಲ್ಲಿ ಋಣಾತ್ಮಕತೆ

ಇತ್ತೀಚೆಗೆ ಶಿಕ್ಷಣದಲ್ಲಿ ಗುಣಾತ್ಮಕತೆಯ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಲಿವೆ. ಗುಣಾತ್ಮಕತೆಯನ್ನು ಅರ್ಥೈಸುವ, ಪರಿಭಾವಿಸುವ ಪ್ರಕ್ರಿಯೆಗಳು ವಿಭಿನ್ನವಾಗಿದ್ದು, ತಜ್ಞರು ವಿಭಿನ್ನ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸುತ್ತಿದ್ದಾರೆ. ಗುಣಾತ್ಮಕತೆಯನ್ನು ಅಳೆಯುವ ಮಾನದಂಡಗಳು, ಅವುಗಳಿಗಿರುವ ತಾತ್ವಕ ಹಿನ್ನಲೆ ಹಾಗೂ ಅವುಗಳ ಬಳಕೆಯ ವಿಧಾನಗಳು ವ್ಯಕ್ತಿಯಿಂದ ವ್ಯಕ್ತಿಗೆ, ಸಂಸ್ಥೆಯಿಂದ ಸಂಸ್ಥೆಗೆ ಭಿನ್ನವಾಗಿದ್ದು ಏಕತೆ ಎಂಬುದಿಲ್ಲ.
ಕೆಲವರು ಅಂಕಗಳ ಆಧಾರದ ಮೇಲೆ ಗುಣಾತ್ಮಕತೆಯನ್ನು ಅಳೆದರೆ, ಕೆಲವರು ಶ್ರೇಣಿಗಳ ಆಧಾರದ ಮೇಲೆ ಅಳೆಯುತ್ತಾರೆ. ಕೆಲವರು ಪಠ್ಯವಿಷಯಗಳನ್ನಷ್ಟೇ ಮೌಲ್ಯಮಾಪನ ಮಾಡಿದರೆ, ಇನ್ನು ಕೆಲವರು ಸಹಪಠ್ಯ ಚಟುವಟಿಕೆಗಳನ್ನೂ ಮೌಲ್ಯಮಾಪನಕ್ಕೆ ಒಳಪಡಿಸುತ್ತಾರೆ. ಪಠ್ಯ ವಿಷಯಗಳಾದರೆ ನಿರ್ದಿಷ್ಟ/ಏಕರೂಪದ ಮೌಲ್ಯಮಾಪನ ಪದ್ದತಿಗಳಿವೆ. ಆದರೆ ಪಠ್ಯೇತರ ವಿಷಯಗಳಿಗೆ ನಿರ್ದಿಷ್ಟ/ಏಕರೂಪದ ಮೌಲ್ಯಮಾಪನ ಪದ್ದತಿಗಳಿಲ್ಲ. ಒಟ್ಟಾರೆ ಗುಣಮಟ್ಟದ ಅಳತೆಗೋಲು ಸರಿಯಾಗಿಲ್ಲ. ಇದರಿಂದ ಇತ್ತೀಚೆಗೆ ಗುಣಾತ್ಮಕತೆಯ ಬದಲಾಗಿ ಋಣಾತ್ಮಕತೆಯ ಕೂಗು ಹೆಚ್ಚಾಗುತ್ತಿದೆ. ಶಿಕ್ಷಣದ ಸಹ ಭಾಗೀದಾರರೆಲ್ಲರೂ ತಮ್ಮಲ್ಲಿನ ಲೋಪಗಳನ್ನು ಮರೆಮಾಚಲು ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಾ ಹೋಗುತ್ತಿದ್ದಾರೆ.
ಪೋಷಕರು ಶಿಕ್ಷಕರ ಮೇಲೆ, ಶಿಕ್ಷಕರು ಪೋಷಕರು ಹಾಗೂ ಅಧಿಕಾರಿಗಳ  ಮೇಲೆ, ಅಧಿಕಾರಿಗಳು ವ್ಯವಸ್ಥೆಯ ಮೇಲೆ-ಹೀಗೆ ಒಂದು ವರ್ಗ ಇನ್ನೊಂದು ವರ್ಗದ ಮೇಲೆ, ತಮ್ಮ ತಪ್ಪುಗಳನ್ನು ಇನ್ನೊಬ್ಬರ ತಪ್ಪುಗಳೆಂಬಂತೆ ಬಿಂಬಿಸುತ್ತಿದ್ದಾರೆ. ಇದೆಲ್ಲದರ ಕೆಟ್ಟ ಪರಿಣಾಮ ಮಕ್ಕಳ ಮೇಲಾಗುತ್ತಿರುವ ಬಗ್ಗೆ ಯಾರೊಬ್ಬರೂ ಯೋಚಿಸುತ್ತಿಲ್ಲ.
ಶಿಕ್ಷಕರನ್ನು ವಿಚಾರಿಸಿದರೆ “ಏನ್ಮಾಡೋದು ರೀ,,, ಈ ಹಾಳಾದ್ ಮಕ್ಳು ಎಷ್ಟು ಹೇಳಿಕೊಟ್ರೂ ಅಷ್ಟೇ, ಕಲಿಯೋದೇ ಇಲ್ಲ, ತಂದೆ-ತಾಯಿಗಳು ಸರಿಯಾಗಿ ಸಾಲಿಗೆ ಕಳ್ಸೋದಿಲ್ಲ. ಬರೆಯೋಕೆ ಪುಸ್ತಕ/ಪೆನ್ನು ಕೊಡ್ಸೋದೇ ಇಲ್ಲ. ಅಧಿಕಾರಿಗಳು ತರಗತಿ ಕಡೆಗೆ ಕಣ್ಣೇ ಹಾಕಲ್ಲ. ಎಷ್ಟು ಹೇಳಿದ್ರೂ ಇಷ್ಟೇ ಬಿಡ್ರಿ,,,” ಎಂದು ರಾಗ ಎಳೆಯುತ್ತಾರೆ. 
ಪೋಷಕರನ್ನು ಕೇಳಿದರೆ “ಸಾಲ್ಯಾಗ ಏನೂ ಸರ್ಯಾಗಿ ಕಲ್ಸಾದೇ ಇಲ್ಲ, ನಮ್ಮಕ್ಳಿಗೆ ನೆಟ್ಗ ಓದಾಕ-ಬರ್ಯಾಕ ಬರಲ್ಲ, ಮಕ್ಳಿಗೆ ನಯ-ವಿನಯ, ಸಂಸ್ಕøತಿ, ಶಿಸ್ತು ಅನ್ನೋದೇ ಇಲ್ಲ, ಏನ್ ಸಾಲಿನೋ ಏನ್ ಶಿಕ್ಷಣಾನೋ” ಎಂದು ಅಲವತ್ತುಕೊಳ್ಳುತ್ತಾರೆ.
ಅಧಿಕಾರಿಗಳ ಮಾತು ಇವೆರಡಕ್ಕೂ ವಿಭಿನ್ನ. “ಈ ಜನ ಪ್ರತಿನಿಧಿಗಳ ಕೈಯಾಗ ಸಾಕಾಗೈತಿ. ಹಗಲೂ ರಾತ್ರಿ ಜೀವ ತಿನ್ತಾರ. ಆ ಮಾಸ್ತರ ಹಂಗ, ಈ ಮಾಸ್ತರ ಹಿಂಗ, ಆ ಸಾಲಿ ಪಾಠ ಸರಿಯಿಲ್ಲ, ಈ ಸಾಲಿ ಊಟ ಸರಿಯಿಲ್ಲ ಅಂತಾರ. ಒಂದು ಕಡೆ ಜನಪ್ರತಿನಿಧಿಗಳ ಕಾಟ, ಇನ್ನೊಂದೆಡೆ ಮೇಲಾಧಿಕಾರಿಗಳ ಒತ್ತಡ, ಮತ್ತೊಂದೆಡೆ ಶಿಕ್ಷಕ ಸಂಘದವರ ಪರದಾಟ ಹೀಗೆ ಏನು ಅಂತ ನೋಡೋಕೆ ಆಗ್ತಾ ಇಲ್ಲ” ಎಂದು ಗೋಳಾಡುತ್ತಾರೆ. 
ಬಹುತೇಕ ಶಿಕ್ಷಕರುಗಳ ಅಭಿಪ್ರಾಯದಂತೆ ಇತ್ತೀಚೆಗೆ ಶಿಕ್ಷಣವೆಂಬುದು ಹಲವಾರು ಕಾರ್ಯಕ್ರಮಗಳ ಸಂಕೀರ್ಣತೆಯಿಂದ ಕೂಡಿದ ಪ್ರಕ್ರಿಯೆಯಾಗಿದೆ. ಯಾವುದನ್ನು ಮಾಡುವುದು, ಯಾವುದನ್ನು ಬಿಡುವುದು, ಯಾವುದಕ್ಕೆ ಎಷ್ಟು ಒತ್ತು ಕೊಡಬೇಕೋ ತಿಳಿಯುತ್ತಿಲ್ಲ.
ಒಂದು ಶೈಕ್ಷಣಿಕ ವರ್ಷಕ್ಕೆ 225 ರಿಂದ 230 ಕಲಿಕಾ ದಿನಗಳನ್ನು ನಿಗದಿಪಡಿಸಲಾಗಿರುತ್ತದೆ. ಈ ದಿನಗಳ ಮಿತಿಯಲ್ಲಿಯೇ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಂಘಟಿಸಬೇಕಾಗುತ್ತದೆ. ಶಾಲೆಗಾಗಿ ನಾವು-ನೀವು, ದಾಖಲಾತಿ ಆಂದೋಲನ, ಬಾ ಬಾಲೆ ಶಾಲೆಗೆ, ಕೂಲಿಯಿಂದ ಶಾಲೆಗೆ, ಕ್ರೀಡಾಕೂಟ, ಪ್ರತಿಭಾ ಕಾರಂಜಿ, ವಿವಿಧ ಸಹ ಪಠ್ಯ ಚಟುವಟಿಕೆಗಳ, ಜಯಂತೋತ್ಸವಗಳು, ದಿನಾಚರಣೆಗಳು, ವಿಜ್ಞಾನ ವಸ್ತು ಪ್ರದರ್ಶನ, ಗಣಿತ ಮೇಳ, ವಿಜ್ಞಾನ ಮೇಳ, ಮೆಟ್ರಿಕ್ ಮೇಳ ಮುಂತಾದವುಗಳ ಪೂರ್ವ ತಯಾರಿ ಮತ್ತು ಆಯೋಜನೆ, ಎನ್.ಪಿ.ಇ.ಜಿ.ಇ.ಎಲ್ ಕಾರ್ಯಕ್ರಮ, ಕೇಳು ಕಿಶೋರಿ ಮತ್ತು ಮೀನಾ ಕಾರ್ಯಕ್ರಮಗಳು, ಶಿಕ್ಷಕರಿಗೆ ತರಬೇತಿಗಳು, ಇಲಾಖೇತರ ಶೈಕ್ಷಣಿಕ ಕಾರ್ಯಕ್ರಮಗಳು ಒಂದೇ,,, ಎರಡೇ,, ಹೀಗೆ ಪಟ್ಟಿ ಮಾಡುತ್ತಾ ಹೋದರೆ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಯಗಿ ಮುಗಿಸುವುದೇ ಶಿಕ್ಷಕರ ಕರ್ತವ್ಯವೇನೋ ಎನ್ನುವಂತಾಗಿದೆ. ಮೇಲಿನ ಎಲ್ಲಾ ಕಾರ್ಯಕ್ರಮಗಳು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದರೂ ಒಂದು ಪರಿಮಿತಿಯೊಳಗೆ ಇರುವುದು ಉಚಿತ. ನಾವಿಂದು ಯಾರೊಬ್ಬರೂ ತರಗತಿ ಪ್ರಕ್ರಿಯೆ ಬಗೆಗೆ, ಹೊಸ ಹೊಸ ಬೋಧನಾ ಕಲಿಕಾ ವಿಧಾನಗಳ ಬಗೆಗೆ, ನಾವಿನ್ಯ ಮೌಲ್ಯಮಾಪನ ತಂತ್ರಗಳ ಬಗೆಗೆ ಕಿಂಚಿತ್ತೂ ಯೋಚಿಸಲಾರದಷ್ಟು ಹೀನಾಯ ಸ್ಥಿತಿಗೆ ತಲುಪಿದ್ದೇವೆ.
ಇನ್ನೊಬ್ಬರ ವೀಕ್ಷಣೆ ಹಾಗೂ ಸೂಕ್ತ ಸಲಹೆ-ಸೂಚನೆಗಳಿಂದ ತನ್ನ ಬೋಧನೆಯನ್ನು ಪರಿಣಾಮಕಾರಿಯತ್ತ ಬದಲಾಯಿಸಿಕೊಳ್ಳಲು ಪ್ರತಿಯೊಬ್ಬ ಶಿಕ್ಷಕರು ಹಾತೊರೆಯುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ‘ಪಾಠವೀಕ್ಷಣೆ’ ಎಂಬ ಪದ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಬಹುತೇಕ ಮೇಲುಸ್ತುವಾರಿ ಅಧಿಕಾರಿಗಳು ಪಾಠವೀಕ್ಷಣೆ ಮಾಡುವಲ್ಲಿ ಹಿಂದೆ ಬಳುತ್ತಿರುವುದು ಕಳವಳಕಾರಿಯಾಗಿದೆ. ಸಿ.ಆರ್.ಪಿ, ಬಿ.ಆರ್.ಪಿ, ಮತ್ತು ಮುಖ್ಯಶಿಕ್ಷಕರು ಇದಕ್ಕೆ ಹೊರತಲ್ಲ. ಇದು ಶಿಕ್ಷಕರಲ್ಲಿ ಋಣಾತ್ಮಕತೆಗೆ ದಾರಿ ಮಾಡಿಕೊಡುತ್ತದೆ. ತನ್ನ ಲೋಪಗಳನ್ನು ತಾವೇ ಪತ್ತೆ ಹಚ್ಚಿಕೊಂಡು ಸೂಕ್ತ ರೀತಿಯಲ್ಲಿ ಬದಲಾಯಿಸಿಕೊಳ್ಳುವಷ್ಟು ನೈಪುಣ್ಯತೆ ಎಲ್ಲರಲ್ಲೂ ಇರುವುದಿಲ್ಲ. ಇದಕ್ಕೆ ಇನ್ನೊಬ್ಬ ಪರಿಣಿತರ ಅವಶ್ಯಕತೆ ಇರುತ್ತದೆ. ತಪ್ಪು ಮಾಡಿದವರನ್ನು ಎಚ್ಚರಿಸುವವರೇ ಇಲ್ಲದಂತಾದರೆ ವ್ಯವಸ್ಥೆ ಹದಗೆಡುವುದಂತೂ ಖಂಡಿತ. ಈಗ ಆಗಿರುವುದೂ ಅದೇ ಅಲ್ಲವೇ?
2004-05ನೇ ಸಾಲಿನಿಂದ ರಾಜ್ಯದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿದ ಶಿಕ್ಷಕರ ತರಬೇತಿ ಕೇಂದ್ರಗಳೂ ಶಿಕ್ಷಣದಲ್ಲಿ ಋಣಾತ್ಮಕತೆಗೆ ತಮ್ಮದೇ ಆದ ಕೊಡುಗೆ ನೀಡಿವೆ ಎಂದರೆ ತಪ್ಪಲ್ಲ. ಏಕೆಂದರೆ ಬಹುತೇಕ ತರಬೇತಿ ಕೇಂದ್ರಗಳಲ್ಲಿ ನಿಮಯಮ ಮೀರಿ ಉಪನ್ಯಾಸಕರನ್ನು ನೇಮಿಸಿಕೊಂಡಿರುವುದು. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಉಪನ್ಯಾಸಕರು ವ್ಯವಸ್ಥೆಯ ಬಗ್ಗೆ ನಕಾರಾತ್ಮಕ ಮನೋಭಾವ ಹೊಂದಿರುವುದು ಅವರ ನಡೆ-ನುಡಿಗಳಲ್ಲಿ ಎದ್ದು ಕಾಣುತ್ತದೆ. ಇದನ್ನೇ ತರಬೇತಿ ಪಡೆದು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಲ್ಲಿ ಅದು ಈಗಾಗಲೇ ಅಂತರ್ಗತವಾಗಿರುತ್ತದೆ. ಸ್ಫರ್ದಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರೂ ಸಹ ಸಕ್ರಿಯವಾಗಿ ತೊಡಗಿಸಿಕೊಳ್ಳದಿರುವುದು ಆತಂಕಕಾರಿಯಾಗಿದೆ. 
ಒಂದಂತೂ ಸತ್ಯ. ಈ ಎಲ್ಲಾ ಅವಾಂತರಗಳಿಗೆ ವ್ಯವಸ್ಥೆಯ ಲೋಪ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತೇವೆ. ಹಾಗಾದರೆ ಇದನ್ನು ಸರಿಪಡಿಸುವವರು ಯಾರು? ಪೋಷಕರೇ, ಶಿಕ್ಷಕರೇ, ಅಧಿಕಾರಿಗಳೇ, ಜನಪ್ರತಿನಿಧಿಗಳೇ, ತಜ್ಞರೇ, ಯಾರು? ಇದರ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ. ಋಣಾತ್ಮಕ ಧೋರಣೆಗಳು ತಾರಕ್ಕೇರತೊಡಗಿದರೆ ಅವುಗಳ ನಿವಾರಣೆ ಕಷ್ಟಪ್ರದವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಭಾಗೀರಾರರೂ ಎಚ್ಚೆತ್ತುಕೊಂಡು ತಮ್ಮ ನಡವಳಿಕೆಗಳನ್ನು ಧನಾತ್ಮಕವಾಗಿ ಬದಲಾಯಿಸಿಕೊಂಡಾಗ ಮಾತ್ರ ಈ ರಾಜ್ಯಕ್ಕೆ, ರಾಜ್ಯದ ಶಿಕ್ಷಣಕ್ಕೆ ಉತ್ತಮ ಭವಿಷ್ಯವಿದೆ. ಇಲ್ಲದಿದ್ದರೆ ಘೋರ ದುರಂತವಂತೂ ಖಂಡಿತ. ದಯವಿಟ್ಟು ಈ ಬಗ್ಗೆ ಒಮ್ಮೆ ಯೋಚಿಸಿ ನೋಡಿ...!

ಟೀಚರ್’ ಫೆಬ್ರವರಿ 2012
ಆರ್.ಬಿ.ಗುರುಬಸವರಾಜ

ಪ್ರಾಥಮಿಕ ಶಿಕ್ಷಣದಿಂದ ಮರೆಯಾದ ಗಾಂಧೀಜಿ

ಪ್ರಾಥಮಿಕ ಶಿಕ್ಷಣದಿಂದ ಮರೆಯಾದ ಗಾಂಧೀಜಿ

  ಆತ್ಮೀಯ ದೇಶ ಬಂಧುಗಳೇ, ಮಹಾತ್ಮ ಗಾಂಧಿಜಿಯವರ ತತ್ವದರ್ಶಗಳು ಇಡೀ ದೇಶಕ್ಕೆ ಅಲ್ಲ, ಇಡೀ ಪ್ರಪಂಚಕ್ಕೇ ಮಾದರಿ ಎಂಬುದರಲ್ಲಿ ಎರಡು ಮಾತಿಲ್ಲ. “ನಡೆದಂತೆ ನುಡಿ, ನುಡಿದಂತೆ ನಡೆ” ಎಂಬ ಬಸವಣ್ಣನವರ ತತ್ವವನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಮಹಾನ್ ಮಾನವತಾವಾದಿ ಮಹಾತ್ಮ ಗಾಂಧಿಯವರು.
ಅವರು ಹುಟ್ಟುತ್ತಲೇ ಮಹಾತ್ಮರಾಗಿ ಹುಟ್ಟಲಿಲ್ಲವಾದರೂ ಅವರ ನಡೆ-ನುಡಿ, ಆಚಾರ-ವಿಚಾರ, ತತ್ವ ಸಿದ್ದಾಂತಗಳ ಪಾಲನೆ ಅವರನ್ನು ಮಹಾತ್ಮರೆನಿಸಿದವು. ಇಂತಹ ಸ್ಪುರುಷನನ್ನು ಇತ್ತೀಚಿನ ವರ್ಷಗಳಲ್ಲಿ ನಮ್ಮ ಕರ್ನಾಟಕ ಪಠ್ಯ ಪುಸ್ತಕ ರಚನಾ ಸಮಿತಿ ಮರೆತುಬಿಟ್ಟಿದೆ. 
ಇತ್ತಿಚೆಗೆ ನಾನು 5 ನೇ ತರಗತಿ ಮಕ್ಕಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಮಾಹಾತ್ಮ ಗಾಂಧಿಯವರ ಹೆಸರು ಪ್ರಸ್ತಾಪಿಸಿ ಅವರು ಯಾರೆಂದು ಮಕ್ಕಳಿಗೆ ಕೇಳಿದರೆ ‘ನಮ್ಮ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟವರು’ ಎಂದಷ್ಟೇ ಹೇಳಿದರು. ಹೌದು ಅವರು ನಮ್ಮ ದೇಶಕ್ಕೆ ಸ್ವಾತಂತ್ರವನ್ನು ಪುನರ್ ಸ್ಥಾಪಿಸುವಲ್ಲಿ ಶ್ರಮಿಸಿದವರೇನೋ ನಿಜ. ಆದರೆ ಮಕ್ಕಳಿಗೆ ಗಾಂಧೀಜಿಯವರ ವೈಯಕ್ತಿಕ ಜೀವನದ ಬಗ್ಗೆ ಅಂದರೆ ಅವರ ಜನನ, ತಂದೆ-ತಾಯಿ ಹೆಸರು, ಬಾಲ್ಯ, ವಿದ್ಯಾಭ್ಯಾಸ, ಆದರ್ಶಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನೀವು ಹಿಂದಿನ ತರಗತಿಗಳಲ್ಲಿ ಓದಿದ ಗಾಂಧೀಜಿಯವರ ವಿಚಾರಗಳನ್ನೊಮ್ಮೆ ನೆನಪಿಸಿಕೊಳ್ಳಿ ಎಂದು ಹೇಳಿದೆ. ಹಿಂದಿನ ಯಾವುದೇ ತರಗತಿಗಳಲ್ಲಿ ಗಾಂಧೀಜಿಯವರ ಬಗ್ಗೆ ಅಭ್ಯಾಸ ಮಾಡಿಯೇ ಇಲ್ಲ ಎಂಬ ಮಕ್ಕಳ ಉತ್ತರ ನನ್ನನ್ನು ಒಂದು ಕ್ಷಣ ಬೆಚ್ಚಿ ಬೀಳಿಸಿತು. ಆಗಿನ ಸಂದರ್ಭದಲ್ಲಿ ಗಾಂಧೀಜಿಯವರ ಬಗ್ಗೆ ಗೊತ್ತಿದ್ದ ಕೆಲವೊಂದಿಷ್ಟು ಕಿರು ಮಾಹಿತಿಗಳನ್ನು ಹೇಳಿ ತರಗತಿಯಿಂದ ಹೊರಬಂದೆ. ತಕ್ಷಣವೇ 1 ರಿಂದ 4 ನೇ ತರಗತಿವರೆಗಿನ ಪಠ್ಯ ಪುಸ್ತಕಗಳನ್ನು ಕಲೆಹಾಕಿ ಅವಲೋಕಿಸಿದೆ. ಅಲ್ಲೆಲ್ಲೂ ಗಾಂಧೀಜಿವರ ಬಗ್ಗೆ ಮಾಹಿತಿಯಾಗಲೀ, ಅವರ ಜೀವನದ  ಕಥೆಯ ತುಣುಕಾಗಲೀ ಎಲ್ಲೂ ಕಾಣಲಿಲ್ಲ. 
4ನೇ ತರಗತಿಯ ಕನ್ನಡ ಕಲಿ-ನಲಿ ಪಠ್ಯಪುಸ್ತಕದಲ್ಲಿ “ಪುಟ್ಟ ಕೌಮುದಿ” ಎಂಬ ಪಾಠದಲ್ಲಿ ಗಾಂಧೀಜಿಯವರ ಒಂದು ಆದರ್ಶ ಗುಣದ ಬಗ್ಗೆ  ಕಿರು ಮಾಹಿತಿ ಇದ್ದರೂ ಅವರ ವೈಯಕ್ತಿಕ ಜೀವನದ ಪರಿಚಯ ಇಲ್ಲ. ಅಲ್ಲದೇ 5 ರಿಂದ 7ನೇ ತರಗತಿಯ ಪಠ್ಯಪುಸ್ತಕದಲ್ಲೂ ಸಹ ಗಾಂಧೀಜಿಯವರ ವೈಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲುವಂತಹ ಯಾವುದೇ ಪಾಠ ಇಲ್ಲ. ಒಮ್ಮೆಲೆ 8 ನೇ ತರಗತಿ ಕನ್ನಡ ಪಠ್ಯದಲ್ಲಿ ‘ಹಿಂದೂಸ್ತಾನಕ್ಕೆ ಹಿಂದಿರುಗಿದುದು’ ಎಂಬ ಪಾಠ ಇದ್ದು, ಅದರಲ್ಲಿ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳುವ ಬಗೆಗಿನ ಚಿತ್ರಣವಿದೆ. ಆದರೆ ಅವರ ಬಾಲ್ಯ, ವಿದ್ಯಾಭ್ಯಾಸದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ ಎನ್ನುವಂತಾಗಿದೆ. ಮಕ್ಕಳು ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢಹಂತಕ್ಕೆ ಬಂದರೂ ರಾಷ್ಟ್ರಪಿತನ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ಇಲ್ಲದಿರುವುದು ದುರದೃಷ್ಟವೇ ಸರಿ.
ನಾವು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗಿನ ಪಠ್ಯಪುಸ್ತಕಗಳಲ್ಲಿ (3 ಅಥವಾ 4ನೇ ತರಗತಿ ಪಠ್ಯಗಳಲ್ಲೇ) ಗಾಂಧೀಜಿಯವರ ಬಾಲ್ಯ, ವಿದ್ಯಾಭ್ಯಾಸ, ಆದರ್ಶಗಳ ಬಗ್ಗೆ ಪಾಠಗಳಿರುತ್ತಿದ್ದವು. ಅವು ನಮಗೆಲ್ಲಾ ಸ್ಪೂರ್ತಿದಾಯಕ ಆಗಿರುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳ ಪಠ್ಯಪುಸ್ತಕಗಳಲ್ಲಿ (1-7ನೇ ತರಗತಿವರೆಗೆ) ಗಾಂಧೀಜಿಯವರ ಬಗ್ಗೆ ಯಾವುದೇ ಪಾಠಗಳನ್ನು ಅಳವಡಿಸದೇ ಇರುವುದು ಖೇದಕರ ಸಂಗತಿಯಾಗಿದೆ. 
ಶಿಕ್ಷಕರಾದ ನಾವು ತರಗತಿ ವೇಳಾಪಟ್ಟಿ ತಯಾರಿಸುವಾಗ ನೀತಿ ಶಿಕ್ಷಣ, ಮೌಲ್ಯ ಶಿಕ್ಷಣಕ್ಕೆಂದು ನಿಗದಿತ ಅವಧಿಗಳನ್ನು ಹಂಚಿಕೆ ಮಾಡಿಕೊಂಡಿರುತ್ತೇವೆ. ಆದರೆ ಅನೇಕ ವೇಳೆ ಬೇರೆ ಬೇರೆ ಕಾರ್ಯಭಾರದ ಒತ್ತಡಗಳಿಂದಾಗಿ ಆ ಅವಧಿಗಳನ್ನು ಪಠ್ಯವಿಷಯ ಬೋಧಿಸಲೋ ಅಥವಾ ಇನ್ಯಾವುದಕ್ಕೋ ಬಳಸಿಕೊಳ್ಳುತ್ತೇವೆ. ಹಾಗಾಗಿ ಮಕ್ಕಳಿಗೆ ನೀತಿ/ಮೌಲ್ಯಗಳ ಪರಿಚಯ ಕಡಿಮೆಯಾಗುತ್ತಿದೆ.
ಗಾಂಧೀಜಿಯಂತಹ ಮಹಾನ್ ವ್ಯಕ್ತಿಗಳ, ಸಚ್ಛಾರಿತ್ರರ, ಸತ್ಪುರುಷರ ಜೀವನವನ್ನು ಬಿಂಬಿಸುವಂತಹ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಂಡರೆ ವಿಷಯ ಬೋಧಿಸುವಾಗಲಾದರೂ ನೀತಿ/ಮೌಲ್ಯ, ತತ್ವಗಳನ್ನು ಮಕ್ಕಳಿಗೆ ತಿಳಿಸಬಹುದಲ್ಲವೇ? ಆ ಮೂಲಕವಾದರೂ ಮಕ್ಕಳು ಕೆಲವೊಂದಿಷ್ಟು ಮಾಹಾನ್ ಪುರುಷರ ಜೀವನ ಪರಿಚಯ ಮಾಡಿಕೊಳ್ಳುವರಲ್ಲವೇ? ಅಥವಾ ಕೇವಲ ಅವರ ಜನ್ಮದಿನ ಅಥವಾ ಪುಣ್ಯ ತಿಥಿಗಳಂದು ಮಾತ್ರ ಅವರ ನೆನಪು ಮಾಡಿಕೊಂಡರೇ ಸಾಕೇ? ಇನ್ನಾದರೂ ಪಠ್ಯಪುಸ್ತಕ ರಚನಾ ಸಮಿತಿ ಈ ಬಗ್ಗೆ ಗಮನ ಹರಿಸೀತೆ? ಕಾದುನೋಡಬೇಕಿದೆ.
ಟೀಚರ್’ ಆಗಸ್ಟ್ 2010
ಆರ್.ಬಿ.ಗುರುಬಸವರಾಜ

ಶಿಕ್ಷಣದ ನಗರೀಕರಣ ಕೊನೆಗೊಂಡೀತೇ?

ಶಿಕ್ಷಣದ ನಗರೀಕರಣ ಕೊನೆಗೊಂಡೀತೇ?
(ಗ್ರಾಮೀಣ ಪ್ರದೇಶದ ಶಿಕ್ಷಣ ಹಿಂದುಳಿಯುತ್ತಿರಲು ಕಾರಣಗಳು)
ಭಾರತ ಹಳ್ಳಿಗಳ ನಾಡು. ಶೇ 70 ರಷ್ಟು ಹಳ್ಳಿಗಳು ಭಾರತದಲ್ಲಿವೆ. ಮುಂದುವರೆಯುತ್ತಿರುವ ಭಾರತದಂತಹ ಹಳ್ಳಿಗಳ ಪ್ರಧಾನವಾದ ದೇಶದ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದಾಗ ಗ್ರಾಮೀಣ ಶಿಕ್ಷಣದ ವ್ಯವಸ್ಥೆ ಮಂದಗತಿಯಲ್ಲಿರುವುದು ಗೋಚರಿಸುತ್ತದೆ. ಭಾರತದ ಹಳ್ಳಿಗಳಲ್ಲಿ ಶಿಕ್ಷಣ ಸೌಲಭ್ಯ ಕಡಿಮೆ. ನಗರಗಳಿಗೆ ಹೋಲಿಸಿದರೆ ಹಳ್ಳಿಗಳನ್ನು ಶೈಕ್ಷಣಿಕವಾಗಿ ನಿರ್ಲಕ್ಷಿಸಲಾಗಿದೆ ಎನ್ನಬಹುದು. ಆದರೆ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಆದಾಗ್ಯೂ ನಗರ ಮತ್ತು ಹಳ್ಳಿಗಳ ನಡುವೆ ತುಂಬಾ ತಾರತಮ್ಯವಿರುವುದು ಕಾಣುತ್ತದೆ. ಹೀಗಾಗಿ ಗ್ರಾಮೀಣ ಜನರು ನಗರ ಶಿಕ್ಷಣಕ್ಕೆ ಹೆಚ್ಚು ಮಾರಿ ಹೋಗುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಶಿಕ್ಷಣ ಮತ್ತು ನಗರ ಶಿಕ್ಷಣದ ನಡುವೆ ದೊಡ್ಡ ಕಂದರ ಏರ್ಪಡುತ್ತಿದೆ. 
ಪಾಲಕ ಪೋಷಕರು, ವಿದ್ಯಾರ್ಥಿಗಳು ನಗರ ಶಿಕ್ಷಣಕ್ಕೆ ಮಾರು ಹೋಗಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದವು ಕೆಳಗಿನಂತಿವೆ.
  •   ಭಾರತ ಸರ್ಕಾರವು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದ್ದರೂ ಸಹ ಅದಕ್ಕೆ ತಕ್ಕುದಾದ ಸೌಲಭ್ಯಗಳು ಗ್ರಾಮೀಣ ಪ್ರದೇಶಗಳನ್ನು ಸರಿಯಾಗಿ ತಲುಪದಿರುವುದು.
  •   ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತದೆ. ಬಹುತೇಕ ಶಿಕ್ಷಕರು ಅನೇಕ ಕಾರಣಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಹಿಂಜರಿಯುತ್ತಾರೆ.
  •   ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳಲ್ಲಿ ಸರಿಯಾದ ಮೂಲಭೂತ ಸೌಲಭ್ಯಗಳಾದ ಪಾಠೋಪಕರಣ, ಪೀಠೋಪಕರಣ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸಭಾಂಗಣ ವ್ಯವಸ್ಥೆ ಸರಿಯಾಗಿರುವುದಿಲ್ಲ.
  •   ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಪ್ರಯೋಗಶಾಲೆ, ಗ್ರಂಥಭಂಢಾರ, ಆಟದ ಬಯಲು ಮತ್ತು ಮಾನಸಿಕ ಹಾಗೂ ಭೌಧ್ಧಿಕ ತರಬೇತಿ ಸೌಲಭ್ಯಗಳು ಸರಿಯಾಗಿ ಇಲ್ಲದಿರುವುದು.
  •   ಹಳ್ಳಿಗಳಲ್ಲಿ ವೃತ್ತಿ ತರಬೇತಿ ಶಿಕ್ಷಣ ಕೇಂದ್ರಗಳ ಅಭಾವವಿದ್ದು ನಗರ ಪ್ರದೇಶಗಳಲ್ಲಿ ದೊರೆಯುವ ಉತ್ತಮ ಶಿಕ್ಷಣ ವ್ಯವಸ್ಥೆ ಹಳ್ಳಿಗಳಲ್ಲಿ ಇಲ್ಲದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. 
  •   ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸೌಲಭ್ಯಗಳು ಹಳ್ಳಿಗಳಲ್ಲಿ ಇಲ್ಲದೇ ಇರುವುದರಿಂದ ಗ್ರಾಮೀಣರು ನಗರ ಶಿಕ್ಷಣಕ್ಕೆ ಮಾರು ಹೋಗುವಂತಾಗಿದೆ.
  •   ಭಾರತವು ವ್ಯವಸಾಯ ಪ್ರಧಾನ ದೇಶವಾಗಿದ್ದು,  ಮಕ್ಕಳಿಗೆ ಹಳ್ಳಿಗಳಲ್ಲಿ ವ್ಯವಸಾಯ ಮತ್ತು ವ್ಯವಸಾಯೋಧ್ಯಮ ಕ್ಷೇತ್ರಗಳಲ್ಲಿ ಶಿಕ್ಷಣ ಹಾಗೂ ತರಬೇತಿ ದೊರೆಯುತ್ತಿಲ್ಲ.
  •   ಹಳ್ಳಿಗಳಲ್ಲಿ ಹುಟ್ಟಿದ ನಿಮ್ನ ಹಾಗೂ ಹಿಂದುಳಿದ ವರ್ಗದ ವಿದ್ಯಾವಂತರು ಸಾಮಾಜಿಕ ಅಸಮಾನತೆಗೆ ಒಳಗಾಗಿದ್ದಾರೆ. ಅವರಿಗೆ ಪುರಸ್ಕಾರವಾಗಲೀ ಅಥವಾ ಸಾಮಾಜಿಕ ಮನ್ನಣೆಯಾಗಲೀ ದೊರೆಯುತ್ರತಿಲ್ಲ. ನಗರ ಪ್ರದೇಶಗಳಲ್ಲಿ ಜಾತಿ, ಧರ್ಮ, ಮತಗಳ ನಿರ್ಬಂಧವಿಲ್ಲದೇ ಅರ್ಹತೆಯಿಂದ ಅಂತಸ್ತು, ಮನ್ನಣೆ ಮತ್ತು ಸೌಲಭ್ಯಗಳನ್ನು ಪಡೆಯಬಹುದಾಗಿದೆ.
  •   ಗ್ರಾಮೀಣ ಪ್ರದೇಶಗಳಲ್ಲಿ ಬಿಡುವಿನ ವೇಳೆಯಲ್ಲಿ ಕಲಿಯಲು ಅವಕಾಶವಿಲ್ಲದಿರುವುದು. ನಗರ ಪ್ರದೇಶಗಳಲ್ಲಿ ಬೆಳಗಿನ ಅಥವಾ ರಾತ್ರಿ ಪಾಳೆಯ ತರಗತಿಗಳನ್ನು ನಡೆಸುವಂತೆ ಹಳ್ಳಿಗಳಲ್ಲಿ ವ್ಯವಸ್ಥೆ ಇಲ್ಲದಿರುವುದರಿಂದ ಹೆಚ್ಚು ಜನ ನಗರ ಶಿಕ್ಷಣದ ಕಡೆಗೆ ವಾಲುತ್ತಿದ್ದಾರೆ.
  •   ಗ್ರಾಮೀಣ ಪ್ರದೇಶದ ವಿದ್ಯಾವಂತರು ನಿಯಂತ್ರಣಕ್ಕೆ ಒಳಗಾಗುತ್ತಿದ್ದಾರೆ. ವಿದ್ಯಾಭ್ಯಾಸ, ಉದ್ಯೋಗ, ತಾಂತ್ರಿಕತೆ, ವ್ಯವಹಾರ ಮುಂತಾಧ ವಿಷಯಗಳ ಆಯ್ಕೆಯಲ್ಲಿ ಸ್ವಾತಂತ್ರವಿಲ್ಲದೇ ತಂದೆ-ತಾಯಿ ಅಥವಾ ಪೋಷಕರ ನಿಯಂತ್ರಣಕ್ಕೊಳಗಾಗುತ್ತಿದ್ದಾರೆ.

ಹೀಗೆ ಇನ್ನೂ ಅನೇಕ ಕಾರಣಗಳಿಂದ ಶಿಕ್ಷಣವು ನಗರ ಪ್ರದೇಶಗಳಲ್ಲಿ ಕೇಂದ್ರೀಕೃತಗೊಂಡು ಗ್ರಾಮೀಣ ಪ್ರದೇಶದ ಶಿಕ್ಷಣ ಸೊರಗುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಗ್ರಾಮೀಣ ಪ್ರದೇಶದ ಶಿಕ್ಷಣ ಮೂಲೆಗುಂಪಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಲಾದರೂ ಜನತೆ, ಜನನಾಯಕರು, ಸರ್ಕಾರದವರು ಎಚ್ಚೆತ್ತುಕೊಂಡರೆ ಗ್ರಾಮೀಣ ಶಿಕ್ಷಣವನ್ನು ಅಭಿವೃದ್ದಿ ಪಡಿಸುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದರೆ ಹಳ್ಳಿಗಳ ಉದ್ದಾರವಾದೀತು. ಆಗ ಗಾಂಧೀಜಿಯವರ ‘ಗ್ರಾಮಸ್ವರಾಜ್ಯ’ದ ಕನಸು ನನಸಾದೀತು.

‘ಶಿಕ್ಷಣ ಶಿಲ್ಪಿ’ ಫೆಬ್ರವರಿ 2006
ಆರ್.ಬಿ.ಗುರುಬಸವರಾಜ