March 30, 2015

ಕಾನೂನು ಪದವಿಗೆ CLAT

ದಿನಾಂಕ 25-03-2015ರ ವಿಜಯವಾಣಿಯ ಮಸ್ತ್ ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ.

                                ಕಾನೂನು ಪದವಿಗೆ  CLAT

    ಸರ್ಕಾರಿ ಆಡಳಿತ ವ್ಯವಸ್ಥೆಯ ಮೂಲಾಂಶಗಳಲ್ಲಿ ಅತ್ಯಂತ ಗೌರವಯುತವಾದದ್ದು ನ್ಯಾಯಾಂಗ ವ್ಯವಸ್ಥೆ. ನ್ಯಾಯಾಂಗ ವ್ಯವಸ್ಥೆಗೆ ನ್ಯಾಯಾವಾದಿಗಳು ಹಾಗೂ ನ್ಯಾಯಾಧೀಶರ ಪಾತ್ರ ಮಹತ್ವದ್ದು. ದೇಶದ ಕಾನೂನು ವ್ಯವಸ್ಥೆಯನ್ನು ಸುವ್ಯವಸ್ಥೆಯಲ್ಲಿಟ್ಟು ಶಾಂತಿಯನ್ನು ಮೂಡಿಸುವುದು ನ್ಯಾಯಾಂಗದ ಪರಮಾವಧಿಕಾರವಾಗಿದೆ. ನ್ಯಾಯಾಂಗ ವ್ಯವಸ್ಥೆಯ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಕಾನೂನುಗಳ ಅರಿವು, ಆಳ ಮತ್ತು ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕಾದುದು ಅನಿವಾರ್ಯ. ಅದಕ್ಕಾಗಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಕಾನೂನು ಶಿಕ್ಷಣ ನೀಡಲು ಪ್ರತಿವರ್ಷ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸುತ್ತದೆ. ಈ ಪ್ರಕ್ರಿಯೆಯೇ CLAT ಪರೀಕ್ಷೆ.
    CLAT ಎಂಬುದು ಕಾನೂನು ಪದವಿ ಶಿಕ್ಷಣ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಗಾಗಿ ನಿಯೋಜಿತವಾದ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ. CLATನಲ್ಲಿ ಉತ್ತೀರ್ಣರಾದವರು ಮಾತ್ರ ರಾಷ್ಟ್ರದ 14 ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕ ಪದವಿ ಶಿಕ್ಷಣ ಪಡೆಯಬಹುದು. 2015 ರ CLAT ಪರೀಕ್ಷೆಯ ಹೊಣೆಯನ್ನು ಲಕ್ನೋದ ‘ರಾಮ್‍ಮನೋಹರ್ ಲೋಹಿಯಾ ಕಾನೂನು ವಿಶ್ವವಿದ್ಯಾಲಯ’ ವಹಿಸಿಕೊಂಡಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ : ಪದವಿ ಶಿಕ್ಷಣಕ್ಕಾಗಿ ಯಾವುದೇ  ವಿಭಾಗದ ಪಿ.ಯು.ಸಿ.ಯಲ್ಲಿ 45% ಅಂಕ (ಪ.ಜಾತಿ, ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 40% ಅಂಕ) ಗಳಿಸಿದವರೆಲ್ಲರೂ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರು.    2015ರ ಪಿ.ಯು.ಸಿ ಪರೀಕ್ಷೆಗೆ ಹಾಜರಾಗುತ್ತಿರುವವರೂ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಜೂನ್ 2015ರಲ್ಲಿ ನಡೆಯುವ ಪ್ರವೇಶ ಸಮಯದಲ್ಲಿ ಮೂಲ ಅಂಕಪಟ್ಟಿ ಹಾಜರುಪಡಿಸಬೇಕು. 1 ನೇ ಜುಲೈ 2015ಕ್ಕೆ 20 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
    ಸ್ನಾತಕ ಪದವಿ ಶಿಕ್ಷಣಕ್ಕೆ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಎಲ್ ಅಥವಾ ಎಲ್.ಎಲ್.ಬಿ.ಯಲ್ಲಿ 55% ಅಂಕ (ಪ.ಜಾತಿ, ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 50% ಅಂಕ) ಗಳಿಸಿದವರು ಅರ್ಹರು. ಅಂತಿಮವರ್ಷ/ಕೊನೆ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗುತ್ತಿರುವವರೂ ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ. ಪ್ರವೇಶ ಸಮಯದಲ್ಲಿ ಮೂಲ ಅಂಕಪಟ್ಟಿಗಳನ್ನು ಹಾಜರುಪಡಿಸುವುದು ಕಡ್ಡಾಯ. ಸ್ನಾತಕ ಪದವಿಗೆ ಯಾವುದೇ ವಯಸ್ಸಿನ ನಿರ್ಬಂಧ ಇರುವುದಿಲ್ಲ.

ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ : CLAT-2015 ರ ಅರ್ಜಿಗಳನ್ನು www.clat.in   ವೆಬ್‍ಸೈಟ್‍ನಿಂದ ಆನ್‍ಲೈನ್ ಮೂಲಕವೇ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸಲು 31 ನೇ ಮಾರ್ಚ 2015 ಕೊನೆ ದಿನಾಂಕವಾಗಿದೆ.
    ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ನಂತರ ಶುಲ್ಕ ಪಾವತಿಸಬೇಕಾಗುತ್ತದೆ. ಪ.ಜಾತಿ, ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 3500/- ಹಾಗೂ ಇನ್ನಿತರೇ ಅಭ್ಯರ್ಥಿಗಳಿಗೆ 4000/- ಅರ್ಜಿ ಶುಲ್ಕ ನಿಗದಿಯಾಗಿರುತ್ತದೆ. ಶುಲ್ಕವನ್ನು ನೆಟ್‍ಬ್ಯಾಂಕಿಂಗ್, ಡೆಬಿಟ್ ಕಾರ್ಡ ಮತ್ತು ಕ್ರೆಡಿಟ್ ಕಾರ್ಡ ಮೂಲಕವೂ ಪಾವತಿಸಬಹುದು ಅಥವಾ ಅರ್ಜಿ ಸಲ್ಲಿಸಿದ ನಂತರ ಬ್ಯಾಂಕ್ ಚಲನ್ ಡೌನ್‍ಲೋಡ್ ಮಾಡಿಕೊಂಡು ಬ್ಯಾಂಕಿಗೆ ಹಣ ಸಂದಾಯ ಮಾಡುವ  ಮೂಲಕವೂ ಶುಲ್ಕ ಪಾವತಿಸಿಬಹುದು.
            ಅರ್ಜಿ ಸಲ್ಲಿಕೆ ವಿಧಾನ :
       ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ಮೊದಲು ವೆಬ್‍ಸೈಟ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. www.clat.inವೆಬ್‍ಸೈಟ್ ತೆರೆದಾಗ ರಿಜಿಸ್ಟರ್ ಬಟನ್ ಆಯ್ಕೆ ಮಾಡಿಕೊಂಡು ಅದರಲ್ಲಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು. ಹೀಗೆ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ ಕೂಡಲೇ ನೀವು ನೀಡಿದ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸಕ್ಕೆ ಬಳಕೆದಾರರ ಐ.ಡಿ ಹಾಗೂ ಪಾಸ್‍ವರ್ಡ ರವಾನೆಯಾಗುತ್ತದೆ. ಈ ಐ.ಡಿ ಮತ್ತು ಪಾಸ್‍ವರ್ಡಗಳು ಅರ್ಜಿ ತುಂಬಲು ಹಾಗೂ ಪ್ರತಿಬಾರಿ ಲಾಗಿನ್ ಆಗಲು ಬೇಕಾಗುತ್ತವೆ. ಆದ್ದರಿಂದ ಇವುಗಳನ್ನು ಜೋಪಾನವಾಗಿ ಕಾಯ್ದಿರಿಸಿಕೊಳ್ಳಬೇಕು.
    ಅರ್ಜಿಯ ಜೊತೆ ಅಪ್‍ಲೋಡ್ ಮಾಡಬೇಕಾದ ದಾಖಲೆಗಳು:
•    ಜನ್ಮ ದಿನಾಂಕ ಪ್ರಮಾಣ ಪತ್ರ/ ಎಸ್.ಎಸ್.ಎಲ್.ಸಿ ಅಂಕಪಟ್ಟಿ
•    ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
•    ಅಂಗವಿಕಲರಾಗಿದ್ದಲ್ಲಿ ಅದರ ಪ್ರಮಾಣ ಪತ್ರ.
•    ಗ್ರಾಮೀಣ, ಕನ್ನಡ ಮಾಧ್ಯಮ, ಯೋಜನಾ ನಿರಾಶ್ರಿತರು ಹಾಗೂ ಇತರೇ ಯಾವುದೇ ಮೀಸಲಾತಿ ಪ್ರಮಾಣ ಪತ್ರಗಳು.
•    ವ್ಯಾಸಂಗ ಪ್ರಮಾಣ ಪತ್ರ.
•    ಪಾಸ್‍ಪೋರ್ಟ ಅಳತೆಯ ಭಾವಚಿತ್ರ.
•    ಅಭ್ಯರ್ಥಿಯ ಸಹಿ

ಪರೀಕ್ಷಾ ವಿಧಾನ : ಪರೀಕ್ಷೆಯು ಆನ್‍ಲೈನ್ ವಿಧಾನದಲ್ಲಿರುತ್ತದೆ. ಪರೀಕ್ಷೆಯು 10 ನೇ ಮೇ 2015 ರಂದು ದೇಶದ 42 ಪರೀಕ್ಷಾ ಕೇಂದ್ರಗಳಲ್ಲಿ (ಬೆಂಗಳೂರು ಸೇರಿದಂತೆ) ಏಕಕಾಲಕ್ಕೆ ನಡೆಯುತ್ತದೆ. ಪ್ರವೇಶ ಪರೀಕ್ಷೆಗೆ ನೊಂದಾಯಿಸಿಕೊಂಡ ಎಲ್ಲಾ ಅಭ್ಯರ್ಥಿಗಳಿಗೂ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್ ವ್ಯವಸ್ಥೆ ಮಾಡಲಾಗಿರುತ್ತದೆ. ಅಭ್ಯರ್ಥಿಗಳು ಕಂಪ್ಯೂಟರ್ ಬಳಸಿ ಪರೀಕ್ಷೆ ಬರೆಯಬೇಕು.
ಪರೀಕ್ಷಾ ವಿನ್ಯಾಸ : ಪದವಿ ಶಿಕ್ಷಣಕ್ಕೆ 200 ಅಂಕಗಳ 200 ವಸ್ತುನಿಷ್ಟ ಬಹುಆಯ್ಕೆಯ ಪ್ರಶ್ನೆಗಳಿರುತ್ತವೆ. 2 ಗಂಟೆಗಳ ಅವಧಿಯಲ್ಲಿ ಅಭ್ಯರ್ಥಿಗಳು ಕಂಪ್ಯೂಟರ್ ಮೌಸ್ ಬಳಸಿ ಉತ್ತರಗಳನ್ನು ಆಯ್ಕೆ ಮಾಡುವ ಮೂಲಕ ಪರೀಕ್ಷೆಯನ್ನು  ಎದುರಿಸಬೇಕು.
    ಸ್ನಾತಕ ಪದವಿಗೆ 2 ಗಂಟೆಗಳಲ್ಲಿ 150 ಅಂಕಗಳಿಗೆ ಪರೀಕ್ಷೆ ಇರುತ್ತದೆ. ಇದರಲ್ಲಿ 100 ಅಂಕಗಳಿಗೆ (25 ಅಂಕದ 4 ಪ್ರಶ್ನೆಗಳು) ಪ್ರಬಂಧ ಮಾದರಿಯ ವಿವರಣಾತ್ಮಕ ಪ್ರಶ್ನೆಗಳಿಗೆ ಹಾಗೂ 50 ಅಂಕಗಳ 50 ವಸ್ತುನಿಷ್ಟ ಬಹು ಆಯ್ಕೆಯ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕು. ಪದವಿ ಹಾಗೂ ಸ್ನಾತಕ ಪದವಿ ಪ್ರವೇಶ ಪರೀಕ್ಷೆಗಳಲ್ಲಿನ ಪ್ರತಿತಪ್ಪು ಉತ್ತರಕ್ಕೆ 0.25 ಅಂಕ ಕಡಿತಗೊಳಿಸಲಾಗುವುದು.
                             ಪರೀಕ್ಷಾ ವಿಷಯಗಳು ಹಾಗೂ ಅಂಕಗಳ ವರ್ಗೀಕರಣ
ಪದವಿ ಶಿಕ್ಷಣ  
    ಇಂಗ್ಲೀಷ್ ಗ್ರಹಣಶಕ್ತಿ (40 ಅಂಕಗಳು)
    ಸಾಮಾನ್ಯಜ್ಞಾನ ಮತ್ತು  ಪ್ರಚಲಿತ ಜ್ಞಾನ (50 ಅಂಕಗಳು)
    ಸಾಮಾನ್ಯ ಗಣಿತ (20 ಅಂಕಗಳು)
    ಕಾನೂನು ಕೌಶಲ್ಯಗಳು (50 ಅಂಕಗಳು)
    ತಾರ್ಕಿಕ ಕೌಶಲ್ಯ (40 ಅಂಕಗಳು)   
 ಸ್ನಾತಕ ಪದವಿ ಶಿಕ್ಷಣ
     ಭಾರತದ ಸಂವಿಧಾನ (50ಅಂಕಗಳು)
    ನ್ಯಾಯಶಾಸ್ತ್ರ (50 ಅಂಕಗಳು)
    ಇತರೆ ಕಾನೂನು ವಿಷಯಗಳು (ಕಾಂಟಾಕ್ಟ್ಸ್, ಟಾಟ್ರ್ಸ, ಕ್ರಿಮಿನಲ್ ಲಾ, ಅಂತರಾಷ್ಟ್ರೀಯ ಕಾನೂನು) (50 ಅಂಕಗಳು)

                                         ವಿಷಯಗಳ ಸಿದ್ದತೆ ಹೀಗಿರಲಿ
ಇಂಗ್ಲೀಷ್ : ಈ ವಿಭಾಗದಲ್ಲಿ ಅಭ್ಯರ್ಥಿಯ ಇಂಗ್ಲೀಷ್ ವಿಷಯದ ಗ್ರಹಣ ಶಕ್ತಿಯನ್ನು ಪರೀಕ್ಷಿಸಲಾಗುತ್ತದೆ. ಒಂದು ಗದ್ಯ ಭಾಗವನ್ನು ಓದಿ ಅರ್ಥೈಸಿಕೊಂಡು ಅದರಲ್ಲಿನ ವ್ಯಾಕರಣಾಂಶಗಳ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಅಂದರೆ ವಾಕ್ಯ ಸರಿಪಡಿಸುವುದು, ಬಿಟ್ಟ ಸ್ಥಳ ತುಂಬುವುದು, ವ್ಯಾಕರಣ ಸರಿ ಪಡಿಸುವುದು ಇತ್ಯಾದಿ ಪ್ರಶ್ನೆಗಳ ಮೂಲಕ ಅಭ್ಯರ್ಥಿಯ ಇಂಗ್ಲೀಷ್ ಗ್ರಹಣಶಕ್ತಿಯನ್ನು ಪರೀಕ್ಷಿಸಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ವಿವಿಧ ಇಂಗ್ಲೀಷ್ ಗದ್ಯಭಾಗಗಳನ್ನು ಓದಿ ಅರ್ಥೈಸಿಕೊಂಡು ಅದರಲ್ಲಿನ ಗ್ರಾಮರ್, ಥೀಮ್ ಹಾಗೂ ಪ್ರಮುಖಾಂಶಗಳನ್ನು ಅಭ್ಯಸಿಸಿ ಸಿದ್ದತೆ ಮಾಡಿಕೊಳ್ಳಬೇಕು.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಜ್ಞಾನ : ಸಾಮಾನ್ಯ ಜ್ಞಾನದಲ್ಲಿ ದೇಶದ ಸಂಸ್ಕøತಿ, ಇತಿಹಾಸ, ಆಟೋಟ, ಸುದ್ದಿ ಸಮಾಚಾರಗಳು, ಹೊಸ ಸಂಶೋಧನೆಗಳು ಇತ್ಯಾದಿಗಳ ಜ್ಞಾನ ಪರೀಕ್ಷಿಸಲಾಗುತ್ತದೆ. ಪ್ರಮುಖವಾಗಿ ಮೇಲಿನ ವಿಭಾಗಗಳ ಮಾಹಿತಿಯನ್ನು ಅಂಕಿ-ಅಂಶಗಳೊಂದಿಗೆ ಸಂಗ್ರಹಿಸಿ ಅಭ್ಯಸಿಸಿದರೆ ಉತ್ತಮ. ಪ್ರಚಲಿತ ಜ್ಞಾನವನ್ನು ಏಪ್ರಿಲ್ 2014 ರಿಂದ ಮಾರ್ಚ 2015 ರವರೆಗಿನ ಜ್ಞಾನವನ್ನು ಅಳೆಯಲಾಗುತ್ತದೆ. ಅದಕ್ಕಾಗಿ ಅಭ್ಯರ್ಥಿಗಳು ಈ ಅವಧಿಯ ವಿವಿಧ ದಿನಪತ್ರಿಕೆಗಳನ್ನು ಸಂಗ್ರಹಿಸಿ ಮಾಹಿತಿ ಸಿದ್ದಪಡಿಸಿಕೊಂಡರೆ ಸುಲಭವಾಗಿ ಉತ್ತರಿಸಬಹುದು.
ಸಾಮಾನ್ಯ ಗಣಿತ : ಈ ವಿಭಾಗದಲ್ಲಿ ಅಭ್ಯರ್ಥಿಯ 10ನೇ ತರಗತಿಯವರೆಗಿನ ಗಣಿತದ ಪರಿಕಲ್ಪನೆಗಳನ್ನು ಪರೀಕ್ಷಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಲಾಭ-ನಷ್ಟ, ದಶಮಾಂಶ, ಭಿನ್ನರಾಶಿ, ಶೇಕಡಾಕ್ರಮ, ಸರಾಸರಿ, ಮದ್ಯಾಂಕ, ಅನುಪಾತ, ಸಮಾನುಪಾತ, ವಿಲೋಮಾನುಪಾತ, ಲ.ಸಾ.ಅ, ಮ.ಸಾ.ಅ, ಅವ್ಯಕ್ತ ಪದಗಳು ಹಾಗೂ ಇನ್ನಿತರೇ ಸರಳ ಗಣಿತದ ತತ್ವಗಳನ್ನು ಆಧರಿಸಿದ ಪ್ರಶ್ನೆಗಳಿಗಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ಪಠ್ಯ ಪುಸ್ತಕಗಳ ಅಭ್ಯಾಸಗಳನ್ನು ಕರಗತ ಮಾಡಿಕೊಳ್ಳಬೇಕು.
ಕಾನೂನು ಕೌಶಲ್ಯಗಳು : ಈ ವಿಭಾಗದಲ್ಲಿ ಅಭ್ಯರ್ಥಿಯ ಕಾನೂನು ಯೋಗ್ಯತಾ ಆಸಕ್ತಿಯನ್ನು ಪರೀಕ್ಷಿಸಲಾಗುತ್ತದೆ. ಅಂದರೆ ಕಾನೂನು ಶಿಕ್ಷಣದ ನಂತರ ಸಂಶೋಧನೆ, ಸಮಸ್ಯಾ ಪರಿಹಾರ ವಿಧಾನಗಳಲ್ಲಿನ ಆಸಕ್ತಿಯನ್ನು ಪರೀಕ್ಷಿಸಲಾಗುತ್ತದೆ. ಸತ್ಯ ಪ್ರತಿಪಾದಿಸಲು ಅಭ್ಯರ್ಥಿಯು ಬಳಸುವ ಮಾರ್ಗಗಗಳನ್ನು ಪರೀಕ್ಷಿಸಲಾಗುತ್ತದೆ. ಅದಕ್ಕಾಗಿ ಅಭ್ಯರ್ಥಿಯು ವಿವಿಧ ಸಾಮಾನ್ಯ ಸಮಸ್ಯಾ ಪರಿಹಾರ ತಂತ್ರಗಳ ಕುರಿತು ಅಭ್ಯಸಿಸಬೇಕಾಗುತ್ತದೆ.
ತಾರ್ಕಿಕ ಕೌಶಲ್ಯ : ಅಭ್ಯರ್ಥಿಯ ತರ್ಕಬದ್ದವಾದ ವಾದ ವೈಖರಿಯನ್ನು ಅಳೆಯಲು ಈ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ವಿವಿಧ ನಮೂನೆಗಳನ್ನು, ಸಾದೃಶ್ಯಗಳನ್ನು, ಸರಣಿಗಳನ್ನು, ದೃಷ್ಟಿಗೋಚರ ತರ್ಕಗಳನ್ನು ನೀಡಲಾಗಿರುತ್ತದೆ. ಅಭ್ಯರ್ಥಿಯು ಇವುಗಳ ಆಧಾರದ ಮೇಲೆ ತಮ್ಮ ತರ್ಕಬದ್ದ ವಾದವನ್ನು ಉತ್ತರಗಳ ಮೂಲಕ ಮಂಡಿಸಬೇಕು. ಅದಕ್ಕಾಗಿ ಸತತ ಅಭ್ಯಾಸ ಅಗತ್ಯ.
CLAT-2015 ರ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ದಿನಾಂಕ : 1ನೇ ಜನವರಿಯಿಂದ 31ನೇ ಮಾರ್ಚ 2015
ಪರೀಕ್ಷಾ ದಿನಾಂಕ : 10 ನೇ ಮೇ 2015
ಫಲಿತಾಂಶ ದಿನಾಂಕ : 25 ನೇ ಮೇ 2015
ಕೌನ್ಸಿಲಿಂಗ್ ದಿನಾಂಕ : 4 ರಿಂದ 22 ಜೂನ್ 2015
ಪ್ರವೇಶ ದಿನಾಂಕ : 24 ರಿಂದ 27 ಜೂನ್ 2015
                                                                                                         ಆರ್.ಬಿ.ಗುರುಬಸವರಾಜ










February 18, 2015

ವಿದೇಶಿ ವ್ಯಾಸಂಗ

                                     ವಿದೇಶಿ ವ್ಯಾಸಂಗದ ಕನಸು

                           ಪರೀಕ್ಷೆ ಪಾಸಾದ್ರೆ ನನಸು


    ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಜಗತ್ತು ಕಿರಿದಾಗತೊಡಗಿದೆ. ಜಾಗತೀಕರಣ ಜಗತ್ತಿನಲ್ಲಿ ಅನೇಕ ಅಂತರರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳು ಹುಟ್ಟಿಕೊಂಡಿವೆ. ಅಂತರರಾಷ್ಟ್ರೀಯ ಮಟ್ಟದ ವಿದ್ಯಮಾನಗಳಿಗೆ ಸ್ಪಂದಿಸಲು, ಅಂತರರಾಷ್ಟ್ರೀಯ ಸಮಸ್ಯೆಗಳಿಗೆ ಕಾರಣಗಳನ್ನು ಕಂಡುಕೊಳ್ಳಲು ಯೋಗ್ಯ ನಾಗರೀಕರನ್ನು ತಯಾರಿಸುವುದು ಪ್ರತೀ ದೇಶದ ಸವಾಲಾಗಿದೆ.   
    ಆ ನಿಟ್ಟಿನಲ್ಲಿ ಭಾರತೀಯ ವಿದ್ಯಾರ್ಥಿಗಳು ಬಹುರಾಷ್ಟ್ರೀಯ/ಪ್ರತಿಷ್ಟಿತ ಕಂಪನಿಗಳ ಎಲ್ಲಾ ಹುದ್ದೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಅಗತ್ಯವಿದೆ. ಜಾಗತಿಕ ಮಟ್ಟದ ಶೈಕ್ಷಣಿಕ ಪೈಪೋಟಿಗೆ ಭಾರತದ ವಿದ್ಯಾರ್ಥಿಗಳು ಸಿದ್ದಗೊಳ್ಳಬೇಕಾಗಿದೆ. ಅದಕ್ಕಾಗಿ ಭಾರತೀಯ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗ ಅನಿವಾರ್ಯವಾಗುತ್ತಿದೆ. ಭಾರತೀಯ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗ ಅನಿವಾರ್ಯವಾಗಲು ಪ್ರಮುಖ ಕಾರಣವೆಂದರೆ ಭಾರತದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳ ಕೊರತೆ ಹಾಗೂ ಆ ಶಿಕ್ಷಣ ಸಂಸ್ಥೆಗಳ ಸೀಮಿತ ಸ್ಥಾನಗಳಿಗೆ ಇರುವ ಸ್ಪರ್ದೆ. ಅಲ್ಲದೇ ವಿದೇಶಗಳಲ್ಲಿ ಉನ್ನತ ಶಿಕ್ಷಣದ ಖರ್ಚು ಕಡಿಮೆ. ಏಕೆಂದರೆ ಅಲ್ಲಿನ ಶಿಕ್ಷಣ ಸಂಸ್ಥೆಗಳು ವಿದ್ಯಾಭ್ಯಾಸಕ್ಕೆ ಸಾಕಾಗುವಷ್ಟು ವಿದ್ಯಾರ್ಥಿ ವೇತನ ನೀಡುತ್ತವೆ. ಜೊತೆಗೆ ವಿದ್ಯಾಭ್ಯಾಸದ ನಂತರ ಅರೆಕಾಲಿಕ ಹಾಗೂ ಪೂರ್ಣಪ್ರಮಾಣದ ವೃತ್ತಿ ಅವಕಾಶಗಳು ಹೆಚ್ಚು.
    ಇವುಗಳಲ್ಲದೇ ವಿವಿಧ ಐತಿಹಾಸಿಕತೆಗಳ ಅನುಭವ ಪಡೆಯಲು, ಸಾಂಸ್ಕøತಿಕ ಭಿನ್ನತೆಗಳು ಹಾಗೂ ಜಾಗತಿಕ ಮಾನವೀಯ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ವಿದೇಶಿ ವ್ಯಾಸಂಗದ ಅವಶ್ಯಕತೆ ಇದೆ.
    ವ್ಯಾಸಂಗದ ನಂತರ ವೃತ್ತಿ ಅವಕಾಶಗಳನ್ನು ಹುಡುಕಿ ವಿದೇಶಕ್ಕೆ ಹಾರುತ್ತಿದ್ದ ಅನೇಕ ಭಾರತೀಯ ಪ್ರತಿಭೆಗಳು ಇಂದು ವ್ಯಾಸಂಗಕ್ಕೂ ವಿದೇಶಕ್ಕೆ ಹಾರಬಯಸುವುದು ತಪ್ಪೇನಿಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂಬ ಕನಸು ಗರಿಗೆದರುವುದು ಸಾಮಾನ್ಯವಾಗಿದೆ. ವಿದೇಶಿ ವ್ಯಾಸಂಗ ಕನಸನ್ನು ನನಸು ಮಾಡಿಕೊಳ್ಳಲು  ಕೆಲವು ಪ್ರವೇಶ ಪರೀಕ್ಷೆಗಳು ಇವೆ. ಈ ಪ್ರವೇಶ ಪರೀಕ್ಷೆಗಳು ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗದ ಕನಸಿಗೆ ರೆಕ್ಕೆ ಪುಕ್ಕ ಹಚ್ಚಿ ವಿದೇಶಕ್ಕೆ ಹಾರಲು ಸಹಾಯ ಮಾಡುತ್ತವೆ.
    ವಿದೇಶದಲ್ಲಿ ಪದವಿ ಪೂರ್ವ ವ್ಯಾಸಂಗಕ್ಕಾಗಿ “ಸ್ಯಾಟ್” ಎದುರಿಸಬೇಕಾಗುತ್ತದೆ. ಪದವಿ ತರಗತಿಗಳಿಗಾಗಿ ಜಿ-ಮ್ಯಾಟ್, ಜಿಆರ್‍ಇ ಪರೀಕ್ಷೆಗಳು ಅವಶ್ಯಕ. ಐಇಎಲ್ಟಿಎಸ್, ಟೋಫೆಲ್ ಇತ್ಯಾದಿಗಳು ಇಂಗ್ಲೀಷ್ ಭಾಷಾ ಜ್ಞಾನದ ಪರೀಕ್ಷೆಗಳಾಗಿವೆ. ವಿದೇಶಿ ವ್ಯಾಸಂಗದ ಪ್ರವೇಶ ಪರೀಕ್ಷೆಯಲ್ಲಿ ಈ ಪರೀಕ್ಷೆಗಳು ರಹದಾರಿಗಳಾಗಿವೆ. ಶಾಲಾ ಶಿಕ್ಷಣದಲ್ಲಿ ಕಡಿಮೆ ಅಂಕ/ಶ್ರೇಣಿ ಪಡೆದಿದ್ದರೂ ನಿಮ್ಮ ಅನುಭವ ಹಾಗೂ ಅನ್ವಯಗಳ ಆಧಾರದ ಮೇಲೆ ಇನ್ನಿತರೇ ಕ್ಷೇತ್ರಗಳಲ್ಲಿನ ನಿಮ್ಮ ಸಾಮಥ್ರ್ಯ ಪ್ರದರ್ಶಿಸುವ ಮೂಲಕ ವಿದೇಶಿ ವ್ಯಾಸಂಗದ ಕನಸನ್ನು ನನಸಾಗಿ ಮಾಡಿಕೊಳ್ಳಬಹುದು. ಅಂತಹ ಕೆಲವು ಪರೀಕ್ಷೆಗಳ ಬಗ್ಗೆ ಒಂದು ಕಿರು ಝಲಕ್ ಇಲ್ಲದೆ.
ಸ್ಯಾಟ್(Scholastic Aptitude Test) : ಇದೊಂದು ಪ್ರಮಾಣೀಕೃತ ತಾರ್ಕಿಕ ಪರೀಕ್ಷೆಯಾಗಿದ್ದು, ಯುನೈಟೆಡ್ ಸ್ಟೇಟ್ಸ್‍ನ ಕಾಲೇಜುಗಳಲ್ಲಿ ಪ್ರವೇಶ ಹೊಂದಲು ಅವಶ್ಯಕ. ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುವ ಯಾವುದೇ ಹಂತದ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಇದಕ್ಕೆ ಕನಿಷ್ಟ ಅಂಕಗಳ ಅವಶ್ಯಕತೆ ಇಲ್ಲ. ಆದಾಗ್ಯೂ ಕೆಲವು ಕಾಲೇಜುಗಳು ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಉತ್ತಮ ಅಂಕ ಹಾಗೂ ಉತ್ತಮ ಶೈಕ್ಷಣಿಕ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತವೆ. ಕೆಲವು ಕಾಲೇಜುಗಳು ಅಲ್ಲಿನ ಕೋರ್ಸಿನ ವಿಷಯಗಳನ್ನಾಧರಿಸಿ ಹೆಚ್ಚು ಅಂಕಗಳನ್ನು ನಿರೀಕ್ಷಿಸುತ್ತವೆ.
ಆಕ್ಟ(American College Test): ಇದು ಅಮೇರಿಕಾದಲ್ಲಿ ವ್ಯಾಸಂಗ ಮಾಡಲು ಇರುವ ಪ್ರವೇಶ ಪರೀಕ್ಷೆಯಾಗಿದೆ. ಇದೊಂದು ಪ್ರಮಾಣೀಕೃತ ಪರೀಕ್ಷೆಯಾಗಿದ್ದು, ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದು ಅಮೇರಿಕಾದ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕಡ್ಡಾಯವಾದ ಪರೀಕ್ಷೆಯಾಗಿದ್ದು, ವರ್ಷಕ್ಕೆ 5 ಬಾರಿ ನಡೆಸಲಾಗುತ್ತದೆ.
ಜಿಆರ್‍ಇ(Graduate Record Exam) : ಸಾಮಾನ್ಯ ಪದವಿ ಅಥವಾ ವ್ಯವಹಾರಿಕ ಪದವಿಯು ವಿದೇಶದಲ್ಲಿ ಸಾಕಷ್ಟು ವೃತ್ತಿ ಅವಕಾಶಗಳನ್ನು ನೀಡುತ್ತದೆ. ವಿಶ್ವದೆಲ್ಲೆಡೆ ಪದವಿ ಮತ್ತು ವ್ಯವಹಾರಿಕ ಕಾರ್ಯಕ್ರಮಗಳು ಉತ್ತಮ ಮಾರ್ಗದರ್ಶನದಲ್ಲಿ ಗುರಿ ತಲುಪಲು ಜಿಆರ್‍ಇ ಎಂಬ ಸಾಮಾನ್ಯ ಪರೀಕ್ಷೆ ಅವಶ್ಯಕ.
    ಕೆಲವು ಪದವಿ/ವ್ಯವಹಾರಿಕ ಕಾಲೇಜುಗಳು ಅಭ್ಯರ್ಥಿಗಳ ಪದವಿ ವ್ಯಾಸಂಗದ ಸಿದ್ದತೆಯನ್ನು ಅಳೆಯಲು ಈ ಪರೀಕ್ಷೆ ನಡೆಸುತ್ತವೆ. ಈ ಪರೀಕ್ಷೆಯು ತಾರ್ಕಿಕ ಮಾತಿಗಾರಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ವಿಶ್ಲೇಷಣಾತ್ಮಕ ಬರಹದ ಕೌಶಲಗಳನ್ನು ಮೌಲ್ಯಮಾಪನ ಮಾಡುತ್ತದೆ.
ಜಿ-ಮ್ಯಾಟ್(Graduate Management Admission Test) : ಇದೊಂದು ಪದವಿ ತರಗತಿಗಳ ಅದರಲ್ಲೂ ಮುಖ್ಯವಾಗಿ ವ್ಯವಹಾರಿಕ ಪದವಿಯ ಪ್ರವೇಶ ಪರೀಕ್ಷೆಯಾಗಿದೆ. ಪದವಿಪೂರ್ವ ವ್ಯಾಸಂಗದಲ್ಲಿನ ಇಂಗ್ಲೀಷ್ ಭಾಷೆ ಹಾಗೂ ಗಣಿತಗಳ  ಕಂಪ್ಯೂಟರ್‍ನ ಅನ್ವಯಗಳನ್ನು ತಿಳಿಯುವ ಅರ್ಹತಾ ಪರೀಕ್ಷೆಯಾಗಿದೆ.
    ವ್ಯವಹಾರೋಧ್ಯಮ ಕಾಲೇಜುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಅಳೆಯಲು ಬಳಸುವ ಹಲವು ಮಾನದಂಡಗಳಲ್ಲಿ ಜಿ-ಮ್ಯಾಟ್ ಪ್ರಮುಖವಾದದ್ದು. ಇಲ್ಲಿ ಪ್ರಮುಖವಾಗಿ ಗಣಿತ ಮತ್ತು ಇಂಗ್ಲೀಷ್ ಭಾಷೆಗಳ ಸಾಮಥ್ರ್ಯವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಈ ಪರೀಕ್ಷೆಗಳನ್ನು ಪ್ರಪಂಚದಾದ್ಯಂತ ವರ್ಷಕ್ಕೆ 2 ಬಾರಿ ಆನ್‍ಲೈನ್ ಮೂಲಕ ನಡೆಸಲಾಗುತ್ತದೆ. ಆನ್‍ಲೈನ್ ವ್ಯವಸ್ಥೆ ಇಲ್ಲದವರಿಗಾಗಿ ಕೆಲವು ನಿರ್ದಿಷ್ಟ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್‍ಗಳ ಮೂಲಕ ಈ ಪರೀಕ್ಷೆ ನಡೆಸಲಾಗುತ್ತದೆ.
ಎಂ-ಕ್ಯಾಟ್(Medical College Admission Test) : ವಿದೇಶದಲ್ಲಿ ವೈದ್ಯಕೀಯ ವಿಜ್ಞಾನದ ಪ್ರವೇಶಕ್ಕಾಗಿ ಎಂ-ಕ್ಯಾಟ್ ಪರೀಕ್ಷೆ ನಡೆಸಲಾಗುತ್ತದೆ. ಇದು ಬಹುಆಯ್ಕೆಯ ಪ್ರಶ್ನೆಗಳುಳ್ಳ ಪರೀಕ್ಷೆಯಾಗಿದ್ದು, ಅಭ್ಯರ್ಥಿಗಳ ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಬಿಡಿಸುವ ವಿಧಾನ, ಬರಹ ಕೌಶಲ್ಯ, ವೈದ್ಯಕೀಯ ವಿಜ್ಞಾನದ ಮೂಲ ಪರಿಕಲ್ಪನೆ, ತತ್ವಗಳನ್ನಾಧರಿಸಿದ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ. ಜೊತೆಗೆ ಭೌತಶಾಸ್ತ್ರ, ಜೀವರಸಾಯನಶಾಸ್ತ್ರ, ತಾರ್ಕಿಕ ಮಾತುಗಾರಿಕೆ ಇತ್ಯಾದಿಗಳಲ್ಲಿನ ಅಂಕಗಳನ್ನೂ ಸಹ ಗಣನೆಗೆ ತೆಗೆದುಕೊಳ್ಳಾಗುತ್ತದೆ. ಯುನೈಟೆಡ್ ಸ್ಟೇಟ್ಸ್‍ನ ಯಾವುದೇ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಜಿ-ಮ್ಯಾಟ್ ಕಡ್ಡಾಯವಾಗಿದೆ.
ಟೋಯ್ಫೆಲ್ (Test Of English as a Foreign Language) : ಆಂಗ್ಲ ಭಾಷೆಯಲ್ಲಿನ ಸಾಮಥ್ರ್ಯ, ಬಳಕೆಯ ವಿಧಾನ ಮತ್ತು ಅನ್ವಯಗಳ ಕುರಿತ ಶೈಕ್ಷಣಿಕ ಮೌಲ್ಯಮಾಪನಕ್ಕಾಗಿ ಟೋಯ್ಫೆಲ್ ಪರೀಕ್ಷೆ ನಡೆಸಲಾಗುತ್ತದೆ. ಕೆಲವು ವಿದೇಶಿ ಕಾಲೇಜುಗಳು/ವಿಶ್ವವಿದ್ಯಾಲಯಗಳು ಸ್ಥಳೀಯ ಇಂಗ್ಲೀಷ್ ಭಾಷಿಕರಲ್ಲದವರಿಗಾಗಿ ಈ ಪರೀಕ್ಷೆ ನಡೆಸುತ್ತವೆ. ಕೆಲವು ವಿದೇಶಿ ಸರಕಾರಿ ಸಂಸ್ಥೆಗಳು, ಪರವಾನಿಗೆ ಸಂಸ್ಥೆಗಲ್ಲಿನ ವೃತ್ತಿಗಾಗಿ ಅಥವಾ ಕೆಲವು ಕಾಲೇಜುಗಳಲ್ಲಿನ ಸ್ಕಾಲರ್‍ಶಿಪ್‍ಗಾಗಿ ಟೋಯ್ಫೆಲ್ ಪರೀಕ್ಷೆಯ ಅವಶ್ಯಕತೆ ಇದೆ.
    ಈ ಅರ್ಹತಾ ಪರೀಕ್ಷೆಯ ಉತ್ತೀರ್ಣತೆಯ ಪ್ರಮಾಣಪತ್ರ 2 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ. ವೃತ್ತಿಯಲ್ಲಿರುವವರು 2 ವರ್ಷಗಳಿಗೊಮ್ಮೆ ಈ ಪರೀಕ್ಷೆ ಉತ್ತೀರ್ಣರಾಗುವುದು ಕಡ್ಡಾಯ.     ಇಂಗ್ಲೀಷ್ ಮಾತನಾಡುವ ರಾಷ್ಟ್ರಗಳಲ್ಲಿ ವ್ಯಾಸಂಗ, ಉದ್ಯೋಗ ಮತ್ತು ವ್ಯವಹಾರಕ್ಕಾಗಿ ಟೋಯ್ಫೆಲ್ ಪರೀಕ್ಷೆ ಕಡ್ಡಾಯವಾಗಿದೆ.
ಐಇಎಲ್‍ಟಿಎಸ್(International English Language Testing System) : ಜಗತ್ತಿನಾದ್ಯಂತ ಇಂಗ್ಲೀಷ್‍ನ ಕುಶಲತೆಯನ್ನು ತಿಳಿಯಲು ಈ ಪರೀಕ್ಷೆ ನಡೆಸಲಾಗುತ್ತದೆ. ಇದು ವಿಶ್ವದ ಅತ್ಯಂತ ಶ್ರೇಷ್ಟ ಇಂಗ್ಲೀಷ್ ಪರೀಕ್ಷೆಯಾಗಿದ್ದು, ಈಗಾಗಲೇ 1.4 ಮಿಲಿಯನ್ ಪರೀಕ್ಷೆಗಳನ್ನು ನಡೆಸಲಾಗಿದೆ. ವಿಶ್ವದಾದ್ಯಂತ 500 ಕೇಂದ್ರಗಳಲ್ಲಿ ತಿಂಗಳಿಗೆ 4 ಬಾರಿ ನಡೆಸಲಾಗುತ್ತದೆ. ಇದು ಅಂತರರಾಷ್ಟ್ರೀಯ ವೈವಿಧ್ಯತೆಯನ್ನು ಗೌರವಿಸುವುದರ ಜೊತೆಗೆ ಆಯಾ ರಾಷ್ಟ್ರಗಳಲ್ಲಿನ ಆಂಗ್ಲ ಭಾಷೆಯ ಮೇಲಿನ ಉದ್ಯೋಗಾವಕಾಶಗಳಿಗೂ ಇದು ಅನುಕೂಲಕರ.
    ಇದರಲ್ಲಿ 2 ರೀತಿಯ ಪರೀಕ್ಷೆಗಳಿವೆ. ಒಂದು ಶೈಕ್ಷಣಿಕ ಪರೀಕ್ಷೆ, ಇನ್ನೊಂದು ಸಾಮಾನ್ಯ ಪರೀಕ್ಷೆ. ಉನ್ನತ ವ್ಯಾಸಂಗಕ್ಕಾಗಿ ಶೈಕ್ಷಣಿಕ ಪರೀಕ್ಷೆ ಮೀಸಲಿದ್ದರೆ, ಉದ್ಯೋಗ, ವ್ಯಾಪಾರ ಹಾಗೂ ಇನ್ನಿತರೇ ಕೆಲಸಗಳಿಗೆ ಸಾಮಾನ್ಯ ಪರೀಕ್ಷೆ ಮೀಸಲು. ಈ ಎರಡೂ ವಿಧದ ಪರೀಕ್ಷೆಗಳಲ್ಲಿ ಭಾಷಾ ಕೌಶಲ್ಯಗಳಾದ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆಯನ್ನು ಆಧರಿಸಿದ ಪ್ರಶ್ನೆಗಳಿರುತ್ತವೆ.
ಓಯಟ್(Occupational English Test) : ಬೇರೆ ಬೇರೆ ರಾಷ್ಟ್ರಗಳಲ್ಲಿ ವೃತ್ತಿ ಮಾಡಲು ಅರ್ಹರಾದ ವೈದ್ಯಕೀಯ ವೃತ್ತಿಪರರಿಗೆ  ಹಾಗೂ ತಮ್ಮ ವೃತ್ತಿಯಲ್ಲಿ ಹೆಚ್ಚಿನ ಅಭ್ಯಾಸ ಮಾಡಲು ತಾತ್ಕಾಲಿಕವಾಗಿ ನೊಂದಣಿ ಮಾಡಿಸಿಕೊಂಡವರಿಗೆ ಈ ಪರೀಕ್ಷೆ ನಡೆಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿನ ಇಂಗ್ಲೀಷ್ ಭಾಷಾ ಬಳಕೆಯ ವಿಧಾನ ಅರಿಯಲು ಈ ಪರೀಕ್ಷೆ ನಡೆಸಲಾಗುತ್ತದೆ. ಇದನ್ನು ವಿಶ್ವದ 40 ಪರೀಕ್ಷಾ ಕೇಂದ್ರಗಳಲ್ಲಿ ವರ್ಷಕ್ಕೆ 10 ಬಾರಿ ನಡೆಸಲಾಗುತ್ತದೆ.
    ಮೇಲಿನ ಪರೀಕ್ಷೆಗಳಲ್ಲದೇ ಕೆಲವು ರಾಷ್ಟ್ರಗಳು ತಮ್ಮದೇ ಆದ ಕೆಲವು ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತವೆ. ಒಟ್ಟಾರೆ ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಚಿಸುವವರು ಒಂದಲ್ಲ ಒಂದು ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕಾದುದು ಕಡ್ಡಾಯ. ನಿಮ್ಮ ವಿದೇಶಿ ವ್ಯಾಸಂಗದ ಕನಸನ್ನು ನನಸಾಗಿಸುವ ಪರೀಕ್ಷೆಗಳಿಗೆ ಇಂದೇ ಸಿದ್ದರಾಗಿರಿ.

ವಿದೇಶಿ ವ್ಯಾಸಂಗಕ್ಕಾಗಿ ಕೆಲವು ಅಂತರಜಾಲ ತಾಣಗಳು


               www.embassy.org/embassies/index.html,
               www.goabroad.com
               www.language-learning.net,
               www.studyabroad.com
               www.cie.uci.edu
               internationalcenter.umich.edu/swt/index.html
               www.international.umn.edu
               www.globaled.us/wwcu/
               www.aasianst.org
               www.amscan.org
 


                                                                                                                             ಆರ್.ಬಿ.ಗುರುಬಸವರಾಜ

February 11, 2015

ಹೈಡ್ರೋಜನ್ ಪೆರಾಕ್ಸೈಡ್

ಹೈಡ್ರೋಜನ್ ಪೆರಾಕ್ಸೈಡ್   ಔಷಧ ಒಂದು ಚಿಕಿತ್ಸೆ ಹಲವು
    ಹೈಡ್ರೋಜನ್ ಪೆರಾಕ್ಸೈಡ್ ನೀರು ಮತ್ತು ಆಮ್ಲಜನಕ ಇರುವ ಏಕೈಕ ರೋಗಾಣುಕಾರಕ ಔಷಧವಾಗಿದೆ. ಹೈಡ್ರೋಜನ್ ಪೆರಾಕ್ಸೈಡ್‍ನ್ನು 19ನೇ ಶತಮಾನದಲ್ಲಿ ಅಸ್ತಮಾ, ಕ್ಷಯ, ಕಾಲರಾ, ಸಿಫಿಲಸ್, ಟೈಫಾಯಿಡ್, ನಾಯಿಕೆಮ್ಮು, ಹುಣ್ಣುಗಳು ಮುಂತಾದ ಕಾಯಿಲೆಗಳ ಚಿಕಿತ್ಸೆಗಾಗಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. 20ನೇ ಶತಮಾನದಲ್ಲಿ ಇದರ ಬಳಕೆ ಕಡಿಮೆಯಾಗಿತ್ತಾದರೂ ಈಗ ಪುನಃ ಅದರ ಬಳಕೆ ಹೆಚ್ಚುತ್ತಿದೆ. ಅನೇಕ ಜನರು ಸಾಂಪ್ರದಾಯಿಕ ಚಿಕಿತ್ಸೆಗಾಗಿ ಹೈಡ್ರೋಜನ್ ಪೆರಾಕ್ಸೈಡ್‍ನ ಮೊರೆಹೋಗುತ್ತಿದ್ದಾರೆ. ಇದರಲ್ಲಿ ಯಾವುದೇ ವಿಷಕಾರಕ ರಸಾಯನಿಕಗಳು ಇಲ್ಲದೇ ಇರುವುದು ಇದರ ಬಳಕೆ ಹೆಚ್ಚಲು ಕಾರಣವಾಗಿವೆ. ಹೈಡ್ರೋಜನ್ ಪೆರಾಕ್ಸೈಡ್‍ನ ಚಿಕಿತ್ಸೆಯನ್ನು “ಆಕ್ಸಿಜನ್ ಥೆರಪಿ” ಎಂದು ಕರೆಯಲಾಗುತ್ತದೆ.
    ಇದು ವಿಶ್ವದ ಎಲ್ಲಾ ಕಡೆಗಳಲ್ಲಿ ಸುಲಭವಾಗಿ ದೊರೆಯುವ ಸುರಕ್ಷಿತ, ನೈಸರ್ಗಿಕ ಮತ್ತು ಪರಿಣಾಮಕಾರಿಯಾದ ನಿರ್ಮಲೀಕಾರಕವಾಗಿದೆ. ಹೈಡ್ರೋಜನ್ ಪೆರಾಕ್ಸೈಡ್ ಮಾನವ ದೇಹದಲ್ಲಿನ ಸೊಂಕುಗಳ ವಿರುದ್ದ ಹೋರಾಡುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ನೋವು ನಿವಾರಕ ಔಷಧವಲ್ಲದಿದ್ದರೂ ಬ್ಯಾಕ್ಟೀರಿಯಾ, ವೈರಸ್, ಶಿಲೀಂದ್ರಗಳ ವಿರೋಧಿ ಔಷಧವಾಗಿದೆ. ಅಂದರೆ ಸೊಂಕು ಚಿಕಿತ್ಸೆಗೆ ಪರಿಣಾಮಕಾರಿಯಾದ ಔಷಧವಾಗಿದೆ. ಇದು ಅನೇಕ ಆರೋಗ್ಯಕಾರಿ ಹಾಗೂ ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ.

ಆರೋಗ್ಯಕಾರಿ ಪ್ರಯೋಜನಗಳು :
    ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚು ಸಮಯ ಕಾಲು ಚೀಲ ಬಳಸುವುದರಿಂದ ಪಾದಗಳು ಸೊಂಕಿಗೆ ಒಳಗಾಗುತ್ತವೆ. ಈ ಸೊಂಕನ್ನು ನಿವಾರಿಸಲು ಪ್ರತಿರಾತ್ರಿ ಪಾದಗಳಿಗೆ ಹೈಡ್ರೋಜನ್ ಪೆರಾಕ್ಸೈಡ್ ಹಚ್ಚುವುದರಿಂದ ಶಿಲೀಂದ್ರಗಳು ನಾಶವಾಗಿ ಪಾದಗಳು ಆರೋಗ್ಯಕಾರಿಯಾಗಿರುತ್ತವೆ.
    ಒಸಡುಗಳ ಉರಿಯೂತ ನಿವಾರಣೆಗೆ ಹೈಡ್ರೋಜನ್ ಪೆರಾಕ್ಸೈಡ್ ದಿವ್ಯೌಷಧವಾಗಿದೆ. ದಿನಕ್ಕೆ ಎರಡು ಬಾರಿ ಹೈಡ್ರೋಜನ್ ಪೆರಾಕ್ಸೈಡ್‍ನ ನಾಲ್ಕಾರು ಹನಿಗಳನ್ನು ಒಂದು ಲೋಟ ನೀರಿಗೆ ಸೇರಿಸಿ ಮುಕ್ಕಳಿಸುವುದರಿಂದ ಒಸಡುಗಳ ಉರಿಯೂತ ನಿವಾರಣೆ ಆಗುತ್ತದೆ. ಜೊತೆಗೆ ಒಸಡುಗಳ ಆರೋಗ್ಯ ಹೆಚ್ಚುತ್ತದೆ.
     ಚರ್ಮ ರಂದ್ರಗಳಲ್ಲಿನ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳ ಜಮಾವಣೆಯೇ ಮೊಡವೆಗಳು. ಹರಳೆ(ಹತ್ತಿ)ಗೆ ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ನೆನೆಸಿ ಮೊಡವೆಗೆ ಸವರುವುದರಿಂದ ಸೂಕ್ಷ್ಮಾಣು ಜೀವಿಗಳು ನಾಶವಾಗಿ ಮೊಡವೆಗಳು ನಿರ್ಮೂಲನೆಯಾಗುತ್ತವೆ ಮತ್ತು ಚರ್ಮದ ಕಾಂತಿ ಹೆಚ್ಚುತ್ತದೆ.
    ಬಾಯಿಯೊಳಗಿನ ಬ್ಯಾಕ್ಟೀರಿಯಾಗಳ ಬೆಳವಣಿಗೆಯಿಂದಾದ ದುರ್ಗಂಧಕ್ಕೆ ಹೈಡ್ರೋಜನ್ ಪೆರಾಕ್ಸೈಡ್ ಉತ್ತಮ ಔಷಧವಾಗಿದೆ. ಒಂದು ಚಮಚ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಒಂದು ಲೋಟ ನೀರಿಗೆ ಸೇರಿಸಿ ಬಾಯಿಗೆ ಹಾಕಿ ಮುಕ್ಕಳಿಸುವುದರಿಂದ ದುರ್ಗಂಧ ನಿವಾರಣೆ ಆಗುತ್ತದೆ ಹಾಗೂ ಬಾಯಿಯಲ್ಲಿ ತಾಜಾತನದ ಆಹ್ಲಾದ ಇರುತ್ತದೆ.
    ದೇಹದ ಯಾವುದೇ ಭಾಗದಲ್ಲಿನ ತೀವ್ರವಾದ ಯೀಸ್ಟ್ ಸೊಂಕನ್ನು ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ತೊಳೆಯುವುದರಿಂದ ಸೊಂಕು ನಿವಾರಣೆಯಾಗುತ್ತದೆ.
    ದುರ್ಬಲಗೊಳಿಸಿದ ಹೈಡ್ರೋಜನ್ ಪೆರಾಕ್ಸೈಡ್ ತುರಿಕೆ ಹಾಗೂ ಗಾಯಗಳನ್ನು ನಿವಾರಿಸುತ್ತದೆ.
    ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾದ ಚರ್ಮದ ಸೊಂಕು, ಗ್ಯಾಂಗ್ರಿನ್‍ನ ಚಿಕಿತ್ಸೆಗೆ ಹೈಡ್ರೋಜನ್ ಪೆರಾಕ್ಸೈಡ್ ಅತ್ಯುತ್ತಮ ಔಷಧವಾಗಿದೆ.
    ಹೈಡ್ರೋಜನ್ ಪೆರಾಕ್ಸೈಡ್ ಚರ್ಮದ ಮೇಲಿನ ಕ್ರಿಮಿಕೀಟಗಳನ್ನು ಕೊಲ್ಲುವ ಔಷಧವಾಗಿದ್ದು, ಚರ್ಮದ ರಕ್ಷಣೆ ಮಾಡುತ್ತದೆ.
    ಒಂದು ಚಮಚ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಒಂದು ಲೋಟ ಕ್ಲೋರಿನೇಟೆಡ್ ಅಲ್ಲದ ನೀರಿಗೆ ಸೇರಿಸಿ ಮೂಗಿನ ಒಳಭಾಗದಲ್ಲಿ ಸ್ಪ್ರೇ ಮಾಡಿಕೊಳ್ಳುವುದರಿಂದ ನಾಸಿಕ ನಾಳದ ಸಮಸ್ಯೆಗಳು ನಿವಾರಣೆ ಆಗುತ್ತವೆ.
    ಹೈಡ್ರೋಜನ್ ಪೆರಾಕ್ಸೈಡ್‍ನ್ನು ವೈದ್ಯಕೀಯ ಕ್ಷೇತ್ರದಲ್ಲಿ ಯಥೇಚ್ಚವಾಗಿ ಗಾಯಗಳನ್ನು ತೊಳೆಯಲು, ಸತ್ತ ಜೀವಕೋಶಗಳನ್ನು ತೆಗೆಯಲು ಮತ್ತು ಬಾಯಿಯ ಹುಣ್ಣನ್ನು ನಿವಾರಿಸಲು ಬಳಸಲಾಗುತ್ತದೆ.
    ದುರ್ಬಲಗೊಳಿಸದ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಕಿವಿಯ ಮೇಣವನ್ನು ತೆಗೆಯಲು ಬಳಸಲಾಗುತ್ತದೆ. ಇದು ಕಿವಿಯ ಮೇಣದಿಂದಾದ ನೋವಿಗೆ ಉಪಶಮನ ನೀಡುವುದರ ಜೊತೆಗೆ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
    ದುರ್ಬಲಗೊಳಿಸಿದ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಒಂದು ಲೋಟ ನೀರಿಗೆ ಸೇರಿಸಿ ಬಾಯಿಗೆ ಹಾಕಿ ಮುಕ್ಕಳಿಸುವುದರಿಂದ ಗಂಟಲಿನ ಉರಿಯೂತವನ್ನು ತೆಗೆದು ಹಾಕುತ್ತದೆ.

ಸೌಂದರ್ಯಕಾರಿ ಪ್ರಯೋಜನಗಳು :
    ಹೈಡ್ರೋಜನ್ ಪೆರಾಕ್ಸೈಡ್‍ನ 3 ಹನಿಗಳನ್ನು ಒಂದು ಲೋಟ ನೀರಿಗೆ ಸೇರಿಸಿ ಬಾಯಿಗೆ ಹಾಕಿ ಮುಕ್ಕಳಿಸುವುದರಿಂದ ಹಲ್ಲುಗಳು ಪಳಪಳನೇ ಹೊಳೆಯುತ್ತವೆ. ಜೊತೆಗೆ ಬಾಯಿಯ ತಾಜಾತನ ಕಾಪಾಡುತ್ತದೆ.
    ನೇಲ್ ಪಾಲಿಷ್‍ನ ಕಲೆಯನ್ನು ಹೋಗಲಾಡಿಸಲು ಹೈಡ್ರೋಜನ್ ಪೆರಾಕ್ಸೈಡ್ ಸಹಾಐ ಮಾಡುತ್ತದೆ ಹಾಗೂ ಉಗುರುಗಳು ಹೊಳೆಯುವಂತೆ ಮಾಡುತ್ತದೆ.
    ಬೇಕಿಂಗ್ ಸೋಡಾದ ಜೊತೆಗೆ ಹೈಡ್ರೋಜನ್ ಪೆರಾಕ್ಸೈಡ್ ಸೇರಿಸಿ ಪೇಸ್ಟ್ ತಯಾರಿಸಿ ಹಲ್ಲುಗಳಿಗೆ ಉಜ್ಜುವುದರಿಂದ ಹಲ್ಲುಗಳ ಕಲೆಯು ಮಾಯವಾಗುತ್ತದೆ.
    ಹೈಡ್ರೋಜನ್ ಪೆರಾಕ್ಸೈಡ್‍ನಿಂದ ಸೌಂದರ್ಯ ಸಾಧನಕ್ಕೆ ಬಳಸುವ ಬ್ರಷ್, ಬಾಚಣಿಕೆ ಮತ್ತು ಹಲ್ಲುಜ್ಜುವ ಬ್ರಷ್‍ಗಳನ್ನು ತೊಳೆಯುವುದರಿಂದ ಅವುಗಳಲ್ಲಿನ ಸೂಕ್ಷ್ಮಜೀವಿಗಳನ್ನು ನಾಶವಾಗುತ್ತವೆ.
    ತಲೆಗೂದಲಿನ ಗಾಢವಾದ ಕೃತಕ ಬಣ್ಣವನ್ನು ಕಡಿಮೆ ಮಾಡಲು ಹೈಡ್ರೋಜನ್ ಪೆರಾಕ್ಸೈಡ್ ಸಹಾಯ ಮಾಡುತ್ತದೆ. ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
    ಹೈಡ್ರೋಜನ್ ಪೆರಾಕ್ಸೈಡ್ ಕಾಂಟಾಕ್ಟ್ ಲೆನ್ಸ್‍ನ್ನು ಶುಚಿಗೊಳಿಸಲು ಸಹಾಯ ಮಾಡುತ್ತದೆ. ಲೆನ್ಸ್‍ನಲ್ಲಿನ ಸೂಕ್ಷ್ಮಜೀವಿಗಳನ್ನು ನಾಶ ಮಾಡಿ ಸೋಂಕು ನಿವಾರಕದಂತೆ ಕಾರ್ಯ ನಿರ್ವಹಿಸುತ್ತದೆ.
    ಹೀಗೆ ಅನೇಕ ಆರೋಗ್ಯಕಾರಿ ಹಾಗೂ ಸೌಂದರ್ಯಕಾರಿ ಪ್ರಯೋಜನಗಳನ್ನು ಹೊಂದಿದ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಎಲ್ಲಾ ವಯಸ್ಸಿನವರೂ ಬಳಸಬಹುದು. ಏಕೆಂದರೆ ಇದು ಯಾವುದೇ ಅಡ್ಡಪರಿಣಾಮಗಳಿಲ್ಲದ ಒಂದು ದಿವ್ಯೌಷಧವಾಗಿದೆ.

‘ಟೀಚರ್’ ಫೆಬ್ರವರಿ 2015                                                                            ಆರ್.ಬಿ.ಗುರುಬಸವರಾಜ



ಶಿಕ್ಷಕರು ಮತ್ತು ವಚನ ಸಾಹಿತ್ಯ

 ಫೆಬ್ರವರಿ 2015 ರ 'ಗುರುಮಾರ್ಗ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ
                  ಶಿಕ್ಷಕರು ಮತ್ತು ವಚನ ಸಾಹಿತ್ಯ
    ನಾಡಿನ ಸಮಸ್ತ ಓದುಗರಿಗೆ ಹಾಗೂ ಜನತೆಗೆ ‘ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು’. ಇಂದು ಕನ್ನಡಕ್ಕೆ ಎಂಟು ಜ್ಞಾನಪೀಠಗಳು ಲಭಿಸಿರುವುದಕ್ಕೆ ಪರೋಕ್ಷವಾಗಿ ಶಿಕ್ಷಕರೇ ಕಾರಣ. ಏಕೆಂದರೆ ಪ್ರತಿಯೊಬ್ಬ ಸಾಹಿತಿಗೆ ಸಾಹಿತ್ಯದ ಹುಚ್ಚು ಹಚ್ಚಿದವರು ಶಿಕ್ಷಕರೆಂದರೆ ಅತಿಶಯೋಕ್ತಿಯೇನಲ್ಲ. ಇಂದು ಕನ್ನಡ ಸಾಹಿತ್ಯವೆಂಬುದು ಹಲವಾರು ಪ್ರಕಾರಗಳಿಂದ ಕೂಡಿ ಸಂಪದ್ಭರಿತವಾಗಿದೆ. ಆ ಪ್ರಕಾರಗಳಲ್ಲಿ ‘ವಚನ ಸಾಹಿತ್ಯ’ವೂ ಒಂದು. ವಚನ ಸಾಹಿತ್ಯದ ದೃಷ್ಟಿಯಿಂದ ಹೇಳುವುದಾದರೆ ಹನ್ನೆರಡನೇ ಶತಮಾನ ಚಿನ್ನದ ಕಾಲ ಎನ್ನಬಹುದು. ಅದೊಂದು ಕನ್ನಡ ಸಾಹಿತ್ಯದ ಮೌಲಿಕ ಘಟ್ಟ. ಕಾವ್ಯವಾಹಿನಿ ಶ್ರೀಸಾಮಾನ್ಯನ ಬಳಿಗೆ ಬಂದ ಕಾಲ. ಈ ವಚನ ಸಾಹಿತ್ಯದ ಪ್ರತಿಯೊಬ್ಬ ವಚನಕಾರರೂ ಒಂದಲ್ಲ ಒಂದು ವೈಶಿಷ್ಟ್ಯದಿಂದ ನಕ್ಷತ್ರದಂತೆ ಮಿನುಗಿದ್ದಾರೆ.
    ಆ ಕಾಲದ ವಚನ ಸಾಹಿತ್ಯ ಇಂದಿಗೂ ಜೀವಂತವಾಗಿದೆ, ಚಲನಶೀಲವಾಗಿದೆ ಎಂದರೆ ಅದಕ್ಕೆ ಮೂಲ ಕಾರಣರೇ ಶಿಕ್ಷಕರು ಎಂಬುದು ನನ್ನ ಭಾವನೆ. ಯಾಕೆಂದರೆ ಮಗುವಿನ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗಿನ ವಿವಿಧ ಹಂತಗಳ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ವಚನ ಸಾಹಿತ್ಯದ ರಸ-ರುಚಿಯನ್ನು ತುಂಬಿ ಮುಂದಿನ ಪೀಳಿಗೆಗೆ ಸಾಗಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಿದ್ದಾರೆ. ಇಂತಹ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡ ಶಿಕ್ಷಕರಿಗೆ ವಚನ ಸಾಹಿತ್ಯದ ಆಳ ಅರಿವು ಇರಬೇಕಾದುದು ಅವಶ್ಯಕವಾಗಿದೆ.
ವಚನ ಸಾಹಿತ್ಯದ ಪರಿಕಲ್ಪನೆ
    ಹನ್ನೆರಡನೇ ಶತಮಾನದ ಕನ್ನಡ ನೆಲದಲ್ಲಿ ಜೀವಿಸಿದ್ದ ಸಾವಿರಾರು ಶರಣರು ತಮ್ಮ ಕೈಯಲ್ಲಿನ ಕಾಯಕ, ಮನದಲ್ಲಿನ ಭಕ್ತಿ, ಮಾತಿನಲ್ಲಿನ ಸ್ಪಷ್ಟತೆಯಿಂದ ಒಡಗೂಡಿ ರಚಿಸಿದ ಸಾಹಿತ್ಯವೇ ‘ವಚನ ಸಾಹಿತ್ಯ’. ಕನ್ನಡದ ಆಡು ನುಡಿಯನ್ನು ಬಳಸಿಕೊಂಡು, ಅನುಭವ ಅಭಿವ್ಯಕ್ತಿಗಳಿಂದ ವಚನ ಸಾಹಿತ್ಯವು ಉದಯಿಸಿ ಬಂದಿದೆ. ಅನುಭಾವಿಗಳಾದ ಶರಣರು ನೀಡಿದ ವಚನ ಸಾಹಿತ್ಯವು ಜಾಗತಿಕ ಅನುಭಾವ ಸಾಹಿತ್ಯದಲ್ಲಿ ಆದ್ಯಾತ್ಮಿಕ ಸಾಧನೆ ಸಿದ್ದಿಯ ಮಹೋನ್ನತಿಯನ್ನು ಮನಮೆಚ್ಚುವಂತೆ ತೆರೆದು ತೋರುವ ಶ್ರೇಷ್ಠ ಸಾಹಿತ್ಯ ರಾಶಿ. ಮತ್ತೆ ಮತ್ತೆ ಮೊಗೆಮೊಗೆದು ಸವಿದರೂ ಮುಗಿಯಲಾರದ ಅನುಭಾವದ ರಸಪಾಕ. ಇಂದಿಗೂ ಅಚ್ಚುಮೆಚ್ಚಾದ  ಜೋತಿರ್ಮಯ ಸಾಹಿತ್ಯ.
    ಹನ್ನೆರಡನೇ ಶತಮಾನದ ಕರ್ನಾಟಕದಲ್ಲಿ ನಡೆದ ಶಿವಶರಣರ ಬಹುಮುಖ ಕ್ರಾಂತಿಯು ಜಾಗತಿಕ ಇತಿಹಾಸದಲ್ಲಿ ಒಂದು ಅಪೂರ್ವ ಘಟನೆ. ಕಲುಷಿತವಾಗಿದ್ದ ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಪರಿಸರ ಈ ಕ್ರಾಂತಿಗೆ ಮೂಲವಾಗಿತ್ತು. ಶಿಕ್ಷಕರಾದ ನಾವು ಈ ಹಿನ್ನಲೆಯನ್ನು ಗಮನದಲ್ಲಿಟ್ಟುಕೊಂಡು, ವಚನಗಳನ್ನು ಇಂದಿನ ಅಗತ್ಯತೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಭೋದಿಸಬೇಕು. ಸಮಕಾಲಿನ ಸಮಸ್ಯೆಗಳನ್ನು ಕುರಿತು ಮಕ್ಕಳಲ್ಲಿ ಚಿಂತನಶೀಲ ಗುಣ ಬೆಳೆಸಿ, ಅವುಗಳಿಗೆ ಕಾರಣ ಮತ್ತು ಕಾರ್ಯ ಸಂಬಂಧವನ್ನು ಹುಡುಕಿ ಪರಿಹಾರವನ್ನು ಕಂಡುಕೊಳ್ಳುವ ಸಾಮಥ್ರ್ಯವನ್ನು ಬೆಳೆಸುವಲ್ಲಿ ವಚನ ಸಾಹಿತ್ಯ ಪೂರಕ ಅಂಶಗಳನ್ನು ಒದಗಿಸುತ್ತದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ.
ವಚನ ಸಾಹಿತ್ಯದ ಉಗಮ ಮತ್ತು ಆರಂಭ
    ವಚನ ಸಾಹಿತ್ಯದ ಉಗಮದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಅನ್ಯ ಭಾಷೆಗಳ ಮಾದರಿಯನ್ನು ಯಾವುದೇ ದೃಷ್ಟಿಯಿಂದಲೂ ಅನುಕರಿಸದೇ ಅಥವಾ  ಆರಂಭವಾಗಿಟ್ಟುಕೊಳ್ಳದೇ ಕೇವಲ ಅನುಭವದಿಂದಲೇ ಮೂಡಿ ರೂಪಿತವಾದ ಈ ಪ್ರಕಾರ ಕನ್ನಡದ ಹೆಮ್ಮೆಯಾಗಿದೆ. ವಿಶ್ವ ಸಾಹಿತ್ಯಕ್ಕೆ ಕನ್ನಡವು ನೀಡಿದ ಕಾಣಿಕೆಯಾಗಿದೆ.
    ಕ್ರಿ.ಶ 11-12ನೇ ಶತಮಾನದ ಕರ್ನಾಟಕದಲ್ಲಿ ರಾಜಮನೆತನಗಳು ರಾಜ್ಯಕ್ಕಾಗಿ, ಸಿಂಹಾಸನಕ್ಕಾಗಿ ತಮ್ಮತಮ್ಮಲ್ಲೇ ಹೊಡೆದಾಡುತ್ತಿದ್ದು, ಬೇರೆ ವಿಷಯಗಳತ್ತ ಗಮನ ಹರಿಸಲು ಸಾಧ್ಯವಿಲ್ಲದಂತಾಗಿ ಜನಸಾಮಾನ್ಯರನ್ನು ನಿರ್ಲಕ್ಷಿಸಲಾಗಿತ್ತು. ಸಮಾಜದಲ್ಲಿ ಅಭದ್ರತೆ, ಅಸ್ಥಿರತೆ ತಾಂಡವವಾಡುತ್ತಿದ್ದವು. ನೆರೆಯ ತಮಿಳುನಾಡಿನಲ್ಲಿ ಪ್ರಾರಂಭವಾಗಿದ್ದ ಭಕ್ತಿ ಆಂದೋಲನ ಕರ್ನಾಟಕದಲ್ಲಿ ಬೇರೊಂದು ರೀತಿಯ ಆಂದೋಲನವನ್ನು ಹುಟ್ಟು ಹಾಕಿತು. ಸಮಾಜದ ಅಮೂಲಾಗ್ರ ಬದಲಾವಣೆಯನ್ನು ಹಮ್ಮಿಕೊಂಡು ವೈಚಾರಿಕ ಕ್ರಾಂತಿಯನ್ನುಂಟು ಮಾಡುವ ಮೂಲಕ ಜನತೆಯ ಬುದ್ದಿ ಮತ್ತು ಹೃದಯಗಳನ್ನು ತಟ್ಟಿ, ಜನಜಾಗೃತಿ ಮೂಡಲು ವಚನಕಾರರು ಉದಯಿಸಿದರು. ವಸ್ತು, ರೀತಿ, ಅಲಂಕಾರ, ರಸ ಹೀಗೆ ಎಲ್ಲ ದೃಷ್ಟಿಯಿಂದಲೂ ಸರ್ವತಂತ್ರ ಸ್ವತಂತ್ರವಾದ ಸಾಹಿತ್ಯ ಸೃಷ್ಟಯಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಮನ್ವಂತರ ಪ್ರಾರಂಭವಾಯತು.
    ವಚನ ಸಾಹಿತ್ಯ ಸಹಜ ಸ್ಪೂರ್ತಿಯ ಹಿನ್ನಲೆಯನ್ನೊಳಗೊಂಡು ಶ್ರೀಸಾಮಾನ್ಯನ ಮಧ್ಯದಿಂದಲೇ ಬಂದ ಸಾಹಿತ್ಯ ಪ್ರಕಾರವಾದುದುರಿಂದ ಇದಕ್ಕೆ ಅನ್ಯಭಾಷಾ ಸಾಹಿತ್ಯ ಪ್ರಕಾರಗಳು ನೇರವಾದ ಪ್ರಭಾವ ಬೀರಿದವು ಎಂಬುದು ವಿಚಾರಣೀಯವಾದ ಅಂಶ. ವಚನಕಾರರು ಪ್ರಜ್ಞಾವಂತರಾಗಿದ್ದು, ಸಮಾಜದ ನೇರ ಅನುಭವವನ್ನು ಪಡೆದು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಂಡು ಅದರ ಸಾಕ್ಷಾತ್ಕಾರ ಮಾಡಿಕೊಂಡು ನಿಜವಾದ ನೆಲೆ-ಬೆಲೆಗಳನ್ನು ಅರಿತು ಬದುಕಿದ್ದರು. ಹೀಗಾಗಿ ಅವರಿಂದ ಹೊರಟ ಪ್ರತಿಯೊಂದು ನುಡಿಯೂ ಅಂದಿನ ಸಮಾಜದ ಪರಿಸ್ಥಿಯ ಅರಿವನ ನುಡಿಯಾಯಿತು. ಅನುಭಾವದ ನುಡುಯಾಯಿತು. ವಚನಕಾರರೇ ಈ ವಚನ ಸಾಹಿತ್ಯದ ಮೊದಲಿಗರಾದರು.
    ಕನ್ನಡದಲ್ಲಿ ವಚನ ಸಾಹಿತ್ಯ ಯಾವಾಗ ಆರಂಭವಾಯಿತು ಎಂಬುದಕ್ಕೆ ಖಚಿತ ಆಧಾರಗಳಿಲ್ಲವಾದರೂ ಬಸವಣ್ಣನವರ ಕಾಲದ ಹೊತ್ತಿಗೆ ವಿಜೃಂಭಿಸುತ್ತಿದ್ದ ವಚನ ಸಾಹಿತ್ಯ, ಬಸವಣ್ಣನಿಗಿಂತ ಪೂರ್ವದಲ್ಲಿ ಇದ್ದಿತೆನ್ನಲು ಸಾಕಷ್ಟು ಪುರಾವೆಗಳಿವೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಕೆಲವು ಹಿರಿಯ ವಚನಕಾರರಾದ ದೇವರ ದಾಸಿಮಯ್ಯ, ಮಾದರಸ ಮುಂತಾದವರನ್ನು ಸ್ತುತಿಸಿರುವುದರಿಂದ ಅವರಿಗಿಂತಲೂ ಹಿಂದೆಯೇ ವಚನ ಸಾಹಿತ್ಯ ಇತ್ತೆಂಬುದು ವೇದ್ಯವಾಗುತ್ತದೆ. “ವಚನ ವಾಗ್ಮಯದ ಕಾಲ ಬಸವಣ್ಣನಿಗಿಂತ ಒಂದು ಶತಮಾನದಷ್ಟು ಹಿಂದೆಯೇ ಇತ್ತೆಂದು ಊಹಿಸಬಹುದು” ಎಂದು ಆರ್.ಸಿ.ಹಿರೇಮಠರವರು ಹೇಳುತ್ತಾರೆ. ‘ವಚನ ಸಾಹಿತ್ಯವು ಕ್ರಿ.ಶ 09-10ನೇ ಶತಮಾನದಲ್ಲಿ ಇತ್ತೆಂದು, ಈಗ ಉಪಲಬ್ದವಿರುವ ಎಷ್ಟೋ ವಚನಗಳು ಪಂಪನ ಸಾಹಿತ್ಯಕ್ಕಿಂತ ಪ್ರಾಚೀನ’ ಎಂದು ಎಲ್.ಬಸವರಾಜರವರು ಅಭಿಪ್ರಾಯ ಪಡುತ್ತಾರೆ. ಹೀಗಾಗಿ ವಚನ ಸಾಹಿತ್ಯದ ಉಗಮದ ಬಗ್ಗೆ ನಾನಾ ರೀತಿಯ ಹೇಳಿಕೆಗಳಿದ್ದಾಗ್ಯೂ 12ನೇ ಶತಮಾನದಲ್ಲಿ ಉಚ್ಪ್ರಾಯ ಸ್ಥಿತಿಯಲ್ಲಿತ್ತೆಂದು ತಿಳಿಯಬಹುದಾಗಿದೆ.
ವಚನ ಸಾಹಿತ್ಯದ ಸ್ವರೂಪ
    ವಚನ ಸಾಹಿತ್ಯದ ಉಗಮದ ಬಗ್ಗೆ ಭಿನ್ನಾಭಿಪ್ರಾಯಗಳು ಇರುವಂತೆ ಸ್ವರೂಪದ ಬಗ್ಗೆಯೂ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ. ವಚನ ಸಾಹಿತ್ಯ ಗದ್ಯಪದ್ಯಗಳ ಹದವಾದ ಮಿಶ್ರಣವಾಗಿದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ವಚನಗಳಲ್ಲಿ ಗದ್ಯದ ನಿರರ್ಗಳತೆ ಇಲ್ಲದಿದ್ದರೂ ಸರಳತೆ ಇದೆ. ಪದ್ಯದ ಕ್ರಮಬದ್ದ ಛಂದೋಗತಿ ಇಲ್ಲದಿದ್ದರೂ ಲಯವಿದೆ.
    “ವಚನಗಳು ಗದ್ಯಪದ್ಯಗಳ ಮಧ್ಯದ ಇನ್ನೊಂದು ಜಾತಿಯಾಗಿದ್ದು, ಅವುಗಳನ್ನು ಲಯಾನ್ವಿತ ಗದ್ಯವೆಂದೂ, ಅನಿಶ್ಚಿತ ಲಯವಿರುವ ಪದ್ಯವೆಂದೂ ಕರೆಯಬಹುದು” ಎಂಬುದು ಎಂ.ಚಿದಾನಂದಮೂರ್ತಿಯವರ ನಿಲುವು. ಸ್ಪಷ್ಟವಾಗಿ ಹೇಳುವುದಾದರೆ ವಚನಗಳೆಂದರೆ ನಡುಗನ್ನಡ ಶೈಲಿಯ ಅನುಭಾವ ಗದ್ಯದಲ್ಲಿ ಉಸುರಿದ ಆದ್ಮಾತ್ಮಿಕ ಭಾವಗೀತೆಗಳು.
    “ವಚನಗಳು ಪದ್ಯದ ಲಯವನ್ನು, ಗದ್ಯದ ಸ್ವಾಚ್ಛಂಧವನ್ನು ಒಳಗೊಂಡಿವೆ. ಗದ್ಯದಂತೆ ಓದಬಹುದು, ಪದ್ಯದಂತೆ ಹೇಳಬಹುದು, ಗೀತದಂತೆ ಹಾಡಬಹುದು” ಎಂಬುದು ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಮಾತು. ಹೀಗೆ ವಿವಿಧ ಅಭಿಪ್ರಾಯಗಳನ್ನು ಸಂಗ್ರಹಿಸಿ ಅವಲೋಕಿಸುವುದಾದರೆ ವಚನಗಳು ಕಾಲಮಾನದ ಎಲ್ಲಾ ಬಯಕೆ ಬೇಡಿಕೆಗಳನ್ನು ತನ್ನ ನಡೆ ನುಡಿಯಲ್ಲಿ  ಪರಿಮಳದಂತೆ ಅರಳಿಸಿದ ಸಂಪ್ರದಾಯಗಳನ್ನು ಗಾಳಿಗೆ ತೂರಿ, ಹೊಸ ಮಾರ್ಗವೊಂದನ್ನು ಸೃಷ್ಟಿಸಿದ ಸಾಹಿತ್ಯವಾಗಿದೆ. ಗದ್ಯಪದ್ಯಗಳೆರಡರ ಗುಣಾಂಶಗಳನ್ನು ಒಳಗೊಂಡು ತಂತಾನೇ ಅನುಭಾವ ಸಿದ್ದಿಸಿದ ಸಾಕ್ಷಾತ್ಕಾರದ ಸಾಕಾರದ ಆದ್ಯಾತ್ಮಿಕ ಭಾವಗೀತೆಗಳು ಎನಿಸುತ್ತವೆ.
ವಚನ ಸಾಹಿತ್ಯದಲ್ಲಿನ ಜೀವನ ಮೌಲ್ಯಗಳು
    ‘ಜೀವನ ಮೌಲ್ಯಗಳು ಅಧಃಪತನಕ್ಕಿಳಿದಿವೆ’ ಎಂಬಂತಹ ಮಾತು ಇತ್ತೀಚಿಗೆ ಕೇಳಿಬರುತ್ತಿವೆ. ಇದನ್ನು ಹೋಗಲಾಡಿಸಿ ಮಕ್ಕಳಲ್ಲಿ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಲು ವಚನಗಳು ವಿಪುಲ ಅವಕಾಶ ಒದಗಿಸಿ ಕೊಡುತ್ತವೆ. ಪ್ರತಿಯೊಂದು ವಚನಗಳು ಮಾನವೀಯ/ಜೀವನ ಮೌಲ್ಯಗಳನ್ನು ತಮ್ಮ ಒಡಲಲ್ಲಿ ತುಂಬಿಕೊಂಡಿರುತ್ತವೆ. ಅವುಗಳನ್ನು ಗುರುತಿಸಿ ಮಕ್ಕಳಲ್ಲಿ ಬೆಳೆಸಬೇಕಾದುದು ಶಿಕ್ಷಕರಿಗೆ ಅನಿವಾರ್ಯವಾಗಿದೆ.
    ಶರಣರು ವಚನ ಸೃಷ್ಟಿಗೈದುದು ತಮಗಾಗಿ ಅಲ್ಲ, ಜನಸಾಮಾನ್ಯರಿಗಾಗಿ. ಅದು ಅವರಲ್ಲಿನ ನಿಸ್ವಾರ್ಥ ಮನೋಭಾವನೆಯನ್ನು, ನಿಷ್ಕಾಮ ಪ್ರೇಮವನ್ನು, ನಿಷ್ಕಲ್ಮಷ ಮನಸ್ಸನ್ನು ತೋರಿಸುತ್ತದೆ. ಇದನ್ನು ನಮ್ಮ ಮಕ್ಕಳಿಗೆ ಮನದಟ್ಟು ಮಾಡಿಸಬೇಕಾಗಿದೆ. ವಿಶ್ವಶಾಂತಿಗೆ ಶರಣತತ್ವ ಶಾಂತಿ ಸಮಾದಾನ ನೀಡಬಲ್ಲದು. ದ್ವೇಷ, ವಿರಸ, ದ್ವಂದ್ವ ರಹಿತ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯದ ಅಧ್ಯಯನ ಬಹಳ ಮುಖ್ಯ. ಇದನ್ನು ನಮ್ಮ ಪೀಳಿಗೆಗೆ ತಿಳಿಸಿ ಹೇಳಬೇಕಾಗಿದೆ. ವಚನ ಜ್ಞಾನ ವ್ಯಕ್ತಿಯಲ್ಲಿರುವ ಅಜ್ಞಾನವನ್ನು ಸುಟ್ಟುಹಾಕಿ ಅವನನ್ನು ಚೈತನ್ಯ ಸ್ವರೂಪನನ್ನಾಗಿಸುತ್ತದೆ. ಈ ಹಿನ್ನಲೆಯಲ್ಲಿ ವಚನ ಸಾಹಿತ್ಯದ ಮೂಲಕ ಜೀವನ ಮೌಲ್ಯಗಳು ವ್ಯಕ್ತಿಯಲ್ಲಿ ಹಾಗೂ ಸಮಾಜದಲ್ಲಿ ಹೇಗೆ ಅರ್ವಿಭಾವಿಸಿವೆ ಎಂಬುದು ತಿಳಿದು ಬರುತ್ತದೆ.
    ಜ್ಞಾನ ಉದಯಿಸಿದ ಕ್ಷಣದಲ್ಲಿ ಅಜ್ಞಾನಕ್ಕೆ ಜಾಗವಿಲ್ಲ. ನಮ್ಮ ಸುತ್ತಲೂ ಆವರಿಸಿದ ಕತ್ತಲು ಒಂದು ಸಣ್ಣ ಬೆಳಕಿನಿಂದ ದೂರ ಸರಿಯುವಂತೆ, ವಿದ್ಯೆ ಮತ್ತು ಜ್ಞಾನಗಳು ವ್ಯಕ್ತಿಯ ಅಜ್ಞಾನ ತೊಲಗಿಸಿ ಸುಜ್ಞಾನ ಮೂಡಿಸುತ್ತವೆ. ವಚನಗಳ ಅಧ್ಯಯನದಿಂದ ಮಕ್ಕಳಲ್ಲಿ ಇಂತಹ ಸುಜ್ಞಾನ ಮೂಡಿ ಸರಳತೆ, ಸಜ್ಜನಿಕೆಗಳು ಮೇಳವಿಸಿ, ಭೇಧ ಮರೆತು ಸಮರಸರಿಂದ ಬಾಳುವ ವಿಶ್ವಭ್ರಾತೃತ್ವ ಗುಣಗಳನ್ನು ಬೆಳೆಸಬಹುದಾಗಿದೆ.
    ಸದ್ಗುಣಗಳು ಮಾನವನಿಗೆ ಆಭರಣ ಇದ್ದಂತೆ. ವ್ಯಕ್ತಿಯು ಮೊದಲು ಗುಣಾಢ್ಯನಾಗಬೇಕು. ಪ್ರತಿಕ್ಷಣ ತನ್ನನ್ನು ತಾನೇ ಸ್ವವಿಮರ್ಶೆಗೆ ಒಳಪಡಿಸಿಕೊಂಡು ಅಂಕು-ಡೊಂಕುಗಳನ್ನು ತಿದ್ದಿಕೊಳ್ಳಲು ಶ್ರಮಿಸಬೇಕು ಎಂಬುದನ್ನು ವಚನಗಳು ತಿಳಿಸಿಕೊಡುತ್ತವೆ.
    ವಚನ ಸಾಹಿತ್ಯ ವಿಸ್ತಾರವಾದ ನೆಲೆಗಟ್ಟುಳ್ಳದ್ದಾಗಿದ್ದು, ಜೀವನದ ಮೌಲ್ಯಗಳನ್ನು ವ್ಯಕ್ತಿಯಲ್ಲಿ ಬೆಳೆಸಲು ಪೂರಕವಾಗಿವೆ. ವ್ಯಕ್ತಿಗೆ ಅವಶ್ಯಕವಾದ ಸಂಸ್ಕಾರಯುತ ಮೌಲ್ಯಗಳನ್ನು ವಚನ ಸಾಹಿತ್ಯ ನೀಡುತ್ತದೆ. ಇಂದಿನ ವಿಶ್ವದ ವಿಷಮ ಸ್ಥಿತಿಗೆ ವಚನ ಸಾಹಿತ್ಯ ಸಿದ್ದೌಷಧವೆಂದರೆ ಅತಿಶಯೋಕ್ತಿ ಏನಲ್ಲ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕಾಗಿದೆ. ವಚನ ಸಾಹಿತ್ಯವನ್ನು ತಮ್ಮ ಬಾಹ್ಯ ಮತ್ತು ಆಂತರಿಕ ಶಾಲಾ ಪರಿಸರಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಬೆಳೆಯುವಂತೆ ಮಾಡುವಲ್ಲಿ ಶಿಕ್ಷಕರ ಶ್ರಮ ಅಡಗಿದೆ. ಇದನ್ನು ಅರಿತು ನಾವೆಲ್ಲರೂ ಮುನ್ನುಗ್ಗೋಣ. ಆ ಮೂಲಕ ವಚನ ಸಾಹಿತ್ಯವನ್ನು ವಿಶ್ವಭ್ರಾತೃತ್ವಕ್ಕೆ ಬಳಸಿಕೊಂಡು ಹೊಸ ಮನ್ವಂತರಕ್ಕೆ ಸಾಕ್ಷಿಯಾಗೋಣ.
‘ಗುರುಮಾರ್ಗ’ ನವೆಂಬರ್ 2014                                                                       ಆರ್.ಬಿ.ಗುರುಬಸವರಾಜ.
       

                                   

   

ಮಾತಿನ ಮೋಡಿ

                               ಮಾತಿನ ಮೋಡಿ

 

    ಇಂದಿನ ಯುವಕರಿಗೆ ಭಾಷಣ ಕೇಳುವುದೆಂದರೆ ಅಲರ್ಜಿ. ಕೆಲವರಿಗೆ ಭಾಷಣ ಮಾಡುವುದೆಂದರೆ ಭಯ. ಆದರೆ ಭಾಷಣವು ಜನತೆಯ ವಿಚಾರವಂತಿಕೆಯನ್ನು, ಜ್ಞಾನಾರ್ಜನೆಯನ್ನು ವೃದ್ದಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂಬುದನ್ನು ಬಹುತೇಕರು ಗಮನಿಸಿಲ್ಲ.
    ಭಾಷಣವು ವಿಶಿಷ್ಟ ರೀತಿಯ ವಾಗ್ವಿಲಾಸವೂ, ಕಲಾತ್ಮಕವಾದ ಮಾತುಗಾರಿಕೆಯೂ, ಜನತೆಯ ಬುದ್ದಿ ಭಾವಗಳನ್ನು ಅಭಿವೃದ್ದಿಪಡಿಸುವ ಸಾಧನವೂ ಆಗಿದೆ. ಇಂದಿನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೂ ಭಾಷಣ ಕಲೆಯ ಅರಿವು ಇರಬೇಕಾದುದು ಅವಶ್ಯವಾಗಿದೆ. ಕ್ರಾಂತಿಯೂ ಭಾಷಣದಿಂದ, ಶಾಂತಿಯೂ ಭಾಷಣದಿಂದ ಎಂಬುದನ್ನು ನಾವು ಇತಿಹಾಸದುದ್ದಕ್ಕೂ ಓದುತ್ತೇವೆ. ಉತ್ತಮವಾದ ಭಾಷಣವು ಲೋಕಕಲ್ಯಾಣಕ್ಕೆ ಕಾರಣವಾಯಿತೆಂಬುದನ್ನು ಇತಿಹಾಸ ಸಾರಿ ಸಾರಿ ಹೇಳುತ್ತದೆ. ಹಾಗಾದರೆ ಭಾಷಣ ಎಂದರೇನು? ಭಾಷಣಕಾರ ಹೇಗಿರಬೇಕು? ಪರಿಣಾಮಕಾರಿ ಭಾಷಣ ಹೇಗಿರಬೇಕು? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಅಂತಹ ಕೆಲವು ಪ್ರಶ್ನೆಗಳಿಗೆ ಕಿರು ಮಾಹಿತಿ ಇಲ್ಲಿದೆ.
   ಬುದ್ದಿಪೂರ್ವಕವಾಗಿ, ತರ್ಕಬದ್ದವಾಗಿ, ನ್ಯಾಯಯೋಚಿತವಾಗಿ, ಪ್ರಾಸಂಗಕ್ಕನುಗುಣವಾಗಿ ವಿಚಾರದ ಪ್ರತಿಪಾದನೆಯೇ ಭಾಷಣ. ಭಾಷಣವು ಕೇವಲ ಮಾತಿನ ಚತುರತೆಯಾಗಿರದೇ, ಜನತೆಯ ಮೇಲೆ ಪ್ರಭಾವ ಬೀರುವ ವಿಚಾರಶಕ್ತಿಯ ರೂಪವೂ ಆಗಿದೆ. ಉತ್ತಮ ಭಾಷಣವು ಒಂದು ಕಲೆಯಾಗಿದ್ದು, ಅದಕ್ಕೆ ಹೆಚ್ಚಿನ ನೈಪುಣ್ಯತೆ, ಸಿದ್ದತೆ, ಚತುರತೆ, ನಿರ್ಭಯತೆಗಳು ಅಗತ್ಯವಾಗಿವೆ. ಕೇಳುತ್ತಿರುವ ಇಡೀ ಜನಸ್ತೋಮವನ್ನು ತನ್ನೆಡೆಗೆ ಸೆಳೆದುಕೊಂಡು ವಿಷಯವನ್ನು ನಿರೂಪಿಸುವುದು ಸುಲಭದ ಕೆಲಸವಲ್ಲ.
    ಭಾಷಣಕಾರ ಹೇಗಿರಬೇಕು? : ಭಾಷಣವೆಂಬುದು ಒಂದು ವಿಷಯದ ಗಂಭೀರ ನಿರೂಪಣೆಯಾಗಿದೆ. ಇದು ವಿಚಾರದ ಪ್ರಚೋದನೆಯೂ, ಸಂದೇಶದ ವಾಹಕವೂ ಹಾಗೂ ಜನಜಾಗೃತಿಯ ಸಾಧನವೂ ಆಗಿದೆ. ಆದ್ದರಿಂದ ಭಾಷಣಕಾರನು ಹೆಚ್ಚಿನ ಮಾನಸಿಕ ಹಾಗೂ ಬೌದ್ದಿಕ ಸಾಮಥ್ರ್ಯ ಹೊಂದಿದ್ದು, ಸಭಿಕರಿಗೆ ರಸದೌತಣ ನೀಡುವಂತಿರಬೇಕು. ಭಾಷಣಕಾರನು ಎಲ್ಲರಂತೆ ತಾನೂ ಒಬ್ಬ ಪ್ರೇಕ್ಷಕ ಎಂದು ತಿಳಿಯದೇ, ತಾನು ನಿರ್ದಿಷ್ಟ ವಿಷಯವನ್ನು ತಿಳಿಸಲು ಬಂದಿರುವ ಸಂದೇಶವಾಹಕ ಎಂಬ ಪ್ರಜ್ಞೆ ಇರಬೇಕು. ಆದ್ದರಿಂದ ಭಾಷಣಕಾರನಿಗೆ ಜಾಣ್ಮೆ, ವಿದ್ವತ್ತು ಮತ್ತು ವಿವೇಕಗಳ ಜೊತೆಗೆ ಸಮಯಪ್ರಜ್ಞೆ ಇರಬೇಕು.
    ಭಾಷಣಕಾರನಿಗೆ ಅನುಭವ ಪಾಂಡಿತ್ಯ ಮತ್ತು ಪರಿಶ್ರಮಗಳೇ ಬಂಡವಾಳ. ಇವುಗಳನ್ನು ಗಳಿಸಿಕೊಳ್ಳಲು ಸತತ ಅಭ್ಯಾಸ ಅಗತ್ಯ. ಭಾಷಣವು ಸಮಯೋಚಿತವಾಗಿದ್ದು, ವಿಷಯ ನಿರೂಪಣೆ ಸರಳವೂ, ಗಂಭೀರವೂ, ಹೃದ್ಯವೂ ಆಗಿರಬೇಕು. ಭಾಷಣಕಾರನು ಸದಾ ಜಾಗೃತನಾಗಿದ್ದು, ಸಭಿಕರನ್ನು ತನ್ನ ಮಾತಿನ ಮೋಡಿಯಿಂದ ವಶೀಕರಿಸಿಕೊಂಡು ಮೈಮರೆಸಬೇಕು. ಆಗಾಗ ಸಭಿಕರನ್ನು ನಗಿಸುವ ಕಲೆಯನ್ನು ಕರಗತ ಮಾಡಿಕೊಂಡಿರಬೇಕು.
    ಭಾಷಣವು ವಿದ್ವತ್ತು ಪ್ರತಿಭೆ ಮತ್ತು ಅನುಭವಗಳಿಗೆ ಸಂಬಂಧಿಸಿದೆಯಾದರೂ ಮಂದಸ್ಮಿತ ಮುಖ, ಉತ್ಸಾಹ, ಉಡುಪುಗಳೂ ಸಹ ಪ್ರಭಾವಕಾರಿ ಅಂಶಗಳಾಗಿವೆ. ಧ್ವನಿಯು ಸ್ಪಷ್ಟತೆಯಿಂದ ಕೂಡಿದ್ದು, ಸೂಕ್ತ ಧ್ವನಿಯ ಏರಿಳಿತದೊಂದಿಗೆ ವಿಚಾರಕ್ರಾಂತಿಗೆ ಮುನ್ನುಡಿ ಬರೆಯಬೇಕು. ವಿಚಾರಗಳನ್ನು ಕ್ರಮಬದ್ದವಾಗಿ, ರಸಭರಿತವಾಗಿ, ಸ್ವಾರಸ್ಯಕರವಾಗಿ ನಿರೂಪಿಸಬೇಕು. ವೈಯಕ್ತಿಕ ವಿಚಾರಗಳಿಗಿಂತ ವೈಚಾರಿಕ ವಿಚಾರಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಅಂದಾಗ ಮಾತ್ರ ಸಭಿಕರ ಮತ್ತು ವ್ಯವಸ್ಥಾಪಕರ ನಿರೀಕ್ಷೆ ಮತ್ತು ಆಶೋತ್ತರಗಳನ್ನು ಈಡೇರಿಸಲು ಸಾಧ್ಯ.  ಭಾಷಣದ ಪ್ರಾರಂಭ ಮತ್ತು ಮುಕ್ತಾಯದ ವೇಳೆ ಅಧ್ಯಕ್ಷರಿಗೆ, ಅತಿಥಿಗಳಿಗೆ, ಸಭಿಕರಿಗೆ, ಮಾಧ್ಯಮದವರಿಗೆ ಮತ್ತು ಆಯೋಜಕರಿಗೆ  ಗೌರವಪೂರ್ವಕ ವಂದನೆ ಸಲ್ಲಿಸಬೇಕು.
                                                    ಉತ್ತಮ ಭಾಷಣಕ್ಕೆ ಅಷ್ಟ ಮಾರ್ಗಗಳು
ವಿಷಯ ತಿಳಿಯಿರಿ : ನೀವು ಮಾತನಾಡಬೇಕಾದ ವಿಷಯದ ಸಂಪೂರ್ಣ ಜ್ಞಾನ ಇರಲಿ. ನಿಮ್ಮದೇ ಆದ ಭಾಷಾ ಶೈಲಿಯನ್ನು ಬಳಸಿ ವಿಷಯವನ್ನು ನಿರೂಪಿಸಿ. ಹೇಳಬೇಕಾದ ವಿಷಯದ ಮೇಲೆ ಸಂಪೂರ್ಣ ನಿಗಾ ಇರಲಿ, ವಿಷಯವನ್ನು ಮರೆಯಬೇಡಿ.
ಅಬ್ಯಾಸ ಮಾಡಿ : ವೇದಿಕೆಗೆ ತೆರಳುವ ಮುಂಚೆ ಸಾಕಷ್ಟು ಅಭ್ಯಾಸ ಮುಖ್ಯ. ನಿಮಗೆ ದೊರೆಯುವ ಎಲ್ಲಾ ಸಾಧನ ಸಲಕರಣೆಗಳನ್ನು ಬಳಸಿಕೊಂಡು ನಿಮ್ಮದೇ ಆದ ಯೋಜನೆಯಂತೆ ಅಭ್ಯಾಸ ಮಾಡಿ. ಸಾಧ್ಯವಾದರೆ ನಿಮ್ಮ ಭಾಷಾ ಶೈಲಿಯನ್ನು ಮೊಬೈಲ್‍ನಲ್ಲಿ ರೆಕಾರ್ಡ ಮಾಡಿ ಕೇಳಿಸಿಕೊಳ್ಳಿ. ಅಗತ್ಯವಿದ್ದಲ್ಲಿ ಬದಲಾವಣೆ ಮಾಡಿಕೊಳ್ಳಿ. ಆಂಗಿಕ ಚಲನೆ(ದೇಹಭಾಷೆ) ಬಳಸಿ. ಇದಕ್ಕಾಗಿ ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡಿ. ತಪ್ಪುಗಳನ್ನು ತಿದ್ದಿಕೊಳ್ಳಿ. ನಿಗದಿತ ಸಮಯದಲ್ಲಿ ವಿಷಯದ ಹೊಂದಾಣಿಕೆ ಮಾಡಿಕೊಳ್ಳಿ.
ಪ್ರೇಕ್ಷಕರ ಬಗ್ಗೆ ತಿಳಿಯಿರಿ : ನೀವು ಯಾರಿಗೆ ಭಾಷಣ ಮಾಡುತ್ತೀರಿ, ಪ್ರೇಕ್ಷಕರ ಮನೋಸ್ಥಿತಿ, ಸಾಂಸ್ಕøತಿಕತೆ, ವೈಚಾರಿಕತೆ ಇವುಗಳ ಬಗ್ಗೆ ತಿಳಿಯಿರಿ. ಭಾಷಣದ ಪ್ರಾರಂಭದಲ್ಲಿ ಅಲ್ಲಿನ ಕೆಲವು ವ್ಯಕ್ತಿಗಳ ಹೆಸರನ್ನು, ಸಂಘ-ಸಂಸ್ಥೆಗಳ ಹೆಸರನ್ನು, ಸ್ನೇಹಿತರ ಗುಂಪುಗಳ ಹೆಸರನ್ನು ಉಲ್ಲೇಖಿಸಿ. ಇದು ಅಪರಿಚಿತರನ್ನು ಪರಿಚಿತರನ್ನಾಗಿಸುತ್ತದೆ.
ಸ್ಥಳದ ಬಗ್ಗೆ ತಿಳಿಯಿರಿ : ಮಾತನಾಡಬೇಕಾದ ವೇದಿಕೆಯು ಒಳಾಂಗಣವೋ, ಹೊರಾಂಗಣವೋ ತಿಳಿಯಿರಿ. ಕಾರ್ಯಕ್ರಮ ಪ್ರಾರಂಭಕ್ಕಿಂತ ಮುಂಚೆ ಸ್ಥಳ ಪರಿಶೀಲನೆ ನಡೆಸಿ. ಧ್ವನಿವರ್ಧಕ ಹಾಗೂ ದೃಶ್ಯ ಸಾಧನಗಳ ಕಾರ್ಯಕ್ಷಮತೆಯನ್ನೂ ಪರಿಶೀಲಿಸಿ.
ನಿರಾಳವಾಗಿರಿ : ಧೀರ್ಘವಾದ ಉಸಿರಾಟ ನಡೆಸಿ. ಭಾಷಣದ ಪ್ರಾರಂಭದಲ್ಲಿ ವೇದಿಕೆಯಲ್ಲಿನ ಗಣ್ಯರನ್ನು, ಸಭಿಕರನ್ನು ಉದ್ದೇಶಿಸಿ ಮಾತು ಪ್ರಾರಂಭಿಸಿ. ಇದು ಸಭಾಕಂಪನವನ್ನು ಹತೋಟಿಗೆ ತರುತ್ತದೆ.
ಮಾತುಗಳಿಗೆ ದೃಶ್ಯರೂಪ ನೀಡಿ : ಸ್ಪಷ್ಟವಾದ, ಗಟ್ಟಿಯಾದ ಧ್ವನಿಯಿಂದ ನಿಮ್ಮ ಮಾತುಗಳಿಗೆ ಚಲನಶೀಲತೆ ನೀಡಿ. ಧ್ವನಿಯಲ್ಲಿ ಹಿಡಿತವಿರಲಿ, ಅಗತ್ಯಕ್ಕೆ ತಕ್ಕ ಏರಿಳಿತವಿರಲಿ, ಧ್ವನಿಯಲ್ಲಿ ಆತ್ಮ ವಿಶ್ವಾಸವಿರಲಿ. ವಚನಗಳು, ಗಾದೆಮಾತುಗಳು, ಹಾಸ್ಯ, ರಮ್ಯತೆ ಇವುಗಳಿಂದ ವಿಷಯವು ಶ್ರೀಮಂತವಾಗಿರಲಿ. ಆಗ ನಿಸ್ಸಂದೇಹವಾಗಿ ನಿಮ್ಮ ಮಾತುಗಳಿಗೆ ದೃಶ್ಯರೂಪ ಸಿಗುತ್ತದೆ.
ವಶೀಕರಣಗೊಳಿಸಿ : ನಿಮ್ಮ ಮಾತಿನ ಮೋಡಿಯಿಂದ ಸಭಿಕರ ಮನಸ್ಸನ್ನು ಕೇಂದ್ರೀಕರಿಸಿ. ಮಾಹಿತಿಗಳು, ಅಂಕಿ-ಅಂಶಗಳಿಂದ ಕಾತುರತೆ ಹುಟ್ಟಿಸಿ. ಜೊತೆಗೆ ಮನೋರಂಜನೆ ನೀಡುತ್ತಾ ಪ್ರೇಕ್ಷಕರ ಮನಸ್ಸನ್ನು ವಶೀಕರಣಗೊಳಿಸಿ.
ಸಂದೇಶದ ಮೇಲೆ ಗಮನವಿರಲಿ : ನೀವೊಬ್ಬ ಸಂದೇಶವಾಹರು ಎಂಬುದನ್ನು ಮರೆಯದೇ, ನಿಮ್ಮ ಭಾಷಣದಿಂದ ಜನರಿಗೆ ತಲುಪಬೇಕಾದ ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಿ. ಇತರರ ಮಾತಿಗೆ ಕಿವಿಗೊಡಬೇಡಿ.    

               ಭಾಷಣಗಳಲ್ಲಿನ ವೈವಿಧ್ಯತೆ
ಸ್ವಾಗತ ಭಾಷಣ : ಕಾರ್ಯಕ್ರಮ/ಸಭೆಗೆ ಆಗಮಿಸಿದ ಅತಿಥಿಗಳ ಸೂಕ್ಷ್ಮ ಪರಿಚಯದೊಂದಿಗೆ ಪ್ರೀತಿ ಪೂರ್ವಕ ಸ್ವಾಗತ ಕೋರುವುದು. ಜೊತೆಗೆ ಸಭಿಕರಿಗೆ, ಮಾಧ್ಯಮದವರಿಗೆ, ಆಯೋಜಕರಿಗೆ ಸ್ವಾಗತ ಕೋರುವುದು.
ಪರಿಚಯ ಭಾಷಣ : ವಿಶೇಷ ಆಹ್ವಾನದ ಮೇರೆಗೆ ಬರಮಾಡಿಕೊಂಡ ಅತಿಥಿಗಳ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದು.
ಉದ್ಘಾಟನಾ ಭಾಷಣ : ವಿವಿಧ ಮೂಲ ಸೌಲಭ್ಯಗಳ ಉದ್ಘಾಟನೆ, ಸಂಘ-ಸಂಸ್ಥೆಗಳ ಉದ್ಘಾಟನೆ, ಕ್ರೀಡಾಕೂಟಗಳು, ಸಾಂಸ್ಕøತಿಕ ಸ್ಪರ್ದೆಗಳು ಇತ್ಯಾದಿಗಳನ್ನು ಉದ್ಘಾಟಿಸಿ ಮಾಡುವ ಸಂಕಲ್ಪ ಭಾಷಣ.
ಸಮಾರೋಪ ಭಾಷಣ : ತರಬೇತಿ, ಕ್ರೀಡಾಕೂಟಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ವಾರ್ಷಿಕೋತ್ಸವಗಳ ಮುಕ್ತಾಯ ಸಮಾರಂಭದ ಭಾಷಣ.
ಬಹುಮಾನ ವಿತರಣಾ ಭಾಷಣ : ವಿವಿಧ ಸ್ಪರ್ದೆಗಳಲ್ಲಿ ಜಯಶೀಲರಾದವರಿಗಾಗಿ ಪ್ರೋತ್ಸಾಹದಾಯಕ ಭಾಷಣ.
ಅತಿಥಿಗಳ ಭಾಷಣ : ಆಯಾ ದಿನದ ಅಥವಾ ಕಾರ್ಯಕ್ರಮದ ವಿಶೇಷತೆ ಕುರಿತು ಮಾಡುವ ಬಾಷಣ.
ಅಧ್ಯಕ್ಷರ ಭಾಷಣ : ಇಡೀ ಕಾರ್ಯಕ್ರಮದ ಸೂಕ್ಷ್ಮಾವಲೋಕನ ಭಾಷಣ. ಇದು ಇಡೀ ಕಾರ್ಯಕ್ರಮದ ಘನತೆಯ ಭಾಷಣ.
ವಂದನಾರ್ಪಣ ಭಾಷಣ : ಆಗಮಿಸಿದ ಅತಿಥಿಗಳಿಗೆ, ಸಭಿಕರಿಗೆ, ಆಯೋಜಕರಿಗೆ, ಕಾರ್ಯಕ್ರಮಕ್ಕೆ ಶ್ರಮಿಸಿದವರಿಗೆ ಕೃತಜ್ಞತೆ ಸಮರ್ಪಿಸುವ ಭಾಷಣ.
ಬೀಳ್ಕೋಡಿಗೆ ಭಾಷಣ : ಸನ್ಮಿತ್ರರು, ಸಹುದ್ಯೋಗಿಗಳು ವರ್ಗ/ಬಡ್ತಿ/ನಿವೃತ್ತಿ ಆದಾಗ ಮಾಡುವ ಭಾಷಣ.
ಅಭಿನಂದನಾ ಭಾಷಣ : ಹೊಸ ಹುದ್ದೆ ಗಳಿಸಿದಾಗ, ಉನ್ನತ ಹುದ್ದೆಗೆ ಬಡ್ತಿ ದೊರೆತಾಗ, ಬಹುಮಾನ ಪಡೆದಾಗ, ಮಹಾತ್ಕಾರ್ಯ ನೆರವೇರಿಸಿದಾಗ ಸಹೃದಯತೆಯಿಂದ ಅಭಿನಂದಿಸುವ ಭಾಷಣ.
ದಿನಾಚರಣೆ/ಜಯಂತೋತ್ಸವ ಭಾಷಣ : ಆಯಾ ದಿನದ ವಿಶೇಷತೆ ಕುರಿತು ಮಾಡುವ ಭಾಷಣ.
ಶಂಕುಸ್ಥಾಪನಾ ಭಾಷಣ : ಜನಹಿತ ಕಾರ್ಯಗಳ ನಿರ್ಮಾಣ ಕುರಿತ ಉಪನ್ಯಾಸ ಭಾಷಣ.
ಮನವಿ ಭಾಷಣ : ಧಾರ್ಮಿಕ, ಸಾಮಾಜಿಕ ಸೇವಾ ಸಂಸ್ಥೆಗಳ ಸ್ಥಾಪನೆ, ಜೀರ್ಣೋದ್ದಾರಕ್ಕಾಗಿ ಧನಸಹಾಯ ಕೋರಿ ಮನವಿ ಭಾಷಣ.
ಸಂತಾಪಸೂಚಕ ಭಾಷಣ : ವಿಶ್ವ, ದೇಶ ಅಥವಾ  ಸಾಮಾಜಿಕ ಉದ್ದಾರಕ್ಕಾಗಿ ಶ್ರಮಿಸಿ ದಿವಂಗತರಾದ ಮಹನೀಯರಿಗೆ ಸಂತಾಪ ಸೂಚಿಸಿ ಮಾಡುವ ಭಾಷಣ.
ಆಶುಭಾಷಣ : ಪೂರ್ವ ಸಿದ್ದತೆಯಿಲ್ಲದೇ, ಇದ್ದಕ್ಕಿದ್ದಂತೆ ಸಮಯಸ್ಪೂರ್ತಿಯಿಂದ ಮಾಡುವ ಭಾಷಣ.

‘ವಿಜಯವಾಣಿ’ಯ ಮಸ್ತ್ ಪುರವಣಿ 11-02-2015
                                                                                                             ಆರ್.ಬಿ.ಗುರುಬಸವರಾಜ ಶಿಕ್ಷಕರು

January 21, 2015

“ಗೇಟ್”

 ದಿನಾಂಕ 21-01-2015 ರ ವಿಜಯವಾಣಿಯ 'ಮಸ್ತ್' ಪುರವಣಿಯಲ್ಲಿನ ನನ್ನ ಲೇಖನ

                    “ಗೇಟ್”  ದಾಟಿದರೆ ವಿಫುಲ ಅವಕಾಶ

    ಸ್ಪಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆಯ ಜೊತೆಗೆ ಕೌಶಲ್ಯಕ್ಕೂ ಬೇಡಿಕೆ ಹೆಚ್ಚುತ್ತಿದೆ. ಪ್ರತೀ ಕ್ಷೇತ್ರದಲ್ಲೂ ಕೌಶಲ್ಯಾಧಾರಿತ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿರುತ್ತದೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಂತೂ ವಿದ್ಯಾರ್ಹತೆ ಜೊತೆಗೆ ಕೌಶಲ್ಯಕ್ಕೂ ಹೆಚ್ಚು ಪ್ರಾಶಸ್ತ್ಯ ಇದೆ. ಅಭ್ಯರ್ಥಿಗಳ ಶೈಕ್ಷಣಿಕ ಸಾಧನೆ ಜೊತೆಗೆ ಕೌಶಲ್ಯಗಳನ್ನು ಅಳೆಯಲು ಅನೇಕ ಪರೀಕ್ಷೆಗಳಿವೆ. ಅಂತಹ ಎಲ್ಲಾ ಪರೀಕ್ಷೆಗಳಿಗಿಂತಲೂ ಅತ್ಯಂತ ವಿಶ್ವಾಸಾರ್ಹ ಹಾಗೂ ಅತ್ಯುನ್ನತ ಅವಕಾಶಗಳನ್ನು ಒಳಗೊಂಡ ಪರೀಕ್ಷೆ ಎಂದರೆ ‘ಗೇಟ್’ (ಉಡಿಚಿಜuಚಿಣe ಂಠಿಣiಣuಜe ಖಿesಣ iಟಿ ಇಟಿgiಟಿeeಡಿiಟಿg) ಪರೀಕ್ಷೆ. ಇದು ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಹಾಗೂ ವೃತ್ತಿಗೆ ವಿಫುಲ ಅವಕಾಶ ನೀಡುವ ಏಕೈಕ ಪ್ರತಿಷ್ಠಿತ ಪರೀಕ್ಷೆಯಾಗಿದೆ. ಪ್ರತಿವರ್ಷ ಮಾನವ ಸಂಪನ್ಮೂಲ ಇಲಾಖೆ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಜಂಟಿಯಾಗಿ ಈ ಪರೀಕ್ಷೆ ನಡೆಸುತ್ತವೆ. ಈಗಾಗಲೇ ‘ಗೇಟ್-2015’ ರ ಪರೀಕ್ಷೆಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಪರೀಕ್ಷೆಗಳು ಮಾತ್ರ ಬಾಕಿ ಇವೆ.
ಯಾರು ಅರ್ಹರು? : ಯಾವುದೇ ವಿಧವಾದ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದ ಎಲ್ಲಾ ಅಭ್ಯರ್ಥಿಗಳು, ಎಂ.ಎಸ್ಸಿ, ಬಿ.ಫಾರ್ಮಾ, ಬಿ.ಎಸ್ಸಿ(ರೀಸರ್ಚ) ಇಂಟಿಗ್ರೇಟೆಡ್ ಎಂ.ಎಸ್ಸಿ ಆದವರು ಈ ಪರೀಕ್ಷೆಗೆ ಅರ್ಹರು. ಇದಕ್ಕೆ ಗರಿಷ್ಟ ಅಂಕಗಳ ನಿಗದಿ ಇಲ್ಲದೇ ಇರುವುದರಿಂದ ಕನಿಷ್ಟ ಅಂಕ ಗಳಿಸಿ ಉತ್ತೀರ್ಣರಾದವರೂ ಸಹ ಈ ಪರೀಕ್ಷೆ ಬರೆಯಬಹುದು. ಒಮ್ಮೆ ‘ಗೇಟ್’ನಲ್ಲಿ ಉತ್ತೀರ್ಣರಾದರೆ ಇದರ ವ್ಯಾಲಿಡಿಟಿ 3 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ.
ಗೇಟ್‍ನ ಉದ್ದೇಶ :
•    ಅಭ್ಯರ್ಥಿಗಳ ಕಲಿಕಾ ಗುಣಮಟ್ಟ ಅಳೆಯುವುದು
•    ಭಾರತದ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಅರ್ಹ ಅಭ್ಯರ್ಥಿಗಳ ಆಯ್ಕೆ ಮಡುವುದು.
•    ಸಾರ್ವಜನಿಕ ವಲಯದ ಘಟಕಗಳ ಉದ್ಯೋಗಕ್ಕೆ ಯಶಸ್ವೀ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು.
•    ಸರಕಾರಿ ಹಾಗೂ ಖಾಸಗೀ ಸಂಸ್ಥೆಗಳ ಫೆಲೋಶಿಪ್‍ಗಾಗಿ ಸೂಕ್ತ ಅಭ್ಯರ್ಥಿಗಳನ್ನು ಹುಡುಕುವುದು.


ಅವಕಾಶಗಳ ಆಗರ : ‘ಗೇಟ್’ನಿಂದ ಕೇವಲ ವೃತ್ತಿ ಅವಕಾಶಗಳಲ್ಲದೇ ಅನೇಕ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಅವಕಾಶಗಳು ದೊರೆಯುತ್ತವೆ. ಐಐಟಿ, ಎನ್‍ಪಿಟಿ, ಐಐಎಸ್ಸಿ ಎನ್‍ಟಿಪಿಸಿ, ಇಸ್ರೋ, ಡಿಆರ್‍ಡಿಓಗಳ ಪ್ರಸಿದ್ದ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗಕ್ಕೆ ‘ಗೇಟ್’ ಉತ್ತಮ ಅವಕಾಶಗಳನ್ನು ನೀಡುತ್ತದೆ. ಜೊತೆಗೆ ಪಿ.ಎಚ್.ಡಿ ಪದವಿ ಕನಸನ್ನು ಸಾಕಾರಗೊಳಿಸಲು ‘ಗೇಟ್’ ಅವಶ್ಯಕ. ‘ಗೇಟ್’ ಪರೀಕ್ಷೆ ಪಾಸಾಗುವುದರಿಂದ ದೇಶೀಯ ಖಾಸಗೀ ಸಂಸ್ಥೆಗಳ ಅಥವಾ ಸರಕಾರಿ ಆಡಳಿತದ ‘ಫೆಲೋಶಿಪ್’ ಪಡೆಯಬಹುದು.

ಪರೀಕ್ಷಾ ಸ್ವರೂಪ ಹಾಗೂ ದಿನಾಂಕ : ಪರೀಕ್ಷೆಯು ಆನ್‍ಲೈನ್ ಸ್ವರೂಪದಲ್ಲಿರುತ್ತದೆ. ಇದರಲ್ಲಿ 100 ಅಂಕಗಳ ಒಂದೇ ಪತ್ರಿಕೆ ಇದ್ದು, ಮೂರು ಗಂಟೆಗಳ ಕಾಲಾವಕಾಶ ಇರುತ್ತದೆ.  ಜನವರಿಯ 31ರಂದು, ಫೆಬ್ರವರಿಯ 1,7,8,9,ಮತ್ತು14ರಂದು ಬೆಳಿಗ್ಗೆ 9ರಿಂದ 12 ರವರೆಗೆ ಹಾಗೂ ಮದ್ಯಾಹ್ನ 2ರಿಂದ 5 ರವರೆಗೆ ಇರುತ್ತದೆ.
ಪರೀಕ್ಷಾ ವಲಯಗಳು:  1. ಐಐಎಸ್ಸಿ-ಬೆಂಗಳೂರು,  2. ಐಐಟಿ-ಮುಂಬೈ,  3. ಐಐಟಿ-ದೆಹಲಿ,
4. ಐಐಟಿ-ಗುವಾಹತಿ,  5. ಐಐಟಿ-ಖಾನ್ಪುರ್,  6. ಐಐಟಿ-ಖರಗ್‍ಪುರ್,  7. ಐಐಟಿ-ಮದ್ರಾಸ್,
8. ಐಐಟಿ-ರೂರ್ಕೀ
ಪ್ರಶ್ನೆಗಳ ಸ್ವರೂಪ: ಶೇಕಡಾ 15 ಗಣಿತ ಪ್ರಶ್ನೆಗಳು, ಶೇಕಡಾ 15 ಸಾಮಾನ್ಯ ಜ್ಞಾನದ ಪ್ರಶ್ನೆಗಳು ಹಾಗೂ ಶೇಕಡಾ70 ಐಚ್ಛಿಕ ವಿಷಯದ ಪ್ರಶ್ನೆಗಳು ಇರುತ್ತವೆ. ಅದರಲ್ಲಿ ವಿಷಯಕ್ಕೆ ಸಂಬಂಧಿಸಿದ ಘಟನೆಗಳು, ತತ್ವಗಳು, ಸೂತ್ರಗಳು, ನಿಯಮಗಳು ಇತ್ಯಾದಿಗಳನ್ನು ಅಳೆಯುವ ಜ್ಞಾಪಕ ಪ್ರಶ್ನೆಗಳು ಹಾಗೂ ಮೂಲ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳುವಿಕೆ, ಮೂಲಭೂತ ವಿಚಾರಗಳ, ಸರಳ ನಿರ್ಣಯಗಳ ಇತ್ಯಾದಿಗಳ ಜ್ಞಾನವನ್ನು ಅಳೆಯುವ ಜ್ಞಾನಾಧಾರಿತ ಪ್ರಶ್ನೆಗಳು ಇರುತ್ತವೆ.
    ಪ್ರತೀ ವಿಭಾಗಕ್ಕೂ ಪ್ರತ್ಯೇಕವಾದ ಪ್ರಶ್ನೆಪತ್ರಿಕೆ ಇರುತ್ತದೆ ಹಾಗೂ ಪ್ರತೀ ಪ್ರಶ್ನೆಪತ್ರಿಕೆಯು 1 ಮತ್ತು 2 ಅಂಕದ ಬಹು ಆಯ್ಕೆಯ ಪ್ರಶ್ನೆಗಳನ್ನು ಹಾಗೂ ಸಂಖ್ಯಾತ್ಮಕ ಉತ್ತರದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಬಹು ಆಯ್ಕೆಯ ಪ್ರಶ್ನೆಗಳಲ್ಲಿ 1 ಅಂಕದ ಪ್ರಶ್ನೆಗಳಿಗೆ 1/3 ರಷ್ಟು ಹಾಗೂ 2 ಅಂಕದ ಪ್ರಶ್ನೆಗಳಿಗೆ 2/3 ರಷ್ಟು ತಪ್ಪು ಉತ್ತರಗಳಿಗೆ ಅಂಕ ಕಡಿತ ಮಾಡಲಾಗುತ್ತದೆ. ಆದರೆ ಸಂಖ್ಯಾತ್ಮಕ ಉತ್ತರದ ಪ್ರಶ್ನೆಗಳಿಗೆ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ. ಒಟ್ಟು 65 ಪ್ರಶ್ನೆಗಳಿಗೆ 100 ಅಂಕಗಳು ಮೀಸಲಿರುತ್ತವೆ.
    ಪ್ರತೀ ವರ್ಷ ‘ಗೇಟ್’ ಪಾಸಾಗಲು ಅನೇಕ ಅಭ್ಯರ್ಥಿಗಳು ಹಾತೊರೆಯುತ್ತಾರೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ‘ಗೇಟ್’ ಪರೀಕ್ಷೆ ಎದುರಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. 2010ರಲ್ಲಿ 4.14ಲಕ್ಷ, 2011 ರಲ್ಲಿ 5.52 ಲಕ್ಷ, 2012 ರಲ್ಲಿ 7.71 ಲಕ್ಷ, 2013 ರಲ್ಲಿ 12 ಲಕ್ಷ ಅಭ್ಯರ್ಥಿಗಳು ಹಾಗೂ 2014 ರಲ್ಲಿ 15 ಲಕ್ಷ ಅಭ್ಯರ್ಥಿಗಳು ‘ಗೇಟ್’ ಪರೀಕ್ಷೆ ಎದುರಿಸಿದ್ದಾರೆ. ಈ ವರ್ಷ ಈ ಸಂಖ್ಯೆ ಇನ್ನೂ ಹೆಚ್ಚಲಿದೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ‘ಗೇಟ್’ ಮಹತ್ವದ ಪ್ರವೇಶ ದ್ವಾರವಾದ್ದರಿಂದ ಅದನ್ನು ಎದುರಿಸಲು ಸಿದ್ದತೆ ಅಗತ್ಯ.


‘ಗೇಟ್’ ಪರೀಕ್ಷಾ ತಯಾರಿ ಹೀಗಿರಲಿ
ಮಾನಸಿಕ ಯಶಸ್ಸು ಗಳಿಸಿ : ‘ಗೇಟ್’ನ ಮೊದಲ ಯಶಸ್ಸು ಎಂದರೆ ಮಾನಸಿಕ ಯಶಸ್ಸು ಗಳಿಸುವುದು. ಅಂದರೆ ‘ಗೇಟ್’ನ್ನು ಪ್ರವೇಶಿಸಲು ಬೇಕಾದ ಕನಸಿನ ಬೀಜವನ್ನು ಮನಸ್ಸಿನಲ್ಲಿ ನೆಡುವುದು. ನಿಮ್ಮ ಸಾಮಥ್ರ್ಯದ ಮೇಲೆ ನಂಬಿಕೆ ಇಟ್ಟು ಮಾನಸಿಕವಾಗಿ ಹಾಗೂ ಬೌದ್ದಿಕವಾಗಿ ಪರೀಕ್ಷೆ ಪಾಸಾಗಲು ಸಿದ್ದತೆ ನಡೆಸಿ.
ಸಂಪೂರ್ಣ ಮಾಹಿತಿ ಇರಲಿ: ‘ಗೇಟ್’ ಪರೀಕ್ಷೆಗೆ ಸಿದ್ದವಾಗುವ ಮೊದಲು ಪಠ್ಯವಸ್ತು, ಪರೀಕ್ಷಾ ವಿಧಾನ, ಅರ್ಹತಾ ವಿಧಾನ, ಉತ್ತೀರ್ಣತೆಯ ಮಾರ್ಗಗಳು ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಇರಲಿ.
ಪಠ್ಯವಸ್ತುವಿನ ಮೇಲೆ ನಿಗಾ ವಹಿಸಿ: ‘ಗೇಟ್’ ಪರೀಕ್ಷಗೆ ಪಠ್ಯವಸ್ತು ಪ್ರಮುಖವಾದದ್ದು. ವಿವಿಧ ಇಂಜಿನಿಯರಿಂಗ್ ಅಭ್ಯಾಸ ಕ್ರಮಗಳು ಇರುವುದರಿಂದ ನಿಮ್ಮ ಅಭ್ಯಾಸ ಕ್ರಮಕ್ಕೆ ಅನುಗುಣವಾದ ಪಠ್ಯವಸ್ತುವಿನ ಮೇಲೆ ಗಮನ ಕೇಂದ್ರೀಕರಿಸಿ. ಪಠ್ಯವಸ್ತುವಿನ ವ್ಯಾಪ್ತಿಯನ್ನೊಳಗೊಂಡ ಪುಸ್ತಕಗಳು ಹಾಗೂ ಇತರೆ ಓದುವ ಸಾಮಗ್ರಿಗಳನ್ನು ಸಂಗ್ರಹಿಸಿಕೊಳ್ಳಿ. ಸರಿಯಾದ ಓದುವ ಸಾಮಗ್ರಿಯನ್ನು ಹೊಂದಿಸಿಕೊಳ್ಳುವುದು ಓದುವುದರಷ್ಟೇ ಪ್ರಮುಖವಾದದ್ದು. ಆದ್ದರಿಂದ ಸರಳವಾಗಿ, ಅರ್ಥಪೂರ್ಣವಾಗಿ ನಿರೂಪಿತವಾದ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಿ. ಸ್ನೇಹಿತರು ಹಾಗೂ ಸಹವರ್ತಿಗಳೊಂದಿಗೆ ಚರ್ಚಿಸಿ ಉತ್ತಮ ಸಾಮಗ್ರಿ ಸಂಗ್ರಹಿಸಿಕೊಳ್ಳಿ. ಪಠ್ಯವಸ್ತು ಹಾಗೂ ಸಾಮಗ್ರಿಗಾಗಿ ಜಾಲತಾಣಗಳ ಸಹಾಯ ಪಡೆದುಕೊಳ್ಳಿ.
ವೇಳಾಪಟ್ಟಿ ತಯಾರಿಸಿಕೊಳ್ಳಿ : ಸಾಮಗ್ರಿ ಹೊಂದಾಣಿಕೆಯ ನಂತರ ಆ ಸಾಮಗ್ರಿಗಳನ್ನು ಓದಿ ಮುಗಿಸಲು ಕಾಲಾವಕಾಶವನ್ನು ನಿಗದಿ ಮಾಡಿಕೊಳ್ಳಿ. ವೇಳಾಪಟ್ಟಿಗೆ ಬದ್ದರಾಗಿ ಓದನ್ನು ಮುಂದುವರೆಸಿ. ಓದುವಾಗ ಪ್ರಮುಖಾಂಶಗಳನ್ನು ಬರೆದಿಟ್ಟುಕೊಳ್ಳಿ.
ಪರಿಕಲ್ಪನೆಗಳತ್ತ ಗಮನ ಹರಿಸಿ : ಓದುವಾಗ ಪರಿಕಲ್ಪನೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ. ಸಂಶಯಗಳನ್ನು ನಿವಾರಿಸಿಕೊಂಡು ಓದಲು ಪ್ರಯತ್ನಿಸಿ. ಪರಿಕಲ್ಪನೆಗಳನ್ನು ವಿವಿಧ ಆಯಾಮಗಳಲ್ಲಿ ಅರ್ಥೈಸಿಕೊಳ್ಳಲು ವಿವಿಧ ಲೇಖಕರ ಪುಸ್ತಕಗಳನ್ನು ಪರಾಮರ್ಶಿಸಿ. ವಿಷಯದ ಕುರಿತು ಸ್ನೇಹಿತರು ಹಾಗೂ ಪರಿಣಿತರೊಂದಿಗೆ ಚರ್ಚಿಸಿ.
ಅಣಕು ಪರೀಕ್ಷೆ ನೆಡೆಸಿ : ಅಣಕು ಪರೀಕ್ಷೆ ಸಿದ್ದತೆಯ ಮಟ್ಟವನ್ನು ತಿಳಿಸುತ್ತದೆ. ಆದ್ದರಿಂದ ಮುಖ್ಯ ಪರೀಕ್ಷೆಗೆ ಹೊರಡುವ ಮುನ್ನ ಅಣಕು ಪರೀಕ್ಷೆ ನೆಡೆಸಿ. ಕಳೆದ ವರ್ಷದ ಅಥವಾ ಇನ್ನಿತರೇ ಪ್ರಶ್ನೆಪತ್ರಿಕೆಗಳಿಂದ ಅಣಕು ಪರೀಕ್ಷೆ ನೆಡೆಸಿ.
ಅನಪೇಕ್ಷಿತ ಕೆಲಸಗಳನ್ನು ನಿಲ್ಲಿಸಿ : ಟಿ.ವಿ ನೋಡುವ, ಸ್ನೇಹಿತರೊಂದಿಗೆ ಹರಟುವ, ಕ್ಲಬ್ ಪಾರ್ಟಿ ಇತ್ಯಾದಿಗಳಲ್ಲಿ ಕಾಲ ಕಳೆಯುವ, ಅವಶ್ಯಕತೆಗಿಂತ ಹೆಚ್ಚು ನಿದ್ರಿಸುವ, ನೆಟ್ ಜಾಲಾಡುವ, ಫೋನ್ ಚಾಟಿಂಗ್ ಮಾಡುವ ಇತ್ಯಾದಿ ಅನಪೇಕ್ಷಿತ ಕೆಲಸಗಳಿಗೆ ಕತ್ತರಿ ಹಾಕಿ. ಓದಿನ ಕಡೆ ಗಮನ ಹರಿಸಿ. ಏಕೆಂದರೆ ಈ ಪರೀಕ್ಷೆ ನಿಮ್ಮ ಜೀವನದ ದಿಕ್ಕನ್ನೇ ಬದಲಿಸುವುದು. ಬೆಸ್ಟ್ ಆಫ್ ಲಕ್.



                                                                                 ಆರ್.ಬಿ.ಗುರುಬಸವರಾಜ ಹೊಳಗುಂದಿ

November 19, 2014

ಕ್ರಿಯೆಟಿವಿಟಿ

ದಿನಾಂಕ 19-11-2014 ರ ವಿಜಯವಾಣಿಯ ಮಸ್ತ್ ಪುರವಣಿಯಲ್ಲಿನ ನನ್ನ ಲೇಖನ "ಕ್ರಿಯೆಟಿವಿಟಿ ಕ್ರಿಯೇಟ್ ಮಾಡ್ಕೊಳ್ಳಿ"

ಕ್ರಿಯೆಟಿವಿಟಿ ಕ್ರಿಯೇಟ್ ಮಾಡ್ಕೊಳ್ಳಿ!

ಹಳೆಯ ಆಲೋಚನೆಗಳಿಂದ ಬೇಜಾರಾಗಿದೆಯೇ? ಹೊಸ ಆಲೋಚನೆಗಳನ್ನು, ವಿಚಾರಗಳನ್ನು ಹುಡುಕುವ ಆಸೆ ಇದೆಯಾ? ಹಾಗಾದರೆ ಮೊದಲು ನಿಮ್ಮ ಕ್ರಿಯೆಟಿವಿಟಿಯನ್ನು ಕ್ರಿಯೇಟ್ ಮಾಡ್ಕೊಳ್ಳಿ. ಏನು? ಆಶ್ಚರ್ಯವಾಗುತ್ತಿದೆಯಾ? ಆಶ್ಚರ್ಯವಾದರೂ ಸತ್ಯ. ಸೃಜನಶೀಲತೆ ಜನ್ಮಧಾರಭ್ಯ ಬರುತ್ತದೆ ಎಂದು ಹೇಳುವರಾದರೂ ನಿಮ್ಮ ಸೃಜನಶೀಲತೆಯನ್ನು ನೀವೇ ಹೆಚ್ಚಿಸಿಕೊಳ್ಳಬಹುದು. ನಿಮ್ಮಲ್ಲಿನ ಜಾಣ್ಮಯನ್ನು, ಕೌಶಲ್ಯಗಳನ್ನು, ಸಾಮರ್ಥ್ಯಗಳನ್ನು ಸರಿಯಾದ ದಾರಿಯಲ್ಲಿ ಬಳಸಿದರೆ ಖಂಡಿತವಾಗಿಯೂ ನಿವೋಬ್ಬ ಉತ್ತಮ ಸೃಜನಶೀಲ ವ್ಯಕ್ತಿಯಾಗುತ್ತೀರಿ. 
ಕೆಲಸದ ಒತ್ತಡದಿಂದ ನಿಮ್ಮಲ್ಲಿನ ಸಾಮರ್ಥ್ಯಗಳನ್ನು ಅಭಿವೃದ್ದಿ ಪಡಿಸಲು, ಹೊಸ ಆಲೋಚನೆಗಳನ್ನು ಮಾಡಲು ಕನಿಷ್ಟ ಸಮಯವೂ ದೊರೆಯದಿರಬಹುದು. ಆದರೆ ಸೃಜನಶೀಲ ವ್ಯಕ್ತಿಗಳು ಮತ್ತು ಕಲಾವಿದರು ಪ್ರತೀ ಹಂತದಲ್ಲೂ ಸೃಜನಶೀಲ ಕೆಲಸಗಳಿಗೆ ಕೈಹಾಕುತ್ತಾರೆ. ಸೃಜನಶೀಲತೆ ಬೆಳೆಸಿಕೊಳ್ಳಲು ಸಹಾಯ ಮಾಡುವ ಪ್ರಮುಖ ಅಂಶವೆಂದರೆ ಕಲ್ಪನೆ(ಊಹೆ). ಕಲ್ಪನೆ ಮತ್ತು ಸೃಜನಶೀಲತೆ ನಾಣ್ಯದ ಎರಡು ಮುಖಗಳಿದ್ದಂತೆ. ಕಲ್ಪನೆಯು ಸೃಜನಶೀಲತೆಯಲ್ಲಿ ಬಿಂಬಿತವಾಗುತ್ತದೆ. ಈ ಸೃಜನಶೀಲತೆಯನ್ನು ಅನೇಕ ಚಟುವಟಿಕೆಗಳ ಮೂಲಕ ಕರಗತ ಮಾಡಿಕೊಳ್ಳಬಹುದು. ಅಂತಹ ಚಟುವಟಿಕೆಗಳ ಕುರಿತ ಕಿರು ನೋಟ ಇಲ್ಲಿದೆ.
ಓದುವುದು : ವಿವಿಧ ಕ್ಷೇತ್ರಗಳಲ್ಲಿ  ಸಾಧನೆ ಮಾಡಿದ ಸಾಧಕರ ಜೀವನ ಚರಿತ್ರೆಯನ್ನು ಹಾಗೂ ವೈಜ್ಞಾನಿಕ ಮತ್ತು ಸಾಹಸಭರಿತ ಕಾದಂಬರಿಗಳನ್ನು ಓದುವುದರಿಂದ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬಹುದು. ಜೀವನ ಚರಿತ್ರೆ ಮತ್ತು ಕಾದಂಬರಿಗಳು ನಮ್ಮನ್ನು ಇನ್ನೊಂದು ಕಾಲ್ಪನಿಕ ಲೋಕಕ್ಕೆ ಕರೆದೊಯ್ಯುತ್ತವೆ. ಇರುವ ಅವಕಾಶಗಳಲ್ಲಿ ವಿವಿಧ ಸಾಧ್ಯತೆಗಳನ್ನು ಸೃಷ್ಟಿಸಿಕೊಳ್ಳುವ ಮನೋಸ್ಥಿತಿ ಬೆಳೆಯಲು ಇಂತಹ ಪುಸ್ತಕಗಳು ಸಹಾಯ ಮಾಡುತ್ತವೆ. ಪುಸ್ತಕಗಳನ್ನು ಓದುವ ವೇಳೆ ಅಮೂರ್ತ ಅಂಶಗಳಿಗೆ ಪರಿಣಾಮಕಾರಿಯಾದ ದೃಶ್ಯರೂಪದ ವಿವರಣೆಗಳನ್ನು ಪಡೆಯುವದರಿಂದ ಹೊಸ ಹೊಸ ಐಡಿಯಾಗಳು ಮೂಡುತ್ತವೆ.
ಸೃಜನಶೀಲ ವ್ಯಕ್ತಿಗಳ ಸಂಪರ್ಕ : ಸೃಜನಶೀಲ ವ್ಯಕ್ತಿಗಳೊಂದಿಗಿನ ಸಂಪರ್ಕವೂ ಸಹ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ಸೃಜನಶೀಲ ವ್ಯಕ್ತಿಗಳ ಸುತ್ತಲಿನ ವಾತಾವರಣವೇ ಸೃಜನಶೀಲವಾಗಿರುತ್ತದೆ. ಇದು ಅವಾಸ್ತವದಂತೆ ಕಂಡರೂ ಇನ್ನೊಂದು ಸೃಜನಶೀಲ ಕೆಲಸದ ಮೇಲೆ ಪ್ರಭಾವ ಬೀರುತ್ತದೆ ಅಥವಾ ಸೃಜನಶೀಲತೆಯನ್ನು ಮೂಡಿಸುತ್ತದೆ. ಸೃಜನಶೀಲ ವಾತಾವರಣ ಹೊಸ ಹೊಸ ಆಲೋಚನೆಗಳು, ವಿಭಿನ್ನ ದೃಷ್ಟಿಕೋನಗಳು ಬೆಳೆಯಲು ಸಹಕಾರಿಯಾಗುತ್ತದೆ. ಆದ್ದರಿಂದ ಸೃಜನಶೀಲ ವ್ಯಕ್ತಿಗಳ ಜೊತೆಗೆ ಹೆಚ್ಚು ಸಂಪರ್ಕದಲ್ಲಿರಿ.
ಕುತೂಹಲದ ಕಲಿಕೆ : ಕಲಿಕೆಯ ವೇಳೆ ಏಕೆ? ಹೇಗೆ? ಏನು? ಇಲ್ಲದಿದ್ದರೆ? ಮುಂತಾದ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಪ್ರಶ್ನಾ ಮನೋಭಾವ ವಿವಿಧ ಸಾಧ್ಯತೆಗಳ ಚಿಂತನೆ ನಡೆಸಲು ಸಹಾಯಕವಾಗುತ್ತದೆ. ಹೊಸ ಹೊಸ ಕಲಿಕಾ ಧೋರಣೆಗಳನ್ನು ಬೆಳೆಸಿಕೊಳ್ಳುವುದರಿಂದ ಸೃಜನಶೀಲತೆ ವಿಸ್ತರಿಸುತ್ತದೆ ಮತ್ತು ಕಲ್ಪನೆಯೂ ಹೆಚ್ಚುತ್ತದೆ. ಹೊಸ ವಿಷಯಗಳನ್ನು ಅನುಭವಿಸಲು,  ಕಲಿಕಾ ಅನುಭವಗಳನ್ನು ಜೀವಂತವಾಗಿರಿಸಿಕೊಳ್ಳಲು ಮತ್ತು ಹೊಸ ಕಲ್ಪನೆಗಳನ್ನು ಅಭಿವೃದ್ದಿ ಪಡಿಸಿಕೊಳ್ಳಲು ಕಲಿಕೆಯು ಪೂರಕವಾಗಿರುತ್ತದೆ.
ಹೊಸ ಪ್ರಯತ್ನಗಳಿಗೆ ಹಿಂಜರಿಯದಿರಿ : ಪ್ರಸಿದ್ದ ವ್ಯಕ್ತಿಗಳು ಹೊಸ ಪ್ರಯತ್ನಗಳನ್ನು ಮಾಡಲು ಹಿಂಜರಿಯುವುದಿಲ್ಲ. ಅವರು ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುವ ಮೂಲಕ ತಮ್ಮ ಸೌಲಭ್ಯಯುತ ವಲಯಗಳನ್ನೂ ಮೀರಿ ಬೆಳೆಯುತ್ತಾರೆ. ಹೊಸ ಸಾಹಸ ಅಥವಾ ಪ್ರಯತ್ನಗಳನ್ನು ಕೈಗೊಳ್ಳುವುದರಿಂದ ಬೆಲೆ ಕಟ್ಟಲಾಗದ ಅನುಭವ ಸಿಗುತ್ತದೆ. ಅನುಭವಗಳ ಆಗರವೇ ಸೃಜನಶೀಲತೆಯ ಮೂಲ. ಆದ್ದರಿಂದ ಹೊಸ ಪ್ರಯತ್ನಗಳನ್ನು ಕೈಗೊಳ್ಳುವ ಮೂಲಕ ಸೃಜನಶೀಲರಾಗಿ.
ವಿಭಿನ್ನ ನೋಟವಿರಲಿ : ವಸ್ತು/ಸನ್ನಿವೇಶಗಳನ್ನು ಇತರರು ನೋಡುವುದಕ್ಕಿಂತ ವಿಭಿನ್ನವಾಗಿ ನೋಡಿ. ಅದರಲ್ಲಿನ ವಿಶೇಷತೆಯನ್ನು ಪರಿಗಣಿಸಿ. ಆಗ ಮಾತ್ರ ವಿಭಿನ್ನವಾದ ಹೊಸ ಹೊಸ ಆಲೋಚನೆಗಳು, ವಿಚಾರಗಳು ಬರುತ್ತವೆ. ಇವು ಸೃಜನಶೀಲತೆಯನ್ನು ವೃದ್ದಿಸುತ್ತವೆ.
ಪ್ರತಿಭೆಯನ್ನು ಅಭಿವೃದ್ದಿಪಡಿಸಿ : ಪ್ರತಿಯೊಬ್ಬರಲ್ಲೂ ಅಗಾಧವಾದ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಈ ಪ್ರತಿಭೆ/ಕೌಶಲ್ಯಗಳನ್ನು ಹೆಚ್ಚು ಹೆಚ್ಚು ಬಳಸಿದಾಗ ಮಾತ್ರ ಅದರ ಹೊಳಪು ಹೆಚ್ಚುತ್ತದೆ. ನಮ್ಮಲ್ಲಿನ ಕೌಶಲ್ಯ/ಪ್ರತಿಭೆಗೆ ಪೂರಕವಾದ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವದರಿಂದ ಸೃಜನಶೀಲತೆ ಹೆಚ್ಚುತ್ತದೆ.
ಆಸಕ್ತಿಯನ್ನು ವಿಸ್ತರಿಸಿಕೊಳ್ಳಿ : ಆಸಕ್ತಿಯ ಇನ್ನಿತರೇ ಕ್ಷೇತ್ರಗಳನ್ನು ಪರಿಶೋಧಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಇದು ಹೊಸ ಆಲೋಚನೆಗಳಿಗೆ , ವಿಭಿನ್ನ ವಿಚಾರಗಳಿಗೆ ನಮ್ಮನ್ನು ತೆರೆದುಕೊಳ್ಳುತ್ತದೆ. ಕೆಲವರು ತಮಗೆ ಪರಿಚಿತ ವಿಷಯ/ವ್ಯಕ್ತಿಗಳೊಂದಿಗೆ ಮಾತ್ರ ವ್ಯವಹರಿಸುತ್ತಾರೆ. ಪರಿಚಿತವಲ್ಲದ ವಿಷಯಗಳತ್ತ ಚಿತ್ತ ಹರಿಸುವುದೇ ಇಲ್ಲ. ಇದು ಸರಿಯಲ್ಲ. ವಿವಿಧ ವಿಷಯಗಳತ್ತ ದೃಷ್ಟಿ ಹರಿಸಿದಾಗ ಮಾತ್ರ ಆ ವಿಷಯದ ಒಳನೋಟಗಳನ್ನು ಅನ್ವೇಷಿಸಬಹುದು.
ವಿಚಾರಗಳನ್ನು ಹಂಚಿಕೊಳ್ಳಿ : ನಿಮ್ಮಲ್ಲಿನ ಹೊಸ ವಿಚಾರಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಿ. ಹೀಗೆ ಹಂಚಿಕೊಳ್ಳುವಾಗ ಇತರರ ವಿಚಾರಗಳನ್ನೂ ಆಲಿಸಿ. ಈ ಚಟುವಟಿಕೆಯಿಂದ ನಿಮ್ಮ ಮನಸ್ಸು ಹೊಸ ಸಾಧ್ಯತೆಗಳನ್ನು ಹುಡುಕುತ್ತದೆ. ಆಗ ಕ್ರಿಯೆಟಿವಿಟಿ ಮೂಡುತ್ತದೆ.
ಮನಸ್ಸಿಗೆ ವಿಶ್ರಾಂತಿ ನೀಡಿ : ನಿರಂತರ ಚಟುವಟಿಕೆಗಳಿಂದ ಮನಸ್ಸಿಗೆ ಒತ್ತಡ ಉಂಟಾಗುತ್ತದೆ. ಆದ್ದರಿಂದ ಮನಸ್ಸನ್ನು ಮುದಗೊಳಿಸಲು ಆಗಾಗ್ಗೆ ವಿಶ್ರಾಂತಿ ನೀಡಿ. ಇದು ಸೃಜನಶೀಲ ಯೋಚನೆಗಳು ಹೊರಹೊಮ್ಮಲು ಸಹಕಾರಿಯಾಗಿದೆ. 
ಮೇಲಿನ ಸರಳ ಸಲಹೆಗಳನ್ನು ಅನುಸರಿಸಿ ಹೊಸ ವಿಚಾರಗಳನ್ನು ತುಂಬಿಕೊಳ್ಳಿ. ಆ ಮೂಲಕ ಕಾಲ್ಪನಿಕ ಜಗತ್ತನ್ನು ವಿಸ್ತರಿಸಿಕೊಂಡು ಸೃಜನಶೀಲ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಬದ್ದರಾಗಿ.
‘ವಿಜಯವಾಣಿ’ 19-11-2014 ಆರ್.ಬಿ.ಗುರುಬಸವರಾಜ. ಶಿಕ್ಷಕರು




October 28, 2014

ಕನ್ನಡ ನುಡಿಗೆ ಬಸ್ ಸೇವೆ

ದಿನಾಂಕ 28-10-2014 ರ ಪ್ರಜಾವಾಣಿಯ "ಕರ್ನಾಟಕ ದರ್ಶನ" ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ.
          ಕನ್ನಡ ನುಡಿಗೆ ಬಸ್ ಸೇವೆ
    ಬಸ್ ಪ್ರಯಾಣ ಎಂದರೆ ಬಹುತೇಕರಿಗೆ ಅಲರ್ಜಿ. ಅದರಲ್ಲೂ ರಾಜ್ಯ ರಸ್ತೆ ಸಾರಿಗೆ ಬಸ್‍ಗಳೆಂದರೆ ಇನ್ನೂ ಬೇಜಾರು. ಪ್ರಯಾಣದ ವೇಳೆ ಪತ್ರಿಕೆಯೋ, ಪುಸ್ತಕವೋ ಇದ್ದರೆ ಪ್ರಯಾಣ ಪ್ರಯಾಸವಾಗಲಾರದು ಅಲ್ಲವೇ? ಇವೆಲ್ಲವೂ ಬಸ್‍ನಲ್ಲೇ ಪುಕ್ಕಟೆ ದೊರೆಯುವಂತಾದರೆ ಹೇಗೆ? ಏನು ಕನಸು ಕಾಣುತ್ತಿದ್ದೀರಾ! ಎಂಬ ಪ್ರಶ್ನೆ ನಿಮ್ಮದಲ್ಲವೇ? ಇದು ಕನಸಲ್ಲ ನನಸು.
    ಹೊಸಪೇಟೆ ವಿಭಾಗದ ಹಗರಿಬೊಮ್ಮನಹಳ್ಳಿ ಘಟಕದ ಕೆ.ಎ35 ಎಫ್115 ಸಂಖ್ಯೆಯ ವಾಹನದಲ್ಲಿ ಇಂತದ್ದೊಂದು ಸೌಲಭ್ಯವಿದೆ. ಈ ಬಸ್ ಹೆಚ್ಚಾಗಿ ಹೊಸಪೇಟೆ ದಾವಣಗೆರೆ ಮಾರ್ಗದಲ್ಲಿ ಸಂಚರಿಸುತ್ತದೆ. ಈ ಬಸ್‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ದಿನಪತ್ರಿಕೆಗಳು, ವಾರಪತ್ರಿಕೆಗಳು, ಕೆಲವು ಸಾಹಿತ್ಯಿಕ ಪುಸ್ತಕಗಳು ಪುಕ್ಕಟೆಯಾಗಿ ಓದಲು ಸಿಗುತ್ತವೆ.
    ಅಷ್ಟೇ ಅಲ್ಲ, ವಾಹನದ ಒಳಭಾಗದಲ್ಲಿ ಕನ್ನಡ ನಾಡಿನ ಕೀರ್ತಿ ಬೆಳಗಿದ ಪ್ರಮುಖ ಸಾಹಿತಿಗಳ ಭಾವಚಿತ್ರಗಳೂ ಸಹ ಇವೆ. ಪ್ರಯಾಣದ ವೇಳೆ ಸಾಹಿತ್ಯಿಕ ವಿಚಾರಗಳನ್ನು ಮತ್ತು ನಿತ್ಯದ ಸುದ್ದಿಗಳನ್ನು ಮೆಲುಕು ಹಾಕಬಹುದು.
    ಈ ಬಗ್ಗೆ ಘಟಕದ ನಿರ್ವಾಹಕರಾದ ಎಂ.ಗೌರಿಶಂಕರ ಅವರನ್ನು ವಿಚಾರಿಸಿದಾಗ “ಇಂದಿನ ಸ್ಪರ್ದಾತ್ಮಕ ಪ್ರಪಂಚದಲ್ಲಿ ಪ್ರಯಾಣಿಕರನ್ನು ಆಕರ್ಷಿಸುವುದು ಅನಿವಾರ್ಯ. ಆಡಿಯೋ/ವೀಡಿಯೋ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಸೆಳೆಯುವ ಬದಲು ಪತ್ರಿಕೆ-ಪುಸ್ತಕಗಳನ್ನು ಇಡಲಾಗಿದೆ. ಆ ಮೂಲಕವಾದರೂ ಪ್ರಯಾಣಿಕರಲ್ಲಿ ಕನ್ನಡಾಭಿಮಾನ ಬೆಳೆಯಲಿ ಎಂಬುದು ನಮ್ಮ ಆಶಯ. ಇದರ ಉಸ್ತುವಾರಿಯನ್ನು ಶಿವಣ್ಣ(ಬಿಲ್ಲೆ ಸಂಖ್ಯೆ 2193) ಎಂಬ ನಿರ್ವಾಹಕರು ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ” ಎಂದು ಖುಷಿಯಿಂದ ಹೇಳುತ್ತಾರೆ.
    ಪುಸ್ತಕ/ಪತ್ರಿಕೆ ಇಡಲು ನೇತುಹಾಕಿದ ಟ್ರೇ ಮೇಲೆ “ಪುಸ್ತಕ ಮತ್ತು ಪತ್ರಿಕೆಗಳನ್ನು ಓದಿದ ನಂತರ ಇದರಲ್ಲಿಯೇ ಇಡಿ” ಎಂಬ ವಿನಂತಿಯನ್ನು ಅಂಟಿಸಲಾಗಿದೆ. ನೀವೊಮ್ಮೆ ಈ ಬಸ್‍ನಲ್ಲಿ ಪ್ರಯಾಣಿಸಿದರೆ ನೀವು ಖರೀದಿಸಿದ ಪತ್ರಿಕೆ/ಪುಸ್ತಕಗಳನ್ನು ಇದರಲ್ಲಿ ಹಾಕಿ. ಅದು ಇತರೆ ಪ್ರಯಾಣಿಕರಿಗೆ ಓದಲು ಸಹಾಯವಾಗುತ್ತದೆ. ಆ ಮೂಲಕವಾದರೂ ನಾಡು-ನುಡಿಗೆ ಸೇವೆ ಸಲ್ಲಿಸಿದಂತಾಗುತ್ತದೆ. ಏನಂತೀರಿ?

            -ಆರ್.ಬಿ.ಗುರುಬಸವರಾಜ.   




October 22, 2014

ಸಹಿಯೊಳಗಿನ ಸವಿ

 ದಿನಾಂಕ 22-10-2014 ರ ವಿಜಯವಾಣಿಯ 'ಮಸ್ತ್' ಪುರವಣಿಯಲ್ಲಿ ಪ್ರಕಟವಾದ "ಸಹಿಯೊಳಗಿನ ಸವಿ" ಎನ್ನುವ ನನ್ನ ಲೇಖನ.
                               ಸಹಿಯೊಳಗಿನ ಸವಿ
    ನಿತ್ಯ ಜೀವನದಲ್ಲಿ ವಿವಿಧ ಕೆಲಸ ಕಾರ್ಯಗಳಿಗಾಗಿ ನಮ್ಮ ರುಜುವಾತನ್ನು ಸಾಬೀತುಪಡಿಸಲು ಸಹಿ ಹಾಕುತ್ತೇವೆ.  ‘ಸಹಿ’ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖವಾದ ಸಾಕ್ಷಿ. ಸಹಿ ಎಂಬುದು ನಿರ್ದಿಷ್ಟ ಅಕ್ಷರಗಳ ಸುಸಂಘಟಿತ ಸ್ವರೂಪವಾಗಿದ್ದು, ಪ್ರತಿಯೊಬ್ಬರ ವೈಯಕ್ತಿಕ ಹೆಗ್ಗುರುತಾಗಿದೆ. ಕಾನೂನುಬದ್ದ ಮತ್ತು ಪತ್ರ ವ್ಯವಹಾರದ ಮಹತ್ವದ ದಾಖಲೆಗಾಗಿ ಹಾಗೂ ಶಿಷ್ಟಾಚಾರದ ಪ್ರದರ್ಶನಕ್ಕಾಗಿ ಸಹಿಯನ್ನು ಬಳಸುತ್ತೇವೆ. ನಮ್ಮ ಸಹಿಯು ಅನೇಕ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ?
    ಸಹಿಯು ವ್ಯಕ್ತಿಯ ಸ್ವಭಾವದ ಪ್ರತೀಕವಾಗಿದ್ದು, ವ್ಯಕ್ತಿತ್ವದ ಪ್ರಮುಖ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಅದು ವ್ಯಕ್ತಿಯ ಬ್ರಾಂಡೆಂಡ್ ಐಡೆಂಟಿಟಿ ಆಗಿದ್ದು, ಅವರವರ ವರ್ತನೆ, ಚಾರಿತ್ರ್ಯ, ಶಕ್ತಿ ಸಾಮಥ್ರ್ಯಗಳು, ಬಲಹೀನತೆಗಳು, ಪ್ರತಿಫಲ, ಅಧಿಕಾರ ಇತ್ಯಾದಿಗಳನ್ನು ಬಾಹ್ಯವಾಗಿ ಪ್ರತಿಬಿಂಬಿಸುವ ಕನ್ನಡಿ ಇದ್ದಂತೆ. ಸಹಿಯ ವಿಶ್ಲೇಷಣೆ ನಿಜಕ್ಕೂ ಅದ್ಬುತವಾದ ಅಧ್ಯಯನವಾಗಿದೆ. ಸಹಿಯು ವ್ತಕ್ತಿಯ ಕೈಬರಹದ ಸ್ವರೂಪವಾಗಿದ್ದು, ಇದನ್ನು ಓದುವ ಕಲೆಯನ್ನು ಹಸ್ತಾಕ್ಷರ ಶಾಸ್ತ್ರ(ಗ್ರಾಫೋಲಜಿ) ಎನ್ನುತ್ತಾರೆ.
ಸಹಿಯನ್ನು ಎಲ್ಲೆಲ್ಲಿ ಬಳಸುತ್ತೇವೆ?
•    ಮಾಲಿಕತ್ವ ಸಾಬೀತು ಪಡಿಸಲು
•    ಬ್ಯಾಂಕ್‍ಗಳಲ್ಲಿ ಖಾತೆಯನ್ನು ರುಜುವಾತು ಪಡಿಸಲು
•    ಸಾಕ್ಷಿ ಅಥವಾ ಪುರಾವೆಗಳಂತಹ ದಾಖಲೆಗಳಲ್ಲಿ
•    ಆಡಳಿತಾತ್ಮಕ ದಾಖಲೆಗಳಲ್ಲಿ
•    ಶೈಕ್ಷಣಿಕ ದಾಖಲೆಗಳಲ್ಲಿ
•    ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಐಡೆಂಟಿಟಿಗೆ
•    ವ್ಯಕ್ತಿಯ ವೈಯಕ್ತಿಕ ಹೆಗ್ಗುರುತು ತೋರಿಸಲು
•    ಮಹತ್ವದ ದಾಖಲೆಗಳಲ್ಲಿ
   
    ಸಹಿಯು ವ್ಯಕ್ತಿಯ ವೈಯಕ್ತಿಕ ಹೆಗ್ಗುರುತು ಆಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ವೈವಿಧ್ಯಮಯವಾಗಿ ಇರುತ್ತದೆ. ಜಗತ್ತಿನಾದ್ಯಂತ ವಿಭಿನ್ನ ವ್ಯಕ್ತಿಗಳಿರುವಷ್ಟು ವಿಭಿನ್ನ ಸಹಿಗಳಿರುವುದನ್ನು ಗಮನಿಸಬಹುದು. ಪ್ರತಿಯೊಬ್ಬರೂ ತಮ್ಮ ಸಹಿಯು ವಿಶಿಷ್ಟವಾಗಿ ಇರಬೇಕೆಂದು ಬಯಸುತ್ತಾರೆ. ಅಂತೆಯೇ ಇತರರಿಂದ ನಕಲು ಮಾಡದಂತೆ ಇರಬೇಕೆಂದು ಬಯಸುವುದು ತಪ್ಪಲ್ಲ.
ಹೀಗಿರಲಿ ನಿಮ್ಮ ಸಹಿ
ಸ್ಥಳ : ಪುಟದಲ್ಲಿ ಸಹಿಯ ಸ್ಥಳವು ಮಹತ್ವದ್ದು. ಜೀವನದಲ್ಲಿ ಮುಂದೆ ಬರಲು ಒಲವು ತೋರುವ ಪ್ರತಿಯೊಬ್ಬರೂ ಪುಟದ ಬಲಭಾಗದಲ್ಲಿ ಸಹಿ ಮಾಡುತ್ತಾರೆ. ಸಹಿಯು ಮಧ್ಯಭಾಗದಲ್ಲಿದ್ದರೆ ಇತರರ ಬಗೆಗಿನ ಗಮನದ ಕೊರತೆಯನ್ನು, ಒತ್ತಾಯ ಪೂರಕ ಪ್ರಭಾವ ಬೀರುವುದನ್ನು ಸೂಚಿಸುತ್ತದೆ. ಪುಟದ ಎಡ ಭಾಗದಲ್ಲಿನ ಸಹಿಯು ಒಮ್ಮುಖ ಮನೋಸ್ಥಿತಿಯನ್ನು, ಹಿನ್ನಡೆಯನ್ನು ಸೂಚಿಸುತ್ತದೆ.
ಗಾತ್ರ : ಸಹಿಯಲ್ಲಿನ ಅಕ್ಷರಗಳ ಗಾತ್ರವೂ ಸಹ ಸಾಕಷ್ಟು ಮಾಹಿತಿಗಳನ್ನು ಬಿಂಬಿಸುತ್ತದೆ. ಆದ್ದರಿಂದ ಅಕ್ಷರಗಳ ಗಾತ್ರವೂ ಸಹ ಪ್ರಸ್ತಾಪಿತ ಅಂಶವಾಗಿದೆ. ದೊಡ್ಡ ಅಕ್ಷರಗಳ ಸಹಿಯು ಅನ್ಯಾಯದ ವಿರುದ್ದದ ಪ್ರತಿಭಟನೆಯನ್ನೂ, ಸದಾ ಸುದ್ದಿಯಲ್ಲಿ ಇರಬಯಸುವುದನ್ನು ಪ್ರದರ್ಶಿಸುತ್ತದೆ. ಚಿಕ್ಕ ಗಾತ್ರದ ಸಹಿಯು ನಾಚಿಕೆ, ಹಿಂಜರಿಕೆ, ಸೂಕ್ಷ್ಮತೆಗಳ ಸಂಕೇತವಾಗಿದೆ. ಮಧ್ಯ ಗಾತ್ರದ ಸಹಿಯು ಸುಸಮನ್ವಿತ ವ್ಯಕ್ತಿತ್ವವನ್ನು, ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತದೆ.
ಅಲಂಕಾರ : ಅಲಂಕಾರಿಕ ಸಹಿಯು ಎಲ್ಲರನ್ನು ಆಕರ್ಷಿಸುತ್ತದೆ. ಸಹಿಯನ್ನು ಅಡ್ಡಗೆರೆಗಳು, ಚುಕ್ಕೆಗಳು ಹಾಗೂ ಸುರುಳಿಗಳಿಂದ ಆಕರ್ಷಿಸುವುದು ವಾಡಿಕೆ. ಸಹಿಯಲ್ಲಿನ ಅಡ್ಡಗೆರೆಗಳು ಆತ್ಮವಿಮರ್ಶೆಯನ್ನು, ತಮ್ಮ ಪ್ರಾಬಲ್ಯವನ್ನು ಇತರಿಗೆ ಒತ್ತಾಯವಾಗಿ ಹೇರುವುದನ್ನು ತಿಳಿಸುತ್ತದೆ. ಚುಕ್ಕೆಗಳು ಬುದ್ದಿವಂತಿಕೆಯನ್ನು, ಆಕ್ರಮಣಕಾರಿ ಮನೋಭಾವವನ್ನು ಸೂಚಿಸುತ್ತದೆ. ಸುರುಳಿಗಳು ಸೃಜನಶೀಲತೆ ಮತ್ತು ಕಲಾತ್ಮಕತೆಯನ್ನು ವ್ಯಕ್ತಪಡಿಸುತ್ತವೆ.
ಸ್ಪಷ್ಟತೆ : ಅಸ್ಪಷ್ಟವಾದ ಸಹಿ ನೋಡಲು ಅಹಿತಕರವಾಗಿರುತ್ತದೆ. ಸ್ಪಷ್ಟತೆ ಎಂದರೆ ಎಲ್ಲರಿಗೂ ಸ್ಪಷ್ಟವಾಗಿ ಗೋಚರವಾಗುವಂತೆ ಸ್ಪುಟವಾಗಿರಬೇಕು. ಸ್ಪಷ್ಟತೆ ಮತ್ತು ಸ್ಪುಟತೆಯಿಂದ ಕೂಡಿದ ಸಹಿಯು ಅವರ ಪ್ರಾಮಾಣಿಕತೆ, ಮುಕ್ತತೆಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಸಂತೃಪ್ತಿ ಜೀವನವನ್ನು ಸೂಚಿಸುತ್ತದೆ.
ವಿಷಯ : ಸಹಿಯಲ್ಲೂ ವಿಷಯವಿದೆ ಎಂದರೆ ಆಶ್ಚರ್ಯವೇ?. ಇಲ್ಲಿ ವಿಷಯ ಎಂದರೆ ವ್ಯಕ್ತಿಯ ಹೆಸರು. ಸಹಿಯಲ್ಲಿ ಹೆಸರಿನ ಅರ್ದ ಅಕ್ಷರಗಳಿದ್ದರೆ ಅಂತಹವರು ತಮ್ಮ ವೈಯಕ್ತಿಕ ಅಂಶಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂಬುದು ತಿಳಿಯುತ್ತದೆ. ಸಹಿಯಲ್ಲಿ ಪೂರ್ಣ ಹೆಸರು ಗೋಚರಿಸುವಂತಿದ್ದರೆ ಅಂತಹವರು ಪ್ರಶಾಂತ ಸ್ವಭಾವದವರಾಗಿದ್ದು, ಮುಕ್ತ ಮನಸ್ಸು ಹೊಂದಿರುತ್ತಾರೆ, ಇತರರ ಹೇಳಿಕೆಗಳನ್ನು ಗೌರವಿಸುತ್ತಾರೆ.
ದಿಕ್ಕು : ಸಹಿಯಲ್ಲಿ ದಿಕ್ಕೂ ಸಹ ಮಹತ್ವದ್ದು. ಸಹಿಯು ಬಲಕ್ಕೆ ಓರೆಯಾಗಿದ್ದರೆ ಸ್ನೇಹಪರತೆಯನ್ನು, ಎಡಕ್ಕೆ ಓರೆಯಾಗಿದ್ದರೆ ಜಿಗುಪ್ಸೆಯನ್ನು, ನೇರವಾಗಿದ್ದರೆ ನೇರನುಡಿ ಹಾಗೂ ದಿಟ್ಟತೆಯನ್ನು ವ್ಯಕ್ತಪಡಿಸುತ್ತದೆ.
ಒತ್ತಡ : ಸಹಿಯಲ್ಲಿನ ಅಕ್ಷರಗಳ ಒತ್ತಡವೂ ಬಹುಮುಖ್ಯ. ಅಕ್ಷರಗಳನ್ನು ಒತ್ತಿ ಬರೆದ ಸಹಿಯು ಗಂಭೀರ ಗುಣವನ್ನು, ಕಠಿಣ ಪರಿಶ್ರಮವನ್ನು ತೋರುತ್ತದೆ. ಹಾಗೆಯೇ ತೇಲಿಸಿ ಹಗುರವಾಗಿ ಬರೆದ ಸಹಿಯು ಸೂಕ್ಷ್ಮ ಮನೋಸ್ಥಿತಿಯನ್ನು ಹಾಗೂ ನಿರಾಶವಾದವನ್ನು ಬಿಂಬಿಸುತ್ತದೆ.
ಸಹಿಯು ಏನು ಹೇಳುತ್ತದೆ?
•    ಸಹಿಯ ಮೊದಲ ಅಕ್ಷರಗಳು ದೊಡ್ಡ ಗಾತ್ರದಲ್ಲಿದ್ದು, ಕ್ಯಾಪಿಟಲ್ ಅಕ್ಷರಗಳಿಂದ ಕೂಡಿದ್ದರೆ, ಆ ವ್ಯಕ್ತಿಯು ಪ್ರಥಮ ಭೇಟಿಯಲ್ಲೇ ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ ಹಾಗೂ ಸ್ವಾಭಿಮಾನಿಗಳಾಗಿರುತ್ತಾರೆ. ಮೊದಲನೆ ಅಕ್ಷರ ಚಿಕ್ಕದಾಗಿದ್ದರೆ ಆ ವ್ಯಕ್ತಿ ತನ್ನ ವೈಯಕ್ತಿಕ ಅಂಶಗಳನ್ನು ಗೌಪ್ಯವಾಗಿಡಲು ಪ್ರಯತ್ನಿಸುತ್ತಾನೆ.
•    ಬಹುತೇಕ ಸಹಿಯಲ್ಲಿ ವ್ಯಕ್ತಿಯ ಹೆಸರು ಮತ್ತು ಕೌಟುಂಬಿಕ ಹೆಸರುಗಳು ಇರುತ್ತವೆ. ಕೌಟುಂಬಿಕ ಹೆಸರು ಪ್ರಧಾನವಾಗಿದ್ದರೆ ಆ ವ್ಯಕ್ತಿ ತನ್ನ ಕುಟುಂಬದ ಘನತೆ, ಗೌರವ ಕಾಪಾಡಲು ಪ್ರಯತ್ನಿಸುತ್ತಾನೆ ಮತ್ತು ಕುಟುಂಬದ ಸದಸ್ಯರಿಗೆ ಗೌರವ ಕೊಡುತ್ತಾನೆ. ವ್ಯಕ್ತಿಯ ಹೆಸರು ಪ್ರಧಾನವಾಗಿದ್ದರೆ ವೈಯಕ್ತಿಕವಾಗಿ ತನ್ನ ಮೇಲೆ ಹೆಚ್ಚು ನಂಬಿಕೆ ಇಟ್ಟಿರುತ್ತಾನೆ. ಇತರರನ್ನು ನಂಬುವುದಿಲ್ಲ. ಆಲೋಚನೆ ಮತ್ತು ನಿರ್ಧಾರಗಳಲ್ಲಿ ಸ್ವತಂತ್ರನಾಗಿರುತ್ತಾನೆ. ಇತರರ ಅನಿಸಿಕೆಗಳಿಗೆ ಬೆಲೆ ಕೊಡುವುದಿಲ್ಲ.
•    ಸ್ಪುಟವಾದ ಮತ್ತು ಸ್ಪಷ್ಟವಾದ ಸಹಿಯು ಆಕರ್ಷಕ ವ್ಯಕ್ತಿತ್ವದ ಗುಣವನ್ನು ಪ್ರತಿನಿಧಿಸುತ್ತದೆ. ಇಂತಹವರು ಸ್ಪಷ್ಟವಾದ ಗುರಿಯನ್ನು ಹೊಂದಿದ್ದು, ಭವಿಷ್ಯದಲ್ಲಿ ಉತ್ತಮ ದೃಷ್ಟಿಕೋನ ಹೊಂದಿರುತ್ತಾರೆ.
•    ವಕ್ರವಾದ ಮತ್ತು ನಯವಾದ ಸಹಿಯು ವ್ಯಕ್ತಿಯ ಶಾಂತ, ಆಕರ್ಷಕ ಹಾಗೂ ಎಲ್ಲರೊಂದಿಗೂ ಬೆರೆಯುವ ಗುಣವನ್ನು ಪ್ರದರ್ಶಿಸುತ್ತದೆ.
•    ಕೋನೀಯ ಸಂಪರ್ಕಗಳನ್ನು ಹೊಂದಿದ ಸಹಿಯು ಬಲವಂತದ ವ್ಯಕ್ತಿತ್ವವನ್ನು, ಸ್ಪರ್ಧಾತ್ಮಕ ಹಾಗೂ ಆಕ್ರಮಣಕಾರಿ ಮನೋಭಾವವನ್ನು ಸೂಚಿಸುತ್ತದೆ.
•    ಸಹಿಯ ಕೆಳಗಿನ ಅಡ್ಡಗೆರೆಯು ಆ ವ್ಯಕ್ತಿಯ ಆರೋಗ್ಯಕರ ಅಹಂನ್ನು, ವಿಶ್ವಾಸವನ್ನು ತೋರಿಸುತ್ತದೆ.
•    ಸಹಿಯ ಕೆಳಗೆ ಅನೇಕ ಅಡ್ಡಗೆರೆಗಳಿದ್ದರೆ ಅಂತಹವರು ಸಾರ್ವಜನಿಕವಾಗಿ ಸಂಶಯಪೀಡಿತರು ಆಗಿರುತ್ತಾರೆ. ಇತರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.
•    ಸಹಿಯಲ್ಲಿನ ಅಡ್ಡಗೆರೆಯು ಮೇಲ್ಭಾಗಕ್ಕೆ ಏರಿದ್ದರೆ ಉನ್ನತ ಭೌದ್ದಿಕ ಮಟ್ಟವನ್ನು, ನಾಯಕತ್ವÀದ ಗುಣವನ್ನು ತಿಳಿಸುತ್ತದೆ.
•    ಸಹಿಯ ಕೆಳಗೆ ಯಾವುದೇ ಅಡ್ಡಗೆರೆಗಳಿಲ್ಲದಿದ್ದರೆ ಅಂತಹವರು ನಿಗರ್ವಿಗಳಾಗಿದ್ದು, ಉನ್ನತ ಆತ್ಮಸ್ಥೈರ್ಯ ಮತ್ತು ಮೌಲ್ಯಗಳನ್ನು ಹೊಂದಿರುತ್ತಾರೆ.
•    ಆರೋಹಣದ ಸಹಿಯು ಆಶಾವಾದ ಮತ್ತು ಸಕ್ರಿಯತೆಯ ಸಂಕೇತವಾಗಿದೆ.
•    ಅವರೋಹಣದ ಸಹಿಯುಳ್ಳವರು ದಣಿವು, ಖಿನ್ನತೆ, ಹಿಂಜರಿಕೆ ಸ್ವಭಾವ, ನಿರಾಶಾವಾದ, ನಿಶ್ಚಿತವಲ್ಲದ ಗುರಿಯನ್ನು ಹೊಂದಿರುತ್ತಾರೆ.
•    ಸಹಿಯ ಕೆಳಗಿನ ಒಂದು ಚುಕ್ಕೆಯು ಜಾಗೃತ ಪ್ರವೃತ್ತಿಯನ್ನು, ಎರಡು ಚುಕ್ಕೆಗಳು ನಿರ್ದೇಶನ ಮತ್ತು ಆದೇಶದ ಪ್ರವೃತ್ತಿಯನ್ನು ತಿಳಿಸುತ್ತದೆ.
ಇರಲಿ ಎಚ್ಚರ !!!
    ಪ್ರತಿಯೊಬ್ಬರೂ ಅವರವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಆ ಜವಾಬ್ದಾರಿಗಳಿಗೆ ಸಹಿಯು ಕಾನೂನುಬದ್ದ ಸಾಕ್ಷಿಯಾಗುತ್ತದೆ. ವೈಯಕ್ತಿಕ ಜೀವನದಲ್ಲಿ ನಾವು ಹಲವಾರು ಮಹತ್ವದ ದಾಖಲೆಗಳಿಗೆ ಸಹಿ ಹಾಕುತ್ತೇವೆ. ಸಹಿಯು ಇನ್ನೊಬ್ಬರಿಂದ ನಕಲು ಆಗದಂತೆ ರೂಪಿಸಿಕೊಳ್ಳುವುದು ಬಹುಮುಖ್ಯ. ನಕಲಿ ಸಹಿಯಿಂದ ವ್ಯಕ್ತಿ ಬಲಿಪಶು ಆಗಬಹುದು. ಅಜಾಗರೂಕತೆ ಅಪಾಯಕ್ಕೆ ತಳ್ಳುತ್ತದೆ. ಆದ್ದರಿಂದ ಸಹಿಯ ನಕಲು ಮತ್ತು ವಂಚನೆ ತಡೆಯಲು ಕೆಳಗಿನ ನಿಯಮಗಳನ್ನು ಅನುಸರಿಸಿ.
    ನಿಧಾನವಾದ ಸಹಿ ಬೇಡ : ಸಹಿಯನ್ನು ನಿಧಾನವಾಗಿ ಬರೆಯುವುದರಿಂದ ನಕಲು ಮಾಡಲು ಅನುಕೂಲವಾಗುತ್ತದೆ. ಅದಕ್ಕಾಗಿ ವೇಗವಾಗಿ ಸಹಿ ಮಾಡುವ ಅಬ್ಯಾಸ ಮಾಡಿಕೊಳ್ಳಿ.
    ಸಹಿಯಲ್ಲಿ ಸಂಕೀರ್ಣತೆ ಇರಲಿ : ಸರಳವಾದ ಸಹಿಯು ಅಪಾಯಕ್ಕೆ ಆಹ್ವಾನ ನೀಡುತ್ತದೆ. ಸಹಿಯು ಆದಷ್ಟೂ ಸಂಕೀರ್ಣತೆಯಿಂದ ಕೂಡಿರಲಿ.
    ಕಲಾತ್ಮಕವಾಗಿರಲಿ : ನಿಮ್ಮ ಪರಿಪೂರ್ಣತೆ ನಿಮ್ಮ ಸಹಿಯ ಸುರಕ್ಷತೆಯಲ್ಲಿ ಬಿಂಬಿಸಲಿ. ಕಲಾತ್ಮವಾದ ಸಹಿಯು ನಕಲು ತಡೆಯಲು ಸಹಕಾರಿ.
    ಒಂದಕ್ಕಿಂತ ಹೆಚ್ಚು ಸಹಿ ಬಳಸಿ : ಕಾನೂನಾತ್ಮಕ ದಾಖಲೆಗಳಿಗಾಗಿ ಬಳಸುವ ಸಹಿಯನ್ನು ಎಲ್ಲೆಂದರಲ್ಲಿ ಬಳಸಬೇಡಿ. ದೈನಂದಿನ ವ್ಯವಹಾರಗಳಿಗಾಗಿ ಬೇರೊಂದು ಸಹಿಯನ್ನು ಬಳಸಿ.
    ಖಾಲಿ ಹಾಳೆಯ ಸಹಿಗೆ ಕಡಿವಾಣ ಹಾಕಿ : ಅಪೂರ್ಣವಾಗಿ ತುಂಬಿದ ಅಥವಾ ಖಾಲಿ ಕಾಗದದಲ್ಲಿ ಸಹಿ ಹಾಕುವುದನ್ನು ನಿಲ್ಲಿಸಿ. ಇದು ಸಹಿಯ ದುರ್ಬಳಕೆಯನ್ನು ತಪ್ಪಿಸುತ್ತದೆ.
    ಔಚಿತ್ಯವಿರಲಿ : ಸಾಮಾಜಿಕ ಜಾಲ ತಾಣಗಳಲ್ಲಿ ಅನಾವಶ್ಯಕವಾಗಿ ಸಹಿಯನ್ನು ಪ್ರದರ್ಶಿಸಬೇಡಿ. ಇದು ನಕಲು ಮಾಡಲು ಪ್ರೇರಣೆ ನೀಡುತ್ತದೆ.
    ದೂರು ನೀಡಿ : ನಕಲಿ ಸಹಿಯ ವಂಚನೆಗೆ ಒಳಗಾದಲ್ಲಿ ತಕ್ಷಣವೇ ಸಂಬಂಧಿಸಿದ ದಾಖಲೆಗಳೊಂದಿಗೆ ಮೇಲಾಧಿಕಾರಿಗಳಿಗೆ ಅಥವಾ ಸಂಬಂಧಿಸಿದವರಿಗೆ ವಿವರಣೆ ನೀಡಿ. ಇದು ತನಿಖೆಗೆ ಸಹಕಾರಿಯಾಗುತ್ತದೆ.
                                                                                                             - ಆರ್.ಬಿ.ಗುರುಬಸವರಾಜ

September 29, 2014

ಉಜ್ವಲ ಭವಿಷ್ಯಕ್ಕೆ ವಿಧಿವಿಜ್ಞಾನ

ದಿನಾಂಕ 29-09-2014 ರಂದು ಪ್ರಜಾವಾಣಿಯ "ಶಿಕ್ಷಣ" ಪುರವಣಿಯಲ್ಲಿ ಪ್ರಕಟವಾದ  'ಉಜ್ವಲ ಭವಿಷ್ಯಕ್ಕೆ ವಿಧಿವಿಜ್ಞಾನ' ಎಂಬ ಲೇಖನ
                    ಉಜ್ವಲ ಭವಿಷ್ಯಕ್ಕೆ ವಿಧಿವಿಜ್ಞಾನ
    ಅಂತೂ ಇಂತು ನಿತ್ಯಾನಂದನ ಪುರುಷತ್ವ ಪರೀಕ್ಷೆ ನಡೆಯಿತು. ಇದರ ವಿಸ್ಕೃತ ವರದಿಯನ್ನು ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ. ಈ ವರದಿಯನ್ನಾಧರಿಸಿ ನ್ಯಾಯಾಲಯ ನ್ಯಾಯ ತೀರ್ಮಾನ ಮಾಡುತ್ತದೆ. ಇಂತಹ ಹಲವು ಅಧಿಕೃತವಾದ ವೈಜ್ಞಾನಿಕ ವರದಿಯನ್ನು ನ್ಯಾಯಾಲಯಗಳಿಗೆ ಸಲ್ಲಿಸುವ ಏಕೈಕ ಸಂಸ್ಥೆ ವಿಧಿವಿಜ್ಞಾನ ಅಥವಾ ನ್ಯಾಯವಿಜ್ಞಾನ ಸಂಸ್ಥೆ. ವಿಧಿವಿಜ್ಞಾನ ಅಥವಾ  ಫೋರೆನ್ಸಿಕ್ ಸೈನ್ಸ್ ಎಂಬುದು ನ್ಯಾಯಾಂಗ ವ್ಯವಸ್ಥೆಗೆ ನಿರ್ದಿಷ್ಟವಾದ ಮತ್ತು ಪರಿಪೂರ್ಣವಾದ ಸಾಕ್ಷ್ಯಾಧಾರಗಳನ್ನು ಒದಗಿಸುವ ವೈಜ್ಞಾನಿಕ ಸಂಸ್ಥೆಯಾಗಿದೆ.
ಏನಿದು ಫೋರೆನ್ಸಿಕ್ ಸೈನ್ಸ್?
    ಸರಳವಾಗಿ ಹೇಳುವುದಾದರೆ ನ್ಯಾಯವಿಜ್ಞಾನ ಎನ್ನುವುದು ಕಾನೂನಿನ ವಿಜ್ಞಾನ. ನ್ಯಾಯಾಂಗ ವ್ಯವಸ್ಥೆಯ ನಿರ್ಣಾಯಕ ಅಂಶಗಳಿಗೆ ಅಗತ್ಯವಿರುವ ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾದ ಪೂರಕ ದಾಖಲೆಗಳೊಂದಿಗೆ ಒದಗಿಸುವ ಅನ್ವಯಿಕ ವಿಜ್ಞಾನ ಕ್ಷೇತ್ರವಾಗಿದೆ. ಇದು ಅಪರಾಧದ ಸುಳಿವನ್ನು ಪತ್ತೆ ಹಚ್ಚುವ ಮತ್ತು ಪರೀಕ್ಷಿಸುವ ಕಾರ್ಯ ಮಾಡುತ್ತದೆ. ಇದೊಂದು ಪಿ.ಯು.ಸಿ. ನಂತರದ ಕೋರ್ಸ.
ಏಕೆ ಈ ಕೋರ್ಸ?
    ಉಜ್ವಲ ಭವಿಷ್ಯ ಹೊಂದಿದ್ದು, ಬೇರೆಯವರಿಗಿಂತ ಭಿನ್ನವಾಗಿರಲು ಬಯಸುವ ಅನೇಕ ವಿದ್ಯಾರ್ಥಿಗಳಿಂದು ಸಾಂಪ್ರದಾಯಿಕ ಕೋರ್ಸಗಳಾದ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಹೊರತು ಪಡಿಸಿ ಕೆಲವು ಉತ್ತಮ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಏಕೆಂದರೆ ನಾಗಾಲೋಟದ ಜೀವನ ಕೆಲವರಿಗೆ ಬೇಸರ ತರುತ್ತದೆ. ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರದಲ್ಲಿ ಆಸಕ್ತಿ, ಪ್ರತಿಭೆ ಹಾಗೂ ಪ್ರಾವೀಣ್ಯತೆ ಇದ್ದವರಿಗೆ ನ್ಯಾಯವಿಜ್ಞಾನ ಕೋರ್ಸ ಹೆಚ್ಚು ಸೂಕ್ತವಾದುದು. ಈ ಕೋರ್ಸ ಪೂರೈಸಿದವರಿಗೆ ಸದ್ಯಕ್ಕೆ ಭಾರತದಲ್ಲಿ ವಿಫುಲ ಅವಕಾಶಗಳಿವೆ. 2010 ರಲ್ಲಿ 13000 ಅಭ್ಯರ್ಥಿಗಳು ಈ ಕೋರ್ಸನ ಅಡಿಯಲ್ಲಿ ಸರ್ಕಾರಿ ಹುದ್ದೆ ಗಳಿಸಿಕೊಂಡಿದ್ದು,  ಈಗ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2020ರ ವೇಳೆಗೆ ಇದರ ಬೇಡಿಕೆ ಗಣನೀಯವಾಗಿ ಹೆಚ್ಚಲಿದೆ.
ಬಳಕೆ ಎಲ್ಲೆಲ್ಲಿ? ಹೇಗೆ ?
    ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ವಿವಿಧ ವೈಜ್ಞಾನಿಕ ಮತ್ತು ಪ್ರಾಯೋಗಿಕ ವಿಧಾನಗಳು ಮತ್ತು ಅನ್ವಯಿಕ ತತ್ವಗಳ ಮೂಲಕ ಸಾಕ್ಷ್ಯ ಒದಗಿಸುವಲ್ಲಿ ಬಳಸುತ್ತಾರೆ.
    ಅಪರಾಧದ ಸ್ಥಳದಲ್ಲಿ ಸಂಗ್ರಹಿಸಿದ ಸುಳಿವುಗಳ ತೀವ್ರ ವಿಶ್ಲೇಷಣೆಯಲ್ಲಿ ಬಳಸುತ್ತಾರೆ.
    ಅಪರಾಧದ ಸ್ಥಳದಿಂದ ಶಂಕಿತ ವಸ್ತುಗಳನ್ನು ಸಂಗ್ರಹಿಸುವುದು ಹಾಗೂ ಅವುಗಳನ್ನು ಪ್ರಯೋಗಾಲಯಗಳಲ್ಲಿ ಕ್ರೂಢೀಕರಿಸಿ ಸುಳಿವುಗಳನ್ನು ವಿಶ್ಲೇಷಿಸಿ ನ್ಯಾಯ ನಿರ್ಣಯಕ್ಕೆ ಸೂಕ್ತ ಸಾಕ್ಷಿ ಒದಗಿಸುವಲ್ಲಿ ಬಳಸುತ್ತಾರೆ.
    ಅಪರಾಧ ಸ್ಥಳದಿಂದ ಸಂಗ್ರಹಿಸಿದ ರಕ್ತ, ಜೊಲ್ಲು, ಕೂದಲು, ಹೆಜ್ಜೆಗುರುತು, ಗಾಲಿ/ಚಕ್ರದ ಗುರುತು, ಬೆರಳಚ್ಚು, ಇತ್ಯಾದಿಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಶ್ಲೇಷಿಸಲು ಸಹಾಯಕ.
    ಅಪರಾಧ ತನಿಖೆ ನಡೆಸಲು ಸಹಾಯಕ.
    ನ್ಯಾಯಾಂಗ ವೃತ್ತಿಪರರಿಗೆ(ವಕೀಲರಿಗೆ) ಬೋಧನೆ ಮಾಡಲು ಮತ್ತು ಮಾಧ್ಯಮ ವರದಿಗಾರಿಕೆಗೆ(ಅಪರಾಧ ವಿಭಾಗ) ಸಹಾಯಕ.
    ವೈದ್ಯ ವಿದ್ಯಾರ್ಥಿಗಳಿಗೆ ವೈದ್ಯವಿಜ್ಞಾನ ಮತ್ತು ವಿಶ್ಲೇಷಣೆಗೆ ಸಂಬಂಧಿಸಿದ ಸಾಕ್ಷಿಗಳನ್ನು ಮತ್ತು ಮಾಹಿತಿಗಳನ್ನು ಒದಗಿಸಲು ಈ ಕೋರ್ಸ ಸಹಾಯಕ.
    ವೈದ್ಯಕೀಯದಲ್ಲಿ ವಿಶೇಷ ಪರಿಣಿತಿ ಪಡೆಯಲು ಮತ್ತು  ಮರಣೋತ್ತರ ಪರೀಕ್ಷೆ ಮಾಡುವ ಅರ್ಹತೆಗಾಗಿ ಈ ಕೋರ್ಸ ಅವಶ್ಯಕ.
ವಿದ್ಯಾರ್ಹತೆ : ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಭಾಗ ಅಪೇಕ್ಷಣೀಯ. ಅದರಲ್ಲೂ ಮುಖ್ಯವಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಗಳ ಅಧ್ಯಯನ ಅವಶ್ಯಕ. ಬಿ.ಎಸ್ಸಿ ಮತ್ತು ಕಾನೂನು ಪದವಿ ಪಡೆದವರೂ ಈ ಕೋರ್ಸ ಸೇರಬಹುದಾಗಿದೆ.
ಕೋರ್ಸನ ವಿಧಗಳು :
•    3 ವರ್ಷದ ಪದವಿ ಕೋರ್ಸ(ಬಿ.ಎಸ್ಸಿ)
•    2 ವರ್ಷದ ಸ್ನಾತಕೋತ್ತರ ಪದವಿ ಕೋರ್ಸ(ಎಂ.ಎಸ್ಸಿ)
•    1 ಅಥವಾ 2 ವರ್ಷದ ಡಿಪ್ಲೋಮಾ ಕೋರ್ಸ
•    1 ವರ್ಷದ ಸರ್ಟಿಫಿಕೆಟ್ ಕೋರ್ಸ
ಕೋರ್ಸನಲ್ಲಿ ಏನಿರುತ್ತದೆ ?
    ನ್ಯಾಯವಿಜ್ಞಾನದ ಮೂಲಾಂಶಗಳು, ನೀತಿ ನಿಯಮಗಳು, ವಿಧಾನಗಳು, ಕಾನೂನುಗಳು, ಅಡ್ಡ ಪರೀಕ್ಷೆಗಳು,
    ಅಪರಾಧ ಸನ್ನಿವೇಶದ ಸಾಕ್ಷಿ ಸಂಗ್ರಹ ಮತ್ತು  ತನಿಖೆ
    ಭೌತಿಕ ಸಾಕ್ಷ್ಯಾಧಾರಗಳ ಸಂಸ್ಕರಣೆ ಮತ್ತು ತನಿಖೆ
    ಕೂದಲು, ಎಳೆ ಹಾಗೂ ಇತರೆ ಸೂಕ್ಷ್ಮ ವಸ್ತುಗಳ ಪರೀಕ್ಷಣೆ
    ವಿಷವಿಜ್ಞಾನ ಮತ್ತು ನ್ಯಾಯವಿಜ್ಞಾನ
    ಡಿ.ಎನ್.ಎ ಮತ್ತು ಸಿರಮ್‍ಶಾಸ್ತ್ರ
    ದಾಖಲೆಗಳ ಪ್ರಶ್ನಿಸುವಿಕೆ ಮತ್ತು ಕೈಬರಹ ಪರೀಕ್ಷಣೆ
    ಶಂಕಿತ ವಸ್ತುಗಳ ಮೇಲಿನ ಬೆರಳಚ್ಚು ಪರೀಕ್ಷೆ
    ಫಿರಂಗಿ, ಬಂದೂಕು, ಸಿಡಿಮದ್ದುಗಳಂತಹ ಸ್ಫೋಟಕಗಳ ತನಿಖೆ
    ಫೋರೆನ್ಸಿಕ್ ಸೈಕಾಲಜಿ, ಮಾನವಶಾಸ್ತ ಹಾಗೂ ವಿಧಿವಿಜ್ಞಾನ ಇಂಜಿನಿಯರಿಂಗ್
    ನ್ಯಾಯ ಕೀಟಶಾಸ್ತ್ರ
    ವನ್ಯಜೀವಿ ನ್ಯಾಯವಿಜ್ಞಾನ
    ಮಾಧ್ಯಮ ವರದಿಗಾರಿಕೆ ಹಾಗೂ ಕಾನೂನುಗಳು
    ಕೋರ್ಸನ ನಂತರ ಪ್ರಾಯೋಗಿಕ ಅನುಭವ(ಇಂಟರ್ನಶಿಪ್) ಪಡೆಯುವುದು ಮುಖ್ಯ. ಇಂಟರ್ನಶಿಪ್ ಅವಧಿಯಲ್ಲಿ ಸ್ಟೈಫಂಡರಿ ಇರುತ್ತದೆ. ಇಂಟರ್ನಶಿಪ್‍ನಿಂದ ಅನುಭವದ ಜೊತೆಗೆ ಬೇರೆ ಬೇರೆ ಕಡೆ ಉದ್ಯೋಗಾವಕಾಶಗಳು ದೊರೆಯುತ್ತವೆ.
ವೆಚ್ಚದಾಯಕವೇನಲ್ಲ !
    ವೈದ್ಯಕೀಯ ಶಿಕ್ಷಣ ಮತ್ತು ಇಂಜಿನಿಯರಿಂಗ್ ಶಿಕ್ಷಣಗಳಿಗೆ ಹೋಲಿಸಿದರೆ ಫೋರೆನ್ಸಿಕ್ ಸೈನ್ಸ್ ವೆಚ್ಚದಾಯಕವೇನಲ್ಲ. ಕಾಲೇಜುಗಳ ಗುಣಮಟ್ಟ ಹಾಗೂ ವ್ಯವಸ್ಥೆಯ ಮೇಲೆ ಶುಲ್ಕ ನಿಗದಿಯಾಗಿರುತ್ತದೆ. ಭಾರತದಲ್ಲಿ ಈ ಕೋರ್ಸನ ಒಟ್ಟಾರೆ ವೆಚ್ಚ ರೂ.2 ರಿಂದ 3 ಲಕ್ಷಗಳು ಮಾತ್ರ. ಇದರಲ್ಲಿ ಬಹುಪಾಲು ಶುಲ್ಕ ಪ್ರಯೋಗಾಲಯ ವೆಚ್ಚಕ್ಕೆ ಮೀಸಲಿರುತ್ತದೆ. ಪ.ಜಾತಿ ಮತ್ತು ಪ.ಪಂಗಡದವರು ಹಾಗೂ ಅಂಗವಿಕಲರಿಗೆ ಶುಲ್ಕ ವಿನಾಯಿತಿ ಇರುತ್ತದೆ. ಜೊತೆಗೆ ಅರ್ಹ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನದ ಸೌಲಭ್ಯವೂ ಇರುತ್ತದೆ. ಹಾಗಾಗಿ ಈ ಕೋರ್ಸ ವೆಚ್ಚದಾಯಕವೇನಲ್ಲ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ
    ಅಮೇರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಫೋರೆನ್ಸಿಕ್ ಸೈನ್ಸ್ ಪಡೆದವರಿಗೆ ತುಂಬಾ ಬೇಡಿಕೆ ಇದೆ. ಬಹುತೇಕ ವೈಟ್ ಕಾಲರ್ ಅಪರಾಧದ ಸಮಸ್ಯೆಗಳು ಫೋರೆನ್ಸಿಕ್ ಸೈನ್ಸ್‍ನಿಂದ ನ್ಯಾಯಸಮ್ಮತಗೊಂಡಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ವೃತ್ತಿಗೆ ತುಂಬಾ ಬೇಡಿಕೆ ಇದೆ. ಭಾರತದಲ್ಲೂ ಸಾಕಷ್ಟು ಅವಕಾಶಗಳಿವೆ.
ವೃತ್ತಿ ಅವಕಾಶಗಳು
ಸರ್ಕಾರಿ ವಲಯ    ಖಾಸಗೀ ವಲಯ
    ಪೋಲೀಸ್ ಇಲಾಖೆಯಲ್ಲಿ,
    ರಕ್ಷಣಾ ಇಲಾಖೆಯಲ್ಲಿ,
    ಅಗ್ನಿ ತನಿಖಾ ದಳದಲ್ಲಿ,
    ಅಪರಾಧ ತನಿಖಾ ದಳದಲ್ಲಿ,
    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನ್ಯಾಯವಿಜ್ಞಾನ ಪ್ರಯೋಗಾಲಯಗಳಲ್ಲಿ,
    ಪ್ರಾದೇಶಿಕ   ನ್ಯಾಯವಿಜ್ಞಾನ ಪ್ರಯೋಗಾಲಯಗಳಲ್ಲಿ,
    ಸಿ.ಬಿ.ಐ/ ಸಿ.ಐ.ಡಿಗಳಲ್ಲಿ
    ಗುಣಮಟ್ಟ ನಿಯಂತ್ರಣ ಸಂಸ್ಥೆಗಳಲ್ಲಿ,
    ಮಾದಕ ವಸ್ತು ತನಿಖಾ ವಿಭಾಗದಲ್ಲಿ,
    ಆಸ್ಪತ್ರೆಗಳಲ್ಲಿ,
    ಬ್ಯಾಂಕ್‍ಗಳಲ್ಲಿ,
    ವಿಶ್ವವಿದ್ಯಾಲಯಗಳಲ್ಲಿ,        ಖಾಸಗೀ ಪತ್ತೇದಾರಿ ಸಂಸ್ಥೆಗಳಲ್ಲಿ,
    ಖಾಸಗೀ ಬ್ಯಾಂಕ್‍ಗಳಲ್ಲಿ,
    ವಿಮಾ ಕಂಪನಿಗಳಲ್ಲಿ,
    ಖಾಸಗೀ ವಿಶ್ವವಿದ್ಯಾಲಯಗಳಲ್ಲಿ,
    ಖಾಸಗೀ ಬ್ಯಾಂಕ್‍ಗಳಲ್ಲಿ,
    ಭದ್ರತಾ ಸೇವಾ ಸಂಸ್ಥೆಗಳಲ್ಲಿ,
    ವಕೀಲರಿಗೆ ಸಲಹೆಗಾರರಾಗಿ,
    ಕಾನೂನು ಕಾಲೇಜುಗಳಲ್ಲಿ ಭೋಧಕರಾಗಿ,
    ಸ್ವಂತ ಪ್ರಯೋಗಾಲಯ ಸ್ಥಾಪಿಸಲು,
    ಖಾಸಗೀ ಆಸ್ಪತ್ರೆಗಳಲ್ಲಿ,


ಫೋರೆನ್ಸಿಕ್ ಸೈನ್ಸ್‍ನ ಕೆಲವು ಕಾಲೇಜುಗಳು :
•    ಇನ್ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಅಂಡ್ ಫೋರೆನ್ಸಿಕ್ ಸೈನ್ಸ್, ನ್ಯೂಡೆಲ್ಲಿ.
•    ಯೂನಿವರ್ಸಿಟಿ ಆಫ್ ಲಕ್ನೋ.
•    ಲೋಕನಾಯಕ ಜಯಪ್ರಕಾಶ ನಾರಾಯಣ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಅಂಡ್ ಫೋರೆನ್ಸಿಕ್ ಸೈನ್ಸ್, ಡೆಲ್ಲಿ.
•    ಡಾ.ಹರಿಸಿಂಗ್ ಗೌರ್ ವಿಶ್ವವಿದ್ಯಾಲಯ, ಸಾಗರ, ಮಧ್ಯಪ್ರದೇಶ.
•    ಯೂನಿವರ್ಸಿಟಿ ಆಫ್ ಡೆಲ್ಲಿ.
•    ಅಣ್ಣಾಮಲೈ ಯೂನಿವರ್ಸಿಟಿ, ಚೆನ್ನೈ.
•    ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ, ಹೈದರಾಬಾದ.
•    ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ, ಚಂಡೀಘಡ್.
•    ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ, ಕಲ್ಕತ್ತಾ.
•    ಡಾ//ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜ್, ಬೆಂಗಳೂರು.
•    ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜ್, ಬೆಂಗಳೂರು.
•    ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜ್, ಬೆಳಗಾಂ.
•    ಜೈನ್ ಯೂನಿವರ್ಸಿಟಿ, ಬೆಂಗಳೂರು.
•    ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್, ಮೈಸೂರು.

                                                                  ಆರ್.ಬಿ.ಗುರುಬಸವರಾಜ