ದಿನಾಂಕ 24-06-2015 ರಂದು 'ಅವಧಿ' (http://avadhimag.com/2015/06/24/ಸಣ್ಣಕತೆ-’ಕಲ್ಕತೆ’) ಬ್ಲಾಗ್ ನಲ್ಲಿ ಪ್ರಕಟವಾದ ನನ್ನ ಸಣ್ಣಕಥೆ.
ಕಲ್ಕತೆ
ಚೆನ್ನಿ ಸಂಜಿಮುಂದ ಕೆಳಗಿನ ಓಣಿಯಿಂದ ಮ್ಯಾಲಿನ ಓಣಿಕಡೆ ಹೊಂಟಾಗ ಕಟ್ಟೆ ಪುರಾಣದ
ಹರಿಕಾರರಂತಿದ್ದ ಹರ್ಯದ ಹುಡುಗ್ರ ಮನದಲ್ಲಿನ ಹರ್ಯಯ ಎದ್ದು ಕುಣಿತಿತ್ತು. ಸಂಜೆ ಸೂರ್ಯ
ಚೆನ್ನಿಯ ಮುಖದಲ್ಲಿನ ತವಕ, ಗಾಬರಿಗಳನ್ನು ಮರೆಮಾಡಿ ರಂಗಿನಾಟವಾಡುತ್ತಲಿದ್ದ. ಚಾವಡಿ
ಕಟ್ಟೆಮ್ಯಾಲೆ ಕುಳಿತ ಕೆಲವು ಮುದಿತಲೆಗಳಲ್ಲಿ ರೊಯ್ಯನೆ ಗಾಳಿ ಬೀಸಿದಂಗಾಗಿ ತಲೆ ಸುಳ್
ಎಂದಿತು. ಭೂಮ್ತಾಯಿ ಒಡಲಲ್ಲಿಳಿಯುತ್ತಿದ್ದ ಸೂರ್ಯ ನೆತ್ತಿ ಮ್ಯಾಲ ಬಂದ್ಹಾಂಗಾತು.
ಎಪ್ಪತೈದರ ಆಸುಪಾಸಿನಲ್ಲಿದ್ದ ಸಿದ್ದಪ್ಪನ ಮುಖ ರಂಗೇರುತ್ತಿದ್ದುದನ್ನು ಸರಿಸುಮಾರು ಅದೇ
ವಯಸ್ಸಿನ ಭರಮಪ್ಪ ತನ್ನ ಮುಖದಲ್ಲಿ ಅಂತಹ ಯಾವುದೇ ಬದಲಾವಣೆ ಬಂದಿರಲಾರದು ಎಂದುಕೊಂಡ.
ಮನಸ್ಸಿನ
ತುಂಬಾ ತನ್ನ ಮಗುವಿನ ಕಾಯಿಲೆಯ ದಾರುಣ ಚಿತ್ರಣವನ್ನೇ ತುಂಬಿಕೊಂಡಿದ್ದ ಚೆನ್ನಿ ಚಾವಡಿ
ಕಟ್ಟಿ ಮ್ಯಾಲಿನ ಕಾಗೆ, ಹದ್ದಿನ ಕಣ್ಣುಗಳನ್ನು ಗಮನಿಸದೇ ದಡಬಡನೇ ಅಂತ್ರದ ಬಸ್ಸಯ್ಯನ
ಮನೆ ಕಡೆ ನಡೆದಳು.
ಬಾಗಿಲು ಮುಂದೆ ಮಾಡಿ ಯಾವುದೋ ಸೊಪ್ಪು ಅರೆಯುವುದರಲ್ಲಿ ಮಗ್ನನಾಗಿದ್ದ ಬಸ್ಸಯ್ಯ ಚೆನ್ನಿಯ ಕೂಗಿಗೆ ಹೊರಗೆ ಕಣ್ಣು ಹಾಕಿದ.
ಏನ್ ಚೆನ್ನಿ ಸಂಜಿಮುಂದ ಬಂದ್ಯಲ್ಲ, ಏನ್ಸಮಾಚಾರ ಎಂದು ಕುಳಿತಲಿಂದಲೇ ಕೇಳಿದ.
ಅಯ್ನೋರೇ,
ನಮ್ಮ ಸಣ್ಣದುರ್ಗನಿಗೆ ಮೂರು ದಿನ್ದಿಂದ ವಟ್ಟೆನೋವು. ಏನುಂಡರೂ ಮೈಗೆ ದಕ್ಕಾಂಗಿಲ್ಲ.
ಅದ್ರಾಗ ವಾಂತಿನೂ ಸುರುವಾಗೈತಿ, ವುಡ್ಗ ತೀರ ನಿತ್ರಣಾಗ್ಯಾನ. ಇವತ್ತು ಗುರುವಾರ ಅಂತ
ನೆಪ್ಪಾದ ಕೂಡ್ಲೆ ಅಂತ್ರನಾದ್ರೂ ಬರೆಸ್ಕೋಂಡು ಹೋದ್ರಾತು ಅಂತಾ ಬಂದೀನಿ ಎಂದು ತಾನು
ತಂದಿದ್ದ ಅಂತ್ರದ ತಗಡನ್ನು ಮುಂದೆ ಮಾಡಿದಳು.
ಅವಳು ಹೇಳುತ್ತಿದ್ದುದು
ಯಾವುದನ್ನೂ ತನ್ನ ತಲೆಯೊಳಗ ಹಾಕಿಕೊಳ್ಳದ ಬಸ್ಸಯ್ಯ ಅವಳ ರೂಪವನ್ನು ಕಣ್ಣಿಂದಲೇ
ಸವಿಯತೊಡಗಿದ್ದ. ಅವನ ಕಣ್ಣುಗಳು ಚೆನ್ನಿಯ ದೇಹದ ಒಂದೊಂದು ಅಂಗವನ್ನು ತಾಳೆ ನೋಡಿ
ಗುರುತು ಹಾಕಿಕೊಳ್ಳುತ್ತಿದ್ದವು. ಅಂದು ಮನೆಯಲ್ಲಿ ಒಂಟಿಯಾಗಿದ್ದ ಬಸ್ಸಯ್ಯನ ಮನದಲ್ಲಿ
ಏನೇನೋ ಆಸೆಗಳು ಗರಿಗೆದರತೊಡಗಿದವು.
ಅಯ್ನೋರೇ ಈ ತಗಡು ತಗೋರಿ ಎಂದು ಚೆನ್ನಿ ಜೋರಾಗಿ ವದರಿದಾಗ ಬಸ್ಸಯ್ಯ ವಾಸ್ತವಕ್ಕಿಳಿದ.
ಅಲ್ಲ ಚೆನ್ನಿ, ಕತ್ಲಾಗೋ ವೊತ್ನ್ಯಾಗ ಒಬ್ಳ ಬಂದೀಯಲ್ಲ, ಜತೀಗೆ ಯಾರ್ನೂ ಕರ್ಕಾಂಬಂದಿಲ್ಲೇನು? ಎಂದು ಮಾತಿನೊಂದಿಗೆ ಕಣ್ಣ ಬಾಣವನ್ನೂ ಬಿಟ್ಟ.
ಆ
ಬಾಣದ ಮರ್ಮವನ್ನರಿಯದ ಚೆನ್ನಿ ನಿಮ್ಗೆ ತಿಳಿಲಾರ್ದು ಏನೈತಿ ಸ್ವಾಮ್ಯರ, ನನ್ನ ಗಂಡ
ಮೊದ್ಲೆ ಕುಡ್ಕ. ನಿನೆಯಿಂದ ಅದ್ಯಾವನೋ ಇವನ ಜತೆಗಾರ ದ್ಯಾಮಪ್ಪ ಅಂತೆ, ಕಾಪಿಸೀಮಿಯಿಂದ
ದುಡ್ಕೊಂಡು ರೊಕ್ಕ ತಗಂಡು ಬಂದಾನ. ಇಬ್ರೂ ಸೇರಿ ಕುಡ್ದದ್ದೇ ಕುಡ್ದದ್ದು. ಬಾಡು
ತಿಂದ್ದದ್ದೇ ತಿಂದ್ದದ್ದು. ಕುಡ್ತ ಜಾಸ್ತಿ ಆದ ಕೂಡ್ಲೆ ವಾಂತಿ ಮಾಡ್ಕಾಣಾದು. ಮತ್ತ
ಬಂದು ಕುಡ್ಯಾದು, ಇದೇ ಆಗಿ ಹೋತು. ಮಗಿಗೆ ಉಸಾರಿಲ್ಲ ಒಂದು ಗುಳ್ಗಿನಾದ್ರು ತಗಂಡ್ ಬಾ
ಅಂದ್ರ ದುಡ್ಡಿಲ್ಲ ಅಂತಾನೆ. ಆದ್ರೆ ಸಾಲ ಸೋಲ ಮಾಡಿ ಕುಡಿತಾನ. ನನ್ಹತ್ರ
ನಸ್ಯಪುಡಿಗೆಂದು ಇದ್ದ ಎಲ್ಡ್ರುಪದಾಗ ತಗಡ ತಂದೀನಿ ಎಂದು ಉಸುರುತ್ತಾ ಹೊಸ್ಲಿ ಮುಂದಿನ
ನೆಲದ ಮ್ಯಾಲ ಕುಳಿತುಕೊಂಡಳು.
ಬಾಯಲ್ಲೇನೋ ಮಣಮಣ ಮಂತ್ರ ಹೇಳುತ್ತಾ ಉಗುಳು
ಹಾಕುತ್ತಾ ತಾಮ್ರದ ತಗಡನ್ನು ಸುತ್ತಿ ಸಣ್ಣದೊಂದು ಸುರುಳಿ ಮಾಡಿ ಕೆಂಪು ದಾರದಿಂದ
ಸುತ್ತತೊಡಗಿದ. ಕೈಗಳು ಯಾಂತ್ರಿಕವಾಗಿ ದಾರ ಸುತ್ತುತ್ತಿದ್ದರೆ ಆಸೆಗಳು ಮನಸಿನ ಸುತ್ತ
ಸುತ್ತತೊಡಗಿದವು. ಆದರೆ ಅದ್ಯಾವುದನ್ನೂ ಚೆನ್ನಿಯ ಮುಂದೆ ಹೇಳಿಕೊಳ್ಳುವ ಧೈರ್ಯವಿಲ್ಲದೆ
ತಾಯಿತವನ್ನು ಅವಳ ಕೈಗಿಡುತ್ತಾ ಚೆನ್ನಿ ನಿನ್ನ ಮಗ್ನಿಗೆ ಕುಜ ದೋಸ ತಗಲೈತಿ. ಅದ್ನ
ನಿವಾರಿಸಬೇಕಾದ್ರ ಬರೋ ಅಮಾಸಿ ದಿನ ಗ್ರಹ ಶಾಂತಿ ಮಾಡಿಸ್ಬೇಕು, ಅಂದ್ರ ಮಾತ್ರ ನಿನ್ನ
ಮಗ್ನಿಗೆ ವಾಸಿಯಾಕೈತಿ ಎಂದು ಚೆನ್ನಿ ಮನದೊಳಗ ಒಂದು ಗುಂಗಿ ಹುಳ ಬಿಟ್ಟ.
ತನ್ನ ಮಗನಿಗೆ ‘ಕುಜದೋಷ’ ಎಂಬ ಸುದ್ದಿಕೇಳಿ ಚೆನ್ನಿ ಗಾಬರಿಗೊಳಗಾದಳು. ಗ್ರಹಶಾಂತಿ ಮಾಡ್ಸಕ ಯಸ್ಟ್ ಕಚರ್ಾಕೈತಿ ಅಯ್ನೋರೆ ಎಂದು ಬಸ್ಸಯ್ಯನ್ನ ಕೇಳಿದಳು.
ಖಚರ್ೇನೂ
ಬಾಳ ಇಲ್ಲ ಚೆನ್ನಿ, ಒಂದು ಪಾವು ಅಕ್ಕಿ, ಒಂದು ಕೆಂಪು ಕುಬುಸದ ಕಣ, ಐದು ನಿಂಬೆಹಣ್ಣು
ತಂದ್ರ ಆತು. ಆದ್ರ ಅದ್ನ ಅಮಾಸಿ ದಿನ ರಾತ್ರಿ ಹನ್ನೆಲ್ಡು ಗಂಟ್ಯಾಕ ಸ್ಮಶಾನ್ದಾಗ
ಮಾಡ್ಬೇಕು. ಅಲ್ಲಿಗೆ ನನ್ನ ಕೂಡ ಮಗೀನ ಹೆತ್ತ ತಾಯಿ ಒಬ್ಳೆ ಬರ್ಬೇಕು. ಅದಾ ಸ್ವಲ್ಪ
ತೊಂದ್ರಿ ಕೆಲ್ಸ. ನೋಡು ಚೆನ್ನಿ ಅಮಾಸಿಗೆ ಇನ್ನೂ ವಂದು ವಾರೈತಿ. ಯೋಚ್ನೆ ಮಾಡು. ಶಾಂತಿ
ಮಾಡ್ಸೋದಾದ್ರೆ ಅಮಾಸಿ ಮುಂಚಿನ ದಿನ ನನ್ಗೆ ತಿಳ್ಸಿದ್ರ ಸಾಕು. ಉಳಿದದೆಲ್ಲ ನಾನು ರಡಿ
ಮಾಡ್ಕೋತೀನಿ ಎಂದು ಹೇಳುತ್ತಾ ತನ್ನ ಮನದ ಆಸೆಯನ್ನು ತೀರಿಸಿಕೊಳ್ಳಲು ಹುನ್ನಾರ ನಡೆಸಿದ.
ಬಸ್ಸಯ್ಯನ ಕೈಯಾಗಿನ ತಾಯ್ತ ತೆಗೆದುಕೊಂಡವಳೇ ತನ್ನ ಗುಡಿಸಲ ಕಡೆ ಜೋರಾಗಿ ಹೆಜ್ಜೆ
ಹಾಕತೊಡಗಿದಳು.
ಹಾಗೆ ನಡೆದು ಹೋಗುವಾಗ ಮನೆ ಕಟ್ಟೆ ಮ್ಯಾಲ ಕುಂತಿದ್ದ
ಬಸವನಗೌಡನಿಗೆ ಕತ್ಲಲ್ಲಿ ಬರ್ರನೆ ನಡೆದು ಹೋದೋರು ಯಾರು ಎಂದು ತಿಳಿಯದೇ ತನ್ನ ನೆಚ್ಚಿನ
ಬಂಟ ಪೋರನನ್ನು ಕೇಳಿದ. ಹೋದೋಳು ಕೆಳಗಿನಕೇರಿ ಕರಿಯನ್ನ ಹೆಂಡ್ತಿ ಚೆನ್ನಿ ಎಂದು
ತಿಳಿದೊಡನೆ ಕತ್ಲಲ್ಲಿ ತನ್ನ ಕಣ್ಣು ಕಾಣ್ಸಿಸಲಾರದ್ದಕ್ಕೆ ಹಪಹಪಿಸಿದ.
ಗಂಡನ
ಕುಡಿತದ ಸ್ಥಿತಿಯನ್ನು ಹಾಗೂ ಮಗುವಿನ ಕಾಯಿಲೆಯ ಪರಿಸ್ಥಿತಿಯನ್ನೂ ಮನಸ್ಸಿಲ್ಲಿ
ತುಂಬಿಕೊಂಡಿದ್ದ ಚೆನ್ನಿ ಕತ್ತಲಲ್ಲಿ ಸೆಗಣಿಯನ್ನೋ, ಚರಂಡಿ ಕೆಸರನ್ನೋ ತುಳಿಯುತ್ತಾ
ಕಾಲು ಕೊಡವುತ್ತಾ ಗುಡಿಸಲು ತಲುಪಿದಳು. ಕತ್ತಲಾಗಿದ್ದ ಗುಡಿಸಲ ಮುಂದೆ ನಿಂತ ಅವಳಿಗೆ
ತಾನ್ಯಾರದೋ ಗುಡಿಸಲ ಮುಂದೆ ನಿಂತಂತೆ ಅನ್ಸಿತು. ತನ್ನ ಒಡತಿ ಬಂದದ್ದನ್ನು ಗಮನಿಸಿದ
ನಾಯಿ ಎದ್ದು ನಿಂತು ಬಾಲ ಅಲ್ಲಡಿಸತೊಡಗಿತು.
ತನ್ನ ಗಂಡನೆಂಬ ಗಂಡುಪ್ರಾಣಿ ಇನ್ನೂ
ಸರಾಯಿ ಅಂಗಡಿಯಿಂದ ಬಂದಿಲ್ಲವೆಂದು ತಿಳಿದು ಕತ್ಲಲ್ಲಿ ಮಲಗಿದ್ದ ಮಲಗಿದ್ದ
ಸಣ್ಣದುರ್ಗನನ್ನು ಕೂಗಿದಳು. ಹೊಟ್ಟೆನೋವು ತಾಳಲಾರದೇ ನಿತ್ರಾಣಗೊಂಡ ಮಗನಿಂದ ಯಾವುದೇ
ಪ್ರತಿಕ್ರಿಯೆ ಬಾರದಿದ್ದನ್ನು ಕಂಡು ಕತ್ಲಲ್ಲೇ ತಡಕಾಡುತ್ತಾ ಒಳಗೆ ಹೋಗಿ ವಲಿ
ಹತ್ರದಾಗಿದ್ದ ಕಡ್ಡಿ ಪಟ್ಣ ಹುಡುಕಿ ಬುಡ್ಡಿ ಹತ್ತಿಸಿ ಮಗನ ಕಡೆ ನೋಡಿದ್ಲು. ಮೂರು
ದಿನದಿಂದ ಹೊಟ್ಯಾಗ ತುತ್ತು ಕೂಳಿಲ್ಲದೇ, ಹನಿ ನೀರಿಲ್ಲದೇ ನಿತ್ರಾಣಗೊಂಡು ಹೊಟ್ಟಿಯನ್ನ
ನೆಲಕ್ಕಾನಿಸಿಕೊಂಡು ಬೋರಲಾಗಿ ಮಲಗಿದ್ದ ಮಗನನ್ನು ಕಂಡು ಹೆತ್ತಕಳ್ಳು ಚುರ್ಕ್ ಅಂತು.
ಮೈಮುಟ್ಟಿ ನೋಡಿದಾಗ ಕೈಗೆಲ್ಲ ತಣ್ಣನೆಯ ದ್ರವ ಹತ್ತಿದಂಗಾತು. ಎದೆ ದಸ್ಸಕೆಂದಿತು.
ಕಣ್ಬಿಟ್ಟು ಸರ್ಯಾಗಿ ನೋಡಿದಾಗ ಮಗನ ಮೈಯೆಲ್ಲಾ ಬೆವರಿನಿಂದ ತೊಯ್ದಿತ್ತು.
ನಿದ್ದೆಯ
ಮಂಪರಿನಲ್ಲಿದ್ದ ಮಗನನ್ನು ಎಬ್ಬಿಸದೇ ಅಲ್ಲಿಯೇ ಬಿಟ್ಟು ಮಾರಿಗೊಂದಿಸ್ಟು ನೀರು
ಹಾಕಲೆಂದು ಹೊರಗೆ ನಡೆದಳು. ಕಣ್ಣಿಲ್ಲದ ಹಾಗೂ ಕಣ್ಣಿಗೆ ಕಾಣದ ದೇವರಿಗೆ ಕೈಮುಗಿದು
ವಲೆಯಲ್ಲಿದ್ದ ಬೂದಿಯನ್ನು ಕೈಗೆ ಹಚ್ಚಿಕೊಂಡು ಮಗನ ಹಣೆಗೆ ಬಳಿದಳು. ನಡುವಿನಲ್ಲಿ
ಸಿಗ್ಸಿಕೊಂಡಿದ್ದ ತಾಯ್ತನ ಅವ್ನ ರಟ್ಟೆಗೆ ಬಿಗಿದ್ಲು.
ವಟ್ಟಿವಳಗಿದ್ದ ನಂಜೆಲ್ಲ
ಹೊರಹೋಗಿದ್ದಕ್ಕೋ ಏನೋ ಅಂತೂ ವಾಂತಿ ನಿಂತು ವೊಟ್ಟೆನೋವು ಕಡಿಮೆ ಆದಂತಾಗಿ ಬೆಳಗಾದೊಡನೆ
ಮಗ ಎಂದಿನಂತೆ ಚಟುವಟಿಕೆಯಿಂದ ಓಡಾಡುವುದನ್ನ ನೋಡಿದ ಚೆನ್ನಿಯ ಮುಖ ಗೆಲುವಾಗಿತ್ತು.
ರಾತ್ರಿ ಅದ್ಯಾವಾಗೋ ಬಂದು ಮಲಗಿದ್ದ ಕರಿಯ ಎದ್ದಾಗ ಸೂರ್ಯ ನೆತ್ತಿಮ್ಯಾಲೆ ಏರ
ತೊಡಗಿದ್ದ. ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತಿದ್ದ ಮಗನ್ನ ಕಂಡು
ಆಶ್ಚರ್ಯಗೊಂಡಿದ್ದ. ಚೆನ್ನಿ ತಾಯ್ತ ಕಟ್ಟಿದ ವಿಷಯ ತಿಳ್ಸಿದಾಗ ಅವ್ನ ಮುಖದಲ್ಲಿ
ನಿರಾಸಕ್ತಿ ಎದ್ದು ಕಾಣ್ತಿತ್ತು.
ಒಂದು ವಾರ್ದಾಗ ಮಗ ಮೊದಲಿನಂತೆ ಮೈಕೈ
ತುಂಬಿಕೊಂಡು ಓಡಾಡತೊಡಗಿದ್ದನ್ನ ನೋಡಿದ ಚೆನ್ನಿ ಗ್ರಹಶಾಂತಿ ಮಾಡಿಸೋ ವಿಚಾರ ಮರೆತ್ಲು.
ಇದ್ರಿಂದ ಅಂತ್ರದ ಬಸ್ಸಯ್ಯನ ಮನದಾಳದ ಆಸೆ ಕಮರಿದಂಗಾತು!.
ಆ ವರ್ಷದ ಮುಂಗಾರು
ಮಳೆ ಪ್ರಾರಂಭದಿಂದ್ಲೆ ಚೆನ್ನಾಗಿ ಆಯ್ತು. ಚೆನ್ನಿ ತನ್ನ ಗಂಡನ ಪಾಲಿಗೆ ಬಂದಿದ್ದ
ಎಲ್ಡೆಕ್ರೆ ಜಮೀನನ್ನ ತಾನೇ ಮುಂದೆ ನಿಂತು ಹಸನು ಮಾಡ್ಸಿದ್ಲು. ವರ್ಸದುದ್ದಕ್ಕೂ
ಅಂಬ್ಲಿ, ಮುದ್ದಿ ನುಚ್ಚಿಗಾಯ್ತದೆ ಎಂದು ಜ್ವಾಳ ಬಿತ್ಸಿದ್ಲು. ನಿತ್ಯ ಜೀವನದ ಉಪ
ಖಚರ್ಿಗೆಂದು ಎಲ್ಡು ಎಮ್ಮೆ ಜ್ವಾಪಾನ ಮಾಡಿದ್ಲು. ಎಮ್ಮೆಯೊಂದಿಗೆ ಹೊಲಕ್ಕೋಗೋದು, ಎಮ್ಮೆ
ಮೇಯ್ಸುತ್ತಾ ಹೊಲ ಕಾಯೋದು ಅವಳ ಕಾಯಕವಾಗಿತ್ತು.
ಅಂದು ರಾತ್ರಿ ಯಾಕೋ ಕರಿಯಪ್ಪ
ಕುಡ್ದು ಬರ್ಲಿಲ್ಲ. ವೊತ್ತು ಮುಣುಗೋದ್ರೊಳಗ ಮನೆಸೇರಿ ದೀಪ ಹತ್ಸಿದ. ಮನೆಗೆ ಬಂದ
ಚೆನ್ನಿಗೆ ತನ್ನ ಗಂಡನ ಈ ಸ್ಥಿತಿ ನೋಡಿ ಅವ್ನ ಮ್ಯಾಲಿದ್ದ ಕ್ವಾಪ ಎಲ್ಲಾ ಹೊಂಟೋಯ್ತು.
ಬೆಳಗಿನ ಮುದ್ದಿ ನುಂಗಿ ದಿಂಬಿಗೆ ಇಂಬು ಕೊಟ್ರು. ಆದ್ರೆ ನಿಂದೆ ಎಂಬೋದು ಹತ್ರ
ಸುಳಿಯಲಿಲ್ಲ. ಬಹಳ ದಿನಗಳ ನಂತ್ರ ಇಬ್ರೂ ರಾತ್ರಿಯೆಲ್ಲಾ ತಮ್ಮ ಮುಂದಿನ ಜೀವನದ ಬಗ್ಗೆ
ಸುಂದರ ಕನಸುಗಳನ್ನು ಕಟ್ಟಿಕೊಳ್ಳುವ ಕುರಿತು ಮಾತಾಡಿಕೊಂಡ್ರು. ಅದ್ಯಾವಾಗೋ ನಿದ್ದೆ
ಹತ್ತಿತ್ತು.
ಬೆಳಗಾದೊಡನೆ ಅಡ್ಗಿ ಕೆಲ್ಸ ಮುಗ್ಸಿ ಎಂದಿನಂತೆ ಎಮ್ಮೆಗಳನ್ನು
ಹೊರಗೆ ಬಿಟ್ಟಾಗ ಕರಿಯಪ್ಪ ತಾನೇ ಮೇಯ್ಸಿಕೊಂಡು ಬರುವುದಾಗಿ ತಿಳಿಸಿ ಎಮ್ಮೆ ಹೊಡ್ಕೊಂಡು
ಹೋದ. ಎಮ್ಮೆ ಹೊಡ್ಕೊಂಡು ಹೋಗೋ ತಾಪತ್ರಯ ತಪ್ಪಿದ್ದಕ್ಕಾಗಿ ಖುಷಿಗೊಂಡ ಚೆನ್ನಿ ಬುತ್ತಿ
ತಗೊಂಡು ಹೊಲಕ್ಕೋದ್ಲು. ಜ್ವಾಳದ ಬೆಳೆ ಚೆನ್ನಾಗಿ ಬೆಳೆದಿತ್ತು. ಅದ್ರಲ್ಲಿದ್ದ ಕಳೆಯನ್ನ
ಕಿತ್ತು ಎಮ್ಮೆಗೊಂದಿಷ್ಟು ಹುಲ್ಲಿನ ಗಂಟನ್ನು ಕಟ್ಟದ್ಲು.

ಸೂರ್ಯ
ನೆತ್ತಿಮ್ಯಾಲಿಂದ ಪಡುವಣದ ಕಡೆ ಓಡುತ್ತಲಿದ್ದ. ಆಕಾಸದಾಗ ಮೋಡಗಳು ದಟೈಸಿದ್ವು. ರಪರಪನೆ
ಹನಿಗಳು ಉದರತೊಡಗಿದ್ವು. ಮಳೆ ಜೋರಾದ್ರೆ ದಾರ್ಯಾಗಿನ ಹಳ್ಳ ಕಟ್ಟಿ ಮನೆ ಸೇರೋದು ತಡ
ಆದೀತೆಂದು ಹುಲ್ಲಿನ ಹೊರೆಯನ್ನ ತಲೆ ಮ್ಯಾಲಿಟ್ಕೊಂಡು ಮನೆ ಕಡೆ ಹೊಂಟ್ಲು. ಮಳೆಯ ಆರ್ಭಟ
ಒಮ್ಮೆಲೇ ಜೋರಾಗಿ ದಾರಿ ಕಾಣದಂಗಾತು. ಭೂಮಿ ಆಕಾಶ ಒಂದಾಗೈತೇನೋ ಎಂಬಂತೆ ಮಳೆ
ಸುರಿಯತೊಡಗಿತು. ಹೊರೆ ಮ್ಯಾಲ ಬಿದ್ದ ಮಳೆನೀರು ತಲೆಯಾಗಿಂದ ಮೈತುಂಬಾ ಹರಿಯತೊಡಗಿತು.
ಬಟ್ಟೆಯೆಲ್ಲಾ ತೊಯ್ದು ಒದ್ದೆಯಾದ್ವು. ಹೊಲದಲೆಲ್ಲ ನೀರು ಹರದಾಡಿ ಕೆಸರಿನ್ಯಾಗ
ಕಾಲುಕಿತ್ಕೊಂಡು ಮುಂದೆ ನಡಿಲಾರದೆ ಅಲ್ಲೇ ಇದ್ದ ಮರದ ಕೆಳಗೆ ನಿಂತುಕೊಂಡ್ಳು.
ಸುಮಾರು
ಒಂದು ತಾಸು ಸುರಿದ ಮಳೆ ಕ್ರಮೇಣ ಕಡಿಮೆಯಾಗತೊಡಗಿತು. ಮರದ ಕೆಳಗೆ ನಿಂತರೂ ಮಳೆ
ಹನಿಯಿಂದ ತಪ್ಪಿಸಿಕೊಳ್ಳಲಾರದೇ ಪೂರಾ ತೊಯ್ಸಿಕೊಂಡಿದ್ದಳು. ಹುಲ್ಲಿನ ಹೊರೆಯನ್ನು
ತಲೆಮ್ಯಾಲಿಟ್ಟುಕೊಂಡು ಜೋರಾಗಿ ಮನೆ ಕಡೆ ಹೆಜ್ಜೆ ಹಾಕತೊಡಗಿದಳು. ಹೆಜ್ಜೆ
ಭಾರವಾದಂತೆನಿಸಿತು. ಹಳ್ಳ ತುಂಬಿ ಬರೋದಕ್ಕಿಂತ ಮುಂಚೆ ದಾಟಬೇಕು ಅಂತ ಬಂದ ಚೆನ್ನಿಗೆ
ಅದೃಷ್ಟ ಕೈಕೊಟ್ಟಿತು. ಆಗಲೇ ಹಳ್ಳ ಎರಡೂ ದಡ ತುಂಬಿಕೊಂಡು ಹರ್ಹೆಯ ಬಂದಂಗ
ಹರಿಯತೊಡಗಿತ್ತು.
ಮಳೆ ಬರೋವಾಗ ಹಳ್ಳದ ದಂಡಿ ಮ್ಯಾಲಿನ ತೋಟದ ಕೋಣೆಯಲ್ಲಿದ್ದ
ಬಸವನಗೌಡ ಹೊರಗ ಬಂದ. ಬಲಗೈ ಬಂಟ ಪೋರ ಧಣ್ಯಾರ ಬೈಕನ ಮ್ಯಾಲಿದ್ದ ನೀರನ್ನು
ಒರ್ಸಾಕತ್ತಿದ್ದ. ಸುತ್ತಲ ಮಳೆಯ ಆರ್ಭಟವನ್ನು ನೋಡ್ತಾ ಇದ್ದ ಬಸವನಗೌಡನ ಕಣ್ಣು ಹಳ್ಳದ
ಕಡೆ ಹರಿತು. ಹಳ್ಳ ಮೈತುಂಬಿ ಹರೀತಾ ಇತ್ತು. ಹಾಂಗ ಆಚೀಚೆ ನೋಡಿದ ಕಣ್ಣು ದಂಡಿ ಮ್ಯಾಲೆ
ಹೊರೆಯೊಂದಿಗೆ ಇದ್ದ ಚೆನ್ನಿಯತ್ತ ಕೇಂದ್ರೀಕೃತವಾಯ್ತು. ಅವಳು ಚೆನ್ನಿ ಅನ್ನೋದನ್ನ
ಪೋರನಿಂದ ಖಚಿತಪಡಿಸಿಕೊಂಡ ಮ್ಯಾಲೆ ಹಳ್ಳದ ದಂಡೆ ಕಡೆ ಹೆಜ್ಜೆ ಹಾಕಿದ. ಚೆನ್ನಿ ಹತ್ರ
ಹೋಗಿ ಮಳೆಯ ವಿಚಾರ ಮಾತಾಡ್ತಾ ಮಾತಾಡ್ತಾ ತೊಯ್ದಿದ್ದ ಅವಳ ದೇಹದ ಸವಿಯನ್ನ ಕಣ್ಣಿಂದಲೇ
ಸವಿಯತೊಡಗಿದ. ಮಳೆ ಬಂದು ಹಳ್ಳಕ್ಕೆ ಹರ್ಹೆಯ ಬಂದ್ಹಂಗ ಬಸವನಗೌಡನ ಮನಸಿನ್ಯಾಗಿನ
ಆಸೆಗಳಿಗೂ ಹರ್ಹೆಯ ಬಂದು ಕುಣಿದಾಡತೊಡಗಿದವು. ಇತ್ತ ಅವನ ವಕ್ರದೃಷ್ಟಿ ತಾಳಲಾರದೇ ಅವನ
ಮಾತಿನ ಮೋಡಿಯನ್ನು ಸಹಿಸಲಾರದೇ ಅತ್ತ ಹಳ್ಳ ದಾಟಲಾರದೇ ಸಂದಿಗ್ದ ಪರಿಸ್ಥಿತಿಗೆ
ಸಿಕ್ಕಿಹಾಕೊಂಡ್ಳು.
ಕೊನೆಗೂ ಬಸವನಗೌಡ ತನ್ನ ಕಚ್ಚೆಹರುಕು ಬುದ್ದಿಯನ್ನು
ಉಪಯೋಗಿಸಿ ಮನದ ಆಸೆಯನ್ನು ಈಡೇರಿಸುವಂತೆ ಚೆನ್ನಿಯನ್ನು ಕೇಳಿಯೇ ಬಿಟ್ಟ. ಅವ್ನ
ಮಾತ್ನಿಂದ ಬೆಚ್ಚಿದ ಚೆನ್ನಿಗೆ ಮೈಯಲ್ಲಿ ನಡುಕ ಹುಟ್ಟಿದಂಗಾತು. ಆದರೂ ಸಾವರಿಸಿಕೊಂಡು
ಮನದಲ್ಲಿ ದೈರ್ಯ ತದ್ಕೊಂಡು ಕಪಾಳಕ್ಕೊಂದ್ಹೇಟು ಕೊಟ್ಲು. ಇದ್ನ ನೀರೀಕ್ಷಿಸಿರದ ಬಸವನಗೌಡ
ಮತ್ತೊಷ್ಟು ಉಗ್ರಗೊಂಡ. ಆಚೀಚೆ ನೋಡಿದ. ಸದ್ಯಕ್ಕೆ ಯಾರೂ ನೋಡ್ಲಿಲ್ಲವೆಂಬುದೇ ಸಮಾದಾನ.
ಕೂಡ್ಲೇ ಪೋರನನ್ನು ಕೂಗಿ ಕರೆದ. ಇಬ್ರೂ ಸೇರಿ ಚೆನ್ನಿಯನ್ನು ತೋಟದ ಕೋಣೆಯೊಳಕ್ಕೆ
ಹೊತ್ಕೋಂಡು ಹೊಂಟೇ ಬಿಟ್ರು.
ಚೆನ್ನಿಯನ್ನು ಕೋಣೆಯೊಳಗ ಕೂಡಿಹಾಕ್ಕೊಂಡು ತನ್ನ
ಬಹುದಿನದ ಕಾಮದಾಹವನ್ನು ತೀರ್ಸಿಕೊಂಡು ವಿಜಯದ ನಗೆಯಿಂದ ಹೊರಬಂದ. ಇತ್ತ ಅವನು ಹೊರ
ಬಂದೊಡನೇ ಕೋಣೆಯಲ್ಲಿದ್ದ ಚೆನ್ನಿಗೆ ಎದೆಯಲ್ಲಿ ಬೆಂಕಿ ಇಟ್ಟಂಗಾತು. ಹೊಟ್ಟೆಯೊಳಗಿನ
ಕಳ್ಳು ಹೊರಬಂದ್ಹಾಂಗಾತು. ತಲೆಯಲ್ಲಾ ದಿಮ್ಮೆಂದಂಗಾಗಿ ಕಣ್ ಕತ್ಲಾಗಿ ಕೊಣೆಯೆಲ್ಲಾ
ಸುತ್ತಿದಂಗಾತು. ತಲೆ ತಿರುಗಿ ರಪ್ಪನೇ ನೆಲಕ್ಕ ಬಿದ್ಲು. ಬಿದ್ದ ರಭಸಕ್ಕೆ ತಲೆಗೆ
ಜೋರಾಗಿ ಏಟು ಬಿತ್ತು. ಒದ್ದಾಡ್ತ ಒದ್ದಾಡ್ತ ಇದ್ದ ದೇಹ ಒಮ್ಮೆಲೇ ಸ್ತಬ್ದವಾಯ್ತು.
ಹಳ್ಳದ
ರಭಸ ಕಡಿಮೆಯಾದದ್ದನ್ನು ಗಮನಿಸಿದ ಬಸವನಗೌಡ, ಚೆನ್ನಿಗೆ ಏನಾದರೊಂದು ಸಾಂತ್ವನ ಹೇಳಿ
ಒಂದಿಷ್ಟು ಹಣಕೊಟ್ಟು ಕಳ್ಸಿದ್ರಾತು ಅಂತ ಕೋಣೆಯೊಳಗ ಬಂದ. ಅರೆಬರೆ ಕಣ್ ತೆರಕೊಂಡು,
ನಾಲ್ಗೆ ಕಚ್ಕೊಂಡು ಅಂಗಾಂತ ಬಿದ್ದಿದ್ದ ಚೆನ್ನಿನ ಕಂಡು ಒಂದು ಕ್ಷಣ ದಂಗಾದ. ಅವ್ಳ ದೇಹ
ಮುಟ್ಟೋಕೆ ದೈರ್ಯ ಸಾಲದೇ ಪೋರನನ್ನು ಕರೆದ. ಆ ಸ್ಥಿತಿಯನ್ನು ನೋಡಿದ ಪೋರನಿಗೂ
ಹೆದ್ರಿಕಿಯಾಗಿ ಸಾವರಿಸಿಕೊಂಡು ದೇಹ ಮುಟ್ಟಿ ನೋಡಿದ. ಇಡೀ ಮೈಯೆಲ್ಲಾ ತಣ್ಣಗಾಗಿತ್ತು.
ಭಯದಿಂದಲೇ ಬಸವನಗೌಡನನ್ನು ನೋಡಿದ. ಆ ನೋಟವನ್ನು ಎದುರಿಸಲಾರದ ಬಸವನಗೌಡ
ಚಿಂತಾಕ್ರಾಂತನಾದ. ಮುಂದೆ ಬರಬಹುದಾದ ತೊಂದರೆಗಳ ಬಗ್ಗೆ ಯೋಚಿಸತೊಡಗಿದ. ತಟ್ಟನೇ ಹೊಳೆದ
ಉಪಾಯದಂತೆ ಊರಿನಲ್ಲಿ ತನ್ನ ಮೇಲೆ ಯಾವುದೇ ಅನುಮಾನ ಬಾರದ ರೀತಿಯಲ್ಲಿ ಹೆಣವನ್ನು
ಸಾಗಹಾಕಿದರು.

ಕಳೆದೊಂದು
ತಾಸಿನಿಂದ ಭೋರ್ಗರೆದು ಹರಿದ ಹಳ್ಳದ ರಭಸ ಕಡಿಮೆಯಾಗಿತ್ತು. ಬಸವನಗೌಡ ಮನದಲ್ಲಿನ ದುಗುಡ
ದುಮ್ಮಾನಗಳನ್ನು ತೋರಿಸಿಕೊಳ್ಳದೆ ಬೈಕನ್ನೇರಿ ಊರ ಹಾದಿ ಹಿಡಿದ. ಮೋಡದ ಮರೆಯಿಂದ
ಹೊರಬಂದ ಸೂರ್ಯ ಬಸವನಗೌಡನ ಮುಖದ ಮೇಲೆ ರಕ್ತದೋಕುಳಿಯಾಡಿದ.
ಸಮಯಕ್ಕೆ ಸರಿಯಾಗಿ
ಸುರಿದ ಮಳೆ ಊರಿನಲ್ಲಿ ಹರ್ಷದ ಹೊನಲನ್ನು ಹರಿಸಿತ್ತು. ಇತ್ತ ಸೂರ್ಯ ಮುಳುಗಿ ಕತ್ತಲಾಗುವ
ಹೊತ್ತಾದರೂ ಚೆನ್ನಿ ಮನೆಗೆ ಬಾರದಿದ್ದುದಕ್ಕೆ ಕರಿಯಪ್ಪ ದಿಗಿಲುಗೊಂಡ. ಹಳ್ಳ ತುಂಬಿ
ಬಂದುದ್ದಕ್ಕೆ ತಡವಾಗಿರಬಹುದು ಎಂದುಕೊಂಡು ಹಳ್ಳದ ಕಡೆ ನಡೆದ. ಹಳ್ಳ ಹರಿಯುವುದು ನಿಂತು
ಬಹಳ ಹೊತ್ತಾದದ್ದನ್ನು ಗಮನಿಸಿ ಗಲಿಬಲಿಗೊಂಡ. ಹೊಲದಲ್ಲೇನಾದರೂ ಇರಬಹುದೇನೋ ಎಂದುಕೊಂಡು
ಹೊಲದ ಕಡೆ ಹೊರಟ. ಅಲ್ಲಿಯೂ ಚೆನ್ನಿ ಇಲ್ಲ. ಅಕ್ಕಪಕ್ಕದ ಎಲ್ಲಾ ಹೊಲಗಳಲ್ಲಿ ಹುಡುಕಿದ.
ಕತ್ತಲಾದರೂ ಅವಳ ಸುಳಿವು ಸಿಗಲಿಲ್ಲ. ಕತ್ತಲಲ್ಲೇ ಚೆನ್ನಿಯನ್ನು ಕೂಗುತ್ತಾ ಊರ ಹಾದಿ
ಹಿಡಿದ. ಊರಿನಲ್ಲಿ ತನ್ನ ಅಕ್ಕಪಕ್ಕದ ಹೊಲದವರನ್ನೆಲ್ಲ ವಿಚಾರಿಸಿದ. ಯಾವುದೇ ಸುಳಿವು
ಸಿಗಲಿಲ್ಲ.
ರಾತ್ರಿ ಕಳೆದು ಬೆಳಗಾಗೋ ವೇಳೆಗೆ ಇಡೀ ಊರ ತುಂಬಾ ಹೊಲಕ್ಕೆ ಹೋದ
ಚೆನ್ನಿ ಮನೆಗೆ ಬಾರದ ಸುದ್ದಿ ಹರಡಿತ್ತು. ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಗಾಬರಿ
ದಿಗಿಲುಗಳಲ್ಲೇ ಒದ್ದಾಡಿ ಕೆಂಗಣ್ಣಿನಿಂದ ಎದ್ದ ಬಸವನಗೌಡನಿಗೆ ಮೈಯೆಲ್ಲಾ
ಭಾರವಾದಂತಾಗಿತ್ತು. ಹೆಂಡತಿ ಚಹಾ ಲೋಟ ಕೈಗಿಡುತ್ತಾ ಹೊಲಕ್ಕೆ ಹೋದ ಚೆನ್ನಿ ಮನೆಗೆ
ಬಾರದಿರುವ ಸುದ್ದಿ ಹೇಳಿದಳು. ಸುದ್ದಿ ಕೇಳಿದ ಬಸವನಗೌಡನ ಕೈಯೊಳಗಿನ ಲೋಟ
ಕುಲುಕಾಡಿದುದನ್ನು ಯಾರೂ ಗಮನಿಸಲಿಲ್ಲ. ತಟ್ಟನೇ ಮನಸಿನಲ್ಲೊಂದು ಪ್ಲಾನ್ ಹೊಳೆಯಿತು.
ತನ್ನ ಮೇಲಿನ ಅನುಮಾನ ನಿವಾರಿಸಿಕೊಳ್ಳೋಕೆ ಇದೇ ಒಳ್ಳೇ ಸಮಯ ಎಂದುಕೊಂಡು ತನ್ನ ಹೆಂಡತಿ
ಮುಂದೆ ಸುಳ್ಳು ಕತೆ ಹೇಳಿದ. ಯಾರು! ಕರಿಯನ ಹೆಂಡ್ತಿ ಚೆನ್ನಿನಾ… ಅವ್ಳು ನಿನ್ನೆ ಮಳಿ
ಬರೋ ವೊತ್ನ್ಯಾಗ ಅದ್ಯಾವನೋ ಗಂಡಸಿನ ಜೊತೆ ಪಕ್ಕದೂರಿನ ದಾರಿ ಹಿಡ್ದು ಹೋದ್ಹಾಂಗಾತು!
ಎಂದ.
ಸುದ್ದಿ ಕಿವಿಯಿಂದ ಕಿವಿಗೆ, ಮನೆಯಿಂದ ಮನೆಗೆ ಹರದಾಡಿ ಇಡೀ ಊರಲೆಲ್ಲಾ
ಗುಲ್ಲೆದಿತು. ಈ ಸುದ್ದಿ ಕರಿಯಪ್ಪನ ಕಿವಿಗೂ ಬೀಳದೇ ಇರಲಿಲ್ಲ. ತಾನು ಕುಡುಕನಾಗಿ ಮನೆಯ
ಜವಾಬ್ದಾರಿ ಹೋರಲಾರದಕ್ಕೆ ಚೆನ್ನಿ ಬೇಸರಗೊಂಡು ಬೇರೆಯವನ ಜೊತೆ ಓಡಿ ಹೋದಳೇನೋ
ಅಂದುಕೊಂಡು, ಹುಡುಕೋ ಧೈರ್ಯ, ತಾಕತ್ತು ಇಲ್ಲದೇ ತನ್ನ ಹೆಂಡ್ತಿ ವಿಚಾರನ ಮರೆಯೋಕೆ ಮನಸು
ಮಾಡಿದ. ತಾನಿನ್ನು ಕುಡಿಯಬಾರದು, ಇದ್ದೊಬ್ಬ ಮಗನನ್ನು ಚೆನ್ನಾಗಿ ಜೋಪಾನ ಮಾಡಬೇಕು
ಎಂದುಕೊಂಡು ಎಮ್ಮೆಗಳಿಂದ ಜೀವನ ಸಾಗಿಸೋ ನಿಧರ್ಾರ ಮಾಡಿದ.
ಹಿಂದಿನ ಸುರಿದ ಮಳೆ
ಊರಿನಲ್ಲೆಲ್ಲಾ ಹಬ್ಬ ತಂದಿತ್ತು. ಎಲ್ಲರ ಮನೆಗಳಲ್ಲೂ ಸಡಗರ ಸಂಭ್ರಮ. ಭೂಮಿತಾಯಿಗೆ ಚರಗ
ಚಲ್ಲುವ ಹಬ್ಬ. ಎಲ್ಲರ ಮನೆಯವರಂತೆ ಬಸವನಗೌಡನ ಮನೆಯವರೂ ಎತ್ತಿನ ಗಾಡಿ ಕಟ್ಟಿಕೊಂಡು
ರೊಟ್ಟಿ ಬುತ್ತಿ ಗಂಟು ಕಟ್ಟಿಕೊಂಡು ಹಳ್ಳದ ತೋಟಕ್ಕೆ ಹೋದರು. ತೋಟದಲ್ಲಿನ ಬೆಳೆಗಳನ್ನು
ನೋಡಿ ಖುಷಿಪಟ್ಟರು. ಊಟಕ್ಕೆ ಮೊದಲು ತೋಟದ ಬನ್ನಿಮಹಾಂಕಾಳಿಗೆ ಪೂಜೆ ಸಲ್ಲಿಸುವುದು ಅವರ
ಸಂಪ್ರದಾಯ. ಎಲ್ಲರೂ ಬನ್ನಿಮರದತ್ತ ನಡೆದರು. ಆದರೆ ಮರದ ಬುಡದಲ್ಲಿದ್ದ ನಾಗಪ್ಪನ ಕಲ್ಲು
ಮಾಯವಾಗಿತ್ತು. ಎಲ್ಲಿ ಹುಡುಕಿದರೂ ಅದರ ಸುಳಿವೇ ಸಿಗಲಿಲ್ಲ. ಕೊನೆಗೆ ಮಣ್ಣಿನಿಂದ
ನಾಗಪ್ಪನನ್ನು ಮಾಡಿ ಪೂಜಿಸಿದರು. ನಾಗಪ್ಪನ ಕಲ್ಲು ಮಾಯವಾದ ಸುದ್ದಿ ಊರಿನಲ್ಲಿ ಚಚರ್ೆಗೆ
ಗ್ರಾಸವಾಯಿತು.
ಇತ್ತ ಕರಿಯಪ್ಪ ಎಮ್ಮೆ ಸಾಕೋದನ್ನೇ ತನ್ನ
ಕಾಯಕವನ್ನಾಗಿಸಿಕೊಂಡಿದ್ದ. ಪ್ರತಿದಿನ ಬೆಳಿಗ್ಗೆ ತನಗೆ ಹಾಗೂ ತನ್ನ ಮಗನಿಗೆ ಒಂದಿಷ್ಟು
ಅಂಬಲಿಯನ್ನೋ ಮದ್ದೆಯನ್ನೋ ಮಾಡೋದು, ಇಬ್ಬರೂ ತಿನ್ನೋದು ಅದರಲ್ಲಿ ಒಂದಿಷ್ಟು ನಾಯಿಗೆ
ಹಾಕೋದು. ಎಮ್ಮೆ ಹೊಡ್ಕೊಂಡು ಮೆಯಿಸೋಕೆ ಹೋಗೋದು. ಜೊತೆಗೆ ನಾಯಿಯೂ ಇರುತ್ತಿತ್ತು. ಅಂದು
ತನ್ನ ಹೊಲದ ಹತ್ತಿರದ ಗೋಕಟ್ಟೆಯ ಬಳಿ ಎಮ್ಮೆ ಮೇಯಿಸುತ್ತಾ ಕುಳಿತಿದ್ದ. ಚೆನ್ನಿ
ತನ್ನಿಂದ ದೂರವಾಗಿ ನಾಲ್ಕಾರು ತಿಂಗಳುಗಳು ಕಳೆದಿದ್ದವು. ಆದರೆ ಅವಳ ನೆನಪು ಸದಾ
ಕಾಡುತಲಿತ್ತು.
ಎಮ್ಮೆಯೊಂದು ನೀರನ್ನರಸಿ ಜಾಲಿಗಿಡಗಳನ್ನು ದಾಟಿಕೊಂಡು ಗೋಕಟ್ಟೆಯ
ಮೂಲೆಯಲ್ಲಿದ್ದ ನೀರಿನ ಕಡೆಗೆ ದೌಡಾಯಿಸಿತು. ಹಿಂದೆಯೇ ನಾಯಿಯೂ ಹೋಯಿತು. ಸ್ವಲ್ಪ ಸಮಯದ
ಬಳಿಕ ತನ್ನ ನಾಯಿ ಊಳಿಡುವ ಶಬ್ದ ಕೇಳಿತು. ಏನೋ ಅನಾಹುತ ಸಂಭವಿಸಿದೆ ಎಂದು ಅತ್ತ ನಡೆದ.
ಅಲ್ಲಿ ಅವನಿಗೊಂದು ಆಶ್ಚರ್ಯ ಕಾದಿತ್ತು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮಾನವ ದೇಹದ
ಮೂಳೆಗಳನ್ನು ತನ್ನ ನಾಯಿ ಮೂಸಿ ನೋಡುತ್ತಿತ್ತು. ಎಮ್ಮೆಯೂ ಸಹ ಅಲ್ಲಿದ್ದ ಸೀರೆಯನ್ನು
ಮೂಸುತ್ತಾ ನಿಂತಿತ್ತು. ಈ ದೃಶ್ಯ ನೋಡಿದ ಕರಿಯಪ್ಪನಿಗೆ ದಿಗ್ಬ್ರಮೆಯಾಯಿತು. ಹತ್ತಿರ
ಹೋಗಿ ನೋಡಿದಾಗ ಕೆಸರಿನಲ್ಲಿ ಸಿಕ್ಕು ಭಾಗಶಃ ಕೊಳೆತ ಸೀರೆ ತನ್ನ ಚೆನ್ನಿಯದೇ ಎಂದು
ಗುರುತಿಸಿದ. ಹಾಗಾದರೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೂಳೆಗಳು ತನ್ನ ಹೆಂಡತಿಯದೇ ಎಂದು
ಚಕಿತನಾದ. ಅವಳ್ಯಾಕೆ ನೀರಿಗೆ ಬಿದ್ದಳು ಎಂಬುದು ಅಚ್ಚರಿಯಾಗಿತ್ತು. ಕೆಲ ಹೊತ್ತಿನ ತನಕ
ಮೂಳೆಗಳನ್ನೇ ನೋಡುತ್ತಾ ನಿಂತ ಕರಿಯಪ್ಪ ಅಲ್ಲಿದ್ದ ಕಲ್ಲುಗಳನ್ನು ಗಮನಿಸಿದ. ಅಲ್ಲಿದ್ದ
ಒಂದು ಕಲ್ಲಿನಲ್ಲಿ ನಾಗಪ್ಪನ ಚಿತ್ರವಿದ್ದು, ಬಸವನಗೌಡನ ತೋಟದ ಬನ್ನೀಮರದ ಬುಡದಲ್ಲಿದ್ದ
ನಾಗಪ್ಪನ ಕಲ್ಲು ಮಾಯವಾದದ್ದು ನೆನಪಿಗೆ ಬಂತು. ಅವನಿಗೆ ಏನೋ ಎಡವಟ್ಟು ನೆಡೆದಿದೆ ಎಂದು
ಅನಿಸಿತು.
ತಕ್ಷಣವೇ ತನ್ನ ಕೇರಿಗೆ ಬಂದು ಮುಖಂಡರಿಗೆ ವಿಷಯ ತಿಳಿಸಿದ. ಜನರೆಲ್ಲ
ಅತ್ತ ನಡೆದರು. ಪೋಲಿಸಿನವರಿಗೂ ಸುದ್ದಿ ಮುಟ್ಟಿತು. ಪಂಚನಾಮೆ ಮಾಡಿದರು. ಅಲ್ಲಿದ್ದ
ಬಟ್ಟೆ, ಮೂಳೆ ತುಂಡುಗಳು ಹಾಗೂ ನಾಗಪ್ಪನ ಕಲ್ಲನ್ನು ಪೋಲಿಸರು ತನಿಖೆಗೆಂದು ಒಯ್ದರು.
ಮೂಳೆಗಳನ್ನು ಡಿ.ಎನ್.ಎ ಪರೀಕ್ಷೆಗೆ ಒಳಪಡಿಸಿದಾಗ ಅದು ಚೆನ್ನಿಯದೇ ಎಂದು ಖಾತರಿಯಾಯಿತು.
ನಂತರ ಅಪರಾಧಿಗಳ ತನಿಖೆ ಪ್ರಾರಂಭವಾಯಿತು. ನಾಗಪ್ಪನ ಕಲ್ಲಿನ ಆಧಾರದ ಮೇಲೆ
ಬಸವನಗೌಡನನ್ನು ವಿಚಾರಣೆಗೆಂದು ಕರೆದೊಯ್ಯಲಾಯಿತು. ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ
ವಿಚಾರಣೆಯಲ್ಲಿ ಬಸವನಗೌಡ ಸಿಕ್ಕುಹಾಕಿಕೊಂಡ. ಕೇಸು ಕೋಟರ್ಿನ ಮೆಟ್ಟಿಲೇರಿತು.
ಸಾಕ್ಷಿಗಳೆಲ್ಲವೂ ಚೆನ್ನಿಯ ಪರವಾಗಿದ್ದವು. ಬಸವನಗೌಡನ ಹಣ, ಅಂತಸ್ತುಗಳು ಸಾಕ್ಷಿಗಳ
ಮುಂದೆ ನಿಲ್ಲದಾದವು. ಬಸವನಗೌಡನಿಗೆ ಜೈಲು ಶಿಕ್ಷೆಯಾಯಿತು. ಚೆನ್ನಿ ಕಥೆಯಾದಳು.
ಆರ್.ಬಿ,ಗುರುಬಸವರಾಜ