February 24, 2014

ಮಕ್ಕಳ ಶಾಲೆ ಮನೆಯೂ ಆಗಲಿ!


ಮಕ್ಕಳ ಶಾಲೆ ಮನೆಯೂ ಆಗಲಿ!




‘ಕಲಿಕೆ’ ಒಂದು ವಿಶಿಷ್ಟ ಹಾಗೂ ವೈವಿಧ್ಯಮಯ ಪ್ರಕ್ರಿಯೆ.  ಮಕ್ಕಳು ಕಲಿಕೆಯ ಬಗ್ಗೆ ಅಧೀರರಾಗುತ್ತಿದ್ದಾರೆ. ಕಲಿಕೆ ಎನ್ನುವುದು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗುತ್ತಿರುವ ಪರಿಣಾಮ ಇದು. ಮಕ್ಕಳ ಕಲಿಕೆಯಲ್ಲಿನ ನಿರುತ್ಸಾಹ ದೂರ ಮಾಡುವ ಬಗ್ಗೆ ಅಥವಾ ಕಲಿಕೆಯಲ್ಲಿ ಪ್ರಯಾಸ ಪಡುವುದನ್ನು ತಪ್ಪಿಸಲು ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಮಕ್ಕಳ ಕಲಿಕೆಗೆ–ಗ್ರಹಿಕೆಗೆ ಅನುಕೂಲವಾಗಲಿ ಎಂದೇ ಅಷ್ಟಪಾದಗಳ ರಚನೆ ಮಾಡಲಾಗಿದೆ. ಈ ಪಾದಗಳು ತಮ್ಮ ಹಿಡಿತವನ್ನು ಬಲಪಡಿಸಿದಷ್ಟೂ ವಿಷಯದ ಮೇಲೆ ಮಕ್ಕಳು ಹಿಡಿತ ಸಾಧಿಸಬಹುದು.
ಓದುವ ಪ್ರೀತಿಯನ್ನು ಪ್ರೋತ್ಸಾಹಿಸಿ:ಪ್ರತಿದಿನ ಸಂಜೆ ಅಥವಾ ರಾತ್ರಿ ನಿಮ್ಮ ಮಗುವಿನ ಜೊತೆ ನೀವೂ ಓದಲು ಕುಳಿತುಕೊಳ್ಳಿ. ನೀವು ಓದುವುದನ್ನು ನೋಡಿ ಮಗುವಿನಲ್ಲಿ ಓದುವ ಹಂಬಲ ಸಹಜವಾಗಿ ಮೂಡುತ್ತದೆ. ನಿಯಮಿತವಾಗಿ ಸಮೀಪದ ಗ್ರಂಥಾಲಯಕ್ಕೆ ಮಗುವನ್ನು ಕರೆದೊಯ್ಯಿರಿ. ಅಲ್ಲಿ ಮಗುವಿಗೆ ಸೂಕ್ತವಾದ ಪುಸ್ತಕಗಳನ್ನು ಹುಡುಕಿಕೊಡಿ. ಹೀಗೆ ಮಾಡುವುದರಿಂದ ಮಗುವಿನಲ್ಲಿ ಓದುವ ಆಸಕ್ತಿ ಹೆಚ್ಚುತ್ತದೆ ಹಾಗೂ ಖಂಡಿತವಾಗಿಯೂ ಮಗು ನಿಮ್ಮ ಬಳಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತದೆ. ನಿಮ್ಮ ಮತ್ತು ಮಗುವಿನ ಅನುಬಂಧ ಹೆಚ್ಚುವುದಲ್ಲದೇ ಮಗುವಿನಲ್ಲಿ ಓದುವ ಬಗ್ಗೆ ಧನಾತ್ಮಕ ಮನೋಭಾವನೆ ಬೆಳೆಯುತ್ತದೆ.
ಓದಿದ್ದನ್ನು ಖಾತ್ರಿಪಡಿಸಿ: ಸಾಮಾನ್ಯವಾಗಿ ಮಕ್ಕಳು ಪೋಷಕರ ಚಟುವಟಿಕೆಗಳನ್ನು ಅನುಕರಿಸುತ್ತಾರೆ. ಆದ್ದರಿಂದ ನಾವು ಏನು ಓದುತ್ತಿದ್ದೇವೆ ಎಂಬುದು ಮಕ್ಕಳಿಗೂ ತಿಳಿಯಲಿ. ರಾತ್ರಿ ಊಟದ ವೇಳೆ ಅಥವಾ ಊಟದ ನಂತರ ನೀವು ಆ ದಿನ ಓದಿದ ವಿಷಯಗಳ ಬಗ್ಗೆ ಮಗುವಿಗೆ ತಿಳಿಸಿ ಹಾಗೂ ಮಗು ಓದಿದ ವಿಷಯಗಳನ್ನು ತಿಳಿಸಲು ಹೇಳಿ. ಪರಸ್ಪರ ವಿಷಯ ಹಂಚಿಕೊಳ್ಳಿ. ಮಗು ತಾನು ಕಲಿತ ವಿಷಯಗಳ ಬಗ್ಗೆ ಮಾತನಾಡಲು ಅವಕಾಶ ನೀಡಿ. ಮಗು ಖಂಡಿತವಾಗಿಯೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ಇದಕ್ಕಿಂತ ಹೆಚ್ಚಿನ ಕಲಿಕೆ ಇನ್ನೇನಿದೆ? ಶಾಲೆಯ ಹೊರಗಿನ ಕಲಿಕೆಯನ್ನೂ ಸಹ ಉತ್ತೇಜಿಸಬೇಕೆಂದು ಎನ್.ಸಿ.ಎಫ್-೨೦೦೫ ಒತ್ತಿ ಹೇಳಿದೆ.
ಅನುಭವಗಳನ್ನು ಪ್ರೊತ್ಸಾಹಿಸಿ: ಅನುಭವಗಳ ಸಾರವೇ ಗುಣಾತ್ಮಕ ಕಲಿಕೆ. ಕಲಿಕೆಯ ವಿಭಿನ್ನ ಅನುಭವಗಳನ್ನು ಮಕ್ಕಳಿಗೆ ನೀಡಬೇಕು. ಅನುಭವ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಬಾರದು. ನೃತ್ಯ/ ವ್ಯಾಯಾಮ ತರಗತಿಗೆ ಸೇರಲು, ಹೊಸ ಕ್ರೀಡೆ ಕಲಿಯಲು, ವಿವಿಧ ಲೇಖಕರ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸಿ. ಮಗು ಇಷ್ಟ ಪಡುವ ಇನ್ನಿತರೇ ಅಂಶಗಳನ್ನು ಸಂಗ್ರಹಿಸಿ. ಅದರಲ್ಲಿನ ಹೊಸತನವನ್ನು ಅನುಭವಿಸಲು ಪ್ರೋತ್ಸಾಹಿಸಿ. ಕಲಿಕೆ ಒತ್ತಾಯಪೂರಕವಾಗಿ ಹೇರುವಂತದ್ದಲ್ಲ. ಬದಲಾಗಿ ಅದು ಸಂತಸದಾಯಕ ಮತ್ತು ಸಕ್ರಿಯಾತ್ಮಕ ಪ್ರಕ್ರಿಯೆಗಳಿಂದ ಕೂಡಿದಾಗ ಮಾತ್ರ ಅದು ಶಾಶ್ವತವಾಗುತ್ತದೆ.
ಮಕ್ಕಳೊಂದಿಗೆ ಟ್ರಿಪ್ ಕೈಗೊಳ್ಳಿ: ಸಾಧ್ಯವಾದಾಗಲೆಲ್ಲಾ ಮಕ್ಕಳೊಂದಿಗೆ ಶೈಕ್ಷಣಿಕ ಟ್ರಿಪ್ ಕೈಗೊಳ್ಳಿ. ಪ್ರಾಣಿ ಸಂಗ್ರಹಾಲಯ, ವಸ್ತು ಸಂಗ್ರಹಾಲಯ, ಐತಿಹಾಸಿಕ ಸ್ಥಳಗಳು, ವಿಶ್ವ ಪಾರಂಪರಿಕ ತಾಣಗಳು, ರಕ್ಷಿತ ಅರಣ್ಯಗಳು, ಗುಡ್ಡ, ಬೆಟ್ಟ, ನದಿ, ಸರೋವರ, ಸಾಗರ, ಜಲಪಾತಗಳಂತಹ ನೈಸರ್ಗಿಕ ತಾಣಗಳು, ಸಂವಾದ, ಚರ್ಚೆ, ಗೋಷ್ಟಿ, ವಿಚಾರ ಸಂಕಿರಣ, ಉಪನ್ಯಾಸಗಳಂತಹ ವೈಚಾರಿಕ ಕಾರ್ಯಕ್ರಮಗಳು, ನಾಟಕ, ಸಿನೇಮಾ, ಸರ್ಕಸ್‌ಗಳಂತಹ ಮನೋರಂಜನಾ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದೊಯ್ಯಿರಿ. ಅಲ್ಲಿ ಅವರು ನೋಡಿದ ಅನುಭವಿಸಿದ ವಿಷಯಗಳ ಕುರಿತು ಮಾತನಾಡಲು ಅವಕಾಶ ನೀಡಿ. ಆಗ ಅವರಲ್ಲಿ ಸಾಮಾಜಿಕ ಕಳಕಳಿ, ವೈಚಾರಿಕ ಮತ್ತು ಪರಿಸರ ಪ್ರಜ್ಞೆ ಮೂಡುತ್ತದೆ.
ಸಮಸ್ಯೆ ನಿಖರವಾಗಿ ಗೊತ್ತಿರಲಿ: ನಿಮ್ಮ ಮಗು ಯಾವ ವಿಷಯದ ಕಲಿಕೆಯಲ್ಲಿ ತೊಂದರೆ ಅನುಭವಿಸುತ್ತದೆ ಎಂಬುದರ ಬಗ್ಗೆ ಖಚಿತವಾಗಿ ಗೊತ್ತಿರಲಿ. ನಿಮ್ಮ ಮಗು ಕಠಿಣ ವಿಷಯಗಳಲ್ಲೂ ಸಹ ಉತ್ತಮ ಯಶಸ್ಸು ಗಳಿಸುವಂತೆ ಮಾಡಲು ಹಲವಾರು ವಿಧಾನಗಳಿವೆ. ಆ ವಿಷಯದ ಕುರಿತು ಇರುವ ಭಯ ಹೋಗಲಾಡಿಸಿ, ಸಮಸ್ಯೆ ತೀವ್ರವಾಗಿದ್ದರೆ ಶಾಲಾ ಶಿಕ್ಷಕರು ಅಥವಾ ಆಪ್ತ ಸಮಾಲೋಚಕರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಿ.
ಸವಾಲಿಗೆ ಜವಾಬು ನೀಡಿ: ಕೆಲವು ಮಕ್ಕಳು ಹೆಚ್ಚು ತಿಳಿಯಲು ಸಾಮರ್ಥ್ಯ ಇದ್ದರೂ ಸಹ ಬೇರೆ ಬೇರೆ ಕಾರಣಗಳಿಗಾಗಿ ಕಲಿಕೆಯಿಂದ ವಿಮುಖರಾಗುತ್ತಾರೆ. ಈ ಬಗ್ಗೆ ತರಗತಿ ಶಿಕ್ಷಕರೊಂದಿಗೆ ಚರ್ಚಿಸಿ. ಮಗುವಿನ ಕಲಿಕಾ ಬೇಸರ ಕಾರಣ ಕಂಡುಕೊಳ್ಳಿ. ಮಗುವಿನ ಮುಂದುವರೆದ ಕಲಿಕೆಯ ಅವಶ್ಯಕತೆಗಳನ್ನು ಅರಿತು ಅದಕ್ಕನುಗುಣವಾದ ಸಾಮಗ್ರಿ/ ಸೌಲಭ್ಯಗಳನ್ನು ಪೂರೈಕೆ ಮಾಡಿ. ಜೊತೆಗೆ ಪಠ್ಯ ಪೂರಕ ಚಟುವಟಿಕೆಗಳನ್ನೂ ನೀಡಿ.
ಧನಾತ್ಮಕ ಪ್ರಶಂಸೆ ಇರಲಿ: ಕೆಲವು ವೇಳೆ ಮಕ್ಕಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ ಅಥವಾ ಕಲಿತದ್ದನ್ನು ಉತ್ತಮವಾಗಿ ಅಭಿವ್ಯಕ್ತಿಸುತ್ತಾರೆ. ಅಂತಹ ವೇಳೆ ಅವರಿಗೆ ಅಪ್ಪುಗೆಯ ಅಭಿನಂದನೆ ನೀಡಿ. ಸಾಂದರ್ಭಿಕ ಸತ್ಕಾರಗಳಿಂದ ಅವರ ಶ್ರಮವನ್ನು ಪ್ರೋತ್ಸಾಹಿಸಿ. ಧನಾತ್ಮಕ ಬಲವರ್ಧನೆಯಿಂದ ಕಲಿಕೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ನಿಮ್ಮ ಮಗುವಿನ ಉತ್ತಮ ಅಂಶಗಳನ್ನು ಮೆಚ್ಚದೇ ಕೇವಲ ತೆಗಳಿಕೆ ಅಥವಾ ದೂರುವುದರಿಂದ ಮಕ್ಕಳಲ್ಲಿ ಅನಪೇಕ್ಷಿತ ನಡವಳಿಕೆಗಳು ಉಂಟಾಗಬಹುದು.
ಕಲಿಕೆ ಅಜೀವ ಪರ್ಯಂತ ಎಂಬುದನ್ನು ಮನದಟ್ಟು ಮಾಡಿ: ಕಲಿಕೆಗೆ ಕೊನೆಯಿಲ್ಲ, ವಯಸ್ಸಿನ ಮಿತಿಯಿಲ್ಲ, ವಿಷಯದ ಹಂಗಿಲ್ಲ ಎಂಬುದನ್ನು ಮನದಟ್ಟು ಮಾಡಿ. ಅವರವರ ಜೀವನದಲ್ಲಿ ಕಂಡುಕೊಂಡ ಸಫಲತೆಯು ಅವರ ಕಲಿಕೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ಉದಾಹರಣೆ ಸಹಿತ ತಿಳಿಸಿ. ವಿವಿಧ ಕ್ಷೇತ್ರಗಳ ಸಾಧಕರ ಶ್ರಮವನ್ನು ತಿಳಿಸಿ. ಇದರಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡುತ್ತದೆ. ನೀವೇ ನಿಮ್ಮ ಮಗುವಿನ ಮೊದಲ ಗುರುಗಳಾಗಿ. ಖಂಡಿತವಾಗಿಯೂ ಮನೆಯೇ ಮೊದಲ ಪಾಠಶಾಲೆಯಾಗುತ್ತದೆ.

January 20, 2014

ಕಣ್ಣಿನಾರೋಗ್ಯಕ್ಕೆ ಉಣ್ಣುವುದೇನು?

ದಿನಾಂಕ 18-01-2014 ರಂದು "ಪ್ರಜಾವಾಣಿ"ಯ 'ಭೂಮಿಕಾ' ಪುರವಣಿಯಲ್ಲಿ ಪ್ರಕಟವಾದ ಲೇಖನ  

 ಕಣ್ಣಿನಾರೋಗ್ಯಕ್ಕೆ ಉಣ್ಣುವುದೇನು?

             
           ನಮ್ಮ ದೇಹದ ಎಲ್ಲಾ ಅಂಗಗಳಿಗಿಂತ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖವಾದ ಅಂಗ ಕಣ್ಣು. ನಿತ್ಯ ಜೀವನದಲ್ಲಿ ಕಣ್ಣಿನ ಪಾತ್ರ ಬೇರೆ ಯಾವುದೇ ಅಂಗಕ್ಕೆ ಸರಿಸಾಟಿಯಲ್ಲ. ಕಣ್ಣಿನ ದೃಷ್ಟಿ ನಿಖರವಾಗಿರಲು ಹಾಗೂ ಕಣ್ಣಿನ  ಆರೋಗ್ಯಕ್ಕೆ ಸೂಕ್ತ ಪ್ರಮಾಣದ ಪೌಷ್ಟಿಕಾಂಶ ಅತ್ಯಗತ್ಯ.  ನಮ್ಮ ಇಂದಿನ ಜೀವನ ಶೈಲಿಯಲ್ಲಿ ಕಣ್ಣಿಗೆ ಕೆಲಸ ಹೆಚ್ಚು. ಟಿ.ವಿ ಅಥವಾ ಕಂಪ್ಯೂಟರ್ ಪರದೆ ನೋಡುವಾಗ ಕಣ್ಣುಗಳು ಹೆಚ್ಚಿನ ಶ್ರಮ ವಹಿಸುತ್ತವೆ. ಇದರಿಂದಾಗಿ ಕಣ್ಣುಗಳು ಬೇಗನೇ ತಮ್ಮ ದೃಷ್ಟಿ ಶಕ್ತಿ ಕಳೆದುಕೊಳ್ಳಬಹುದು. ಇದನ್ನು ನಿಯಂತ್ರಿಸಲು ನಮ್ಮ ಆಹಾರ ಪದ್ದತಿ ಬದಲಾಗಬೇಕಿದೆ. ಕೆಲವು ಆಹಾರ ಪದಾರ್ಥಗಳು ದೃಷ್ಟಿ ಹೆಚ್ಚಿಸಲು ಹಾಗೂ ಕಣ್ಣಿನ ಆರೋಗ್ಯ ಕಾಪಾಡಲು ಸಹಕಾರಿಯಾಗಿವೆ. ಅವುಗಳ ಬಗ್ಗೆ ಒಂದು ಕಿರು ನೋಟ ಇಲ್ಲಿದೆ.
ಕ್ಯಾರೆಟ್ : ಕ್ಯಾರೆಟ್ ಕಣ್ಣಿನ ರಕ್ಷಣೆಗೆ ವಿಶೇಷವಾದ ಆಹಾರ. ಇದರಲ್ಲಿ ಉತ್ತಮ ಗುಣಮಟ್ಟದ ಮಿಟಮಿನ್ ಮತ್ತು ಖನಿಜಗಳಿದ್ದು ಇವು ಕಣ್ಣಿನ ರಕ್ಷಣೆಗೆ ಸಹಾಯ ಮಾಡುತ್ತವೆ. ಕ್ಯಾರೆಟ್ ಅತೀ ಹೆಚ್ಚು ಬೀಟಾ ಕ್ಯಾರೋಟೀನ್ ಅಂಶ ಹೊಂದಿದ್ದು, ಅದು ಕಣ್ಣಿನ ದೃಷ್ಟಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿನ ಜೀವಸತ್ವಗಳು ಕಣ್ಣಿನ ಮೇಲೆ ಬೀಳುವ ಅತಿ ನೇರಳೆ ಕಿರಣಗಳನ್ನು ತಡೆ ಹಿಡಿದು ಕಣ್ಣನ್ನು ರಕ್ಷಿಸುತ್ತವೆ. ಕ್ಯಾರೆಟ್‍ನಲ್ಲಿನ ಲ್ಯೂಟೀನ್ ಎಂಬ ಪ್ರೋಟೀನ್ ಕಣ್ಣಿನ ಕಾಯಿಲೆಗಳನ್ನು ತಪ್ಪಿಸುವ ರಕ್ಷಾಕವಚವಿದ್ದಂತೆ. ಈ ಎಲ್ಲಾ ಕಾರಣಕ್ಕಾಗಿ ಕ್ಯಾರೆಟನ್ನು ನಿಮ್ಮ ಆಹಾರದ ಮೆನುವಿನಲ್ಲಿ ಪ್ರಮುಖ  ಆಹಾರ ಪದಾರ್ಥವಾಗಿ ಸಲಾಡ್ ಅಥವಾ ಪಲ್ಯದ ರೂಪದಲ್ಲಿ ಸ್ವಾಗತಿಸಿ.
ಹಸಿರೆಲೆ ತರಕಾರಿಗಳು :  ಹಸಿರೆಲೆ ತರಕಾರಿಗಳಾದ ಪಾಲಕ, ಹುಳಿಸೀಕ, ಮೆಂತ್ಯೆ, ಕೊತ್ತಂಬರಿ, ಸಬ್ಬಸಿಗೆ, ಪುದೀನ, ಎಲೆಕೋಸು, ಮೂಲಂಗಿ, ರಾಜಗಿರಿ ಇತ್ಯಾದಿಗಳಲ್ಲಿನ ಪ್ರೋಟೀನ್ ಅಂಶಗಳು ಕಣ್ಣಿನ ಅಕ್ಷಿಪಟಲದ ಹಾನಿಯನ್ನು ತಪ್ಪಿಸುತ್ತವೆ. ರೆಟಿನಾ ಕಣ್ಣಿನ ಪ್ರಮುಖ ಭಾಗವಾಗಿದ್ದು, ಹಸಿರೆಲೆ ತರಕಾರಿ ಮತ್ತು ಸೊಪ್ಪುಗಳು ಈ ರೆಟಿನಾವನ್ನು ಬೆಳಕಿನ ಉಪಟಳದಿಂದ ರಕ್ಷಿಸಿ, ಮಾಹಿತಿ ದಾಖಲಿಸಲು ಸಹಾಯ ಮಾಡುತ್ತವೆ.
ಮೊಟ್ಟೆ : ಮೊಟ್ಟೆ ಕೇವಲ ಪ್ರೋಟೀನ್‍ನ ಆಗರವಲ್ಲದೇ, ಆಂಟಿ ಆಕ್ಸಿಡೆಂಟ್ ಸಹ ಆಗಿರುವುದರಿಂದ ಕಣ್ಣಿನ ಪೊರೆಯ ರಕ್ಷಣೆಗೆ ಸೂಕ್ತ ಆಹಾರವಾಗಿದೆ. ವಯಸ್ಸಾದಂತೆಲ್ಲಾ ಅಕ್ಷಿಪಟಲದ ಶಕ್ತಿ ಕ್ಷೀಣವಾಗಿ ದೃಷ್ಟಿ ಮಂಜಾಗುತ್ತದೆ. ಆದರೆ ಮೊಟ್ಟೆಯಲ್ಲಿನ ಪ್ರೋಟೀನ್‍ಗಳು ಅಕ್ಷಿಪಟಲದ ಹಾನಿಯನ್ನು ತಪ್ಪಿಸಿ ದೃಷ್ಟಿಯನ್ನು ನಿಖರಗೊಳಿಸಲು ಸಹಾಯಮಾಡುತ್ತವೆ. ಅಲ್ಲದೇ ಮೊಟ್ಟೆಯಲ್ಲಿನ ಸಲ್ಫರ್ ಖನಿಜ ಮತ್ತು ಸಿಸ್ಟನ್ ಪ್ರೋಟೀನ್‍ಗಳು ದೃಷ್ಟಿ ಉತ್ತಮವಾಗಲು ಸಹಕರಿಸುತ್ತವೆ.
ಹಣ್ಣುಗಳು : ವಿಟಮಿನ್ `ಸಿ’ ರೆಟಿನಾ ಹಾಗೂ ಕಣ್ಣಿನ ಪೊರೆಯ ಹಾನಿಯನ್ನು ತಡೆಗಟ್ಟುವುದರ ಜೊತೆಗೆ ಕಣ್ಣಿನ ರಕ್ತ ನಾಳಗಳನ್ನು ಕ್ಯಾನ್ಸರ್‍ನಿಂದ ರಕ್ಷಿಸುತ್ತವೆ. ಇಂತಹ ವಿಟಮಿನ್ `ಸಿ’ ಸಿಟ್ರಸ್‍ಯುಕ್ತ ಹಣ್ಣುಗಳಾದ ಟೋಮಾಟೋ, ಕಿತ್ತಳೆ, ಮೂಸಂಬಿ, ದ್ರಾಕ್ಷಿ, ಪೀಚ್, ಸ್ಟ್ರಾಬೆರ್ರಿ, ಇತರೆ ಹಣ್ಣುಗಳಲ್ಲಿ ಸಿಗುತ್ತದೆ. ಜೊತೆಗೆ ಕಾಳುಮೆಣಸು ಹಾಗೂ ಕೋಸುಗಡ್ಡೆಗಳಲ್ಲೂ ಸಹ ವಿಟಮಿನ್ `ಸಿ’ ಇರುತ್ತದೆ. ಇವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಣ್ಣನ್ನು ರಕ್ಷಿಸಿಕೊಳ್ಳಬಹುದು.
ಮೀನು : ಮೀನಿನ ಓಮೇಗಾ-3 ಎಣ್ಣೆಯು ಕಣ್ಣಿನ ಜೀವಕೋಶಗಳ ಬೆಳವಣಿಗೆಗೆ ಹಾಗೂ ರೆಟಿನಾದ ರಕ್ಷಣೆಗೆ ಸಹಾಯಕವಾಗುತ್ತದೆ. ಇಂತಹ ಓಮೇಗಾ-3 ಕೊಬ್ಬಿನಾಂಶವು ಕೆಲ ಜಾತಿಯ ಮೀನುಗಳಾದ ಕಾಡ್, ಟನಾ ಮತ್ತು ಸಾಲ್‍ಮನ್‍ಗಳಲ್ಲಿ ದೊರೆಯುತ್ತದೆ.
ಧಾನ್ಯಗಳು : ಇರುಳು ದೃಷ್ಟಿಗೆ ವಿಟಮಿನ್ `ಎ’ ಅವಶ್ಯಕ. ವಿಟಮಿನ್ `ಎ’ ರೆಟಿನಾ ಹಾಗೂ ಅಕ್ಷಿಪಟಲದ ಹಾನಿಯನ್ನು ತಡೆಗಟ್ಟುತ್ತದೆ. ಇಂತಹ ಗುಣವುಳ್ಳ ವಿಟಮಿನ್ `ಎ’  ಧಾನ್ಯಗಳಲ್ಲಿ ಹೇರಳವಾಗಿರುತ್ತದೆ. ಧಾನ್ಯಗಳಾದ ಹೆಸರು, ಮಡಕೆ, ಕಡಲೆ, ಹುರುಳಿ ಇತ್ಯಾದಿಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಮೊಳಕೆ ಬರಿಸಿ ತಿನ್ನುವುದರಿಂದ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ. ಬಾದಾಮಿ, ನೆಲಗಡಲೆ, ಕುಸುಬಿ ಹಾಗೂ ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ `ಎ’ ಹೇರಳವಾಗಿರುತ್ತದೆ.
ಈ ಜಗದ ಸೌಂದರ್ಯ ಸವಿಯಲು ಕಣ್ಣುಗಳು ಮುಖ್ಯವಲ್ಲವೇ? ಆದ್ದರಿಂದ  ದಿನನಿತ್ಯದ ನಮ್ಮ ಆಹಾರ ಪದ್ದತಿಯನ್ನು ಉದ್ದೇಶಿತ ರೀತಿಯಲ್ಲಿ ಬದಲಿಸಿಕೊಂಡು ನಮ್ಮ ದೃಷ್ಟಿಯನ್ನು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸೋಣವೇ?
                                                                                       - ಆರ್.ಬಿ.ಗುರುಬಸವರಾಜ.

January 1, 2014

ಕತೆ ಹೇಳುವ ಕಲ್ಲುಗಳು

ದಿನಾಂಕ 20-08-2013 ರ ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ಪ್ರಕಟವಾದ ನನ್ನ ಲೇಖನ.
ಕತೆ ಹೇಳುವ ಕಲ್ಲುಗಳು

































 ‘ನಾನು ಒಂದು ಕಲ್ಲು. ಈ ಹಿಂದೆ ಅನಾಥನಾಗಿದ್ದ ನಾನು ಈಗ ಅನಾಥನಲ್ಲ. ಏಕೆಂದರೆ ಒಬ್ಬ ಶಿಲ್ಪಿ ನನಗೆ ಜೀವ ನೀಡಿದ್ದಾನೆ. ಆತನ ಸೃಜನಶೀಲತೆಯನ್ನು ನನ್ನ ಮೂಲಕ ಜಗಕ್ಕೆ ಪರಿಚಯಿಸಿದ್ದಾನೆ. ನನ್ನನ್ನು ಎಲ್ಲರೂ ಮೆಚ್ಚುವಂತೆ ಮಾಡಿ  ಪುನೀತಗೊಳಿಸಿದ್ದಾನೆ’ ಎಂದು ಕಲ್ಲುಗಳು ಮಾತನಾಡುತ್ತಿವೆ.
ಈ ಮಾತನಾಡುವ ಕಲ್ಲುಗಳನ್ನು ನೋಡಲು ಹಂಪೆಯ ಕನ್ನಡ ವಿಶ್ವವಿದ್ಯಾನಿಲಯದ ಆವರಣದಲ್ಲಿನ “ಶಿಲ್ಪವನ”ಕ್ಕೆ ಭೇಟಿ ಕೊಡಬೇಕು. ‘ಶಿಲ್ಪವನ’ದಲ್ಲಿರುವ ಪ್ರತಿಯೊಂದು ಕಲ್ಲು ಒಂದೊಂದು ಕತೆಯನ್ನು ಹೇಳುವಂತಿವೆ. ಪ್ರಾಕೃತಿಕವಾಗಿ ಬಿದ್ದಿರುವ ಕಲ್ಲುಗಳಿಗೆ ಕಲೆಯ ಸ್ಪರ್ಶ ನೀಡಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಲಾಗಿದೆ. ಕಲ್ಲುಗಳ ನೈಸರ್ಗಿಕತೆ ಹಾಳಾಗದಂತೆ ಹೊಸರೂಪ ಕೊಡುವ ಉದ್ದೇಶದಿಂದ ಈ “ಶಿಲ್ಪವನ” ನಿರ್ಮಿಸಲಾಗಿದೆ.

“ಸಾಂಪ್ರದಾಯಿಕ ಶಿಲ್ಪಕಲೆಯನ್ನು ಮುಂದಿನ ಪೀಳಿಗೆಗೆ ಸಾಗಿಸುವ ಉದ್ದೇಶದಿಂದ ಇಲ್ಲಿನ ಶಿಲೆಗಳಿಗೆ ಕಲೆಯ ಮೆರಗು ನೀಡಲಾಗುತ್ತದೆ ಹಾಗೂ ಇದನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡುವ ಗುರಿ ಹೊಂದಲಾಗಿದೆ” ಎಂಬುದು ಇಲ್ಲಿನ ಶಿಲ್ಪಕಲಾ ವಿಭಾಗದ ಮುಖ್ಯಸ್ಥರಾದ ಡಾ//ಎಸ್.ಸಿ.ಪಾಟೀಲರ ಅಭಿಪ್ರಾಯ.

ಬಾದಾಮಿಯ ಶಿಲ್ಪಕಲಾ ವಿದ್ಯಾರ್ಥಿಗಳಿಂದ ಇಲ್ಲಿ ಪ್ರತಿವರ್ಷ 15-20 ದಿನಗಳ ಶಿಬಿರ ಏರ್ಪಡಿಸಲಾಗುತ್ತದೆ. ಈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ‘ಶಿಲ್ಪವನ’ದಲ್ಲಿನ ಶಿಲೆಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಹೊಸ ರೂಪ ನೀಡುತ್ತಾರೆ. ಕೇವಲ ವಿದ್ಯಾರ್ಥಿಗಳಿಂದ ಅಲ್ಲದೇ ಕೆಲವು ತಜ್ಞ ಶಿಲ್ಪಿಗಳಿಂದ ರಚಿಸಿದ ಕಲಾಕೃತಿಗಳೂ ಸಹ ಇಲ್ಲಿವೆ. ಕಳೆದ 10 ವರ್ಷಗಳಿಂದ ಈ ಶಿಲ್ಪವನ್ನು ಅಭಿವೃದ್ದಿ ಪಡಿಸುತ್ತಿದ್ದು ಭಿನ್ನ ಶೈಲಿ, ವಿವಿಧ ರೂಪ ಮತ್ತು ವಿಭಿನ್ನ ಆಕಾರದ ಕಲಾಕೃತಿಗಳು ಇಲ್ಲಿವೆ. ಆಧುನಿಕ, ಸಾಂಪ್ರದಾಯಿಕ ಹಾಗೂ ಕಲ್ಲಿನ ಗಾತ್ರಕ್ಕನುಗುಣವಾಗಿ ರಚಿಸಿದ ಕಲಾಕೃತಿಗಳು ನೋಡುಗರನ್ನು ಆಕರ್ಷಿಸುತ್ತವೆ.

ಹೊಸ ಹೊಸ ಪ್ರತಿಭೆಗಳ ಶೋಧ ಮತ್ತು ಸಾಮಥ್ರ್ಯಗಳ ಸದ್ಬಳಕೆ ಕನ್ನಡ ವಿಶ್ವವಿದ್ಯಾನಿಲಯದ ಅಂತಃಶಕ್ತಿಯಾಗಿದ್ದು, ಅದಕ್ಕನುಗುಣವಾಗಿ ವೈಶಿಷ್ಟ್ಯಪೂರ್ಣ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಕನ್ನಡ ನಾಡಿನ ಐತಿಹಾಸಿಕತೆಯನ್ನು, ಸಾಂಸ್ಕøತಿಕತೆಯನ್ನು ವಿಶ್ವವ್ಯಾಪಿಯಾಗಿ ಪಸರಿಸುವ ಗುರಿ ಹೊಂದಿದ ಕನ್ನಡ ವಿಶ್ವವಿದ್ಯಾನಿಯದಲ್ಲಿನ ಕಲ್ಲುಗಳು ವಿಶಿಷ್ಟ ಕತೆಗಳನ್ನು ಬಿಚ್ಚಿಡುತ್ತವೆ. ಕೆಲವು ವಿಶ್ವವಿದ್ಯಾನಿಲಯಗಳು ಕೇವಲ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದರೆ, ಕನ್ನಡ ವಿಶ್ವವಿದ್ಯಾನಿಲಯದ ವ್ಯಾಪ್ತಿ ಅಖಂಡ ಕರ್ನಾಟಕವಲ್ಲದೇ, ದೇಶ ವಿದೇಶಗಳಲ್ಲೂ ಹಬ್ಬಿದೆ. ಕನ್ನಡ ನಾಡನ್ನು ಪ್ರೀತಿಸುವ, ನಾಡಿನ ಬಗ್ಗೆ ಕುತೂಹಲವಿರುವ ಪ್ರತಿಯೊಬ್ಬರೂ ನೋಡಲೇಬೇಕಾದ ವಿದ್ಯಾಸಂಸ್ಥೆ “ಕನ್ನಡ ವಿಶ್ವವಿದ್ಯಾನಿಲಯ”.
- ಆರ್.ಬಿ.ಗುರುಬಸವರಾಜ.

ಶಿಕ್ಷಕರು ಮತ್ತು ವಚನ ಸಾಹಿತ್ಯ

ಶಿಕ್ಷಕರು ಮತ್ತು ವಚನ ಸಾಹಿತ್ಯ
 ಇಂದು ಕನ್ನಡಕ್ಕೆ ಎಂಟು ಜ್ಞಾನಪೀಠಗಳು ಲಭಿಸಿರುವುದಕ್ಕೆ ಪರೋಕ್ಷವಾಗಿ ಶಿಕ್ಷಕರೇ ಕಾರಣ. ಏಕೆಂದರೆ ಪ್ರತಿಯೊಬ್ಬ ಸಾಹಿತಿಗೆ ಸಾಹಿತ್ಯದ ಹುಚ್ಚು ಹಚ್ಚಿದವರು ಶಿಕ್ಷಕರೆಂದರೆ ಅತಿಶಯೋಕ್ತಿಯೇನಲ್ಲ. ಇಂದು ಕನ್ನಡ ಸಾಹಿತ್ಯವೆಂಬುದು ಹಲವಾರು ಪ್ರಕಾರಗಳಿಂದ ಕೂಡಿ ಸಂಪದ್ಭರಿತವಾಗಿದೆ. ಆ ಪ್ರಕಾರಗಳಲ್ಲಿ ‘ವಚನ ಸಾಹಿತ್ಯ’ವೂ ಒಂದು. ವಚನ ಸಾಹಿತ್ಯದ ದೃಷ್ಟಿಯಿಂದ ಹೇಳುವುದಾದರೆ ಹನ್ನೆರಡನೇ ಶತಮಾನ ಚಿನ್ನದ ಕಾಲ ಎನ್ನಬಹುದು. ಅದೊಂದು ಕನ್ನಡ ಸಾಹಿತ್ಯದ ಮೌಲಿಕ ಘಟ್ಟ. ಕಾವ್ಯವಾಹಿನಿ ಶ್ರೀಸಾಮಾನ್ಯನ ಬಳಿಗೆ ಬಂದ ಕಾಲ. ಈ ವಚನ ಸಾಹಿತ್ಯದ ಪ್ರತಿಯೊಬ್ಬ ವಚನಕಾರರೂ ಒಂದಲ್ಲ ಒಂದು ವೈಶಿಷ್ಟ್ಯದಿಂದ ನಕ್ಷತ್ರದಂತೆ ಮಿನುಗಿದ್ದಾರೆ. 
ಆ ಕಾಲದ ವಚನ ಸಾಹಿತ್ಯ ಇಂದಿಗೂ ಜೀವಂತವಾಗಿದೆ, ಚಲನಶೀಲವಾಗಿದೆ ಎಂದರೆ ಅದಕ್ಕೆ ಮೂಲ ಕಾರಣರೇ ಶಿಕ್ಷಕರು ಎಂಬುದು ನನ್ನ ಭಾವನೆ. ಯಾಕೆಂದರೆ ಮಗುವಿನ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗಿನ ವಿವಿಧ ಹಂತಗಳ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ವಚನ ಸಾಹಿತ್ಯದ ರಸ-ರುಚಿಯನ್ನು ತುಂಬಿ ಮುಂದಿನ ಪೀಳಿಗೆಗೆ ಸಾಗಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಿದ್ದಾರೆ. ಇಂತಹ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡ ಶಿಕ್ಷಕರಿಗೆ ವಚನ ಸಾಹಿತ್ಯದ ಆಳ ಅರಿವು ಇರಬೇಕಾದುದು ಅವಶ್ಯಕವಾಗಿದೆ.

ವಚನ ಸಾಹಿತ್ಯದ ಪರಿಕಲ್ಪನೆ
ಹನ್ನೆರಡನೇ ಶತಮಾನದ ಕನ್ನಡ ನೆಲದಲ್ಲಿ ಜೀವಿಸಿದ್ದ ಸಾವಿರಾರು ಶರಣರು ತಮ್ಮ ಕೈಯಲ್ಲಿನ ಕಾಯಕ, ಮನದಲ್ಲಿನ ಭಕ್ತಿ, ಮಾತಿನಲ್ಲಿನ ಸ್ಪಷ್ಟತೆಯಿಂದ ಒಡಗೂಡಿ ರಚಿಸಿದ ಸಾಹಿತ್ಯವೇ ‘ವಚನ ಸಾಹಿತ್ಯ’. ಕನ್ನಡದ ಆಡು ನುಡಿಯನ್ನು ಬಳಸಿಕೊಂಡು, ಅನುಭವ ಅಭಿವ್ಯಕ್ತಿಗಳಿಂದ ವಚನ ಸಾಹಿತ್ಯವು ಉದಯಿಸಿ ಬಂದಿದೆ. ಅನುಭಾವಿಗಳಾದ ಶರಣರು ನೀಡಿದ ವಚನ ಸಾಹಿತ್ಯವು ಜಾಗತಿಕ ಅನುಭಾವ ಸಾಹಿತ್ಯದಲ್ಲಿ ಆದ್ಯಾತ್ಮಿಕ ಸಾಧನೆ ಸಿದ್ದಿಯ ಮಹೋನ್ನತಿಯನ್ನು ಮನಮೆಚ್ಚುವಂತೆ ತೆರೆದು ತೋರುವ ಶ್ರೇಷ್ಠ ಸಾಹಿತ್ಯ ರಾಶಿ. ಮತ್ತೆ ಮತ್ತೆ ಮೊಗೆಮೊಗೆದು ಸವಿದರೂ ಮುಗಿಯಲಾರದ ಅನುಭಾವದ ರಸಪಾಕ. ಇಂದಿಗೂ ಅಚ್ಚುಮೆಚ್ಚಾದ  ಜೋತಿರ್ಮಯ ಸಾಹಿತ್ಯ.
ಹನ್ನೆರಡನೇ ಶತಮಾನದ ಕರ್ನಾಟಕದಲ್ಲಿ ನಡೆದ ಶಿವಶರಣರ ಬಹುಮುಖ ಕ್ರಾಂತಿಯು ಜಾಗತಿಕ ಇತಿಹಾಸದಲ್ಲಿ ಒಂದು ಅಪೂರ್ವ ಘಟನೆ. ಕಲುಷಿತವಾಗಿದ್ದ ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಪರಿಸರ ಈ ಕ್ರಾಂತಿಗೆ ಮೂಲವಾಗಿತ್ತು. ಶಿಕ್ಷಕರಾದ ನಾವು ಈ ಹಿನ್ನಲೆಯನ್ನು ಗಮನದಲ್ಲಿಟ್ಟುಕೊಂಡು, ವಚನಗಳನ್ನು ಇಂದಿನ ಅಗತ್ಯತೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಭೋದಿಸಬೇಕು. ಸಮಕಾಲಿನ ಸಮಸ್ಯೆಗಳನ್ನು ಕುರಿತು ಮಕ್ಕಳಲ್ಲಿ ಚಿಂತನಶೀಲ ಗುಣ ಬೆಳೆಸಿ, ಅವುಗಳಿಗೆ ಕಾರಣ ಮತ್ತು ಕಾರ್ಯ ಸಂಬಂಧವನ್ನು ಹುಡುಕಿ ಪರಿಹಾರವನ್ನು ಕಂಡುಕೊಳ್ಳುವ ಸಾಮಥ್ರ್ಯವನ್ನು ಬೆಳೆಸುವಲ್ಲಿ ವಚನ ಸಾಹಿತ್ಯ ಪೂರಕ ಅಂಶಗಳನ್ನು ಒದಗಿಸುತ್ತದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ.


ವಚನ ಸಾಹಿತ್ಯದ ಉಗಮ ಮತ್ತು ಆರಂಭ
ವಚನ ಸಾಹಿತ್ಯದ ಉಗಮದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಅನ್ಯ ಭಾಷೆಗಳ ಮಾದರಿಯನ್ನು ಯಾವುದೇ ದೃಷ್ಟಿಯಿಂದಲೂ ಅನುಕರಿಸದೇ ಅಥವಾ  ಆರಂಭವಾಗಿಟ್ಟುಕೊಳ್ಳದೇ ಕೇವಲ ಅನುಭವದಿಂದಲೇ ಮೂಡಿ ರೂಪಿತವಾದ ಈ ಪ್ರಕಾರ ಕನ್ನಡದ ಹೆಮ್ಮೆಯಾಗಿದೆ. ವಿಶ್ವ ಸಾಹಿತ್ಯಕ್ಕೆ ಕನ್ನಡವು ನೀಡಿದ ಕಾಣಿಕೆಯಾಗಿದೆ. 
ಕ್ರಿ.ಶ 11-12ನೇ ಶತಮಾನದ ಕರ್ನಾಟಕದಲ್ಲಿ ರಾಜಮನೆತನಗಳು ರಾಜ್ಯಕ್ಕಾಗಿ, ಸಿಂಹಾಸನಕ್ಕಾಗಿ ತಮ್ಮತಮ್ಮಲ್ಲೇ ಹೊಡೆದಾಡುತ್ತಿದ್ದು, ಬೇರೆ ವಿಷಯಗಳತ್ತ ಗಮನ ಹರಿಸಲು ಸಾಧ್ಯವಿಲ್ಲದಂತಾಗಿ ಜನಸಾಮಾನ್ಯರನ್ನು ನಿರ್ಲಕ್ಷಿಸಲಾಗಿತ್ತು. ಸಮಾಜದಲ್ಲಿ ಅಭದ್ರತೆ, ಅಸ್ಥಿರತೆ ತಾಂಡವವಾಡುತ್ತಿದ್ದವು. ನೆರೆಯ ತಮಿಳುನಾಡಿನಲ್ಲಿ ಪ್ರಾರಂಭವಾಗಿದ್ದ ಭಕ್ತಿ ಆಂದೋಲನ ಕರ್ನಾಟಕದಲ್ಲಿ ಬೇರೊಂದು ರೀತಿಯ ಆಂದೋಲನವನ್ನು ಹುಟ್ಟು ಹಾಕಿತು. ಸಮಾಜದ ಅಮೂಲಾಗ್ರ ಬದಲಾವಣೆಯನ್ನು ಹಮ್ಮಿಕೊಂಡು ವೈಚಾರಿಕ ಕ್ರಾಂತಿಯನ್ನುಂಟು ಮಾಡುವ ಮೂಲಕ ಜನತೆಯ ಬುದ್ದಿ ಮತ್ತು ಹೃದಯಗಳನ್ನು ತಟ್ಟಿ, ಜನಜಾಗೃತಿ ಮೂಡಲು ವಚನಕಾರರು ಉದಯಿಸಿದರು. ವಸ್ತು, ರೀತಿ, ಅಲಂಕಾರ, ರಸ ಹೀಗೆ ಎಲ್ಲ ದೃಷ್ಟಿಯಿಂದಲೂ ಸರ್ವತಂತ್ರ ಸ್ವತಂತ್ರವಾದ ಸಾಹಿತ್ಯ ಸೃಷ್ಟಯಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಮನ್ವಂತರ ಪ್ರಾರಂಭವಾಯತು.
ವಚನ ಸಾಹಿತ್ಯ ಸಹಜ ಸ್ಪೂರ್ತಿಯ ಹಿನ್ನಲೆಯನ್ನೊಳಗೊಂಡು ಶ್ರೀಸಾಮಾನ್ಯನ ಮಧ್ಯದಿಂದಲೇ ಬಂದ ಸಾಹಿತ್ಯ ಪ್ರಕಾರವಾದುದುರಿಂದ ಇದಕ್ಕೆ ಅನ್ಯಭಾಷಾ ಸಾಹಿತ್ಯ ಪ್ರಕಾರಗಳು ನೇರವಾದ ಪ್ರಭಾವ ಬೀರಿದವು ಎಂಬುದು ವಿಚಾರಣೀಯವಾದ ಅಂಶ. ವಚನಕಾರರು ಪ್ರಜ್ಞಾವಂತರಾಗಿದ್ದು, ಸಮಾಜದ ನೇರ ಅನುಭವವನ್ನು ಪಡೆದು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಂಡು ಅದರ ಸಾಕ್ಷಾತ್ಕಾರ ಮಾಡಿಕೊಂಡು ನಿಜವಾದ ನೆಲೆ-ಬೆಲೆಗಳನ್ನು ಅರಿತು ಬದುಕಿದ್ದರು. ಹೀಗಾಗಿ ಅವರಿಂದ ಹೊರಟ ಪ್ರತಿಯೊಂದು ನುಡಿಯೂ ಅಂದಿನ ಸಮಾಜದ ಪರಿಸ್ಥಿಯ ಅರಿವನ ನುಡಿಯಾಯಿತು. ಅನುಭಾವದ ನುಡುಯಾಯಿತು. ವಚನಕಾರರೇ ಈ ವಚನ ಸಾಹಿತ್ಯದ ಮೊದಲಿಗರಾದರು.
ಕನ್ನಡದಲ್ಲಿ ವಚನ ಸಾಹಿತ್ಯ ಯಾವಾಗ ಆರಂಭವಾಯಿತು ಎಂಬುದಕ್ಕೆ ಖಚಿತ ಆಧಾರಗಳಿಲ್ಲವಾದರೂ ಬಸವಣ್ಣನವರ ಕಾಲದ ಹೊತ್ತಿಗೆ ವಿಜೃಂಭಿಸುತ್ತಿದ್ದ ವಚನ ಸಾಹಿತ್ಯ, ಬಸವಣ್ಣನಿಗಿಂತ ಪೂರ್ವದಲ್ಲಿ ಇದ್ದಿತೆನ್ನಲು ಸಾಕಷ್ಟು ಪುರಾವೆಗಳಿವೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಕೆಲವು ಹಿರಿಯ ವಚನಕಾರರಾದ ದೇವರ ದಾಸಿಮಯ್ಯ, ಮಾದರಸ ಮುಂತಾದವರನ್ನು ಸ್ತುತಿಸಿರುವುದರಿಂದ ಅವರಿಗಿಂತಲೂ ಹಿಂದೆಯೇ ವಚನ ಸಾಹಿತ್ಯ ಇತ್ತೆಂಬುದು ವೇದ್ಯವಾಗುತ್ತದೆ. “ವಚನ ವಾಗ್ಮಯದ ಕಾಲ ಬಸವಣ್ಣನಿಗಿಂತ ಒಂದು ಶತಮಾನದಷ್ಟು ಹಿಂದೆಯೇ ಇತ್ತೆಂದು ಊಹಿಸಬಹುದು” ಎಂದು ಆರ್.ಸಿ.ಹಿರೇಮಠರವರು ಹೇಳುತ್ತಾರೆ. ‘ವಚನ ಸಾಹಿತ್ಯವು ಕ್ರಿ.ಶ 09-10ನೇ ಶತಮಾನದಲ್ಲಿ ಇತ್ತೆಂದು, ಈಗ ಉಪಲಬ್ದವಿರುವ ಎಷ್ಟೋ ವಚನಗಳು ಪಂಪನ ಸಾಹಿತ್ಯಕ್ಕಿಂತ ಪ್ರಾಚೀನ’ ಎಂದು ಎಲ್.ಬಸವರಾಜರವರು ಅಭಿಪ್ರಾಯ ಪಡುತ್ತಾರೆ. ಹೀಗಾಗಿ ವಚನ ಸಾಹಿತ್ಯದ ಉಗಮದ ಬಗ್ಗೆ ನಾನಾ ರೀತಿಯ ಹೇಳಿಕೆಗಳಿದ್ದಾಗ್ಯೂ 12ನೇ ಶತಮಾನದಲ್ಲಿ ಉಚ್ಪ್ರಾಯ ಸ್ಥಿತಿಯಲ್ಲಿತ್ತೆಂದು ತಿಳಿಯಬಹುದಾಗಿದೆ. 

ವಚನ ಸಾಹಿತ್ಯದ ಸ್ವರೂಪ
ವಚನ ಸಾಹಿತ್ಯದ ಉಗಮದ ಬಗ್ಗೆ ಭಿನ್ನಾಭಿಪ್ರಾಯಗಳು ಇರುವಂತೆ ಸ್ವರೂಪದ ಬಗ್ಗೆಯೂ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ. ವಚನ ಸಾಹಿತ್ಯ ಗದ್ಯಪದ್ಯಗಳ ಹದವಾದ ಮಿಶ್ರಣವಾಗಿದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ವಚನಗಳಲ್ಲಿ ಗದ್ಯದ ನಿರರ್ಗಳತೆ ಇಲ್ಲದಿದ್ದರೂ ಸರಳತೆ ಇದೆ. ಪದ್ಯದ ಕ್ರಮಬದ್ದ ಛಂದೋಗತಿ ಇಲ್ಲದಿದ್ದರೂ ಲಯವಿದೆ.
“ವಚನಗಳು ಗದ್ಯಪದ್ಯಗಳ ಮಧ್ಯದ ಇನ್ನೊಂದು ಜಾತಿಯಾಗಿದ್ದು, ಅವುಗಳನ್ನು ಲಯಾನ್ವಿತ ಗದ್ಯವೆಂದೂ, ಅನಿಶ್ಚಿತ ಲಯವಿರುವ ಪದ್ಯವೆಂದೂ ಕರೆಯಬಹುದು” ಎಂಬುದು ಎಂ.ಚಿದಾನಂದಮೂರ್ತಿಯವರ ನಿಲುವು. ಸ್ಪಷ್ಟವಾಗಿ ಹೇಳುವುದಾದರೆ ವಚನಗಳೆಂದರೆ ನಡುಗನ್ನಡ ಶೈಲಿಯ ಅನುಭಾವ ಗದ್ಯದಲ್ಲಿ ಉಸುರಿದ ಆದ್ಮಾತ್ಮಿಕ ಭಾವಗೀತೆಗಳು.
“ವಚನಗಳು ಪದ್ಯದ ಲಯವನ್ನು, ಗದ್ಯದ ಸ್ವಾಚ್ಛಂಧವನ್ನು ಒಳಗೊಂಡಿವೆ. ಗದ್ಯದಂತೆ ಓದಬಹುದು, ಪದ್ಯದಂತೆ ಹೇಳಬಹುದು, ಗೀತದಂತೆ ಹಾಡಬಹುದು” ಎಂಬುದು ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಮಾತು. ಹೀಗೆ ವಿವಿಧ ಅಭಿಪ್ರಾಯಗಳನ್ನು ಸಂಗ್ರಹಿಸಿ ಅವಲೋಕಿಸುವುದಾದರೆ ವಚನಗಳು ಕಾಲಮಾನದ ಎಲ್ಲಾ ಬಯಕೆ ಬೇಡಿಕೆಗಳನ್ನು ತನ್ನ ನಡೆ ನುಡಿಯಲ್ಲಿ  ಪರಿಮಳದಂತೆ ಅರಳಿಸಿದ ಸಂಪ್ರದಾಯಗಳನ್ನು ಗಾಳಿಗೆ ತೂರಿ, ಹೊಸ ಮಾರ್ಗವೊಂದನ್ನು ಸೃಷ್ಟಿಸಿದ ಸಾಹಿತ್ಯವಾಗಿದೆ. ಗದ್ಯಪದ್ಯಗಳೆರಡರ ಗುಣಾಂಶಗಳನ್ನು ಒಳಗೊಂಡು ತಂತಾನೇ ಅನುಭಾವ ಸಿದ್ದಿಸಿದ ಸಾಕ್ಷಾತ್ಕಾರದ ಸಾಕಾರದ ಆದ್ಯಾತ್ಮಿಕ ಭಾವಗೀತೆಗಳು ಎನಿಸುತ್ತವೆ. 

ವಚನ ಸಾಹಿತ್ಯದಲ್ಲಿನ ಜೀವನ ಮೌಲ್ಯಗಳು
‘ಜೀವನ ಮೌಲ್ಯಗಳು ಅಧಃಪತನಕ್ಕಿಳಿದಿವೆ’ ಎಂಬಂತಹ ಮಾತು ಇತ್ತೀಚಿಗೆ ಕೇಳಿಬರುತ್ತಿವೆ. ಇದನ್ನು ಹೋಗಲಾಡಿಸಿ ಮಕ್ಕಳಲ್ಲಿ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಲು ವಚನಗಳು ವಿಪುಲ ಅವಕಾಶ ಒದಗಿಸಿ ಕೊಡುತ್ತವೆ. ಪ್ರತಿಯೊಂದು ವಚನಗಳು ಮಾನವೀಯ/ಜೀವನ ಮೌಲ್ಯಗಳನ್ನು ತಮ್ಮ ಒಡಲಲ್ಲಿ ತುಂಬಿಕೊಂಡಿರುತ್ತವೆ. ಅವುಗಳನ್ನು ಗುರುತಿಸಿ ಮಕ್ಕಳಲ್ಲಿ ಬೆಳೆಸಬೇಕಾದುದು ಶಿಕ್ಷಕರಿಗೆ ಅನಿವಾರ್ಯವಾಗಿದೆ. 
ಶರಣರು ವಚನ ಸೃಷ್ಟಿಗೈದುದು ತಮಗಾಗಿ ಅಲ್ಲ, ಜನಸಾಮಾನ್ಯರಿಗಾಗಿ. ಅದು ಅವರಲ್ಲಿನ ನಿಸ್ವಾರ್ಥ ಮನೋಭಾವನೆಯನ್ನು, ನಿಷ್ಕಾಮ ಪ್ರೇಮವನ್ನು, ನಿಷ್ಕಲ್ಮಷ ಮನಸ್ಸನ್ನು ತೋರಿಸುತ್ತದೆ. ಇದನ್ನು ನಮ್ಮ ಮಕ್ಕಳಿಗೆ ಮನದಟ್ಟು ಮಾಡಿಸಬೇಕಾಗಿದೆ. ವಿಶ್ವಶಾಂತಿಗೆ ಶರಣತತ್ವ ಶಾಂತಿ ಸಮಾದಾನ ನೀಡಬಲ್ಲದು. ದ್ವೇಷ, ವಿರಸ, ದ್ವಂದ್ವ ರಹಿತ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯದ ಅಧ್ಯಯನ ಬಹಳ ಮುಖ್ಯ. ಇದನ್ನು ನಮ್ಮ ಪೀಳಿಗೆಗೆ ತಿಳಿಸಿ ಹೇಳಬೇಕಾಗಿದೆ. ವಚನ ಜ್ಞಾನ ವ್ಯಕ್ತಿಯಲ್ಲಿರುವ ಅಜ್ಞಾನವನ್ನು ಸುಟ್ಟುಹಾಕಿ ಅವನನ್ನು ಚೈತನ್ಯ ಸ್ವರೂಪನನ್ನಾಗಿಸುತ್ತದೆ. ಈ ಹಿನ್ನಲೆಯಲ್ಲಿ ವಚನ ಸಾಹಿತ್ಯದ ಮೂಲಕ ಜೀವನ ಮೌಲ್ಯಗಳು ವ್ಯಕ್ತಿಯಲ್ಲಿ ಹಾಗೂ ಸಮಾಜದಲ್ಲಿ ಹೇಗೆ ಅರ್ವಿಭಾವಿಸಿವೆ ಎಂಬುದು ತಿಳಿದು ಬರುತ್ತದೆ.
ಜ್ಞಾನ ಉದಯಿಸಿದ ಕ್ಷಣದಲ್ಲಿ ಅಜ್ಞಾನಕ್ಕೆ ಜಾಗವಿಲ್ಲ. ನಮ್ಮ ಸುತ್ತಲೂ ಆವರಿಸಿದ ಕತ್ತಲು ಒಂದು ಸಣ್ಣ ಬೆಳಕಿನಿಂದ ದೂರ ಸರಿಯುವಂತೆ, ವಿದ್ಯೆ ಮತ್ತು ಜ್ಞಾನಗಳು ವ್ಯಕ್ತಿಯ ಅಜ್ಞಾನ ತೊಲಗಿಸಿ ಸುಜ್ಞಾನ ಮೂಡಿಸುತ್ತವೆ. ವಚನಗಳ ಅಧ್ಯಯನದಿಂದ ಮಕ್ಕಳಲ್ಲಿ ಇಂತಹ ಸುಜ್ಞಾನ ಮೂಡಿ ಸರಳತೆ, ಸಜ್ಜನಿಕೆಗಳು ಮೇಳವಿಸಿ, ಭೇಧ ಮರೆತು ಸಮರಸರಿಂದ ಬಾಳುವ ವಿಶ್ವಭ್ರಾತೃತ್ವ ಗುಣಗಳನ್ನು ಬೆಳೆಸಬಹುದಾಗಿದೆ.
ಸದ್ಗುಣಗಳು ಮಾನವನಿಗೆ ಆಭರಣ ಇದ್ದಂತೆ. ವ್ಯಕ್ತಿಯು ಮೊದಲು ಗುಣಾಢ್ಯನಾಗಬೇಕು. ಪ್ರತಿಕ್ಷಣ ತನ್ನನ್ನು ತಾನೇ ಸ್ವವಿಮರ್ಶೆಗೆ ಒಳಪಡಿಸಿಕೊಂಡು ಅಂಕು-ಡೊಂಕುಗಳನ್ನು ತಿದ್ದಿಕೊಳ್ಳಲು ಶ್ರಮಿಸಬೇಕು ಎಂಬುದನ್ನು ವಚನಗಳು ತಿಳಿಸಿಕೊಡುತ್ತವೆ. 
ವಚನ ಸಾಹಿತ್ಯ ವಿಸ್ತಾರವಾದ ನೆಲೆಗಟ್ಟುಳ್ಳದ್ದಾಗಿದ್ದು, ಜೀವನದ ಮೌಲ್ಯಗಳನ್ನು ವ್ಯಕ್ತಿಯಲ್ಲಿ ಬೆಳೆಸಲು ಪೂರಕವಾಗಿವೆ. ವ್ಯಕ್ತಿಗೆ ಅವಶ್ಯಕವಾದ ಸಂಸ್ಕಾರಯುತ ಮೌಲ್ಯಗಳನ್ನು ವಚನ ಸಾಹಿತ್ಯ ನೀಡುತ್ತದೆ. ಇಂದಿನ ವಿಶ್ವದ ವಿಷಮ ಸ್ಥಿತಿಗೆ ವಚನ ಸಾಹಿತ್ಯ ಸಿದ್ದೌಷಧವೆಂದರೆ ಅತಿಶಯೋಕ್ತಿ ಏನಲ್ಲ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕಾಗಿದೆ. ವಚನ ಸಾಹಿತ್ಯವನ್ನು ತಮ್ಮ ಬಾಹ್ಯ ಮತ್ತು ಆಂತರಿಕ ಶಾಲಾ ಪರಿಸರಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಬೆಳೆಯುವಂತೆ ಮಾಡುವಲ್ಲಿ ಶಿಕ್ಷಕರ ಶ್ರಮ ಅಡಗಿದೆ. ಇದನ್ನು ಅರಿತು ನಾವೆಲ್ಲರೂ ಮುನ್ನುಗ್ಗೋಣ. ಆ ಮೂಲಕ ವಚನ ಸಾಹಿತ್ಯವನ್ನು ವಿಶ್ವಭ್ರಾತೃತ್ವಕ್ಕೆ ಬಳಸಿಕೊಂಡು ಹೊಸ ಮನ್ವಂತರಕ್ಕೆ ಸಾಕ್ಷಿಯಾಗೋಣ.
- ಆರ್.ಬಿ.ಗುರುಬಸವರಾಜ. 


ತಂಬಾಕು ಮುಕ್ತ ಗ್ರಾಮ

ತಂಬಾಕು ಮುಕ್ತ ಗ್ರಾಮ
                                      
ಪ್ರತಿದಿನ ಕಾಲೇಜಿನಿಂದ ಸಂಜೆ ಮನೆಗೆ ಬರುತ್ತಿದ್ದ ಅರುಣ ಇಂದು ಬೇಗನೇ ಬಂದಳು. ಬಂದವಳು ಕಟ್ಟೆಯ ಮೇಲೆಯೇ ಕುಳಿತು ಏನನ್ನೋ ಯೋಚಿಸತೊಡಗಿದಳು. ಇದನ್ನು ಗಮನಿಸಿದ ತಂದೆ ಕಾಳಪ್ಪ “ಮೈಯಲ್ಲಿ ಹುಷಾರಿಲ್ಲವೇನಮ್ಮ” ಎಂದು ಕೇಳಿದರು. ಯೋಚನಾ ಮಗ್ನಳಾಗಿದ್ದ ಅರುಣ ತಂದೆಯ ತಂದೆಯ ಪ್ರಶ್ನೆಗೆ ಯಾವುದೇ ಉತ್ತರ ಕೊಡಲಿಲ್ಲ. ತಂದೆ ಮುಟ್ಟಿ ಮಾತನಾಡಿಸಿದಾಗ ಎಚ್ಚೆತ್ತುಕೊಂಡ ಅರುಣ ಕಣ್ಣೀರು ಸುರಿಸತೊಡಗಿದಳು. ಧೀಡೀರನೇ ಮಗಳ ಕಣ್ಣಲ್ಲಿ ನೀರು ಬಂದದ್ದಕ್ಕೆ ತಂದೆಗೆ ಆಶ್ಚರ್ಯವಾಯಿತು. ಮಗಳನ್ನು ಒಳಗೆ ಕರೆದುಕೊಂಡು ಹೋಗಿ ಪರಿಪರಿಯಾಗಿ ಪ್ರಶ್ನಿಸಿದರು. ಆಗ ಅರುಣ ತನ್ನ ಸ್ನೇಹಿತ ಉಮೇಶ ಆಸ್ಪತ್ರೆ ಸೇರಿದ ಬಗ್ಗೆ ಹಾಗೂ ಅದರಿಂದ ಅವನಿಗಾದ ತೊಂದರೆ ಬಗ್ಗೆ ಹೇಳುತ್ತಾ ಕಣ್ಣೀರು ಸುರಿಸಿದಳು.
ತಕ್ಷಣ ಕಾಳಪ್ಪ ಉಮೇಶನನ್ನು ನೋಡಲು ಆಸ್ಪತ್ರೆಗೆ ಹೋದರು. ಜೊತೆಗೆ ತನ್ನ ಗೆಳೆಯರನ್ನೂ ಕರೆದುಕೊಂಡು ಹೋದರು.
ಮಂಚದ ಮೇಲೆ ನಿರ್ವಿಕಾರವಾಗಿ ಮಲಗಿದ್ದ ಉಮೇಶನನ್ನು ನೋಡಿದ ಆ ಪಾಲಕರು ದಂಗಾದರು. ಇವನು ನಮ್ಮೆಲ್ಲರನ್ನು ನಗಿಸುತ್ತಿದ್ದ ಉಮೇಶನೇ ಎಂಬ ಸಂದೇಹ ಮೂಡಿತು. ಅವನನ್ನು ಮಾತನಾಡಿಸಿದರು. ಆದರೆ ಉಮೇಶನಿಗೆ ಮಾತನಾಡಲಾಗಲಿಲ್ಲ. ಕೇವಲ ಕೈಸನ್ನೆ ಮಾಡಿದ. ಇವನಿಗಾದ ತೊಂದರೆಯೇನು ಎಂದು ಯೋಚಿಸುತ್ತಿರುವಾಗ ವೈದ್ಯರು ಕೊಠಡಿಗೆ ಬಂದರು.
“ಡಾಕ್ಟ್ರೆ ನಮ್ಮ ಉಮೇಶನಿಗೆ ಏನಾಗಿದೆ?” ಎಂದರು ಕಾಳಪ್ಪ.
“ಈ ಹುಡುಗನಿಗೆ ಬಾಯಿಯ ಕ್ಯಾನ್ಸರ್ ಆಗಿದೆ” ಎಂದರು ವೈದ್ಯರು.
“ಏನು! ಕ್ಯಾನ್ಸರೇ...? ಈ ಹುಡುಗನಿಗೆ ಏಕೆ ಬಂತು?” ಎಂದರು ಕಾಳಪ್ಪ.
“ಈ ಹುಡುಗ ಗುಟ್ಕಾ ತಿನ್ತಾ ಇದ್ದನಂತೆ. ಅದ್ಕೆ ಬಾಯಿಯ ಕ್ಯಾನ್ಸರ್ ಬಂದಿದೆ” ಎಂದರು ವೈದ್ಯರು. 
“ಇದಕ್ಕೆ ಪರಿಹಾರ ಇಲ್ಲವೇ ಡಾಕ್ಟ್ರೇ...?” ಎಂದರು ಅವರಲ್ಲೊಬ್ಬ. 
“ಕ್ಯಾನ್ಸರ್‍ಗೆ ಶಾಶ್ವತ ಪರಿಹಾರ ಇಲ್ಲ. ಈಗ ತಾತ್ಕಾಲಿಕ ಚಿಕಿತ್ಸೆ ನೀಡುತ್ತಿದ್ದೇವೆ. ಇದು ಬರಲಾರದಂತೆ ನೋಡಿಕೊಳ್ಳುವುದೇ ಶಾಶ್ವತ ಪರಿಹಾರ” ಎಂದರು ವೈದ್ಯರು.
ಉಮೇಶನಿಗೆ ಒದಗಿದ ಪರಿಸ್ತಿತಿ ಕಂಡು ಮರುಗುತ್ತಾ ಮನೆಗೆ ಹಿಂದಿರುಗಿದರು. ಅಂದು ಸಂಜೆ ಊರ ಚಾವಡಿ ಹತ್ತಿರ ‘ಬೀದಿ ನಾಟಕ’ ನಡೆಯುವುದಾಗಿ ಡಂಗುರ ಹಾಕುತ್ತಿದ್ದರು.
ಸಂಜೆಯಾಗುತ್ತಿದ್ದಂತೆ ಊರಿನ ಜನರೆಲ್ಲ ಚಾವಡಿ ಹತ್ತಿರ ಸೇರತೊಡಗಿದರು. ನಾಟಕ ತಂಡದವರು ಬಂದವರನ್ನೆಲ್ಲಾ ಸ್ವಾಗತಿಸಿ ಕೂಡಿಸುತ್ತಿದ್ದರು. ಕತ್ತಲಾಗುತ್ತಿದ್ದಂತೆ ನಾಟಕ ಪ್ರಾರಂಭವಾಯಿತು. 
ನಾಟಕ : ಒಂದಾಗಿ ಮುಂದಾಗಿ ತಂಬಾಕು ಬಿಟ್ಹಾಕಿ
(ಕಥಾ ನಿರೂಪಕ ಎಲ್ಲರಿಗೂ ವಂದಿಸುತ್ತಾ ರಂಗದ ಮಧ್ಯ ಬರುತ್ತಾನೆ)
ನಿರೂಪಕ; ಆತ್ಮೀಯ ಬಂಧುಗಳೇ, ಇಂದು ನಮ್ಮ ನಡುವೆ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳು ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ನಮಗೆ ಗೊತ್ತಿಲ್ಲದೇ ನಾವೇ ಸೃಷ್ಟಿಸಿಕೊಂಡ ಸಮಸ್ಯೆಯೊಳಗೆ ಒದ್ದಡುತ್ತಿದ್ದೇವೆ. ಅವುಗಳಿಂದ ಹೇಗೆ ಹೊರಬರಬೇಕೆಂಬುದು ತಿಳಿಯದೇ ತೊಳಲಾಡುತ್ತಿದ್ದೇವೆ. ಅಂತಹ ಸಮಸ್ಯೆಗಳಲ್ಲಿ ಇಂದು ಅತ್ಯಂತ ವ್ಯಾಪಕವಾಗಿ ಬೆಳೆಯುತ್ತಿರುವ ಸಮಸ್ಯೆ ಎಂದರೆ ತಂಬಾಕು ಚಟ. ಇದು ನಮಗೆ ಹೇಗೆ ಅಂಟಿಕೊಂಡಿತು? ಇದರ ಪರಿಣಾಮಗಳೇನು? ಇದರಿಂದ ಹೊರಬರುವುದು ಹೇಗೆ? ಎಂಬುದನ್ನು ‘ಒಂದಾಗಿ ಮುಂದಾಗಿ ತಂಬಾಕು ಬಿಟ್ಹಾಕಿ’ ಎಂಬ ನಾಟಕದ ಮೂಲಕ ತೋರಿಸಲು ಪ್ರಯತ್ನಿಸಿದ್ದೇವೆ. ನೋಡಿ, ನೀವೂ ಬದಲಾಗಿ, ಇತರರನ್ನು ಬದಲಾಯಿಸಿ.
ದೃಶ್ಯ – 1 (ಮನೆಯ ದೃಶ್ಯ)
[ಯಂಕಪ್ಪ (ನಡುವಸ್ಸಿನವನು) ರಂಗದ ಮಧ್ಯ ಬೀಡಿ ಸೇದುತ್ತಾ ಕುಳಿತ್ತಿದ್ದಾನೆ. ಹೆಂಡತಿ ಸಾಕಮ್ಮ ಒಂದು ಮೂಲೆಯಲ್ಲಿ ಕುಳಿತು ಒಲೆ ಊದುತ್ತಾ ಅನ್ನ ಬೇಯಿಸುತ್ತಿದ್ದಾಳೆ]
ಸಾಕಮ್ಮ: ಏಯ್ ಮಾರಾಯ! ಅದೇನು ಆಗಿಂದ ಬೀಡು ಸೇದುತ್ತಾ ಕುಂತಿದ್ದೀ, ಹೋಗಿ ಒಂದಿಷ್ಟು   ಒಣ ಕಟ್ಟಿಗೆನಾದ್ರೂ ತರಬಾರದೇ, ಬೇಗನೇ ಅಡಿಗೆ ಮಾಡಿಕೊಂಡು ಹೊಲಕ್ಕ  ಹೋಗಬೇಕು.
ಯಂಕಪ್ಪ: ನನ್ಗೆ ಬ್ಯಾರೆ ಕೆಲ್ಸ ಐತೆ. ಬೇಕಾದ್ರೆ ನೀನೇ ಹೋಗಿ ತಗಂಡು ಬಾ...
ಸಾಕಮ್ಮ: ನೀನು ಮಾಡಾದು ಅಷ್ಟ್ರಾಗ ಐತೆ. ಒಂದಿಷ್ಟು ಲಗೂನ ಹೋಗಿ ತಗಂಡು ಬಾ...
ಯಂಕಪ್ಪ: ನಿಂದೊಳ್ಳೆ ಕಾಟ ಆತಲ್ಲ, ಮಗಳು ನಿಂಗವ್ವನ ಕಳುಸು.
ಸಾಕಮ್ಮ: ಅವ್ಳು ಶಾಲಿಗೆ ಹೋಗ್ಯಾಳ.
ಯಂಕಪ್ಪ: ಶಿವು ಎಲ್ಲಗೆ ಹೋಗ್ಯಾನ?
ಸಾಕಮ್ಮ: ಎಲ್ಲೋ ಆಡಾಕ ಹೋಗಿರಬೇಕು. ಸಾಲಿಗೆ ಹೋಗು ಅಂದ್ರ ತಿರುಗಾಕ ಹೋಗ್ಯಾನ.
(ಇವರು ಮಾತನಾಡುತ್ತಿರುವಾಗ ಶಾಲೆ ಮಾಸ್ತರು ಬರುವರು)
ಮಾಸ್ತರ: ಯಂಕಪ್ಪ..... ಯಂಕಪ್ಪ.....
ಯಂಕಪ್ಪ: ಬರ್ರೀ,,,, ಮಾಸ್ತರ, ಯಾಕ ಇತ್ಲಾಗ ಬಂದ್ರಲ್ಲ.
ಮಾಸ್ತರ: ನಿಮ್ಮ ಶಿವು ಇವತ್ತು ಸಾಲಿಗೆ ಬಂದಿದಿಲ್ಲ. ಇವತ್ತು ಮಕ್ಕಳನ್ನು ನೋಡಾಕ ಡಾಕ್ಟ್ರು ಬರ್ತಾರ. ಅದಕ್ಕ ಆರಾಮ ಅದಾನೋ ಇಲ್ಲೋ ನೋಡಿ ಕರ್ಕೊಂಡು ಹೋಗೋಣಾಂತ ಬಂದೆ.
ಯಂಕಪ್ಪ: ಆರಾಮ ಅದಾನ್ರಿ. ಎಲ್ಲೋ ಆಡಾಕ ಹೋದಾನು ಮನಿಗೇ ಬಂದಿಲ್ಲ.
ಮಾಸ್ತರ: ಒಂದೀಟು ಎಲ್ಲಿ ಅದಾನ ನೋಡಿ ಕಳಿಸು ಬಾರಪ್ಪ
ಯಂಕಪ್ಪ: ನಮ್ಮ ತಮ್ಮನ ಮನಿ ಹತ್ರ ಇರಬೌದು. ನೊಡ್ಕೋಂಡು ಬರ್ತೀನಿ ತಡಿರಿ.
ಮಾಸ್ತರ: ನಾನು ಬರ್ತಿನಿ ನಡಿ ಹೋಗೋಣ.
(ಇಬ್ರೂ ಶಿವುನ್ನ ಹುಡುಕಿಕೊಂಡು ಹೋಗುವರು)
ದೃಶ್ಯ – 2 (ರಸ್ತೆ)
(ಬೀಡಿ ಅಂಗಡಿ ಪಕ್ಕದಲ್ಲಿ ಶಿವು ಗುಟ್ಕಾ ತಿನ್ನುತ್ತಾ ನಿಂತಿದ್ದಾನೆ. ತನ್ನ ತಂದೆ ಮತ್ತು ಮಾಸ್ತರರು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿದ ಶಿವು ಬಾಯಲ್ಲಿನ ಗುಟ್ಕಾವನ್ನು ಅವರಿಗೆ ಕಾಣದಂತೆ ಉಗುಳುವನು)
ಯಂಕಪ್ಪ: ಯಾಕಲೇ ಶಿವು ಸಾಲಿ ಬಿಟ್ಟು ಇಲ್ಲೇನ ಮಾಡಕತ್ತೀದಿ.
ಶಿವು: ಏನೂ ಇಲ್ಲಪ್ಪ. ಯಾಕೋ ಬೇಜಾರಾತು. ನಾಳೆ ಹೋಕಿನಿ.
ಮಾಸ್ತರ: ಶಿವು ನೀನು ಜಾಣ ಹುಡುಗ. ಆದ್ರೂ ಈ ರೀತಿ ಸುಮ್ಮಸುಮ್ನ ಸಾಲಿ ಬಿಟ್ಟು ತಿರುಗಾಡೋದು ಸರಿಯಲ್ಲ.
ಯಂಕಪ್ಪ: ಅದೇನಲೇ ಬಾಯಾಗಿರೋದು? ಏನಾ ತಿನ್ನಾಕ ಹತ್ತಿದಿ.
ಶಿವು: ಏನೂ ಇಲ್ಲ ಅಂತ ಹೇಳಿದ್ನಲ್ಲಪ್ಪ.
ಯಂಕಪ್ಪ: ಏನೋ ಉಗುಳಿದಂಗಾತು? ಬಾಯಿ ತೆಗಿ ನೋಡೋಣು.
(ಯಂಕಪ್ಪ ಶಿವುನ ಬಾಯಿ ತೆರೆಸಿ ನೋಡುತ್ತಾನೆ)
ಯಂಕಪ್ಪ: ಮೇಸ್ಟ್ರೇ ಇವ್ನು ಗುಟ್ಕಾ ತಿಂದಾನ್ರಿ,,,,,
ಮಾಸ್ತರ: ಏನಪ್ಪ ಶಿವು ನೀನೂ ಗುಟ್ಕಾ ತಿನ್ನಾಕ ಶುರು ಮಾಡಿದ್ಯಾ,,,?
ಶಿವು: ಇಲ್ರೀ,,,, ಸಾರ್, ಆ ಬೀರ ನನ್ಗೆ ಈ ಚಟ ಕಲಿಸ್ಯಾನ್ರಿ,,,,
(ಇದನ್ನು ಕೇಳಿದ ಯಂಕಪ್ಪನಿಗೆ ಸಿಟ್ಟು ಬಂದು ಶಿವುನ ಹೊಡಿಯಾಕ ಶುರು ಮಾಡಿದ. ಅಲ್ಲಿಗೆ ಇಬ್ಬರು ಪಾಲಕರು ಬರುವರು)
ಒಬ್ಬ: ಯಾಕೋ ಯಂಕಪ್ಪ, ಶಿವುನ ರಸ್ತ್ಯಾಗ ನಿಲ್ಲಿಸಿಕೊಂಡು ಹೊಡಿತೀದಿ. ಅಂತಾದು ಅವ್ನು ಏನು ಮಾಡ್ಯಾನ,,,?
ಯಂಕಪ್ಪ: ಬರೀ ಹೊಡಿಯಾದ ಅಲ್ಲ ಸಾಯ್ಸೇ ಬಿಡಬೇಕು ಇಂತಾರ್ನ. ಈ ವಯಸ್ಸಿಗೇ ಗುಟ್ಕಾ ತಿನ್ನಾದ ಕಲ್ತಾನ.
ಇನ್ನೊಬ್ಬ: ಇವ್ನೊಬ್ಬ ಅಲ್ಲಪ್ಪ. ನಮ್ಮ ಹುಡುಗನೂ ತಿನ್ತಾನ. ಅದ್ರಾಗ ಹೊಲದಾಗ ಕಣದಾಗ ಕಳವೀಲೆ ಸಿಗರೇಟು, ಬೀಡಿ ಸೇದ್ತಾನ. ಏನು ಹುಡುಗರೋ ಏನೋ ಎಲ್ಲಾ ಹಾಳಾಗಿ ಹೋಗಾಕ ಹತ್ಯಾರ.
ಮಾಸ್ತರ: ಇದಕ್ಕೆಲ್ಲ ನೀವ ಕಾರಣರಪ್ಪ. ನಿಮ್ಮ ಮಕ್ಕಳ ಮುಂದ ಕುತುಗೊಂಡು ಬೀಡಿ, ಸಿಗರೇಟು ಸೇದ್ತಿರೀ, ಗುಟ್ಕಾ ತಿಂತೀರಿ. ಅವ್ರಿಂದನ ಅಂಗಡಿಯಿಂದ ತರಿಸ್ತೀರಿ. ಹಿಂಗೆಲ್ಲ ಮಾಡೋದ್ರಿಂದ ಅವ್ರೂ ಕಲಿತಾರ. ಅದೂ ಅಲ್ಲದ ಟಿ.ವಿ, ಸಿನೆಮಾಗಳು ನಮ್ಮ ಮಕ್ಕಳು ಹಾಳಾಗಾಕ ಕಾರಣ ಆಗ್ಯಾವು. ಅದ್ರಲ್ಲಿ ಬರೋ ದೃಶ್ಯಗಳಲ್ಲಿ ಬೀಡಿ, ಸಿಗರೇಟು ಸೇದೋದು, ಗುಟ್ಕಾ ತಿನ್ನೋದು ನೋಡ್ತಾರ. ಅವ್ರೂ ಅದ್ನ ಮಾಡತಾರ. ಮತ್ತೆ ಕೆಲವರು ಸ್ನೇಹಿತರಿಂದ ಕಲಿತಾರ.
ಯಂಕಪ್ಪ: ಹೌದ್ರೀ,,, ಮಾಸ್ತರ, ನೀವು ಹೇಳೋದು ಖರೇ ಐತಿ. ನಮ್ಮ ಶಿವು ತನ್ನ ಗೆಳೆಯನಿಂದ ಕಲ್ತೀನಿ ಅಂತ ಹೇಳಿದ್ನಲ್ಲ.
ಮಾಸ್ತರ: ಸ್ನೇಹಿತರನ್ನು ಒಲಿಸಿಕೊಳ್ಳೋದಕ್ಕಾಗಿ, ಅವ್ರ ಒತ್ತಾಯಕ್ಕಾಗಿ ಅಥವಾ ಅನುಕರಣೆಯಿಂದ ಈ ಎಲ್ಲಾ ಚಟ ಕಲಿತಾರ.
ಒಬ್ಬ: ಮೇಷ್ಟ್ರೇ ಮೊನ್ನೆ ನಾ ಬೆಂಗಳೂರಿಗೆ ಹೋದಾಗ ಅಲ್ಲಿ ರಸೆ ಪಕ್ಕದಾಗ ದೊಡ್ಡದೊಡ್ಡ ಬೋರ್ಡಿನಾಗ ಬೀಡಿ, ಸಿಗರೇಟು ಸೇದುವ, ಗುಟ್ಕಾ ತಿನ್ನುವ ಬೋರ್ಡು ಹಾಕಿದ್ದನ್ನ ನೋಡ್ದೆ. ಈ ರೀತಿ ಹಾಕೋದ್ರಿಂದನೂ ಮಕ್ಕಳು ದೊಡ್ಡವರು ತಂಬಾಕು ಚಟಕ್ಕ ಬಲಿ ಆಗ್ತಾರ.
ಮಾಸ್ತರ: ಹೌದಪ್ಪ, ಬರೀ ಬೆಂಗಳೂರಿನಾಗ ಮಾತ್ರ ಅಲ್ಲ. ದೊಡ್ಡ ದೊಡ್ಡ ಹಳ್ಯಾಗ ಅಂಗಡಿ ಮುಂದ ಅಂತಹ ಬೋರ್ಡು ಹಾಕಿರತಾರ. ಅವು ನಮ್ಮನ್ನ, ನಮ್ಮ ಮಕ್ಕಳನ್ನ ತುಂಬಾ ದಾರಿ ತಪ್ಸಾಕ ಹತ್ಯಾವು. ಇದ್ನೆಲ್ಲ ಹೆಂಗ ತಡೀಬೇಕೋ ತಿಳೀವಲ್ದು.
ಯಂಕಪ್ಪ: ತಂಬಾಕು ಸೇವಿಸೋದ್ರಿಂದ ಏನೇನು ಆಗ್ತೈತಿ ಒಂದೀಟು ಹೇಳ್ರೀ ಮಾಸ್ತರ...
ಮಾಸ್ತರ: ಅದರ ಬಗ್ಗೆ ನನ್ಗೆ ಅಷ್ಟೊಂದು ತಿಳಿದಿಲ್ಲ. ಇವತ್ತು ಸಾಲ್ಯಾಗ ಮಕ್ಕಳ ಆರೋಗ್ಯ ತಪಾಸಣೆ ಮಾಡೋಕೆ ಡಾಕ್ಟ್ರು ಬರ್ತಾರ. ನೀವು ಅಲ್ಲಿಗೆ ಬಂದ್ರ ಅವ್ರನ್ನ ಕೇಳಿ ತಿಳ್ಕೋಬಹುದು. ನಿಮ್ಮ ಜೊತೆಗೆ ಇನ್ನೂ ಒಂದಿಷ್ಟು ಜನಾನ ಕರ್ಕೋಂಡು ಬರ್ರೀ,,,,. ನಾ ಈಗ ಸಾಲ್ಯಾಕ ಹೋಕೀನಿ.
( ಎಲ್ಲರೂ ಹೊರಡುವರು)
ದೃಶ್ಯ – 3 (ಶಾಲೆಯ ದೃಶ್ಯ)
(ಪಾಲಕರು, ಯುವಕರು, ಮಹಿಳೆಯರು ಒಬ್ಬೊಬ್ಬರಾಗಿ ಶಾಲೆಯ ಆವರಣದೊಳಗೆ ಬರುತ್ತಿದ್ದಾರೆ)
ಮಾಸ್ತರ: ಬರ್ರೀ,,, ಬರ್ರೀ,,, ಕುತ್ಕೊಳ್ಳಿ, ಆಗಲೇ ಡಾಕ್ಟ್ರು ಬಂದಾರ. ನಮ್ಮ ಸಾಲಿ ಹುಡುಗರನ್ನೂ ಕರ್ಕೊಂಡು ಬರ್ತೀವಿ. ನೀವೆಲ್ಲಾ ಇಲ್ಲೇ ಕುತ್ಕೋಳ್ಳಿ. ಈಗ ಬಂದೆ. 
(ಮಾಸ್ತರರು ಹುಡುಗರನ್ನು ಸಾಲಾಗಿ ಕರೆತರುವರು. ಎಲ್ಲರನ್ನೂ ವೃತ್ತಾಕಾರವಾಗಿ ಕುಳ್ಳಿರಿಸುವರು. ವೈದ್ಯರನ್ನು ಕರೆತಂದು ವೃತ್ತದ ಮದ್ಯದಲ್ಲಿ ನಿಲ್ಲಿಸುವರು. ವೈದ್ಯರು ತಮ್ಮ ಬಾಷಣ ಪ್ರಾರಂಭಿಸುವರು)
ಡಾಕ್ಟರು: ಆತ್ಮೀಯ ಪಾಲಕ ಪೋಷಕರೇ, ನೆಚ್ಚಿನ ಯುವಕರೇ, ಶಿಕ್ಷಕರೇ, ಮತ್ತು ಮುದ್ದು ಮಕ್ಕಳೇ, ಇಂದು ದೇಶವನ್ನು ಕಾಡುತ್ತಿರುವ ಆರೋಗ್ಯ ಸಂಬಂಧಿ ಪಿಡುಗುಗಳಲ್ಲಿ ಅತೀ ದೊಡ್ಡ ಪಿಡುಗು ಎಂದರೆ ತಂಬಾಕು. ಇದು ಏಡ್ಸ್, ಡ್ರಗ್ಸ್, ಕುಡಿತ, ಆತ್ಮಹತ್ಯೆ ಮತ್ತು ಕೊಲೆಗಿಂತ ಹೆಚ್ಚು ಅಪಾಯಕಾರಿ. ಭಾರತದಲ್ಲಿ ಪ್ರತಿವರ್ಷ ತಂಬಾಕು ಕ್ಯಾನ್ಸರ್‍ಗೆ ಬಲಿಯಾಗುತ್ತಿರುವವರ ಸಂಖ್ಯೆ 10 ಲಕ್ಷ ಮೀರುತ್ತಿದೆ ಎಂದು `ಭಾರತೀಯ ವೈದ್ಯ ಸಂಸ್ಥೆ’(ಂIಒS)ಹೇಳಿದೆ. ಇದರಲ್ಲಿ ಪುರುಷÀರ ಸಂಖ್ಯೆ ಅಧಿಕ. ಅದರಲ್ಲೂ ಧೂಮಪಾನಿಗಳ ಸಂಖ್ಯೆ ಇನ್ನೂ ಅಧಿಕ. ಶೇ.56 ರಷ್ಟು ಪುರುಷರು ಮತ್ತು ಶೇ.44 ರಷ್ಟು ಮಹಿಳೆಯರು ತಂಬಾಕು ಕ್ಯಾನ್ಸರ್‍ಗೆ ಬಲಿಯಾಗುತ್ತಿದ್ದಾರೆ. ಶೇ.82 ರಷ್ಟು ಪ್ರಕರಣಗಳಲ್ಲಿ ಶ್ವಾಸಕೋಶದ ಕಾಯಿಲೆ, ಪುಪ್ಪುಸದ ಕ್ಯಾನ್ಸರ್‍ಗೆ ತಂಬಾಕು ಕಾರಣ ಎಂದು ಧೃಢಪಟ್ಟಿದೆ. ಅಲ್ಲದೇ ಕಳೆದ ದಶಕಕ್ಕಿಂತ ಈ ದಶಕದಲ್ಲಿ ತಂಬಾಕು ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ.
ಒಬ್ಬ: ಡಾಕ್ಟ್ರೇ, ಇತ್ತೀಚಿಗೆ ಯುವಕರೂ ಮಹಿಳೆಯರೂ ಈ ಚಟಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.
ಡಾಕ್ಟರು: ಹೌದಪ್ಪ, ಇತ್ತೀಚಿನ ವರ್ಷಗಳಲ್ಲಿ ತಂಬಾಕು ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮಕ್ಕಳು ಮತ್ತು ಯುವಜನತೆ ಅಧಿಕ ಪ್ರಮಾಣದಲ್ಲಿ ಈ ಪಿಡುಗಿಗೆ ತುತ್ತಾಗುತ್ತಿರುವುದು ಅಘಾತಕಾರಿಯಾಗಿದೆ. ಒಂದು ಸಮೀಕ್ಷೆ ಪ್ರಕಾರ 12-14 ವಯೋಮಾನದ ಶೇ.21 ಬಾಲಕರು ಮತ್ತು ಶೇ.2 ಬಾಲಕಿಯರು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ಅದು ತುಂಬಾ ಶೋಚನೀಯ ಸಂಗತಿಯಾಗಿದೆ.
ಒಬ್ಬ ಮಹಿಳೆ: ತಂಬಾಕು ತಿನ್ನೊದ್ರಿಂದ, ಬೀಡಿ ಸಿಗರೇಟು ಸೇದೋದ್ರಿಂದ ಏನೇನಾಗ್ತೈತಿ ಹೇಳ್ರೀ ಡಾಕ್ಟ್ರೇ,,,
ಡಾಕ್ಟರು: ಈಗಾಗಲೇ ನಮಗೆಲ್ಲಾ ತಿಳಿದಿರುವಂತೆ ತಂಬಾಕಿನಲ್ಲಿರುವ ‘ನಿಕೋಟಿನ್’ ಅತ್ಯಂತ ವಿಷಕಾರಿ ಎಂಬುದು ಸಾಬೀತಾಗಿದೆ. ಇಂತಹ ನಿಕೋಟಿನ್ ನಮ್ಮ ಬಾಯಿಗೆ ಪ್ರವೇಶಿಸಿದ 10 ಸೆಕೆಂಡುಗಳಲ್ಲಿ ಮೆದುಳಿಗೆ ಹೋಗಿ ‘ಡೊಪಾಮಿನ್’ ಎಂಬ ವಿಷವನ್ನು ಉತ್ಪಾದಿಸಿ ಮೆದುಳಿಗೆ ಬರುವ ರಕ್ತ ಸಂಚಾರಕ್ಕೆ ತಡೆಯೊಡ್ಡುತ್ತದೆ. ಕ್ರಮೇಣವಾಗಿ ಇದು ಬಾಯಿಯ ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ಧೂಮಪಾನಿಗಳು ಶ್ವಾಸಕೋಶದ ಕ್ಯಾನ್ಸರ್‍ಗೆ ತುತ್ತಾಗುವರು, ಅಲ್ಲದೇ ಅನ್ನನಾಳದ, ಹೊಟ್ಟೆಯ, ಮೂತ್ರಪಿಂಡದ, ಮೂತ್ರಕೋಶದ, ಮೇದೋಜೀರಕ ಗ್ರಂಥಿಯ, ಗರ್ಭಕೋಶದ ಕ್ಯಾನ್ಸರ್‍ಗೆ ಕಾರಣವಾಗಬಹುದು.
ಇನ್ನೋಬ್ಬ: ತಂಬಾಕು ಸೇವನೆಯಿಂದ ಇನ್ನೂ ಏನೇನು ತೊಂದರೆಗಳು ಆಗ್ತಾವೆ ಡಾಕ್ಟ್ರೆ,,,
ಡಾಕ್ಟರು: ತಂಬಾಕು ತಿನ್ನೋದ್ರಿಂದ ಬಾಯಿಯಲ್ಲಿನ ಲಾಲಾರಸದ ಉತ್ಪತ್ತಿ ಕಡಿಮೆಯಾಗುತ್ತದೆ. ಬಾಯಿಯಲ್ಲಿ ಉಷ್ಣಾಂಶ ಹೆಚ್ಚಿ ಜೀವಕೋಶಗಳು ನಾಶವಾಗುತ್ತವೆ. ತಂಬಾಕು ಹೃದಯ ಮತ್ತು ರಕ್ತನಾಳಗಳ ರೋಗಕ್ಕೆ ದಾರಿಮಾಡಿಕೊಡುತ್ತದೆ. ಹೃದಯಾಘಾತ, ಎದೆನೋವು. ಲಕ್ವ, ಕಾಲಿನ ಗ್ಯಾಂಗ್ರಿನ್ ಆಗಬಹುದು. ಧೂಮಪಾನಿಗಳಲ್ಲಿ ಕ್ಷಯ ಉಂಟಾಗುತ್ತದೆ. 
ಯಂಕಪ್ಪ: ತಂಬಾಕಿನಾಗ ಇನ್ನೂ ಏನೇನು ಇರತೈತಿ ಡಾಕ್ಟ್ರೇ,,,,?
ಡಾಕ್ಟರು: ತಂಬಾಕನ್ನು ಹದಗೊಳಿಸಲು ಮತ್ತು ಸ್ವಾದಿಷ್ಟಗೊಳಿಸಲು 4 ಸಾವಿರಕ್ಕಿಂತ ಹೆಚ್ಚಿನ ವಿಷಪೂರಿತ ರಸಾಯನಿಕಗಳನ್ನು ಬೆರೆಸುತ್ತಾರೆ. ಅಲ್ಲದೇ ಅದರಲ್ಲಿ ಕೊಲಿಡೀಸ್, ಅಮೋನಿಯಾ, ಪೈಯರಡೀನ್, ಕಾರ್ಬನ್ ಮೋನಾಕ್ಸೈಡ್ ಅರ್ಸೆನಿಕ್, ಸೈನೈಡ್, ಫಾರ್ಮಾಲೈಡ್‍ಗಳೆಂಬ ಪ್ರತ್ಯೇಕ ವಿಷಕಾರಿಗÀಳಿವೆ. ತಂಬಾಕು ಸೇವನೆಯಿಂದ ಇವು ನಮ್ಮ ದೇಹವನ್ನು ಸೇರುತ್ತವೆ. ತಂಬಾಕು ಸೇವನೆ ನಮಗೆ ಎರಡು ರೀತಿಯ ನಷ್ಟವನ್ನು ತರುತ್ತದೆ. 
ಇನ್ನೊಬ್ಬ: ಅದು ಹೇಗೆ ಡಾಕ್ಟ್ರೇ,,,,?
ಡಾಕ್ಟರು: ಮೊದಲನೆಯದಾಗಿ ವ್ಯಕ್ತಿಯ ಸ್ಥಾನಮಾನ ಗೌರವ ಕಡಿಮೆಯಾಗುತ್ತದೆ. ಎರಡನೆಯದಾಗಿ ಆರ್ಥಿಕ ನಷ್ಟವಾಗುತ್ತದೆ.
ಮತ್ತೊಬ್ಬ: ಆರ್ಥಿಕ ನಷ್ಟ ಹೆಂಗಾಕೈತಿ ಡಾಕ್ಟ್ರೆ,,,,?
ಡಾಕ್ಟರು: ಹೇಗೆಂದರೆ, ಒಬ್ಬ ವ್ಯಕ್ತಿ ತಂಬಾಕು ಸೇವನೆಗಾಗಿ(ಬೀಡಿ/ಸಿಗರೇಟು/ಗುಟ್ಕಾ/ಪಾನ್ ಮಸಾಲ ಇತ್ಯಾದಿ) ದಿನವೊಂದಕ್ಕೆ 30-50 ರೂ. ಖರ್ಚು ಮಾಡುತ್ತನೆ ಎಂದುಕೊಂಡರೆ, ಒಂದು ವರ್ಷಕ್ಕೆ 18,000 ರೂ.ಗಳನ್ನು ಹಾಗೂ 10 ವರ್ಷಕ್ಕೆ 1,80,000 ರೂ.ಗಳನ್ನು ಖರ್ಚು ಮಾಡುತ್ತಾನೆ. ಇಷ್ಟೊಂದು ಮೊತ್ತದ ಹಣವನ್ನು ತಂಬಾಕು ಸೇವನೆಗಾಗಿ ಖರ್ಚು ಮಾಡುವ ವೇಳೆಗೆ ಅವನ ಆರೋಗ್ಯ ಹದಗೆಟ್ಟಿರುತ್ತದೆ. ಆರೋಗ್ಯ ಸುಧಾರಣೆಗಾಗಿ ಲಕ್ಷ ಲಕ್ಷಗಳೇ ಖರ್ಚಾಗಬಹುದು. ಹೀಗೆ ತಂಬಾಕು ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತದೆ. 
ಇನ್ನೊಬ್ಬ ಮಹಿಳೆ: ತಂಬಾಕು ಚಟ ಬಿಡುವುದರಿಂದ ನಮಗಾಗುವ ಲಾಭಗಳೇನು?
ಡಾಕ್ಟರು: ತಂಬಾಕು ಚಟ ಬಿಡುವುದರಿಂದ 2 ರೀತಿಯ ಲಾಭಗಳಿವೆ. ಅವುಗಳೆಂದರೆ 1. ದೈಹಿಕ ಲಾಭಗಳು. ಅಂದರೆ ಕ್ಯಾನ್ಸರ್ ಮತ್ತು ಹೃದಯ ರೋಗದಿಂದ ಮುಕ್ತಿ ಸಿಗುತ್ತದೆ. ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ನಮ್ಮ ಪ್ರೀತಿ ಪಾತ್ರರು ಧೂಮಪಾನದ ಅಪಾಯದಿಂದ ಪಾರಾಗುವರು. ಬಾಯಿ ಮತ್ತು ಹಲ್ಲುಗಳು ಸ್ವಚ್ಚವಾಗಿ ಮತ್ತು ಆರೋಗ್ಯವಾಗಿ ಇರುತ್ತವೆ. 2. ಸಾಮಾಜಿಕ ಲಾಭಗಳು. ಅಂದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಗೌರವ ಹೆಚ್ಚುತ್ತದೆ. ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಹಣದ ಉಳಿತಾಯದ ಜೊತೆಗೆ ಆರೋಗ್ಯ ಸುಧಾರಣೆ ಆಗುತ್ತದೆ  ಮತ್ತು ಇತರರಿಗೆ ಮಾದರಿಯಾಗುತ್ತದೆ.
ಮತ್ತೊಬ್ಬ ಮಹಿಳೆ: ತಂಬಾಕು ಚಟ ಹೇಗೆ ಬಿಡಬೇಕು ಮತ್ತು ಬಿಡಿಸಬೇಕು?
ಡಾಕ್ಟರು: ಬೀಡಿ,ಸಿಗರೇಟು, ಗುಟ್ಕಾ, ಜರ್ದಾಗಳು ಸುಲಭವಾಗಿ ಕೈಗೆ ಸಿಗುವಂತೆ ಇಡಬಾರದು. ಅಂದರೆ ದಿನನಿತು ಓಡಾಡುವ ಜಾಗದಲ್ಲಿ ಕಣ್ಣಿಗೆ ಕಾಣದಂತೆ ದೂರ ಇಡಬೇಕು. 
ಯಂಕಪ್ಪ: ಬೀಡಿ, ಸಿಗರೇಟು ಸೇದಬೇಕೆನಿಸಿದಾಗ ಪೆಪ್ಪರಮೆಂಟು ತಿನ್ನಬೇಕು ಅಂತ ಯಾರೋ ಹೇಳಿದ್ದರು. ಇದು ಸರಿಯೇ ಡಾಕ್ಟ್ರೇ,,,?
ಡಾಕ್ಟರು: ಹೌದು, ತಂಬಾಕು ಸೇವಿಸಬೇಕು  ಎನಿಸಿದಾಗಲೆಲ್ಲ ಚೂಯಿಂಗ್‍ಗಮ್ ಅಥವಾ ಪೆಪ್ಪರಮೆಂಟು ತಿನ್ನಬೇಕು, ನೀರು ಕುಡಿಯಬೇಕು. ದಿನಾಲೂ ವ್ಯಾಯಾಮ ಮಾಡಿ, ಧೀರ್ಘವಾಗಿ ಉಸಿರಾಟ ಮಾಡಿ ಅಥವಾ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆಮಾಡಿ. 
ಒಬ್ಬ: ಇನ್ನೂ ಏನೇನು ಮಾಡಬಹುದು ಡಾಕ್ಟ್ರೇ,,,?
ಡಾಕ್ಟರು: ತಂಬಾಕು ಬಿಡಲು ದಿನ ನಿಗದಿಪಡಿಸಿಕೊಳ್ಳಿ. ಅದಕ್ಕೆ ಮಾನಸಿಕವಾಗಿ ಸಿದ್ದರಾಗಿರಿ. ನಿಮಗೆ ನೀವೇ ಬಹುಮಾನ ನೀಡಿಕೊಳ್ಳಿ. 
ಒಬ್ಬ ಮಹಿಳೆ: ಡಾಕ್ಟ್ರೇ, ಇತ್ತೀಚಿಗೆ ನಮ್ಮ ಮಕ್ಕಳು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದನ್ನು ನಾವು ಹೇಗೆ ತಪ್ಪಿಸಬಹುದು,,,?
ಡಾಕ್ಟರು: ಮನೆಯಲ್ಲಿ ಮಕ್ಕಳ ಕೈಗೆ ಬೀಡಿ, ಸಿಗರೇಟು, ಗುಟ್ಕಾ ಸಿಗುವಂತೆ ಇಡಬಾರದು. ಮಕ್ಕಳ ಖರ್ಚಿಗೆಂದು ಹಣ ಕೊಡುವಾಗ ಅವರು ಅದನ್ನು ತಂಬಾಕಿಗಾಗಿ ಬಳಸದಂತೆ ಎಚ್ಚರಿಕೆ ವಹಿಸಬೇಕು. ತಂಬಾಕು ಸೇವನೆಯಿಂದಾಗುವ ಅನಾಹುತಗಳನ್ನು ಅವರಿಗೆ ತಿಳಿಸಬೇಕು. 
ಇನ್ನೊಬ್ಬ: ಶಾಲಾ ಶಿಕ್ಷಣದಿಂದ ತಂಬಾಕು ಸೇವನೆ ಬಿಡಿಸಲು ಸಾಧ್ಯವಿಲ್ಲವೇ ಡಾಕ್ಟ್ರೇ,,,?
ಡಾಕ್ಟರು: ಇದೆ. ತಂಬಾಕು ಸೇವನೆ ಇಂದು ಸಮುದಾಯ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ಬಲವಾದ ವಿರೋಧದ ಅಗತ್ಯವಿದೆ. ಅದನ್ನು ಶಿಕ್ಷಣದ ಮೂಲಕ ನೀಡಬಹುದು. ಮಕ್ಕಳು ಮತ್ತು ಯುವಜನತೆಯನ್ನು ತಂಬಾಕು ಮುಕ್ತರನ್ನಾಗಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು. ಶಾಲಾ ಶಿಕ್ಷಣದ ಮೂಲಕ ತಂಬಾಕು ಬಳಕೆಯನ್ನು ತಡೆಯಲು ಪ್ರಯತ್ನಿಸಬೇಕು. ಅಂದರೆ ತಂಬಾಕು ಸೇವೆಯಿಂದಾಗುವ ದುಷ್ಪರಿಣಾಮಗಳನ್ನು ಮತ್ತು ಪರಿಹಾರ ಮಾರ್ಗಗಳನ್ನು ಉನ್ನತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ವನ್ನು ಪ್ರೋತ್ಸಾಹಿಸುವುದು. 
-ಶಾಲೆಗಳಲ್ಲಿ ಚರ್ಚೆ, ಸಂವಾದ, ಉಪನ್ಯಾಸ, ವಿಚಾರಗೋಷ್ಟಿ, ನಾಟಕ, ವೀಡಿಯೋ ಪ್ರದರ್ಶನಗಳಂತಹ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಹಮಿಕೊಂಡು ಅವುಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ಬೆಂಬಲಿಸುವುದು. 
-ಮಕ್ಕಳು ಮತ್ತು ಯುವಜನತೆ ಸದಾಕಾಲ ಜ್ಞಾನಾಧಾರಿತ/ ಅಭಿವೃದ್ದಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು. 
-ವಿರಾಮ ವೇಳೆಯ ಸದುಪಯೋಗಕ್ಕಾಗಿ ಕ್ರೀಡೆಗಳು/ ಓದುವ ಹವ್ಯಾಸ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳವಂತೆ ಮಾಡುವುದು. 
-ಮಾಧ್ಯಮಗಳ ಮೂಲಕ ಅಂದರೆ ರೇಡಿಯೋ. ಟಿ.ವಿ, ಪತ್ರಿಕೆಗಳು ಮುಂತಾದವುಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ನೀಡುವುದು. ತಂಬಾಕನ್ನು 
-ತಿರಸ್ಕರಿಸುವ ಕೌಶಲಗಳನ್ನು ಅಭಿವೃದ್ದಿಪಡಿಸುವದು ಮತ್ತು ತರಬೇತಿ ನೀಡುವದು. 
-ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು. 
-ತಂಬಾಕು ಸೇವನೆ ಪ್ರಚೋದಿಸುವ ದೃಶ್ಯಗಳು ಮತ್ತು ಜಾಹೀರಾತುಗಳಿಗೆ ತಡೆಯೊಡ್ಡುವುದು. 
-ಕಾನೂನುಗಳಿಗೆ ಸೂಕ್ತ ಮಾರ್ಪಾಡು ಮಾಡುವ ಮೂಲಕ ತಂಬಾಕು ಉತ್ಪನ್ನಗಳಿಗೆ ಕಡಿವಾಣ ಹಾಕುವುದು. ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ತಂಬಾಕನ್ನು ವಿರೋಧಿಸುವ ಶಿಕ್ಷಣ ನೀಡಬಹುದು.
ಇನ್ನೊಬ್ಬ ಮಹಿಳೆ : ಸಾಲಿ ಕಾಂಪೌಂಡ್ ಮೇಲೆ ಅದೇನೋ ತಂಬಾಕು ನಿಶೇಧ ಅಂತ ಬರದಾರಲ್ಲರೀ,,, ಅದ್ರಿಂದ ಏನು ಉಪಯೋಗ ?
ಡಾಕ್ಟರು: ಅಂದರೆ ಶಾಲೆಯ 100 ಮೀಟರ್ ಅಂತರದೊಳಗೆ ತಂಬಾಕು ಮಾರಾಟ ಮತ್ತು ಸೇವನೆ ನಿಷೇಧಿಸಿದೆ. ಅದನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ “ತಂಬಾಕು ನಿಷೇಧಿತ ಪ್ರದೇಶ” ಎಂದು ಬೋರ್ಡ ಹಾಕಲಾಗಿದೆ. ಒಂದು ವೇಳೇ ಹಾಗೇನಾದರೂ ಮಾರಾಟ ಅಥವಾ ಸೇವನೆ ಮಾಡಿದಲ್ಲಿ ಅಂತಹವರ ವಿರುದ್ದ ಕಾನೂನಿನ ಪ್ರಕಾರ ಶಿಕ್ಷೆ ಇದೆ. 
ಮಾಸ್ತರ: ಇದಕ್ಕೆ ಪಾಲಕರು ಏನು ಮಾಡಬಹುದು ಡಾಕ್ಟ್ರೆ ?
ಡಾಕ್ಟರು: ತಂಬಾಕು ವಿರೋಧಿ ಹೋರಾಟ ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಆಗುವ ಕೆಲಸವಲ್ಲ. ಇದಕ್ಕೆ ಸಾಮೂಹಿಕ ಬೆಂಬಲ ಅಗತ್ಯ. ನೀವೆಲ್ಲ ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ನಿಮ್ಮ ಮಕ್ಕಳ ಭವಿಷ್ಯ ಉತ್ತಮವಾಗುತ್ತದೆ. ಈಗ ನಾವೆಲ್ಲರೂ ತಂಬಾಕು ವಿರೋಧಿಸುವ ಪಣ ತೊಡೋಣ.
ಎಲ್ಲರೂ : ಆಗಲಿ ಇದಕ್ಕೆ ನಮ್ಮೆಲ್ಲರ ಬೆಂಬಲವಿದೆ. ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡೋಣ.
ಮಾಸ್ತರ: ತಂಬಾಕು ವಿರೋಧಿ ಹೋರಾಟಕ್ಕೆ,,,,, 
ಎಲ್ಲರೂ : ಜಯವಾಗಲಿ.
ಮಾಸ್ತರ : ನಮ್ಮ ಗ್ರಾಮ,,,,
ಎಲ್ಲರೂ : ತಂಬಾಕು ಮುಕ್ತ ಗ್ರಾಮವಾಗಲಿ.
ಮಾಸ್ತರ : ನಮ್ಮನ್ನು ಯಮಲೋಕಕ್ಕೆ ಕಳಿಸುವ ತಂಬಾಕಿಗೆ,,,,,
ಎಲ್ಲರೂ : ದಿಕ್ಕಾರ ದಿಕ್ಕಾರ
(ಜೈಗೋಷ ಕೂಗುತ್ತಾ ಎಲ್ಲರೂ ತೆರಳುವರು. ಹಿನ್ನಲೆಯಲ್ಲಿ ತಂಬಾಕು ವಿರೋಧಿ ಹಾಡು ಕೇಳಿ ಬರುತ್ತದೆ. ಕಥಾ ನಿರೂಪಕ ವೇದಿಕೆಗೆ ಬರುತ್ತಾನೆ.)
ನಿರೂಪಕ : ಆತ್ಮೀಯ ಬಂಧುಗಳೇ ಇದುವರೆಗೂ ‘ಒಂದಾಗಿ ಮುಂದಾಗಿ ತಂಬಾಕು ಬಿಟ್ಹಾಕಿ’ ಎಂಬ ನಾಟಕ ನೋಡಿದಿರಿ. ತಂಬಾಕು ವಿರೋಧಿ ಹೋರಾಟ ಕೇವಲ ನಾಟಕಕ್ಕೆ ಸೀಮಿತವಾಗಬಾರದು. ಅದು ನಮ್ಮ ಬದುಕಿಗೆ ಸನಿಹವಾಗಬೇಕು. ಈ ನಾಟಕ ನೋಡಿದ ನೀವೆಲ್ಲಾ ಈ ಹೋರಾಟವನ್ನು ಬೆಂಬಲಿಸಬೇಕು. ಈ ಹೋರಾಟ ಬೆಂಬಲಿಸಲು  ನಿಮ್ಮ ಊರಿನ  ಶ್ರೀಮಠದ ಸ್ವಾಮಿಗಳು ಕಾತುರರಾಗಿದ್ದಾರೆ. ಅವರನ್ನು ಈ ವೇದಿಕೆಗೆ ಸ್ವಾಗತಿಸುತ್ತೇನೆ. 
 (ಇಬ್ಬರು ಸ್ವಾಮಿಗಳನ್ನು ವೇದಿಕೆಗೆ ಕರೆತರುವರು)
ಸ್ವಾಮೀಜಿ : ನನ್ನ ಪ್ರೀತಿಯ ಭಕ್ತಾದಿಗಳೇ, ಇದುವರೆಗೂ ನೀವೆಲ್ಲಾ ‘ಒಂದಾಗಿ ಮುಂದಾಗಿ ತಂಬಾಕು ಬಿಟ್ಹಾಕಿ’ ಎಂಬ ನಾಟಕದಿಂದ ತಂಬಾಕಿನಿಂದ ಆಗುವ ತೊಂದರೆಗಳ ಬಗ್ಗೆ ತಿಳಿದುಕೊಂಡಿರಿ. ಧರ್ಮಸ್ಥಳದಲ್ಲಿ ಜನರ ಸಹಕಾರದಿಂದ ತಂಬಾಕು ವಿರೋಧಿ ಹೋರಾಟ ಯಶಸ್ವಿಯಾಗಿದೆ. ಅಲ್ಲಿನ ಯಾವುದೇ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಇಲ್ಲ. ಅದರಂತೆ ಇನ್ನು ಮುಂದೆ ನಮ್ಮ ಗ್ರಾಮವನ್ನೂ ಸಹ ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಲು ನಾವೆಲ್ಲ ಪಣ ತೊಡೋಣ.  ಅದಕ್ಕೆ ನಿಮ್ಮ ಸಹಾಯ ಸಹಕಾರದ ಅವಶ್ಯಕತೆ ಇದೆ. ನಾಳೆ ನಾವೆಲ್ಲರೂ ಸೇರಿ ಗ್ರಾಮದಲ್ಲಿ ಸಂಚರಿಸಿ, ಎಲ್ಲಾ ಅಂಗಡಿಗಳಿಗೂ ತೆರಳಿ ತಂಬಾಕು ಮಾರದಂತೆ ಅವರ ಮನವೊಲಿಸೋಣ. ಅದರಂತೆ ಮನೆಮನೆಗೆ ತೆರಳಿ ತಂಬಾಕು ಸೇವನೆ ಮಾಡದಂತೆ ವಿನಂತಿ ಮಾಡೋಣ. ಅದಕ್ಕೂ ಮೊದಲು ಇಲ್ಲಿರುವ ನೀವೆಲ್ಲಾ ನನ್ನ ಮುಂದೆ ಎದ್ದು ನಿಂತು ನಾನು ಹೇಳಿದಂತೆ ಪ್ರಮಾಣ ಮಾಡಬೇಕು. 
“ ಇನ್ನು ಮುಂದೆ ನಾವು ತಂಬಾಕು ಸೇವನೆ ಮಾಡುವುದಿಲ್ಲ. ನನ್ನ ನರೆಹೊರೆವರು, ಸ್ನೇಹಿತರು, ಬಂಧುಗಳು ಮತ್ತು ಇತರರು ತಂಬಾಕು ಸೇವನೆ ಬಿಡುವಂತೆ ಪ್ರಯತ್ನಿಸುತ್ತೇನೆ. ನಮ್ಮ ಗ್ರಾಮದ ಎಲ್ಲಾ ಅಂಗಡಿಗಳಲ್ಲೂ ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಹೋರಾಟ ಮಾಡಿ ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಪ್ರಯತ್ನಿಸುತ್ತೇನೆ ಎಂದು ಇಲ್ಲಿರುವ ಗುರುಗಳು, ವೈದ್ಯರು, ಶಿಕ್ಷಕರು, ಮಕ್ಕಳು ಹಾಗೂ ಗ್ರಾಮದ ಎಲ್ಲರ ಸಮ್ಮುಖದಲ್ಲಿ ಪ್ರಮಾಣ ಮಾಡುತ್ತೇನೆ” 
ಪ್ರಮಾಣ ಮಾಡಿದ ನಿಮಗೆಲ್ಲರಿಗೂ ಶುಬಾಶೀರ್ವಾದಗಳು. ಈಗ ಪ್ರಮಾಣ ಮಾಡಿದ ನೀವೆಲ್ಲಾ ಇನ್ನೂ ಒಂದು ಕೆಲಸ ಮಾಡಬೇಕು. ಅದೇನೆಂದರೆ ಸ್ವಯಂ ಪ್ರೇರಣೆಯಿಂದ ನಿಮ್ಮಲ್ಲಿನ ಬೀಡಿ, ಸಿಗರೇಟು, ಗುಟ್ಕಾ, ಜರ್ದಾ ಇತ್ಯಾದಿಗಳನ್ನು ನನ್ನ ಜೋಳಿಗೆಗೆ ಹಾಕಿ ತಂಬಾಕು ವಿರೋಧಕ್ಕೆ ಬೆಂಬಲ ಸೂಚಿಸಿ.
ಸ್ವಾಮಿಗಳು ವಿನಂತಿ ಮಾಡಿಕೊಳ್ಳುತ್ತಿದ್ದಂತೆ ಎಲ್ಲರೂ ಸ್ವಾಮಿಗಳ ಜೋಳಿಗೆಗೆ ತಮ್ಮಲ್ಲಿನ ತಂಬಾಕು ಉತ್ಪನ್ನಗಳನ್ನು ಹಾಕಿದರು. ಮರುದಿನ ಗ್ರಾಮದ ಹಿರಿಯರೆಲ್ಲ ಸ್ವಾಮಿಗಳ ಸಮ್ಮೂಖದಲ್ಲಿ ಸೇರಿ ಎಲ್ಲಾ ಅಂಗಡಿಗಳಿಗೂ ತೆರಳಿ ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಮನವಿ ಮಾಡಿಕೊಂಡರು. ಅದರಂತೆ ಮನೆಮನೆಗೆ ತೆರಳಿ ಜನರಿಗೂ ತಂಬಾಕು ಬಳಸದಂತೆ ಮನವರಿಕೆ ಮಾಡಿದರು. ಇದು ಒಂದು ರೀತಿಯ ಆಂದೋಲನದಂತೆ ಮುಂದುವರೆಯಿತು. ಆ ಗ್ರಾಮ ಸಂಪೂರ್ಣವಾಗಿ ತಂಬಾಕು ಮುಕ್ತ ಗ್ರಾಮವಾಯಿತು. ಈಗ ಗ್ರಾಮದ ಸರದಿ!
-ಆರ್.ಬಿ.ಗುರುಬಸವರಾಜ








ಅರಿವಿನ ಹಣತೆ

ಅರಿವಿನ ಹಣತೆ
ಆಡಿಬಾ........... ನನ ಕಂದ ಅಂಗಾಲ ತೊಳದೇನ
ಬಂಗಾರ ಗಿಂಡಿ ತಿಳಿನೀರ,/
ಬಂಗಾರ ಗಿಂಡಿ ತಿಳಿನೀರ ತಕ್ಕೊಂಡು ಬಂಗಾರದ ಮುಖವ ತೊಳದೇನ// ಎಂದು ಹಿಂದಿನ ಕಾಲದ ನಮ್ಮ ತಾಯಂದಿರು ಮಗುವನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿ ತೂಗುತ್ತಿದ್ದರು. ಅವಿಭಕ್ತ ಕುಟುಂಬಗಳು ಒಡೆದು ಚಿಕ್ಕ ಕುಟುಂಬಗಳು ತಲೆ ಎತ್ತಿದ ಇಂದಿನ ಕಾಲದಲ್ಲಿ ತೊಟ್ಟಿಲೂ ಇಲ್ಲ, ಜೋಗುಳವೂ ಇಲ್ಲ. ತೊಟ್ಟಿಲ ಜಾಗದಲ್ಲಿ ಸೀರೆ, ಜೋಗುಳದ ಜಾಗದಲ್ಲಿ ಮೊಬೈಲ್ ಬಂದಿದೆ. ಅಂದರೆ ನಮ್ಮ ಇಂದಿನ ತಾಯಂದಿರಿಗೆ ತೊಟ್ಟಿಲು ತೂಗಿ ಹಾಡಿ ಮಗುವನ್ನು ಮಲಗಿಸಲು ಪುರುಸೊತ್ತಿಲ್ಲ. ಒಂದೆಡೆ ಕೆಲಸದ ಒತ್ತಡ, ಇನ್ನೊಂದೆಡೆ ಮಾದ್ಯಮಗಳ ಃಆವಳಿ. ಇವೆರಡೂ ಸೇರಿ ನಲಿದಾಡಬೇಕಿದ್ದ ನಮ್ಮ ಹಸುಗೂಸುಗಳನ್ನು ಒತ್ತಡದಲ್ಲಿ ಬೆಳೆಸುತ್ತಿವೆ. ಇದರ ಪರಿಣಾಮವನ್ನು ನಾವೀಗಾಗಲೇ ಕಾಣುತ್ತಿದ್ದೇವೆ.
‘ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು’ ಎನ್ನುವ ನಾಣ್ನುಡಿ ಇಂದು ಅರ್ಥಹೀನವಾಗಿದೆ. ಇಂದು ಬಹುತೇಕ ಮಕ್ಕಳ ಶಿಕ್ಷಣ ಪಾರಂಭವಾಗುವುದು ಬೇಬಿ ಸಿಟ್ಟಿಂಗ್‍ಗಳಲ್ಲಿ. ತಾಯಿಯ ಸ್ಥಾನದಲ್ಲಿ ಆಯಾ ಇದ್ದಾಳೆ. ತಾಯಿಯ ಪ್ರೀತಿ, ವಾತ್ಸಲ್ಯ, ಮಮಕಾರಗಳಿಂದ ವಂಚಿತವಾದ ಮಗು ಹೇಗೆ ತಾನೇ ಉತ್ತಮವಾಗಿ ಬೆಳೆದೀತು? 
ಮಕ್ಕಳು ಕೇಳಿದುದನ್ನು ಕೊಡಿಸುವುದು ಪಾಲಕರ ಕರ್ತವ್ಯ. ಇದನ್ನು ತಪ್ಪಾಗಿ ತಿಳಿದ ನಾವು ಅದರಿಂದಾಗುವ ಅನಾಹುತಗಳು ಅಥವಾ ತೊಂದರೆಗಳ ಬಗ್ಗೆ ಯೋಚಿಸುವುದೇ ಇಲ್ಲ. ಮಗು ಆಟ ಆಡಲು ಪಿಸ್ತೂಲ್ ಕೇಳುತ್ತದೆ. ಮಗುವಿನ ಮೇಲಿನ ಮಮಕಾರದಿಂದ ಮಗು ಕೇಳಿದೆ ಎಂಬ ಕಾರಣದಿಂದ ಅದನ್ನು ಕೊಡಿಸುತ್ತೇವೆ. ಮಗು ಕೈಯಲ್ಲಿ ಪಿಸ್ತೂಲ್ ಹಿಡಿದು ಎಲ್ಲರ ಕಡೆಗೂ ತೋರಿಸುತ್ತಾ ಡಿಶುಂ, ಡಿಶುಂ ಎಂದು ಓಡಾಡುವಾಗ ಅದನ್ನು ನೋಡಿ ಖುಷಿ ಪಡುತ್ತೇವೆ. ಅಂದರೆ ಮುಂದೊಂದು ದಿನ ಆ ಮಗು ನಿಜವಾದ ಪಿಸ್ತೂಲನ್ನು ಜೇಬಿನಲ್ಲಿಟ್ಟುಕೊಂಡು ಓಡಾಡೋಕೆ ನಾವು ಈಗಿಂದಲೇ ಪರವಾನಿಗೆ ನೀಡಿದಂತಾಗಲಿಲ್ಲವೇ? ಇದರಿಂದ ಮುಂದೆ ಆಗುವ ಅನಾಹುತಗಳ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಇತ್ತಿಚಿಗೆ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಶಾಲಾ ಮಕ್ಕಳ ಶೂಟೌಟ್ ಪ್ರಕರಣಗಳು ನಮ್ಮ ಗಮನಕ್ಕೆ ಬರುತ್ತಲೇ ನಮ್ಮ ಗಮನಕ್ಕೆ ಬರುತ್ತಲೇ ಇವೆ. ಇಲ್ಲಿ ಪಿಸ್ತೂಲ್ ಕೇವಲ ಒಂದು ಉದಾಹರಣೆ ಮಾತ್ರ. ಇಂತಹ ಅನೇಕ ಅನಾಹುತಕಾರಿ ಆಟಿಕೆಗಳನ್ನು ಮಕ್ಕಳಿಗೆ ಕೊಡಿಸಿ ಅನಾಹುತಗಳ ಸರಮಾಲೆಯನ್ನೇ ತಂದುಕೊಳ್ಳುತ್ತೇವೆ. ಆದ್ದರಿಂದ ಮಕ್ಕಳಿಗೆ ಆಟಿಕೆಗಳನ್ನು ಕೊಡಿಸುವಾಗ ಜಾಗ್ರತೆ ವಹಿಸುವುದು ಅನಿವಾರ್ಯ.
ಇತ್ತಿಚಿಗೆ ಟಿ.ವಿ ಮಾದ್ಯಮ ನಮ್ಮ ಮಕ್ಕಳನ್ನು ತೀರಾ ಹದಗೆಡಿಸಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಇತ್ತೀಚೆಗೆ ಆಪ್ತರ ಮನೆಯಲ್ಲಿ ನಡೆದ ಘಟನೆ ನನ್ನಲ್ಲಿ ಗಾಬರಿಯನ್ನುಂಟು ಮಾಡಿತು. ಎರಡನೇ ತರಗತಿಯಲ್ಲಿ ಓದುತ್ತಿರುವ ಆ ಮಗು ಇತರ ಮಕ್ಕಳೊಂದಿಗೆ ಆಟವಾಡುತ್ತಿರುವಾಗ ಯಾವುದೋ ಕಾರಣಕ್ಕೆ ಜಗಳ ಪ್ರಾರಂಭವಾಗಿ, ಆ ಮಗು ‘ನಿನ್ನ ಮುಖಕ್ಕೆ ಆಸಿಡ್ ಹಾಕುತ್ತೇನೆ ನೋಡು!’ ಎಂದು ಹೇಳಿತು. ಈ ಮಾತನ್ನು ಕೇಳಿದೊಡನೆ ನನ್ನ ಮುಖಕ್ಕೇ ಆಸಿಡ್ ಎರಚಿದಂತಾಯ್ತು. ಏಕೆಂದರೆ ಆ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಇಂತಹ ಅಘಾತಕಾರಿ ಪದದ ಬಳಕೆ ಹೇಗೆ ಬಂದಿತು ಎಂದು ಆಶ್ಚರ್ಯವಾಯಿತು. ಅನಂತರ ಆ ಮಗುವನ್ನು ವಿಚಾರಿಸಿದಾಗ ಟಿ.ವಿಯಲ್ಲಿ ನೋಡಿದ ಒಂದು ಸಿನೇಮಾ ಆ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಿರುವುದು ತಿಳಿಯಿತು. ಹಾಗೆಯೇ ಇನ್ನೆಂದೂ ಅಂತಹ ಅಘಾತಕಾರಿ ಮಾತುಗಳನ್ನು ಆಡದಂತೆ ತಿಳಿಹೇಳಿದೆ.
ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ಅರಿವು/ ವಿವೇಚನಾಶಕ್ತಿ ಇರುವುದಿಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಮಕ್ಕಳಿಗೆ ತಿಳಿಹೇಳಬೇಕಾದ  ಜವಾಬ್ದಾರಿ ಪೋಷಕರ ಮೇಲಿದೆ. ಹಿಂದಿನ ಕಾಲದಲ್ಲಾದರೆ ಮನೆಯಲ್ಲಿ ಹಿರಿಯರೆನಿಸಿದ ಅಜ್ಜ-ಅಜ್ಜಿಯರು ಚಿಕ್ಕ ಮಕ್ಕಳನ್ನು ಕೂರಿಸಿಕೊಂಡು ಕತೆ ಹೇಳುತ್ತಿದ್ದರು. ಆ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿದ್ದರು. ಆದರೆ ಈಗ ಟಿ.ವಿ ಎಂಬ ಭೂತಕ್ಕೆ ಅಂಟಿಕೊಂಡ ಮೇಲೆ ಕತೆ, ಮೌಲ್ಯಗಳೆಲ್ಲ ಮಾಯವಾಗಿವೆ.
‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ’ ಎಂಬ ಗಾದೆ ಮಾತು ಜನಜನಿತವಾಗಿದೆ. ಮಕ್ಕಳಾಗಿದ್ದಾಗ ಮಾನವೀಯ ಮೌಲ್ಯಗಳ ಪರಿಚಯ ಇಲ್ಲದ್ದರಿಂದ ಆಗುವ ಪರಿಣಾಮಗಳನ್ನು ನಾವೀಗಾಗಲೇ ಯುವಕರಲ್ಲಿ ಕಾಣುತ್ತಿದ್ದೇವೆ. ಇಂದಿನ ಯುವಕರಲ್ಲಿ ತಾಳ್ಮೆ, ಸಹನೆ, ಸಹಕಾರ, ಮಮಕಾರ, ಸಮಯಪ್ರಜ್ಞೆ, ಕಾಯಕನಿಷ್ಟೆ, ನ್ಯಾಯನಿಷ್ಟುರತೆ, ಕಾರ್ಯತತ್ಪರತೆ, ಪ್ರಮಾಣಿಕತೆ, ಪರಿಸರ ಪ್ರಜ್ಞೆ, ಗುರುಹಿರಿಯರಿಗೆ ಗೌರವ ಮುಂತಾದ ಮೌಲ್ಯಗಳು ಇಲ್ಲದಿರುವುದನ್ನು ಸ್ಪಷ್ಟವಾಗಿ ಕಾಣುತ್ತೇವೆ. ಇದಕ್ಕೆಲ್ಲ ಕಾರಣಾರು ಎಂದು ಹುಡುಕಿ ಹೊರಟರೆ, ಆ ಹುಡುಕಾಟ ಕೊನೆಗೆ ತಲುಪುವುದು ಪೋಷಕರನ್ನೇ. ಅಂದರೆ ನಮ್ಮ ಮಕ್ಕಳನ್ನು ಬೆಳೆಸಬೇಕಾದ ರೀತಿ-ನೀತಿಗಳ ಬಗ್ಗೆ ನಾವಿನ್ನೂ ತಿಳಿದಿಲ್ಲ. ಅವರ ಆಶೋತ್ತರಗಳನ್ನು ಈಡೇರಿಸುವಲ್ಲಿ ನಾವು ಎಡವಿದ್ದೇವೆ ಎಂಬುದಂತೂ ಸ್ಪಷ್ಟ. 
ಇಂದು ಮಕ್ಕಳ ಹಕ್ಕುಗಳು ಜಾರಿಯಲ್ಲಿವೆ. ಅವುಗಳನ್ನು ಅನುಭವಿಸಲು ಬೇಕಾದ ಸೂಕ್ತ ವಾತಾವರಣ ನಿರ್ಮಿಸಬೇಕಾಗಿದೆ. ಇಂದು ಇಡೀ ವಿಶ್ವವೇ ಭಾರತೀಯ ಮಕ್ಕಳ ಬಗ್ಗೆ ಭಯಬೀತವಾಗಿದೆ. ಅಂದರೆ ಭಾರತೀಯ ಮಕ್ಕಳ ಜಾಣ್ಮೆ, ಕೌಶಲ್ಯ ಅವರನ್ನು ದಂಗು ಬಡಿಸಿದೆ. ಇದು ಹೀಗೆಯೇ ಇತರರನ್ನು ಚಕಿತಗೊಳಿಸುವ ನಿಟ್ಟಿನಲ್ಲಿ ಮುಂದುವರೆಯಬೇಕಾದರೆ ನಾವು ನಮ್ಮ ಮಕ್ಕಳ ಹಕ್ಕುಗಳನ್ವಯ ಸೂಕ್ತ ಮಾರ್ಗದರ್ಶನ ನೀಡುತ್ತಾ ಉತ್ತಮರಲ್ಲಿ ಉತ್ತಮರನ್ನಾಗಿ ಬೆಳೆಸೋಣ. ‘ಅರಿವಿನ ಹಣತೆ’ಯನ್ನು ಹಚ್ಚುತ್ತಾ ‘ಇಂದಿನ ಮಕ್ಕಳೇ ಇಂದಿನ ಪ್ರಜೆಗಳು’ ಎಂಬುದನ್ನು ಖಾತ್ರಿ ಪಡಿಸೋಣ.
ಆರ್.ಬಿ.ಗುರುಬಸವರಾಜ. 

ಸರ್ಕಾರಿ ಶಾಲೆಗಳು ಶ್ರೀಮಂತವಾಗಲಿ

ಸರ್ಕಾರಿ ಶಾಲೆಗಳು ಶ್ರೀಮಂತವಾಗಲಿ
ಮಕ್ಕಳಿಗೆ ಶಿಕ್ಷಣ ಕೊಡುವ ಮತ್ತು ಕೊಡಿಸುವ ಮಾತು ಬಂದಾಗಲೆಲ್ಲ ಎಲ್ಲರ ಚಿತ್ತ ಹೊರಳುವುದು ಖಾಸಗೀ ಶಾಲೆಗಳತ್ತ. ಅಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆಂದೇನೂ ಅಲ್ಲ. ಆದರೆ ಮಕ್ಕಳಿಗೆ ವೈಯಕ್ತಿಕ ಗಮನ ನೀಡುವಲ್ಲಿ ಸರ್ಕಾರಿ ಶಾಲೆಗಳು ಹಿಂದೆ ಬೀಳುತ್ತಿವೆ. ಕಾರಣವೇನೆಂದರೆ ಸರ್ಕಾರಿ ಶಾಲಾ ಶಿಕ್ಷಕರನ್ನು ಶಿಕ್ಷಕರನ್ನಾಗಿ ಬಿಡುತ್ತಿಲ್ಲ. ನಾನಾ ರೀತಿಯ ಜವಾಬ್ದಾರಿಗಳನ್ನು ಅವರ ಹೆಗಲಿಗೇರಿಸಿ ಅವರನ್ನು ಮಾನಸಿಕವಾಗಿ ದುರ್ಬಲರನ್ನಾಗಿ ಮಾಡಲಾಗುತ್ತಿದೆ. ಖಾಸಗೀ ಶಾಲಾ ಶಿಕ್ಷಕರಿಗಿಂತ ಸರ್ಕಾರಿ ಶಾಲಾ ಶಿಕ್ಷಕರು ವಿದ್ಯಾರ್ಹತೆಯಲ್ಲಿ, ಅನುಭವದಲ್ಲಿ ಉತ್ತಮವಾಗಿದ್ದರೂ ಮಾನಸಿಕವಾಗಿ ಅವರನ್ನು ಕೆಲವು ಗೊಂದಲಗಳು ಕಾಡುತ್ತಿವೆ. ಆದ್ಯತೆ ಯಾವುದಕ್ಕೆ ಕೊಡಬೇಕು ಎಂಬ ತೊಳಲಾಟದಲ್ಲಿದ್ದಾರೆ. ಬರುವ ಎಲ್ಲಾ ಯೋಜನೆಗಳೂ ಸರ್ಕಾರಿ ಶಾಲಾ ಶಿಕ್ಷಕರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡುತ್ತಿವೆ. ಇದರಿಂದಾಗಿ ಶಿಕ್ಷಕರಲ್ಲಿ ಆತ್ಮಸ್ಥೈರ್ಯ ಕಡಿಮೆಯಾಗುತ್ತಿದೆ. ಇತರೆ ಕೆಲಸಗಳಿಂದ ಶಿಕ್ಷಕರಿಗೆ ಮುಕ್ತಿ ದೊರೆತಲ್ಲಿ ಸರ್ಕಾರಿ ಶಾಲೆಗಳೂ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುವಂತಾಗುತ್ತದೆ. 
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಶಾಲಾ ವ್ಯಾಸಂಗ ದೃಢೀಕರಣವನ್ನೇ ಆಧಾರವಾಗಿ ಬಳಸಲಾಗುತ್ತಿದೆ. ಶಾಲೆಯಲ್ಲಿ ಓದಿದ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ದೃಢೀಕರಣ ಪತ್ರಕ್ಕಾಗಿ ಶಾಲೆಗಳಿಗೆ ಬರುತ್ತಾರೆ. ಬೇಗನೇ ಸಂಬಂಧಿಸಿದ ಪ್ರಮಾಣ ಪತ್ರ ಪಡೆದುಕೊಂಡು ಹೋಗುವುದೇ ಅವರ ಆಧ್ಯತೆ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು ತರಗತಿಯಲ್ಲಿದ್ದರೂ ಸಹ ದುಂಬಾಲು ಬಿದ್ದು ಅವರಿಗೆ ಬೇಕಾದ ಪ್ರಮಾಣ ಪತ್ರ ಪಡೆಯುತ್ತಾರೆ. ಅವರಿಗೆ ಪ್ರಮಾಣ ಪತ್ರ ನೀಡಿ ತರಗತಿಗೆ ಬಂದು ನಿಲ್ಲುವ ವೇಳೆಗೆ ಶಿಕ್ಷಕರಲ್ಲಿ ಮೊದಲಿನ ಉತ್ಸಾಹ ಇರುವುದಿಲ್ಲ. ಇದು ಕೇವಲ ಉದಾಹರಣೆ ಮಾತ್ರ. ಸರ್ಕಾರಿ ಶಾಲೆಗಳಲ್ಲಿ ಇಂತಹ ಅನೇಕ ಆಕಸ್ಮಿಕ ನಿಲುಗಡೆಗಳು ಶಿಕ್ಷಕರ ಚಿತ್ತ ಚಾಂಚಲ್ಯಕ್ಕೆ ಕಾರಣವಾಗುತ್ತವೆ. ಶಿಕ್ಷಕರ ಮೇಲಿನ ಇಂತಹ  ಎಲ್ಲಾ ಹೊಣೆಗಾರಿಗಳನ್ನು ಅವರ ಹೆಗಲಿನಿಂದ ಇಳಿಸಿದಾಗ ಮಾತ್ರ ಸರ್ಕಾರಿ ಶಾಲೆಗಳು ಶ್ರೀಮಂತವಾಲು ಮತ್ತು ಖಾಸಗೀ ಶಾಲೆಗಳ ವಿರುದ್ದ ಸಡ್ಡು ಹೊಡೆಯಲು ಸಾಧ್ಯ.
- ಆರ್.ಬಿ.ಗುರುಬಸವರಾಜ.


December 31, 2013

ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣ
ಸವಾಲುಗಳು ಮತ್ತು ಸಾಧ್ಯತೆಗಳು

“ಸರ್ವರಿಗೂ ಶಿಕ್ಷಣ” ಎಂಬುದು ಮಕ್ಕಳ ಸಂವಿಧಾನ ಬದ್ದ ಹಕ್ಕು. ಈ ಶೀರ್ಷಿಕೆಯ ವ್ಯಾಪ್ತಿಯಲ್ಲಿ ವಿವಿಧ ಸಾಮಥ್ರ್ಯವುಳ್ಳ ಅಂದರೆ ವಿಕಲ ಚೇತನರು/ ವಿಶೇಷ ಅಗತ್ಯವುಳ್ಳ ಮಕ್ಕಳೂ ಇದ್ದಾರೆ. ಈ ಮಕ್ಕಳೂ ಸಹ ಇತರೆ ಮಕ್ಕಳ ಜೊತೆಯಲ್ಲಿ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಯಾಗಬೇಕು ಎಂಬುದು ಸಂವಿಧಾನದ ಆಶಯ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಹಾಗೂ ಕಲಿಕೆಯಲ್ಲಿ ಭಿನ್ನತೆ ಇರುವ ಮಕ್ಕಳಿಗೆ ಶಿಕ್ಷಣದ ಅವಕಾಶ ಒದಗಿಸುವುದು ನಾಗರೀಕ ವ್ಯವಸ್ಥೆಯ ಜವಾಬ್ದಾರಿ. ಸಾಮಾನ್ಯ ಶಾಲೆಯಲ್ಲಿ ತರಗತಿಯ ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಸಮನ್ವಯಗೊಳಿಸುವುದು ಮಾನವ ಹಕ್ಕುಗಳ ಆಶಯಕ್ಕೆ ಪೂರಕವಾದುದು.
ಇಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳು ಎಂದರೆ ಯಾರು? ಅವರಿಗೇಕೆ ವಿಶೇಷ ಅಗತ್ಯ ಬೇಕು ? ಎಂಬಿತ್ಯಾದಿ ಪ್ರಶ್ನೆಗಳು ಉದ್ಬವಿಸುವುದು ಸಹಜ. “ಯಾವ ಮಕ್ಕಳು ಇತರೆ ಮಕ್ಕಳಂತೆ ಸಹಜವಾಗಿ ಕಲಿಯಲು ತೊಂದರೆ ಅನುಭವಿಸುತ್ತಾರೋ ಅಂತಹ ಮಕ್ಕಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳು ಎನ್ನಲಾಗುತ್ತದೆ”.  ಸಹಜವಾಗಿ ಕಲಿಯಲು ನ್ಯೂನತೆಗಳು ಕಾರಣವಾಗಿರಬಹುದು. ಈ ನ್ಯೂನತೆಗಳೆಂದರೆ ದೃಷ್ಟಿದೋಷ, ಶ್ರವಣದೋಷ, ಬುದ್ದಿದೋಷ, ದೈಹಿಕದೋಷ, ಮತ್ತು ಕಲಿಕಾದೋಷ ಇತ್ಯಾದಿಗಳಿರಬಹುದು. ಈ ನ್ಯೂನತೆಳಿಂದ ಬಳಲುತ್ತಿದ್ದು ವಿಶೇಷ ಅಗತ್ಯತೆಯಿಂದ ಕಲಿಯಲು ಸಾಧ್ಯವಿರುವ ಮಕ್ಕಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳೆಂದು ಕರೆಯುತ್ತಾರೆ. ಇಂತಹ ಮಕ್ಕಳಿಗೆ ಇತರರ ಅಗತ್ಯ ಇರುತ್ತದೆ. ಆ ಅಗತ್ಯ ಸ್ನೇಹಿತರಿಂದ ಇರಬಹುದು, ಶಿಕ್ಷಕರಿಂದ ಇರಬಹುದು, ಪಾಲಕರಿಂದ ಇರಬಹುದು ಅಥವಾ ಕೆಲವು ಸಾಧನ ಸಲಕರಣೆಗಳಿಂದ ಇರಬಹುದು.
ವಿಶೇಷ ಅಗತ್ಯವುಳ್ಳ ಮಕ್ಕಳೂ ಸಹ ಇತರೆ ಮಕ್ಕಳಂತೆ ಬೆಳೆಯಲು, ವಿಕಾಸ ಹೊಂದಲು ಸಹಾಯಕವಾಗಲು ಕನಿಷ್ಠ ಪರಿಸರವನ್ನು ಒದಗಿಸುವುದು ಅವಶ್ಯಕ. ಈ ನಿಟ್ಟಿನಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿಯೇ ಇತರೆ ಮಕ್ಕಳ ಜೊತೆ ಶಿಕ್ಷಣ ನೀಡಲು ಇರುವ ವ್ಯವಸ್ಥೆಯೇ “ಸಮನ್ವಯ ಶಿಕ್ಷಣ”. ಅಂದರೆ ಕಲಿಕೆಯಲ್ಲಿ ಹಿಂದಿರುವ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಇತರೆ ಮಕ್ಕಳ ಜೊತೆಯಲ್ಲಿ ಸೇರಿಸಿ ನಿರೀಕ್ಷಿತ ಮಟ್ಟದ ಕಲಿಕೆ ಮೂಡಲು ರೂಪಿಸುವ ಒಂದು ವ್ಯವಸ್ಥೆಯಾಗಿದೆ.
ಕರ್ನಾಟಕದಲ್ಲಿ 1.47.999 ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ 202 ಶೈಕ್ಷಣಿಕ ಬ್ಲಾಕ್‍ಗಳಿದ್ದು, ಪ್ರತಿ ಬ್ಲಾಕ್‍ಗೆ 3 ಜನರಂತೆ 606 ಜನ ಸಂಪನ್ಮೂಲ ವ್ಯಕ್ತಿಗಳು, ಹಾಗೂ ಪ್ರತಿ ಬ್ಲಾಕ್‍ಗೆ ಇಬ್ಬರಂತೆ 404 ಜನ ವಿಶೇಷ ಶಿಕ್ಷಕರು ಸಮನ್ವಯ ಶಿಕ್ಷಣದಲ್ಲಿ ಬಾಗಿಯಾಗಿದ್ದಾರೆ. ಅಲ್ಲದೇ 34 ಶೈಕ್ಷಣಿಕ ಜಿಲ್ಲೆಗೂ ಒಬ್ಬೊಬ್ಬ ಜಿಲ್ಲಾ ಸಂಯೋಜಕರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹಿನ್ನಲೆ
‘ಸಮನ್ವಯ ಶಿಕ್ಷಣ’ದ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಅನಾದಿಕಾಲದಿಂದ ಅಂಗವಿಕಲತೆ ಮಾನವನನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಹಿಂದಿನ ಕಾಲದಲ್ಲಿ ಇಂತಹವರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿತ್ತು.
ನಾಗರೀಕತೆ ಬೆಳೆದಂತೆಲ್ಲಾ ಮಾನವರ ಮನೋಭಾವನೆಗಳು ಬದಲಾಗುತ್ತಾ ಬಂದವು. ಇಂತಹವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಅವಕಾಶಗಳನ್ನು ನೀಡಿದಲ್ಲಿ ಸಮಾಜದ ಇತರರಂತೆ ಅವರೂ ಬದುಕಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಇವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಟ್ಟು ಇವರೂ ಕೂಡಾ ಸುಂದರ ಮತ್ತು ಆರೋಗ್ಯಕರ ವಾತಾವರಣದಲ್ಲಿ ಬೆಳೆದು ಸಮಾಜದ ಮುಖ್ಯ ವಾಹಿನಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಬದ್ದವಾಗಿದೆ.
1961 ರಲ್ಲಿ ಸರ್ವರಿಗೂ ಶಿಕ್ಷಣ ನೀತಿ ಜಾರಿಗೆ ಬಂದ ಮೇಲೆ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ವಿಶೇಷ ಶಾಲೆಗಳು ಪ್ರಾರಂಭವಾದವು. ಆದರೆ ಈ ವಿಶೇಷ ಶಾಲೆಗಳಲ್ಲಿ ಕೆಲವೇ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು ಬಹಳ ಮಕ್ಕಳು ಇದರಿಂದ ವಂಚಿತರಾಗುತ್ತಿದ್ದರು. ಏಕೆಂದರೆ ಈ ವಿಶೇಷ ಶಾಲಾ ಶಿಕ್ಷಣ ವ್ಯವಸ್ಥೆ ತುಂಬಾ ದುಬಾರಿ ವೆಚ್ಚದ್ದಾಗಿದ್ದು ಬಡವರು ಮತ್ತು ಮಧ್ಯಮ ವರ್ಗದವರಿಗೆ ಇದು ನಿಲುಕದ ನಕ್ಷತ್ರವಾಗಿತ್ತು.  ಇದನ್ನು ಗಮನಿಸಿದ ಸರ್ಕಾರ 1970 ರಲ್ಲಿ “ಸಮನ್ವಯ ಶಿಕ್ಷಣ’ವನ್ನು ಜಾರಿಗೆ ತಂದಿತು.
1977 ರ ಸಂಸತ್ ಅಧಿವೇಶನದಲ್ಲಿ ‘ವಿಶ್ವ ಅಂಗವಿಕಲರ ದಿನಾಚರಣೆ’ ಆಚರಿಸಬೇಕೆಂಬ ಶಿಫಾರಸ್ಸು ಮಾಡಲಾಯಿತು. 1978-79ರ ಅಧಿವೇಶನದಲ್ಲಿ ಅಂಗವಿಕಲರ ಕಲ್ಯಾಣ ಕಾರ್ಯಕ್ರಮ ಸಂಪೂರ್ಣ ಸಹಬಾಗಿತ್ವ ಮತ್ತು ಸಮಾನತೆಯಿಂದ ಕೂಡಿರಬೇಕೆಂದು ತೀರ್ಮಾನಿಸಲಾಯಿತು. 1981 ನೇ ವರ್ಷವನ್ನು “ಅಂತರರಾಷ್ಟ್ರೀಯ ಅಂಗವಿಕಲರ ವರ್ಷ” ಎಂದು ಘೋಷಿಸಿ ಅಂಗವಿಕಲರ ದಿನಾಚರಣೆ ಆಚರಿಸಲಾಯಿತು.
1982ರಲ್ಲಿ ವಿಶ್ವವ್ಯಾಪಿ ಅಂಗವಿಕಲರ ಯೋಜನಾ ಕಾರ್ಯಕ್ರಮದ ಮಾರ್ಗದರ್ಶನ ಕೈಪಿಡಿ ಹೊರತರಲಾಯಿತು.
1983-92 ರ ವರ್ಷಗಳನ್ನು “ಅಂಗವಿಕಲರ ದಶಕ” ಎಂದು ಘೋಷಿಸಲಾಯಿತು. 1993ರಲ್ಲಿ ವಿಶ್ವಸಂಸ್ಥೆಯು ಅಂಗವಿಕಲರ ಸ್ಥಾನಮಾನ, ಹಕ್ಕುಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ ನಿಯಮಗಳನ್ನು ರೂಪಿಸುವ ಬಗ್ಗೆ ತೀರ್ಮಾನ ಕೈಗೊಂಡಿತು. 1993-2002 ರ ವರೆಗಿನ ವರ್ಷಗಳನ್ನು ‘ಏಷಿಯಾ ಫೆಸಿಫಿಕ್ ಅಂಗವಿಕಲರ ವರ್ಷಗಳು’ ಎಂದು ಘೋಷಿಸಲಾಯಿತು.
ಭಾರತದ ಸಂವಿಧಾನವೂ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಟ್ಟಿರುವುದು ಸ್ವಾಗತಾರ್ಹ. 86ನೇ ಭಾರತ ಸಂವಿಧಾನ ತಿದ್ದುಪಡಿ ಪ್ರಕಾರ ‘14 ವಯೋಮಾನದ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ’ ಜಾರಿಗೆ ಬಂದಿತು. ಇದರಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳು ಕೂಡಾ ಸೇರಿದ್ದಾರೆ. 1992 ರ ಭಾರತೀಯ ಪುನರ್ವಸತಿ  ಪರಿಷತ್ತು ಕಾಯಿದೆ ಪ್ರಕಾರ ‘ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವಿಶೇಷ ತರಬೇತಿ ಹೊಂದಿದ ಶಿಕ್ಷಕರಿಂದ ಬೋಧನೆ ಮಾಡುವ ಪದ್ದತಿ’ ಜಾರಿಗೆ ಬಂದಿತು. 1995ರ ಅಂಗವಿಕಲ ವ್ಯಕ್ತಿಗಳ(ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಹಾಗೂ ಸಂಪೂರ್ಣ ಸಹಬಾಗಿತ್ವ) ಕಾಯ್ದೆಯ ಪ್ರಕಾರ ‘18 ವರ್ಷದವರೆಗೆ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯತೆಗೆ ತಕ್ಕಂತೆ ಸೂಕ್ತ ಶಿಕ್ಷಣ ನೀಡುವುದು’. 1999ರ ರಾಷ್ಟ್ರೀಯ ಹಿತರಕ್ಷಣಾ ಕಾಯಿದೆ ಪ್ರಕಾರ ‘ತೀವ್ರ ತರದ ದೋಷವುಳ್ಳ ಮಕ್ಕಳಿಗೆ ವಿಶೇಷ ಸೇವೆ ಮತ್ತು ಸಹಕಾರ ನೀಡುವುದು’.
ಹೀಗೆ ವಿವಿಧ ಸ್ವರೂಪಗಳಲ್ಲಿ ಸಮನ್ವಯ ಶಿಕ್ಷಣ ಬೆಳೆದು ಬಂದಿತು. ಅಂಗವಿಕಲರೂ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡಬೇಕಾದರೆ  ಶಿಕ್ಷಣವೇ ಅದಕ್ಕೆ ಸಂಜೀವಿನಿಯಾಗಬೇಕು. ಈ ಅಂಗವಿಕಲ ಮಕ್ಕಳ ಬಗ್ಗೆ ಜನರಲ್ಲಿ ಹುದುಗಿರುವ ಮೂಢನಂಬಿಕೆ, ಮತೀಯತೆ, ಜಾತೀಯತೆ, ಅಂಧಶ್ರದ್ದೆ ಮುಂತಾದ ಸಂಕುಚಿತ ಭಾವನೆಗಳನ್ನು ಶಿಕ್ಷಣದಿಂದ ಮಾತ್ರ ಹೋಗಲಾಡಿಸಲು ಸಾಧ್ಯ. ಈ ದಿಸೆಯಲ್ಲಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ(ಒಊಖಆ) ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳಾದ UಓಇSಅಔ, UಓಆP, Iಐಔ, UಓIಅಇಈ ಗಳ ಸಹಕಾರದೊಂದಿಗೆ ವಿವಿಧ ಹಂತಗಳಲ್ಲಿ ಸಮನ್ವಯ ಶಿಕ್ಷಣ ನೀಡುತ್ತಾ ಬಂದಿದೆ.
ಸಮನ್ವಯ ಶಿಕ್ಷಣದ ಔಚಿತ್ಯ
ಸಮಾನ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ಸಾಗುತ್ತಿರುವ ನಾವುಗಳು ಪ್ರತಿಯೊಂದು ಮಗುವಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕಾದುದು ಬಾಗೀದಾರರ ಕರ್ತವ್ಯ. ನಮ್ಮಲ್ಲಿ ಮೇಲ್ಮಟ್ಟದ ಬುದ್ದಿಮತ್ತೆಯವರಿಗೂ ಮತ್ತು ಸಾಮಾನ್ಯ ಬುದ್ದಿಮತ್ತೆಯವರಿಗೂ ಕಲಿಯಲು ಪ್ರತ್ಯೇಕ ಶಿಕ್ಷಣ ವ್ಯವಸ್ಥೆಗಳಿಲ್ಲ. ಪ್ರತಿಯೊಂದು ಮಗುವೂ ದೈಹಿಕವಾಗಿ, ಮಾನಸಿಕವಾಗಿ ಅದ್ವಿತೀಯ ಮತ್ತು ತುಲನಾತೀತ. ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ಸವಾಲೆನಿಸುವ ಕಾರ್ಯಕ್ರಮಗಳನ್ನು ಇಂತಹ ನೆಲೆಯಿಂದ ನೋಡಬೇಕಾದ ಮನೋಭೂಮಿಕೆ ಪ್ರತಿಯೊಬ್ಬರಲ್ಲೂ ಜಾಗೃತವಾಗಬೇಕಾಗಿದೆ. ಏಕೆಂದರೆ ಪ್ರತಿಯೊಬ್ಬ ಮಗುವೂ ತನ್ನದೇ ಆದ ಸಾಮಥ್ರ್ಯ ಹೊಂದಿದ್ದು, ಅದರ ಬಲವರ್ಧನೆಗಾಗಿ ಶಿಕ್ಷಣ ಅವಶ್ಯಕ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯ, ಸಾಮಾಜೀಕರಣ, ಶಿಕ್ಷಣ, ಉದ್ಯೋಗ ಇವೆಲ್ಲವೂ ವ್ಯಕ್ತಿಯಲ್ಲಿ ರೂಪುಗೊಳ್ಳಲು ಸಾಮಾನ್ಯ ಶಿಕ್ಷಣ ಕ್ರಮ ಸಹಾಯ ಮಾಡುತ್ತದೆ. ಹಾಗಾಗಿ ಸಮನ್ವಯ ಶಿಕ್ಷಣ ಯಾರಿಗೂ ಹೊರೆಯಲ್ಲ. ಬದಲಾಗಿ ಅದು ವ್ಯಕ್ತಿಗಳ ನಡುವೆ ಪ್ರೀತಿ, ಸಾಮರಸ್ಯ, ಸಮಾನತೆ, ಸ್ವಾವಲಂಬನೆ, ಸಹಬಾಳ್ವೆ, ಹೊಂದಾಣಿಕೆಗಳನ್ನು ಬೆಳೆಸುವ ಸಮಾಜಿಕ ಹಂದರವನ್ನು ಬಂಧಗೊಳಿಸುವ ಸಾಧನವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಸಮನ್ವಯ ಶಿಕ್ಷಣದ ವ್ಯಾಪ್ತಿ
* ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಅವರಿರುವ ಸ್ಥಳದಿಂದ ಸಾಮಾನ್ಯ ಶಾಲೆಗೆ ಸೇರಿಸುವುದು ಮಾತ್ರವಲ್ಲ, ಎಲ್ಲಾ ಮಕ್ಕಳಿಗೂ ಅವಕಾಶ ಮಾಡಿಕೊಡುವುದು ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳೂ ಸೇರಿದಂತೆ ಎಲ್ಲಾ ಮಕ್ಕಳು ಕಲಿಯುವಂತೆ ಶಾಲೆಗಳನ್ನು ರೂಪಿಸುವುದು.
*  ವಿಶೇಷ ಅಗತ್ಯವುಳ್ಳ ಮಕ್ಕಳ ಜೀವನದ ಪ್ರಾಥಮಿಕ ಕೌಶಲ್ಯ ನೀಡಲು ಪೋಷಕರಿಗೂ ಅರಿವನ್ನು ಮೂಡಿಸುವುದು.
*  ಸಮನ್ವಯ ಶಿಕ್ಷಣದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲೆಯ ಅವಿಭಾಜ್ಯ ಅಂಗವಾಗಿರುತ್ತಾರೆ. ಅವರ ಶೈಕ್ಷಣಿಕ ಅಗತ್ಯತೆಗಳನ್ನು ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿಯೇ ಪೂರೈಸಲಾಗುತ್ತದೆ.
*  ಮೆದುಳಿನ ಪಾಶ್ರ್ವವಾಯು, ಆಟಿಸಂ ಮತ್ತು ಬಹು ವಿಕಲತೆ ಹೊಂದಿದ ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ನೀಡುವುದು.
*  ಸ್ಥೂಲವಾಗಿ ಎಲ್ಲಾ ಚಟುವಟಿಕೆಗಳನ್ನು ಎಲ್ಲಾ ಮಕ್ಕಳಿಗೂ ಒದಗಿಸಿಮಗುವನ್ನು ನಿರೀಕ್ಷಿತ ಮಟ್ಟಕ್ಕೆ ತಲುಪುವಂತೆ ವ್ಯವಸ್ಥೆ ಮಾಡುವುದು ಸಮನ್ವಯ ಶಿಕ್ಷಣದ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಂದು ಮಗುವೂ ಭಾಗವಹಿಸುವಂತಹ ಚಟುವಟಿಕೆಗಳನ್ನು ರೂಪಿಸುವುದು ಸವಾಲಾದರೂ ಕಾರ್ಯರೂಪಕ್ಕೆ ರುವುದು ಅನಿವಾರ್ಯವಾಗಿದೆ.
ಸಮನ್ವಯ ಶಿಕ್ಷಣದ ಉದ್ದೇಶಗಳು
* ವಿಶೇಷ ಅಗತ್ಯವುಳ್ಳ ಮಕ್ಕಳು ಇತರೆ ಮಕ್ಕಳಂತೆ ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಅವರ ಸಾಮಥ್ರ್ಯಕ್ಕೆ ತಕ್ಕಂತೆ ಅವಕಾಶಗಳನ್ನು ಕಲ್ಪಿಸುವುದು.
* ವಿಶೇಷ ಅಗತ್ಯವುಳ್ಳ ಮಕ್ಕಳು ಇತರೆ ಮಕ್ಕಳ ನಡುವೆ ಆರೋಗ್ಯಕರ ಸಾಮಾಜಿಕ ಸಂಬಂಧಗಳನ್ನು ಬೆಳೆಸುವ ಮೂಲಕ ಈ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು.
* ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಇತರರಲ್ಲಿ ಇರಬಹುದಾದ ಋಣಾತ್ಮಕ ಮನೋಭಾವನೆಯನ್ನು ಹೋಗಲಾಡಿಸಿ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವುದು.
* ವಿಶೇಷ ಅಗತ್ಯವುಳ್ಳ ಮಕ್ಕಳ ಜೀವನ ಮಟ್ಟ ಅವರ ಪೌರ ಹಕ್ಕುಗಳನ್ನು ಭದ್ರಗೊಳಿಸುವುದು.
* ವಿಶೇಷ ಅಗತ್ಯವುಳ್ಳ ಮಕ್ಕಳು ಸಮಾಜವನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಿ ಸ್ವಾವಲಂಬಿ ಜೀವನವನ್ನು ನೆಡೆಸಲು ಸಾಧ್ಯವಾಗುವಂತೆ ಮಾಡುವುದು.
* ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕೇವಲ ಅನುಕಂಪ ತೋರಿಸದೇ ಸಮಾನ ಅವಕಾಶಗಳನ್ನು ಕಲ್ಪಿಸುವ ಮನೋಭಾವವನ್ನು ಶಿಕ್ಷಕರಲ್ಲಿ ಹಾಗೂ ಸಮುದಾಯದವರಲ್ಲಿ ಬೆಳೆಸುವುದು.
* ಪ್ರತಿ ಮಗು ತನ್ನಲ್ಲಿ ಹುದುಗಿರುವ ಸಾಮಥ್ರ್ಯಗಳ ಸಂಪೂರ್ಣ ಸಿದ್ದಿಗೆ ಶಿಶುಸ್ನೇಹಿ ಕಲಿಕಾ ಪರಿಸರ ಒದಗಿಸುವುದು.
ಸಮನ್ವಯ ಶಿಕ್ಷಣದ ಮಾದರಿ
ಸಮನ್ವಯ ಶಿಕ್ಷಣವು ಹಲವಾರು ಮಾದರಿಗಳನ್ನು ಒಳಗೊಂಡಿರುತ್ತದೆ.
ವಸತಿ ರಹಿತ ವಿಶೇಷ ಶಾಲೆ: ತೀವ್ರ ಸ್ವರೂಪದ ನ್ಯೂನತೆ ಇರುವ ಮಕ್ಕಳನ್ನು ಅವರ ನ್ಯೂನತೆನುಗುಣವಾಗಿ ವಿಶೇಷ ಶಾಲೆಗೆ ಸೇರಿಸಿ ಶಿಕ್ಷಣ ನೀಡುವ ಪದ್ದತಿ. ಈ ಶಾಲೆಯಲ್ಲಿ ವಿಶೇಷ ಪಠ್ಯಕ್ರಮ,  ಬೋಧನಾ ವಿಧಾನ ಮತ್ತು ಪೂರಕ ಚಟುವಟಿಕೆಗಳ ಮೂಲಕ ಇತರೆ ಮೂಲಭೂತ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಶಾಲಾ ವೇಳೆಯ ನಂತರ ಈ ಮಕ್ಕಳೂ ಕೂಡಾ ಇತರೆ ಮಕ್ಕಳಂತೆ ಮನೆಗೆ ಹೋಗುವುದರಿಂದ ಶಾಲಾ ವಾತಾವರಣ ಮತ್ತು ಮನೆಯ ವಾತಾವರಣ ಎರಡಕ್ಕೂ ಹೊಂದಿಕೊಳ್ಳವಂತೆ ಸಮನ್ವಯಗೊಳಿಸಲಾಗಿದೆ.
ವಿಶೇಷ ತರಗತಿ ಮಾದರಿ : ತರಗತಿ ಶಿಕ್ಷಕರು ಸಂಪನ್ಮೂಲ ಶಿಕ್ಷಕರ ಸಹಾಯದಿಂದ ಸಾಮಾನ್ಯ ಶಾಲೆಯಲ್ಲಿಯೇ ವಿಶೇಷ ತರಗತಿ ನೆಡೆಸುವ ಯೋಜನೆಯಾಗಿದೆ. ಶಾಲೆಯಲ್ಲಿ ವೈಯಕ್ತಿಕ ಬೋಧನಾ ಸೌಲಭ್ಯವನ್ನೊದಗಿಸಿ ಮಗುವಿನ ವಿಶೇಷ ಕೊರತೆ ತುಂಬಲು ಪೂರಕ ಸಾಧನ ಸಲಕರಣೆಗಳಿರುತ್ತವೆ.
ಸಂಪನ್ಮೂಲ ಕೊಠಡಿ ಮಾದರಿ : ಸಾಮಾನ್ಯ ಶಾಲಾ ತರಗತಿಯಲ್ಲಿ ಪೂರ್ಣಾವಧಿ ವಿದ್ಯಾರ್ಥಿಯಾಗಿದ್ದು, ಅಗತ್ಯವೆನಿಸಿದಾಗ ಆ ಶಾಲೆಯಲ್ಲಿರುವ ಸಂಪನ್ಮೂಲ ಕೊಠಡಿಗೆ ಒಂದು ಅಥವಾ ಎರಡು ಗಂಟೆ ಕರೆತಂದು ನ್ಯೂನತೆಯ ಸ್ವರೂಪಕ್ಕನುಗುಣವಾಗಿ ಸಾಧನ ಸಲಕರಣೆ ಮತ್ತು ಬೋಧನೋಪಕರಣಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ವಿಶೇಷ ಸೌಲಭ್ಯವನ್ನೊದಗಿಸುವ ಪದ್ದತಿಯಾಗಿದೆ.
ಸಂಚಾರಿ ಶಿಕ್ಷಕ ಮಾದರಿ: ಸಾಮಾನ್ಯ ಶಿಕ್ಷಕರು ಸಾಮಾನ್ಯ ಶಾಲ ವ್ಯವಸ್ಥೆಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಕಲಿಕಾ ಕೊರತೆ ಮತ್ತು ವಿಶೇಷ ಸೌಲಭ್ಯ ಒದಗಿಸಲು ಸಾಧ್ಯವಾಗದಿರುವಾಗ ತಜ್ಞರೆನಿಸಿದ ವಿಶೇಷ ಶಿಕ್ಷಕರನ್ನು/ಸಂಪನ್ಮೂಲ ಶಿಕ್ಷಕರನ್ನು ಕರೆಸಿ ನ್ಯೂನತೆಯ ಮಕ್ಕಳಿಗೆ ವಿಶೇಷ ಕಲಿಕಾ ಸೌಲಭ್ಯಗಳನ್ನು ಒದಗಿಸುವ ಮಾದರಿಯಾಗಿದೆ.
ಸಂಮಿಶ್ರಣ ಮಾದರಿ : ಸಂಪನ್ಮೂಲ ಕೊಠಡಿ ಯೋಜನೆ ಮತ್ತಿ ಸಂಚಾರಿ ಶಿಕ್ಷಕ ಯೋಜನೆಗಳಿಂದ ಕೂಡಿದ ಮಾದರಿಯೇ ಸಂಮಿಶ್ರಣ ಮಾದರಿ. ಇದರಲ್ಲಿ ಅನೇಕ ಚಟುವಟಿಕೆಗಳು ಮತ್ತು ಯೋಜನೆಗಳು ಮಿಶ್ರಣಗೊಂಡಿರುತ್ತವೆ.
ವಿಶೇಷ ಐಕ್ಯತಾ ಮಾದರಿ : ವಿಶೇಷ ಅಗತ್ಯವುಳ್ಳ ಮಕ್ಕಳಿಗೂ ಸಾಮಾನ್ಯ ಮಕ್ಕಳೊಡನೆ ಸಾಮಾನ್ಯ ಪಠ್ಯಕ್ರಮವನ್ನು ಅಳವಡಿಸಿಕೊಂಡು ಬೋಧಿಸುವುದರ ಜೊತೆಗೆ ತರಗತಿ ಶಿಕ್ಷಕರೇ ನ್ಯೂನತೆ ಇರುವ ಮಕ್ಕಳ ವಿಶೇಷ ಕಲಿಕಾ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುವ ಯೋಜನೆ.
ವಿಶೇಷ ಅಗತ್ಯವುಳ್ಳ ಮಕ್ಕಳು ಸಾಮಾನ್ಯ ಶಾಲೆಯಲ್ಲಿ ಸಾಮಾನ್ಯ ಮಕ್ಕಳೊಂದಿಗೆ ಕಲಿಯುತ್ತಿರುವಾಗ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ. ಸವಾಲೆನಿಸುವ ಇಂತಹ ಮಕ್ಕಳು ಕೆಲವು ನಿರ್ದಿಷ್ಟ ವೈಲಕ್ಷಣಗಳನ್ನು ಹೊಂದಿರುತ್ತಾರೆ ಮತ್ತು ಅವುಗಳನ್ನು ನಾವು ಸುಲಭವಾಗಿ ಗುರುತಿಸಬಹುದಾಗಿದೆ.
ವಿಶೇಷ ಅಗತ್ಯವುಳ್ಳ ಮಕ್ಕಳ ಲಕ್ಷಣಗಳು
ಓದು-ಬರಹದಲ್ಲಿ ಸ್ಪಷ್ಟತೆ ಇಲ್ಲದಿರುವುದು.
ಓದುವಾಗ ಬರೆಯುವಾಗ ಪುಸ್ತಕಗಳನ್ನು ತುಂಬಾ ಸಮೀಪದಲ್ಲಿಟ್ಟುಕೊಳ್ಳುವುದು.
ಆಗಾಗ್ಗೆ ಕಣ್ಣು ಉಜ್ಜಿಕೊಳ್ಳುವುದು.
ಪದೆ ಪದೇ ಕಿವಿ ಕೆರೆದುಕೊಳ್ಳುವುದು.
ಮಾತನಾಡುವ ಕಡೆಗೆ ತಲೆಯನ್ನು ತಿರುಗಿಸಿಕೊಳ್ಳುವುದು.
ನಿರ್ದೇಶನಗಳನ್ನು ಪುನಃ ಹೇಳುವಂತೆ ಕೇಳುವುದು.
ಉಕ್ತಲೇಖನ/ನೋಟ್ಸ ಬರೆದುಕೊಳ್ಳುವಲ್ಲಿ ಕಷ್ಟಪಡುವುದು.
ಮಾತನಾಡುವವರ ಸುಳಿವು ಪಡೆಯಲು ಜಾಗರೂಕರಾಗಿ ಅವರನ್ನು ಗಮನಿಸುವುದು.
ತಡೆದು ತಡೆದು ಮಾತನಾಡುವುದು/ತೊದಲುವುದು.
ಚಲನ-ವಲನದಲ್ಲಿ ತೊಂದರೆ ಪಡುವುದು.
ಕುಳಿತುಕೊಳ್ಳಲು, ನಿಂತುಕೊಳ್ಳಲು, ನಡೆಯಲು ಕಷ್ಟಪಡುವುದು.
ಕೈಕಾಲುಗಳಲ್ಲಿ ಅನೈಚ್ಛಿಕ ಚಲನೆ ಕಂಡುಬರುವುದು.
ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ತೊಂದರೆ ಕಂಡುಬರುವುದು.
ನಿರ್ದೇಶನಗಳನ್ನು ಅರ್ಥೈಸಿಕೊಳ್ಳುವಲ್ಲಿ ಕಷ್ಟಪಡುವುದು.
ತನ್ನ ವಯಸ್ಸಿನ ಇತರೆ ಮಕ್ಕಳಂತೆ  ತರಗತಿ ಚಟುವಟಿಕೆಯಲ್ಲಿ ಭಾಗವಹಿಸದಿರುವುದು.
ಅತಿಯಾದ ಚಟುವಟಿಕೆ/ಅತೀ ಕಡಿಮೆ ಚಟುವಟಿಕೆಯಿಂದ ಇರುವುದು
ವಿಶೇಷ ಅಗತ್ಯವುಳ್ಳ ಮಕ್ಕಳು ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು
ಶಿಕ್ಷಕರು ಹೇಳಿದ ಸೂಚನೆ ಅಥವಾ ಪಾಠವನ್ನು ಗ್ರಹಿಸದಿರುವುದು ಮತ್ತು ಅರ್ಥೈಸಿಕೊಳ್ಳದಿರುವುದು.
ಅರ್ಥೈಸಿಕೊಂಡ ವಿಷಯವನ್ನು ಅಭಿವ್ಯಕ್ತಪಡಿಸಲು ಸಾಧ್ಯವಾಗದಿರುವುದು.’
ಓದು-ಬರಹದಲ್ಲಿ ಸ್ಪಷ್ಟತೆ ಇಲ್ಲದಿರುವುದು.
ಕಪ್ಪು ಹಲಗೆ ಮೇಲಿನ ಬರವಣಿಗೆಯನ್ನು ಗುರುತಿಸದಿರುವುದು.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು.
ದೈನಂದಿನ ಕೆಲಸ ನಿರ್ವಹಿಸದಿರುವುದು.
ಕಲಿತದ್ದನ್ನು ಬೇಗ ಮರೆಯುವುದು ಮತ್ತು ಸಾಮಾನ್ಯ ವಸ್ತುಗಳನ್ನು ಗುರುತಿಸಲು ವಿಫಲವಾಗುವುದು.
ಬೆಳವಣಿಗೆಯ ಮೈಲುಗಲ್ಲುಗಳನ್ನು ತಲುಪದಿರುವುದು.
ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರಣಗಳು
ಮಕ್ಕಳಿಗೆ ಅವಶ್ಯವಿರುವ ಸಾದನ ಸಲಕರಣೆಗಳನ್ನು ಒದಗಿಸುವಲ್ಲಿ ಕೊರತೆ.
ಸಾಧನ ಸಲಕರಣೆಗಳ ಉಪಯುಕ್ತತೆ ಮತ್ತು ನಿರ್ವಹಣೆಯಲ್ಲಿ ಮಾಹಿತಿ ಇಲ್ಲದಿರುವಿಕೆ.
ಪೂರಕ ಬೋಧನಾ ಸಾಮಗ್ರಿಗಳ ಕೊರತೆ.
ಪಠ್ಯಕ್ರಮದಲ್ಲಿ ಅವಶ್ಯ ಮಾರ್ಪಾಡಿನ ಕೊರತೆ.
ಶಿಕ್ಷಕರು ವೈಯಕ್ತಿಕ ಗಮನ ನೀಡದಿರುವುದು.
ಸಂವಹನ ಮತ್ತು ಬಹುಮಾಧ್ಯಮಗಳ ಬಳಕೆಯಲ್ಲಿ ಕೊರತೆ.
ದಪ್ಪ ಅಕ್ಷರ(ಉಬ್ಬು ಅಕ್ಷರ)ದಲ್ಲಿ ಮುದ್ರಣವಾಗಿರುವ ಪುಸ್ತಕಗಳ ಕೊರತೆ.
ಏಕಾಗ್ರತೆ ಕೊರತೆ, ಓದುವಾಗ ಸ್ಪಷ್ಟ ಉಚ್ಚಾರ ಇಲ್ಲದಿರುವುದು.
ವಿವಿಧ ವಿಕಲ ಚೇತನ ಮಕ್ಕಳ ಅವಶ್ಯಕತೆಗಳು
ಶ್ರವಣದೋಷವುಳ್ಳ ಮಕ್ಕಳ ಅಗತ್ಯತೆಗಳು:
ತರಗತಿಯಲ್ಲಿ ಕಪ್ಪು ಹಲಗೆ ಮತ್ತು ಶಿಕ್ಷಕರ ಮುಖಭಾವ ಕಾಣುವಂತ ಸ್ಥಳದಲ್ಲಿ ಇವರನ್ನು ಕೂಡಿಸಬೇಕು.
ಸಂಭಾಷಣೆಗೆ ಹೆಚ್ಚಿನ ಅವಕಾಶ ನೀಡುವುದು.
ಸಂಪನ್ಮೂಲ ಕೊಠಡಿಯ ಸಂಪೂರ್ಣ ಬಳಕೆ.
ಸಂಜ್ಞಾ ತರಬೇತಿ.
ದೃಷ್ಟಿದೋಷವುಳ್ಳ ಮಕ್ಕಳ ಅಗತ್ಯಗಳು:
ತರಗತಿ ಕೊಠಡಿಯಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ.
ಕಪ್ಪು ಹಲಗೆ ಮೇಲೆ ಬಿಳಿ/ಹಳದಿ ಬಣ್ಣದ ಸೀಮೆ ಸುಣ್ಣದ ಬಳಕೆ.
ದೃಕ್ ಶ್ರವಣ ಮಾಧ್ಯಮಗಳ ಬಳಕೆ ಮತ್ತು ಪಾಠಗಳನ್ನು ಮುದ್ರಿಸಿದ ಧ್ವನಿಸುರುಳಿಗಳ ಬಳಕೆ.
ನೇತ್ರ ವೈದ್ಯರಿಂದ ತಪಾಸಣೆ ಮತ್ತು ಸೂಕ್ತ ಕನ್ನಡಕ ಬಳಕೆ.
ಬ್ರೈಲ್ ಲಿಪಿ, ಅಬಾಕಸ್ ಮತ್ತು ಟೇಲರ್‍ಫ್ರೇಮ್ ಬಳಕೆ.
ಬುದ್ದಿ ದೋಷವುಳ್ಳ ಮಕ್ಕಳ ಅಗತ್ಯಗಳು:
ಮಗುವಿನ ಬುದ್ದಿಶಕ್ತಿಗನುಗುಣವಾಗಿ ವೈಯಕ್ತಿಕ ಶೈಕ್ಷಣಿಕ ಕಾರ್ಯಕ್ರಮಗಳು.
ಹೆಚ್ಚು ಮೂರ್ತ ಮತ್ತು ನೈಜ ವಸ್ತುಗಳ ಬಳಕೆ.
ಸಣ್ಣ ಪ್ರಗತಿಯನ್ನೂ ಪ್ರಶಂಸಿಸುವುದು.
ಪುನರಾವರ್ತನೆಯ ಅಭ್ಯಾಸ.
ಮಧ್ಯೆ ಮಧ್ಯೆ ಲಘು ವಿಶ್ರಾಂತಿ.
ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು.
ಮನೋವೈದ್ಯರ ಸಲಹೆ ಮತ್ತು ಅನುಸರಣೆ.
ಮಕ್ಕಳ ಪೋಷಕರಿಗೆ ಆಪ್ತ ಸಲಹೆ ಮತ್ತು ಮಾರ್ಗದರ್ಶನ.
ಚಲನಾಂಗ ದೋಷವುಳ್ಳ ಮಕ್ಕಳ ಅಗತ್ಯಗಳು:
ಸಾಧನೋಪಕರಣ ಧರಿಸಿ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ.
ಸಾಧನ ಸಲಕರಣೆಗಾಗಿ ಸೂಕ್ತ ಸ್ಥಳಾವಕಾಶ.
ಬೌತಿಕ ಪರಿಸರ ಹೊಂದಾಣಿಕೆ(ರ್ಯಾಂಪ್ಸ್, ಹಿಡಿಕಂಬಿಗಳು)
ಮೂಳೆ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ.
ಅಗತ್ಯವಿದ್ದಲ್ಲಿ ಗಾಲಿ ಕುರ್ಚಿಗಳ ಬಳಕೆ.
ಕಲಿಕಾದೋಷವುಳ್ಳ ಮಕ್ಕಳ ಅಗತ್ಯಗಳು:
ಹಂತಹಂತವಾಗಿ ಕಲಿಯಲು ಅವಕಾಶ ನೀಡುವುದು.
ಬಹು ಇಂದ್ರಿಯ ಕಲಿಕಾ ಅನುಭವ ಒದಗಿಸಿ ಉತ್ತೇಜಿಸುವುದು.
ಪರಿಹಾರಾತ್ಮಕ ಬೋಧನೆ.
ಮನೋವೈದ್ಯರಿಂದ ತಪಾಸಣೆ ಮತ್ತು ಸಲಹೆ.
ವಿ.ಅ.ಮ.ಕಲಿಕೆಯಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳು
* ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿ ವಿ.ಅ.ಮಕ್ಕಳಿಗೆ ವೈಯಕ್ತಿಕ ಗಮನ ನೀಡುವುದು.
* ವಿ.ಅ.ಮಕ್ಕಳಿಗೂ ಮತ್ತು ಇತರೆ ಮಕ್ಕಳಿಗೂ ಸಹ ಸಂಬಂದಿತ ಕಲಿಕೆ ಮೂಡಿಸುವುದು.
* ವಿ.ಅ.ಮಕ್ಕಳಿಗೂ ಮತ್ತು ಇತರೆ ಮಕ್ಕಳಿಗೂ ಏಕರೂಪದ ಪಠ್ಯಕ್ರಮದಿಂದ ಕಲಿಸುವುದು.
* ವಿ.ಅ.ಮಕ್ಕಳ ಪಾಲಕರ ಮನವೊಲಿಸಿ ಶಾಲೆಗೆ ಕರೆತರುವುದು. ಅಂದರೆ ಪಾಲಕರಲ್ಲಿನ ನಕಾರಾತ್ಮಕ  ದೋರಣೆಯನ್ನು ಸಕಾರಾತ್ಮಕವಾಗಿ
   ಬದಲಾಯಿಸುವುದು.
* ಸರ್ಕಾರಿ ಸೌಲಭ್ಯಗಳ ನಂತರ ಈ ಮಕ್ಕಳು ಶಾಲೆ ತೊರೆಯುವುದು.
* ಎಲ್ಲಾ ಶಾಲೆಗಳಲ್ಲೂ ಸೂಕ್ತ ಸಂಪನ್ಮೂಲ ಕೊಠಡಿ ವ್ಯವಸ್ಥೆ ಇಲ್ಲದಿರುವುದು.
* ಶಿಕ್ಷಕರ ಸಕಾರಾತ್ಮಕ ಮನೋಭಾವನೆ ಮತ್ತು ಅವಧಾರಣೆಯ ಕೊರತೆ.
* ಶಿಕ್ಷಕರಿಗೆ ಅವಶ್ಯಕ ಸಂಪನ್ಮೂಲದ ಕೊರತೆ.
ಸಾಧ್ಯತೆಗಳು
* ಶಿಕ್ಷಕರ ಮತ್ತು ಪಾಲಕರ ಮನೋಧೋರಣೆಯಲ್ಲಿ ಬದಲಾವಣೆ ಆಗಬೇಕು.
* ಪ್ರತೀ ಶಾಲೆಯಲ್ಲಿ ವಿ.ಅ.ಮಕ್ಕಳ ಅಗತ್ಯತೆಗನುಗುಣವಾಗಿ ಸಂಪನ್ಮೂಲ ಕೊಠಡಿ ಸೌಲಭ್ಯ ಒದಗಿಸುವುದು.
* ವಿ.ಅ.ಮಕ್ಕಳ ಅಗತ್ಯತೆಗನುಗುಣವಾಗಿ ಸಾಧನ ಸಲಕರಣೆ ವಿತರಣೆಗೆ ಸೂಕ್ತ ಕ್ರಮ.
* ಬೋಧನೆ ಮತ್ತು ಕಲಿಕೆ ಮಾಹಿತಿ ತಂತ್ರಜ್ಞಾನ ಬಳಕೆ.
* ವರ್ಷಕ್ಕೆರಡು ಬಾರಿ ವಿ.ಅ.ಮಕ್ಕಳ ಆರೋಗ್ಯ ತಪಾಸಣೆ ಮತ್ತು ಅದರ ಅನುಸರಣೆ.
* ತರಗತಿ ಕೊಠಡಿಯೊಳಗೆ ಗಾಲಿ ಕುರ್ಚಿ ಅಥವಾ ಟ್ರೈಸೈಕಲ್ ಬಳಸಲು ಸೂಕ್ತ ಸ್ಥಳಾವಕಾಶ ಒದಗಿಸುವುದು.
* ವಿ.ಅ.ಮಕ್ಕಳಿಗೆ ಸೂಕ್ತವಾದ ಪಠ್ಯಕ್ರಮ ರಚನೆ.
- ಆರ್.ಬಿ.ಗುರುಬಸವರಾಜ.