May 23, 2014

ಸ್ನಾನಕ್ಕೆ ಟಾ ಟಾ ಹೇಳಿದ ಭೂಪ

ವಿಚಿತ್ರ ಬದುಕು
ಸ್ನಾನಕ್ಕೆ ಟಾ ಟಾ ಹೇಳಿದ ಭೂಪ

ಪ್ರೀತೀನೇ ಹಾಗೆ. ಯಾರನ್ನೂ ಅವರಿದ್ದ ಹಾಗೆ ಇರಲು ಬಿಡುವುದಿಲ್ಲ. ಪ್ರೀತಿಸಿದವಳು ಕೈ ಹಿಡಿದರೆ ಕಾರಲ್ಲಿ ಸುತ್ತಾಡುವುದು. ಪ್ರೀತಿಸಿದವಳು ಕೈ ಕೊಟ್ಟರೆ ಬಾರಲ್ಲಿ ಸುತ್ತಾಡುವುದು ಇಂದಿನ ಜಾಯಮಾನ. ಪ್ರೀತಿಗಾಗಿ ತ್ಯಾಗಿಗಳಾದವರು ಅನೇಕರು. ಪಾರ್ವತಿಗಾಗಿ ದೇವದಾಸ್, ಲೈಲಾಗಾಗಿ ಮಜ್ನು ಪ್ರಾಣವನ್ನೇ ಬಲಿಕೊಟ್ಟರು. ಮಮ್ತಾಜ್‍ಳ ಪ್ರೀತಿಗಾಗಿ ಷಹಜಹಾನ್ ತಾಜ್‍ಮಹಲನ್ನೇ ಕಟ್ಟಿದ. ಹೀಗೆ ಪ್ರೀತಿಗಾಗಿ ಒಬ್ಬೊಬ್ಬರೂ ಒಂದೊಂದು ತ್ಯಾಗ ಮಾಡಿ ಅಮರರಾಗಿದ್ದಾರೆ. ಆದರೆ ಇಲ್ಲೊಬ್ಬ ಪ್ರೀತಿಸಿದವಳು ಕೈಕೊಟ್ಟಳು ಎಂಬ ಕಾರಣಕ್ಕೆ ಬರೋಬ್ಬರಿ 60 ವರ್ಷಗಳಿಂದ ಮೈಗೆ ನೀರನ್ನೇ ಮುಟ್ಟಿಸಿಲ್ಲ. ಅಂದರೆ ಸ್ನಾನವನ್ನೇ ಮಾಡಿಲ್ಲ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಆ ವ್ಯಕ್ತಿ ಇನ್ನೂ ಜೀವಂತವಾಗಿದ್ದಾನೆ, ಆರೋಗ್ಯವಾಗಿದ್ದಾನೆ. ಅಂತಹ ಮಹಾನ್ ತ್ಯಾಗಿಯೇ 80 ರ ಹರೆಯದ ಕುಮಾರ ಅಮು ಹಾಜಿ. 38 ವರ್ಷಗಳಿಂದ ಸ್ನಾನ ಮಾಡದೇ ವಿಶ್ವದಾಖಲೆ ಮಾಡಿದ್ದ ಭಾರತದ ‘ಕೈಲಾಸ್ ಸಿಂಗ್’ನ ದಾಖಲೆಯನ್ನು ಅಮು ಹಾಜಿ ಮುರಿದಿದ್ದಾನೆ. 

ಅಮು ಹಾಜಿ ವಾಸವಿರುವುದು ದಕ್ಷಿಣ ಇರಾನಿನ ಫಾರ್ಸ್ ಪ್ರಾಂತ್ಯದ ಬಳಿಯ ‘ದೇಜಘಢ’ ಎಂಬ ಹಳ್ಳಿಯ ಹೊರವಲಯದಲ್ಲಿ. ಈತನ ಪ್ರಕಾರ ಸ್ನಾನ ಮಾಡುವುದು ಎಂದರೆ ಅನಾರೋಗ್ಯವನ್ನು ತಂದುಕೊಳ್ಳುವುದು. ದೇಹದ ಹೊರಮೈಗೆ ನೀರಿನ ಸಂಪರ್ಕವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಈತನಿಗೆ ಯಾರಾದರೂ ಸ್ನಾನದ ಸಲಹೆಯನ್ನು ನೀಡಿದರೆ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ ಅಥವಾ ಅವರನ್ನೇ ತಿರಸ್ಕರಿಸುತ್ತಾನೆ. 
ಈತ 20 ವರ್ಷದವನಿದ್ದಾಗ ಸ್ಪುರದ್ರೂಪಿಯೂ, ಸದೃಢನೂ ಆಗಿದ್ದ. ಆಗ ವಯೋಸಹಜವಾದ ಆಸೆಯಂತೆ ಒಂದು ಹುಡುಗಿಯನ್ನು ಪ್ರೀತಿಸಿದ. ಅವಳು ಇವನನ್ನು ತಿರಸ್ಕರಿಸಿದಳು. ಯುವಕನಾಗಿದ್ದಾಗಿನ ಭಾವನಾತ್ಮಕ ಹಿನ್ನಡೆಯಿಂದ ವಿರಹಿಯಾದ. ಅಂದಿನಿಂದ ಏಕಾಂಗಿಯಾಗಿರಲು  ಹಾಗೂ ಸ್ನಾನ ಮಾಡದಿರಲು ತೀರ್ಮಾನಿಸಿದ. 
ಕೇವಲ ಸ್ನಾನ ಮಾಡದಿರುವದಷ್ಟೇ ವಿಚಿತ್ರವಲ್ಲ. ಈತನ ಬದುಕು ಹಲವು ವಿಚಿತ್ರಗಳ ಸರಮಾಲೆ. ಸ್ನಾನದಂತೆ ಶುದ್ದ ಮತ್ತು ತಾಜಾ ಆಹಾರವನ್ನು ತಿರಸ್ಕರಿಸುವ ಈತನಿಗೆ ಸತ್ತ ಪ್ರಾಣಿಗಳ ಹಸಿಮಾಂಸವೇ ಆಹಾರ. ಅದರಲ್ಲೂ ಪ್ರಿಯವಾದ ಆಹಾರವೆಂದರೆ ಸತ್ತ ಮುಳ್ಳು ಹಂದಿಯ ಹಸಿಮಾಂಸ. 
ಹೊರಮೈಗೆ ನೀರನ್ನು ನಿಷೇಧಿಸಿದ ಹಾಜಿ ಕುಡಿಯಲು ನೀರನ್ನು ಬಳಸುತ್ತಾನೆ. ದಿನೊಂದಕ್ಕೆ 4-5ಲೀಟರ್ ನೀರು ಕುಡಿಯುತ್ತಾನೆ. ನೀರು ತರಲು ಹಳೆಯ ಕೊಳಕಾದ ಮತ್ತು ತುಕ್ಕು ಹಿಡಿದ ತೈಲದ ಡಬ್ಬವೊಂದನ್ನು ಇಟ್ಟುಕೊಂಡಿದ್ದಾನೆ. ಈತನಿಗೆ ಸ್ವಚ್ಚತೆ ಎಂದರೆ ಅಲರ್ಜಿ.
ಬೆಲೆ ಏರಿಕೆಯ ಬಿಸಿಯಾಗಲೀ, ವಿದ್ಯುತ್ ವೆಚ್ಚಗಳ ಚಿಂತೆಯಾಗಲೀ  ಅಮು ಹಾಜಿಗೆ ಇಲ್ಲ. ಏಕೆಂದರೆ ಈತನ ವಾಸ ಹಳ್ಳಿಯ ಹೊರವಲಯದ ಬಯಲಿನಲ್ಲಿ. ಸಮಾಧಿ ತರಹದ ಒಂದು ಬೋನು ಈತನ ಅರಮನೆ. ಸ್ವಚ್ಚಂದವಾದ ಗಾಳಿಯೇ ಏರ್‍ಕೂಲರ್. ಭೂಮಿಯ ಮೃದುವಾದ ನೆಲವೇ ಮೆತ್ತನೆಯ ಹಾಸಿಗೆ. ಕೈ ತೋಳುಗಳೇ ತಲೆದಿಂಬು. ಎರಡನೇ ಮಹಾಯುದ್ದದ ಕಾಲದ ಶಿರಸ್ತ್ರಾಣ(ಹೆಲ್ಮೆಟ್)ವೇ ಚಳಿಗಾಲದ ಆಪಧ್ಬಾಂಧವ.
ತನ್ನ ಸುಂದರವಾದ ಮುಖ ನೋಡಿಕೊಳ್ಳಲು ಕಾರಿನ ಸೈಡ್ ಮಿರರ್ ಇಟ್ಟುಕೊಂಡಿದ್ದಾನೆ. ಆಗಾಗ್ಗೆ ಗಡ್ಡ ಮೀಸೆಗಳನ್ನು ಟ್ರಿಮ್ ಮಾಡಿಕೊಳ್ಳುತ್ತಾನೆ. ಇದಕ್ಕಾಗಿ ಆತ ಕಂಡುಕೊಂಡ ಸರಳ ವಿಧಾನವೆಂದರೆ ಬೆಂಕಿಯಿಂದ ಸುಟ್ಟುಕೊಳ್ಳುವುದು.
ಅಮು ಹಾಜಿ ಭಂಗಿ ಸೇದುತ್ತಾನೆ. ಸಾಮಾನ್ಯವಾಗಿ ಭಂಗಿ ಸೇದುವವರು ತಂಬಾಕು ಬಳಸುತ್ತಾರೆ. ಆದರೆ ಹಾಜಿ ತಂಬಾಕಿಗೆ ಬದಲಾಗಿ ಪ್ರಾಣಿಗಳ ಮಲದ ಒಣ ಪುಡಿಯನ್ನು ಬಳಸುತ್ತಾನೆ. ಯಾರಾದರೂ ಸಿಗರೇಟು ನೀಡಿದರೆ ಸೇದುತ್ತಾನೆ. ಅದೂ 4-5 ಸಿಗರೇಟನ್ನು ಏಕಕಾಲಕ್ಕೆ ಹಚ್ಚಿಕೊಂಡು ಸೇದುತ್ತಾನೆ.
ಒಟ್ಟಾರೆ ಮೇಲಿನ ಎಲ್ಲಾ ವಿಲಕ್ಷಣ ಚಟುವಟಿಕೆಗಳನ್ನು ಗಮನಿಸಿದರೆ ಆತನೊಬ್ಬ ಮಾನಸಿಕ ಅಸ್ವಸ್ಥ ಇರಬಹುದೆಂದು ತಕ್ಷಣವೇ ತೀರ್ಮಾನಿಸಬಹುದು. ಆದರೆ ಅಮು ಹಾಜಿ ಮಾನಸಿಕ ಅಸ್ವಸ್ಥನಲ್ಲ. ಎಂಬುದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದೆ. ಹಾಜಿಗೆ 80 ವರ್ಷ ವಯಸ್ಸಾದರೂ ಆ ವಯಸ್ಸಿನವರಿಗಿಂತ ಹೆಚ್ಚು ಸಂತೋಷದಿಂದ ಮತ್ತು ಆರೋಗ್ಯದಿಂದ ಇದ್ದಾನೆ. ತನಗೆ ಬೇಕಾದ ಆಹಾರ ಮತ್ತು ನೀರನ್ನು ಆತನೇ ಹುಡುಕಿ ತರುತ್ತಾನೆ. 
ಭಿನ್ನವಾಗಿ ಬದುಕುತ್ತಿರುವ ಹಾಜಿ ಅನೇಕ ಅಧ್ಯಯನಗಳಿಗೆ ವಿಷಯವಾಗುತ್ತಿದ್ದಾನೆ. ಅಧ್ಯಯನಕಾರರಿಗೆ ಹೆಚ್ಚು ಹೆಚು ಆಸಕ್ತಿದಾಯಕನಾಗುತ್ತಿದ್ದಾನೆ. ಈ ರೀತಿಯ ಅಧ್ಯಯನಗಳಿಂದ ಆತನ ಮನಸ್ಸಿನ ಮೂಲೆಯಲ್ಲಿ ಅವಿತು ಕುಳಿತ ಅಮೂಲ್ಯ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ ಎಂದು ಇರಾನಿನ ‘ತೆಹರ್ಹಾನ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ. 
ಇದು ವ್ಯರ್ಥ ಅಧ್ಯಯನವೆಂದು ಕೆಲವರು ವ್ಯಂಗ್ಯವಾಡಿದ್ದಾರೆ. ಈ ರೀತಿಯ ಅಧ್ಯಯನಗಳಿಂದ ಆತನ ಜೀವನವನ್ನು ಲೇವಡಿ ಮಾಡುವುದಾಗಲೀ ಅಥವಾ ಜೀವನಶೈಲಿಯನ್ನು ಬದಲಿಸುವುದಾಗಲೀ ಅಲ್ಲ. ಬದಲಾಗಿ ಮಾನಸಿಕ ಸ್ವಸ್ಥರೆನಿಸಿಕೊಂಡ ನಾವು ಕಲಿಯಬೇಕಾದುದು ಬಹಳಷ್ಟಿದೆ. ಅದೇನೆಂದರೆ ಮೊದಲನೆಯದಾಗಿ ಸಂತೋಷ ಎನ್ನುವುದು ಹಣ, ಆಸ್ತಿ, ಆಡಂಬರ, ವೈಭವಗಳಿಂದ ಲಭಿಸುವುದಲ್ಲ. ಅದು ಮನಸ್ಸಿನ ಸ್ಥಿತಿ ಎಂಬುದು. ಎರಡನೆಯದಾಗಿ ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ ಎಂಬುದು. ಮೂರನೆಯದು ಯಾರಿಗೂ ತೊಂದರೆ ಕೊಡದೇ ಒಂಟಿಯಾಗಿ ಬದುಕುವದು ಹೇಗೆ ಎಂಬುದನ್ನು ಹಾಜಿಯ ಜೀವನದಿಂದ ಕಲಿಯಬಹುದು. ಕಲಿಯಲು ವ್ಯಕ್ತಿ ಮುಖ್ಯ ಅಲ್ಲ, ಘಟನೆಗಳು, ಅನುಭವಗಳು ಮುಖ್ಯ ಅಲ್ಲವೇ?

'ಟೀಚರ್' ಮೇ 2014
ಆರ್.ಬಿ.ಗುರುಬಸವರಾಜ

No comments:

Post a Comment