October 28, 2014

ಕನ್ನಡ ನುಡಿಗೆ ಬಸ್ ಸೇವೆ

ದಿನಾಂಕ 28-10-2014 ರ ಪ್ರಜಾವಾಣಿಯ "ಕರ್ನಾಟಕ ದರ್ಶನ" ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ.
          ಕನ್ನಡ ನುಡಿಗೆ ಬಸ್ ಸೇವೆ
    ಬಸ್ ಪ್ರಯಾಣ ಎಂದರೆ ಬಹುತೇಕರಿಗೆ ಅಲರ್ಜಿ. ಅದರಲ್ಲೂ ರಾಜ್ಯ ರಸ್ತೆ ಸಾರಿಗೆ ಬಸ್‍ಗಳೆಂದರೆ ಇನ್ನೂ ಬೇಜಾರು. ಪ್ರಯಾಣದ ವೇಳೆ ಪತ್ರಿಕೆಯೋ, ಪುಸ್ತಕವೋ ಇದ್ದರೆ ಪ್ರಯಾಣ ಪ್ರಯಾಸವಾಗಲಾರದು ಅಲ್ಲವೇ? ಇವೆಲ್ಲವೂ ಬಸ್‍ನಲ್ಲೇ ಪುಕ್ಕಟೆ ದೊರೆಯುವಂತಾದರೆ ಹೇಗೆ? ಏನು ಕನಸು ಕಾಣುತ್ತಿದ್ದೀರಾ! ಎಂಬ ಪ್ರಶ್ನೆ ನಿಮ್ಮದಲ್ಲವೇ? ಇದು ಕನಸಲ್ಲ ನನಸು.
    ಹೊಸಪೇಟೆ ವಿಭಾಗದ ಹಗರಿಬೊಮ್ಮನಹಳ್ಳಿ ಘಟಕದ ಕೆ.ಎ35 ಎಫ್115 ಸಂಖ್ಯೆಯ ವಾಹನದಲ್ಲಿ ಇಂತದ್ದೊಂದು ಸೌಲಭ್ಯವಿದೆ. ಈ ಬಸ್ ಹೆಚ್ಚಾಗಿ ಹೊಸಪೇಟೆ ದಾವಣಗೆರೆ ಮಾರ್ಗದಲ್ಲಿ ಸಂಚರಿಸುತ್ತದೆ. ಈ ಬಸ್‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ದಿನಪತ್ರಿಕೆಗಳು, ವಾರಪತ್ರಿಕೆಗಳು, ಕೆಲವು ಸಾಹಿತ್ಯಿಕ ಪುಸ್ತಕಗಳು ಪುಕ್ಕಟೆಯಾಗಿ ಓದಲು ಸಿಗುತ್ತವೆ.
    ಅಷ್ಟೇ ಅಲ್ಲ, ವಾಹನದ ಒಳಭಾಗದಲ್ಲಿ ಕನ್ನಡ ನಾಡಿನ ಕೀರ್ತಿ ಬೆಳಗಿದ ಪ್ರಮುಖ ಸಾಹಿತಿಗಳ ಭಾವಚಿತ್ರಗಳೂ ಸಹ ಇವೆ. ಪ್ರಯಾಣದ ವೇಳೆ ಸಾಹಿತ್ಯಿಕ ವಿಚಾರಗಳನ್ನು ಮತ್ತು ನಿತ್ಯದ ಸುದ್ದಿಗಳನ್ನು ಮೆಲುಕು ಹಾಕಬಹುದು.
    ಈ ಬಗ್ಗೆ ಘಟಕದ ನಿರ್ವಾಹಕರಾದ ಎಂ.ಗೌರಿಶಂಕರ ಅವರನ್ನು ವಿಚಾರಿಸಿದಾಗ “ಇಂದಿನ ಸ್ಪರ್ದಾತ್ಮಕ ಪ್ರಪಂಚದಲ್ಲಿ ಪ್ರಯಾಣಿಕರನ್ನು ಆಕರ್ಷಿಸುವುದು ಅನಿವಾರ್ಯ. ಆಡಿಯೋ/ವೀಡಿಯೋ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಸೆಳೆಯುವ ಬದಲು ಪತ್ರಿಕೆ-ಪುಸ್ತಕಗಳನ್ನು ಇಡಲಾಗಿದೆ. ಆ ಮೂಲಕವಾದರೂ ಪ್ರಯಾಣಿಕರಲ್ಲಿ ಕನ್ನಡಾಭಿಮಾನ ಬೆಳೆಯಲಿ ಎಂಬುದು ನಮ್ಮ ಆಶಯ. ಇದರ ಉಸ್ತುವಾರಿಯನ್ನು ಶಿವಣ್ಣ(ಬಿಲ್ಲೆ ಸಂಖ್ಯೆ 2193) ಎಂಬ ನಿರ್ವಾಹಕರು ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ” ಎಂದು ಖುಷಿಯಿಂದ ಹೇಳುತ್ತಾರೆ.
    ಪುಸ್ತಕ/ಪತ್ರಿಕೆ ಇಡಲು ನೇತುಹಾಕಿದ ಟ್ರೇ ಮೇಲೆ “ಪುಸ್ತಕ ಮತ್ತು ಪತ್ರಿಕೆಗಳನ್ನು ಓದಿದ ನಂತರ ಇದರಲ್ಲಿಯೇ ಇಡಿ” ಎಂಬ ವಿನಂತಿಯನ್ನು ಅಂಟಿಸಲಾಗಿದೆ. ನೀವೊಮ್ಮೆ ಈ ಬಸ್‍ನಲ್ಲಿ ಪ್ರಯಾಣಿಸಿದರೆ ನೀವು ಖರೀದಿಸಿದ ಪತ್ರಿಕೆ/ಪುಸ್ತಕಗಳನ್ನು ಇದರಲ್ಲಿ ಹಾಕಿ. ಅದು ಇತರೆ ಪ್ರಯಾಣಿಕರಿಗೆ ಓದಲು ಸಹಾಯವಾಗುತ್ತದೆ. ಆ ಮೂಲಕವಾದರೂ ನಾಡು-ನುಡಿಗೆ ಸೇವೆ ಸಲ್ಲಿಸಿದಂತಾಗುತ್ತದೆ. ಏನಂತೀರಿ?

            -ಆರ್.ಬಿ.ಗುರುಬಸವರಾಜ.   




No comments:

Post a Comment