October 19, 2015

'ಕೊಸಿಮೊ' ಪುಸ್ತಕ ಪರಿಚಯ

ಅಕ್ಟೋಬರ್ 2015 ರ "ಟೀಚರ್" ಮಾಸಪತ್ರಿಕೆಯಲ್ಲಿ ಪ್ರಕಟವಾದ 'ಕೊಸಿಮೊ' ಪುಸ್ತಕ ಪರಿಚಯ

‘ಕೊಸಿಮೊ’ ಎಂಬ ಮರದ ಮೇಲಿನ ಪ್ರಪಂಚ

    ಸಮಕಾಲಿನ ತಲ್ಲಣಗಳನ್ನು ವಾಸ್ತವವಾದಿ ನೆಲೆಗಟ್ಟಿನ ಮೇಲೆ ರೂಪಿಸಿ, ಅಕ್ಷರ ರೂಪು ನೀಡುವುದು ಬಹು ಕಷ್ಟದ ಕೆಲಸ. ಆದಾಗ್ಯೂ ಕೆಲ ಲೇಖಕರು ಅಂತಹ ಸಾಹಸಕ್ಕೆ ಕೈ ಹಾಕುವುದುಂಟು. ಅಂತಹ ಸಾಹಸಿಗ ಲೇಖಕರ ಸಾಲಿನಲ್ಲಿ ನಿಲ್ಲುವ ಲೇಖಕರೆಂದರೆ ಇಟಲಿಯ ‘ಇಟಾಲೊ ಕಾಲ್ವಿನೊ’ ಅವರು.
    ಇಟಾಲೊ ಕಾಲ್ವಿನೊ ಎಂತಹ ಬರಹಗಾರರು ಎಂಬುದನ್ನು ನಿರ್ಧರಿಸಲು ಅವರ ‘ಬ್ಯಾರೆನ್ ಇನ್ ದಿ ಟ್ರೀಸ್’(ಕೊಸಿಮೊ) ಕೃತಿಯೊಂದೇ ಸಾಕು. ಅವರ ಇಡೀ ಪರಿಶ್ರಮವನ್ನು ಶಬ್ದಗಳ ಲಯಗಾರಿಕೆಯನ್ನು ಪಾತ್ರಗಳ ಮೂಲಕ ನೀಡುವ ಅವರ ತುಡಿತ-ಮಿಡಿತಗಳನ್ನು ಎಂತಹವರೂ ಅರ್ಥಮಾಡಿಕೊಳ್ಳಬಹುದು.
    ಕೊಸಿಮೊ ಅವರ ಅದ್ಬುತ ಕಾದಂಬರಿಗಳಲ್ಲಿ ಒಂದು. ಪ್ರಸ್ತುತ ಕಾದಂಬರಿಯ ಕಥಾವಸ್ತು ವಿಭಿನ್ನವೂ ವಿಶೇಷವೂ ಆಗಿದೆ. ಬಹುತೇಕ ಲೇಖಕರು ನೆಲದ ಮೇಲಿನ ಮಾನವನ ಕುರಿತು ಕಥೆ ಕಾದದಂಬರಿ ರಚಿಸಿದರೆ ಕಾಲ್ವಿನೊ ಅವರು ಮರದ ಮೇಲಿನ ಮಾನವನ ಕುರಿತು ಕಾದಂಬರಿ ರಚಿಸಿರುವುದೇ ಇದರ ವಿಶೇಷತೆ.
    ಇಲ್ಲಿ ರಮ್ಯತೆ ಇದೆ, ವಾಸ್ತವಿಕತೆ ಇದೆ, ರಂಜನೀಯತೆ ಇದೆ, ಸೃಜನಶೀಲತೆ ಇದೆ. ಜೊತೆಗೆ ಪರಿಸರ ಕಾಳಜಿಯೂ ಕೂಡಾ ಇದೆ. ಇಲ್ಲಿ ಏನಿದೆ? ಎನ್ನುವುದಕ್ಕಿಂತ ಏನಿಲ್ಲ? ಎಂದು ಓದುಗ ಹುಡುಕ ಹೊರಟರೆ ಅವನೊಬ್ಬ ಸಾಹಿತ್ಯ ಸಂಶೋಧಕನಾಗುತ್ತಾನೆ.
    ಕಾದಂಬರಿಯು 1767 ರ ನಿರ್ದಿಷ್ಟ ದಿನಾಂಕದೊಂದಿಗೆ ಪ್ರಾರಂಭವಾಗುತ್ತದೆಯಾದರೂ ಅದು ಸಮಕಾಲಿನ ಸಮಾಜಿಕ ಪರಿಸರವನ್ನೇ ಬಿಚ್ಚಿಡುತ್ತದೆ. ಇಡೀ ಕಾದಂಬರಿ ಒಂದು ಇಟಾಲಿಯನ್ ಬ್ಯಾರನ್ ಕುಟುಂಬದ ಸುತ್ತ ಗಿರಕಿ ಹೊಡೆದರೂ, ಆ ಗಿರಕಿಯಲ್ಲೇ ಇಡೀ ಪ್ರಪಂಚದ ವಿದ್ಯಮಾನಗಳನ್ನು ಬಿಂಬಿಸುವ ಪ್ರಯತ್ನ ನಡೆದಿದೆ.
    ಕಾದಂಬರಿಯ ಪ್ರಾರಂಭದಲ್ಲೇ ಒಂದು ಊಟದ ಪ್ರಸಂಗಕ್ಕಾಗಿ ಮನೆಯವರ ವಿರುದ್ದ ಬಂಡೆದ್ದು ಮನೆಬಿಟ್ಟು ಮರವೇರಿದ 12 ವರ್ಷದ ಬಾಲಕ ಕೊಸಿಮೊ , ಉಪನಯನವನ್ನು ದಿಕ್ಕರಿಸಿ ಮನೆತೊರೆದ ಕ್ರಾಂತಿಕಾರಿ ಬಸವಣ್ಣನ ನೆನಪು ತರುತ್ತಾನೆ. ಹಾಗೆ ಮರವೇರಿದ ಕೊಸಿಮೊ ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ನೆಲಕ್ಕೆ ಕಾಲಿಡದೇ ಬದುಕಿದ ಅವನ ರೀತಿ ರೋಮಾಂಚನ ಎನಿಸಿದರೂ ಹೀಗೂ ಬದುಕಬಹುದು ಎಂಬುದನ್ನು ಕಲಿಸುತ್ತದೆ.
    ಕಾದಂಬರಿಯ ಮುಖ್ಯ ಪಾತ್ರಧಾರಿ ಕೊಸಿಮೊ ಕೇವಲ ಒಬ್ಬ  ವ್ಯಕ್ತಿಯಲ್ಲ. ಅವನೇ ಒಂದು ಪ್ರಪಂಚ. ಅವನ ಈ ಪ್ರಪಂಚದಲ್ಲಿ ಪರಿಸರದೊಂದಿಗಿನ ಹೊಂದಾಣಿಕೆ, ಭವಾಭಾವದ ನಡುವೆಯೂ ಉತ್ಕøಷ್ಟತೆಯನ್ನು ಸಾಧಿಸಿ, ಶ್ರೇಷ್ಠತೆ ಪಡೆದ ಬಗೆಯನ್ನು ಕಾಲ್ವಿನೊ ಸುಂದರವಾಗಿ ರೂಪಿಸಿದ್ದಾರೆ.
    ಎಲ್ಲವನ್ನೂ ತ್ಯಜಿಸಿ ಏನೂ ಇಲ್ಲಗಳ ಮಧ್ಯೆ ಮರದ ಮೇಲೆಯೇ ಎಲ್ಲವನ್ನೂ ಸೃಷ್ಟಿಸಿಕೊಂಡು ಬದುಕುವ ಕೊಸಿಮೊ ಅಪ್ರತಿಮ ಸೃಷ್ಟಿಕರ್ತನಾಗಿ ಗೋಚರಿಸುತ್ತಾನೆ. ಪೋಲಿಯಾಗಿ ನೆಲದ ಮೇಲೆ ಓಡಾಡಬೇಕಾದ ವಯಸ್ಸಿನಲ್ಲಿ ಕೋತಿಯಂತೆ ಮರದಲ್ಲೇ ಓಡಾಡುವ, ಜೋಲಾಡುವ ಆ ಮೂಲಕ ಇಡೀ ಊರಿನ ಜನರ ಬಾಯಿಗೆ ಚರ್ಚೆಯ ವಿಷಯವಾಗುವ ಕೊಸಿಮೊನ ಪಾತ್ರ ಓದುಗರ ಅವಧಾನವನ್ನು ಹಿಡಿದಿಡುತ್ತಲೇ ರಮ್ಯತೆಯ ಲೋಕದಲ್ಲಿ ತೇಲಾಡಿಸುತ್ತದೆ.
    ಪಕ್ಕದ ಮನೆಯ ಶ್ರೀಮಂತ ಹುಡುಗಿ ವಯೋಲಾಳೊಂದಿಗಿನ ಸ್ನೇಹ, ಮೋಹ, ಪ್ರೇಮ, ಕಾಮ, ದ್ವೇಷ, ಮತ್ಸರ, ವಿರಹಗಳೆಲ್ಲವೂ ಕೊಸಿಮೊನನ್ನು ಒಬ್ಬ ಸಮಕಾಲೀನ ಪಡ್ಡೆ ಹುಡುಗ ಎಂಬಂತೆ ಬಿಂಬಿಸಿದರೆ  ರೈತರ ಬೆಳೆಗಳ ಕೀಟ ಆರಿಸುವ, ಕಳೆಕೀಳುವ, ಪ್ರಾಣಿ ಪಕ್ಷಿಗಳಿಂದ ಬೆಳೆಗಳನ್ನು ರಕ್ಷಿಸುವ ಮೂಲಕ ರೈತರ ಏಳಿಗೆಯನ್ನು ಬಯಸುವ ಸಮಾಜೋದ್ದಾರಕನನ್ನಾಗಿ, ಕಾಡ್ಗಿಚ್ಚನ್ನು ನಂದಿಸುವ ಅರಣ್ಯಪಾಲಕನನ್ನಾಗಿಯೂ ಬಿಂಬಿಸಿವೆ.
    ತಂದೆಯ ಮಾತಿಗೆ ಗೌರವ ಕೊಡುವ ಆಜ್ಞಾಪಾಲಕನಾಗಿ ವಿದ್ಯಾರ್ಜನೆಗೆ ಮುಂದಾದ ಕೊಸಿಮೊ ತನ್ನ ಗುರುಗಳಿಗೇ ಗುರುವಾಗಿ ಪರಿವರ್ತನೆ ಹೊಂದುವ ಪರಿ ಓದಿನ ಮಹತ್ವವನ್ನು ತಿಳಿಸುತ್ತದೆ. ‘ಪುಸ್ತಕ ಓದುವ ಹವ್ಯಾಸವುಳ್ಳವರು ಎಲ್ಲಿದ್ದರೂ ಹೇಗಿದ್ದರೂ ಸುಖವಾಗಿರಬಲ್ಲರು’ ಎಂಬುದನ್ನು ಸಾಬೀತುಪಡಿಸಲು ಇಲ್ಲಿ ಅನೇಕ ಸಾಕ್ಷ್ಯಾಧಾರಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಎಂದರೆ, ಸಣ್ಣಪುಟ್ಟ ಕಳ್ಳತನಗಳಿಂದ ಢಾಕುವಾಗಿ ಬೆಳೆದಿದ್ದ ಬ್ರೂಗಿ ಎಂಬ ಕ್ರೂರಪ್ರಾಣಿಗೆ ಓದುವ ಹುಚ್ಚನ್ನು ಹಚ್ಚುವ ಮೂಲಕ ರಾಬರಿಗಳನ್ನು ನಿಯಂತ್ರಿಸಲು ಪ್ರಯತ್ನಿಸಿದ್ದು ಕೊಸಿಮೊನ ಟ್ಯಾಲೆಂಟೆಡ್ ಬ್ರೈನ್.
    ಟ್ರೀ ವಲ್ರ್ಡ್‍ನಲ್ಲಿದ್ದುಕೊಂಡು ಅಂಡರ್‍ವಲ್ರ್ಡ್ ಪಾತಕಿಗಳನ್ನು ಮಟ್ಟ ಹಾಕಲು ಪ್ರಯತ್ನಿಸುವ ಕೊಸಿಮೊ ಒಬ್ಬ ದಕ್ಷ ಪೋಲೀಸ್ ಅಧಿಕಾರಿಯಾಗಿ ಗೋಚರಿಸುತ್ತಾನೆ. ಕಾದಂಬರಿಯ ಅಂತ್ಯಕ್ಕೆ ಗೋವಿನ ಹಾಡು ಪದ್ಯದ ‘ಕೊಟ್ಟ ಮಾತಿಗೆ ತಪ್ಪಲಾರೆನು ಕೆಟ್ಟ ಯೋಚನೆ ಮಾಡಲಾರೆನು’ ಎಂಬ ಸಾಲುಗಳು ನೆನಪಾಗುತ್ತವೆ. ಕೊಸಿಮೊ ತನ್ನ ಗೆಳತಿ ವಯೋಲಾಳಿಗೆ ನೀಡಿದ ವಚನಕ್ಕೆ ಬದ್ದನಾಗಿ ನೆಲದ ಮಣ್ಣನ್ನು ಸೊಂಕಿಸಿಕೊಳ್ಳದೇ ಮರಣಹೊಂದಿ ಅಂತಧ್ರ್ಯಾನ ಹೊಂದುವ ಪರಿ ಓದಿಗನ ಕಣ್ಣಂಚಿನ ತೇವವನ್ನು ಹೆಚ್ಚಿಸುತ್ತದೆ. ಆ ಮೂಲಕ ಕೌತುಕಗಳನ್ನು, ಪ್ರಶ್ನೆಗಳನ್ನೂ ಉಳಿಸುತ್ತದೆ.
    ಕೊಸಿಮೊ ಕೇವಲ ಒಂದು ಕಾದಂಬರಿ ಅಲ್ಲ. ಇದು ನಮ್ಮೊಳಗಿನ ನಮ್ಮನ್ನು ಹುಡುಕುವ ಪ್ರಯತ್ನ. ಸಾಧಿಸಲು ಅನೇಕ ಮಾರ್ಗಗಳಿವೆ ಎಂಬುದನ್ನು ಸಾಬೀತು ಪಡಿಸುವ ಪ್ರೇರೇಪಣಾ ಕೃತಿ. ಮಾನವರಾದ ನಾವು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಕುರಿತು ಮಾರ್ಗದರ್ಶನ ನೀಡುವ ಮಾರ್ಗದರ್ಶಿ, ವೈಚಾರಿಕತೆಯನ್ನು ಬೆಳೆಸುವ ವಿಚಾರ ಪ್ರಚೋದಕ ನಾಗಿ, ಪರಿಸರದೊಂದಿಗಿನ ಮಾನವನ ಅವಿನಾಭಾವ  ಸಂಬಂಧಗಳನ್ನು ಗಟ್ಟಿಗೊಳಿಸುವ, ಜಾಗತೀಕರಣದ ಪ್ರಭಾವದಿಂದಾಗುವ ಅನಾಹುತಗಳ ವಿರುದ್ದ ನಮ್ಮನ್ನು ಎಚ್ಚರಿಸುವ ಆಪ್ತಸಮಾಲೋಚಕನಾಗಿ ಈ ಕೃತಿ ಪ್ರಾಮುಖ್ಯ ಎನಿಸುತ್ತದೆ.
    ಇದನ್ನು ಓದುತ್ತಾ ಹೋದಂತೆಲ್ಲಾ ಪಾತ್ರಗಳು ನಮ್ಮ ಮನಸ್ಸಿನ ಕ್ಯಾನ್ವಾಸ್ ಮೇಲೆ ರಂಗುರಂಗಿನ ಸ್ಥರ ಚಿತ್ರಗಳನ್ನಾಗಿ,  ಆ ಸ್ಥಿರ ಚಿತ್ರಗಳು ವಿಡಿಯೋ ಚಿತ್ರಣಗಳಾಗಿ ದಾರಾವಾಹಿ ಅಥವಾ ಸಿನೆಮಾ ರೂಪದಲ್ಲಿ ಕಣ್ಣಮುಂದೆ ಸಾಗಿ ಹೋಗುತ್ತವೆ.
    ಪರಿಸರ ಪ್ರಿಯರೂ, ಸಾಹಿತ್ಯ ಶೋಧಕರೂ ಆದ ಕೆ.ಪಿ.ಸುರೇಶ ಅವರ ಅನುವಾದ ಆಪ್ಯಾಯಮಾನ ಎನಿಸುತ್ತದೆ. ಇದು ಅನುವಾದಿತ ಕೃತಿ ಅಂತ ಅನಿಸುವುದೇ ಇಲ್ಲ. ಥೇಟ್ ಕನ್ನಡದ ಕೃತಿ ಎಂಬಂತೆ ಭಾಸವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಓದುಗನೂ ಓದಲೇಬೇಕಾದ ಕೃತಿ ‘ಕೊಸಿಮೊ’.
ಪುಸ್ತಕ ಪರಿಚಯ
ಕೃತಿಯ ಹೆಸರು : ಕೊಸಿಮೊ(ಕಾದಂಬರಿ)
ಮೂಲ ಲೇಖಕರು: ಇಟಾಲೊ ಕಾಲ್ವಿನೊ
ಕನ್ನಡಾನುವಾದ : ಕೆ.ಪಿ.ಸುರೇಶ
ಪ್ರಕಾಶಕರು : ಅಭಿನವ ಪ್ರಕಾಶನ. ಬೆಂಗಳೂರು
ಬೆಲೆ : 100 ರೂಪಾಯಿಗಳು

                                                                                                        ಆರ್.ಬಿ.ಗುರುಬಸವರಾಜ

‘ಟೀಚರ್’ ಅಕ್ಟೋಬರ್ 2015

1 comment:

  1. ಪುಸ್ತಕ ಎಲ್ಲಿ ಸಿಗುತ್ತೆ
    ಯಾವ website sir

    ReplyDelete