June 3, 2016

ಕುಗ್ರಾಮದಲ್ಲೊಬ್ಬ ಆದರ್ಶ ಶಿಕ್ಷಕ MODEL TEACHER KOTRESH

ದಿನಾಂಕ 26-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.

ಕುಗ್ರಾಮದಲ್ಲೊಬ್ಬ ಆದರ್ಶ ಶಿಕ್ಷಕ 


ಬಿರುಬಿಸಿಲಿಗೆ ಹೆಸರುವಾಸಿಯಾದ ರಾಯಚೂರು ಜಿಲ್ಲೆಯಲ್ಲೊಂದು ಖಾಸಗೀ ಹಾಗೂ ಮಲೆನಾಡ ಶಾಲೆಗಳನ್ನು ಮೀರಿಸುವಂತಹ ಶಾಲೆಯೊಂದಿದೆ. ಅದುವೇ ಸಿಂಧನೂರು ತಾಲೂಕಿನ ಕುಗ್ರಾಮ ಗೊಣ್ಣಿಗನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ.  ಈಗ ಅಲ್ಲಿ 300 ಕ್ಕೂ ಹೆಚ್ಚಿನ ಮರಗಳು ಫಲ ಮತ್ತು ನೆರಳು ನೀಡಲು ಸಜ್ಜಾಗಿವೆ. ಇದಕ್ಕಿಂತ ಮುಖ್ಯವಾಗಿ ಇಡೀ ಗ್ರಾಮವೀಗ ಬಯಲು ಶೌಚಮುಕ್ತ, ಹೊಗೆ ರಹಿತ ಗ್ರಾಮ ಹಾಗೂ ಸಂಪೂರ್ಣ ಸೋಲಾರ್ ಗ್ರಾಮವಾಗಿದೆ. ಇದೆಲ್ಲಾ ಒಬ್ಬ ಶಿಕ್ಷಕನಿಂದ ಎಂದರೆ ಆಶ್ಚರ್ಯವಾಗುತ್ತದೆ. ನಂಬಲು ಅಸಾಧ್ಯ ಎನ್ನುವಂತಾಗುತ್ತದೆ. ಶಿಕ್ಷಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲಿನ ಶಿಕ್ಷಕರಾದ ಕೊಟ್ರೇಶ್ ಹಿರೇಮಠ ಅವರೇ ಸಾಕ್ಷಿ. 
2004ಕ್ಕೂ ಮುಂಚೆ ಅದನ್ನು ಶಾಲೆ ಎನ್ನುವಂತಿರಲಿಲ್ಲ. ಕಟ್ಟಡದ ಸುತ್ತ ಬೆಳೆದ ಮುಳ್ಳು ಕಂಟೆಗಳು, ಕಳೆ ಗಿಡಗಳು, ಕಸದ ತಿಪ್ಪೆಗಳು, ಚರಂಡಿ ನೀರಿನ ಗುಂಡಿಗಳು. ಅಕ್ಷರಶಃ ಅದು ಶಾಲೆ ಎನ್ನುವ ಬದಲು ಪಾಳು ಕಟ್ಟಡ ಎನ್ನುವಂತಿತ್ತು. ಇಷ್ಟೆಲ್ಲಾ ಸಮಸ್ಯೆಗಳಿರುವ ಶಾಲೆಗೆ 2004ರಲ್ಲಿ ಹೊಸದಾಗಿ ಕೊಟ್ರೇಶ್ ಅವರು ಶಿಕ್ಷಕರಾಗಿ ನೇಮಕಗೊಳ್ಳುತ್ತಾರೆ. ಇವರನ್ನು ಸೇವೆಗೆ ಸೇರಿಕೊಳ್ಳಲು ಇನ್ನೊಬ್ಬ ಶಿಕ್ಷಕರೂ ಸಹ ಇಲ್ಲ. 
       ಇಂತಹ ಶಾಲೆಯ ವಾತಾವರಣ ನೋಡಿದ ಶಿಕ್ಷಕರಿಗೆ ಶಾಲೆಯ ಸಹವಾಸವೇ ಬೇಡ, ನೌಕರಿಯೂ ಬೇಡ ಎನ್ನಿಸಿತು. ಆದರೂ ಗಟ್ಟಿ ಮನಸ್ಸು ಮಾಡಿ ಸುಂದರ ಶಾಲೆಯನ್ನಾಗಿಸುವ ಪಣ ತೊಡುತ್ತಾರೆ. ಯೋಜನೆ ಸಿದ್ದ ಪಡಿಸುತ್ತಾರೆ. ಶ್ರಮವಹಿಸಿ ಶ್ರದ್ದೆಯಿಂದ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ. 
ಸಮುದಾಯದ ಸಹಭಾಗಿತ್ವ
              ಶಾಲೆಯ ಸುತ್ತಮುತ್ತ ಇದ್ದ ಮೇವಿನ ಬಣವೆ, ತಿಪ್ಪೆಗಳನ್ನು ತೆರವುಗೊಳಿಸುವುದು ಸವಾಲಾಗಿತ್ತು. ತೆರವುಗೊಳಿಸುವಾಗ ಕೆಲವು ವೇಳೆ ಅವುಗಳ ಮಾಲೀಕರೊಂದಿಗೆ ವಾಗ್ವಾದವೂ ನಡೆದಿತ್ತು. ಆದರೂ ದೃತಿಗೆಡದೇ ಸಮುದಾಯದ ಸಹಕಾರ ಪಡೆದು ಬಣವೆ ತಿಪ್ಪೆಗಳನ್ನು ತೆರವುಗೊಳಿಸುವಲ್ಲಿ ಸಫಲರಾದರು. ಒತ್ತುವರೆಯಾಗಿದ್ದ 240ಚ.ಮೀ ಶಾಲಾ ಜಾಗವನ್ನು ಮರುವಶಪಡಿಸಿಕೊಂಡ ನಂತರ ತಂತಿಬೇಲಿ ನಿರ್ಮಿಸಿದರು. 2006ರಲ್ಲಿ ಶಾಲಾ ಆವರಣಕ್ಕೊಂದು ನಿಶ್ಚಿತ ಎಲ್ಲೆ ಹಾಗೂ ಭದ್ರತೆ ದೊರೆತ ಮೇಲೆ ಗಿಡಗಳನ್ನು ನೆಡಲು ಪ್ರಾರಂಭಿಸಿದರು. ನೀರಿನ ಕೊರತೆಯಿಂದ ಗಿಡಗಳನ್ನು ಬೆಳೆಸುವುದು ತೊಂದರೆಯಾಗಿತ್ತು. ವಿದ್ಯಾರ್ಥಿಗಳಿಂದ ಗಿಡಗಳಿಗೆ ನೀರುಣಿಸುವುದು ಸಮಸ್ಯೆಯಾದಾಗ ಗ್ರಾಮಸ್ಥರ ಸಹಕಾರದಿಂದ 2008ರಲ್ಲಿ ಪೈಪ್‍ಲೈನ್ ವ್ಯವಸ್ಥೆ ಮಾಡಿದರು. 
       ಅಂತೆಯೇ ಮಕ್ಕಳಿಗೆ ಬಿಸಿಯೂಟಕ್ಕಾಗಿ ತಟ್ಟೆಲೋಟ ಸಂಗ್ರಹಿಸಿದರು. ಎಲ್ಲಾ ಮಕ್ಕಳಿಗೂ ಶಾಲಾ ಬ್ಯಾಗ್, ನೋಟ್ ಪುಸ್ತಕ, ಕಲರ್ ಪೆನ್ಸ್, ಟೈ-ಬೆಲ್ಟ್, ಕಂಪ್ಯೂಟರ್, ಟಿ.ವಿ, ಡೆಸ್ಕ್, ಪರೀಕ್ಷೆ ಬರೆಯಲು ಪ್ಯಾಡ್‍ಗಳನ್ನೂ ದಾನಿಗಳಿಂದ ಸಂಗ್ರಹಿಸಿದ್ದಾರೆ. ಏಕೋಪಾಧ್ಯಾಯ ಶಿಕ್ಷಕರಾದ ಕೊಟ್ರೇಶ್ ಅವರು ಬೋಧನೆಯಲ್ಲೂ ವಿಶಿಷ್ಠತೆ ಮೆರೆದಿದ್ದಾರೆ. ಪ್ರತಿವರ್ಷವೂ ಶೇಕಡಾ70 ರಷ್ಟು 5ನೇ ತರಗತಿ ಮಕ್ಕಳು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಆದರ್ಶ, ನವೋದಯದಂತಹ ವಿವಿಧ  ವಸತಿ ಶಾಲೆಗಳಿಗೆ ಆಯ್ಕೆಯಾಗುತ್ತಾರೆ. 
ಬದಲಾಯಿತು ಇಡೀ ಹಳ್ಳಿಯ ಚಿತ್ರಣ
         ಅಂದು ಕುಗ್ರಾಮ ಎಂಬ ಕುಖ್ಯಾತಿ ಹೊಂದಿದ್ದ ಗೊಣ್ಣಿಗನೂರು ಇಂದು ಇಡೀ ರಾಜ್ಯದಲ್ಲಿಯೇ ಅತ್ಯುತ್ತಮ ಮಾದರಿ ಗ್ರಾಮವಾಗಲು ಸಜ್ಜಾಗುತ್ತಿದೆ. ಪ್ರಸ್ತುತ ಗ್ರಾಮದಲ್ಲಿ 92 ಮನೆಗಳಿದ್ದು, ಸಿಂಧನೂರಿನ ರುದ್ರಗೌಡ ಪಾಟೀಲ್ ಪ್ರತಿಷ್ಠಾನದ ನೆರವಿನೊಂದಿಗೆ  ಬಯಲು ಶೌಚಮುಕ್ತ ಗ್ರಾಮವಾಗಿ ಘೋಷಣೆಯಾಗಿದೆ. ಈ ಘೋಷಣೆ ಕೇವಲ ದಾಖಲೆಯಲ್ಲಿ ಅಲ್ಲ. ಪ್ರತಿ ಕುಟುಂಬಗಳು ಶೌಚಾಲಯ ಬಳಸುತ್ತಿದ್ದಾರೆ. ಅಂತೆಯೇ ಸಿಂಧನೂರಿನ ಸೆಲ್ಕೋ ಸೋಲಾರ್ ನೆರವಿನೊಂದಿಗೆ ಪ್ರತೀ ಮನೆಗೂ ಸೋಲಾರ್ ವಿದ್ಯುತ್ ವ್ಯವಸ್ಥೆ ಪೂರ್ಣಗೊಂಡಿದೆ. ಅಲ್ಲದೇ ಸಿಂಧನೂರಿನ ಶ್ರೀಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸೀಸ್ ಇವರ ಸಹಕಾರದಿಂದ ಇಡೀ ಗ್ರಾಮ ಹೊಗೆ ಮುಕ್ತ ಗ್ರಾಮವಾಗಿದೆ. ಈಗಾಗಲೇ ಗ್ರಾಮದಲ್ಲಿ ಸಂಪೂರ್ಣ ಚರಂಡಿ ವ್ಯವಸ್ಥೆ ಉತ್ತಮ ಗುಣಮಟ್ಟದ ಸಿ.ಸಿ.ರಸ್ತೆಗಳು ಪ್ರಗತಿಯಲ್ಲಿವೆ. ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ಶಿಕ್ಷಕರಿಂದ ಎಂಬುದು ಗ್ರಾಮಸ್ಥರ ಅಭಿಮತ. 
ಪಬ್ಲಿಕ್ ಹೀರೋ
             ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಬಾವಿಹಳ್ಳಿ ಗ್ರಾಮದವರಾದ ಕೊಟ್ರೇಶ್ ಅವರು ಕೇವಲ ಸಾಮಾನ್ಯ ಶಿಕ್ಷಕರಲ್ಲ. ಅವರೊಬ್ಬ ಪಬ್ಲಿಕ್ ಹೀರೋ ಆಗಿ ರೂಪುಗೊಂಡಿದ್ದಾರೆ. ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಉದಾರ ಸಹಾಯ ಮಾಡಿದ್ದಾರೆ. ಎಂ.ಎ, ಬಿ.ಇಡಿ ಪದವಿ ಪಡೆದ ಅವರು ಈಗಲೂ ಗ್ರಾಮದ ಉನ್ನತ ವ್ಯಾಸಂಗದಲ್ಲಿ ತೊಡಗಿದ ಮಕ್ಕಳಿಗೆ ಉಚಿತ ಮನೆಪಾಠ ಮಾಡುವ ಮೂಲಕ ಅವರ ಭವಿಷ್ಯದ ಶಿಕ್ಷಣಕ್ಕೆ ಮಾರ್ಗದರ್ಶಿಯಾಗಿದ್ದಾರೆ.  ಶಿಕ್ಷಕರ ಸೇವೆಯನ್ನು ಗಮನಿಸಿದ ಶಿಕ್ಷಣ ಇಲಾಖೆ ಸದ್ರಿ ಶಿಕ್ಷಕರಿಗೆ 2015ರಲ್ಲಿ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ ನೀಡಿ ಗೌರವಿಸಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದ ಪಬ್ಲಿಕ್ ಚಾನಲ್‍ನವರು ದಿನಾಂಕ 17-03-2016 ರಂದು ‘ಪಬ್ಲಿಕ್ ಹೀರೋ’ ಕಾರ್ಯಕ್ರಮದಲ್ಲಿ ಇವರ ಸೇವೆಯ ಬಗ್ಗೆ ಕಾರ್ಯಕ್ರಮ ಭಿತ್ತರಿದ್ದಾರೆ. ಈ ಕಾರ್ಯಕ್ರಮದ ನಂತರ ಶಾಲೆಗೆ ದಾನಿಗಳ ಸಂಖ್ಯೆ ಹೆಚ್ಚಾಗಿದೆ. ಚೆಕ್, ಡಿ.ಡಿಗಳ ಮೂಲಕ ಹಣವನ್ನು ಅಥವಾ ಅವಶ್ಯಕ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡುತ್ತಲಿದ್ದಾರೆ. ಜೊತೆಗೆ ಗ್ರಾಮಕ್ಕೆ ಭೇಟಿ ನೀಡುವ ವೀಕ್ಷಕರ ಸಂಖ್ಯೆಯೂ ಹೆಚ್ಚಿದೆ ಎನ್ನುತ್ತಾರೆ  ಗ್ರಾಮಸ್ಥರು. ಗುಡಿಸಲು ಮುಕ್ತ ಗ್ರಾಮವನ್ನಾಗಿಸಲುವ ಭವಿಷ್ಯದ ಯೋಜನೆ ಕೊಟ್ರೇಶ್ ಹಿರೇಮಠ ಅವರದು. ಹೀಗೆ ವಿಭಿನ್ನ ವ್ಯಕ್ತಿತ್ವದ ಮೂಲಕ ಕೊಟ್ರೇಶ್ ಇತರರಿಗೆ ಪ್ರೇರಣೆಯಾಗಿದ್ದಾರೆ. 
ಆರ್.ಬಿ.ಗುರುಬಸವರಾಜ

No comments:

Post a Comment