ದಿನಾಂಕ 05-09-2019 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.
ಬದುಕು ಕಟ್ಟಿಕೊಂಡ ಹುಡುಗಿ
ಈಗ್ಗೆ ಆರೇಳು ವರ್ಷಗಳ ಹಿಂದೆ ನಡೆದ ಘಟನೆ. ಬೇಸಿಗೆ ರಜೆ ಮುಗಿಸಿಕೊಂಡು ಶಾಲೆ ಪುನರಾರಂಭವಾಗಿತ್ತು. ಜೂನ್ ಮೊದಲ ವಾರದಲ್ಲಿ ಏಳನೇ ತರಗತಿ ಉತ್ತೀರ್ಣರಾದ ಬಹುತೇಕ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಪಡೆದು ಪ್ರೌಢಶಾಲೆಗೆ ದಾಖಲಾದರು. ಆದರೆ ಸುಮ(ಹೆಸರು ಬದಲಿಸಿದೆ) ಎಂಬ ವಿದ್ಯಾರ್ಥಿನಿ ಮಾತ್ರ ಟಿ.ಸಿ. ಪಡೆಯಲು ಬರಲೇ ಇಲ್ಲ. ಈ ಬಗ್ಗೆ ಇನ್ನಿತರೇ ವಿದ್ಯಾರ್ಥಿಗಳನ್ನು ಕೇಳಿದಾಗ ‘ಸರ್, ರಜೆಯಲ್ಲಿ ಅವಳ ಮದುವೆಯಾಯಿತು. ಈಗ ಗಂಡನ ಮನೆಯಲ್ಲಿದ್ದಾಳೆ” ಎಂಬ ವಿಷಯ ಕೇಳಿ ನಮಗೆಲ್ಲ ಶಾಕ್ ಆಯಿತು. ಈಗ ನಾವೇನು ಮಾಡಬೇಕು ಎಂಬುದೇ ತೊರದಾಯಿತು. ಒಂದೆರಡು ತಿಂಗಳ ಬಳಿಕ ಮಕ್ಕಳ ಗಣಿತಿಗೆಂದು ಮನೆ ಭೇಟಿ ಮಾಡಿದೆವು. ಆಗ ಸುಮಳ ಮನೆ ಬಳಿ ಹೋದಾಗ ಅವಳು ಒಳಗಿರುವುದು ಗೊತ್ತಾಗಿ ಮಾತನಾಡಿಸಿದೆವು. ಅವಳು ಹೊರಬರದೇ ಬಾಗಿಲ ಮರೆಯಲ್ಲಿಯೇ ನಿಂತು ಅಳತೊಡಗಿದಳು. ವಿಷಯ ಏನೆಂದು ಕೇಳಿದಾಗ ತಾಯಿ ಅಳುತ್ತಾ “ಹತ್ತು ದಿನದ ಹಿಂದೆ ಸುಮಳ ಗಂಡ ತೀರಿಕೊಂಡ” ಎಂಬ ಸುದ್ದಿ ತಿಳಿಸಿದಳು. ಆಗ ನಿಜಕ್ಕೂ ನಮಗೆ ಹೃದಯವೇ ಬಾಯಿಗೆ ಬಂದAತಾಯಿತು. ತಾಯಿ ಹಾಗೂ ಮಗಳ ಆಕ್ರಂದನ ಮುಗಿಲು ಮುಟ್ಟಿತು. ಒಂದು ಗಂಟೆಗೂ ಹೆಚ್ಚು ಕಾಲ ಅವರ ಮನೆಯ ಬಳಿ ಕುಳಿತು ಸಮಾದಾನ ಮಾಡಿ ಅವಳಿಗೆ ದೈರ್ಯ ತುಂಬಿದೆವು. ಪುನಹ ಶಾಲೆಗೆ ಸೇರಲು ಕೇಳಿಕೊಂಡೆವು. ಹದಿನೈದು ದಿನಗಳ ನಂತರ ಶಾಲೆಗೆ ಸೇರಲು ತಯಾರಾಗಿ ಬಂದರು. ನಾವೇ ಮುಂದೆ ನಿಂತು ಪಕ್ಕದ ಪ್ರೌಢಶಾಲೆಗೆ ಸೇರಿಸಿದೆವು. ಈಗ ಪಿ.ಯು.ಸಿ ಮುಗಿಸಿದ್ದಾಳೆ. ಬಾಲ್ಯವಿವಾಹ ಹಾಗೂ ಕುಡಿತದ ಪರಿಣಾಮಗಳ ವಿರುದ್ದ ಧ್ವನಿಎತ್ತಲು ಪೋಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾಳೆ. ಬದಲಾದ ಅವಳ ಜೀವನ ಕಂಡು ಶಿಕ್ಷಕನಾಗಿದ್ದು ಸಾರ್ಥಕ ಎನಿಸಿತು.
No comments:
Post a Comment