July 23, 2014

ನೀವೂ ಕ್ವಿಜ್ ಗೆಲ್ಲಬೇಕೇ?

ದಿನಾಂಕ 23-07-2014ರ ವಿಜಯವಾಣಿಯ ಮಸ್ತ್ ಪುರವಣಿಯಲ್ಲಿ ಪ್ರಕಟವಾದ 'ನೀವೂ ಕ್ವಿಜ್ ಗೆಲ್ಲಬೇಕೇ?' ಎಂಬ ಲೇಖನ


ನೀವೂ ಕ್ವಿಜ್ ಗೆಲ್ಲಬೇಕೇ?
2014 ರ ವಿಶ್ವಕಪ್ ಫುಟ್ಬಾಲ್‍ನಲ್ಲಿ ಟ್ರೋಫಿ ಗೆದ್ದ ದೇಶ ಯಾವುದು?
2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು?
ನರೇಂದ್ರ ಮೋದಿ ಭಾರತದ ಎಷ್ಟನೇ ಪ್ರಧಾನಮಂತ್ರಿ?
ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಯಾವುದು?
ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯ ಚಲನಚಿತ್ರ ಯಾವುದು?
ಹೀಗೆ ವಿವಿಧ ಪ್ರಶ್ನೆಗಳನ್ನು ನಿಮಗೆ ಕೇಳಿದರೆ ಉತ್ತರ ಗೊತ್ತಿದ್ದರೆ ಥಟ್ಟಂತ ಉತ್ತರಿಸುತ್ತೀರಿ. ಇಲ್ಲದಿದ್ದರೆ ಉತ್ತರಿಸಲು ತಡಬಡಾಯಿಸುತ್ತೀರಿ. ಅಲ್ಲವೇ? ಇಂತಹ ಪ್ರಶ್ನೆಗಳನ್ನು ಕೇಳಿ ನಿಮ್ಮಲ್ಲಿನ ಜ್ಞಾನವನ್ನು ಕೆದಕುವ ಅಥವಾ ಪರೀಕ್ಷಿಸುವ ಸ್ಪರ್ದೆಯೇ ರಸಪ್ರಶ್ನೆ ಅಥವಾ ಕ್ವಿಜ್. ಇದನ್ನು ಬುದ್ದಿಶಕ್ತಿಯ ಆಟವೆಂತಲೂ ಜಾಣ್ಮೆಯ ಪರೀಕ್ಷೆ ಎಂತಲೂ ಕರೆಯುತ್ತಾರೆ. ಈ ಸ್ಪರ್ಧೆಯನ್ನು ವೈಯಕ್ತಿಕವಾಗಿ ಅಥವಾ ಗುಂಪಿನಲ್ಲಿಯೂ ಆಡಬಹುದಾಗಿದೆ. ಇದು ಭಾಗವಹಿಸುವವರ ನಡುವಿನ ಪ್ರತಿಷ್ಠೆಯ ಪಂದ್ಯವಾಗಿದ್ದು, ಕೇಳಲಾದ ಪ್ರಶ್ನೆಗೆ ನಿಗದಿತ ಸಮಯದಲ್ಲಿ ಸರಿಯಾಗಿ ಉತ್ತರಿಸಿ ತಂಡವನ್ನು ಮುನ್ನಡೆಸುವುದು ಹಾಗೂ ಪ್ರಶಸ್ತಿ ಗಳಿಸುವುದು ಮುಖ್ಯವಾಗಿರುತ್ತದೆ.
ಕ್ವಿಜ್ ಒಂದು ವಸ್ತುನಿಷ್ಠತೆಯ ಸ್ಪರ್ಧೆಯಾಗಿದ್ದು, ಪಠ್ಯ ಹಾಗೂ ಪಠ್ಯೇತರ ಜ್ಞಾನವನ್ನು ಅಳೆಯುವುದು ಇದರ ಉದ್ದೇಶವಾಗಿರುತ್ತದೆ. ಕಲಿತ ವಿಷಯಗಳಲ್ಲಿನ ತಾತ್ವಿಕ ಅಂಶಗಳು ಹಾಗೂ ಅವುಗಳ ಅನ್ವಯಗಳ ಸಹ ಸಂಬಂಧವನ್ನು ಪರೀಕ್ಷಿಸುವುದಾಗಿದೆ. ಇದು ಮೇಲ್ನೋಟಕ್ಕೆ ಸುಲಭವೆಂದು ಗೋಚರಿಸಿದರೂ ಜ್ಞಾನದ ಆಳ ಮತ್ತು ವಿಸ್ತಾರವನ್ನು ಒರೆಗೆ ಹಚ್ಚುತ್ತದೆ.
  ಕ್ವಿಜ್ ಸ್ಪರ್ಧೆಯು ನಿರೀಕ್ಷಿತ ಘಟನೆಯಾಗಿದ್ದು, ಇಲ್ಲಿ ಸ್ಪಧಾರ್ಥಿಗಳ ವಿವಿಧ ಕ್ಷೇತ್ರಗಳಾದ ಭಾಷೆ, ಗಣಿತ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಸಾಮಾನ್ಯಜ್ಞಾನ, ಪ್ರಚಲಿತ ಜ್ಞಾನ, ಕಲೆ, ಸಾಹಿತ್ಯ, ಸಂಸ್ಕøತಿ, ಇತಿಹಾಸ, ಕ್ರೀಡೆ, ಮನೋರಂಜನೆ ಇತ್ಯಾದಿಗಳಲ್ಲಿನ ಜ್ಞಾನವನ್ನು ಅಳೆಯಲಾಗುತ್ತದೆ. 
ಇಂದು ಅನೇಕ ಶಾಲೆ-ಕಾಲೇಜುಗಳಲ್ಲಿ ಹಾಗೂ ಇತರ ಸಂಘ-ಸಂಸ್ಥೆಗಳಲ್ಲಿ  ಬೇರೆ ಬೇರೆ ಸಂದರ್ಭಗಳಲ್ಲಿ ಕ್ವಿಜ್ ಕಾರ್ಯಕ್ರಮ ನಡೆಸಲಾಗುತ್ತದೆ. ಅಲ್ಲದೇ ಕೆಲವು ಖಾಸಗೀ ಚಾನಲ್‍ಗಳೂ ಕೂಡಾ ರಿಯಾಲಿಟಿ ಶೋ ಮೂಲಕ ಕ್ವಿಜ್ ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರಸಾರ ಮಾಡುತ್ತಿವೆ. ಈ ಕ್ವಿಜ್ ಸ್ಪರ್ಧೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಅವುಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು.
ಪ್ರಯೋಜನಗಳು :
ಕ್ವಿಜ್ ಸಾಮಾನ್ಯ ಜ್ಞಾನ ಹಾಗೂ ನಿರ್ದಿಷ್ಟ ಕ್ಷೇತ್ರದಲ್ಲಿನ ಜ್ಞಾನವನ್ನು ವಿಸ್ತರಿಸುವ ಪ್ರಕ್ರಿಯೆಯಾಗಿದೆ.
ಸ್ಪರ್ಧಾರ್ಥಿಯನ್ನು ವಿಭಿನ್ನ ಆಯಾಮಗಳಲ್ಲಿ ಹಾಗೂ ತಮ್ಮ ಜ್ಞಾನಕೋಶದ ಆಚೆಗೂ ಯೋಚಿಸಲು ಸಶಕ್ತರನ್ನಾಗಿಸುತ್ತದೆ.
ಸ್ಪರ್ಧಾಳುಗಳು ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಆರೋಗ್ಯಕರ ಚರ್ಚೆಗೆ ಮುಂದಾಗಲು ಉತ್ತೇಜಿಸುತ್ತದೆ.
ಶಾಲಾ-ಕಾಲೇಜುಗಳಲ್ಲಿನ ಕ್ವಿಜ್ ಕಾರ್ಯಕ್ರಮವು ಮಕ್ಕಳ ಕಲಿಕಾಂಶಗಳಲ್ಲಿನ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಭಾಷಾಭಿಮಾನ ಬೆಳೆಸಲು ಸಹಕಾರಿಯಾಗಿದೆ.
ಕಲಿಕಾಂಶಗಳ ಜ್ಞಾನದ ಜೊತೆಗೆ ಕೌಶಲ್ಯಗಳು, ಸಾಮಥ್ರ್ಯಗಳು, ವಿವಿಧ ವಿಶೇಷ ಕ್ಷೇತ್ರಗಳಲ್ಲಿನ ಕಲಿಕಾ ಮಟ್ಟಗಳನ್ನು ಗುರುತಿಸಲು ಮತ್ತು ವ್ಯವಸ್ಥೆಗೊಳಿಸಲು ಸಹಕಾರಿ.
ಇದು ದೈನಂದಿನ ಕೆಲಸದಲ್ಲಿನ ಒತ್ತಡವನ್ನು ನಿವಾರಿಸುತ್ತದೆ.
ಶಾಲೆ/ಸ್ನೇಹಿತರ ಸಮೂಹದಲ್ಲಿನ ಗುಂಪು ಸಾಮರಸ್ಯವನ್ನು ನಿವಾರಿಸುತ್ತದೆ.
ಹೊಸ ಹೊಸ ಸ್ನೇಹಿತರನ್ನು, ವಿವಿಧ ಸಂಸ್ಕøತಿಗಳನ್ನು ಪರಿಚಯಿಸುತ್ತದೆ. ಆ ಮೂಲಕ ಸ್ನೇಹ ಬಳಗ ಮತ್ತು ಜ್ಞಾನಭಂಢಾರ ಹೆಚ್ಚುತ್ತದೆ.
ಭಾಷೆಯಲ್ಲಿನ ಜ್ಞಾನಾಧಾರಿತ ಪ್ರಶ್ನೆಗಳು ಭಾಷಾಭಿವೃದ್ದಿಗೆ ನೆರವಾಗುತ್ತವೆ. ಅಂದರೆ ಕಾಗುಣಿತ, ಉಚ್ಚಾರ, ಶಬ್ದಭಂಢಾರ ಹೆಚ್ಚಿಸುತ್ತವೆ.
ಕ್ವಿಜ್‍ನಲ್ಲಿ ಉತ್ತಮವಾದ ಅಭಿವ್ಯಕ್ತಿ ತೋರಿಸಲು ಸುಸಜ್ಜಿತವಾದ ಸಂಗ್ರಹಿತ ಜ್ಞಾನ ಅವಶ್ಯಕ. ಸುಸಜ್ಜಿತವಾದ ಸಂಗ್ರಹಿತ ಜ್ಞಾನ ಹೊಂದಲು ವ್ಯಾಪಕವಾದ ಸಿದ್ದತೆ ಅಗತ್ಯ. ಜೊತೆಗೆ ಜ್ಞಾನ ಗಳಿಸುವ ಕಾರ್ಯವಿಧಾನ ಮತ್ತು ತಂತ್ರಗಳೂ ಕೂಡಾ ಅವಶ್ಯಕ.
ತಯಾರಿ ಹೀಗಿರಲಿ!
ಕ್ವಿಜ್‍ನಲ್ಲಿ ಗೆಲ್ಲಲು ನಿರಂತರ ಅಧ್ಯಯನ ಅಗತ್ಯ. ವಿವಿಧ ವಿಷಯಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಮಾಹಿತಿಗಳನ್ನು ಓದಿ ಮನನ ಮಾಡಿಕೊಳ್ಳಿ. ಪ್ರಮುಖಾಂಶಗಳನ್ನು ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ.
ವಿವಿಧ ಭಾಷೆಗಳ ಪ್ರಸಿದ್ದ ಕವಿಗಳು, ಬರಹಗಾರರು ಮತ್ತು ಅವರ ಕೃತಿಗಳ ಪರಿಚಯ ಇರಲಿ.
ಗಣಿತದಲ್ಲಿನ ತತ್ವಗಳು, ಸೂತ್ರಗಳು, ಸಮೀಕರಣಗಳು ಹಾಗೂ ವಿವಿಧ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವ ಕೌಶಲ್ಯವನ್ನು ಸಿದ್ದಿಸಿಕೊಳ್ಳಿ. 
ವಿಜ್ಞಾನದ ವಿವಿಧ ತತ್ವಗಳು, ನಿಯಮಗಳು, ಸಿದ್ದಾಂತಗಳು, ಸೂತ್ರಗಳು, ಸಮೀಕರಣಗಳು, ಕಾರ್ಯಕಾರಣಿ ಸಂಬಂಧಗಳು ಇತ್ಯಾದಿ ವಿವರಗಳನ್ನು ತಿಳಿದುಕೊಳ್ಳಿ.
ಗಣಿತ ಮತ್ತು ವಿಜ್ಞಾನದಲ್ಲಿನ ಆವಿಷ್ಕಾರಗಳು ಮತ್ತು ಸಂಶೋಧಕರ ಪಟ್ಟಿ ತಯಾರಿಸಿಕೊಳ್ಳಿ.
ಸ್ವಾತಂತ್ರ ಹೋರಾಟಗಾರರು ಮತ್ತು ವಿವಿಧ ಸಮಾಜ ಸುಧಾರಕರ ಜೀವನ ಚರಿತ್ರೆ ತಿಳಿದುಕೊಳ್ಳಿ. ಇತಿಹಾಸದ ಪ್ರಮುಖ ದಿನಾಂಕ ಹಾಗೂ ಇಸ್ವಿಗಳನ್ನು ಗುರುತಿಸಿಕೊಳ್ಳಿ. 
ಪ್ರಚಲಿತ ಜ್ಞಾನ ಬೆಳೆಸಿಕೊಳ್ಳಲು ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ದಿನ ಪತ್ರಿಕೆಗಳು ಅನೇಕ ಮಾಹಿತಿಗಳನ್ನು ಒದಗಿಸುತ್ತವೆ.
ಪದಬಂಧ ಹಾಗೂ ಸಂಖ್ಯಾಬಂಧ(ಸುಡೋಕು)ಗಳನ್ನು ಬಿಡಿಸಿ. ಇದು ಶಬ್ದಭಂಢಾರವನ್ನು, ಸಮಸ್ಯೆ ಬಿಡಿಸುವ ಕೌಶಲ್ಯವನ್ನು ವೃದ್ದಿಸುತ್ತದೆ ಹಾಗೂ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಓದಿದ ಹಾಗೂ ಓದಬೇಕಾದ ಅಂಶಗಳ ಪಟ್ಟಿ ತಯಾರಿಸಿಕೊಳ್ಳಿ. ಓದಿದ ಅಂಶಗಳನ್ನು ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಂಡು ಸಾಧ್ಯವಾದಾಗಲೆಲ್ಲ ಕಣ್ಣಾಡಿಸಿ, ಮೆಲುಕುಹಾಕಿ.
ಕಲಿಕಾಂಶದಲ್ಲಿ ನಂಬಿಕೆ ಇರಲಿ. ಅತಿಯಾದ ನಂಬಿಕೆಯು ಅಪಾಯಕಾರಿ.
ಸಾಧ್ಯವಾದಷ್ಟೂ ಹೊಸ ಹೊಸ ಕಲಿಕಾ ಪರಿಕರಗಳನ್ನು ಸಂಗ್ರಹಿಸಿಕೊಳ್ಳಿ. ಇದು ವಿಷಯದ ಆಳ ಮತ್ತು ವಿಸ್ತಾರವನ್ನು ಹೆಚ್ಚಿಸುತ್ತದೆ.
ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಿರಿ. 
ಶಾಲೆಯ ದೈನಂದಿನ ಕೆಲಸಗಳನ್ನು ಆದಷ್ಟೂ ಬೇಗನೇ ಮುಗಿಸಿಕೊಂಡು ಕ್ವಿಜ್‍ಗಾಗಿ ಓದಲು ಸಮಯ ಹೊಂದಿಸಿಕೊಳ್ಳಿ. 
ಸಮಯ ದೊರೆತಾಗಲೆಲ್ಲ ವಿಷಯದ ಕುರಿತು ಸ್ನೇಹಿತರು/ಆತ್ಮೀಯರೊಂದಿಗೆ ಚರ್ಚಿಸಿ. ಇದು ವಿಷಯದ ಪರಿಪಕ್ವತೆಗೆ ಸಹಕಾರಿಯಾಗುತ್ತದೆ ಹಾಗೂ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತದೆ.
ನಿಮ್ಮ ಪ್ರತಿಸ್ಪರ್ಧಿಯನ್ನು ಎದುರಿಸಲು ಬೇಸಿಕ್ ಮಾಸ್ಟರ್‍ಗಳಾಗಿರಿ. ಬೇಸಿಕ್ ಜ್ಞಾನ ಪಡೆಯಲು ವಿವಿಧ ದೇಶ/ರಾಜ್ಯಗಳ ರಾಜಧಾನಿ, ಕರೆನ್ಸಿ(ಹಣದ ಹೆಸರು), ಪ್ರಸಿದ್ದ ಆಟಗಾರರು, ನೊಬೆಲ್ ಪುರಸ್ಕøತರು, ಜ್ಞಾನಪೀಠ ಪುರಸ್ಕøತರು, ಆಸ್ಕರ್ ಪುರಸ್ಕøತರು, ಕಲೆ, ಸಾಹಿತ್ಯ, ಕ್ರೀಡಾ ಕ್ಷೇತ್ರಗಳ ಸಾಧಕರ ವಿವರ ಸಂಗ್ರಹಿಸಿಕೊಳ್ಳಿ.

ಕ್ವಿಜ್‍ನ ವೇಳೆ
ಕ್ವಿಜ್ ಮಾಸ್ಟರ್ ಹೇಳುವ ನಿರ್ದೇಶನಗಳ ಮೇಲೆ ಗಮನ ಕೇಂದ್ರೀಕರಿಸಿ.
ಯಾವುದೇ ಗಲಿಬಿಲಿ, ಖಿನ್ನತೆ, ಗೊಂದಲಗಳಿಗೆ ಒಳಗಾಗದೇ ನಿರಾಳವಾಗಿರಿ. ದೀರ್ಘವಾದ ಉಸಿರಾಟ ನಡೆಸಿ.
ಧನಾತ್ಮಕ ಮನೋಭಾವನೆ ಇರಲಿ. ಇದು ಉತ್ತರಗಳು ರಚನಾತ್ಮಕವಾಗಿರಲು ಸಹಾಯ ಮಾಡುತ್ತದೆ.
ಸಮಯದ ಕಡೆಗೆ ಹೆಚ್ಚು ನಿಗಾವಹಿಸಿ.
ಪ್ರತಿಸ್ಪರ್ದಿಯ ಅಂಕಗಳ ಕಡೆಗೆ ಗಮನ ಕೊಡದೇ ಸರಿ ಉತ್ತರದ ಕಡೆಗೆ ಗಮನ ಕೊಡಿ.
ತಂಡದ ಸದಸ್ಯರೊಂದಿಗೆ ಚರ್ಚಿಸಿ ಉತ್ತರ ನೀಡಿ. ಆತುರದ ಉತ್ತರ ಬೇಡ.
ಇತರ ತಂಡಕ್ಕೆ ಕೇಳಿದ ಪ್ರಶ್ನೆ ಪಾಸ್ ರೌಂಡ್ಸ್‍ನಲ್ಲಿ ನಿಮಗೂ ಬರಬಹುದು. ಉತ್ತರ ಸಿದ್ದಮಾಡಿಟ್ಟುಕೊಳ್ಳಿ.
ಉತ್ತರ ನಿಖರವಾಗಿರಲಿ, ಧ್ವನಿ ಸ್ಪಷ್ಟವಾಗಿರಲಿ.
ಇಂತಹ ಹತ್ತಾರು ಪ್ರಯೋಜನಗಳನ್ನು ಹೊಂದಿದ ಕ್ವಿಜ್‍ಗೆ ಸೇರಲು ಇದು ಸಕಾಲವಾಗಿದೆ. ನಿಮ್ಮ ಮಾನಸಿಕ ಹಾಗೂ ಬೌದ್ದಿಕ ಶಕ್ತಿಯನ್ನು ಚುರುಕುಗೊಳಿಸಲು ಕ್ವಿಜ್ ಒಂದು ಉತ್ತಮ ಸಾಧನ. ಇತರರ ಎದುರು ನಿಮ್ಮ ವ್ಯಕ್ತಿತ್ವವನ್ನು ಸಾಬೀತುಪಡಿಸಲು ಇದು ಅಮೂಲ್ಯವಾದ ಜ್ಞಾನದ ನಿಧಿ ಇದ್ದಂತೆ. ಇಂದೇ ಅದನ್ನು ನಿಮ್ಮ ಕೈವಶ ಮಾಡಿಕೊಳ್ಳಿ. 
ಆರ್.ಬಿ.ಗುರುಬಸವರಾಜ. ಶಿಕ್ಷಕರು
ಹೊಳಗುಂದಿ(ಪೊ)
ಹೂವಿನ ಹಡಗಲಿ(ತಾ)
ಬಳ್ಳಾರಿ(ಜಿ) 583219
9902992905

No comments:

Post a Comment