June 15, 2015

ಭೀಮೇಶ್ವರ

  ಜೂನ್ 12, 2015 ರಂದು ಅವಧಿ ಬ್ಲಾಗ್ (http://avadhimag.com/2015/06/12/) ನಲ್ಲಿ ಪ್ರಕಟಗೊಂಡ ಲೇಖನ.

ವೇಸರ ಮತ್ತು ದ್ರಾವಿಡ ಶೈಲಿಗಳ ಸಮಾಗಮ ಭೀಮೇಶ್ವರ

June 12, 2015

ಸೌಂದರ್ಯ ವೈಭವದ ಭೀಮೇಶ್ವರ

ಆರ್ ಬಿ ಗುರುಬಸವರಾಜ್
ಪರ್ವತದ ತಪ್ಪಲಿನಿಂದ ಆವೃತ್ತವಾದ ವಿಶಾಲವಾದ ಕೆರೆ. ಕೆರೆಯ ಅಂಚಿನಲ್ಲಿ ವಿಶಾಲ ಪ್ರಾಂಗಣದಲ್ಲಿ ಕಣ್ಮನಗಳಿಗೆ ಹೃದ್ಯಂಗಮವಾಗಿ ಮುದ ನೀಡುವ ಶಿಲೆಯ ಬಲೆ. ಕಲಾಭಿಮಾನಿಗಳನ್ನು, ಕಲಾರಸಿಕರನ್ನು ಮೈಮರೆಸುವ ಸುಂದರ ತಾಣ. ಇದು ಯಾವುದೋ ಸಿನೆಮಾ ಚಿತ್ರೀಕರಣಕ್ಕಾಗಿ ಹಾಕಿದ ಸೆಟ್ ಅಲ್ಲ. ಈ ದೃಶ್ಯವನ್ನು ನಿಮ್ಮ ಕಣ್ಮನಗಳಿಗೆ ತುಂಬಿಕೊಳ್ಳಲು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದದ ಭೀಮೇಶ್ವರ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಡಲೇ ಬೇಕು.
ಪ್ರಶಾಂತ ತಾಣ : ಹರಪನಹಳ್ಳಿಯ ನೈಋತ್ಯಕ್ಕೆ 12 ಕಿ.ಮೀ ದೂರದಲ್ಲಿ ನೀಲಗುಂದ ಗ್ರಾಮವಿದೆ. ಗ್ರಾಮಕ್ಕೆ ಹೊಂದಿಕೊಂಡಂತೆ ಪರ್ವತದ ಸಾಲು ಇದೆ. ಪರ್ವತದ ಬಳಿಯೇ ವಿಶಾಲವಾದ ಕೆರೆ ಇದೆ. ಕೆರೆ ಏರಿ ಏರುತ್ತದ್ದಂತೆಯೇ ರಮಣೀಯವಾದ ಭೀಮೇಶ್ವರ ದೇವಸ್ಥಾನ ಗೋಚರಿಸುತ್ತದೆ. 11ನೇ ಶತಮಾನದ ಕೊನೆಯಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿಮರ್ಿತವಾದ ಭೀಮೇಶ್ವರ ದೇವಸ್ಥಾನವು ಪ್ರಚಾರ ಹಾಗೂ ಪ್ರವಾಸಿಗರ ಕೊರತೆಯಿಂದ ಪ್ರಶಾಂತವಾಗಿದೆ.

ಕಲೆಯ ಬಲೆ: ದೇವಸ್ಥಾನವು ತಲವಿನ್ಯಾಸದಲ್ಲಿ ಮೂರು ಗರ್ಭಗೃಹಗಳನ್ನು ಹೊಂದಿದ್ದು, ಅವು ಪಶ್ಚಿಮ, ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿವೆ. ಪ್ರತಿಯೊಂದೂ ಗರ್ಭಗೃಹವು ಮಧ್ಯದ ಸಭಾಮಂಟಪಕ್ಕೆ ತೆರೆದುಕೊಳ್ಳುತ್ತವೆ. ಸಭಾ ಮಂಟಪದ ಪೂರ್ವಕ್ಕೆ ಮುಖ ಮಂಟಪವಿದ್ದು ಎರಡೂ ಪಾಶ್ರ್ವಗಳಲ್ಲಿ ಸೋಪಾನಗಳಿವೆ. ಪೂರ್ವದ ಮುಖ ಮಂಟಪಕ್ಕೆ ಹೊಂದಿಕೊಂಡಂತೆ ಸೂರ್ಯನಿಗೆ ಪ್ರತ್ಯೇಕವಾದ ಗುಡಿಯಿದೆ.

ವೇಸರ ಮತ್ತು ದ್ರಾವಿಡ ಶೈಲಿಗಳ ಸಮಾಗಮ : ದೇವಸ್ಥಾನವು ವೇಸರ ಶೈಲಿಯಲ್ಲಿದೆ. ಪಶ್ಚಿಮದ ಗರ್ಭಗೃಹದ ಮೇಲೆ ವೇಸರ ಶೈಲಿಯ ತ್ರಿಕಳ ವಿಮಾನವಿದ್ದು, ಅದರಲ್ಲಿನ ಕಲೆಯು ವರ್ಣನಾತೀತವಾಗಿದೆ. ಗರ್ಭಗುಡಿಯ ಅಂತರಾಳ ಹಾಗೂ ಸ್ತಂಭಗಳಲ್ಲಿನ ಕೆತ್ತನೆಯು ಶಿಲ್ಪಿಯ ಕೈಚಳಕಕ್ಕೆ ಸಾಕ್ಷಿಯಾಗಿವೆ. ದೇವಸ್ಥಾನದ ಒಳಾಂಗಣದಲ್ಲಿ ಶಿವ, ನಟರಾಜ, ಗಣೇಶ, ಮಹಿಷಾಸುರ, ಯಕ್ಷ ಹಾಗೂ ಸಪ್ತಮಾತೃಕೆಯರ ಮೂತರ್ಿಗಳು ದೇವಸ್ಥಾನದ ಅಂದವನ್ನು ಹೆಚ್ಚಿಸಿವೆ.
ದೇವಸ್ಥಾನದ ಹೊರಭಿತ್ತಿಯಲ್ಲಿನ ಕೆತ್ತನೆಯಂತೂ ಬೇಲೂರು ಹಳೇಬೀಡಿನ ಶಿಲ್ಪಕಲಾ ಸೊಬಗನ್ನು ನೆನಪಿಸುತ್ತವೆ. ಹೊರಭಿತ್ತಿಯ ಅಲ್ಲಲ್ಲಿ ಅರ್ದಸ್ತಂಭಗಳ ಕಿರುಗೋಪುರಗಳು ವೇಸರ ಮತ್ತು ದ್ರಾವಿಡ ಶೈಲಿಯ ಸಮಾಗಮದ ಪ್ರತೀಕವಾಗಿವೆ. ಕಿರುಗೋಪುರಗಳಲ್ಲಿನ ಕುಸುರಿ ಕೆತ್ತನೆಯು ನಾಜೂಕಿನಿಂದ ಕೂಡಿದ್ದು, ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ದೇವಸ್ಥಾನದ ಪ್ರಾಂಗಣದಲ್ಲಿ ನೀಲಗುಂದದ ಐತಿಹಾಸಿಕತೆ ಸಾರುವ ಅನೇಕ ಶಿಲಾ ಶಾಸನಗಳಿದ್ದು, ಅವುಗಳನ್ನು ಸಂರಕ್ಷಿಸಿ ಇಡಲಾಗಿದೆ.

ನಿಸರ್ಗದ ಮಡಿಲು : ಈ ದೇವಸ್ಥಾನವು ಪ್ರಾಚ್ಯವಸ್ತು ಸಂರಕ್ಷಣಾ ಮತ್ತು ಸಂಶೋಧನಾ ಇಲಾಖೆಗೆ ಸೇರಿದಾಗಿನಿಂದ ದೇವಸ್ಥಾನ ಹಾಗೂ ಶಾಸನಗಳು ಸಂರಕ್ಷಿತವಾಗಿವೆ. ದೇವಸ್ಥಾನದ ಹೊರಾಂಗಣವು ಸುಂದರವಾದ ಪ್ರಕೃತಿ ಸೌಂದರ್ಯ ಹೊಂದಿದೆ. ದೇವಸ್ಥಾನದ ಮುಂಭಾಗದಲ್ಲಿನ ವಿಶಾಲವಾದ ಕೆರೆ, ಎಡಬಲಗಳಲ್ಲಿನ ಪರ್ವತಗಳ ಸಾಲು ನೋಡುಗರ ಕಣ್ಣಿಗೆ ರಸದೌತಣ ನೀಡುತ್ತವೆ. ಪ್ರಾಂಗಣದ ನೀಲಗಿರಿ ಮರದಲ್ಲಿನ ಬಾವಲಿಗಳೂ ಸಹ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ತೋರುತ್ತವೆ. ನಿಸರ್ಗದ ಮಡಿಲಲ್ಲಿ ಹುದುಗಿದ ಈ ದೇವಸ್ಥಾನದ ಒಡಲಿನಲ್ಲಿ ಒಂದು ದಿನ ಹಾಯಾಗಿ ಮೈಮರೆಯಬಹುದು.

No comments:

Post a Comment