September 11, 2015

ಎಲೆಯಲ್ಲಿ ಕಲೆಯ ಬಲೆಯು

ಸೆಪ್ಟಂಬರ್ 17 ರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.

                  ಎಲೆಯಲ್ಲಿ ಕಲೆಯ ಬಲೆಯು

    ಪ್ರಕೃತಿಯ ರಮ್ಯತೆ ಎಂತಹವರನ್ನೂ ಮೋಹಿತರನ್ನಾಗಿಸುತ್ತದೆ. ಏಕೆಂದರೆ ಅಲ್ಲಿನ ಪ್ರತಿಯೊಂದು ವಸ್ತುವೂ ಅಮೂಲ್ಯ. ತನ್ನನ್ನು ನಂಬಿದವರನ್ನು ಎಂದಿಗೂ ಕೈಬಿಡುವುದಿಲ್ಲ. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೆ ಪ್ರಕೃತಿಯೇ ಆಸರೆ ನೀಡುತ್ತದೆ. ಜೊತೆಗೆ ಬದುಕಲು ದಾರಿ ತೋರಿಸುತ್ತದೆ ಎನ್ನುವುದಕ್ಕೆ 43 ವರ್ಷದ ಲೊರೆಂಜೊ ಸಿಲ್ವಾ ಅವರ ಜೀವನವೇ ಸಾಕ್ಷಿ.
    ಪ್ರಕೃತಿಯ ಮಡಿಲು ಜೀವನದ ಕಡಲು: ಸ್ಪೇನಿನವರಾದ ಲೊರೆಂಜೊ ಡ್ಯುರಾನ್ ಸಿಲ್ವಾ ತಮ್ಮ ದುಡಿಮೆಯ ಎಲ್ಲಾ ಮಾರ್ಗಗಳು ಮುಚ್ಚಿದ ನಂತರ ಪ್ರಕೃತಿಯ ಮಡಿಲು ಸೇರಿದರು. ಜೀವನ ಸಾಕಾಗಿ ಸಾವಿನ ನಿರ್ಧಾರ ಮಾಡುತ್ತಾ ಕುಳಿತವರಿಗೆ ಬದುಕಲು ಪ್ರೇರಣೆಯಾದದ್ದು ಒಂದು ಕಂಬಳಿಹುಳು ಎಂದರೆ ಆಶ್ಚರ್ಯವಾಗುತ್ತದೆ. ಅಲ್ಲವೇ? ಆದರೂ ಇದು ಸತ್ಯ.
    ನಡೆದದ್ದೇನು?:  ಅಂದು ಸಾಯುವ ಮಾರ್ಗದ ಬಗ್ಗೆ ಯೋಚನೆ ಮಾಡುತ್ತಾ ಮರದ ಕೆಳಗೆ ಕುಳಿತ ಸಿಲ್ವಾ ಅವರಿಗೆ ಗಿಡದ ಎಲೆಯಲ್ಲಿನ ಕಂಬಳಿಹುಳು ಜೀವನಕ್ಕೆ ದಾರಿ ತೋರಿಸಿತ್ತು. ಕಂಬಳಿಹುಳು ತನ್ನ ಚೂಪಾದ ಹಲ್ಲುಗಳಿಂದ ಎಲೆಗಳನ್ನು ಕತ್ತರಿಸಿ ಆಹಾರ ಸೇವಿಸುತ್ತದೆ. ಹೀಗೆ ಕತ್ತರಿಸಿ ಉಳಿದ ಎಲೆಯ ಭಾಗದಲ್ಲಿ ಚಿತ್ರವಿಚಿತ್ರ ಚಿತ್ತಾರಗಳು ಮೂಡಿರುತ್ತವೆ. ಇದೇ ಐಡಿಯಾ ಸಿಲ್ವಾ ಅವರ ಮುಂದಿನ ಬಾಳಿಗೆ ಬೆಳಕಾದುದು ರೋಚಕ. ಕಂಬಳಿಹುಳುವಿನಿಂದ ಪ್ರೇರಿತದಾದ ಸಿಲ್ವಾ ಎಲೆಗಳನ್ನು ಕತ್ತರಿಸಿ ಸಂಗ್ರಹಯೋಗ್ಯ ಆಕರ್ಷಕ ಕಲಾಕೃತಿಗಳನ್ನು ಮಾಡಲು ಉತ್ಸುಕರಾದವರು.
    ಎಲೆಗೆ ಕಲೆಯ ಮೆರಗು: ಎಲೆಗೆ ಕಲೆಯ ಮೆರಗು ನೀಡುವ ಹಾದಿ ಸುಗಮವಲ್ಲದಿದ್ದರೂ ಪ್ರಯತ್ನ ಪ್ರಮಾದ ಕಲಿಕೆಯಿಂದ ಅದನ್ನು ಸಿದ್ದಿಸಿಕೊಂಡರು. ವಿವಿಧ ಆಕಾರ, ಗಾತ್ರಗಳ ಎಲೆಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ಒಣಗಿಸಿದ ನಂತರ ಅವುಗಳ ಮೇಲೆ ಪೆನ್ಸಿಲ್‍ನಿಂದ ಚಿತ್ರ ಬಿಡಿಸಿಕೊಂಡು ಸೂಜಿ, ಚಾಕು ಅಥವಾ ಕತ್ತರಿಗಳಿಂದ ಎಲೆಯನ್ನು ಸುಂದರ ಕಲಾಕೃತಿಯಾಗಿ ಮಾಡುತ್ತಾರೆ. ಹಾಗೆಯೇ ಅವುಗಳಿಗೆ ಸುಂದರ ಫ್ರೇಮ್ ಜೋಡಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
    ಪ್ರಕೃತಿಯ ಮಡಿಲು ಇವರ ಜೀವನಕ್ಕೆ ಆಧಾರವಾದ್ದರಿಂದ ಇವರ ಬಹತೇಕ ಎಲೆಯ ಕಲೆಯಲ್ಲಿ ಪರಿಸರ ಕಾಳಜಿ ಅಡಗಿದೆ. ಜೀವವೈವಿಧ್ಯತೆಯನ್ನು ಸಾರುವ ಅನೇಕ ಕಲಾಕೃತಿಗಳು ಜೀವತಳೆದಿವೆ.
    ಈಗಾಗಲೇ ಸಾವಿರಾರು ಎಲೆಗಳು ತಮ್ಮ ಮೇಲೆ ವಿವಿಧ ಚಿತ್ರಗಳನ್ನು ಮೂಡಿಸಿಕೊಂಡು ಅತ್ಯುತ್ತಮ ಕಲಾಕೃತಿಗಳಾಗಿ ಗೃಹಾಲಂಕಾರ ವಸ್ತುಗಳಾಗಿ ಶೋಭಿಸುತ್ತಿವೆ. ಇದನ್ನೇ ನಮ್ಮ ಪೂರ್ವಿಕರು “ಪ್ರಕೃತಿ ನಂಬಿದವರನ್ನು ಎಂದೂ ಕೈಬಿಡುವುದಿಲ್ಲ” ಎಂದು ಹೇಳುತ್ತಿದ್ದ ಮಾತು ಈಗಲೂ ಸತ್ಯ ಅಲ್ಲವೇ?
                                                                                                 ಆರ್.ಬಿ.ಗುರುಬಸವರಾಜ

No comments:

Post a Comment