March 29, 2018

ಭಾವನಾತ್ಮಕ ಬುದ್ದಿವಂತಿಕೆ Emotional Intellegence

ದಿನಾಂಕ 31-01-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಭಾವನಾತ್ಮಕ ಬುದ್ದಿವಂತಿಕೆ


ಬಿಗ್‍ಬಾಸ್ ಸೀಸನ್-5 ಮುಕ್ತಾಯಗೊಂಡಿದೆ. ಇಲ್ಲಿನ ಪ್ರತಿಯೊಬ್ಬ ಸ್ಪರ್ಧಿಯೂ ಅತ್ಯುತ್ತಮವಾಗಿ ಆಡಬೇಕು, ತಾನೇ ವಿನ್ನರ್ ಆಗಬೇಕೆಂಬ ಆಸೆಯಿಂದ ಆಡಿದರು. ಕೆಲವು ಸ್ಪರ್ಧಿಗಳಂತೂ ವಿಭಿನ್ನವಾಗಿ ಮತ್ತು ವಿಶೇಷವಾಗಿ ಆಡಿದರು. ಎಲ್ಲರಂತೆ ಎಲ್ಲರ ಜೊತೆಯಲ್ಲಿಯೇ ಇದ್ದರೂ ಆದರೆ ಇತರರಿಗಿಂತ ಭಿನ್ನವಾಗಿ ಆಡಿದರು. ಟಾಸ್ಕ್ ವಿಚಾರಕ್ಕೆ ಬಂದರೆ ಪ್ರತಿಯೊಬ್ಬರಲ್ಲೂ ಆಂತರಿಕ ಲೆಕ್ಕಾಚಾರ ಶುರುವಾಗುತ್ತಿತ್ತು. ಈ ಲೆಕ್ಕಾಚಾರ ಯಾರ ಕಣ್ಣಿಗೂ ಕಾಣದು, ಯಾರ ಅನುಭವಕ್ಕೂ ಬಾರದು. ಇದು ಅವರ ಜಾಣತನ ಎಂದು ಮಾತ್ರ ಹೇಳುತ್ತೇವೆ. ಈ ರೀತಿಯ ಜಾಣತನವನ್ನು ಮನಶಾಸ್ತ್ರದಲ್ಲಿ ಭಾವನಾತ್ಮಕ ಬುದ್ದಿವಂತಿಕೆ ಎನ್ನುತ್ತಾರೆ. ಹಾಗಾದರೆ ಭಾವನಾತ್ಮಕ ಬುದ್ದಿವಂತಿಕೆಯ ಬಗ್ಗೆ ಇನ್ನಷ್ಟು ವಿವರ ತಿಳಿಯೋಣವೇ?
ಭಾವನಾತ್ಮಕ ಬುದ್ದಿವಂತಿಕೆ-ಹಾಗಂದರೇನು?: ಸರಳವಾಗಿ ಹೇಳುವುದಾದರೆ ಇತರರನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಮತ್ತು ತಾವು ಏನೆಂದು ಇನ್ನೊಬ್ಬರಿಗೆ ಅರ್ಥವಾಗದ ವಿಧಾನ. ಅಂದರೆ ಇತರರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಿ, ಅನುಭೂತಿ ತೋರಿಸಿ, ಅವರನ್ನು ತಮ್ಮೆಡೆ ಸೆಳೆದುಕೊಂಡು ಅವರ ಆಸೆ-ಆಕಾಂಕ್ಷೆಗಳು, ಆಚಾರ-ವಿಚಾರಗಳು, ನಡೆ-ನುಡಿಗಳು, ನಿಲುವುಗಳು, ಸಾಮಥ್ರ್ಯಗಳು, ಕೊರತೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ಮತ್ತು ತಮ್ಮ ಬಗೆಗಿನ ನಿಖರವಾದ ಮಾಹಿತಿಯನ್ನು ಇತರರಿಗೆ ತಿಳಿಸದ ಜಾಣತನವೇ ಭಾವನಾತ್ಮಕ ಬುದ್ದಿವಂತಿಕೆ. ಸವಾಲುಗಳನ್ನು ಸ್ವೀಕರಿಸಿ ಸುಲಭವಾಗಿ ಜಯಿಸುವ ಮತ್ತು ಧನಾತ್ಮಕ ರೀತಿಯಲ್ಲಿ ಒತ್ತಡವನ್ನು ನಿವಾರಿಸುವ ಸಾಮಥ್ರ್ಯವೇ ಭಾವನಾತ್ಮಕ ಬುದ್ದಿವಂತಿಕೆ. ಇದು ಸ್ವಂತ ಭಾವನೆಗಳನ್ನು ಗುರುತಿಸುವ, ಬಳಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮಥ್ರ್ಯವೂ ಆಗಿದೆ. 
ಭಾವನಾತ್ಮಕ ಬುದ್ದಿವಂತಿಕೆ ಅವಶ್ಯಕವೇ?: ಹೌದು. ಪ್ರತಿಯೊಬ್ಬರೂ ಭಾವನಾತ್ಮಕ ಬುದ್ದಿವಂತಿಕೆಯನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಬಹಳವಾಗಿ ಪ್ರಭಾವಿಸುತ್ತದೆ. ನೀವು ಯಾರು? ನಿಮ್ಮ ಕೆಲಸ ಇತರರ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಇತರರಿಗಿಂತ ನೀವು ಹೇಗೆ ಭಿನ್ನ? ವೃತ್ತಿಯಲ್ಲಿನ ನಿಮ್ಮ ಬಲವೇನು? ನಿಮ್ಮ ಕೊರತೆಗಳೇನು? ಇತ್ಯಾದಿ ಅಂಶಗಳ ಬಗ್ಗೆ ನಿಖರವಾದ ಮಾಹಿತಿ ತಿಳಿಯಲು ಭಾವನಾತ್ಮಕ ಬುದ್ದಿವಂತಿಕೆ ಅವಶ್ಯಕ. ಪ್ರತಿ ಕಾರ್ಯ ಸ್ಥಳವೂ ವಿಭಿನ್ನ ವ್ಯಕ್ತಿ ಮತ್ತು  ಶಕ್ತಿಗಳನ್ನು ಒಳಗೊಂಡಿರುತ್ತದೆ. ಆ ವ್ಯಕ್ತಿ ಮತ್ತು ಶಕ್ತಿಗಳು ಕೆಲಸ ಮಾಡುವ ರೀತಿಯನ್ನು ಅಭ್ಯಸಿಸಲು ಭಾವನಾತ್ಮಕ ಬುದ್ದಿವಂತಿಕೆ ಬೇಕು. 
ಗಮನಾರ್ಹ ಪ್ರಮುಖಾಂಶಗಳು
ಕೆಲಸದ ಸ್ಥಳದಲ್ಲಿ ವಿಭಿನ್ನವಾಗಿ ಕಾಣಲು ಭಾವನಾತ್ಮಕ ಬುದ್ದಿವಂತಿಕೆ ಅವಶ್ಯಕ ಎನ್ನುತ್ತಾರೆ ಅಮೇರಿಕಾದ ಖ್ಯಾತ ಮನಶಾಸ್ತ್ರಜ್ಞನಾದ ಡೇನಿಯಲ್ ಗೋಲ್ಮನ್. ಅವರು ಭಾವನಾತ್ಮಕ ಬುದ್ದಿವಂತಿಕೆಯಲ್ಲಿ ಐದು ಪ್ರಮುಖಾಂಶಗಳಿವೆ ಎಂದು ಹೇಳಿದ್ದಾರೆ. ಅವುಗಳೆಂದರೆ,
ಸ್ವಯಂ ಅರಿವು: ವ್ಯಕ್ತಿಗೆ ಸ್ವಯಂ ಅರಿವು ಇದ್ದರೆ ಆ ವ್ಯಕ್ತಿ ತನ್ನ ಸಾಮಥ್ರ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಆ ಮೂಲಕ ಇತರರ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾನೆ. ಸ್ವಯಂ ಅರಿವುಳ್ಳ ವ್ಯಕ್ತಿಯು ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮಥ್ರ್ಯ ಹೊಂದಿರುತ್ತಾರೆ ಮತ್ತು ಅವರು ಟೀಕೆಗಳಿಂದ ರಚನಾತ್ಮಕ ಕಲಿಕೆ ಗಳಿಸಿಕೊಳ್ಳುತ್ತಾರೆ.
ಸ್ವಯಂ ನಿಯಂತ್ರಣ : ಭಾವನಾತ್ಮಕ ಬುದ್ದಿವಂತ ವ್ಯಕ್ತಿಯು ಅಗತ್ಯವಿದ್ದಾಗ ತನ್ನ ಭಾವನೆಗಳನ್ನು ಪ್ರಬುದ್ದವಾಗಿ ಬಹಿರಂಗಪಡಿಸುವ ಮತ್ತು ನಿಯಂತ್ರಿಸುವ ಸಾಮಥ್ರ್ಯ ಹೊಂದಿರುತ್ತಾನೆ. ಭಾವನೆಗಳನ್ನು ದುರ್ಬಲಗೊಳಿಸುವ ಬದಲು ಸಂಯಮ ಮತ್ತು ನಿಯಂತ್ರಣದೊಂದಿಗೆ ವ್ಯಕ್ತಪಡಿಸುತ್ತಾರೆ. 
ಪ್ರೇರಣೆ : ಭಾವನಾತ್ಮಕ ಬುದ್ದಿವಂತರು ಸಾಮಾನ್ಯವಾಗಿ ಸ್ವಯಂ ಪ್ರೇರಿತರಾಗಿರುತ್ತಾರೆ. ಅವರು ಹಣ, ಅಂತಸ್ತು ಇನ್ಯಾವುದೇ ಪ್ರಭಾವಗಳಿಂದ ಪ್ರೇರಿತರಾಗುವುದಿಲ್ಲ. ಅವರು ಸ್ವಾಮಿ ವಿವೇಕಾನಂದರಂತೆ ಯಾವಾಗಲೂ ಆಶಾವಾದಿಗಳಾಗಿದ್ದು, ಆಶಾಭಂಗ ಮತ್ತು ಆಂತರಿಕ ಮಹತ್ವಾಕಾಂಕ್ಷೆಗಳಿಂದ ಚೇತರಿಸಿಕೊಳ್ಳುತ್ತಿರುತ್ತಾರೆ. 
ಪರಾನುಭೂತಿ : ಮಾನವನ ಸಹಜ ಸ್ವಭಾವದ ತಿಳುವಳಿಕೆ ಹೊಂದಬೇಕಾದರೆ ಆ ವ್ಯಕ್ತಿಯಲ್ಲಿ ಪರಾನುಭೂತಿ ಮತ್ತು ಸಹಾನುಭೂತಿಗಳು ಇರಬೇಕು. ಆಗ ಮಾತ್ರ ಇತರ ಜನರೊಂದಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಇದು ಭಾವನಾತ್ಮಕ ಬುದ್ದಿವಂತರಲ್ಲಿ ಅಧಿಕವಾಗಿರುತ್ತದೆ. ಪರಾನುಭೂತಿಯು ಉತ್ತಮ ಸೇವೆ ನೀಡಲು ಮತ್ತು ಇತರರ ಕಾಳಜಿಗೆ ಪ್ರಾಮಾಣಿಕ ಪ್ರತಿಕ್ರಿಯೆ ನೀಡಲು ಅನುವು ಮಾಡಿಕೊಡುತ್ತದೆ. 
ಸಾಮಾಜಿಕ ಕೌಶಲ್ಯಗಳು : ಭಾವನಾತ್ಮಕ ಬುದ್ದಿವಂತರು ತಂಡಸ್ಪೂರ್ತಿಯ ಬಾಂಧವ್ಯ ಹೊಂದಿರುತ್ತಾರೆ ಮತ್ತು ತಮ್ಮ ತಂಡದಲ್ಲಿ ತ್ವರಿತವಾಗಿ ಇತರರೊಂದಿಗೆ ಬೆರೆಯುತ್ತಾರೆ ಹಾಗೂ ಅವರನ್ನು ನಂಬುತ್ತಾರೆ. ಅವರು ಸಾಮಾನ್ಯವಾಗಿ ಇತರರೊಂದಿಗಿನ ಸಮಯವನ್ನು ಆನಂದಿಸುತ್ತಾರೆ. ಸುತ್ತಲಿನ ಇತರರನ್ನು ಗೌರವಿಸುತ್ತಾರೆ. ಇದರಿಂದ ಸುಲಭ ಜಯಗಳಿಸುತ್ತಾರೆ.
ಭಾವನಾತ್ಮಕ ಬುದ್ದಿವಂತಿಕೆಯ ಗುಣಲಕ್ಷಣಗಳು
ತಪ್ಪಿನಿಂದ ಕಲಿಕೆ: ಎಲ್ಲಾ ಬುದ್ದಿವಂತರೂ ಪರಿಪೂರ್ಣರೇನಲ್ಲ. ಅವರೂ ಇತರರಂತೆ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಆದರೆ ಅವರು ಪ್ರತೀ ತಪ್ಪಿನಿಂದಲೂ ಕಲಿಯುತ್ತಾರೆ. ಪರಿಪೂರ್ಣತೆ ಹೊಂದಲು ತಪ್ಪಿನಿಂದ ಕಲಿಯುವುದು ಮತ್ತು ಪ್ರತಿದಿನವೂ ವೈಯಕ್ತಿಕವಾಗಿ ಶ್ರಮಿಸುವುದು ಮುಖ್ಯ.
ಸಮತೋಲನ: ದಿನದ ಹೆಚ್ಚು ವೇಳೆ ತಮ್ಮ ವೃತ್ತಿ ಜೀವನದಲ್ಲಿ ತೊಡಗಿಕೊಂಡವರಿಗೆ ವೈಯಕ್ತಿಕ ಜೀವನದ ಅನಗತ್ಯ ಒತ್ತಡಗಳು ಮತ್ತು ಆರೋಗ್ಯದ ಸಮಸ್ಯೆಗಳು ಬಾಧಿಸುವುದು ಸಹಜ. ಆದರೆ ಭಾವನಾತ್ಮಕ ಬುದ್ದಿವಂತಿಕೆಯುಳ್ಳವರು ಇವುಗಳನ್ನು ಸಮತೋಲನಗೊಳಿಸಿ ಎಲ್ಲದಕ್ಕೂ ಸಮಾನ ಆಧ್ಯತೆಗಳನ್ನು ನೀಡುತ್ತಾರೆ. 
ಬದಲಾವಣೆಗೆ ಬದ್ದತೆ: ಬಹುತೇಕರು ಬದಲಾವಣೆಗೆ ಭಯಗೊಂಡು ಯಶಸ್ಸಿನಿಂದ ಹಿಂದೆ ಸರಿಯುತ್ತಾರೆ. ಆದರೆ ಭಾವನಾತ್ಮಕ ಬುದ್ದಿವಂತರು ಬದಲಾವಣೆ ಜೀವನದ ಒಂದು ಭಾಗವೆಂದು ತಿಳಿಯುತ್ತಾರೆ. ಅವರು ಬದಲಾವಣೆಗೆ ಹೊಂದಿಕೊಂಡು ಅದಕ್ಕೆ ತಕ್ಕ ಯೋಜನೆ ರೂಪಿಸುತ್ತಾರೆ. 
ಅವಧಾನದ ಮಟ್ಟ: ಭಾವನಾತ್ಮಕ ಬುದ್ದಿವಂತರು ತಮ್ಮ ಮುಂದಿರುವ ಟಾಸ್ಕ್ ಅಥವಾ ಕಾರ್ಯದ ಮೇಲೆ ಹೆಚ್ಚು ಅವಧಾನ ಕೇಂದ್ರೀಕರಿಸುತ್ತಾರೆ. ಹೊರಗಿನ ಯಾವುದೇ ಸಂಗತಿಗಳಿಂದ ಸುಲಭವಾಗಿ ವಿಚಲಿತರಾಗುವುದಿಲ್ಲ. ತಮ್ಮ ಕಾರ್ಯ ಪೂರ್ಣಗೊಳಿಸುವತ್ತ ಮಾತ್ರ ಅವರು ಚಿತ್ತ ವಹಿಸಿರುತ್ತಾರೆ. 
ಮುನ್ನುಗ್ಗುವಿಕೆ: ಭಾವನಾತ್ಮಕ ಬುದ್ದಿವಂತರು ಯಾವುದೇ ಕೆಲಸದಿಂದ ಹಿಂದುಳಿಯುವುದಿಲ್ಲ. ಬದಲಾಗಿ ಮುನ್ನುಗ್ಗುತ್ತಾರೆ. ಅವರಿಗೆ ನಿನ್ನೆಗಿಂತ ನಾಳೆ ಮುಖ್ಯ. ನಿನ್ನೆಯ ಅನುಭಾವದ ಆಧಾರದಲ್ಲಿ ನಾಳೆಯ ಭವಿಷ್ಯವನ್ನು ಕಟ್ಟಿಕೊಳ್ಳುತ್ತಾರೆ. ಸೋಲಿಗೆ ಕಾರಣವಾದ ಯಾರನ್ನೂ ಯಾವುದನ್ನೂ ದ್ವೇಷಿಸುವುದಿಲ್ಲ. ಉತ್ತಮಾಂಶಗಳೊಂದಿಗೆ ಮುಂದೆ ನಡೆಯುತ್ತಾರೆ.
ಸಕಾರಾತ್ಮಕತೆಗೆ ಗಮನ: ಭಾವನಾತ್ಮಕ ಬುದ್ದಿವಂತರು ಯಾವಾಗಲೂ ಸಮಸ್ಯೆಯನ್ನು ಪರಿಹರಿಸಲು ತಮ್ಮ ಸಮಯ ಮತ್ತು ಶಕ್ತಿ ವಿನಿಯೋಗಿಸುತ್ತಾರೆ. ಪ್ರತೀ ನಕಾರಾತ್ಮಕ ಅಂಶವನ್ನು ಸಕಾರಾತ್ಮಕವಾಗಿಸುವ ಪ್ರಯತ್ನ ಮಾಡುತ್ತಾರೆ. 
ಚೌಕಟ್ಟು ಅಳವಡಿಕೆ: ಭಾವನಾತ್ಮಕ ಬುದ್ದಿವಂತರು ತಮ್ಮದೇ ಆದ ಚೌಕಟ್ಟು ನಿರ್ಮಿಸಿಕೊಳ್ಳುತ್ತಾರೆ. ತಮ್ಮ ವೈಯಕ್ತಿಕ ಏಳಿಗೆಗಾಗಿ ಈ ಚೌಕಟ್ಟನ್ನು ದಾಟಿ ಅಲ್ಲಿನ ಉತ್ತಮಾಂಶಗಳನ್ನು ಪಡೆಯುತ್ತಾರೆ. ಆದರೆ ತಮ್ಮ ಅಭಿವೃದ್ದಿಗೆ ಮಾರಕವಾಗುವ ವ್ಯಕ್ತಿ ಅಥವಾ ಅಂಶಗಳನ್ನು ತಮ್ಮ ಚೌಕಟ್ಟಿನೊಳಗೆ ಬರದಂತೆ ನೋಡಿಕೊಳ್ಳುತ್ತಾರೆ. ಆದಷ್ಟೂ ನಕಾರಾತ್ಮಕ ಪ್ರೇರಕಾಂಶಗಳನ್ನು ದೂರ ಇಡುತ್ತಾರೆ. 
ತೀರ್ಮಾನ: ಭಾವನಾತ್ಮಕ ಬುದ್ದಿವಂತರು ಯಾವಾಗಲೂ ನ್ಯಾಯಪರವಾದ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಸಮಸ್ಯೆಗೆ ಪೂರಕವಾದ ಮಾಹಿತಿಗಳನ್ನು ಎಲ್ಲಾ ಆಯಾಮಗಳಿಂದ ಸಂಗ್ರಹಿಸಿ ನಿಖರವಾದ ನಿರ್ಣಯ ಕೈಗೊಳ್ಳುವಲ್ಲಿ ಇವರು ನಿಷ್ಣಾತರು. 
ನೀವೂ ಭಾವನಾತ್ಮಕ ಬುದ್ದಿವಂತರಾಗಬೇಕೇ?
ಚಾಣಕ್ಯ ಹುಟ್ಟಿದಾಗಿನಿಂದಲೇ ಬುದ್ದಿವಂತನಲ್ಲ. ಅಂತೆಯೇ ಯಾರೂ ಜನ್ಮಧಾರಭ್ಯ ಬುದ್ದಿವಂತರಲ್ಲ. ತಾವು ವಾಸಿಸುವ ಪರಿಸರ ಹಾಗೂ ಅಳವಡಿಸಿಕೊಂಡ ಆಚಾರ ವಿಚಾರಗಳು, ನೀತಿ ನಿಯಮಗಳು ಅವರನ್ನು ಬುದ್ದಿವಂತರನ್ನಾಗಿ ಮಾಡುತ್ತದೆ. ನೀವೂ ಭಾವನಾತ್ಮಕ ಬುದ್ದಿವಂತರಾಗಬೇಕಾದರೆ ಕೆಳಗಿನ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವುಗಳೆಂದರೆ,
ದೃಢವಾದ ಭಾವನಾತ್ಮಕ ಶಬ್ದಕೋಶ ಬೆಳೆಸಿಕೊಳ್ಳಿ.
ಸುತ್ತಲಿನ ಜನರನ್ನು ಕುತೂಹಲದ ಕಣ್ಣುಗಳಿಂದ ವೀಕ್ಷಿಸಿ.
ಬದಲಾವಣೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ.
ನಿಮ್ಮ ಸಾಮಥ್ರ್ಯ ಮತ್ತು ದೌರ್ಬಲ್ಯಗಳನ್ನು ಅರಿಯಿರಿ.
ನ್ಯಾಯಪರವಾದ ತೀರ್ಮಾನ ಕೈಗೊಳ್ಳಿ.
ಅಪರಾಧಗಳಿಗೆ ಕೈ ಹಾಕಬೇಡಿ.
ನಿಮ್ಮ ಸಾಧನೆಗಳ ಬಗ್ಗೆ ಜಂಭ ಬೇಡ.
ಪ್ರತೀ ತಪ್ಪಿನಿಂದ ಪಾಠ ಕಲಿಯಿರಿ.
ನಿಮ್ಮ ಕೆಲಸಕ್ಕೆ ನಿರ್ದಿಷ್ಟವಾದ ಪ್ರತಿಫಲ ಬೇಡಬೇಡಿ.
ದ್ವೇಷ ಅಸೂಯೆಗಳನ್ನು ದೂರವಿರಿಸಿ.
ಇತರರಲ್ಲಿ ಪರಿಪೂರ್ಣತೆಯನ್ನು ಹುಡುಕಬೇಡಿ. 
ಆತ್ಮವಿಶ್ವಾಸ ಇರಲಿ, ಅಂಧಾನುಕರಣೆ ಬೇಡ.
ಇತರರ ಅಲ್ಪ ಉತ್ತಮ ಕಾರ್ಯವನ್ನೂ ಶ್ಲಾಘಿಸಿ, ಪ್ರಶಂಸೆ ನೀಡಿ.
ಯಾರೊಂದಿಗೂ ಸಂಪರ್ಕ ಕಳೆದುಕೊಳ್ಳಬೇಡಿ. 
ಮಾದಕ ವಸ್ತುಗಳಿಂದ ದೂರವಿರಿ.
ಇನ್ನೊಬ್ಬರ ಬಗ್ಗೆ ನಕಾರಾತ್ಮಕ ಮಾತುಗಳು ಬೇಡ.
ಸಂತೋಷವನ್ನು ಸೀಮಿತಗೊಳಿಸಿಕೊಳ್ಳಬೇಡಿ. 

ಆರ್.ಬಿ.ಗುರುಬಸವರಾಜ ಹೊಳಗುಂದಿ


No comments:

Post a Comment