July 10, 2015

ಕಥೆ ಹೇಳ್ತೀರಾ!

ಜುಲೈ16ರ  ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ

                                        ಕಥೆ ಹೇಳ್ತೀರಾ!

    ಕಥೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ವೃದ್ದರವರೆಗೆ ಎಲ್ಲರಿಗೂ ಕಥೆಗಳೆಂದರೆ ಪಂಚಪ್ರಾಣ. ಭೂಮಿಯ ಮೇಲೆ ಮಾನವ ಉಗಮದೊಂದಿಗೆ ಕಥೆಗಳು ಉಗಮವಾಗಿವೆ ಎಂದರೆ ತಪ್ಪಲ್ಲ. ಏಕೆಂದರೆ ಕಥೆಗಳಿಗೂ ಮಾನವರಿಗೂ ಅವಿನಾಭಾವ ಸಂಬಂಧವಿದೆ. ವ್ಯಕ್ತಿಗಳ ಪರಸ್ಪರ ಸಂಪರ್ಕಕ್ಕೆ ಕಥೆಗಳು ಪರಿಣಾಮಕಾರಿ ಮಾರ್ಗಗಳಾಗಿವೆ. ಅಂತೆಯೇ ಕಥೆಗಳು ನಾಗರೀಕತೆಗಳ ನಡುವಿನ ಸಂಪರ್ಕ ಸೇತುವೆ ಇದ್ದಂತೆ. ಕಥೆಗಳು ಪ್ರಾಪಂಚಿಕ ಜ್ಞಾನವನ್ನು ವಿಷಯವಸ್ತುವಿನ ಮೂಲಕ ಅರ್ಥಗರ್ಭಿತವಾಗಿ ತಿಳಿಸುವ ಮಾಧ್ಯಮವಾಗಿವೆ.
    ಈ ಕಾರಣಕ್ಕಾಗಿ ಶಿಕ್ಷಣದಲ್ಲಿ ಕಥೆಗಳು ತುಂಬಾ ಮಹತ್ವ ಪಡೆದಿವೆ. ಶಿಕ್ಷಕರು ವಿದ್ಯಾರ್ಥಿಗಳ ಮನಸನ್ನು ತಲುಪಲು ಕಥೆಗಳೇ ರಹದಾರಿಗಳು. ಕಥೆಗಳು ಸುದ್ದಿ ಸಮಾಚಾರ ಅಥವಾ ಅಂಕಿ-ಅಂಶಗಳಿಗಿಂತ ಹೆಚ್ಚು ಗಾಢವಾಗಿ ಮನಸ್ಸಿನಲ್ಲಿ ಉಳಿಯುತ್ತವೆ. ತರಗತಿ ನಿರ್ವಹಿಸುವ ಶಿಕ್ಷಕರು ಅತ್ಯುತ್ತಮ ಕಥೆಗಾರರಾಗಿದ್ದಲ್ಲಿ ಯಾವುದೇ ಕ್ಲಿಷ್ಟದ ಪರಿಕಲ್ಪನೆಗಳನ್ನೂ ಸಹ ಅನೇಕ ವರ್ಷಗಳವರೆಗೆ ನೆನಪಿನಲ್ಲಿ ಉಳಿಯುವಂತೆ ಮಾಡಲು ಸಾಧ್ಯವಿದೆ.
    ಕಥೆಗಳೆಂದರೆ ಒಂದು ವಿಷಯವನ್ನು ಚೆನ್ನಾಗಿ ನಿರೂಪಿಸುವುದಲ್ಲ. ಗಣಿತ ಹಾಗೂ ವಿಜ್ಞಾನದ ಪ್ರಕ್ರಿಯೆಗಳನ್ನು, ಪ್ರಯೋಗಗಳನ್ನು ವಿವರಿಸಲು ಕಥೆಗಳನ್ನು ಬಳಸಬಹುದಾಗಿದೆ. ಗಣಿತ ಅಥವಾ ವಿಜ್ಞಾನದ ಸೂತ್ರ, ತತ್ವಗಳನ್ನು ಕೇವಲ ಬಾಯಿಪಾಠ ಮಾಡಿಸುವ ಬದಲು ನಿತ್ಯ ಜೀವನದ ದುಷ್ಟಾಂತದೊಂದಿಗೆ ಕಥನ ಶೈಲಿಯಲ್ಲಿ ಅವುಗಳ ಬಳಕೆಯ ವಿಧಾನ ತಿಳಿಸಿದರೆ ಅದು ಶಾಶ್ವತವಾಗಿ ಉಳಿಯುತ್ತದೆ. ಕಥೆಗಳು ನಿತ್ಯ ಜೀವನಕ್ಕೆ ಬೇಕಾದ ಮಾಹಿತಿಗಳನ್ನು ಜ್ಞಾನವನ್ನು ಹಾಗೂ ಸತ್ಯವನ್ನು ತಿಳಿಸುತ್ತವೆ. ಆದ್ದರಿಂದ ಉತ್ತಮ ಕಥೆಗಾರರಾಗುವ ಮುನ್ನ ಕೆಳಗಿನ ಅಂಶಗಳತ್ತ ಗಮನ ಹರಿಸಿ.
•    ಕಥೆ ವೈಜ್ಞಾನಿಕವಾಗಿರಲಿ ಅಥವಾ ಕಾಲ್ಪನಿಕವಾಗಿರಲಿ ಹೇಳಬೇಕಾದ ಪ್ರತೀ ಭಾಗವೂ ಮುಖ್ಯ. ಕಥೆಯ ಮೂಲ ಆಶಯ ಹಾಗೂ ಕಲಿಕೆಯ ಮೂಲಾಂಶಗಳು ಮಾಯವಾಗದಂತೆ ಕಥೆಗಳು ಪರಿಪೂರ್ಣವಾಗಿರಬೇಕು. ಆದ್ದರಿಂದ ಕಥೆಗಳನ್ನು ಹೆಣೆಯುವಾಗ ಕಲಿಕಾಂಶದ ಪ್ರತೀ ಭಾಗವೂ ಅಗತ್ಯ ಎಂಬುದನ್ನು ನೆನಪಿಡಿ.
•    ಕಥೆ ಹೇಳುವಾಗ ಕೇಳುಗರ ಅವಧಾನ ಹಿಡಿದಿಡುವುದು ಮುಖ್ಯ. ಕಥೆಯು ಆರಂಭದಿಂದ ಅಂತ್ಯದವರೆಗೂ ಕುತೂಹಲದಿಂದ ಕೂಡಿರಬೇಕು. ಅದಕ್ಕಾಗಿ ಉತ್ತಮ ಆರಂಭ ಮುಖ್ಯ. ಆರಂಭದಲ್ಲಿ ಯಾವುದಾದರೊಂದು ಸಮಸ್ಯೆ ನೀಡಿ ಕೇಳುಗರ ಮನಸ್ಸನ್ನು ಸೆಳೆಯಬೇಕು.
•    ಕಥೆಯಲ್ಲಿ ಅರ್ಥಗರ್ಭಿತವಾದ ಮತ್ತು ಆಳವಾದ ಥೀಮ್ ಇರಲಿ. ಮನಸ್ಸಿನಲ್ಲಿನ ಥೀಮ್‍ನಂತೆ ಕಥೆಯನ್ನು ಸಂಯೋಜಿಸುವುದು ಸುಲಭದ ಕೆಲಸವಲ್ಲ. ಹೇಳಬೇಕಾದ ಎಲ್ಲಾ ಅಂಶಗಳನ್ನು ಮೊದಲು ಬರೆದಿಟ್ಟುಕೊಂಡು ನಂತರ ಥೀಮ್ ಅಳವಡಿಸಬಹುದು.
•    ಕಥೆಯು ಸರಳವಾಗಿರಲಿ, ಸ್ಪಷ್ಟವಾಗಿರಲಿ ಹಾಗೂ ಗಟ್ಟಿಯಾದ ನೆಲೆಗಟ್ಟಿನ ಮೇಲೆ ನಿರೂಪಿತವಾಗಿರಲಿ. ಸಾಧ್ಯವಾದಷ್ಟೂ ನಿತ್ಯ ಜೀವನದ ಸಾದೃಶ್ಯಗಳಿರಲಿ.
•    ಕಥೆ ಹೇಳುವಾಗ ಕೇಳುಗರೊಂದಿಗೆ ನಿರಂತರವಾಗಿ ಕಣ್ಣುಗಳ ಸಂಪರ್ಕ ಇರಲಿ. ಭಾವನೆಗಳನ್ನು ಹಂಚಿಕೊಳ್ಳಲು ಹಾಗೂ ಕೇಳುಗರ ಲವಲವಿಕೆಯ ಮಟ್ಟವನ್ನು ತಿಳಿಯಲು ಕಣ್ಣುಗಳ ಸಂಪರ್ಕ ಅಗತ್ಯ. ಇದು ಕೇಳುಗರ ಅವಧಾನವನ್ನು ಕೇಂದ್ರೀಕರಿಸುವುದಲ್ಲದೇ ವಿಶ್ವಾಸ ಮತ್ತು ಸತ್ಯಸಂಧತೆಯನ್ನು ರವಾನಿಸುವ ಅಸ್ತ್ರವಾಗಿದೆ.
•    ಕಥೆಯಲ್ಲಿ ಮಕ್ಕಳಿಗೆ ಅರ್ಥವಾಗುವ ವಿವಿಧ ಭಾಷೆಗಳನ್ನು ಬಳಸಿ. ಸಂಭಾಷಣೆಗಳಲ್ಲಿ ಸಾಧ್ಯವಾದಷ್ಟೂ ಮಕ್ಕಳನ್ನು ತೊಡಗಿಸಿಕೊಳ್ಳಿ.
•    ಕಥೆ ಹೇಳುವಾಗ ಕಥೆಯ ಭಾವನೆಗಳಿಗೆ ತಕ್ಕಂತೆ ದೇಹಭಾಷೆ(ಆಂಗಿಕ ಚಲನೆ) ಬಳಸಿ.
•    ಕಥೆಗಳಲ್ಲಿನ ಸಂಭಾಷಣೆಗಳನ್ನು ಧ್ವನಿಯ ಏರಿಳಿತದೊಂದಿಗೆ ನಾಟಕೀಯ ಶೈಲಿಯಲ್ಲಿ ಹೇಳಿ. ಇದು ಕೇಳುಗರಿಗೆ ರಂಜನಿಯ ಎನಿಸುತ್ತದೆ.
•    ಕಥೆ ಕೇವಲ ಕಿವಿಗಳಿಗೆ ಮಾತ್ರ ಎಂಬಂತಾಗಬಾರದು. ಧ್ವನಿ, ದೃಷ್ಟಿ, ಸ್ಪರ್ಶ, ರುಚಿ ಹಾಗೂ ವಾಸನೆಗಳ ಇಂದ್ರಿಯಾನುಭವ ನೀಡಿ. ಜೊತೆಗೆ ಕಥೆಗೆ ತಕ್ಕ ರಂಗ ಪರಿಕರಗಳನ್ನು ಬಳಸಿ.
•    ಕಥೆಯಲ್ಲಿ ಉತ್ತಮ ಪರಿಸರ ಸೃಷ್ಟಿಸುವ ನಿರ್ಣಾಯಕ ಅಂಶಗಳಿರಲಿ. ಅಂತೆಯೇ ಕಥೆಯಲ್ಲಿ ಹಳ್ಳಿಯ ಸೊಗಡು, ನಗರದ ಜಂಜಡ ವೈಭವ, ಸಮುದ್ರತೀರದ ಮೋಹಕತೆ, ಪ್ರಕೃತಿಯ ರಮ್ಯತೆ, ಅನ್ಯಗ್ರಹದ ರೋಚಕತೆ, ವೈವಿಧ್ಯಮಯ ಹವಾಮಾನ ವಾಯುಗುಣಗಳ ಪ್ರಾದೇಶಿಕ ಚಿತ್ರಣ ಹೀಗೆ ಸಾಮಾನ್ಯ ಕಥೆಯಲ್ಲಿ ಅಸಾಮಾನ್ಯತೆ ಇರಲಿ.
•    ಕಥೆ ಕೇವಲ ಗಂಭೀರವಾಗಿ ಸಾಗದೇ ಅಲ್ಲಲ್ಲಿ ಹಾಸ್ಯ ವಿನೋದಗಳಿರಲಿ. ಜೊತೆಗೆ ಸನನಿವೇಶಕ್ಕೆ ತಕ್ಕ ಹಾಡು ಸಂಗೀತ ಇರಲಿ.
•    ಕಥೆಗಳಲ್ಲಿ ಅನಗತ್ಯವಾದ ಪಾತ್ರ, ಘಟನೆಗಳು ಮತ್ತು ಸಂಭಾಷಣೆಗಳು ಬೇಡ. ಇದು ಕಥೆ ನೇರ ದಾರಿಯಲ್ಲಿ ಸಾಗಲು ಅನುಕೂಲ.
•    ನಿಗದಿತ ಸಮಯದಲ್ಲಿ ಕಥೆಯ ಮೂಲ ಆಶಯಕ್ಕೆ ಧಕ್ಕೆ ಬರದಂತೆ ಮುಕ್ತಾಯಗೊಳಿಸಿ. ಕೇಳುಗರ ಮನಸ್ಸು ಚಂಚಲಗೊಳ್ಳುವ ಮುನ್ನ ನಿಗದಿತ ಸಂದೇಶ ತಲುಪಿಸಲು ಪ್ರಯತ್ನಿಸಿ.
•    ಕಥೆಯ ಕೊನೆಯಲ್ಲಿ ಉತ್ತಮವಾದ ತತ್ವ ಆದರ್ಶ ಸಂದೇಶಗಳಿರಲಿ. ಅವು ಕಥೆಯ ಕನಸನ್ನು ಸಾಕಾರಗೊಳಿಸುವಂತೆ ಇರಬೇಕು. ಅದಕ್ಕಾಗಿ ಪ್ರಾಸಭರಿತ ನುಡಿಗಟ್ಟು ಬಳಸಬಹುದು. ಕೊನೆಯಲ್ಲಿ ಸಮಸ್ಯೆಗೆ ಉತ್ತರ ದೊರೆಯುವಂತೆ ಇರಬೇಕೇ ವಿನಹ ಜಟಿಲತೆ ಉಳಿಯಬಾರದು.
        ಮೇಲಿನ ಅಂಶಗಳನ್ನು ಬಳಸಿ ಕಥೆಯನ್ನು ಸಂಯೋಜಿಸಿ ಬಳಸಿದ್ದೇ ಆದಲ್ಲಿ ಖಂಡಿತ ನೀವೊಬ್ಬ ಉತ್ತಮ ಕಥೆಗಾರರಾಗುತ್ತೀರಿ.
                                                                                                                         ಆರ್.ಬಿ.ಗುರುಬಸವರಾಜ ಸ.ಶಿ

No comments:

Post a Comment