April 19, 2014

ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ

ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ

ಆಡಿ,,, ಬಾ,,,, ನನ ಕಂದ

ಅಂಗಾಲ ತೊಳೆದೇನಾ

ತೆಂಗಿನ ಕಾಯಿ ತಿಳಿನೀರ.../ ತೆಂಗಿನ ಕಾಯಿ ತಿಳಿನೀರ

ತಕ್ಕೊಂಡು ಬಂಗಾರದ ಮುಖವ ತೊಳೆದೇನ.......

ಎಂಬ ಹಾಡನ್ನು ನಾವು ಚಿಕ್ಕವರಾಗಿದ್ದಾಗ ನಮ್ಮ ತಮ್ಮ-ತಂಗಿಯರನ್ನು ಮಲಗಿಸುವಾಗ ಕೇಳಿಸಿಕೊಂಡ ನೆನಪು. ಆದರೆ ಇಂದಿನ ಯಾಂತ್ರಿಕ ಜೀವನದಲ್ಲಿ ನಮ್ಮ ತಾಯಂದಿರಿಗೆ ಮಕ್ಕಳನ್ನು ಜೋಗುಳ ಹಾಡಿ ತೂಗಿ ಮಲಗಿಸಲು ಪುರುಸೊತ್ತೆಲ್ಲಿದೆ? ಅಂದಿನ ದಿನಗಳ ಮಧುರ ನೆನಪುಗಳೆಲ್ಲವೂ ‘ಕಾಲಾಯ ತಸೈನಮಃ’ ಎಂಬಂತೆ ಕಾಲಗರ್ಭದಲ್ಲಿ ಹುದುಗಿ ಹೋಗಿವೆ.

ಅಂದಿನ ತಂದೆ ತಾಯಿಗಳು ಮಕ್ಕಳ ಲಾಲನೆ ಪಾಲನೆ ಆರೋಗ್ಯದ ಬಗೆಗಿನ ಕಾಳಜಿ, ಮಕ್ಕಳ ಇಷ್ಟಾರ್ಥಗಳನ್ನು ತಿಳಿದುಕೊಳ್ಳುವ ಹಾಗೂ ಅವರ ಭಾವನೆಗಳಿಗೆ ಸ್ಪಂದಿಸುವ ರೀತಿ ಮಕ್ಕಳಿಗೆ ಅಪ್ಯಾಯಮಾನವೆನಿಸುತ್ತಿತ್ತು. ಆದರೆ ಇಂದಿನ ಜಂಜಡದ ಜೀವನದಲ್ಲಿ ಮಕ್ಕಳ ಭಾವನೆಗಳಿಗೆ ಸ್ಪಂದಿಸುವ ತಂದೆ ತಾಯಿಗಳ ಸಂಖ್ಯೆ ತೀರಾ ಇಳಿಮುಖವಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಮಕ್ಕಳ ಭಾವನೆಗಳಿಗೆ ಸ್ಪಂದಿಸುವುದಿರಲಿ ಅವರನ್ನು ಮಾತನಾಡಿಸದಷ್ಟೂ, ಅವರ ಇಷ್ಟ-ಕಷ್ಟಗಳನ್ನು ಆಲಿಸಲಾರದಷ್ಟೂ ವ್ಯವಧಾನವನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ.

ಪತಿ-ಪತ್ನಿಯರಿಬ್ಬರೂ ದುಡಿಮೆಯಲ್ಲಿ ತೊಡಗಿದ್ದರಂತೂ ಅವರ ಮಕ್ಕಳಿಗೆ ಆಯಾಳೆ ತಂದೆ-ತಾಯಿ, ಗುರು ಎಲ್ಲವೂ ಆಗಿರುತ್ತಾಳೆ. ಅಂತಹ ಮಕ್ಕಳಿಗೆ ಎಲ್ಲಾ ಸೌಲಭ್ಯಗಳು ಇರುತ್ತವಾದರೂ ಅವರು ತಂದೆ-ತಾಯಿಗಳ ಪ್ರೀತಿ ವಾತ್ಸಲ್ಯಗಳಿಂದ ವಂಚಿತರಾಗಿ, ವಿವೇಚನಾ ರಹಿತ ಜೀವನಕ್ಕೆ ಹೊಂದಿಕೊಂಡು ಲೋಕ ಕಂಠಕರಾಗುವ ಸಾಧ್ಯತೆ ಹೆಚ್ಚು. ಕೇವಲ ಹಣ ಗಳಿಕೆಯನ್ನೇ ಪ್ರಧಾನ ಗುರಿಯಾಗಿಸಿಕೊಂಡ ನಾವಿಂದು ನಮ್ಮ ಮುಖ್ಯ ಆಸ್ತಿಗಳಾದ ಮಕ್ಕಳನ್ನು ಕಡೆಗಣಿಸಿ ಅವರ ಜೀವನವನ್ನು ನರಕ ಕೂಪವಾಗಿಸುತ್ತಿದೇವೆ.

ನಗರ ಜೀವನದಲ್ಲಿ ದುಡಿಯುವ ತಂದೆ-ತಾಯಿಗಳ ಮಕ್ಕಳ ಕಥೆ ಒಂದು ರೀತಿಯಾದರೆ ಗ್ರಾಮೀಣ ಪ್ರದೇಶದಲ್ಲಿನ ಆರ್ಥಿಕವಾಗಿ ಹಿಂದುಳಿದ ತಂದೆ-ತಾಯಂದಿರ ಮಕ್ಕಳ ವ್ಯಥೆ ಇನ್ನೊಂದು ರೀತಿಯದು. ತಮ್ಮ ಮಕ್ಕಳ ಬಗ್ಗೆ ಕಾಳಜಿಯೇ ಇಲ್ಲದ, ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಮಕ್ಕಳನ್ನೇ ಬಲಿಪಶು ಮಾಡುತ್ತಿರುವ ಪೋಷಕರಿಗೇನೂ ನಮ್ಮಲ್ಲಿ ಬರವಿಲ್ಲ. ಅವರು ತಮ್ಮ ಮಕ್ಕಳ ಕನಿಷ್ಠ ಅವಶ್ಯಕತೆಗಳಾದ ಅನ್ನ, ಅರಿವೆ, ಆರೋಗ್ಯ ಮುಂತಾದವುಗಳನ್ನು ವ್ಯವಸ್ಥೆಗೊಳಿಸಲಾರದ ಸ್ಥಿತಿಯಲ್ಲಿರುವಾಗ, ಮಕ್ಕಳ ಶಿಕ್ಷಣದ ಬಗ್ಗೆ, ಅವರ ಬೇಕು ಬೇಡಗಳ ಬಗ್ಗೆ, ಚಿಂತಿಸಲಾರದಷ್ಟು ಹೀನ ಸ್ಥಿತಿಯಲ್ಲಿದ್ದಾರೆ. ಇಂತಹ ಮಕ್ಕಳ ಸ್ಥಿತಿಗತಿ ನೋಡಿದರೆ ‘ಕೊಟಗಾನಹಳ್ಳಿ ರಾಮಯ್ಯ’ನವರು ಮಕ್ಕಳನ್ನು ಕುರಿತು ಬರೆದ

ಹಳ್ಳಿಗಾಡ ಹಸುಗೂಸೆ......

ಹಸು ಕಾಯೋ ಧೀರ ಬಾಲನೇ

ಶಾಲೆ ಮರೆತು ದಿನವೆಷ್ಟಾಯಿತೋ

ಓ ಹಾಲಿಗೆನ್ನೆಯಾ ಜೀತಗಾರ

ಜೀತ ಸೇರಿ ದಿನವೆಷ್ಟಾಯಿತೋ// ಎಂಬ ಕವನದ ಸಾಲುಗಳು ನೆನಪಾಗುತ್ತವೆ. ಹೌದು, ನಿಜಕ್ಕೂ ಗ್ರಾಮೀಣ ಪರಿಸರದಲ್ಲಿರುವ ಎಷ್ಟೋ ಮಕ್ಕಳ ಪರಿಸ್ಥಿತಿ ಇನ್ನೂ ಗಂಭಿರವಾಗಿಯೇ ಇದೆ. ಇಂತಹ ಮಕ್ಕಳ ಪರಿಸ್ಥಿತಿ ನಿವಾರಿಸುವುದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತದೆ. ಆದರೆ ಈ ಯೋಜನೆಗಳು ಯಾರನ್ನು ತಲುಪಬೇಕಾಗಿತ್ತೋ, ಹೇಗೆ ತಲುಪಬೇಕಾಗಿತ್ತೋ ಹಾಗೆ ಅವರನ್ನು ತಲುಪುತ್ತಿಲ್ಲ. ಕೇವಲ ದಾಖಲೆಗಳಲ್ಲಿ ಮಾತ್ರ ಪ್ರಗತಿಯಾಗಿದೆಯೇ ಹೊರತು ನಿಜ ಸ್ಥಿತಿಯಲ್ಲಿ ಅಲ್ಲ.

ಕೆಲವು ಬುದ್ದಿ ಜೀವಿಗಳು, ವಿಚಾರ ವಾದಿಗಳು, ಪ್ರಜ್ಞಾವಂತರು, ಸಮಾಜ ಸೇವಕರು, ಸಂಘಟನೆಗಳು ನವೆಂಬರ್ ಬಂತೆಂದರೆ ಪ್ರಮುಖವಾಗಿ ಎರಡು ವಿಷಯಗಳ ಬಗ್ಗೆ ತಮ್ಮ ವಿಚಾರಗಳನ್ನು ಹರಿಯಬಿಡುತ್ತಾರೆ. ಒಂದು ಕರ್ನಾಟಕದಲ್ಲಿ ಕನ್ನಡದ ಸ್ಥಿತಿ-ಗತಿ, ಅದರ ರಕ್ಷಣೆ ಕುರಿತಾದದ್ದು, ಇನ್ನೊಂದು ಮಕ್ಕಳನ್ನು ಕುರಿತಾದದ್ದು. ಮಕ್ಕಳ ದಿನಾಚರಣೆಯ ನೆಪದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿ, ಕೆಲವು ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ನೀಡಿ, ನಾಲ್ಕಾರು ಮೆಚ್ಚುಗೆಯ ಮಾತುಗಳನ್ನಾಡಿ ಪುನಃ ಮತ್ತದೇ ಯಾಂತ್ರಿಕ ಜೀವನಕ್ಕೆ ಒಗ್ಗಿ ಕೊಳ್ಳುತ್ತೇವೆ. ಇಂದಿಗೂ ಅನೇಕ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಸರಿಯಾದ ಕಲ್ಪನೆ ಇಲ್ಲ ಅಲ್ಲದೇ ಹಕ್ಕುಗಳನ್ನು ಅನುಭವಿಸಲು ಸರಿಯಾದ ಅವಕಾಶಗಳು ಇಲ್ಲವೆಂದೇ ಹೇಳಬಹುದು.

ಯಾರಾದರೂ ಪರಿಚಯಸ್ತರೋ, ಸಂಬಂಧಿಗಳೋ ಸ್ನೇಹಿತರೋ ಸಿಕ್ಕಾಗ ಕುಶಲ ಸಮಾಚಾರದ ಜೊತೆಗೆ ಮಕ್ಕಳ ಕುಶಲ ಸಮಾಚಾರ ವಿಚಾರಿಸುವುದು ವಾಡಿಕೆ. ಇತ್ತೀಚಿಗೆ ಸರ್ಕಾರಿ ನೌಕರಿಯಲ್ಲಿರುವವರು ಭೇಟಿಯಾದರಂತೂ ‘ನಿಮ್ಮ ಮಕ್ಕಳ ಹೆಸರಿನಲ್ಲಿ ಎಷ್ಟೆಷ್ಟು ಹಣ ಇಟ್ಟಿದ್ದೀರಿ, ಅವರಿಗಾಗಿ ಏನೇನು ಆಸ್ತಿ ಮಾಡಿದ್ದೀರಿ’ ಎಂದು ಕೇಳುವವರೇ ಹೆಚ್ಚು. ಮಕ್ಕಳಿಗಾಗಿ ಆಸ್ತಿ ಮಾಡಿ ಎಂದು ಎಲ್ಲರೂ ಹೇಳುತ್ತಾರೆಯೇ ಹೊರತು ‘ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ’ ಎಂದು ಹೇಳುವವರೇ ಇಲ್ಲದಂತಾಗಿದೆ.

ಮಕ್ಕಳ ಬಗ್ಗೆ ನಿಜವಾದ ಕಾಳಜಿ ಇರುವ ತಂದೆ-ತಾಯಿಗಳು ಮೊದಲು ಆ ಮಕ್ಕಳ ಭಾವನೆಗಳಿಗೆ ಸ್ಪಂದಿಸಿ, ಅವರ ಹಕ್ಕುಗಳನ್ನು ಅನುಭವಿಸಲು ಮುಕ್ತ ಸ್ವಾತಂತ್ರ ಕೊಟ್ಟಾಗಲೇ ಮಕ್ಕಳು ಕುಟುಂಬದ ಹಾಗೂ ದೇಶದ ಆಸ್ತಿಗಳಾಗಲು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳನ್ನು ಪ್ರಚಾರಗೊಳಿಸುವ ಹಾಗೂ ಜನರನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ ಬಾಗವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ‘ಮಕ್ಕಳ ಹಕ್ಕುಗಳ ಅಭಿಯಾನ’ ಎಂಬ ವಿನೂತನ ಕಾರ್ಯಕ್ರಮ ರೂಪಿಸಿದೆ. ಪ್ರತಿ ನೆವೆಂಬರ್ ತಿಂಗಳಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಹಂತದಲ್ಲಿ ‘ಮಕ್ಕಳ ಗ್ರಾಮಸಭೆ’ ನಡೆಸುವ ಮೂಲಕ ಈ ಅಭಿಯಾನ ಆಚರಿಸಲಾಗುತ್ತದೆ. ಮಕ್ಕಳ ಕೇವಲ ಇಂತಹ ಕಾರ್ಯಕ್ರಗಳಲ್ಲಿ ಭಾಗವಹಿಸಿದ್ದಾಗ ಮಾತ್ರ ತಮ್ಮ ಹಕ್ಕುಗಳನ್ನು ಅನುಭವಿಸದೇ ದಿನನಿತ್ಯವೂ ಅನುಭವಿಸುವಂತಾಗಲಿ ಎಂಬುದೇ ಮಕ್ಕಳ ಪ್ರೇಮಿಗಳ ಆಶಯವಾಗಿದೆ. ಈ ಆಶಯ ಈಡೇರಿಸಲು ಎಲ್ಲರೂ ಕೈ ಕೈ ಜೋಡಿಸಿ ಹೆಗಲಿಗೆ ಹೆಗಲು ಹಚ್ಚಿ, ಮನಸ್ಸು ಕೊಟ್ಟು ಶ್ರಮಿಸೋಣ ಬನ್ನಿ!.


‘ಟೀಚರ್’ ನವೆಂಬರ್ 2006

ಆರ್.ಬಿ.ಗುರುಬಸವರಾಜ

No comments:

Post a Comment