April 19, 2014

ಶಿಕ್ಷಣದ ನಗರೀಕರಣ ಕೊನೆಗೊಂಡೀತೇ?

ಶಿಕ್ಷಣದ ನಗರೀಕರಣ ಕೊನೆಗೊಂಡೀತೇ?
(ಗ್ರಾಮೀಣ ಪ್ರದೇಶದ ಶಿಕ್ಷಣ ಹಿಂದುಳಿಯುತ್ತಿರಲು ಕಾರಣಗಳು)
ಭಾರತ ಹಳ್ಳಿಗಳ ನಾಡು. ಶೇ 70 ರಷ್ಟು ಹಳ್ಳಿಗಳು ಭಾರತದಲ್ಲಿವೆ. ಮುಂದುವರೆಯುತ್ತಿರುವ ಭಾರತದಂತಹ ಹಳ್ಳಿಗಳ ಪ್ರಧಾನವಾದ ದೇಶದ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದಾಗ ಗ್ರಾಮೀಣ ಶಿಕ್ಷಣದ ವ್ಯವಸ್ಥೆ ಮಂದಗತಿಯಲ್ಲಿರುವುದು ಗೋಚರಿಸುತ್ತದೆ. ಭಾರತದ ಹಳ್ಳಿಗಳಲ್ಲಿ ಶಿಕ್ಷಣ ಸೌಲಭ್ಯ ಕಡಿಮೆ. ನಗರಗಳಿಗೆ ಹೋಲಿಸಿದರೆ ಹಳ್ಳಿಗಳನ್ನು ಶೈಕ್ಷಣಿಕವಾಗಿ ನಿರ್ಲಕ್ಷಿಸಲಾಗಿದೆ ಎನ್ನಬಹುದು. ಆದರೆ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಆದಾಗ್ಯೂ ನಗರ ಮತ್ತು ಹಳ್ಳಿಗಳ ನಡುವೆ ತುಂಬಾ ತಾರತಮ್ಯವಿರುವುದು ಕಾಣುತ್ತದೆ. ಹೀಗಾಗಿ ಗ್ರಾಮೀಣ ಜನರು ನಗರ ಶಿಕ್ಷಣಕ್ಕೆ ಹೆಚ್ಚು ಮಾರಿ ಹೋಗುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಶಿಕ್ಷಣ ಮತ್ತು ನಗರ ಶಿಕ್ಷಣದ ನಡುವೆ ದೊಡ್ಡ ಕಂದರ ಏರ್ಪಡುತ್ತಿದೆ. 
ಪಾಲಕ ಪೋಷಕರು, ವಿದ್ಯಾರ್ಥಿಗಳು ನಗರ ಶಿಕ್ಷಣಕ್ಕೆ ಮಾರು ಹೋಗಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದವು ಕೆಳಗಿನಂತಿವೆ.
  •   ಭಾರತ ಸರ್ಕಾರವು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದ್ದರೂ ಸಹ ಅದಕ್ಕೆ ತಕ್ಕುದಾದ ಸೌಲಭ್ಯಗಳು ಗ್ರಾಮೀಣ ಪ್ರದೇಶಗಳನ್ನು ಸರಿಯಾಗಿ ತಲುಪದಿರುವುದು.
  •   ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತದೆ. ಬಹುತೇಕ ಶಿಕ್ಷಕರು ಅನೇಕ ಕಾರಣಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಹಿಂಜರಿಯುತ್ತಾರೆ.
  •   ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳಲ್ಲಿ ಸರಿಯಾದ ಮೂಲಭೂತ ಸೌಲಭ್ಯಗಳಾದ ಪಾಠೋಪಕರಣ, ಪೀಠೋಪಕರಣ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸಭಾಂಗಣ ವ್ಯವಸ್ಥೆ ಸರಿಯಾಗಿರುವುದಿಲ್ಲ.
  •   ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಪ್ರಯೋಗಶಾಲೆ, ಗ್ರಂಥಭಂಢಾರ, ಆಟದ ಬಯಲು ಮತ್ತು ಮಾನಸಿಕ ಹಾಗೂ ಭೌಧ್ಧಿಕ ತರಬೇತಿ ಸೌಲಭ್ಯಗಳು ಸರಿಯಾಗಿ ಇಲ್ಲದಿರುವುದು.
  •   ಹಳ್ಳಿಗಳಲ್ಲಿ ವೃತ್ತಿ ತರಬೇತಿ ಶಿಕ್ಷಣ ಕೇಂದ್ರಗಳ ಅಭಾವವಿದ್ದು ನಗರ ಪ್ರದೇಶಗಳಲ್ಲಿ ದೊರೆಯುವ ಉತ್ತಮ ಶಿಕ್ಷಣ ವ್ಯವಸ್ಥೆ ಹಳ್ಳಿಗಳಲ್ಲಿ ಇಲ್ಲದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. 
  •   ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸೌಲಭ್ಯಗಳು ಹಳ್ಳಿಗಳಲ್ಲಿ ಇಲ್ಲದೇ ಇರುವುದರಿಂದ ಗ್ರಾಮೀಣರು ನಗರ ಶಿಕ್ಷಣಕ್ಕೆ ಮಾರು ಹೋಗುವಂತಾಗಿದೆ.
  •   ಭಾರತವು ವ್ಯವಸಾಯ ಪ್ರಧಾನ ದೇಶವಾಗಿದ್ದು,  ಮಕ್ಕಳಿಗೆ ಹಳ್ಳಿಗಳಲ್ಲಿ ವ್ಯವಸಾಯ ಮತ್ತು ವ್ಯವಸಾಯೋಧ್ಯಮ ಕ್ಷೇತ್ರಗಳಲ್ಲಿ ಶಿಕ್ಷಣ ಹಾಗೂ ತರಬೇತಿ ದೊರೆಯುತ್ತಿಲ್ಲ.
  •   ಹಳ್ಳಿಗಳಲ್ಲಿ ಹುಟ್ಟಿದ ನಿಮ್ನ ಹಾಗೂ ಹಿಂದುಳಿದ ವರ್ಗದ ವಿದ್ಯಾವಂತರು ಸಾಮಾಜಿಕ ಅಸಮಾನತೆಗೆ ಒಳಗಾಗಿದ್ದಾರೆ. ಅವರಿಗೆ ಪುರಸ್ಕಾರವಾಗಲೀ ಅಥವಾ ಸಾಮಾಜಿಕ ಮನ್ನಣೆಯಾಗಲೀ ದೊರೆಯುತ್ರತಿಲ್ಲ. ನಗರ ಪ್ರದೇಶಗಳಲ್ಲಿ ಜಾತಿ, ಧರ್ಮ, ಮತಗಳ ನಿರ್ಬಂಧವಿಲ್ಲದೇ ಅರ್ಹತೆಯಿಂದ ಅಂತಸ್ತು, ಮನ್ನಣೆ ಮತ್ತು ಸೌಲಭ್ಯಗಳನ್ನು ಪಡೆಯಬಹುದಾಗಿದೆ.
  •   ಗ್ರಾಮೀಣ ಪ್ರದೇಶಗಳಲ್ಲಿ ಬಿಡುವಿನ ವೇಳೆಯಲ್ಲಿ ಕಲಿಯಲು ಅವಕಾಶವಿಲ್ಲದಿರುವುದು. ನಗರ ಪ್ರದೇಶಗಳಲ್ಲಿ ಬೆಳಗಿನ ಅಥವಾ ರಾತ್ರಿ ಪಾಳೆಯ ತರಗತಿಗಳನ್ನು ನಡೆಸುವಂತೆ ಹಳ್ಳಿಗಳಲ್ಲಿ ವ್ಯವಸ್ಥೆ ಇಲ್ಲದಿರುವುದರಿಂದ ಹೆಚ್ಚು ಜನ ನಗರ ಶಿಕ್ಷಣದ ಕಡೆಗೆ ವಾಲುತ್ತಿದ್ದಾರೆ.
  •   ಗ್ರಾಮೀಣ ಪ್ರದೇಶದ ವಿದ್ಯಾವಂತರು ನಿಯಂತ್ರಣಕ್ಕೆ ಒಳಗಾಗುತ್ತಿದ್ದಾರೆ. ವಿದ್ಯಾಭ್ಯಾಸ, ಉದ್ಯೋಗ, ತಾಂತ್ರಿಕತೆ, ವ್ಯವಹಾರ ಮುಂತಾಧ ವಿಷಯಗಳ ಆಯ್ಕೆಯಲ್ಲಿ ಸ್ವಾತಂತ್ರವಿಲ್ಲದೇ ತಂದೆ-ತಾಯಿ ಅಥವಾ ಪೋಷಕರ ನಿಯಂತ್ರಣಕ್ಕೊಳಗಾಗುತ್ತಿದ್ದಾರೆ.

ಹೀಗೆ ಇನ್ನೂ ಅನೇಕ ಕಾರಣಗಳಿಂದ ಶಿಕ್ಷಣವು ನಗರ ಪ್ರದೇಶಗಳಲ್ಲಿ ಕೇಂದ್ರೀಕೃತಗೊಂಡು ಗ್ರಾಮೀಣ ಪ್ರದೇಶದ ಶಿಕ್ಷಣ ಸೊರಗುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಗ್ರಾಮೀಣ ಪ್ರದೇಶದ ಶಿಕ್ಷಣ ಮೂಲೆಗುಂಪಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಲಾದರೂ ಜನತೆ, ಜನನಾಯಕರು, ಸರ್ಕಾರದವರು ಎಚ್ಚೆತ್ತುಕೊಂಡರೆ ಗ್ರಾಮೀಣ ಶಿಕ್ಷಣವನ್ನು ಅಭಿವೃದ್ದಿ ಪಡಿಸುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದರೆ ಹಳ್ಳಿಗಳ ಉದ್ದಾರವಾದೀತು. ಆಗ ಗಾಂಧೀಜಿಯವರ ‘ಗ್ರಾಮಸ್ವರಾಜ್ಯ’ದ ಕನಸು ನನಸಾದೀತು.

‘ಶಿಕ್ಷಣ ಶಿಲ್ಪಿ’ ಫೆಬ್ರವರಿ 2006
ಆರ್.ಬಿ.ಗುರುಬಸವರಾಜ

No comments:

Post a Comment