April 28, 2014

ಇದ್ಹೇಗೆ ಮೇಲೇರಿತು?

ಇದ್ಹೇಗೆ ಮೇಲೇರಿತು?

ಒಮ್ಮೆ ನಮ್ಮ ಪುಟ್ಟ ಪಟ್ಟಣಕ್ಕೆ ತನ್ನ ತಂದೆ ಜೊತೆ ಬೈಕನ್ನೇರಿ ಹೋದ. ತಂದೆ ಜೊತೆ ಪಟ್ಟಣವನ್ನೆಲ್ಲ ಸುತ್ತಾಡಿ, ಬೇಕಾದ ಸಾಮಾನುಗಳನ್ನು ಖರೀದಿಸಿ, ಇಷ್ಟವಾದ ತಿಂಡಿ-ತಿನಿಸುಗಳನ್ನು ತಿಂದು ಕೊನೆಗೆ ತಂದೆ-ಮಗ ಇಬ್ಬರೂ ಬೈಕ್ ತೊಳೆಸಲೆಂದು ‘water service station’ ಗೆ ಹೋದರು ಅಲ್ಲಿ ಬೈಕ್ ತೊಳೆಯಲು ಬಿಟ್ಟು, ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳಿತರು.

ಪುಟ್ಟ ಬಹಳ ಚುರುಕು ಬುದ್ದಿಯುಳ್ಳ ಹುಡುಗ. ಎಲ್ಲ ವಸ್ತುಗಳೂ, ದೃಶ್ಯಗಳೂ ಅವನ ಮನಸ್ಸನ್ನು ಕೆರೆಳಿಸಿ ಏಕೆ? ಏನು? ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತಿದ್ದವು. ಹೀಗೆ ‘water service station’ ನಲ್ಲೂ ಸಹ ಅವನಿಗೊಂದು ಪ್ರಶ್ನೆ ಉದ್ಭವಿಸಿತು. ಅದೇನೆಂದರೆ water service station ನಲ್ಲಿ ಇವರ ಬೈಕನ್ನು ತೊಳೆಯಲು ಬಿಟ್ಟ ಸಮಯದಲ್ಲಿ ಇನ್ನೊಂದು ಜೀಪು ಸಹ water service  ಗೆಂದು ಬಂದಿತ್ತು. ಅದನ್ನೇ ನೋಡುತ್ತಾ ಕುಳಿತ ಪುಟ್ಟನಿಗೆ ಅದು ಒಮ್ಮೇಲೇ ಕೆಳಗಿನಿಂದ ಮೇಲಕ್ಕೆ ಏರಿದ್ದು ನೋಡಿ ಆಶ್ಚರ್ಯವಾಯಿತು. “ಯಾರೂ ಎತ್ತದೇ ಇದ್ಹೇಗೆ ಮೇಲೇರಿತು” ಎಂಬ ಪ್ರಶ್ನೆ ಮೂಡಿ ತನ್ನ ತಂದೆಯನ್ನು ಕೇಳಿದ.
“ಅಪ್ಪ ಈ ಜೀಪು ಹೇಗೆ ಮೇಲೇರಿತು? ಅದನ್ನು ಹೇಗೆ ಕೆಳಗಿಳಿಸುತ್ತಾರೆ” ಎಂದು ಪ್ರಶ್ನಿಸಿದ. ತಂದೆಗೆ ಉತ್ತರ ಗೊತ್ತಿರಲಿಲ್ಲ. ‘ನಿಮ್ಮ ತರಗತಿಯಲ್ಲಿ ವಿಜ್ಞಾನ ಶಿಕ್ಷಕರನ್ನು ಕೇಳು’ ಎಂಬ ಸಲಹೆ ನೀಡಿದರು.

ಮರುದಿನ ಶಾಲೆಗೆ ಬಂದ ಪುಟ್ಟ ವಿಜ್ಞಾನ ಶಿಕ್ಷಕರು ಒಳಬಂದ ತಕ್ಷಣ ತನ್ನ ಪ್ರಶ್ನೆಯನ್ನು ಅವರ ಮುಂದಿಟ್ಟ. ವಿಜ್ಞಾನ ಶಿಕ್ಷಕರು ಅವನ ಕುತೂಹಲವನ್ನು ಬಹಳವಾಗಿ ಮೆಚ್ಚಿ ಅವನ ಪ್ರಶ್ನೆಗೆ ಉತ್ತರಿಸತೊಡಗಿದರು.

“ವಾಹನವನ್ನು ಮೇಲಿತ್ತುವ ವ್ಯವಸ್ಥೆಯು ‘ಪ್ಯಾಸ್ಕಲ್‍ನ ನಿಯಮ’ವೆಂದೇ ಹೆಸರಾದ “ಹೈಡ್ರಾಲಕ್ ಪ್ರೇಷರ್” ನ ಮೂಲ ತತ್ವವಾಗಿದೆ. ಅಂದರೆ ದ್ರವ ವಸ್ತುವು ಒತ್ತಡವನ್ನು ಎಲ್ಲಾ ಕಡೆಗೂ ಸಮನಾಗಿ ವಿತರಿಸುತ್ತದೆಂದು ಪ್ಯಾಸ್ಕಲ್ ಪ್ರತಿಪಾದಿಸಿದ. ಒತ್ತುಗದ ಸಹಾಯದಿಂದ ಕಡಿಮೆ ಬಲದಿಂದ ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಾಗಿದೆ. ಯಂತ್ರದ ರಚನೆ ಚಿತ್ರದಲ್ಲಿರುವಂತೆ ತೀರಾ ಸರಳವಾಗಿದ್ದು ನೀರಿನಿಂದ ತುಂಬಿದ ಒಂದು ಪಾತ್ರೆಯಿದ್ದು ಅದರಲ್ಲಿ ಚಿಕ್ಕ ಬೆಣೆಯನ್ನು ಕೆಳದೂಡಿದಾಗ ಅದು ದೊಡ್ಡ ಬೆಣೆಯ ಮುಖದ ವಿಸ್ತೀರ್ಣ ಹೆಚ್ಚಿರುವುದರಿಂದ ಮೇಲ್ಬದಿಗೆ ಆರೋಪಿಸುವ ಬಲದ ಪರಿಣಾಮ ಹೆಚ್ಚಾಗಿರುತ್ತದೆ. ಹೀಗೆ ಚಿಕ್ಕ ಬೆಣೆಯ ಮೇಲೆ ಕಡಿಮೆ ಬಲ ಉಪಯೋಗಿಸಿ ದೊಡ್ಡ ಬೆಣೆ ಮೇಲಿನ ಒಂದು ವಾಹನವನ್ನು ಮೇಲೆತ್ತಬಹುದು” ಎಂದು ವಿವರಿಸಿ ತಿಳಿಸಿದರು.

ಪ್ಯಾಸ್ಕಲ್‍ನ ತತ್ವದ ಬಗ್ಗೆ ತಿಳಿದ ಪುಟ್ಟನಿಗೆ ಪ್ಯಾಸ್ಕಲ್‍ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆನಿಸಿತು.“ಸಾರ್ ಪ್ಯಾಸ್ಕಲ್‍ನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸ್ರೀ” ಎಂದು ಕೇಳಿದ. ಶಿಕ್ಷಕರು ವಿವರಿಸುತ್ತಾ “ಪ್ಯಾಸ್ಕಲ್‍ನು 1623 ಜೂನ್ 19 ರಂದು ಪ್ರಾನ್ಸಿನಲ್ಲಿರುವ ಕ್ಲೆರ್‍ಮೆಂಟ್-ಫೆರಿಂಡ್ ಎಂಬಲ್ಲಿ ಜನಿಸಿದನು. ಅವನಿಗೆ ಚಿಕ್ಕಂದಿನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಎಷ್ಟಿತ್ತೆಂದರೆ ಹುಡುಗನಾಗಿದ್ದಾಗಲೇ ಯೂಕ್ಲಿಡ್‍ನ ರೇಖಾಗಣಿತದ ಪ್ರಮೇಯಗಳನ್ನು ಕಂಡುಹಿಡಿದನಂತೆ. ಹದಿನಾರನೇ ವಯಸ್ಸಿಗೆ ಶಂಕುವಿನ ಛೇದ ಮುಖಗಳಾದ ವರ್ತುಲ, ಎಲಿಪ್ಸ್, ಪ್ಯಾರಾಬೋಲ, ಹೈಪರ್ಬೋಲ ಮುಂತಾದ ಆಕೃತಿಗಳ ಜ್ಯಾಮಿತಿಯ ಬಗ್ಗೆ ಪುಸ್ತಕ ಬರೆದು ಪ್ರಕಟಿಸಿದನು.

ಪ್ಯಾಸ್ಕಲ್ ಕಂಡುಹಿಡಿದ ಲೆಕ್ಕಾಚಾರದ ಯಂತ್ರ ಗಣಕಯಂತ್ರಗಳ ಆವಿಷ್ಕಾರಕ್ಕೆ ಪ್ರಚೋದನೆ ನೀಡಿತು. ಪ್ಯಾಸ್ಕಲ್‍ನು “ಸಂಭವನೀಯತಾ ಸಿದ್ಧಾಂತ” ಕಂಡು ಹಿಡಿದನು. ಒಮ್ಮೆ ಪ್ಯಾಸ್ಕಲ್ ಕುದುರೆ ಸಾರೋಟಿನಲ್ಲಿ ಹೋಗುವಾಗ ಅಪಘಾತಕ್ಕಿ ಡಾಗಿ ಸಾವಿನ ದವಡೆಯಿಂದ ತಪ್ಪಿಸಿಕೊಂಡ. ಇದು ಅವನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನುಂಟು ಮಾಡಿತು. ದೇವರ ಅವಕೃಪೆಯೇ ಇದಕ್ಕೆ ಕಾರಣವೆಂದು ನಂಬಿದ ಪ್ಯಾಸ್ಕಲ್‍ನಿಗೆ ಅಂದಿನಿಂದ ವಿಜ್ಞಾನದ ವಿಷಯದಲ್ಲಿ ಆಸಕ್ತಿ ಕಡಿಮೆಯಾಗಿ ಧಾರ್ಮಿಕ ಗ್ರಂಥಗಳ ಅಧ್ಯಯನ ಮತ್ತು ರಚನೆಯಲ್ಲಿ ತೊಡಗಿದ. ಪ್ಯಾಸ್ಕಲ್‍ನ ದೈವೀ ನಂಬಿಕೆಗಳೇನೇ ಇದ್ದರೂ ವಿಜ್ಞಾನ ಕ್ಷೇತ್ರದಲ್ಲಿ ಆತನ ಸಾಧನೆ ಗಮನಾರ್ಹವಾದುದು” ಎಂದು ಶಿಕ್ಷಕರು ಪ್ಯಾಸ್ಕಲ್‍ನ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಇದನ್ನು ಕೇಳಿದ ಪುಟ್ಟನಿಗೆ ಮತ್ತು ತರಗತಿಯ ವಿದ್ಯಾರ್ಥಿಗಳೆಲ್ಲರಿಗೂ ಬಲು ಖುಷಿಯಾಯಿತು.

‘ಟೀಚರ್’ ಅಕ್ಟೋಬರ್ 2003
- ಆರ್.ಬಿ.ಗುರುಬಸವರಾಜ

No comments:

Post a Comment