April 19, 2014

ಜವಾಬ್ದಾರಿಯುತರೇ ಮೈಮರೆತರೆ...

ಜವಾಬ್ದಾರಿಯುತರೇ ಮೈಮರೆತರೆ...
ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲೀಷ್ ಕಲಿಕೆ ಕುರಿತು ರಾಜ್ಯದಾದ್ಯಂತ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಇಂಗ್ಲೀಷ್ ಕಲಿಕೆಯ ಅಗತ್ಯತೆಯನ್ನು ಕುರಿತು ಪ್ರಾಥಮಿಕ ಹಂತದಿಂದ ಇಂಗ್ಲೀಷ್ ಬೇಕು ಎಂದು ಒಂದು ವರ್ಗ ವಾದಿಸಿದರೆ, ಕನ್ನಡ ಪರ ಹೋರಾಟ ನಡೆಸುತ್ತಿರುವ ಇನ್ನೊಂದು ಗುಂಪು  ಇಂಗ್ಲೀಷ್ ಕಲಿಕೆಯನ್ನು ವಿರೋಧಿಸುತ್ತದೆ. 
ಪ್ರಾಥಮಿಕ ಹಂತದಿಂದ ಇಂಗ್ಲೀಷ್ ಕಲಿಕೆಯ ಪರ ಮತ್ತು ವಿರೋಧ ಕುರಿತು ಚರ್ಚಿಸುವ ಮೊದಲು ಇಂಗ್ಲೀಷ್ ಕಲಿಕೆಯನ್ನು ಸಾಮಾಜಿಕ ಸಂರಚನೆಯ ಹಿನ್ನಲೆಯಲ್ಲಿ, ಜಾಗತೀಕರಣ ಮತ್ತು ಖಾಸಗೀಕರಣದ ಹಿನ್ನಲೆಯಲ್ಲಿ ನೋಡುವ ಅಗತ್ಯವಿದೆ.
ಸಾಮಾಜಿಕ ಸಂರಚನೆಯ ಹಿನ್ನಲೆಯಲ್ಲಿ ನೋಡಿದಾಗ ಸಮಾಜದ ಕೆಳಸ್ತರದಲ್ಲಿರುವ ಬಡವರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಇಂಗ್ಲೀಷ್ ಕಲಿಕೆಯ ಪರ ವಾದಿಸುತ್ತಿವೆ. ಏಕೆಂದರೆ ಸಮಾಜದ ಉನ್ನತ ವರ್ಗಗಳ, ಶ್ರೀಮಂತ ಮಕ್ಕಳಂತೆ ತಮ್ಮ ಮಕ್ಕಳೂ ಸಹ ಕಾನ್ವೆಂಟ್ ಶಾಲೆಗೆ ಹೋಗಬೇಕು, ಯೂನಿಫಾರಂ, ಬೂಟು ಟೈ ಹಾಕಿಕೊಂಡು ಟಾಕುಟೀಕಾಗಿರಬೇಕು ಮತ್ತು ತಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸದಿಂದ ತಮ್ಮ ಸಂಕಷ್ಟಗಳು ಪರಿಹಾರವಾಗಬೇಕು ಎಂದು ಹಂಬಲಿಸುತ್ತಿದ್ದಾರೆ. 
ಸಮಾಜದ ಅನೇಕ ವರ್ಗಗಳ ಜನರು ಇಂಗ್ಲೀಷ್ ಬೇಕು ಎಂದು ಒತ್ತಾಯಿಸುವ ಪರಿಸ್ಥಿತಿ ನಿರ್ಮಾಣವಾಗಲು  ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳೇ ಕಾರಣ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಖಾಸಗೀಕರಣದ ಅಟ್ಟಹಾಸವನ್ನು ನೋಡುತ್ತಿದ್ದೇವೆ. ಅದು ಶಿಕ್ಷಣ ಕ್ಷೇತ್ರವನ್ನು ಸಹ ಬಿಟ್ಟಿಲ್ಲ. ಹೀಗಾಗಿ ಇಂದು ಖಾಸಗೀಕರಣ ವಿಸ್ತಾರಗೊಳ್ಳುತ್ತಿದೆ, ಸಾರ್ವಜನೀಕರಣ ಕುಗ್ಗುತ್ತಿದೆ. ಈ ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳಿಂದಾಗಿ ಕನ್ನಡ ನೆಲದಲ್ಲಿ ನಿಂತು ಅನೇಕ ಭಾಷೆಗಳ ನಡುವೆ ಬದುಕಬೇಕಾದ ಅನಿವಾರ್ಯತೆ ಇದೆ. ಇತ್ತ ಕನ್ನಡ ಬಿಡಲಾರದ ಅತ್ತ ಇಂಗ್ಲೀಷ್ ತಬ್ಬಿಕೊಳ್ಳಲಾರದ ಪರಿಸ್ಥಿತಿ ಉಂಟಾಗಿದೆ. ಇದಕ್ಕೆಲ್ಲ ಸರ್ಕಾರದ ಅವೈಜ್ಞಾನಿಕ ನೀತಿಗಳೇ ಕಾರಣ. 
ಈಗ ಸರ್ಕಾರ ಪ್ರಸ್ತಾಪ ಮಾಡಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಿಕ್ಷಣ ನೀತಿಯೂ ಒಂದು ಅವೈಜ್ಞಾನಿಕ ನೀತಿಯಾಗಿದೆ. ಮಗುವಿನ ಶಿಕ್ಷಣ ಮಾತೃಭಾಷೆಯಲ್ಲಿ ಇರಬೇಕಾದುದು ಅಪೇಕ್ಷಣೀಯ. ಹಿರಿಯ ಪ್ರಾಥಮಿಕ ಹಂತ ತಲುಪುವ ವೇಳೆಗೆ ಆ ಮಗುವಿಗೆ ಎರಡು/ಮೂರು ಭಾಷೆಗಳನ್ನು ಕಲಿಯುವ ಸಾಮಥ್ರ್ಯ ಬರುತ್ತದೆ ಎಂಬುದೂ ಸತ್ಯ. ಆದರೆ ಮಗುವಿನ ಮಾತೃಭಾಷೆಯಲ್ಲೇ ಗುಣಮಟ್ಟದ ಶಿಕ್ಷಣ ದೊರೆಯದೇ ಹೋದರೆ, ಆ ಮಗು ಇನ್ನಿತರೆ ಭಾಷೆಗಳನ್ನು ಕಲಿಯಲು ಹೇಗೆ ಸಾಧ್ಯ? ತನ್ನ ಭಾವನೆಗಳನ್ನು, ಅನಿಸಿಕೆಗಳನ್ನು ಮುಕ್ತವಾಗಿ ಮಾತೃಭಾಷೆಯಲ್ಲೇ ಹಂಚಿಕೊಳ್ಳಲು ಅವಕಾಶವಿಲ್ಲದ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಗು ಇನ್ನೊಂದು ಭಾಷೆಯಲ್ಲಿ ವ್ಯವಹರಿಸಲು ಹೇಗೆ ಸಾಧ್ಯ?
2007-08ರಿಂದ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ‘1ನೇ ತರಗತಿಯಿಂದ ಇಂಗ್ಲೀಷ್ ಕಲಿಕೆ’ಯನ್ನು ಗಮನಿಸುತ್ತಿದ್ದೇವೆ. ಈ ಇಂಗ್ಲೀಷ್ ಕಲಿಕೆಯ ಸಾಧಕ-ಬಾಧಕಗಳ ಬಗ್ಗೆ ಅಂದರೆ, ಕಲಿಕಾ ಪದ್ದತಿಗಳ ಬಗ್ಗೆ, ಕಲಿಕೆಯ ಪರಿಣಾಮದ ಬಗ್ಗೆ, ಆದ ದೋಷಗಳ ಬಗ್ಗೆ, ಆಗಬೇಕಾದ ಬದಲಾವಣೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸದ ಸರ್ಕಾರ, ಏಕಾಏಕಿಯಾಗಿ ಸರ್ಕಾರಿ ಶಾಲೆಗಳಲ್ಲೇ ಇಂಗ್ಲೀಷ್ ಮಾಧ್ಯಮ ಶಿಕ್ಷಣ ನೀಡ ಹೊರಟಿರುವುದು ಶುದ್ದ ಅವೈಜ್ಞಾನಿಕ ಮತ್ತು ಖಾಸಗೀ ಪ್ರಚೋದಕ. 
ರಾಜ್ಯದಲ್ಲಿ ಬೇಕಾಬಿಟ್ಟಿಯಾಗಿ ಖಾಸಗೀ ಶಾಲೆಗಳನ್ನು ತೆರೆಯಲು ಅನುಮತಿ ನೀಡಿದ್ದೇ ಒಂದು ದೊಡ್ಡ ದುರಂತ. ಅಲ್ಲಿಂದಲೇ ಸರ್ಕಾರಿ ಶಾಲೆಗಳ ಅವನತಿ ಶುರುವಾಯಿತು ಎನ್ನಬಹುದು. ಪ್ರಾಥಮಿಕ ಶಿಕ್ಷಣವನ್ನು ಮಗುವಿನ ಮಾತೃಭಾಷೆಯಲ್ಲೇ ನೀಡಬೇಕು ಎಂಬ ನಿಯಮವನ್ನು ಖಾಸಗೀ ಶಾಲೆಗಳು ಗಾಳಿಗೆ ತೂರಿ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುತ್ತಿವೆ. ಇದಕ್ಕೆ ಪರ್ಯಾಯ ಮಾರ್ಗವೆಂದು ಸರ್ಕಾರ ‘1ನೇ ತರಗತಿಯಿಂದ ಇಂಗ್ಲೀಷ್ ಬೋಧನೆ’ ಜಾರಿಗೆ ಬಂದಿತು. ಇದ್ದ ಅಲ್ಪಸ್ವಲ್ಪ ಸರ್ಕಾರಿ ಶಾಲೆಗಳ ಮರ್ಯಾದೆ ಈ ನೀತಿಯಿಂದಾಗಿ ಹಾಳಾಯಿತು. 
ಇನ್ನು ಸರ್ಕಾರಿ ಇಂಗ್ಲೀಷ್ ಮಾಧ್ಯಮ ಪ್ರಾರಂಭವಾದರೆ ಅವುಗಳು ಸಂಪೂರ್ಣವಾಗಿ ನಿರ್ನಾಮ ಆಗುವುದಂತೂ ಖಂಡಿತ. ಇಲ್ಲಿ ಸರ್ಕಾರ ಪರೋಕ್ಷವಾಗಿ ಖಾಸಗೀ ಶಾಲೆಗಳಿಗೆ ಉತ್ತೇಜನ ನೀಡುತ್ತಿರುವುದು ಕಂಡುಬರುತ್ತದೆ. ಇದು ಕೇವಲ ಮಾಧ್ಯಮದ ಅಥವಾ ಭಾಷೆಯ ಪ್ರಶ್ನೆಯಲ್ಲ. ಆ ಭಾಷೆಯನ್ನಾಡುವ ಜನರ ಆಶೋತ್ತರಗಳು, ನಂಬಿಕೆಗಳು, ಆಚಾರ ವಿಚಾರಗಳು, ಸಂಸ್ಕøತಿ ಮತ್ತು ಆ ಭಾಷೆಯ ಇತಿಹಾಸದ ಪ್ರಶ್ನೆ ಉದ್ಭವಿಸುತ್ತದೆ. 
ಕೇವಲ ಇಂಗ್ಲೀಷ್ ಮಾಧ್ಯಮದ ಕಲಿಕೆಯಿಂದ ಜ್ಞಾನ ವೃದ್ದಿಸುತ್ತದೆ ಎನ್ನುವುದಾದರೆ ಇನ್ನುಳಿದ ಭಾಷೆಗಳೆಲ್ಲ ಜ್ಞಾನರಹಿತವೇ? ಪ್ರಾದೇಶಿಕತೆಗೆ, ಪ್ರಾದೇಶಿಕ ಭಾಷೆಗೆ ಅರ್ಥವೇ ಇಲ್ಲವೇ? ಅಲ್ಲಿನ ಜನಜೀವನ, ಸಂಸ್ಕøತಿ ಇವುಗಳ ಪಾಡೇನು? ಎಲ್ಲವನ್ನೂ ಜಾಗತೀಕರಣದ ದೃಷ್ಟಿಯಲ್ಲಿ ನೋಡುವುದಾದರೆ ನಮ್ಮತನಕ್ಕೆ ಬೆಲೆಯಿಲ್ಲವೇ? ಅಥವಾ ನಮ್ಮತನವನ್ನು ಇನ್ನೊಬ್ಬರಿಗೆ ಒತ್ತೆ ಇಟ್ಟು ಅವರ ಅಡಿಯಾಳಾಗಿ ಬಾಳಬೇಕೆ? ಪ್ರಾದೇಶಿಕತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊತ್ತ ಸರ್ಕಾರಗಳೇ ಅವುಗಳನ್ನು ಕಡೆಗಣಿಸುವುದು ಸರಿಯೇ? ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಸೂಕ್ತ ಉತ್ತರ ಕಂಡುಕೊಂಡು ನಿರ್ಧಾರ ಕೈಗೊಳ್ಳಬೇಕಾಗಿದೆ.
ನಮ್ಮ ಜನರು ಬಡವರಿರಬಹುದು. ಆದರೆ ನಮ್ಮ ಸರ್ಕಾರಿ ಶಾಲೆಗಳೇಕೆ ದರಿದ್ರವಾಗಬೇಕು? ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗೀಯವರನ್ನು ಬೆಳೆಸುವುದು ಯಾವ ನ್ಯಾಯ? ಖಾಸಗೀಕರಣವನ್ನು ಶಕ್ತಿಹೀನವಾಗಿ ಮಾಡಬೇಕಾದರೆ ನಾಡಿನ ಕನ್ನಡಿಗರೆಲ್ಲ ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ. ಕನ್ನಡ ನೆಲದಲ್ಲಿ ನಿಂತು ಕನ್ನಡತ್ವ ಉಳಿಸಿಕೊಳ್ಳಲು ನಾವೆಲ್ಲರೂ ಒಕ್ಕೊರೆಲಿನಿಂದ ಹೋರಾಡಬೇಕಾಗಿದೆ. ಅದಕ್ಕಾಗಿ ಕನ್ನಡಿಗರು ಕೆಚ್ಚೆದೆಯ ವೀರರು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಬೇಕಾಗಿದೆ. ಬನ್ನಿ ಎಲ್ಲರೂ ಕೈಜೋಡಿಸಿ ಕರ್ನಾಟಕದಲ್ಲಿ ಕನ್ನಡತ್ವವನ್ನು, ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸೋಣ.

ಆರ್.ಬಿ.ಗುರುಬಸವರಾಜ. ಸ.ಶಿ





No comments:

Post a Comment